ಸುವಾರ್ತೆಯನ್ನು ಹಂಚಲು ಅವರು ಉಪಯೋಗಿಸುವ ವಿಧಾನಗಳು
‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವ’ ಆಜ್ಞೆಯು ಕ್ರೈಸ್ತರಿಗೆ ಕೊಡಲ್ಪಟ್ಟಿದೆ. ಆದರೆ ಅವರು ಇತರರ ಮೇಲೆ ಒತ್ತಡಹಾಕಿ ಅಥವಾ ಬಲಾತ್ಕಾರದಿಂದ ಮತಾಂತರಮಾಡಬೇಕೆಂದು ಇದರ ಅರ್ಥವಲ್ಲ. ಯೇಸು ಕೊಟ್ಟ ಆಜ್ಞೆಯು ‘ಬಡವರಿಗೆ ಶುಭವರ್ತಮಾನವನ್ನು ಸಾರುವದು,’ ‘ಮನಮುರಿದವರನ್ನು ಕಟ್ಟಿ ವಾಸಿಮಾಡುವದು’ ಮತ್ತು ‘ದುಃಖಿತರೆಲ್ಲರನ್ನು ಸಂತೈಸುವದು’ ಆಗಿತ್ತು. (ಮತ್ತಾಯ 28:19; ಯೆಶಾಯ 61:1-3; ಲೂಕ 4:18, 19) ಬೈಬಲಿನಿಂದ ಸುವಾರ್ತೆಯನ್ನು ಸಾರುವ ಮೂಲಕ ಯೆಹೋವನ ಸಾಕ್ಷಿಗಳು ಇದನ್ನು ಮಾಡಲು ಪ್ರಯತ್ನಿಸುತ್ತಾರೆ. ಪುರಾತನಕಾಲದ ಪ್ರವಾದಿ ಯೆಹೆಜ್ಕೇಲನಂತೆ ಇಂದಿನ ಯೆಹೋವನ ಸಾಕ್ಷಿಗಳು, ‘ನಡೆಯುತ್ತಿರುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ’ ಜನರನ್ನು ಕಂಡುಕೊಳ್ಳಲಿಕ್ಕಾಗಿ ಪ್ರಯತ್ನಿಸುತ್ತಾರೆ.—ಯೆಹೆಜ್ಕೇಲ 9:4.
ಸದ್ಯದ ಪರಿಸ್ಥಿತಿಗಳಿಂದ ಕ್ಷೋಭೆಗೊಂಡಿರುವ ಜನರನ್ನು ಕಂಡುಕೊಳ್ಳಲಿಕ್ಕಾಗಿ ಅವರು ಉಪಯೋಗಿಸುವ ಸುವಿಖ್ಯಾತ ವಿಧಾನವು, ಮನೆಯಿಂದ ಮನೆಗೆ ಹೋಗಿ ಸಾರುವುದೇ ಆಗಿದೆ. ಹೀಗೆ ಅವರು ಯೇಸುವಿನಂತೆಯೇ ಸಾರ್ವಜನಿಕರನ್ನು ತಲಪಲು ಒಂದು ಸಕಾರಾತ್ಮಕ ಪ್ರಯತ್ನವನ್ನು ಮಾಡುತ್ತಾರೆ. ಯೇಸು ಸಹ “ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು.” ಆತನ ಆದಿ ಶಿಷ್ಯರು ಕೂಡ ಹಾಗೆಯೇ ಮಾಡಿದರು. (ಲೂಕ 8:1; 9:1-6; 10:1-9) ಇಂದು ಯೆಹೋವನ ಸಾಕ್ಷಿಗಳು, ಸಾಧ್ಯವಿರುವಲ್ಲೆಲ್ಲಾ ಪ್ರತಿಯೊಂದು ಮನೆಯನ್ನು ವರ್ಷಕ್ಕೆ ಹಲವಾರು ಬಾರಿ ಸಂದರ್ಶಿಸುತ್ತಾ, ಯಾವುದಾದರೂ ಸ್ಥಳಿಕ ಅಥವಾ ಜಾಗತಿಕ ಆಸಕ್ತಿಯ ಸಂಗತಿ ಇಲ್ಲವೆ ಸಮಸ್ಯೆಯ ಕುರಿತು ಮನೆಯವನೊಂದಿಗೆ ಕೆಲವು ನಿಮಿಷ ಮಾತಾಡಲು ಪ್ರಯತ್ನಿಸುತ್ತಾರೆ. ಒಂದೆರಡು ಶಾಸ್ತ್ರವಚನಗಳನ್ನು ಮನೆಯವನ ಗಮನಕ್ಕೆ ತರಲಾಗಬಹುದು, ಮತ್ತು ಅವನು ಆಸಕ್ತಿಯನ್ನು ತೋರಿಸುವಲ್ಲಿ, ಆ ಚರ್ಚೆಯನ್ನು ಮುಂದುವರಿಸಲು ಆ ಸಾಕ್ಷಿಯು ಪುನರ್ಭೇಟಿಗಾಗಿ ಒಂದು ಅನುಕೂಲ ಸಮಯವನ್ನು ಏರ್ಪಡಿಸಬಹುದು. ಬೈಬಲುಗಳು ಮತ್ತು ಬೈಬಲ್ ಬಗ್ಗೆ ವಿವರಿಸುವಂಥ ಸಾಹಿತ್ಯಗಳು ಲಭ್ಯಗೊಳಿಸಲ್ಪಡುತ್ತವೆ, ಮತ್ತು ಮನೆಯವನು ಬಯಸಿದಲ್ಲಿ, ಒಂದು ಗೃಹ ಬೈಬಲಧ್ಯಯನವನ್ನು ಉಚಿತವಾಗಿ ನಡಿಸಲಾಗುತ್ತದೆ. ಸಹಾಯಕರವಾಗಿರುವ ಇಂತಹ ಲಕ್ಷಗಟ್ಟಲೆ ಬೈಬಲ್ ಅಧ್ಯಯನಗಳನ್ನು ಲೋಕದಾದ್ಯಂತ ವೈಯಕ್ತಿಕವಾಗಿ ಒಬ್ಬೊಬ್ಬ ವ್ಯಕ್ತಿಯೊಂದಿಗೆ ಅಥವಾ ಕುಟುಂಬಗಳೊಂದಿಗೆ ಕ್ರಮವಾಗಿ ನಡಿಸಲಾಗುತ್ತದೆ.
ಇತರರಿಗೆ “ರಾಜ್ಯದ ಸುವಾರ್ತೆಯು” ತಿಳಿಸಲ್ಪಡುವ ಇನ್ನೊಂದು ವಿಧಾನವು, ಸ್ಥಳಿಕ ರಾಜ್ಯ ಸಭಾಗೃಹಗಳಲ್ಲಿ ನಡೆಯುವ ಕೂಟಗಳ ಮೂಲಕವೇ ಆಗಿದೆ. ಇಲ್ಲಿ ಸಾಕ್ಷಿಗಳು ಸಾಪ್ತಾಹಿಕವಾಗಿ ಕೂಟಗಳನ್ನು ನಡಿಸುತ್ತಾರೆ. ಒಂದು ಕೂಟವು, ಯಾವುದು ಪ್ರಚಲಿತ ಅಭಿರುಚಿಯ ವಿಷಯವಾಗಿದೆಯೊ ಅದರ ಬಗ್ಗೆ ಒಂದು ಸಾರ್ವಜನಿಕ ಭಾಷಣವಾಗಿದೆ. ಅದನ್ನು ಹಿಂಬಾಲಿಸಿ, ಕಾವಲಿನಬುರುಜು ಪತ್ರಿಕೆಯನ್ನು ಮೂಲ ವಿಷಯವಸ್ತುವಾಗಿ ಉಪಯೋಗಿಸುತ್ತಾ, ಬೈಬಲ್ ಸಂಬಂಧಿತ ಮುಖ್ಯ ವಿಷಯವುಳ್ಳ ಅಥವಾ ಪ್ರವಾದನೆಯ ಕುರಿತಾದ ಒಂದು ಅಧ್ಯಯನವು ನಡೆಸಲ್ಪಡುತ್ತದೆ. ಇನ್ನೊಂದು ಕೂಟವು, ಸುವಾರ್ತೆಯ ಉತ್ತಮ ಘೋಷಕರಾಗುವಂತೆ ಸಾಕ್ಷಿಗಳಿಗೆ ತರಬೇತಿಯನ್ನು ನೀಡುವಂಥ ಒಂದು ಶಾಲೆಯಾಗಿದೆ. ಇದನ್ನು ಹಿಂಬಾಲಿಸಿ ಬರುವ ಭಾಗವು, ಸ್ಥಳಿಕ ಟೆರಿಟೊರಿಯಲ್ಲಿನ ಸಾಕ್ಷಿಕಾರ್ಯದ ಬಗ್ಗೆ ಚರ್ಚಿಸುವುದಕ್ಕೆ ಮೀಸಲಾಗಿರಿಸಲ್ಪಟ್ಟಿದೆ. ಅದಲ್ಲದೆ ಸಾಕ್ಷಿಗಳು ವಾರಕ್ಕೊಮ್ಮೆ ಬೈಬಲ್ ಅಧ್ಯಯನಗಳಿಗಾಗಿ ಖಾಸಗಿ ಮನೆಗಳಲ್ಲೂ ಚಿಕ್ಕ ಗುಂಪುಗಳಾಗಿ ಕೂಡಿಬರುತ್ತಾರೆ.
