ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ನವೆಂಬರ್‌ ಪು. 18-19
  • “ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಅನುರೂಪ ಮಾಹಿತಿ
  • ‘ಇದು ವಿಶೇಷವಾದ ಕೆಲಸ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಯೆಹೋವನ ಧಾರಾಳತನಕ್ಕೆ ಕೃತಜ್ಞತೆ ತೋರಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಅವರ ಸಮೃದ್ಧಿಯು ಕೊರತೆಯನ್ನು ನೀಗಿಸಿತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಸಿದ್ಧಮನಸ್ಸನ್ನು ಯೆಹೋವನು ಸಮೃದ್ಧವಾಗಿ ಆಶೀರ್ವದಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ನವೆಂಬರ್‌ ಪು. 18-19
ಪುಟ್ಟ ಸಮುವೇಲನನ್ನು ಹನ್ನಳು ದೇವಗುಡಾರಕ್ಕೆ ತಂದಿದ್ದಾಳೆ

“ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು”

ಹಿಂದಿನ ಕಾಲದಿಂದಲೂ ಯಜ್ಞಗಳನ್ನು ಅರ್ಪಿಸುವುದು ಸತ್ಯಾರಾಧನೆಯ ಪ್ರಮುಖ ಭಾಗವಾಗಿದೆ. ಇಸ್ರಾಯೇಲ್ಯರು ಪ್ರಾಣಿ ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆದರೆ ಕ್ರೈಸ್ತರು “ಸ್ತೋತ್ರಯಜ್ಞ”ಗಳನ್ನು ಅರ್ಪಿಸುತ್ತಾರೆ ಎನ್ನುವುದು ಪರಿಚಿತವಾದ ವಿಷಯ. ದೇವರಿಗೆ ಸಂತೋಷ ತರುವ ಇತರ ಯಜ್ಞಗಳೂ ಇವೆ. (ಇಬ್ರಿ. 13:15, 16) ಇಂಥ ಯಜ್ಞಗಳು ನಮಗೆ ಸಂತೋಷ ಮತ್ತು ಆಶೀರ್ವಾದವನ್ನು ತರುತ್ತವೆ. ಇದನ್ನು ಮುಂದಿನ ಉದಾಹರಣೆಗಳು ತೋರಿಸುತ್ತವೆ.

ಹನ್ನಳು ಹಿಂದಿನ ಕಾಲದಲ್ಲಿದ್ದ ಯೆಹೋವನ ನಂಬಿಗಸ್ತ ಸೇವಕಳಾಗಿದ್ದಳು. ಅವಳಿಗೆ ಒಬ್ಬ ಮಗನನ್ನು ಪಡೆಯುವ ಬಯಕೆಯಿತ್ತು. ಆದರೆ ಅವಳಿಗೆ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ. ಯೆಹೋವನು ತನಗೊಬ್ಬ ಮಗನನ್ನು ಕೊಟ್ಟರೆ “ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ನಿನಗೆ ಪ್ರತಿಷ್ಠಿಸಿ ಕೊಡುವೆನು” ಎಂದು ದೇವರಿಗೆ ಪ್ರಾರ್ಥನೆಯಲ್ಲಿ ಹರಕೆ ಹೊತ್ತಳು. (1 ಸಮು. 1:10, 11) ಸಮಯಾನಂತರ ಹನ್ನಳು ಗರ್ಭಧರಿಸಿ ಗಂಡುಮಗುವನ್ನು ಪಡೆದಳು. ಅವನಿಗೆ ಸಮುವೇಲ ಎಂದು ಹೆಸರಿಟ್ಟಳು. ಸಮುವೇಲನು ಮೊಲೆಬಿಟ್ಟ ನಂತರ ಹನ್ನಳು ತನ್ನ ಹರಕೆಗೆ ತಕ್ಕಂತೆ ಅವನನ್ನು ದೇವಗುಡಾರಕ್ಕೆ ಕರೆದುಕೊಂಡು ಹೋದಳು. ಅವಳ ಸ್ವತ್ಯಾಗದ ಈ ಕಾಣಿಕೆಗಾಗಿ ಯೆಹೋವನು ಆಕೆಯನ್ನು ಆಶೀರ್ವದಿಸಿದನು. ನಂತರ ಅವಳಿಗೆ ಇನ್ನೂ ಐದು ಮಂದಿ ಮಕ್ಕಳಾದರು. ಮುಂದೆ ಸಮುವೇಲನು ಪ್ರವಾದಿಯಾದನು ಮತ್ತು ಬೈಬಲಿನ ಕೆಲವು ಪುಸ್ತಕಗಳನ್ನು ಬರೆದನು.—1 ಸಮು. 2:21.

