ನಿರ್ದೋಷಿ ಬಲಿಗಳಿಗೆ ಉಪಶಮನ
ಅದು ಮನುಷ್ಯನಿಂದ ಎಂದಿಗೂ ಗೈಯಲ್ಪಟ್ಟವುಗಳಲ್ಲಿ ಅತ್ಯಂತ ಹೇಯವಾದ ಪಾತಕಗಳಲ್ಲೊಂದು—ಮಕ್ಕಳನ್ನು ಸಂಸ್ಕಾರ ಸಂಬಂಧವಾಗಿ ಬಲಿಕೊಡುವುದು. ಅಂತಹ ಅಸಹ್ಯಕರವಾದ ಪದ್ಧತಿಯು ಸಂಭವಿಸಿದಿರ್ದಸಾಧ್ಯವೆಂದು ಕೆಲವರು ನಂಬುವುದೂ ಇಲ್ಲ. ಆದರೆ ಫಿನಿಷ್ಯನ್ ಆರಾಧನೆಯ ಈ ಗುರುತು ಪದವು, ಪ್ರಾಚೀನ ಶೋಧನಾ ಶಾಸ್ತ್ರದ ಹಲವಾರು ಸಂಶೋಧನೆಗಳಿಂದ ದೃಢೀಕರಿಸಲ್ಪಟ್ಟಿರುತ್ತದೆ.
ಕುಲೀನ ಕುಟುಂಬಗಳ ಮಕ್ಕಳನ್ನು, ಟಾನಿಟ್ ಮತ್ತು ಬಾಳ್ ಹಮ್ಮೋನ್ಗಳಂಥ ದೇವತೆಗಳಿಗೆ ಅಗ್ನಿಬಲಿಯರ್ಪಿಸಲಾಗುತ್ತಿತ್ತು. ಕಾರ್ತೆಜ್ನಲ್ಲಿ ಈ ಎಳೆಯ ಬಲಿಗಳನ್ನು ಕ್ರೋನಸ್ನ ಕಂದುಕಂಚಿನ ಪ್ರತಿಮೆಯ ಮುಂದೆ ಬಲಿಯಾಗಿ ಸುಡಲಾಗುತ್ತಿತ್ತು. ಮಗುವಿನ ಸಂಬಂಧಿಕರನ್ನು ಅಳಲು ಬಿಡುತ್ತಿರಲಿಲ್ಲವೆಂದು ಸಾ.ಶ.ಪೂ. ಒಂದನೆಯ ಶತಮಾನದ ಚರಿತ್ರೆಗಾರ ಡಯೊಡೋರಸ್ ಸಿಕಲಸ್ ಹೇಳುತ್ತಾನೆ. ಅವರ ಬೇಗುದಿಯ ಅಶ್ರುಗಳು ಬಲಿಯರ್ಪಣೆಯ ಮೌಲ್ಯವನ್ನು ಕುಂದಿಸುವವೆಂದು ಪ್ರಾಯಶಃ ನಂಬಲಾಗುತ್ತಿತ್ತು.
ತದ್ರೀತಿಯ ಸಂಸ್ಕಾರವು ಯೆರೂಸಲೇಮಿನ ಸಮೀಪದ ಪ್ರಾಚೀನ ತೋಫೆತ್ನಲ್ಲಿ ಕೆಲವು ಕಾಲಾವಧಿಯ ತನಕ ಆಚರಿಸಲ್ಪಡುತ್ತಿತ್ತು. ಮೋಲೆಕನ ಕುಲುಮೆ-ಹೊಟ್ಟೆಯೊಳಗೆ ಮಗುವು ಎಸೆಯಲ್ಪಡುವಾಗ ಅದರ ಚೀರಾಟಗಳನ್ನು ಕೇಳಿಸದಂತೆ ಮಾಡಲು, ಅಲ್ಲಿ ಆರಾಧಕರು ಕುಣಿಯುತ್ತಾ, ತಮಟೆಗಳನ್ನು ಬಡಿಯುತ್ತಾ ಇರುತ್ತಿದ್ದರು.—ಯೆರೆಮೀಯ 7:31.
ಇತರರ ನೋವನ್ನು ಪರಿಗಣಿಸಲು ನಿರ್ದಯದಿಂದ ನಿರಾಕರಿಸುವವರ ಕಡೆಗೆ ಯೆಹೋವನು ಮಹಾ ಕ್ರೋಧವನ್ನು ತೋರಿಸುತ್ತಾನೆ. (ಹೋಲಿಸಿ ಜ್ಞಾನೋಕ್ತಿ 21:13.) ಯೆಹೋವನು ಮಕ್ಕಳನ್ನು ಕನಿಕರಿಸುವ ದೇವರಾಗಿರುವುದರಿಂದ, ಆತನು ಖಂಡಿತವಾಗಿಯೂ ಅಂತಹ ನಿರ್ದೋಷಿ ಬಲಿಗಳನ್ನು, ‘ನೀತಿವಂತರ ಮತ್ತು ಅನೀತಿವಂತರ ಪುನರುತ್ಥಾನದಲ್ಲಿ’ ಒಳಗೂಡಿಸುವನು.—ಅ. ಕೃತ್ಯಗಳು 24:15; ವಿಮೋಚನಕಾಂಡ 22:22-24.