11 ಮೋಸದ ತಕ್ಕಡಿ ಕಂಡ್ರೆ ಯೆಹೋವನಿಗೆ ಅಸಹ್ಯ,
ಸರಿಯಾದ ತೂಕದ ಕಲ್ಲು ನೋಡಿದ್ರೆ ಸಂತೋಷ.+
2 ಅಹಂಕಾರ ಬಂದ್ರೆ ಅದ್ರ ಹಿಂದೆ ಅವಮಾನನೂ ಬರುತ್ತೆ.+
ಆದ್ರೆ ವಿನಮ್ರರ ಹತ್ರ ವಿವೇಕ ಇರುತ್ತೆ.+
3 ತಪ್ಪು ಮಾಡದವರಿಗೆ ಪ್ರಾಮಾಣಿಕತೆ ಮಾರ್ಗದರ್ಶನ ಕೊಡುತ್ತೆ,+
ಮೋಸಗಾರರ ಕಪಟ ಅವ್ರನ್ನ ನಾಶ ಮಾಡಿಬಿಡುತ್ತೆ.+
4 ದೇವರ ಕೋಪದ ದಿನದಲ್ಲಿ ಆಸ್ತಿ-ಐಶ್ವರ್ಯಕ್ಕೆ ಮೂರು ಕಾಸಿನ ಬೆಲೆ ಇರಲ್ಲ,+
ಆದ್ರೆ ನೀತಿ ಒಬ್ಬ ಮನುಷ್ಯನನ್ನ ಸಾವಿಂದ ಕಾಪಾಡುತ್ತೆ.+
5 ತಪ್ಪು ಮಾಡದವನು ನೀತಿಯಿಂದ ನಡ್ಕೊಂಡ್ರೆ ಅವನ ದಾರಿ ನೆಟ್ಟಗೆ ಇರುತ್ತೆ,
ಆದ್ರೆ ಕೆಟ್ಟವನು ಮಾಡೋ ಕೆಟ್ಟ ಕೆಲಸಗಳು ಅವನನ್ನೇ ಬೀಳಿಸುತ್ತೆ.+
6 ನೀತಿವಂತರನ್ನ ಅವ್ರ ನೀತಿ ಕಾಪಾಡುತ್ತೆ,+
ಮೋಸಗಾರರು ಅವ್ರ ಆಸೆಗಳ ಬಲೆಗೆ ಅವ್ರೇ ಬೀಳ್ತಾರೆ.+
7 ಕೆಟ್ಟವನು ತೀರಿ ಹೋಗುವಾಗ ಅವನ ಆಸೆಗಳೆಲ್ಲ ನುಚ್ಚುನೂರಾಗುತ್ತೆ,
ಸ್ವಂತ ಶಕ್ತಿ ಮೇಲೆ ಅವನಿಟ್ಟ ನಂಬಿಕೆ ಮಣ್ಣುಪಾಲಾಗುತ್ತೆ.+
8 ನೀತಿವಂತ ಕಷ್ಟದಿಂದ ತಪ್ಪಿಸ್ಕೊಳ್ತಾನೆ,
ಅವನ ಬದ್ಲು ಕೆಟ್ಟವನು ಸಿಕ್ಕಿಹಾಕೊಳ್ತಾನೆ.+
9 ಧರ್ಮಭ್ರಷ್ಟ ತನ್ನ ಮಾತಿಂದ ಇನ್ನೊಬ್ಬನನ್ನ ಹಾಳು ಮಾಡ್ತಾನೆ,
ನೀತಿವಂತ ತನ್ನ ಜ್ಞಾನದಿಂದ ತಪ್ಪಿಸ್ಕೊಳ್ತಾನೆ.+
10 ನೀತಿವಂತರಲ್ಲಿರೋ ಒಳ್ಳೆತನದಿಂದ ಇಡೀ ಪಟ್ಟಣಕ್ಕೆ ಖುಷಿ ಆಗುತ್ತೆ,
ಕೆಟ್ಟವರು ನಾಶ ಆದಾಗ ಜನ ಕುಣಿದು ಕುಪ್ಪಳಿಸ್ತಾರೆ.+
11 ನೀತಿವಂತನಿಗೆ ಆಶೀರ್ವಾದ ಸಿಕ್ಕಿದಾಗ ಪಟ್ಟಣಕ್ಕೆ ಒಳ್ಳೇ ಹೆಸ್ರು ಬರುತ್ತೆ,+
