ಪಾಠ 46
ಕರ್ಮೆಲ್ ಬೆಟ್ಟದಲ್ಲಿ ಒಂದು ಪರೀಕ್ಷೆ
ಇಸ್ರಾಯೇಲಿನ ಹತ್ತು ಕುಲಗಳನ್ನು ಆಳಿದ ಅನೇಕ ರಾಜರು ಕೆಟ್ಟವರಾಗಿದ್ದರು. ಅವರಲ್ಲಿ ತುಂಬ ಕೆಟ್ಟವನು ಅಹಾಬ. ಅವನು ಬಾಳನನ್ನು ಆರಾಧಿಸುವ ಒಬ್ಬ ದುಷ್ಟ ಹೆಂಗಸನ್ನು ಮದುವೆಯಾದ. ಅವಳೇ ಈಜೆಬೇಲ. ಅಹಾಬ ಮತ್ತು ಈಜೆಬೇಲಳು ದೇಶದಲ್ಲೆಲ್ಲಾ ಬಾಳನ ಆರಾಧನೆಯನ್ನು ಆರಂಭಿಸಿದರು ಮತ್ತು ಯೆಹೋವನ ಅನೇಕ ಪ್ರವಾದಿಗಳನ್ನು ಕೊಲ್ಲಿಸಿದರು. ಆಗ ಯೆಹೋವನು ಏನು ಮಾಡಿದ? ಒಂದು ಸಂದೇಶವನ್ನು ತಿಳಿಸಲು ಆತನು ಪ್ರವಾದಿಯಾದ ಎಲೀಯನನ್ನು ಅಹಾಬನ ಬಳಿ ಕಳುಹಿಸಿದ.
ಎಲೀಯನು ಅಹಾಬನಿಗೆ ‘ನೀನು ಕೆಟ್ಟ ಕೆಲಸಗಳನ್ನು ಮಾಡಿದ್ದರಿಂದ ಇಸ್ರಾಯೇಲಿನಲ್ಲಿ ಮಳೆಯಾಗುವುದಿಲ್ಲ’ ಅಂದನು. ಮುಂದಿನ ಮೂರು ವರ್ಷಕ್ಕಿಂತ ಹೆಚ್ಚು ಸಮಯ ಮಳೆ ಬೆಳೆ ಆಗಲಿಲ್ಲ. ಇದರಿಂದ ಜನರಿಗೆ ಹೊಟ್ಟೆಗಿಲ್ಲದಂತಾಯಿತು. ನಂತರ ಯೆಹೋವನು ಎಲೀಯನನ್ನು ಅಹಾಬನ ಹತ್ತಿರ ಕಳುಹಿಸಿದ. ಅಹಾಬ ಎಲೀಯನಿಗೆ ‘ಕಷ್ಟ ತಂದವನೇ! ಇದಕ್ಕೆಲ್ಲಾ ನೀನೇ ಕಾರಣ’ ಅಂದನು. ಅದಕ್ಕೆ ಎಲೀಯ ‘ಬರಗಾಲಕ್ಕೆ ಕಾರಣ ನಾನಲ್ಲ, ಬಾಳನನ್ನು ಆರಾಧಿಸುತ್ತಿರುವ ನೀನೇ. ಸತ್ಯ ದೇವರು ಯಾರೆಂದು ತಿಳಿಯಲು ನಾವೊಂದು ಪರೀಕ್ಷೆ ಮಾಡೋಣ. ಜನರನ್ನು ಹಾಗೂ ಬಾಳನ ಪ್ರವಾದಿಗಳನ್ನೂ ಕರ್ಮೆಲ್ ಬೆಟ್ಟಕ್ಕೆ ಬರಲು ಹೇಳು’ ಅಂದನು.
ಜನರೆಲ್ಲರೂ ಬೆಟ್ಟಕ್ಕೆ ಬಂದರು. ಆಗ ಎಲೀಯ ‘ಮನಸ್ಸಿನಲ್ಲಿ ತೀರ್ಮಾನ ಮಾಡಿಕೊಳ್ಳಿ. ಯೆಹೋವನು ಸತ್ಯ ದೇವರಾಗಿದ್ರೆ ಆತನ ಮಾತು ಕೇಳಿ, ಬಾಳ ಸತ್ಯ ದೇವರಾಗಿದ್ರೆ ಅವನ ಹಿಂದೆ ಹೋಗಿ. ನಾನೊಂದು ಸವಾಲನ್ನು ನಿಮ್ಮ ಮುಂದಿಡುತ್ತಿದ್ದೇನೆ. ಬಾಳನ 450 ಪ್ರವಾದಿಗಳು ಬಲಿಯನ್ನು ಸಿದ್ಧಮಾಡಿ ಬಾಳನಿಗೆ ಕೂಗಲಿ. ನಾನೂ ಬಲಿಯನ್ನು ಸಿದ್ಧಪಡಿಸಿ ಯೆಹೋವನಿಗೆ ಕೂಗ್ತೀನಿ. ಯಾವ ದೇವರು ಬೆಂಕಿ ಕಳಿಸಿ ಉತ್ತರ ಕೊಡ್ತಾನೋ ಆತನೇ ಸತ್ಯ ದೇವರು’ ಅಂದನು. ಇದಕ್ಕೆ ಜನ ಒಪ್ಪಿದರು.
