ಪಾಠ 11
ನಂಬಿಕೆಯ ಪರೀಕ್ಷೆ
ಅಬ್ರಹಾಮನು ತನ್ನ ಮಗನಾದ ಇಸಾಕನಿಗೆ ಯೆಹೋವನನ್ನು ಪ್ರೀತಿಸಲು ಮತ್ತು ಆತನ ಎಲ್ಲಾ ವಾಗ್ದಾನಗಳ ಮೇಲೆ ಭರವಸೆ ಇಡಲು ಕಲಿಸಿದನು. ಇಸಾಕನಿಗೆ 25 ವರ್ಷ ಇದ್ದಾಗ ಯೆಹೋವನು ಒಂದು ಕಷ್ಟದ ಕೆಲಸ ಮಾಡಲು ಅಬ್ರಹಾಮನಿಗೆ ಹೇಳಿದನು. ಅದೇನು ಗೊತ್ತಾ?
ದೇವರು ಅಬ್ರಹಾಮನಿಗೆ ‘ನಿನ್ನ ಒಬ್ಬನೇ ಮಗನನ್ನ ಮೊರೀಯ ದೇಶದ ಬೆಟ್ಟದಲ್ಲಿ ಬಲಿಯಾಗಿ ನನಗೆ ಕೊಡು’ ಅಂದನು. ಯೆಹೋವನು ಯಾಕೆ ಹೀಗೆ ಹೇಳುತ್ತಿದ್ದಾನೆಂದು ಅಬ್ರಹಾಮನಿಗೆ ಸ್ವಲ್ಪವೂ ಅರ್ಥ ಆಗಲಿಲ್ಲ. ಆದರೂ ಯೆಹೋವನ ಮಾತಿಗೆ ವಿಧೇಯನಾದನು.
ಅಬ್ರಹಾಮ ಮಾರನೇ ದಿನ ಬೆಳಗ್ಗೆ ಇಸಾಕ ಮತ್ತು ಇಬ್ಬರು ಸೇವಕರನ್ನು ಕರೆದುಕೊಂಡು ಮೊರೀಯ ಕಡೆಗೆ ಹೆಜ್ಜೆ ಹಾಕಿದನು. ಮೂರು ದಿನಗಳ ನಂತರ ಅವರು ಬೆಟ್ಟದ ಹತ್ತಿರ ತಲುಪಿದರು. ಆಗ ಅಬ್ರಹಾಮ ತನ್ನ ಸೇವಕರಿಗೆ ‘ನೀವು ಇಲ್ಲೇ ಇರಿ. ನಾನು ನನ್ನ ಮಗ ದೇವರಿಗೆ ಬಲಿ ಅರ್ಪಿಸಿ ಬರ್ತಿವಿ’ ಎಂದು ಹೇಳಿದನು. ಕಟ್ಟಿಗೆಯನ್ನು ಇಸಾಕನ ಮೇಲೆ ಹೊರಿಸಿ ಅಬ್ರಹಾಮ ಕತ್ತಿಯನ್ನು ಕೈಯಲ್ಲಿಡಿದು ಹೋದನು. ಆಗ ಇಸಾಕನು ‘ಅಪ್ಪಾ, ಬಲಿಗೆ ಬೇಕಾದ ಪ್ರಾಣಿ ಎಲ್ಲಿ?’ ಎಂದು ಕೇಳಿದನು. ಅದಕ್ಕೆ ಅಬ್ರಹಾಮ ‘ಮಗನೇ ಅದನ್ನ ಯೆಹೋವನೇ ಕೊಡ್ತಾನೆ’ ಎಂದು ಉತ್ತರಿಸಿದನು.
ಬೆಟ್ಟವನ್ನು ತಲುಪಿದ ನಂತರ ಅವರಿಬ್ಬರು ಸೇರಿ ಯಜ್ಞವೇದಿಯನ್ನು ಕಟ್ಟಿದರು. ಅಬ್ರಹಾಮನು ಇಸಾಕನ ಕೈಕಾಲುಗಳನ್ನು ಕಟ್ಟಿ ಯಜ್ಞವೇದಿಯ ಮೇಲೆ ಮಲಗಿಸಿದನು.
ಅಬ್ರಹಾಮ ಕತ್ತಿಯನ್ನು ಕೈಗೆತ್ತಿಕೊಂಡನು. ತಕ್ಷಣ ಯೆಹೋವನ ದೂತನು ಆಕಾಶದಿಂದ ‘ಅಬ್ರಹಾಮ, ನಿನ್ನ ಮಗನನ್ನ ಕೊಲ್ಲಬೇಡ. ನಿನ್ನ ಒಬ್ಬನೇ ಮಗನನ್ನ ನನಗೆ ಅರ್ಪಿಸೋಕೆ ನೀನು ಹಿಂಜರಿಲಿಲ್ಲ. ಇದ್ರಿಂದ ದೇವರ ಮೇಲೆ ನಿನಗೆ ನಂಬಿಕೆ ಇದೆ ಅಂತ ಗೊತ್ತಾಯ್ತು’ ಅಂದನು. ಇದಾದ ಮೇಲೆ ಟಗರೊಂದು ಪೊದೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ಅಬ್ರಹಾಮ ಕಂಡನು. ತಕ್ಷಣ ಇಸಾಕನಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಅವನಿಗೆ ಬದಲಾಗಿ ಟಗರನ್ನು ಬಲಿಯಾಗಿ ಕೊಟ್ಟನು.
ಆ ದಿನದಿಂದ ಯೆಹೋವನು ಅಬ್ರಹಾಮನನ್ನು ‘ನನ್ನ ಸ್ನೇಹಿತ’ ಎಂದು ಕರೆದನು. ಯಾಕೆ ಗೊತ್ತಾ? ಯಾಕೆಂದರೆ ಅಬ್ರಹಾಮ ಯೆಹೋವ ದೇವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೇ ಮಾಡುತ್ತಿದ್ದ. ಯೆಹೋವನು ಯಾಕೆ ಹೇಳಿದರು ಅಂತ ಅರ್ಥ ಆಗದೇ ಇದ್ದಾಗಲೂ ಅದನ್ನು ಮಾಡಿದ.
ಮತ್ತೊಮ್ಮೆ ಯೆಹೋವ ದೇವರು ಅಬ್ರಹಾಮನಿಗೆ ‘ನಾನು ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಸಂತತಿನ ಹೆಚ್ಚಿಸ್ತೀನಿ’ ಎಂದು ಮಾತುಕೊಟ್ಟನು. ಇದರರ್ಥ ಯೆಹೋವ ದೇವರು ಎಲ್ಲಾ ಒಳ್ಳೇ ಜನರನ್ನು ಅಬ್ರಹಾಮನ ಸಂತತಿಯ ಮೂಲಕ ಆಶೀರ್ವದಿಸುವನು ಎಂದಾಗಿತ್ತು.
“ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.”—ಯೋಹಾನ 3:16