ಹನ್ನ ಮತ್ತು ಸಮುವೇಲನಂತೆ, ಇಂದು ಕ್ರೈಸ್ತರಿಗೂ ತಮ್ಮ ಜೀವನವನ್ನು ಸೃಷ್ಟಿಕರ್ತನಿಗೆ ಸಮರ್ಪಿಸಿ ಆತನ ಸೇವೆಗಾಗಿ ಬಳಸುವ ಸುಯೋಗ ಇದೆ. ಯೆಹೋವನನ್ನು ಆರಾಧಿಸಲಿಕ್ಕಾಗಿ ನಾವು ಯಾವುದೇ ತ್ಯಾಗ ಮಾಡಿದರೂ ನಮಗೆ ತುಂಬ ಪ್ರತಿಫಲ ಸಿಗುತ್ತದೆಂದು ಯೇಸು ಮಾತು ಕೊಟ್ಟಿದ್ದಾನೆ.—ಮಾರ್ಕ 10:28-30.

ಮೊದಲನೇ ಶತಮಾನದಲ್ಲಿ, ದೊರ್ಕ ಎಂಬ ಕ್ರೈಸ್ತ ಸ್ತ್ರೀ ‘ಸತ್ಕ್ರಿಯೆಗಳು ಮತ್ತು ದಾನಧರ್ಮ’ಕ್ಕಾಗಿ ಹೆಸರುವಾಸಿಯಾಗಿದ್ದಳು. ಇದು ಇತರರಿಗೆ ಸಹಾಯ ಮಾಡಲು ಅವಳು ಮಾಡುತ್ತಿದ್ದ ತ್ಯಾಗವಾಗಿತ್ತು. ದುಃಖದ ಸಂಗತಿಯೇನೆಂದರೆ ಅವಳು “ಅಸ್ವಸ್ಥಳಾಗಿ ತೀರಿಕೊಂಡಳು.” ಆಗ ಅವಳ ಸಭೆಯವರು ಶೋಕದಲ್ಲಿ ಮುಳುಗಿದರು. ಅಲ್ಲಿನ ಶಿಷ್ಯರಿಗೆ ಪೇತ್ರನು ಅದೇ ಪಟ್ಟಣದಲ್ಲಿ ಇದ್ದಾನೆಂದು ತಿಳಿದಾಗ ಕೂಡಲೇ ಬರುವಂತೆ ಹೇಳಿಕಳುಹಿಸಿದರು. ಪೇತ್ರನು ಬಂದು ದೊರ್ಕಳನ್ನು ಪುನರುತ್ಥಾನಗೊಳಿಸಿದಾಗ ಅವರಿಗಾದ ಸಂತೋಷವನ್ನು ಊಹಿಸಿ. ಬೈಬಲಲ್ಲಿ ದಾಖಲಾಗಿರುವ ಪ್ರಕಾರ ಇದು ಅಪೊಸ್ತಲರು ಮಾಡಿದ ಮೊದಲನೇ ಪುನರುತ್ಥಾನ ಆಗಿದೆ. (ಅ. ಕಾ. 9:36-41) ದೊರ್ಕಳು ಮಾಡಿದ ತ್ಯಾಗಗಳನ್ನು ದೇವರು ಮರೆತಿರಲಿಲ್ಲ. (ಇಬ್ರಿ. 6:10) ಅವಳು ತೋರಿಸಿದ ಉದಾರತೆಯನ್ನು ದೇವರ ವಾಕ್ಯದಲ್ಲಿ ನಾವು ಅನುಕರಿಸಲಿಕ್ಕಾಗಿ ದಾಖಲಿಸಲಾಗಿದೆ.