ಬಾಳನ ಪ್ರವಾದಿಗಳು ಬಲಿಯನ್ನು ಸಿದ್ಧಮಾಡಿದರು. ನಂತರ ‘ಬಾಳನೇ, ನಮಗೆ ಉತ್ರ ಕೊಡು!’ ಎಂದು ಇಡೀ ದಿನ ಕೂಗಿದರು. ಆದರೆ ಅವರ ಪ್ರಾರ್ಥನೆಗೆ ಬಾಳ ಉತ್ತರ ಕೊಡಲಿಲ್ಲ. ಆಗ ಎಲೀಯ ಅವರನ್ನು ಅಣಕಿಸ್ತಾ ‘ಇನ್ನೂ ಸ್ವಲ್ಪ ಗಟ್ಟಿಯಾಗಿ ಕೂಗಿ. ಅವನು ನಿದ್ದೆ ಮಾಡ್ತಿರಬೇಕು, ಯಾರಾದ್ರೂ ಅವನನ್ನ ಎಬ್ಬಿಸಬೇಕೋ ಏನೋ’ ಅಂದ. ಸಂಜೆ ಆಯಿತು, ಬಾಳನ ಪ್ರವಾದಿಗಳು ಇನ್ನೂ ಪ್ರಾರ್ಥಿಸುತ್ತಲೇ ಇದ್ದರು. ಆದರೆ ಬಾಳನಿಂದ ಯಾವುದೇ ಉತ್ತರ ಬರಲಿಲ್ಲ.
ಎಲೀಯ ತನ್ನ ಬಲಿಯನ್ನು ವೇದಿಯ ಮೇಲಿಟ್ಟು ಅದರ ಸುತ್ತಲು ನೀರನ್ನು ಸುರಿದನು. ನಂತರ ‘ಯೆಹೋವನೇ, ನೀನೇ ಸತ್ಯ ದೇವರು ಅಂತ ಈ ಜನರಿಗೆ ಗೊತ್ತಾಗೋ ತರ ಮಾಡು’ ಎಂದು ಪ್ರಾರ್ಥಿಸಿದನು. ತಕ್ಷಣ ಯೆಹೋವನು ಬೆಂಕಿಯನ್ನು ಕಳುಹಿಸಿ ಬಲಿಯನ್ನು ದಹಿಸುವಂತೆ ಮಾಡಿದನು. ಆಗ ಜನರೆಲ್ಲರು ‘ಯೆಹೋವನೇ ಸತ್ಯ ದೇವರು!’ ಎಂದು ಕೂಗಿದರು. ನಂತರ ಎಲೀಯ ‘ಬಾಳನ ಪ್ರವಾದಿಗಳನ್ನ ಹಿಡೀರಿ. ಅವ್ರಲ್ಲಿ ಒಬ್ಬನೂ ಉಳಿಬಾರದು’ ಅಂದನು. ಆ ದಿನ ಬಾಳನ 450 ಪ್ರವಾದಿಗಳನ್ನು ಕೊಲ್ಲಲಾಯಿತು.
ನಂತರ ಸಮುದ್ರದ ಕಡೆಯಿಂದ ಚಿಕ್ಕ ಮೋಡವೊಂದು ಬರುತ್ತಿರುವುದನ್ನು ನೋಡಿದಾಗ ಎಲೀಯನು ಅಹಾಬನಿಗೆ ‘ತುಂಬ ಮಳೆ ಬರಲಿದೆ. ರಥವನ್ನು ಹತ್ತಿ ಮನೆಗೆ ಹೋಗು’ ಅಂದನು. ಸ್ವಲ್ಪ ಸಮಯದಲ್ಲೇ ಆಕಾಶವು ಕಪ್ಪು ಮೋಡಗಳಿಂದ ತುಂಬಿತು. ಜೋರಾಗಿ ಗಾಳಿ ಬೀಸಿ ಭಯಂಕರ ಮಳೆ ಶುರು ಆಯಿತು. ಕೊನೆಗೂ ಬರಗಾಲಕ್ಕೆ ಪರದೆ ಬಿತ್ತು. ಅಹಾಬ ರಥವನ್ನು ವೇಗವಾಗಿ ಓಡಿಸುತ್ತಿದ್ದ. ಆದರೆ ಎಲೀಯ ಯೆಹೋವನ ಸಹಾಯದಿಂದ ರಥಕ್ಕಿಂತಲೂ ವೇಗವಾಗಿ ಓಡುತ್ತಿದ್ದ! ಎಲೀಯನ ಸಮಸ್ಯೆ ಇಲ್ಲಿಗೆ ಮುಗೀತಾ? ನೋಡೋಣ.
“ಯೆಹೋವ ಅನ್ನೋ ಹೆಸ್ರಿರೋ ನೀನೊಬ್ಬನೇ ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು ಅಂತ ಎಲ್ರಿಗೂ ಗೊತ್ತಾಗಲಿ.”—ಕೀರ್ತನೆ 83:18