ಯಾಕೋಬ
2 ನನ್ನ ಸಹೋದರರೇ, ನೀವು ನಮ್ಮ ಮಹಿಮೆಯಾಗಿರುವ ಕರ್ತನಾದ ಯೇಸು ಕ್ರಿಸ್ತನ ನಂಬಿಕೆಯನ್ನು ಪಕ್ಷಪಾತದ ಕೃತ್ಯಗಳನ್ನು ಮಾಡುತ್ತಾ ಹಿಡಿದುಕೊಂಡವರಾಗಿರುವುದಿಲ್ಲ, ಅಲ್ಲವೆ? 2 ಒಬ್ಬ ಮನುಷ್ಯನು ಚಿನ್ನದ ಉಂಗುರಗಳನ್ನೂ ಶೋಭಾಯಮಾನವಾದ ವಸ್ತ್ರಗಳನ್ನೂ ಧರಿಸಿಕೊಂಡು ನಿಮ್ಮ ಸಭೆಯನ್ನು ಪ್ರವೇಶಿಸುವಲ್ಲಿ ಮತ್ತು ಒಬ್ಬ ಬಡ ಮನುಷ್ಯನು ಸಹ ಕೊಳಕಾದ ವಸ್ತ್ರವನ್ನು ಧರಿಸಿಕೊಂಡು ಪ್ರವೇಶಿಸುವಲ್ಲಿ 3 ನೀವು ಶೋಭಾಯಮಾನವಾದ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಗೌರವದಿಂದ ನೋಡಿ ಅವನಿಗೆ, “ನೀವು ಉತ್ತಮವಾದ ಸ್ಥಳದಲ್ಲಿರುವ ಈ ಆಸನದಲ್ಲಿ ಕುಳಿತುಕೊಳ್ಳಿ” ಎಂದೂ ಆ ಬಡ ಮನುಷ್ಯನಿಗೆ, “ನೀನು ನಿಂತುಕೊಂಡಿರು” ಅಥವಾ “ನನ್ನ ಕಾಲ್ಮಣೆಯ ಹತ್ತಿರ ಕುಳಿತುಕೊ” ಎಂದೂ ಹೇಳುವಲ್ಲಿ 4 ನಿಮ್ಮ ಮಧ್ಯೆ ವರ್ಗಭೇದವಿದೆ ಮತ್ತು ನೀವು ಕೆಟ್ಟ ನಿರ್ಣಯಗಳನ್ನು ಮಾಡುವ ತೀರ್ಪುಗಾರರು ಎಂಬುದನ್ನು ಇದು ಸೂಚಿಸುತ್ತದಲ್ಲವೆ?
5 ನನ್ನ ಪ್ರಿಯ ಸಹೋದರರೇ, ಕಿವಿಗೊಡಿರಿ. ದೇವರು ಲೋಕದ ಸಂಬಂಧದಲ್ಲಿ ಬಡವರಾಗಿರುವವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಲು ಮತ್ತು ತನ್ನನ್ನು ಪ್ರೀತಿಸುವವರಿಗೆ ಆತನು ವಾಗ್ದಾನಮಾಡಿದ ರಾಜ್ಯಕ್ಕೆ ಬಾಧ್ಯರಾಗಲು ಆರಿಸಿಕೊಂಡನಲ್ಲವೆ? 6 ನೀವಾದರೋ ಬಡವರನ್ನು ಅಗೌರವಿಸಿದ್ದೀರಿ. ಐಶ್ವರ್ಯವಂತರು ನಿಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಮತ್ತು ನಿಮ್ಮನ್ನು ನ್ಯಾಯಸ್ಥಾನಕ್ಕೆ ಎಳೆದುಕೊಂಡು ಹೋಗುತ್ತಾರಲ್ಲವೆ? 7 ನೀವು ಕರೆಸಿಕೊಳ್ಳುವ ಉತ್ತಮವಾದ ಹೆಸರನ್ನು ಅವರು ದೂಷಿಸುತ್ತಾರಲ್ಲವೆ? 8 ನೀವು ಶಾಸ್ತ್ರವಚನಕ್ಕನುಸಾರ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ರಾಜಯೋಗ್ಯ ಆಜ್ಞೆಯನ್ನು ಕೈಕೊಂಡು ನಡೆಯುವುದಾದರೆ ಒಳ್ಳೇದನ್ನೇ ಮಾಡುವವರಾಗಿದ್ದೀರಿ. 9 ನೀವು ಪಕ್ಷಪಾತ ತೋರಿಸುತ್ತಾ ಮುಂದುವರಿಯುವುದಾದರೆ, ಪಾಪಮಾಡುವವರಾಗಿದ್ದು ಆ ಆಜ್ಞೆಯಿಂದಲೇ ಅಪರಾಧಿಗಳೆಂದು ಖಂಡಿಸಲ್ಪಡುತ್ತೀರಿ.
