ಪಾಠ 47
ಯೆಹೋವನು ಎಲೀಯನನ್ನು ಬಲಪಡಿಸಿದ
ಬಾಳನ ಪ್ರವಾದಿಗಳೆಲ್ಲರೂ ಕೊಲ್ಲಲ್ಪಟ್ಟರು ಎನ್ನುವ ಸುದ್ದಿ ಈಜೆಬೇಲಳಿಗೆ ಗೊತ್ತಾದಾಗ ಅವಳಿಗೆ ತುಂಬಾ ಕೋಪ ಬಂತು. ಅವಳು ಎಲೀಯನಿಗೆ ‘ಬಾಳನ ಪ್ರವಾದಿಗಳಿಗೆ ಆದ ಗತಿ ನಾಳೆ ನಿನಗೂ ಆಗುವುದು’ ಎಂಬ ಸಂದೇಶ ಕಳುಹಿಸಿದಳು. ಈ ವಿಷಯ ಕೇಳಿ ಎಲೀಯನಿಗೆ ತುಂಬಾ ಭಯವಾಯಿತು. ಅವನು ಕಾಡಿಗೆ ಓಡಿ ಹೋದ. ನಂತರ ‘ಯೆಹೋವನೇ, ನನಗೆ ಸಾಕಾಯ್ತು. ನನ್ನ ಜೀವ ತೆಗೆದುಬಿಡು’ ಎಂದು ಬೇಡಿದ. ಎಲೀಯನಿಗೆ ಸುಸ್ತಾಗಿದ್ದರಿಂದ ಒಂದು ಪೊದೆಯ ಕೆಳಗೆ ನಿದ್ರೆಗೆ ಜಾರಿದ.
ಆಗ ದೇವದೂತನೊಬ್ಬ ಅವನನ್ನು ಎಬ್ಬಿಸಿ ‘ಎದ್ದು ಊಟಮಾಡು’ ಅಂದ. ಎಲೀಯ ಎದ್ದು ನೋಡಿದಾಗ ಬಿಸಿಯಾಗಿದ್ದ ಕಲ್ಲುಗಳ ಮೇಲೆ ಒಂದು ರೊಟ್ಟಿ ಮತ್ತು ತಂಬಿಗೆ ನೀರಿತ್ತು. ಅವನು ಊಟ ಮಾಡಿ ಮತ್ತೆ ನಿದ್ರೆಗೆ ಜಾರಿದ. ದೇವದೂತ ಮತ್ತೆ ಅವನನ್ನು ಎಬ್ಬಿಸಿ ‘ಊಟಮಾಡು, ನೀನು ತುಂಬ ಪ್ರಯಾಣ ಮಾಡಬೇಕಿದೆ’ ಅಂದ. ಎಲೀಯ ಎದ್ದು ಊಟ ಮಾಡಿದ. ಆಮೇಲೆ ಅವನು 40 ದಿನ ಹಗಲೂರಾತ್ರಿ ಹೋರೇಬ್ ಬೆಟ್ಟ ಮುಟ್ಟುವವರೆಗೆ ಪ್ರಯಾಣ ಮಾಡಿದ. ಅಲ್ಲಿಗೆ ತಲುಪಿದ ಮೇಲೆ ನಿದ್ರೆ ಮಾಡಲು ಒಂದು ಗುಹೆಯೊಳಗೆ ಹೋದ. ಆಗ ಯೆಹೋವನು ಅವನಿಗೆ ‘ಎಲೀಯ, ಇಲ್ಲೇನು ಮಾಡ್ತಿದ್ದೀಯ?’ ಎಂದು ಕೇಳಿದನು. ಆಗ ಎಲೀಯ ‘ಇಸ್ರಾಯೇಲ್ಯರು ನಿನಗೆ ಕೊಟ್ಟ ಮಾತನ್ನು ಮುರಿದಿದ್ದಾರೆ. ಯಜ್ಞವೇದಿಯನ್ನು ಹಾಳುಮಾಡಿ ಪ್ರವಾದಿಗಳನ್ನು ಕೊಂದಿದ್ದಾರೆ. ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ’ ಅಂದ.
ಆಗ ಯೆಹೋವನು ಅವನಿಗೆ ‘ಹೊರಗೆ ಹೋಗಿ ನಿಂತ್ಕೋ’ ಅಂದನು. ಮೊದಲು ಬಲವಾದ ಬಿರುಗಾಳಿ ಅವನಿದ್ದ ಗುಹೆಯನ್ನು ಹಾದು ಹೋಯಿತು. ಆಮೇಲೆ ಭೂಕಂಪವಾಯಿತು. ತರುವಾಯ ಬೆಂಕಿ ಬಂತು. ಕೊನೆಗೆ ಪ್ರಶಾಂತವಾದ ಚಿಕ್ಕ ಧ್ವನಿಯನ್ನ ಎಲೀಯ ಕೇಳಿಸಿಕೊಂಡ. ಅವನು ಬಟ್ಟೆಯಿಂದ ತನ್ನ ಮುಖವನ್ನು ಮುಚ್ಚಿಕೊಂಡು ಗುಹೆಯ ಹೊರಗೆ ನಿಂತ. ಯೆಹೋವನು ಮತ್ತೊಮ್ಮೆ ಅವನನ್ನು ‘ನೀನು ಯಾಕೆ ಓಡಿ ಬಂದಿದ್ದೀಯಾ?’ ಎಂದು ಕೇಳಿದ. ಆಗ ಎಲೀಯ ‘ಜೀವಂತವಾಗಿ ಇರುವವನು ನಾನೊಬ್ಬನೇ’ ಅಂದ. ಆಗ ಯೆಹೋವನು ‘ನೀನೊಬ್ಬನೇ ಅಲ್ಲ, ನನ್ನನ್ನು ಆರಾಧಿಸುವ ಇನ್ನೂ 7,000 ಜನ ಇಸ್ರಾಯೇಲಿನಲ್ಲಿ ಇದ್ದಾರೆ. ನೀನು ಎದ್ದು ಪಟ್ಟಣಕ್ಕೆ ಹೋಗಿ ಎಲೀಷನನ್ನು ಪ್ರವಾದಿಯಾಗಿ ನೇಮಿಸು’ ಅಂದನು. ತಕ್ಷಣ ಎಲೀಯ ಯೆಹೋವನು ಹೇಳಿದಂತೆ ಮಾಡಲು ಹೋದನು. ಯೆಹೋವನ ಮಾತು ಕೇಳಿದರೆ ಆತನು ನಿಮಗೂ ಸಹಾಯ ಮಾಡುತ್ತಾನಾ? ಖಂಡಿತ ಮಾಡುತ್ತಾನೆ. ಬರಗಾಲದ ಸಮಯದಲ್ಲಿ ನಡೆದ ಮತ್ತೊಂದು ಘಟನೆಯನ್ನು ಈಗ ನೋಡೋಣ.
“ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ. ಅದ್ರ ಬದ್ಲು ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ.”—ಫಿಲಿಪ್ಪಿ 4:6