ಪಾಠ 61
ಅವರು ಅಡ್ಡಬೀಳಲಿಲ್ಲ
ನೆಬೂಕದ್ನೆಚ್ಚರನಿಗೆ ಮೂರ್ತಿಯ ಕನಸು ಬಿದ್ದು ಸ್ವಲ್ಪ ಸಮಯದ ನಂತರ ಅವನು ಒಂದು ದೊಡ್ಡ ಚಿನ್ನದ ಮೂರ್ತಿಯನ್ನು ಮಾಡಿದನು. ಅದನ್ನು ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿ ತನ್ನ ರಾಜ್ಯದಲ್ಲಿರುವ ಪ್ರಮುಖ ಅಧಿಕಾರಿಗಳನ್ನು ಅದರ ಮುಂದೆ ಕೂಡಿ ಬರುವಂತೆ ಹೇಳಿದನು. ಅವರಲ್ಲಿ ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಸಹ ಇದ್ದರು. ‘ನೀವು ತುತೂರಿ, ತಂತಿವಾದ್ಯ ಮತ್ತು ವಾಲಗದ ಧ್ವನಿ ಕೇಳಿದ ಕೂಡಲೇ ಈ ಮೂರ್ತಿಗೆ ಅಡ್ಡಬೀಳಬೇಕು. ಯಾರು ಅದಕ್ಕೆ ಅಡ್ಡಬೀಳುವುದಿಲ್ಲವೋ ಅವರನ್ನು ಹೊತ್ತಿ ಉರಿಯೋ ದೊಡ್ಡ ಕುಲುಮೆಗೆ ಹಾಕಲಾಗುತ್ತೆ’ ಎಂದು ರಾಜ ಆಜ್ಞಾಪಿಸಿದನು. ಆ ಮೂವರು ಇಬ್ರಿಯರು ಮೂರ್ತಿಗೆ ಅಡ್ಡಬಿದ್ದರಾ ಅಥವಾ ಯೆಹೋವನನ್ನು ಮಾತ್ರ ಆರಾಧಿಸಿದರಾ? ನೋಡೋಣ.
ನಂತರ, ಸಂಗೀತವನ್ನು ನುಡಿಸುವಂತೆ ರಾಜ ಆಜ್ಞಾಪಿಸಿದನು. ಆಗ ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋರನ್ನು ಬಿಟ್ಟು ಬೇರೆಲ್ಲರೂ ಅಡ್ಡಬಿದ್ದು ಆ ಮೂರ್ತಿಯನ್ನು ಪೂಜಿಸಿದರು. ಇದನ್ನು ನೋಡಿದ ಕೆಲವರು ರಾಜನ ಹತ್ತಿರ ಹೋಗಿ, ‘ಆ ಇಬ್ರಿಯರು ನೀನು ಮಾಡಿದ ಮೂರ್ತಿಯನ್ನ ಆರಾಧಿಸೋಕೆ ನಿರಾಕರಿಸಿದ್ದಾರೆ’ ಎಂದು ದೂರಿದರು. ಆಗ ನೆಬೂಕದ್ನೆಚ್ಚರನು ಅವರನ್ನು ಕರೆಸಿ, ‘ಆ ಮೂರ್ತಿಯನ್ನು ಆರಾಧಿಸಲು ನಾನು ನಿಮಗೆ ಇನ್ನೊಂದು ಅವಕಾಶ ಕೊಡುತ್ತೇನೆ. ಆಗಲೂ ನೀವು ಆರಾಧಿಸದಿದ್ರೆ ಉರಿಯೋ ಕುಲುಮೆಗೆ ಹಾಕಿಬಿಡ್ತೀನಿ. ಯಾವ ದೇವರಿಗೂ ನಿಮ್ಮನ್ನ ನನ್ನ ಕೈಯಿಂದ ಬಿಡಿಸೋಕೆ ಆಗಲ್ಲ’ ಅಂದನು. ಅದಕ್ಕವರು, ‘ನಮಗೆ ಇನ್ನೊಂದು ಅವಕಾಶ ಬೇಡ. ನಮ್ಮ ದೇವರಿಗೆ ನಮ್ಮನ್ನು ಕಾಪಾಡಲು ಆಗುತ್ತದೆ. ಒಂದುವೇಳೆ ದೇವರು ನಮ್ಮನ್ನ ಕಾಪಾಡದಿದ್ರೂ ನಾವು ಮೂರ್ತಿಯನ್ನ ಆರಾಧಿಸಲ್ಲ’ ಅಂದರು.