ಅದೇ ರೀತಿಯಲ್ಲಿ ಅಪೊಸ್ತಲ ಪೌಲನು ಕೂಡ ಇತರರಿಗೆ ಸಮಯ ಮತ್ತು ಗಮನವನ್ನು ಉದಾರವಾಗಿ ಕೊಡುವುದರಲ್ಲಿ ಅತ್ಯುತ್ತಮ ಮಾದರಿಯಾಗಿದ್ದಾನೆ. ಕೊರಿಂಥದಲ್ಲಿದ್ದ ಕ್ರೈಸ್ತ ಸಹೋದರರಿಗೆ ಪೌಲನು ಬರೆದದ್ದು: “ನಾನಾದರೋ ನನ್ನನ್ನು ನಿಮ್ಮ ಪ್ರಾಣಗಳಿಗೋಸ್ಕರ ಅತಿ ಸಂತೋಷದಿಂದ ವಿನಿಯೋಗಿಸಿಕೊಳ್ಳುವೆನು, ಸಂಪೂರ್ಣವಾಗಿ ವಿನಿಯೋಗಿಸುವಂತೆ ಬಿಡುವೆನು.” (2 ಕೊರಿಂ. 12:15) ಸ್ವಂತ ಅನುಭವದಿಂದ ಪೌಲನು ಕಲಿತದ್ದೇನೆಂದರೆ ಬೇರೆಯವರ ಒಳಿತಿಗಾಗಿ ತ್ಯಾಗ ಮಾಡಿದರೆ ನಮಗೆ ತೃಪ್ತಿ ಸಿಗುತ್ತದೆ ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚಾಗಿ ಯೆಹೋವನ ಆಶೀರ್ವಾದ ಮತ್ತು ಅನುಗ್ರಹ ಸಿಗುತ್ತದೆ.—ಅ. ಕಾ. 20:24, 35.

ರಾಜ್ಯಕ್ಕೆ ಸಂಬಂಧಪಟ್ಟ ಕೆಲಸವನ್ನು ಬೆಂಬಲಿಸಲು ಮತ್ತು ಜೊತೆ ಸಾಕ್ಷಿಗಳಿಗೆ ಸಹಾಯಮಾಡಲು ನಮ್ಮ ಸಮಯ, ಶಕ್ತಿಯನ್ನು ಕೊಡುವಾಗ ಯೆಹೋವನಿಗೆ ಸಂತೋಷವಾಗುತ್ತದೆ. ಆದರೆ ಸಾರುವ ಚಟುವಟಿಕೆಯನ್ನು ಬೆಂಬಲಿಸಲು ಬೇರೆ ಮಾರ್ಗಗಳಿವೆಯಾ? ಇವೆ! ನಾವು ಪ್ರೀತಿಯಿಂದ ಕೆಲಸ ಮಾಡುವುದರ ಜೊತೆಗೆ ಸ್ವಯಂಪ್ರೇರಿತವಾಗಿ ಕೊಡುವ ದಾನಗಳ ಮುಖಾಂತರ ದೇವರನ್ನು ಸನ್ಮಾನಿಸಬಹುದು. ಈ ದಾನಗಳನ್ನು ಲೋಕದಾದ್ಯಂತ ಸಾರುವ ಕೆಲಸವನ್ನು ಹೆಚ್ಚಿಸಲಿಕ್ಕಾಗಿ ಬಳಸಲಾಗುತ್ತದೆ. ಈ ಕೆಲಸವನ್ನು ಹೆಚ್ಚಿಸುವುದರಲ್ಲಿ ಮಿಷನರಿಗಳು ಮತ್ತು ವಿಶೇಷ ಪೂರ್ಣ ಸಮಯದ ಬೇರೆ ಸೇವಕರು ಪಾಲ್ಗೊಳ್ಳುವುದರಿಂದ ಅವರನ್ನೂ ಈ ದಾನಗಳ ಮೂಲಕ ಬೆಂಬಲಿಸಲಾಗುತ್ತದೆ. ಇದರ ಜೊತೆಗೆ, ಸಾಹಿತ್ಯ ಹಾಗೂ ವಿಡಿಯೋಗಳನ್ನು ತಯಾರಿಸಲಿಕ್ಕಾಗಿ ಮತ್ತು ಭಾಷಾಂತರಿಸಲಿಕ್ಕಾಗಿ, ವಿಪತ್ತು ಪರಿಹಾರ ಯೋಜನೆಗಳಿಗಾಗಿ, ಹೊಸ ರಾಜ್ಯ ಸಭಾಗೃಹಗಳನ್ನು ಕಟ್ಟಲಿಕ್ಕಾಗಿ ಈ ಸ್ವಯಂಪ್ರೇರಿತ ದಾನಗಳನ್ನು ಬಳಸಲಾಗುತ್ತದೆ. “ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು” (ಪವಿತ್ರ ಗ್ರಂಥ ಭಾಷಾಂತರ) ಎಂದು ಖಾತ್ರಿಯಿಂದಿರಬಲ್ಲೆವು. ಮಾತ್ರವಲ್ಲ, ನಾವು ಯೆಹೋವನಿಗೆ ನಮ್ಮ ಅಮೂಲ್ಯ ವಸ್ತುಗಳನ್ನು ಕೊಡುವಾಗ ಆತನನ್ನು ಸನ್ಮಾನಿಸುತ್ತಿದ್ದೇವೆ.—ಜ್ಞಾನೋ. 3:9; 22:9.

