ನಮ್ಮ ವಾಚಕರಿಂದ
ಹಿತಕರವಾದ ಮನೋರಂಜನೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಲಿಕ್ಕಾಗಿ ನಾನು ಅಭ್ಯಾಸ ಮಾಡುತ್ತಿದ್ದೇನೆ, ಮತ್ತು “ಹಿತಕರವಾದ ಮನೋರಂಜನೆಗಾಗಿ ಹುಡುಕುವುದು” (ಜೂನ್ 8, 1997) ಎಂಬ ಲೇಖನಮಾಲೆಯನ್ನು ಪ್ರಕಾಶಿಸಿದ್ದಕ್ಕಾಗಿ ನಾನು ನಿಮಗೆ ಉಪಕಾರ ಸಲ್ಲಿಸಲು ಬಯಸುತ್ತೇನೆ. ಟೆಲಿವಿಷನ್ನಲ್ಲಿ ಕೆಲವೇ ಹಿತಕರವಾದ ಕಾರ್ಯಕ್ರಮಗಳಿವೆ, ಮತ್ತು ನೀವು ನಮ್ಮೆಲ್ಲರಿಗೂ—ಯುವ ಜನರಿಗೂ ವೃದ್ಧರಿಗೂ—ತುಂಬ ಒಳ್ಳೆಯ ಬುದ್ಧಿವಾದವನ್ನು ಕೊಟ್ಟಿರಿ. ಇಂತಹ ವಿಷಯಗಳ ಕುರಿತು ನೀವು ನಮಗೆ ಮಾಹಿತಿಯನ್ನು ಒದಗಿಸುತ್ತಾ ಮುಂದುವರಿಯುತ್ತೀರೆಂದು ನಾನು ಆಶಿಸುತ್ತೇನೆ.
ಡಿ. ಡಬ್ಲ್ಯೂ., ಅಮೆರಿಕ
ದೇವರು ನನ್ನ ಮಿತ್ರನಾಗಿ ಉಳಿಯುವನೊ? “ಯುವ ಜನರು ಪ್ರಶ್ನಿಸುವುದು . . . ದೇವರು ನನ್ನ ಮಿತ್ರನಾಗಿ ಉಳಿಯುವನೊ?” (ಜೂನ್ 8, 1997) ಎಂಬ ಅತ್ಯುತ್ತಮ ಲೇಖನಕ್ಕಾಗಿ ನಾನು ನಮ್ಮ ದಯಾಮಯಿ ಸೃಷ್ಟಿಕರ್ತನಿಗೆ ತುಂಬ ಕೃತಜ್ಞಳಾಗಿದ್ದೇನೆ. ಸ್ವಲ್ಪ ಸಮಯದ ಹಿಂದೆಯೇ, ನನಗೆ ಎಷ್ಟು ಮಿತ್ರರು ಇರಬಹುದು ಎಂಬುದರ ಕುರಿತಾದ ಒಂದು ಪ್ರಶ್ನಾವಳಿಯನ್ನು ಭರ್ತಿಮಾಡಿದೆ, ಮತ್ತು ನಾನು ಯಾವಾಗಲೂ ಮಿತ್ರರಿಂದ ಸುತ್ತುವರಿಯಲ್ಪಟ್ಟಿರುವೆನೆಂದು ಅದರ ಅಂತಿಮ ಫಲಿತಾಂಶವು ನನಗೆ ಆಶ್ವಾಸನೆ ನೀಡಿತು. ದುಃಖಕರವಾಗಿ, ಇದು ಸಂಪೂರ್ಣವಾಗಿ ಸುಳ್ಳಾಗಿ ಪರಿಣಮಿಸಿದೆ. ಆದರೂ, ಯೆಹೋವ ದೇವರು ಮಾತ್ರ ನಮ್ಮ ಆಪ್ತ ಮಿತ್ರನಾಗಿದ್ದಾನೆಂದು ನಾನು ಗ್ರಹಿಸುತ್ತೇನೆ. ನಾವು ಯೆಹೋವ ದೇವರೊಂದಿಗೆ ಮಿತ್ರರಾಗಿಲ್ಲವಾದರೆ, ಬೇರೆಲ್ಲ ವಿಷಯಗಳೂ ಅರ್ಥಹೀನವಾಗಿವೆಯೆಂಬುದು ಸತ್ಯ.
