ಪಾಠ 76
ಯೇಸು ದೇವಾಲಯವನ್ನು ಶುದ್ಧ ಮಾಡುತ್ತಾನೆ
ಕ್ರಿ.ಶ. 30ರ ಏಪ್ರಿಲ್ ತಿಂಗಳಿನಲ್ಲಿ ಯೇಸು ಯೆರೂಸಲೇಮಿಗೆ ಹೋದನು. ಪಸ್ಕಹಬ್ಬವನ್ನು ಆಚರಿಸಲಿಕ್ಕಾಗಿ ಅಲ್ಲಿ ತುಂಬ ಜನ ಬಂದಿದ್ದರು. ಈ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಜನರು ದೇವಾಲಯದಲ್ಲಿ ಪ್ರಾಣಿಗಳನ್ನು ಬಲಿಯಾಗಿ ಅರ್ಪಿಸುತ್ತಿದ್ದರು. ಇದಕ್ಕಾಗಿ ಕೆಲವರು ಪ್ರಾಣಿಗಳನ್ನು ತಮ್ಮ ಜೊತೆ ತರುತ್ತಿದ್ದರು. ಇನ್ನು ಕೆಲವರು ಯೆರೂಸಲೇಮಿಗೆ ಬಂದು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಿದ್ದರು.
ಯೇಸು ದೇವಾಲಯಕ್ಕೆ ಹೋದಾಗ ಜನರು ಅಲ್ಲಿ ಪ್ರಾಣಿಗಳನ್ನು ಮಾರುತ್ತಿರುವುದನ್ನು ನೋಡಿದನು. ಅವರು ತಮ್ಮ ಲಾಭಕ್ಕಾಗಿ ವ್ಯಾಪಾರ ಮಾಡುತ್ತಿದ್ದರು, ಅದೂ ಯೆಹೋವನನ್ನು ಆರಾಧಿಸುವ ಸ್ಥಳದಲ್ಲಿ! ಇದನ್ನು ನೋಡಿದ ಯೇಸು ಏನು ಮಾಡಿದ ಗೊತ್ತಾ? ಅವನು ಹಗ್ಗದಿಂದ ಚಾಟಿ ಮಾಡಿ ಪಶು, ಕುರಿ, ಪಾರಿವಾಳಗಳನ್ನ ದೇವಾಲಯದಿಂದ ಹೊರಗೆ ಓಡಿಸಿದನು. ಹಣ ಬದಲಾಯಿಸ್ತಿದ್ದವ್ರ ಮೇಜುಗಳನ್ನು ಬೀಳಿಸಿ ಅವರ ನಾಣ್ಯಗಳನ್ನು ಚೆಲ್ಲಿಬಿಟ್ಟನು. ಯೇಸು ಪಾರಿವಾಳ ಮಾರುವವರಿಗೆ, ‘ಇದನ್ನೆಲ್ಲ ಇಲ್ಲಿಂದ ತಗೊಂಡು ಹೋಗಿ. ನನ್ನ ತಂದೆಯ ಆಲಯವನ್ನ ವ್ಯಾಪಾರದ ಸ್ಥಳವಾಗಿ ಮಾಡಬೇಡಿ’ ಅಂದನು.
ಇದನ್ನು ನೋಡಿದ ಜನರು ಆಶ್ಚರ್ಯಪಟ್ಟರು. ಅವನ ಶಿಷ್ಯರಿಗೆ ‘ಯೆಹೋವನ ಆಲಯದ ಕಡೆಗೆ ನನಗೆ ತುಂಬ ಹುರುಪು ಇರುತ್ತೆ’ ಎಂದು ಮೆಸ್ಸೀಯನ ಬಗ್ಗೆ ಬರೆಯಲಾದ ಭವಿಷ್ಯವಾಣಿ ನೆನಪಾಯಿತು.
ಸಮಯಾನಂತರ ಕ್ರಿ.ಶ. 33ರಲ್ಲಿ ಯೇಸು ಎರಡನೇ ಸಲ ದೇವಾಲಯವನ್ನು ಶುದ್ಧ ಮಾಡಿದನು. ತನ್ನ ತಂದೆಯ ಮನೆಗೆ ಅಗೌರವ ತೋರಿಸುವುದನ್ನು ಯೇಸು ಸಹಿಸುತ್ತಿರಲಿಲ್ಲ.
“ನೀವು . . . ದೇವರಿಗೂ ದುಡ್ಡಿಗೂ ದಾಸರಾಗಿ ಇರೋಕಾಗಲ್ಲ”—ಲೂಕ 16:13