ಲೋಕವ್ಯಾಪಕ ಕೆಲಸಕ್ಕಾಗಿ ದಾನಕೊಡುವ ಕೆಲವು ವಿಧಗಳು

ಇಂದು ಅನೇಕರು ಇಂತಿಷ್ಟು ಹಣವನ್ನು ‘ತೆಗೆದಿಟ್ಟು’ ಅದನ್ನು ಸಭೆಯಲ್ಲಿರುವ “ಲೋಕವ್ಯಾಪಕ ಕೆಲಸ” ಎಂಬ ಗುರುತಿನ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುತ್ತಾರೆ. (1 ಕೊರಿಂ. 16:2) ಆ ಹಣವನ್ನು ಪ್ರತಿ ತಿಂಗಳು ಸಭೆಗಳು ಅವು ಯಾವ ಶಾಖೆಯ ವ್ಯಾಪ್ತಿಯಲ್ಲಿವೆಯೋ ಅಲ್ಲಿನ ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ಕಳುಹಿಸುತ್ತವೆ. ನೀವು ನೇರವಾಗಿ ದಾನ ಮಾಡಲು ಬಯಸುವಲ್ಲಿ ಅದನ್ನು ನಿಮ್ಮ ದೇಶದಲ್ಲಿ ಕೆಲಸ ನೋಡಿಕೊಳ್ಳುತ್ತಿರುವ ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ಕಳುಹಿಸಬಹುದು.a ನೀವು ನೇರವಾಗಿ ದಾನ ಕೊಡಬಹುದಾದ ಕೆಲವು ವಿಧಗಳು:

ನೇರವಾಗಿ ಕೊಡಬಹುದಾದ ದಾನಗಳು

  • ಎಲೆಕ್ಟ್ರಾನಿಕ್‌ ಬ್ಯಾಂಕ್‌ ವರ್ಗಾವಣೆ, ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ದಾನಗಳನ್ನು ಕೊಡಬಹುದು. ಕೆಲವು ಶಾಖೆಗಳಲ್ಲಿ jw.org ಅಥವಾ ನಿರ್ದೇಶಿಸಲ್ಪಟ್ಟ ಬೇರೊಂದು ವೆಬ್‌ಸೈಟ್‌ ಬಳಸಿಯೂ ದಾನ ಕೊಡುವ ಏರ್ಪಾಡಿದೆ.b

  • ಹಣ, ಆಭರಣ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ದಾನವಾಗಿ ನೀಡಬಹುದು. ಈ ರೀತಿ ದಾನ ನೀಡುವಾಗ, ಇದು ನೇರವಾಗಿ ಕೊಡುತ್ತಿರುವ ದಾನವೆಂದು ಸೂಚಿಸುವ ಒಂದು ಪತ್ರವನ್ನು ಜೊತೆಗೆ ಕಳುಹಿಸಿ.

ಚ್ಯಾರಿಟಬಲ್‌ ಯೋಜನೆc

ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕೊಡುವುದಲ್ಲದೆ ಲೋಕವ್ಯಾಪಕವಾಗಿ ನಡೆಯುವ ರಾಜ್ಯದ ಕೆಲಸಕ್ಕೆ ಸಹಾಯಮಾಡಲು ಬೇರೆ ವಿಧಗಳಿವೆ. ಅವುಗಳನ್ನು ಮುಂದೆ ಪಟ್ಟಿಮಾಡಲಾಗಿದೆ. ನೀವು ಯಾವುದೇ ವಿಧ ಬಳಸಲು ಬಯಸುವಲ್ಲಿ, ಯಾವ ಶಾಖೆಯ ವ್ಯಾಪ್ತಿಯಲ್ಲಿದ್ದೀರೋ ಆ ಶಾಖಾ ಕಚೇರಿಯನ್ನು ದಯವಿಟ್ಟು ಮೊದಲು ಸಂಪರ್ಕಿಸಿ ಯಾವ ವಿಧಗಳಲ್ಲಿ ದಾನ ಕೊಡಬಹುದೆಂದು ತಿಳಿದುಕೊಳ್ಳಿ. ಕಾನೂನು ಮತ್ತು ತೆರಿಗೆ ನಿಯಮಗಳು ದೇಶದಿಂದ ದೇಶಕ್ಕೆ ಬೇರೆ ಬೇರೆಯಾಗಿರುವುದರಿಂದ ಯಾವುದೇ ವಿಧದಲ್ಲಿ ದಾನ ಮಾಡುವ ಮೊದಲು ತೆರಿಗೆ ಮತ್ತು ಕಾನೂನು ಸಲಹೆಗಾರರನ್ನು ಸಂಪರ್ಕಿಸುವುದು ತುಂಬ ಮುಖ್ಯ.