ಎ. ಟಿ. ಎಮ್., ಮೆಕ್ಸಿಕೊ
ಯುವ ಜನರಲ್ಲಿ ನೀವು ತೋರಿಸುವ ಆಸಕ್ತಿಗಾಗಿ ನಿಮಗೆ ಉಪಕಾರ. ನನಗೆ ಯಾವಾಗ ಅತ್ಯಗತ್ಯವಿತ್ತೋ ಆಗಲೇ “ಯುವ ಜನರು ಪ್ರಶ್ನಿಸುವುದು . . . ದೇವರು ನನ್ನ ಮಿತ್ರನಾಗಿ ಉಳಿಯುವನೊ?” ಎಂಬ ಲೇಖನವನ್ನು ನಾನು ಪಡೆದುಕೊಂಡೆ. ನನ್ನನ್ನು ಬಹಿಷ್ಕರಿಸಲಾಗಿತ್ತು ಮತ್ತು ಇತ್ತೀಚೆಗೆ ಪುನಸ್ಸ್ಥಾಪಿಸಲ್ಪಟ್ಟೆ. ಕೆಲವೊಮ್ಮೆ ನನಗೆ ಒಂಟಿಭಾವನೆಯಾಗಿದೆ ಮತ್ತು ನನಗೆ ಅನೇಕ ಸಂದೇಹಗಳುಂಟಾಗಿವೆ—ಅವುಗಳಲ್ಲಿ ಒಂದು, ದೇವರು ನನಗೆ ಕಿವಿಗೊಡುತ್ತಾನೊ? ಎಂಬುದಾಗಿತ್ತು. ‘ಶರೀರದಲ್ಲಿ ಒಂದು ಶೂಲ’ ಎಂಬ ಉಪಶೀರ್ಷಿಕೆಯ ಕೆಳಗಿದ್ದ ಪೌಲನ ಉದಾಹರಣೆಯನ್ನು ವಿಶ್ಲೇಷಿಸಿದ ಬಳಿಕ, ಕ್ರಮವಾದ ಬೈಬಲ್ ಅಭ್ಯಾಸ ಮತ್ತು ಯಥಾರ್ಥ ಪ್ರಾರ್ಥನೆಯ ಮೂಲಕ, ಯೆಹೋವನಿಂದ ಒಂದು ಆಶೀರ್ವಾದಕ್ಕಾಗಿ ಎದುರುನೋಡಲು ನಾನು ನಿರ್ಧರಿಸಿದೆ. ಯೆಹೋವನು ನನ್ನ ಮಿತ್ರನಾಗಿಯೆ ಉಳಿಯುವನೊ? ಎಂಬಂತಹ ಒಂದು ಪ್ರಶ್ನೆಯು ಸ್ಪಷ್ಟವಾಗಿ ಉತ್ತರಿಸಲ್ಪಟ್ಟಿದೆ.
ಜೆ. ಸಿ. ಎ., ಆರ್ಜೆಂಟೀನ
ಯುವ ಜನರು ಪ್ರಶ್ನಿಸುವುದು . . .ನಾನು 12 ವರ್ಷ ಪ್ರಾಯದವಳು. ನಾನು ಶಾಲೆಗೆ ಹೋಗುತ್ತೇನೆ ಮತ್ತು ನಿಮ್ಮ ಪತ್ರಿಕೆಗಳನ್ನು ಓದುವುದರಲ್ಲಿ ನಾನು ತುಂಬ ಆನಂದಿಸುತ್ತೇನೆ. ನಾನು ಅವುಗಳನ್ನು ಓದಲು ಆರಂಭಿಸುವುದಕ್ಕೆ ಮೊದಲು, ನನಗಿಂತಲೂ ಹೆಚ್ಚು ದೊಡ್ಡವರಾದವರೊಂದಿಗೆ ಸಹವಾಸಮಾಡುವುದು ನನಗೆ ಕಷ್ಟಕರವಾಗಿತ್ತು. ಆದರೆ ಎಚ್ಚರ! ಪತ್ರಿಕೆಯಲ್ಲಿ “ಯುವ ಜನರು ಪ್ರಶ್ನಿಸುವುದು . . . ,” ಎಂಬ ಭಾಗದಲ್ಲಿರುವ ಲೇಖನಗಳನ್ನು ಓದಿದ ಬಳಿಕ, ಹಾಗೆ ಮಾಡುವುದನ್ನು ನಾನು ಹೆಚ್ಚು ಸುಲಭವಾದದ್ದಾಗಿ ಕಂಡುಕೊಂಡಿದ್ದೇನೆ. ನಿಮಗೆ ಉಪಕಾರ!