ಕೆಟ್ಟವನ ಮಾತುಗಳು ಪಟ್ಟಣವನ್ನ ನಾಶ ಮಾಡುತ್ತೆ.+
12 ಬುದ್ಧಿ ಇಲ್ಲದವನು ಪಕ್ಕದ ಮನೆಯವನನ್ನ ಕೀಳಾಗಿ ನೋಡ್ತಾನೆ,
ಬುದ್ಧಿ ಇರುವವನು ಮೌನವಾಗಿ ಇರ್ತಾನೆ.+
13 ಚಾಡಿ ಹೇಳಿ ಹೆಸ್ರು ಹಾಳು ಮಾಡುವವನು ಗುಟ್ಟನ್ನ ರಟ್ಟು ಮಾಡ್ತಾನೆ,+
ನಂಬಿಗಸ್ತ ವ್ಯಕ್ತಿ ಗುಟ್ಟನ್ನ ಗುಟ್ಟಾಗೇ ಇಡ್ತಾನೆ.
14 ನಿಪುಣನಿಂದ ಮಾರ್ಗದರ್ಶನ ಸಿಗದಿದ್ರೆ ಜನ ಸೋಲು ಅನುಭವಿಸ್ತಾರೆ,
ಆದ್ರೆ ತುಂಬ ಸಲಹೆಗಾರರು ಇದ್ರೆ ಯಶಸ್ಸು ಖಂಡಿತ.+
15 ಅಪರಿಚಿತನ ಸಾಲಕ್ಕೆ ಜಾಮೀನು ಕೊಟ್ರೆ ಕಷ್ಟ ಪಡ್ತಾ ಇರಬೇಕಾಗುತ್ತೆ,+
ಕೈಕುಲುಕಿ ಮಾತು ಕೊಡೋಕೆ ಆತುರಪಡದವನು ಕಷ್ಟದಿಂದ ತಪ್ಪಿಸ್ಕೊಳ್ತಾನೆ.
16 ದಯೆ ಇರೋ ಸ್ತ್ರೀಗೆ ಗೌರವ ಸಿಗುತ್ತೆ,+
ಕನಿಕರ ಇಲ್ಲದ ಗಂಡಸು ಸಂಪತ್ತನ್ನ ಲೂಟಿ ಮಾಡ್ತಾನೆ.
17 ದಯೆ ತೋರಿಸುವವನು ತನಗೇ ಒಳ್ಳೇದು ಮಾಡ್ಕೊಳ್ತಾನೆ,+
ಕ್ರೂರಿ ತನ್ನ ಮೇಲೆನೇ ತೊಂದ್ರೆ ತಂದ್ಕೊಳ್ತಾನೆ.+
18 ಕೆಟ್ಟವನು ಮೋಸದಿಂದ ಸಂಪಾದನೆ ಮಾಡ್ತಾನೆ,+
ನೀತಿಯನ್ನ ಬಿತ್ತುವವನು ಒಳ್ಳೇ ಫಲ ಕೊಯ್ತಾನೆ.+
19 ನೀತಿಯ ಪಕ್ಷದಲ್ಲೇ ನಿಲ್ಲುವವನಿಗೆ ಜೀವ,+
ಕೆಟ್ಟ ವಿಷ್ಯಗಳ ಹಿಂದೆ ಹೋಗುವವನಿಗೆ ಸಾವು.
20 ಹೃದಯದಲ್ಲಿ ಕಪಟ ಇರುವವ್ರನ್ನ ನೋಡಿದ್ರೆ ಯೆಹೋವನಿಗೆ ಅಸಹ್ಯ,+
ತಪ್ಪು ಮಾಡದೆ ನಡಿಯುವವರನ್ನ ನೋಡಿದ್ರೆ ಆತನಿಗೆ ಸಂತೋಷ.+
21 ಈ ಮಾತಿನ ಮೇಲೆ ನಂಬಿಕೆ ಇಡಿ: ಕೆಟ್ಟವರಿಗೆ ಶಿಕ್ಷೆ ಆಗೇ ಆಗುತ್ತೆ,+
ಆದ್ರೆ ನೀತಿವಂತರ ಮಕ್ಕಳಿಗೆ ಶಿಕ್ಷೆ ಆಗಲ್ಲ.
