ಪಾಠ 24
ಅವರು ಕೊಟ್ಟ ಮಾತನ್ನು ತಪ್ಪಿದರು
ಯೆಹೋವನು ಮೋಶೆಗೆ ‘ಬೆಟ್ಟದ ಮೇಲೆ ಬಾ. ನನ್ನ ಆಜ್ಞೆಗಳನ್ನ ಕಲ್ಲಿನ ಹಲಗೆಗಳ ಮೇಲೆ ಬರೆದು ನಿನಗೆ ಕೊಡ್ತೀನಿ’ ಅಂದನು. ಮೋಶೆ ಬೆಟ್ಟಕ್ಕೆ ಹೋಗಿ 40 ದಿನ ಹಗಲೂರಾತ್ರಿ ಅಲ್ಲೇ ಉಳಿದನು. ಅಲ್ಲಿ ಯೆಹೋವನು ಎರಡು ಕಲ್ಲಿನ ಹಲಗೆಗಳ ಮೇಲೆ ಹತ್ತು ಪ್ರಾಮುಖ್ಯವಾದ ಆಜ್ಞೆಗಳನ್ನು ಬರೆದು ಅದನ್ನು ಮೋಶೆಗೆ ಕೊಟ್ಟನು. ಈ ಆಜ್ಞೆಗಳನ್ನು ದಶಾಜ್ಞೆಗಳು ಎನ್ನುತ್ತಾರೆ.
ಸ್ವಲ್ಪ ಸಮಯದ ನಂತರ ಮೋಶೆ ತಮ್ಮನ್ನು ಬಿಟ್ಟು ಹೋಗಿದ್ದಾನೆ ಎಂದು ಇಸ್ರಾಯೇಲ್ಯರು ನೆನಸಿದರು. ಅವರು ಆರೋನನಿಗೆ ‘ನಮ್ಮನ್ನು ಮುನ್ನಡೆಸಲು ನಮಗೆ ಯಾರಾದರೂ ಬೇಕು. ಹಾಗಾಗಿ ನಮಗೊಂದು ದೇವರನ್ನ ಮಾಡಿಕೊಡು!’ ಎಂದರು. ಆಗ ಆರೋನನು ಜನರಿಗೆ ‘ನಿಮ್ಮಲ್ಲಿರುವ ಚಿನ್ನವನ್ನು ನನಗೆ ಕೊಡಿ’ ಅಂದನು. ಅವನು ಚಿನ್ನವನ್ನು ಕರಗಿಸಿ ಕರುವಿನ ಮೂರ್ತಿಯನ್ನು ಮಾಡಿದ. ಆಗ ಜನರು ನಮ್ಮನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದಿದ್ದು ಈ ದೇವರೇ ಅಂದರು. ಅವರು ಚಿನ್ನದ ಕರುವನ್ನ ಆರಾಧಿಸುತ್ತಾ ದೊಡ್ಡ ಉತ್ಸವವನ್ನು ಮಾಡಿದರು. ಇದು ಸರಿನಾ? ಇಲ್ಲ. ಏಕೆಂದರೆ ಅವರು ಯೆಹೋವನನ್ನು ಮಾತ್ರ ಆರಾಧಿಸುತ್ತೇವೆ ಎಂದು ಮಾತು ಕೊಟ್ಟಿದ್ದರು. ಆದರೆ ಈಗ ಅವರು ಕೊಟ್ಟ ಮಾತನ್ನು ಮುರಿದರು.
ಯೆಹೋವನು ಇದನ್ನೆಲ್ಲಾ ನೋಡಿ ಮೋಶೆಗೆ ‘ಬೇಗ ಇಳಿದು ಹೋಗು. ಜನರು ನನ್ನ ಮಾತನ್ನು ಮೀರಿ ಸುಳ್ಳು ದೇವರನ್ನು ಆರಾಧಿಸುತ್ತಿದ್ದಾರೆ’ ಅಂದನು. ಮೋಶೆ ಎರಡು ಕಲ್ಲಿನ ಹಲಗೆಗಳನ್ನು ತೆಗೆದುಕೊಂಡು ಕೆಳಗೆ ಹೋದನು.
ಅವನು ಹತ್ತಿರ ಹತ್ತಿರ ಬರುತ್ತಿದ್ದಂತೆ ಜನರು ಹಾಡುತ್ತಿದ್ದ ಸದ್ದು ಮೋಶೆಗೆ ಕೇಳಿಸಿತು. ಬಂದು ನೋಡಿದರೆ ಜನರು ಕುಣಿದಾಡುತ್ತಾ ಕರು ಮೂರ್ತಿಗೆ ಅಡ್ಡಬೀಳುತ್ತಿದ್ದರು. ಆಗ ಮೋಶೆಯ ಕೋಪ ನೆತ್ತಿಗೇರಿತು. ಕೈಯಲ್ಲಿದ್ದ ಎರಡು ಕಲ್ಲಿನ ಹಲಗೆಗಳನ್ನು ನೆಲಕ್ಕೆ ಎಸೆದನು. ಅವು ಒಡೆದು ಚೂರುಚೂರಾಯ್ತು ಮತ್ತು ಅವನು ಕೂಡಲೇ ಆ ಮೂರ್ತಿಯನ್ನು ನಾಶಮಾಡಿದನು. ಮೋಶೆ ಆರೋನನಿಗೆ ‘ಈ ಘೋರ ಪಾಪವನ್ನ ನೀನು ಯಾಕೆ ಮಾಡಿದೆ?’ ಎಂದು ಕೇಳಿದನು. ಆಗ ಆರೋನ ‘ಕೋಪ ಮಾಡ್ಕೊಬೇಡ, ಈ ಜನ್ರ ಕೆಟ್ಟ ಬುದ್ಧಿ ನಿನಗೆ ಗೊತ್ತೇ ಇದೆ. ಅವರು ದೇವರು ಬೇಕು ಅಂದರು. ನಾನು ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಕರುವಿನ ಮೂರ್ತಿ ಬಂತು!’ ಅಂದನು. ಆರೋನನು ಇಂಥ ಕೆಲಸವನ್ನು ಮಾಡಬಾರದಿತ್ತು. ಮೋಶೆ ಪುನಃ ಬೆಟ್ಟಕ್ಕೆ ಹೋಗಿ ಜನರನ್ನು ಕ್ಷಮಿಸುವಂತೆ ಯೆಹೋವನನ್ನು ಬೇಡಿದನು.
ಯಾರು ಯೆಹೋವನ ಮಾತನ್ನ ಕೇಳಿದರೋ ಅವರನ್ನು ಆತನು ಕ್ಷಮಿಸಿದನು. ಇಸ್ರಾಯೇಲ್ಯರು ಮೋಶೆಯ ಮಾತನ್ನು ಕೇಳುವುದು ಎಷ್ಟು ಪ್ರಾಮುಖ್ಯ ಆಗಿತ್ತಲ್ವಾ?
“ನೀನು ದೇವ್ರಿಗೆ ಹರಕೆ ಹೊತ್ರೆ ಅದನ್ನ ತೀರಿಸೋಕೆ ತಡಮಾಡಬೇಡ. ಯಾಕಂದ್ರೆ ಹರಕೆ ತೀರಿಸದ ಮೂರ್ಖರನ್ನ ಆತನು ಇಷ್ಟಪಡಲ್ಲ. ನಿನ್ನ ಹರಕೆ ತೀರಿಸು.”—ಪ್ರಸಂಗಿ 5:4