ಈ ಎಲ್ಲ ಕೂಟಗಳು ಸಾರ್ವಜನಿಕರಿಗೆ ತೆರೆದಿರುತ್ತವೆ. ಯಾವುದೇ ವಂತಿಗೆಗಳನ್ನು ಎಂದಿಗೂ ತೆಗೆದುಕೊಳ್ಳಲಾಗುವುದಿಲ್ಲ. ಇಂಥ ಕೂಟಗಳು ಎಲ್ಲರಿಗೂ ಪ್ರಯೋಜನದಾಯಕವಾಗಿವೆ. ಬೈಬಲ್ ಹೇಳುವುದು: “ನಮ್ಮ ಕೂಟಗಳಲ್ಲಿ ಕೂಡಿಬರುವುದನ್ನು ಕೆಲವರು ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ, ನಮ್ಮಲ್ಲಿ ಪ್ರತಿಯೊಬ್ಬರು ಇನ್ನೊಬ್ಬರನ್ನು ಪ್ರೀತಿ ಮತ್ತು ಸತ್ಕಾರ್ಯಕ್ಕೆ ಪ್ರಚೋದಿಸುವುದು ಹೇಗೆಂದು ಚೆನ್ನಾಗಿ ತಿಳಿದವರಾಗಿರಬೇಕು. ಆ ದಿನವು ಸಮೀಪಿಸುತ್ತಿದೆ ಎಂದು ನೀವು ನೋಡುವುದರಿಂದ ಪರಸ್ಪರವಾಗಿ ಇನ್ನಷ್ಟು ಪ್ರೋತ್ಸಾಹಿಸುತ್ತಾ ಇರಿ.” ಖಾಸಗಿ ಅಧ್ಯಯನ ಮತ್ತು ಸಂಶೋಧನೆ ಆವಶ್ಯಕ ನಿಜ, ಆದರೆ ಇತರರೊಂದಿಗೆ ಕೂಡಿಬರುವುದು ತುಂಬ ಪ್ರಚೋದನಾತ್ಮಕವಾಗಿದೆ: “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು.”—ಇಬ್ರಿಯ 10:24, 25; ಜ್ಞಾನೋಕ್ತಿ 27:17, ದ ನ್ಯೂ ಇಂಗ್ಲಿಷ್ ಬೈಬಲ್.
ಸಾಕ್ಷಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಸಂಪರ್ಕಮಾಡುವ ಬೇರೆ ಜನರೊಂದಿಗೆ ಸುವಾರ್ತೆಯ ಕುರಿತು ಮಾತಾಡುವ ಅವಕಾಶಗಳ ಸದುಪಯೋಗವನ್ನೂ ಮಾಡುತ್ತಾರೆ. ನೆರೆಯವನೊಂದಿಗೆ ಇಲ್ಲವೆ ಒಂದು ಬಸ್ ಅಥವಾ ವಿಮಾನದಲ್ಲಿ ಒಬ್ಬ ಜೊತೆ ಪ್ರಯಾಣಿಕನೊಂದಿಗೆ ಆಡುವ ಒಂದೆರಡು ಮಾತುಗಳಲ್ಲಿ, ಒಬ್ಬ ಮಿತ್ರ ಅಥವಾ ಸಂಬಂಧಿಕನೊಂದಿಗಿನ ತುಸು ಉದ್ದದ ಸಂಭಾಷಣೆಯಲ್ಲಿ, ಮಧ್ಯಾಹ್ನ ಊಟದ ಸಮಯದಲ್ಲಿ ಒಬ್ಬ ಸಹೋದ್ಯೋಗಿಯೊಂದಿಗಿನ ಒಂದು ಚರ್ಚೆಯಲ್ಲಿ ಅವರು ಸುವಾರ್ತೆಯ ಕುರಿತು ಮಾತಾಡುತ್ತಾರೆ. ಯೇಸು ಭೂಮಿಯಲ್ಲಿದ್ದಾಗ ಮಾಡಿದ ಹೆಚ್ಚಿನ ಸಾಕ್ಷಿಕಾರ್ಯವು ಇದೇ ರೀತಿಯದ್ದಾಗಿತ್ತು. ಸಮುದ್ರ ತೀರದಲ್ಲಿ ನಡೆದು ಹೋಗುತ್ತಿದ್ದಾಗ, ಗುಡ್ಡದ ಪಕ್ಕದಲ್ಲಿ ಕುಳಿತುಕೊಂಡಿದ್ದಾಗ, ಒಬ್ಬನ ಮನೆಯಲ್ಲಿ ಊಟಮಾಡುತ್ತಿದ್ದಾಗ, ಒಂದು ಮದುವೆಗೆ ಹೋಗಿದ್ದಾಗ ಅಥವಾ ಮೀನು ಹಿಡಿಯುವ ದೋಣಿಯೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಅವನು ಸಾರಿದನು. ಅವನು ಸಭಾಮಂದಿರಗಳಲ್ಲಿಯೂ, ಯೆರೂಸಲೇಮಿನಲ್ಲಿದ್ದ ಆಲಯದಲ್ಲಿಯೂ ಕಲಿಸಿದನು. ಅವನು ಎಲ್ಲಿಯೇ ಇದ್ದಿರಲಿ, ದೇವರ ರಾಜ್ಯದ ಕುರಿತಾಗಿ ಮಾತಾಡುವ ಸಂದರ್ಭಗಳನ್ನು ಕಂಡುಕೊಂಡನು. ಈ ವಿಷಯದಲ್ಲಿಯೂ ಯೆಹೋವನ ಸಾಕ್ಷಿಗಳು ಆತನ ಹೆಜ್ಜೆಜಾಡಿನಲ್ಲಿ ನಡೆಯಲು ಪ್ರಯತ್ನಿಸುತ್ತಾರೆ.—1 ಪೇತ್ರ 2:21.
ಮಾದರಿಯ ಮೂಲಕ ಸಾರುವುದು
ನಿಮಗೆ ಸುವಾರ್ತೆಯನ್ನು ಹೇಳುವವನು ಆ ಬೋಧನೆಗಳನ್ನು ಸ್ವತಃ ಅನ್ವಯಿಸಿಕೊಳ್ಳದೆ ಇದ್ದಲ್ಲಿ, ಅದನ್ನು ನಿಮಗೆ ತಿಳಿಸುವಂಥ ಈ ಎಲ್ಲ ವಿಧಗಳೂ ಅರ್ಥಹೀನವಾಗಿರುವವು. ಹೇಳುವುದೊಂದು ಮತ್ತು ಮಾಡುವುದು ಇನ್ನೊಂದು ಶುದ್ಧ ಕಪಟತನವಾಗಿದೆ. ಮತ್ತು ಧಾರ್ಮಿಕ ಕಪಟತನವು ಕೋಟ್ಯಂತರ ಜನರನ್ನು ಬೈಬಲಿನಿಂದ ದೂರ ತೊಲಗಿಸಿದೆ. ಆದರೆ ಇದಕ್ಕಾಗಿ ಬೈಬಲನ್ನು ದೂಷಿಸುವುದು ಖಂಡಿತವಾಗಿಯೂ ಯೋಗ್ಯವಾದದ್ದಲ್ಲ. ಶಾಸ್ತ್ರಿಗಳು ಮತ್ತು ಫರಿಸಾಯರ ಬಳಿಯೂ ಹೀಬ್ರು ಶಾಸ್ತ್ರಗಳಿದ್ದವು, ಆದರೆ ಯೇಸು ಅವರನ್ನು ಕಪಟಿಗಳೆಂದು ಖಂಡಿಸಿದನು. ಅವರು ಮೋಶೆಯ ಧರ್ಮಶಾಸ್ತ್ರವನ್ನು ಓದುವುದರ ಕುರಿತು ತಿಳಿಸಿ, ಯೇಸು ಅನಂತರ ತನ್ನ ಶಿಷ್ಯರಿಗೆ ಅಂದದ್ದು: “ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ. ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ.” (ಮತ್ತಾಯ 23:3) ಕ್ರೈಸ್ತನೊಬ್ಬನು ನೀಡುವ ಗಂಟಾನುಗಟ್ಟಲೆಯ ಪ್ರಸಂಗಗಳಿಗಿಂತ ಅವನ ಉದಾತ್ತ ಜೀವನದ ಮಾದರಿಯು ಎಷ್ಟೋ ಹೆಚ್ಚನ್ನು ತಿಳಿಯಪಡಿಸುತ್ತದೆ. ಅವಿಶ್ವಾಸಿ ಗಂಡಂದಿರಿರುವ ಕ್ರೈಸ್ತ ಪತ್ನಿಯರಿಗೆ ಇದನ್ನು ತಿಳಿಸಲಾಗಿತ್ತು: ‘ನೀವು ನಿರ್ಮಲರಾಗಿ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.’—1 ಪೇತ್ರ 3:1, 2.