ಇದನ್ನು ಕೇಳಿ ನೆಬೂಕದ್ನೆಚ್ಚರನಿಗೆ ತುಂಬ ಕೋಪ ಬಂತು. ಅವನು ತನ್ನ ಸೇವಕರಿಗೆ, ‘ಕುಲುಮೆಯನ್ನ ಸಾಮಾನ್ಯಕ್ಕಿಂತ ಏಳುಪಟ್ಟು ಹೆಚ್ಚಾಗಿ ಉರಿಸಿ’ ಅಂದನು. ನಂತರ ತನ್ನ ಸೈನಿಕರಿಗೆ, ‘ಇವರನ್ನು ಕಟ್ಟಿ ಅದರಲ್ಲಿ ಹಾಕಿ’ ಅಂತ ಆಜ್ಞಾಪಿಸಿದನು. ಸೈನಿಕರು ಆ ಮೂವರನ್ನು ಬೆಂಕಿಯಲ್ಲಿ ಹಾಕಿದರು. ಆ ಬೆಂಕಿಯ ಬಿಸಿ ಎಷ್ಟಿತ್ತೆಂದರೆ ಆ ಸೈನಿಕರು ಅಲ್ಲೇ ಸತ್ತುಹೋದರು. ನೆಬೂಕದ್ನೆಚ್ಚರನು ಅವರನ್ನು ನೋಡಲು ಬಗ್ಗಿದಾಗ ಅಲ್ಲಿ ಮೂವರಲ್ಲ, ನಾಲ್ಕು ಜನ ನಡೆದಾಡುತ್ತಾ ಇರುವುದನ್ನು ನೋಡಿದನು. ಅದನ್ನು ನೋಡಿ ಅವನು ಹೆದರಿ ಹೋದನು. ತನ್ನ ಅಧಿಕಾರಿಗಳಿಗೆ ಅವನು, ‘ನಾವು ಬೆಂಕಿಗೆ ಹಾಕಿದ್ದು ಮೂರು ಜನ್ರನ್ನಲ್ವಾ? ಆದರೆ ನನಗೆ ನಾಲ್ಕು ಜನ ಕಾಣಿಸುತ್ತಿದ್ದಾರೆ. ಒಬ್ಬನು ದೇವದೂತನ ತರ ಕಾಣ್ತಿದ್ದಾನೆ!’ ಅಂತ ಹೇಳುತ್ತಾನೆ.
ನೆಬೂಕದ್ನೆಚ್ಚರ ಬೆಂಕಿಯ ಕುಲುಮೆಯ ಹತ್ತಿರ ಹೋಗಿ, ‘ಸರ್ವೋನ್ನತ ದೇವರ ಸೇವಕರೇ ಹೊರಗೆ ಬನ್ನಿ!’ ಅಂತ ಕರೆಯುತ್ತಾನೆ. ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಹೊರಗೆ ಬಂದಾಗ ಅವರಿಗೆ ಏನೂ ಆಗದೇ ಇರುವುದನ್ನು ನೋಡಿ ಎಲ್ಲರಿಗೂ ಆಶ್ಚರ್ಯ ಆಗುತ್ತೆ. ಅವರ ಚರ್ಮ, ಕೂದಲು, ಬಟ್ಟೆ ಸಹ ಸುಟ್ಟಿರಲಿಲ್ಲ. ಬೆಂಕಿಯ ವಾಸನೆ ಸಹ ಅವರಿಂದ ಬರುತ್ತಿರಲಿಲ್ಲ.
ಆಗ ನೆಬೂಕದ್ನೆಚ್ಚರ, ‘ಶದ್ರಕ್, ಮೇಶಕ್, ಅಬೇದ್ನೆಗೋ ಆರಾಧಿಸೋ ದೇವರು ಬೇರೆಲ್ಲಾ ದೇವರಿಗಿಂತ ಉನ್ನತನು. ಆತನು ತನ್ನ ದೂತನನ್ನ ಕಳಿಸಿ ತನ್ನ ಸೇವಕರನ್ನ ಕಾಪಾಡಿದ್ದಾನೆ. ಆತನಂಥ ದೇವರು ಬೇರೆ ಯಾರೂ ಇಲ್ಲ’ ಅಂದನು.
ಈ ಮೂವರು ಇಬ್ರಿಯರಂತೆ, ಏನೇ ಆದರೂ ಯೆಹೋವನಿಗೆ ನಿಷ್ಠೆಯಿಂದ ಇರಬೇಕೆಂದು ನೀನು ದೃಢ ತೀರ್ಮಾನ ಮಾಡಿದ್ದೀಯಾ?
“ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆ ಮಾಡಬೇಕು.”—ಮತ್ತಾಯ 4:10