ವಿಮೆ: ಯೆಹೋವನ ಸಾಕ್ಷಿಗಳ ಕಾರ್ಯಾಲಯವನ್ನು ಜೀವ ವಿಮಾ ಪಾಲಿಸಿಯ, ವೈಯಕ್ತಿಕ ನಿವೃತ್ತಿ ಖಾತೆ ಅಥವಾ ನಿವೃತ್ತಿ/ಪಿಂಚಣಿ ಯೋಜನೆಯ ಫಲಾನುಭವಿಯಾಗಿ ಮಾಡಬಹುದು.

ಬ್ಯಾಂಕ್‌ ಖಾತೆಗಳು: ಬ್ಯಾಂಕ್‌ ಖಾತೆಗಳನ್ನು ಸ್ಥಳೀಯ ಬ್ಯಾಂಕ್‌ ನಿಯಮಗಳಿಗೆ ಹೊಂದಿಕೆಯಲ್ಲಿ ಮರಣಾನಂತರ ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ ಮತ್ತು ಬಾಂಡ್‌ಗಳನ್ನು ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ನೇರವಾದ ಕೊಡುಗೆಯಾಗಿ ದಾನಮಾಡಬಹುದು. ಅಥವಾ ಮರಣಾನಂತರ ವರ್ಗಾವಣೆ ಆಗಬೇಕೆಂಬ ಲಿಖಿತ ಒಪ್ಪಂದದ ಮೂಲಕ ಇದನ್ನು ಮಾಡಬಹುದು.

ಸ್ಥಿರಾಸ್ತಿ: ಮಾರಲು ಸಾಧ್ಯವಿರುವ ಸ್ಥಿರಾಸ್ತಿಯನ್ನು ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ನೇರವಾದ ಕೊಡುಗೆಯಾಗಿ ದಾನಮಾಡಬಹುದು. ವಾಸದ ಮನೆಯನ್ನು ದಾನವಾಗಿ ಕೊಡುತ್ತಿರುವಲ್ಲಿ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಅಂದರೆ ದಾನಿಯು ಜೀವದಿಂದಿರುವ ವರೆಗೆ ಅಲ್ಲೇ ವಾಸಿಸುವ ಷರತ್ತಿನೊಂದಿಗೆ ದಾನಮಾಡಬಹುದು.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣ ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ಸಲ್ಲುವಂತೆ ಮಾಡಲು ಕಾನೂನುಬದ್ಧವಾಗಿ ಉಯಿಲು ಬರೆದಿಡಬಹುದು. ಅಥವಾ ಯೆಹೋವನ ಸಾಕ್ಷಿಗಳ ಕಾರ್ಯಾಲಯವನ್ನು ಒಂದು ಟ್ರಸ್ಟ್‌ ಅಗ್ರೀಮೆಂಟ್‌ನ ಫಲಾನುಭವಿಯಾಗಿ ಮಾಡಬಹುದು. ಈ ಏರ್ಪಾಡಿನಲ್ಲಿ ಕೆಲವೊಂದು ತೆರಿಗೆ ವಿನಾಯಿತಿ ಸಿಗಬಹುದು.

