ಪಾಠ 34
ಗಿದ್ಯೋನ ಮಿದ್ಯಾನ್ಯರನ್ನು ಸೋಲಿಸಿದನು
ಸ್ವಲ್ಪ ಸಮಯದ ನಂತರ ಇಸ್ರಾಯೇಲ್ಯರು ಮತ್ತೆ ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸಿದರು. ಏಳು ವರ್ಷಗಳವರೆಗೆ ಮಿದ್ಯಾನ್ಯರು ಇಸ್ರಾಯೇಲ್ಯರ ದನಕರುಗಳನ್ನು ಕದ್ದು ಬೆಳೆಗಳನ್ನು ನಾಶಮಾಡಿದರು. ಅವರಿಂದ ತಪ್ಪಿಸಿಕೊಳ್ಳಲು ಇಸ್ರಾಯೇಲ್ಯರು ಗವಿ ಮತ್ತು ಬೆಟ್ಟಗಳಿಗೆ ಹೋಗಿ ಅಡಗಿಕೊಂಡರು. ‘ಇವರಿಂದ ಕಾಪಾಡಪ್ಪಾ’ ಎಂದು ಯೆಹೋವನನ್ನು ಅಂಗಲಾಚಿದರು. ಆಗ ಯೆಹೋವನು ಒಬ್ಬ ದೇವದೂತನನ್ನು ಗಿದ್ಯೋನನೆಂಬ ಯುವಕನ ಬಳಿ ಕಳುಹಿಸಿದ. ಆ ದೇವದೂತ ಗಿದ್ಯೋನನಿಗೆ ‘ಒಬ್ಬ ಬಲಶಾಲಿ ವೀರ ಸೈನಿಕನನ್ನಾಗಿ ಮಾಡಲು ಯೆಹೋವನು ನಿನ್ನನ್ನು ಆರಿಸಿದ್ದಾನೆ’ ಅಂದನು. ಆಗ ಅವನು ‘ಸಾಮಾನ್ಯ ಮನುಷ್ಯ ನಾನು ಇಸ್ರಾಯೇಲ್ಯರನ್ನು ಹೇಗೆ ರಕ್ಷಿಸಲಿ?’ ಎಂದು ಕೇಳಿದ.
ಯೆಹೋವನು ತನ್ನನ್ನೇ ಆರಿಸಿದ್ದಾನೆಂದು ಗಿದ್ಯೋನನಿಗೆ ಗೊತ್ತಾಯಿತು. ಹೇಗೆ? ಅವನು ಕುರಿ ತುಪ್ಪಟದ ತುಂಡನ್ನು ನೆಲಕ್ಕೆ ಹಾಕಿ ಯೆಹೋವನಿಗೆ ‘ನಾಳೆ ಬೆಳಿಗ್ಗೆ ತುಪ್ಪಟದ ಮೇಲೆ ಮಾತ್ರ ಇಬ್ಬನಿ ಬಿದ್ದು ಸುತ್ತ ನೆಲ ಒಣಗಿದ್ರೆ ನೀನು ಮಾತು ಕೊಟ್ಟ ಹಾಗೇ ಇಸ್ರಾಯೇಲ್ಯರನ್ನ ನನ್ನ ಮೂಲಕ ಕಾಪಾಡ್ತೀಯ ಅಂತ ತಿಳ್ಕೊಳ್ತೀನಿ’ ಅಂದನು. ಮಾರನೇ ದಿನ ಬೆಳಿಗ್ಗೆ ತುಪ್ಪಟ ಮಾತ್ರ ಒದ್ದೆಯಾಗಿ ನೆಲ ಒಣಗಿತ್ತು! ಗಿದ್ಯೋನ ಮತ್ತೊಮ್ಮೆ ‘ನಾಳೆ ಬೆಳಿಗ್ಗೆ ಕುರಿ ತುಪ್ಪಟ ಮಾತ್ರ ಒಣಗಿರಬೇಕು, ಸುತ್ತ ನೆಲ ಇಬ್ಬನಿಯಿಂದ ಒದ್ದೆ ಆಗಿರಬೇಕು’ ಎಂದು ಹೇಳಿದನು. ಅವನು ಹೇಳಿದಂತೆ ಆದಾಗ ಯೆಹೋವನು ತನ್ನನ್ನೇ ಆರಿಸಿದ್ದಾನೆ ಎಂದು ಗಿದ್ಯೋನನಿಗೆ ಮನವರಿಕೆ ಆಯಿತು. ಅವನು ಮಿದ್ಯಾನ್ಯರ ಮೇಲೆ ಯುದ್ಧ ಮಾಡಲು ಸೈನಿಕರನ್ನು ಕೂಡಿಸಿ ಸಜ್ಜಾದನು.