22 ವಿವೇಕವನ್ನ ತಳ್ಳಿಹಾಕೋ ಸುಂದರಿ
ಹಂದಿ ಮೂಗಿಗೆ ಹಾಕಿರೋ ಮೂಗುತಿ.
23 ನೀತಿವಂತರ ಆಸೆ ಒಳ್ಳೇದಕ್ಕೆ ನಡಿಸುತ್ತೆ,+
ಆದ್ರೆ ಕೆಟ್ಟವ್ರ ಆಸೆ ಕೋಪಕ್ಕೆ ದಾರಿ ಮಾಡುತ್ತೆ.
24 ಧಾರಾಳವಾಗಿ ಕೊಡುವವನಿಗೆ ಧಾರಾಳವಾಗಿ ಸಿಗುತ್ತೆ,+
ಕೊಡಬೇಕಾಗಿರೋದನ್ನ ಕೊಡದ ಜಿಪುಣ ಬಡವನಾಗ್ತಾನೆ.+
25 ಉದಾರವಾಗಿ ಕೊಡುವವನು ಏಳಿಗೆ ಆಗ್ತಾನೆ,+
ಚೈತನ್ಯ ಕೊಡುವವನಿಗೆ ಚೈತನ್ಯ ಸಿಗುತ್ತೆ.+
26 ಜನ್ರಿಗೆ ಧಾನ್ಯ ಮಾರೋಕೆ ಒಪ್ಪದವನಿಗೆ ಶಾಪ ಸಿಗುತ್ತೆ.
ಆದ್ರೆ ಅದನ್ನ ಮಾರುವವನಿಗೆ ಆಶೀರ್ವಾದ ಸಿಗುತ್ತೆ.
27 ಒಳ್ಳೇದನ್ನ ಮಾಡೋಕೆ ಶ್ರದ್ಧೆಯಿಂದ ಪ್ರಯತ್ನಿಸುವವನಿಗೆ ದಯೆ ಸಿಗುತ್ತೆ.+
ಕೆಟ್ಟದು ಮಾಡೋಕೆ ತುದಿಗಾಲಲ್ಲಿ ನಿಲ್ಲುವವನಿಗೆ ಕೆಟ್ಟದೇ ಆಗುತ್ತೆ.+
28 ತನ್ನ ಹಣ-ಆಸ್ತಿ ಮೇಲೆ ನಂಬಿಕೆ ಇಟ್ಕೊಂಡವನು ಬಿದ್ದುಹೋಗ್ತಾನೆ,+
ನೀತಿವಂತ ಎಲೆಗಳ ತರ ಹಸಿರಾಗಿ ಇರ್ತಾನೆ.+
29 ತನ್ನ ಕುಟುಂಬದ ಮೇಲೆ ತೊಂದ್ರೆ ತಂದು ಹಾಕುವವನು ಏನೂ ಸಂಪಾದಿಸಲ್ಲ,+
ಮೂರ್ಖ ವಿವೇಕಿಗೆ ಗುಲಾಮ ಆಗ್ತಾನೆ.
30 ನೀತಿವಂತನ ಕೆಲಸಗಳು ಜೀವ ಕೊಡೋ ಮರ,+
ಬೇರೆಯವ್ರ ಮನಸ್ಸು ಗೆಲ್ಲುವವನು ವಿವೇಕಿ.+
31 ಭೂಮಿ ಮೇಲೆ ನೀತಿವಂತನಿಗೇ ಆಶೀರ್ವಾದ ಸಿಗುತ್ತೆ ಅಂದ್ಮೇಲೆ,
ಕೆಟ್ಟವನಿಗೆ ಪಾಪಿಗೆ ಅವನವನ ಕೆಲಸಕ್ಕೆ ತಕ್ಕ ಫಲ ಸಿಗಲ್ವಾ?+