ಆದುದರಿಂದ, ಯೆಹೋವನ ಸಾಕ್ಷಿಗಳು ಈ ರೀತಿಯಲ್ಲೂ ಸುವಾರ್ತೆಯನ್ನು ಇತರರಿಗೆ ಶಿಫಾರಸ್ಸುಮಾಡಲು ಪ್ರಯತ್ನಿಸುತ್ತಾರೆ: ತಾವು ಇತರರಿಗೆ ಶಿಫಾರಸ್ಸುಮಾಡುವಂಥ ಕ್ರೈಸ್ತ ನಡತೆಯಲ್ಲಿ ಸ್ವತಃ ಆದರ್ಶಪ್ರಾಯರಾಗಿರುವ ಮೂಲಕವೇ. ‘ಬೇರೆಯವರು ತಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತಾರೋ ಅದನ್ನೇ ಅವರಿಗೆ’ ಮಾಡಲು ಅವರು ಪ್ರಯತ್ನಿಸುತ್ತಾರೆ. (ಮತ್ತಾಯ 7:12) ಕೇವಲ ಜೊತೆ ಸಾಕ್ಷಿಗಳು, ಮಿತ್ರರು, ನೆರೆಯವರು ಅಥವಾ ಸಂಬಂಧಿಕರೊಂದಿಗೆ ಮಾತ್ರ ಅಲ್ಲ, ಬದಲಾಗಿ ಅವರು ಈ ರೀತಿ ಎಲ್ಲಾ ಜನರೊಂದಿಗೆ ವ್ಯವಹರಿಸಲು ಬಯಸುತ್ತಾರೆ. ಅಪರಿಪೂರ್ಣರಾಗಿರುವುದರಿಂದ ಇದನ್ನು ಮಾಡುವುದರಲ್ಲಿ ಅವರು ಯಾವಾಗಲೂ 100 ಪ್ರತಿಶತ ಸಾಫಲ್ಯ ಪಡೆಯುವದಿಲ್ಲ ನಿಜ. ಆದರೆ ಎಲ್ಲಾ ಜನರಿಗೆ ರಾಜ್ಯದ ಸುವಾರ್ತೆಯನ್ನು ತಿಳಿಸುವ ಮೂಲಕ ಮಾತ್ರವಲ್ಲ, ಸಾಧ್ಯವಿರುವಲ್ಲೆಲ್ಲ ಸಹಾಯಹಸ್ತವನ್ನು ಚಾಚುವ ಮೂಲಕವೂ ಒಳ್ಳೇದನ್ನು ಮಾಡುವುದೇ ಅವರ ಹೃದಯಾಪೇಕ್ಷೆಯಾಗಿದೆ.—ಯಾಕೋಬ 2:14-17.
[ಪುಟ 19ರಲ್ಲಿರುವ ಚಿತ್ರ]
ಹವಾಯೀ
[ಪುಟ 19ರಲ್ಲಿರುವ ಚಿತ್ರ]
ವೆನಿಸ್ವೇಲ
[ಪುಟ 19ರಲ್ಲಿರುವ ಚಿತ್ರ]
ಯುಗೊಸ್ಲಾವಿಯ
[ಪುಟ 20ರಲ್ಲಿರುವ ಚಿತ್ರಗಳು]
ವಿನ್ಯಾಸದಲ್ಲಿ ಪ್ರಾಯೋಗಿಕವಾಗಿರುವ ರಾಜ್ಯ ಸಭಾಗೃಹಗಳು, ಬೈಬಲ್ ಚರ್ಚೆಗಾಗಿರುವ ಸ್ಥಳಗಳಾಗಿವೆ
[ಪುಟ 21ರಲ್ಲಿರುವ ಚಿತ್ರಗಳು]
ತಮ್ಮ ಕುಟುಂಬ ಜೀವನದಲ್ಲಿ ಮತ್ತು ಇತರರೊಂದಿಗಿನ ಸಂಪರ್ಕದಲ್ಲಿ ಸಾಕ್ಷಿಗಳು ತಾವು ಹೇಳುವಂಥ ವಿಷಯಗಳನ್ನೇ ಮಾಡಲು ಯಥಾರ್ಥವಾಗಿ ಪ್ರಯತ್ನಿಸುತ್ತಾರೆ