ಯೆಹೋವನು ಗಿದ್ಯೋನನಿಗೆ ‘ನಾನು ಇಸ್ರಾಯೇಲ್ಯರನ್ನು ಗೆಲ್ಲುವಂತೆ ಮಾಡುತ್ತೇನೆ. ಆದರೆ ನಿನ್ನ ಜೊತೆ ತುಂಬ ಸೈನಿಕರಿದ್ದರೆ ನಿಮ್ಮ ಶಕ್ತಿಯಿಂದ ಗೆದ್ವಿ ಅಂತ ನೀವು ನೆನೆಸಬಹುದು. ಹಾಗಾಗಿ ಯುದ್ಧಕ್ಕೆ ಬರಲು ಯಾರಿಗಾದ್ರೂ ಭಯ ಆಗ್ತಿದ್ರೆ ಮನೆಗೆ ಕಳುಹಿಸು’ ಅಂದನು. ಆಗ 22,000 ಸೈನಿಕರು ಮನೆಗೆ ಹೋಗಿ 10,000 ಸೈನಿಕರು ಉಳಿದುಕೊಂಡರು. ಯೆಹೋವನು ‘ಸೈನಿಕರು ಈಗ್ಲೂ ಜಾಸ್ತಿ ಇದ್ದಾರೆ. ಅವರನ್ನು ಹಳ್ಳಕ್ಕೆ ಕರೆದುಕೊಂಡು ಹೋಗಿ ನೀರನ್ನು ಕುಡಿಯಲು ಹೇಳು. ನೀರು ಕುಡಿಯುವಾಗ ಶತ್ರುಗಳು ನಮ್ಮನ್ನು ಆಕ್ರಮಿಸುತ್ತಾರೋ ಅಂತ ಗಮನಿಸಿ ನೀರು ಕುಡಿಯುವವರನ್ನು ಮಾತ್ರ ಆರಿಸಿಕೋ’ ಅಂದನು. 300 ಗಂಡಸರು ಮಾತ್ರ ನೀರು ಕುಡಿಯುವಾಗ ಎಚ್ಚರದಿಂದ ಇದ್ದರು. ಈ ಕೆಲವೇ ಗಂಡಸರು 1,35,000 ಮಿದ್ಯಾನ್ಯ ಸೈನಿಕರನ್ನು ಸೋಲಿಸುವರು ಎಂದು ಯೆಹೋವನು ಮಾತು ಕೊಟ್ಟನು.
ಅವತ್ತು ರಾತ್ರಿ ಯೆಹೋವನು ಗಿದ್ಯೋನನಿಗೆ ‘ಮಿದ್ಯಾನ್ಯರ ಮೇಲೆ ದಾಳಿ ಮಾಡಲು ಇದೇ ಸರಿಯಾದ ಸಮಯ!’ ಅಂದನು. ಗಿದ್ಯೋನನು ತನ್ನ ಸೈನಿಕರಿಗೆ ಕೊಂಬುಗಳನ್ನು ಮತ್ತು ದೊಡ್ಡ ಮಡಿಕೆಗಳನ್ನ ಕೊಟ್ಟು, ಆ ಮಡಿಕೆಗಳಲ್ಲಿ ಪಂಜುಗಳನ್ನ ಇಟ್ಟು ‘ನಾನು ಮಾಡೋದನ್ನ ಚೆನ್ನಾಗಿ ನೋಡಿ ಅದೇ ತರ ಮಾಡಿ’ ಅಂದ. ಗಿದ್ಯೋನ ತನ್ನ ಕೊಂಬನ್ನು ಊದಿ, ಮಡಿಕೆಯನ್ನು ಒಡೆದು ಬೆಂಕಿಯ ಪಂಜನ್ನು ಮೇಲಕ್ಕೆ ಎತ್ತಿ ‘ಯೆಹೋವನ ಕತ್ತಿ, ಗಿದ್ಯೋನನ ಕತ್ತಿ!’ ಎಂದು ಜೋರಾಗಿ ಕೂಗಿದ. 300 ಗಂಡಸರು ಕೂಡ ಅದನ್ನೇ ಮಾಡಿದರು. ಆಗ ಮಿದ್ಯಾನ್ಯರು ಭಯದಿಂದ ಚಲ್ಲಾಪಿಲ್ಲಿಯಾಗಿ ಓಡಿಹೋದರು. ಗಲಿಬಿಲಿಗೊಂಡ ಮಿದ್ಯಾನ್ಯರು ಒಬ್ಬರನ್ನೊಬ್ಬರು ಕೊಂದುಹಾಕಿದರು. ಹೀಗೆ ಮತ್ತೊಮ್ಮೆ ತಮ್ಮ ಶತ್ರುಗಳನ್ನು ಸೋಲಿಸಲು ಇಸ್ರಾಯೇಲ್ಯರಿಗೆ ಯೆಹೋವನು ಸಹಾಯ ಮಾಡಿದನು.
“ಮನುಷ್ಯನಿಗೆ ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ ನಾವು ಪಡ್ಕೊಂಡಿದ್ದೀವಿ. ಆ ಶಕ್ತಿ ನಮ್ಮದಲ್ಲ, ದೇವರು ಕೊಟ್ಟಿದ್ದು.”—2 ಕೊರಿಂಥ 4:7