“ಚ್ಯಾರಿಟಬಲ್‌ ಯೋಜನೆ” ಎಂಬ ಪದ ಸೂಚಿಸುವಂತೆ, ಈ ರೀತಿಯ ದಾನವನ್ನು ಕೊಡುವಾಗ ಸ್ವಲ್ಪ ಯೋಜನೆ ಮಾಡಬೇಕಾಗುತ್ತದೆ. ಚ್ಯಾರಿಟಬಲ್‌ ಯೋಜನೆಯ ಮೂಲಕ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ದಾನ ಕೊಡಲು ಬಯಸುವ ವ್ಯಕ್ತಿಗಳಿಗೆ ನೆರವಾಗುವಂತೆ, ಚ್ಯಾರಿಟಬಲ್‌ ಪ್ಲಾನಿಂಗ್‌ ಟು ಬೆನಿಫಿಟ್‌ ಕಿಂಗ್‌ಡಮ್‌ ಸರ್ವಿಸ್‌ ವರ್ಲ್ಡ್‌ವೈಡ್‌ ಎಂಬ ಕಿರುಹೊತ್ತಗೆಯನ್ನು ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿ ರಚಿಸಲಾಗಿದೆ.d ಈ ಕಿರುಹೊತ್ತಗೆಯಲ್ಲಿ, ಯಾವೆಲ್ಲ ರೀತಿಯಲ್ಲಿ ಈಗ ಅಥವಾ ಅಂತಿಮ ಉಯಿಲಿನ ಮೂಲಕ ದಾನಗಳನ್ನು ನೀಡಬಹುದೆಂಬ ಮಾಹಿತಿಯಿದೆ. ಇದರಲ್ಲಿರುವ ಎಲ್ಲ ಮಾಹಿತಿ ನಿಮಗೆ ಅನ್ವಯಿಸಲಿಕ್ಕಿಲ್ಲ. ಏಕೆಂದರೆ ನೀವಿರುವ ದೇಶದ ತೆರಿಗೆ ಕಾನೂನುಗಳು ಅಥವಾ ಇತರ ಕಾನೂನುಗಳು ಬೇರೆ ಇರಬಹುದು. ಅನೇಕರು ಲೋಕವ್ಯಾಪಕವಾಗಿ ನಡೆಯುವ ನಮ್ಮ ಧಾರ್ಮಿಕ ಹಾಗೂ ಮಾನವೋಪಕಾರಿ ಚಟುವಟಿಕೆಗಳಿಗೆ ಈ ರೀತಿಯಲ್ಲಿ ಸಹಾಯ ನೀಡಿದ್ದಾರೆ ಮತ್ತು ತೆರಿಗೆ ವಿನಾಯಿತಿ ಪಡೆದಿದ್ದಾರೆ. ಈ ಕಿರುಹೊತ್ತಗೆ ನೀವಿರುವ ದೇಶದಲ್ಲಿ ಲಭ್ಯವಿರುವಲ್ಲಿ ಅದನ್ನು ನಿಮ್ಮ ಸಭೆಯ ಕಾರ್ಯದರ್ಶಿಯಿಂದ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ವಿಳಾಸ ಬಳಸಿ ಯೆಹೋವನ ಸಾಕ್ಷಿಗಳಿಗೆ ಪತ್ರ ಬರೆಯಿರಿ ಅಥವಾ ಫೋನ್‌ ಮೂಲಕ ಸಂಪರ್ಕಿಸಿ:

Jehovah’s Witnesses of India

Post Box 6440, Yelahanka

Bengaluru 560064

Karnataka, India

ದೂರವಾಣಿ: 080-23092426

[ಪಾದಟಿಪ್ಪಣಿಗಳು]

a ಭಾರತದಲ್ಲಾದರೆ, “Jehovah’s Witnesses of India”ಗೆ ಸಂದಾಯವಾಗಬೇಕೆಂದು ನಮೂದಿಸಿ.

b ಭಾರತೀಯ ಪಾಸ್‌ಪೋರ್ಟ್‌ ಇರುವವರು www.jwindiagift.org. ವೆಬ್‌ಸೈಟ್‌ ಬಳಸಬಹುದು.

c ನಿರ್ಣಯ ಮಾಡುವ ಮುಂಚೆ ದಯವಿಟ್ಟು ಸ್ಥಳೀಯ ಶಾಖಾ ಕಚೇರಿಯನ್ನು ಸಂಪರ್ಕಿಸಿ.

d ‘ನಿಮ್ಮ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸಿರಿ’ ಎಂಬ ಡಾಕ್ಯುಮೆಂಟ್‌ ಭಾರತದಲ್ಲಿ ಇಂಗ್ಲಿಷ್‌, ಕನ್ನಡ, ಗುಜರಾತಿ, ತಮಿಳು, ತೆಲುಗು, ಮರಾಠಿ, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಲಭ್ಯ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