ಅಧ್ಯಾಯ 26
ಪರದೈಸ್ ಕೈಸೇರಿತು!
ಕ್ರಿಸ್ತನ ಅಧಿಕಾರದ ಕೆಳಗಿರುವ ರಾಜ್ಯದ ಮೂಲಕ ಯೆಹೋವನು ತನ್ನ ನಾಮವನ್ನು ಪವಿತ್ರೀಕರಿಸುತ್ತಾನೆ ಮತ್ತು ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸುತ್ತಾನೆ. ಮಾತ್ರವಲ್ಲ, ಸಕಲ ದುಷ್ಟತನವನ್ನು ನಿರ್ಮೂಲ ಮಾಡುತ್ತಾನೆ
ಬೈಬಲಿನ ಕೊನೆಯ ಪುಸ್ತಕದ ಹೆಸರು ಪ್ರಕಟನೆ ಎಂದಾಗಿದ್ದು, ಈ ಪುಸ್ತಕವು ಸಕಲ ಮಾನವರಿಗೂ ಭವಿಷ್ಯದ ನಿರೀಕ್ಷೆಯನ್ನು ಕೊಡುತ್ತದೆ. ಈ ಪುಸ್ತಕವನ್ನು ಅಪೊಸ್ತಲ ಯೋಹಾನನು ಬರೆದನು. ಇದರಲ್ಲಿರುವ ದರ್ಶನಗಳು ಯೆಹೋವನ ಉದ್ದೇಶದ ನೆರವೇರಿಕೆಯ ಪರಾಕಾಷ್ಠೆಯನ್ನು ಚೆನ್ನಾಗಿ ಚಿತ್ರಿಸುತ್ತವೆ.
ಮೊದಲ ದರ್ಶನದಲ್ಲಿ, ಪುನರುತ್ಥಿತ ಯೇಸು ಅನೇಕ ಸಭೆಗಳ ಒಳ್ಳೆಯ ಕಾರ್ಯಗಳನ್ನು ಶ್ಲಾಘಿಸಿ ಅವುಗಳ ತಪ್ಪನ್ನು ಸರಿಪಡಿಸುತ್ತಾನೆ. ಅನಂತರದ ದರ್ಶನವು ನಮ್ಮನ್ನು ಸ್ವರ್ಗದಲ್ಲಿರುವ ದೇವರ ಸಿಂಹಾಸನದ ಮುಂಭಾಗಕ್ಕೆ ಕರೆದೊಯ್ಯತ್ತದೆ. ಅಲ್ಲಿ ಆತ್ಮಜೀವಿಗಳು ದೇವರಿಗೆ ತಮ್ಮ ಸ್ತುತಿಸ್ತೋತ್ರಗಳನ್ನು ಸಲ್ಲಿಸುತ್ತಿರುತ್ತಾರೆ.
ದೇವರ ಉದ್ದೇಶವು ನೆರವೇರುತ್ತಾ ಮುಂದುವರಿದಂತೆ ದೇವರ ಕುರಿಮರಿ ಎಂದು ಕರೆಯಲ್ಪಡುವ ಯೇಸು ಕ್ರಿಸ್ತನು ಏಳು ಮುದ್ರೆಗಳಿರುವ ಸುರುಳಿಯನ್ನು ಪಡೆದುಕೊಳ್ಳುತ್ತಾನೆ. ಆ ಸುರುಳಿಯ ಮೊದಲ ನಾಲ್ಕು ಮುದ್ರೆಗಳನ್ನು ಬಿಚ್ಚಿದಾಗ ಸಾಂಕೇತಿಕ ಅರ್ಥವುಳ್ಳ ಕುದುರೆಸವಾರರು ಕಾಣಿಸಿಕೊಳ್ಳುತ್ತಾರೆ. ಅವರಲ್ಲಿ ಮೊದಲನೆಯವನು ಯೇಸುವಾಗಿದ್ದು ರಾಜನಂತೆ ಕಿರೀಟ ಧರಿಸಿ ಬಿಳೀ ಕುದುರೆಯ ಮೇಲೆ ಬರುತ್ತಾನೆ. ಅನಂತರ ಬೇರೆ ಬೇರೆ ಕುದುರೆಸವಾರರು ಬೇರೆ ಬೇರೆ ಬಣ್ಣದ ಕುದುರೆಗಳ ಮೇಲೆ ಕುಳಿತು ಬರುತ್ತಾರೆ. ಅವರೆಲ್ಲರೂ ಪ್ರವಾದನಾತ್ಮಕವಾಗಿ ಯುದ್ಧ, ಕ್ಷಾಮ ಮತ್ತು ಸಾಂಕ್ರಾಮಿಕ ರೋಗವನ್ನು ಸೂಚಿಸುತ್ತಾರೆ. ಇವು ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲಿ ಭೂಮಿಯ ಮೇಲೆ ಸಂಭವಿಸುವ ಸಂಗತಿಗಳಾಗಿವೆ. ಸುರುಳಿಯ ಏಳನೆಯ ಮುದ್ರೆಯನ್ನು ಬಿಚ್ಚಿದಾಗ ಏಳು ಸಾಂಕೇತಿಕ ತುತೂರಿಗಳು ಊದಲ್ಪಡುತ್ತವೆ. ಅವು ದೇವರ ನ್ಯಾಯತೀರ್ಪಿನ ಘೋಷಣೆಗಳಾಗಿದ್ದು ಈ ಘೋಷಣೆಗಳ ಹಿಂದೆಯೇ ಸಾಂಕೇತಿಕ ಉಪದ್ರವಗಳು ತೋರಿಬರುತ್ತವೆ. ಈ ಉಪದ್ರವಗಳು ದೇವರ ಕೋಪವನ್ನು ಸೂಚಿಸುತ್ತವೆ.
ಒಂದು ನವಜಾತ ಗಂಡು ಮಗುವಿನಿಂದ ಚಿತ್ರಿಸಲ್ಪಟ್ಟ ದೇವರ ರಾಜ್ಯವು ಸ್ವರ್ಗದಲ್ಲಿ ಸ್ಥಾಪನೆಯಾಗುತ್ತದೆ. ಅನಂತರ ಸ್ವರ್ಗದಲ್ಲಿ ಒಂದು ಯುದ್ಧವು ಆರಂಭವಾಗುತ್ತದೆ. ಅದರ ಪರಿಣಾಮವಾಗಿ ಸೈತಾನ ಹಾಗೂ ಅವನ ದುಷ್ಟ ದೂತರು ಭೂಮಿಗೆ ತಳ್ಳಲ್ಪಡುತ್ತಾರೆ. ಆಗ ‘ಭೂಮಿಗೆ ಅಯ್ಯೋ’ ಎಂದು ಗಟ್ಟಿಯಾದ ಧ್ವನಿಯೊಂದು ಕೂಗುತ್ತದೆ. ಏಕೆಂದರೆ ಸೈತಾನನು ತನಗಿರುವ ಸಮಯಾವಧಿಯು ಸ್ವಲ್ಪವೆಂದು ತಿಳಿದು ಮಹಾ ಕೋಪದಿಂದ ಕುಪಿತನಾಗಿದ್ದಾನೆ.—ಪ್ರಕಟನೆ 12:12.
ಕುರಿಮರಿಯಿಂದ ಪ್ರತಿನಿಧಿಸಲ್ಪಟ್ಟ ಯೇಸು ಸ್ವರ್ಗದಲ್ಲಿರುವುದನ್ನು ಯೋಹಾನನು ನೋಡುತ್ತಾನೆ. ಮಾನವರಿಂದ ಆಯ್ಕೆಮಾಡಲ್ಪಟ್ಟ 1,44,000 ಮಂದಿ ಸಹ ಯೇಸುವಿನೊಂದಿಗೆ ಸ್ವರ್ಗದಲ್ಲಿರುತ್ತಾರೆ. ಅವರು “ಅವನೊಂದಿಗೆ . . . ರಾಜರಾಗಿ ಆಳುವರು.” ಹೀಗೆ, 1,44,000 ಮಂದಿ ‘ಸಂತಾನ’ದ ದ್ವಿತೀಯ ಸದಸ್ಯರಾಗಿರುವರು ಎಂಬುದನ್ನು ಪ್ರಕಟನೆ ಪುಸ್ತಕವು ಬಯಲುಪಡಿಸುತ್ತದೆ.—ಪ್ರಕಟನೆ 14:1; 20:6.
ಭೂಮಿಯಲ್ಲಿರುವ ಎಲ್ಲಾ ಅಧಿಪತಿಗಳು ಅರ್ಮಗೆದೋನ್ ಯುದ್ಧಕ್ಕಾಗಿ ಅಂದರೆ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕಾಗಿ” ಒಟ್ಟುಗೂಡುತ್ತಾರೆ. ಅವರೆಲ್ಲರೂ ಬಿಳೀ ಕುದುರೆಯ ಮೇಲೆ ಕೂತಿರುವ ಸವಾರನ ವಿರುದ್ಧವಾಗಿ ಅಂದರೆ ಪರಲೋಕದ ಸೈನ್ಯವನ್ನು ಮುನ್ನಡೆಸುವ ಯೇಸುವಿನ ವಿರುದ್ಧವಾಗಿ ಯುದ್ಧ ಮಾಡುತ್ತಾರೆ. ಆದರೆ ಆ ಯುದ್ಧದಲ್ಲಿ ಎಲ್ಲಾ ಭೂಅಧಿಪತಿಗಳು ನಾಶವಾಗುತ್ತಾರೆ. ಸೈತಾನನನ್ನು ಬಂಧಿಸಲಾಗುತ್ತದೆ. ಯೇಸು ಮತ್ತು 1,44,000 ಮಂದಿ “ಸಾವಿರ ವರ್ಷಗಳ ವರೆಗೆ” ಭೂಮಿಯ ಮೇಲೆ ಆಳ್ವಿಕೆ ನಡೆಸುತ್ತಾರೆ. ಈ ಸಾವಿರ ವರ್ಷಗಳ ಕೊನೆಯಲ್ಲಿ ಸೈತಾನನನ್ನು ನಾಶಮಾಡಲಾಗುತ್ತದೆ.—ಪ್ರಕಟನೆ 16:14; 20:4.
ಯೇಸು ಮತ್ತು ಅವನ ಸಹರಾಜರ ಸಹಸ್ರವರ್ಷದಾಳಿಕೆಯಲ್ಲಿ ವಿಧೇಯ ಮಾನವರಿಗೆ ಏನಾಗುವುದು? “[ಯೆಹೋವನು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ” ಎಂದು ಯೋಹಾನನು ಬರೆದನು. (ಪ್ರಕಟನೆ 21:4) ಹೀಗೆ ಇಡೀ ಭೂಮಿಯು ಪರದೈಸಾಗುವುದು!
ಇಲ್ಲಿಗೆ ಪ್ರಕಟನೆ ಪುಸ್ತಕವು ಬೈಬಲಿನಲ್ಲಿರುವ ಸಂದೇಶವನ್ನು ಮುಕ್ತಾಯಗೊಳಿಸುತ್ತದೆ. ಯೆಹೋವನ ನಾಮವು ಮೆಸ್ಸೀಯ ರಾಜ್ಯದ ಮೂಲಕ ಪವಿತ್ರಗೊಂಡು ಆತನ ಪರಮಾಧಿಕಾರವು ನಿತ್ಯನಿರಂತರಕ್ಕೂ ನಿರ್ದೋಷೀಕರಿಸಲ್ಪಟ್ಟಿರುತ್ತದೆ!
—ಪ್ರಕಟನೆ ಪುಸ್ತಕದ ಮೇಲೆ ಆಧಾರಿತವಾಗಿದೆ.