ಪಾಠ 59
ಯೆಹೋವನಿಗೆ ವಿಧೇಯರಾದ ನಾಲ್ಕು ಹುಡುಗರು
ಯೆಹೂದದ ರಾಜವಂಶಕ್ಕೆ ಸೇರಿದವರನ್ನ ನೆಬೂಕದ್ನೆಚ್ಚರನು ಬಾಬೆಲಿಗೆ ಕೈದಿಯಾಗಿ ಹಿಡಿದುಕೊಂಡು ಹೋದನು. ಅವರನ್ನು ನೋಡಿಕೊಳ್ಳಲು ಆಸ್ಥಾನ ಅಧಿಕಾರಿಯಾದ ಅಶ್ಪೆನಜಗೆ ನೇಮಿಸಿದನು. ಕೈದಿಯಾಗಿ ಹಿಡಿದುಕೊಂಡು ಬಂದವರಲ್ಲಿ ತುಂಬಾ ಆರೋಗ್ಯವಂತರಾಗಿರುವ ಮತ್ತು ಚುರುಕಾಗಿರುವ ಹುಡುಗರನ್ನು ಆರಿಸುವಂತೆ ನೆಬೂಕದ್ನೆಚ್ಚರನು ಅಶ್ಪೆನಜನಿಗೆ ಹೇಳಿದನು. ಈ ಹುಡುಗರಿಗೆ ಮೂರು ವರ್ಷಗಳ ಕಾಲ ತರಬೇತಿ ನೀಡಲಾಗುತ್ತಿತ್ತು. ಈ ತರಬೇತಿಯಿಂದ ಅವರು ಬಾಬೆಲಿನ ಆಸ್ಥಾನದ ಮುಖ್ಯ ಅಧಿಕಾರಿಗಳಾಗುವ ಅವಕಾಶವಿತ್ತು. ಈ ಹುಡುಗರು ಬಾಬೆಲಿನ ಆಕಾಡ್ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತಾಡಲು ಕಲಿಯಬೇಕಿತ್ತು. ಅಷ್ಟೇ ಅಲ್ಲ, ರಾಜ ಮತ್ತು ಅವನ ಅರಮನೆಯಲ್ಲಿರುವವರು ತಿನ್ನುವ ಆಹಾರವನ್ನೇ ತಿನ್ನಬೇಕಿತ್ತು. ಈ ತರಬೇತಿಗೆ ದಾನಿಯೇಲ, ಹನನ್ಯ, ಮೀಷಾಯೇಲ ಮತ್ತು ಅಜರ್ಯನನ್ನು ಕೂಡ ಆರಿಸಲಾಯಿತು. ಅಶ್ಪೆನಜ ಇವರ ಹೆಸರುಗಳನ್ನು ಬದಲಿಸಿ ಬೇಲ್ತೆಶಚ್ಚರ್, ಶದ್ರಕ್, ಮೇಶಕ್, ಅಬೇದ್ನೆಗೋ ಎಂಬ ಬಾಬಿಲೋನ್ಯ ಹೆಸರುಗಳನ್ನಿಟ್ಟನು. ತಮಗೆ ಸಿಕ್ಕಿದ ವಿದ್ಯಾಭ್ಯಾಸದಿಂದ ಅವರು ಯೆಹೋವನನ್ನು ಆರಾಧಿಸುವುದನ್ನು ನಿಲ್ಲಿಸಿಬಿಟ್ಟರಾ?
ಈ ನಾಲ್ಕು ಜನ ಹುಡುಗರು ಯೆಹೋವನ ಮಾತನ್ನು ಕೇಳಬೇಕೆಂದು ದೃಢತೀರ್ಮಾನ ಮಾಡಿದ್ದರು. ರಾಜನು ಹೇಳಿದ ಊಟದಲ್ಲಿ ಯೆಹೋವನು ನಿಯಮ ಪುಸ್ತಕದಲ್ಲಿ ತಿನ್ನಬಾರದೆಂದು ಹೇಳಿದ ಕೆಲವು ಆಹಾರ ಇತ್ತು. ಆದ್ದರಿಂದ ಅವರು ಅಶ್ಪೆನಜನಿಗೆ ‘ರಾಜನು ಹೇಳಿದ ಊಟವನ್ನು ದಯವಿಟ್ಟು ನಮಗೆ ಕೊಡಬೇಡ’ ಅಂದರು. ಅದಕ್ಕೆ ಅಶ್ಪೆನಜ, ‘ನೀವು ತಿನ್ನದೆ ಸೊರಗಿ ಹೋಗಿರೋದನ್ನ ರಾಜ ನೋಡಿದ್ರೆ ನನ್ನನ್ನು ಕೊಂದೇಬಿಡುತ್ತಾನೆ!’ ಅಂದನು.