10 ಯಾವನಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಒಂದು ಅಂಶದಲ್ಲಿ ತಪ್ಪು ಹೆಜ್ಜೆಯನ್ನು ತೆಗೆದುಕೊಳ್ಳುವುದಾದರೆ ಅವನು ಅವೆಲ್ಲವುಗಳ ವಿಷಯದಲ್ಲಿ ಅಪರಾಧಿಯಾಗಿದ್ದಾನೆ. 11 ಏಕೆಂದರೆ, “ನೀನು ವ್ಯಭಿಚಾರ ಮಾಡಬಾರದು” ಎಂದು ಹೇಳಿದಾತನೇ “ನೀನು ನರಹತ್ಯ ಮಾಡಬಾರದು” ಎಂದೂ ಹೇಳಿದ್ದಾನೆ. ಆದುದರಿಂದ ನೀನು ವ್ಯಭಿಚಾರ ಮಾಡದಿರುವುದಾದರೂ ನರಹತ್ಯಮಾಡುವುದಾದರೆ ನೀನು ಧರ್ಮಶಾಸ್ತ್ರಕ್ಕನುಸಾರ ಅಪರಾಧಿಯಾಗಿದ್ದೀ. 12 ಸ್ವತಂತ್ರ ಜನರ ನಿಯಮದಿಂದ ನ್ಯಾಯತೀರಿಸಲ್ಪಡಲಿರುವವರು ಮಾಡುವಂತೆಯೇ ಮಾತಾಡುತ್ತಾ ಇರು ಮತ್ತು ಮಾಡುತ್ತಾ ಇರು. 13 ಕರುಣೆಯನ್ನು ಅಭ್ಯಾಸಿಸದವನಿಗೆ ನ್ಯಾಯತೀರ್ಪಾಗುವಾಗ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪನ್ನು ವಿಜಯೋತ್ಸಾಹದಿಂದ ಜಯಿಸಿ ಹಿಗ್ಗುವುದು.
14 ನನ್ನ ಸಹೋದರರೇ, ಒಬ್ಬನು ತನ್ನಲ್ಲಿ ನಂಬಿಕೆಯಿದೆ ಎಂದು ಹೇಳಿಕೊಳ್ಳುವುದಾದರೂ ಅವನಲ್ಲಿ ಕ್ರಿಯೆಗಳಿಲ್ಲದಿದ್ದರೆ ಅದರಿಂದ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸಲಾರದು, ಅಲ್ಲವೆ? 15 ಒಬ್ಬ ಸಹೋದರನಿಗೆ ಅಥವಾ ಸಹೋದರಿಗೆ ಬಟ್ಟೆಯೂ ಆ ದಿನಕ್ಕೆ ಬೇಕಾಗಿರುವಷ್ಟು ಆಹಾರವೂ ಇಲ್ಲದಿರುವಾಗ 16 ನಿಮ್ಮಲ್ಲಿ ಒಬ್ಬನು ಅವರ ದೇಹಕ್ಕೆ ಅಗತ್ಯವಿರುವವುಗಳನ್ನು ಕೊಡದೆ, “ಸಮಾಧಾನದಿಂದ ಹೋಗಿ, ಬೆಚ್ಚಗಿಟ್ಟುಕೊಳ್ಳಿ, ಹೊಟ್ಟೆ ತುಂಬಿಸಿಕೊಳ್ಳಿ” ಎಂದು ಹೇಳುವುದಾದರೆ ಅದರಿಂದ ಪ್ರಯೋಜನವೇನು? 17 ಅದೇ ರೀತಿಯಲ್ಲಿ ನಂಬಿಕೆಯಲ್ಲಿ ಕ್ರಿಯೆಗಳಿಲ್ಲದಿದ್ದರೆ ಅದು ಸತ್ತದ್ದೇ ಆಗಿದೆ.
