ಪಾಠ 53
ಧೀರ ಯೆಹೋಯಾದ
ಈಜೆಬೇಲಳಿಗೆ ಅತಲ್ಯಳೆಂಬ ಮಗಳಿದ್ದಳು. ಅವಳೂ ತನ್ನ ತಾಯಿಯಂತೆ ತುಂಬಾ ದುಷ್ಟಳಾಗಿದ್ದಳು. ಅತಲ್ಯಳು ಯೆಹೂದದ ರಾಜನನ್ನು ಮದುವೆಯಾದಳು. ಅವನು ತೀರಿಹೋದಾಗ ಅವನ ಮಗ ರಾಜನಾದ. ಅವನೂ ಸತ್ತಾಗ ಯೆಹೂದದ ರಾಜ್ಯಭಾರವನ್ನು ಅತಲ್ಯಳು ತನ್ನ ಕೈಗೆತ್ತಿಕೊಂಡಳು. ಅವಳು ಎಷ್ಟು ಕೆಟ್ಟವಳಾಗಿದ್ದಳು ಅಂದರೆ ಇಡೀ ರಾಜವಂಶವನ್ನೇ ನಾಶ ಮಾಡಲು ಪ್ರಯತ್ನಿಸಿದಳು. ಅವಳ ಬದಲಿಗೆ ಯಾರಿಗೆಲ್ಲಾ ರಾಜರಾಗಲು ಹಕ್ಕಿತ್ತೋ ಅವರೆಲ್ಲರನ್ನು ಕೊಲ್ಲಿಸಿದಳು. ತನ್ನ ಸ್ವಂತ ಮೊಮ್ಮಕ್ಕಳನ್ನು ಕೂಡ ಬಿಡಲಿಲ್ಲ. ಹಾಗಾಗಿ ಅವಳನ್ನು ಕಂಡರೆ ಎಲ್ಲರೂ ಹೆದರುತ್ತಿದ್ದರು.
ಮಹಾ ಪುರೋಹಿತ ಯೆಹೋಯಾದ ಮತ್ತು ಅವನ ಹೆಂಡತಿ ಯೆಹೋಷೆಬಗೆ ಅತಲ್ಯಳು ಮಾಡುತ್ತಿದ್ದ ಕೆಟ್ಟ ಕೆಲಸಗಳ ಬಗ್ಗೆ ಗೊತ್ತಿತ್ತು. ಅವರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಅತಲ್ಯಳ ಮೊಮ್ಮಗ ಯೆಹೋವಾಷನನ್ನು ಬಚ್ಚಿಟ್ಟು ಸಾಕಿದರು. ಅವನು ದೇವಾಲಯದಲ್ಲಿ ಬೆಳೆದ.
ಯೆಹೋವಾಷ ಏಳು ವರ್ಷದವನಾದಾಗ ಯೆಹೋಯಾದ ಎಲ್ಲಾ ಅಧಿಕಾರಿಗಳನ್ನು ಮತ್ತು ಪುರೋಹಿತರನ್ನು ಕರೆಸಿ ‘ದೇವಾಲಯದ ಬಾಗಿಲನ್ನು ಕಾಯಿರಿ. ಯಾರನ್ನೂ ಒಳಗೆ ಬಿಡಬೇಡಿ’ ಎಂದು ಹೇಳಿದ. ಆಮೇಲೆ ಅವನು ಯೆಹೋವಾಷನ ತಲೆಯ ಮೇಲೆ ಕಿರೀಟವನ್ನಿಟ್ಟು ಯೆಹೂದದ ರಾಜನಾಗಿ ಅಭಿಷೇಕ ಮಾಡಿದ. ಆಗ ಜನರೆಲ್ಲರೂ ‘ರಾಜ ಚಿರಂಜೀವಿ ಆಗಿರಲಿ!’ ಎಂದು ಕೂಗಿದರು.