ಆಗ ದಾನಿಯೇಲನಿಗೆ ಒಂದು ಉಪಾಯ ಹೊಳೆಯಿತು. ಅವನು ಆ ಅಧಿಕಾರಿಗೆ ‘ದಯವಿಟ್ಟು ನಮಗೆ ಹತ್ತು ದಿನಗಳವರೆಗೆ ತರಕಾರಿ ಮತ್ತು ನೀರನ್ನು ಕೊಡು. ಆಮೇಲೆ ರಾಜನು ಹೇಳಿದ ಊಟ ತಿನ್ನೋ ಬೇರೆ ಯುವಕರ ಜೊತೆ ನಮ್ಮನ್ನ ಹೋಲಿಸಿ ನೋಡು’ ಅಂದನು. ಅದಕ್ಕೆ ಆ ಅಧಿಕಾರಿ ಒಪ್ಪಿಕೊಂಡನು.
ಹತ್ತು ದಿನಗಳಾದ ನಂತರ, ದಾನಿಯೇಲ ಮತ್ತವನ ಗೆಳೆಯರು ಬೇರೆ ಎಲ್ಲಾ ಹುಡುಗರಿಗಿಂತ ಆರೋಗ್ಯವಂತರಾಗಿ ಕಂಡರು. ಅವರು ತನ್ನ ಮಾತನ್ನು ಕೇಳಿದ್ದರಿಂದ ಯೆಹೋವನಿಗೆ ತುಂಬಾ ಸಂತೋಷವಾಯಿತು. ದೇವರು ದಾನಿಯೇಲನಿಗೆ ಅಪಾರ ವಿವೇಕ ಕೊಟ್ಟು, ದರ್ಶನ ಮತ್ತು ಕನಸಿನ ಅರ್ಥಗಳನ್ನು ತಿಳಿದುಕೊಳ್ಳುವ ಶಕ್ತಿಯನ್ನೂ ನೀಡಿದನು.
ತರಬೇತಿಯು ಮುಗಿದ ನಂತರ, ಅಶ್ಪೆನಜ ಎಲ್ಲಾ ಹುಡುಗರನ್ನು ರಾಜ ನೆಬೂಕದ್ನೆಚ್ಚರನ ಮುಂದೆ ಕರೆದುಕೊಂಡು ಬಂದನು. ರಾಜನು ಅವರೊಟ್ಟಿಗೆ ಮಾತಾಡಿದನು. ಬೇರೆಲ್ಲರಿಗಿಂತ ದಾನಿಯೇಲ, ಹನನ್ಯ, ಮೀಷಾಯೇಲ, ಅಜರ್ಯ ತುಂಬಾ ಬುದ್ಧಿವಂತರು ಮತ್ತು ಚುರುಕಾಗಿದ್ದರು ಎಂದು ರಾಜನು ಗಮನಿಸಿದನು. ರಾಜ ಈ ನಾಲ್ವರನ್ನು ತನ್ನ ಆಸ್ಥಾನದಲ್ಲಿ ಸೇವೆ ಮಾಡಲು ಆರಿಸಿದನು. ರಾಜನು ತುಂಬಾ ಪ್ರಾಮುಖ್ಯವಾದ ವಿಚಾರಗಳ ಬಗ್ಗೆ ಇವರ ಬಳಿ ಆಗಾಗ್ಗೆ ಸಲಹೆಗಳನ್ನು ಕೇಳುತ್ತಿದ್ದನು. ಯೆಹೋವನು ಈ ಯುವಕರನ್ನು ರಾಜನ ಆಸ್ಥಾನದಲ್ಲಿದ್ದ ಎಲ್ಲಾ ಮಂತ್ರವಾದಿಗಳಿಗಿಂತ ಮತ್ತು ಬುದ್ಧಿವಂತರಿಗಿಂತ ಹೆಚ್ಚು ಬುದ್ಧಿವಂತರನ್ನಾಗಿ ಮಾಡಿದನು.
ದಾನಿಯೇಲ, ಹನನ್ಯ, ಮೀಷಾಯೇಲ ಮತ್ತು ಅಜರ್ಯ ದೂರದ ಊರಲ್ಲಿದ್ದರೂ ತಾವು ಯೆಹೋವನ ಜನರು ಎನ್ನುವುದನ್ನು ಮರೆಯಲಿಲ್ಲ. ಮಕ್ಕಳೇ, ನೀವು ಕೂಡ ಅವರಂತೆ ನಿಮ್ಮ ಅಪ್ಪ-ಅಮ್ಮ ನಿಮ್ಮ ಜೊತೆ ಇಲ್ಲದೇ ಇರುವಾಗಲೂ ಯೆಹೋವನಿಗೆ ವಿಧೇಯತೆ ತೋರಿಸುವುದನ್ನು ಮರೆಯಲ್ಲ ತಾನೇ?
“ನೀನು ಇನ್ನೂ ಚಿಕ್ಕವನು ಅಂತ ಯಾರೂ ನಿನ್ನನ್ನ ಕೀಳಾಗಿ ಕಾಣದೇ ಇರೋ ಹಾಗೆ ನೋಡ್ಕೊ. ನಿನ್ನ ಮಾತು, ನಡತೆ, ಪ್ರೀತಿ, ನಂಬಿಕೆ, ನೈತಿಕ ಶುದ್ಧತೆಯಲ್ಲಿ ನಂಬಿಗಸ್ತರಿಗೆ ಮಾದರಿಯಾಗಿರು.”—1 ತಿಮೊತಿ 4:12