ಎನ್. ಟಿ., ರಷ್ಯ
ನಮ್ಮ ವಾಚಕರಿಂದ ನಾವು ಪಡೆದುಕೊಳ್ಳುವ ಎಲ್ಲ ಪತ್ರಿಕೆಗಳನ್ನು ನಾನು ಓದಿ, ಆನಂದಿಸುತ್ತೇನೆ. ಜೂನ್ 8, 1997, ಎಚ್ಚರ! (ಇಂಗ್ಲಿಷ್) ಪತ್ರಿಕೆಯಲ್ಲಿ, ಬಹಿಷ್ಕರಿಸುವಿಕೆಯ ಕುರಿತಾದ ವಾಚಕರ ಹೇಳಿಕೆಗಳನ್ನು ಓದಿ ನಾನು ವಿಶೇಷವಾಗಿ ಆನಂದಿಸಿದೆ. ನಾನು ಬಹಿಷ್ಕೃತಳಾಗಿದ್ದೆ ಮತ್ತು ಅನಂತರದ ವರ್ಷದಲ್ಲಿ ಪುನಸ್ಸ್ಥಾಪಿಸಲ್ಪಟ್ಟೆ. ಈ ಕ್ರಿಯೆಯು ತೀರ ಕಟುವಾದದ್ದೆಂದು ಅನೇಕ ಜನರು ಅಭಿಪ್ರಾಯಪಡುತ್ತಾರೆ. ಆದರೆ ನಿಜವಾಗಿಯೂ ಅದು ಕಟುವಾದದ್ದಲ್ಲ. ನನಗೆ ಕೊಡಲ್ಪಟ್ಟಂತಹ ಶಿಸ್ತು ಸ್ವೀಕರಿಸಲು ಕಷ್ಟಕರವಾಗಿತ್ತಾದರೂ, ಖಂಡಿತವಾಗಿಯೂ ಕಟುವಾದದ್ದಾಗಿರಲಿಲ್ಲ. ಹಿರಿಯರು ನನಗೆ ಸಹಾಯ ಮಾಡಲಿಕ್ಕಾಗಿಯೇ ಪ್ರಯತ್ನಿಸುತ್ತಿದ್ದರೆಂಬುದು ನನಗೆ ಗೊತ್ತು. ಅವರ ಸಹಾಯವನ್ನು ನಾನು ತಿರಸ್ಕರಿಸಿದ್ದರಿಂದಲೇ ಬಹಿಷ್ಕರಿಸಲ್ಪಟ್ಟೆ. ಬಹಿಷ್ಕರಿಸಲ್ಪಟ್ಟ ಬಳಿಕ, ಯೆಹೋವನಿಲ್ಲದಿದ್ದರೆ ಜೀವಿತವು ಎಷ್ಟು ಏಕಾಂತಭರಿತವಾದದ್ದಾಗಿದೆ ಎಂಬುದನ್ನು ನಾನು ಗ್ರಹಿಸಿದೆ. ನಾನು ನನ್ನ ಜೀವನ ಶೈಲಿಯನ್ನು ಬದಲಾಯಿಸಿ, ಯೆಹೋವನ ಕಡೆಗೆ ತಿರುಗುವ ವರೆಗೆ, ನನ್ನ ಜೀವನದಲ್ಲಿ ಭರ್ತಿಮಾಡಲಸಾಧ್ಯವಾದ ದೊಡ್ಡ ಶೂನ್ಯಭಾವವು ಅಡಗಿತ್ತು. ಬಹಿಷ್ಕೃತಳಾದದ್ದು, ನನ್ನನ್ನು ದೀನಳನ್ನಾಗಿ ಮಾಡಿತು ಮತ್ತು ನನಗೆ ಯೆಹೋವನ ಹಾಗೂ ಆತನ ಸಂಸ್ಥೆಯ ಅಗತ್ಯವಿದೆ ಎಂಬುದನ್ನು ತೋರಿಸಿತು.
ಎ. ಸಿ., ಕೆನಡ
ಎಚ್ಚರ! ಅತ್ಯುತ್ತಮ ಪತ್ರಿಕೆಯಾದ ಎಚ್ಚರ! ಪತ್ರಿಕೆಗಾಗಿರುವ ಚಂದಾವನ್ನು ಪುನಃ ನವೀಕರಿಸಲು ನಾನು ಮರೆತುಹೋದುದಕ್ಕಾಗಿ ನೀವು ನನ್ನನ್ನು ಕ್ಷಮಿಸಬೇಕು. ಸ್ಫೂರ್ತಿದಾಯಕವಾದ ಹಾಗೂ ಜಾಗೃತಗೊಳಿಸುವಂತಹ ಮುಖ್ಯ ವಿಷಯಗಳೊಂದಿಗೆ, ಅದು ಬೋಧಪ್ರದವೂ, ಶೈಕ್ಷಣಿಕವಾದದ್ದೂ, ವಾಸ್ತವಿಕ ವಿಚಾರಗಳಿಂದ ತುಂಬಿದ್ದೂ ಆಗಿದೆ. ನಾನು ಪಡೆದುಕೊಂಡಿರದ ಹಿಂದಿನ ಎಲ್ಲ ಸಂಚಿಕೆಗಳನ್ನು ನಾನು ಪಡೆದುಕೊಳ್ಳಲು ಬಯಸುತ್ತೇನೆ. ಒಂದೇ ಒಂದು ಸಂಚಿಕೆಯನ್ನು ಬಿಟ್ಟುಬಿಡಲು ಸಹ ನಾನು ಬಯಸುವುದಿಲ್ಲ. ಅಜ್ಞಾನವನ್ನು ಹೊಡೆದೋಡಿಸಲು ತಾಳ್ಮೆಯಿಂದ ಸಹಾಯ ಮಾಡುತ್ತಿರುವುದಕ್ಕಾಗಿ ನಿಮಗೆ ಉಪಕಾರ.
ಎನ್. ಎಸ್., ಶ್ರೀ ಲಂಕ