ಜನರ ಶಬ್ದ ಅತಲ್ಯಳಿಗೆ ಕೇಳಿಸಿತು. ಅವಳು ದೇವಾಲಯಕ್ಕೆ ಓಡಿಬಂದಳು. ಅವಳು ಹೊಸ ರಾಜನನ್ನು ಕಂಡಾಗ ‘ದ್ರೋಹ! ದ್ರೋಹ!’ ಎಂದು ಕಿರಿಚಿದಳು. ಅಧಿಕಾರಿಗಳು ಆ ದುಷ್ಟ ರಾಣಿಯನ್ನು ಹಿಡಿದು ಹೊರಗೆ ಕರೆದುಕೊಂಡು ಹೋಗಿ ಕೊಂದರು. ಅವಳು ಜನರ ಮೇಲೆ ಕೆಟ್ಟ ಪ್ರಭಾವ ಬೀರಿದ್ದಳು. ಇದು ಹೇಗೆ ಸರಿಯಾಯಿತು ಗೊತ್ತಾ?
ಜನರು ಯೆಹೋವನೊಬ್ಬನನ್ನೇ ಆರಾಧಿಸುತ್ತೇವೆಂದು ಮಾತುಕೊಟ್ಟು ಆತನೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಲು ಯೆಹೋಯಾದ ಸಹಾಯ ಮಾಡಿದ. ಅಲ್ಲದೇ ಬಾಳನ ದೇವಾಲಯವನ್ನು ಕೆಡವಿ ಎಲ್ಲಾ ಮೂರ್ತಿಗಳನ್ನು ಪುಡಿ-ಪುಡಿ ಮಾಡಿದ. ದೇವಾಲಯದಲ್ಲಿ ಕೆಲಸ ಮಾಡಲು ಪುರೋಹಿತರನ್ನು ಮತ್ತು ಲೇವಿಯರನ್ನು ನೇಮಿಸಿದ. ಇದರಿಂದ ಜನರು ದೇವಾಲಯದಲ್ಲಿ ಪುನಃ ಆರಾಧನೆ ಮಾಡಲು ಶುರು ಮಾಡಿದರು. ದೇವಾಲಯದ ಬಾಗಿಲು ಕಾಯಲು ಜನರನ್ನು ನೇಮಿಸಿ ಯಾವ ಅಶುದ್ಧನೂ ದೇವಾಲಯದೊಳಗೆ ಬರದಂತೆ ನೋಡಿಕೊಳ್ಳಲು ಹೇಳಿದ. ಯೆಹೋಯಾದ ಮತ್ತು ಅಧಿಕಾರಿಗಳು ಯೆಹೋವಾಷನನ್ನು ಅರಮನೆಗೆ ಕರೆದುಕೊಂಡು ಹೋಗಿ ಸಿಂಹಾಸನದಲ್ಲಿ ಕೂರಿಸಿದರು. ಯೆಹೂದದ ಜನರೆಲ್ಲರೂ ಸಂತೋಷಪಟ್ಟರು. ಕೊನೆಗೂ ದುಷ್ಟ ಅತಲ್ಯ ಮತ್ತು ಬಾಳನ ಆರಾಧನೆಯಿಂದ ಜನರು ಬಿಡುಗಡೆ ಪಡೆದು ಈಗ ಯೆಹೋವನನ್ನು ಆರಾಧಿಸಬಹುದಿತ್ತು. ಯೆಹೋಯಾದನ ಧೈರ್ಯ ಅನೇಕರಿಗೆ ಎಷ್ಟು ಸಹಾಯ ಮಾಡಿತಲ್ವಾ?
“ಹೆದರಬೇಡಿ. ಯಾಕಂದ್ರೆ ನೀವು ಭವಿಷ್ಯದಲ್ಲಿ ಮತ್ತೆ ಬದುಕೋದನ್ನ ತಡಿಯೋಕೆ ಅವ್ರಿಂದ ಆಗಲ್ಲ. ಅವ್ರಿಗೆ ಹೆದರೋ ಬದಲು ನಿಮ್ಮನ್ನ ಸಂಪೂರ್ಣವಾಗಿ ನಾಶ ಮಾಡೋ ಶಕ್ತಿ ಇರುವವನಿಗೆ ಹೆದ್ರಿ.”—ಮತ್ತಾಯ 10:28