18 ಆದರೂ ಒಬ್ಬನು, “ನಿನ್ನಲ್ಲಿ ನಂಬಿಕೆಯಿದೆ, ನನ್ನಲ್ಲಿ ಕ್ರಿಯೆಗಳಿವೆ. ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸು, ನಾನು ನನ್ನ ಕ್ರಿಯೆಗಳ ಮೂಲಕ ನನ್ನ ನಂಬಿಕೆಯನ್ನು ತೋರಿಸುತ್ತೇನೆ” ಎಂದು ಹೇಳುವನು. 19 ಒಬ್ಬನೇ ದೇವರಿದ್ದಾನೆಂದು ನೀನು ನಂಬುತ್ತೀ, ಅಲ್ಲವೆ? ಅದು ಒಳ್ಳೇದೇ. ಆದರೆ ದೆವ್ವಗಳು ಸಹ ಹಾಗೆ ನಂಬಿ ಭಯದಿಂದ ನಡುಗುತ್ತವೆ. 20 ಅಪ್ರಯೋಜಕ ಮನುಷ್ಯನೇ, ಕ್ರಿಯೆಗಳಿಲ್ಲದ ನಂಬಿಕೆಯು ವ್ಯರ್ಥವಾಗಿದೆ ಎಂದು ನೀನು ತಿಳಿದುಕೊಳ್ಳಲು ಬಯಸುತ್ತೀಯೊ? 21 ನಮ್ಮ ಮೂಲಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದ ಬಳಿಕ ಕ್ರಿಯೆಗಳ ಮೂಲಕ ನೀತಿವಂತನೆಂದು ನಿರ್ಣಯಿಸಲ್ಪಟ್ಟನಲ್ಲವೆ? 22 ಅವನ ನಂಬಿಕೆಯು ಅವನ ಕ್ರಿಯೆಗಳೊಂದಿಗೆ ಕಾರ್ಯನಡಿಸಿತು ಮತ್ತು ಅವನ ಕ್ರಿಯೆಗಳಿಂದ ಅವನ ನಂಬಿಕೆಯು ಪರಿಪೂರ್ಣಗೊಳಿಸಲ್ಪಟ್ಟಿತು ಎಂಬುದು ಕಾಣಬರುತ್ತದೆ. 23 ಹೀಗೆ “ಅಬ್ರಹಾಮನು ಯೆಹೋವನಲ್ಲಿ ನಂಬಿಕೆಯನ್ನಿಟ್ಟನು ಮತ್ತು ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು” ಎಂಬ ಶಾಸ್ತ್ರವಚನವು ನೆರವೇರಿತು ಮತ್ತು ಅವನು “ಯೆಹೋವನ ಸ್ನೇಹಿತನು” ಎಂದು ಕರೆಯಲ್ಪಟ್ಟನು.
24 ಮನುಷ್ಯನು ಕ್ರಿಯೆಗಳ ಮೂಲಕ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆಯೇ ಹೊರತು ಬರೀ ನಂಬಿಕೆಯಿಂದಲ್ಲ ಎಂಬುದನ್ನು ನೀವು ನೋಡುತ್ತೀರಿ. 25 ಅದೇ ರೀತಿಯಲ್ಲಿ ವೇಶ್ಯೆಯಾದ ರಾಹಾಬಳು ಸಹ ಸಂದೇಶವಾಹಕರನ್ನು ಆದರಾತಿಥ್ಯದಿಂದ ಬರಮಾಡಿಕೊಂಡು ಅವರನ್ನು ಇನ್ನೊಂದು ಮಾರ್ಗವಾಗಿ ಕಳುಹಿಸಿಕೊಟ್ಟ ಬಳಿಕವೇ ಕ್ರಿಯೆಗಳ ಮೂಲಕ ನೀತಿವಂತಳೆಂದು ನಿರ್ಣಯಿಸಲ್ಪಟ್ಟಳಲ್ಲವೆ? 26 ಜೀವವಿಲ್ಲದ * ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯು ಸಹ ಸತ್ತದ್ದಾಗಿದೆ.