ಸಮಯಗಳು ಬದಲಾಗಿವೆ
ನಂಬಿಗಸ್ತ ರಾಜ ಸೊಲೊಮೋನನ ಮಹಿಮಾಭರಿತ ಆಳಿಕ್ವೆಯ ಕೆಳಗೆ ಪುರಾತನ ಇಸ್ರಾಯೇಲಿನಲ್ಲಿ ಜೀವಿಸುವುದು ಎಂತಹ ಒಂದು ಆನಂದವಾಗಿದ್ದಿರಬೇಕು! ಅದು ಶಾಂತಿ, ಸಮೃದ್ಧಿ ಮತ್ತು ಸಂತೋಷದ ಒಂದು ಶಕವಾಗಿತ್ತು. ಸೊಲೊಮೋನನು ಸತ್ಯಾರಾಧನೆಯ ಪರವಾಗಿ ದೃಢವಾಗಿ ನಿಂತ ಸಮಯದಲ್ಲಿ, ಯೆಹೋವನು ಜನಾಂಗವನ್ನು ಹೇರಳವಾಗಿ ಆಶೀರ್ವದಿಸಿದನು. ರಾಜ ಸೊಲೊಮೋನನಿಗೆ, ದೇವರು ಮಹಾ ಐಶ್ವರ್ಯವನ್ನು ಮಾತ್ರವಲ್ಲ, ಸೊಲೊಮೋನನು ನೀತಿ ಮತ್ತು ಪ್ರೀತಿಯಲ್ಲಿ ಆಳಲಿಕ್ಕಾಗಿ “ಜ್ಞಾನವನ್ನೂ ವಿವೇಕವನ್ನೂ” ಕೊಟ್ಟನು. (1 ಅರಸು 3:12) ಬೈಬಲು ತಿಳಿಸುವುದು: “ಭೂರಾಜರೆಲ್ಲರೂ ದೇವರು ಅವನಿಗೆ ಅನುಗ್ರಹಿಸಿದ ಜ್ಞಾನವಾಕ್ಯಗಳನ್ನು ಕೇಳುವದಕ್ಕೋಸ್ಕರ ಅವನ ದರ್ಶನಕ್ಕೆ ಬಂದರು.”—2 ಪೂರ್ವಕಾಲವೃತ್ತಾಂತ 9:23.
ಯೆಹೋವನು ಜನರಿಗೆ ಭದ್ರತೆ, ಶಾಂತಿ ಮತ್ತು ಒಳ್ಳೆಯ ವಿಷಯಗಳ ಪುಷ್ಕಳತೆಯನ್ನು ಕೊಟ್ಟನು. ದೇವರ ವಾಕ್ಯವು ಹೇಳುವುದು: “ಇಸ್ರಾಯೇಲ್ಯೆಹೂದ್ಯರು ಸಮುದ್ರತೀರದ ಉಸುಬಿನಷ್ಟು ಅಸಂಖ್ಯರಾಗಿದ್ದರು; ಅವರು ಅನ್ನಪಾನಗಳಲ್ಲಿ ತೃಪ್ತರಾಗಿ ಸಂತೋಷದಿಂದಿದ್ದರು.” ಅಕ್ಷರಶಃವಾಗಿಯೂ ಸಾಂಕೇತಿಕವಾಗಿಯೂ, ಜನರು “ಸೊಲೊಮೋನನ ಆಳಿಕೆಯಲ್ಲೆಲ್ಲಾ . . . ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.”—1 ಅರಸು 4:20, 25.
ಸಮಯಗಳು ಬದಲಾಗಿವೆ. ಬಹು ಸಮಯದ ಹಿಂದಿನ ಆ ಸಂತೋಷದ ದಿನಗಳಿಗಿಂತ ಇಂದು ಜೀವನವು ತುಂಬ ಭಿನ್ನವಾಗಿದೆ. ಸೊಲೊಮೋನನ ಸಮಯಕ್ಕೆ ಅಸದೃಶವಾಗಿ, ಇಂದು ಒಂದು ಬಹು ದೊಡ್ಡ ಸಮಸ್ಯೆಯು ಬಡತನವಾಗಿರುತ್ತದೆ. ಸಂಪದ್ಭರಿತ ರಾಷ್ಟ್ರಗಳಲ್ಲೂ ಬಡತನವಿದೆ. ಉದಾಹರಣೆಗಾಗಿ, ಅಮೆರಿಕ ಹಾಗೂ ಯೂರೋಪಿಯನ್ ಒಕ್ಕೂಟ ಎರಡರಲ್ಲಿಯೂ, ಬಹುಮಟ್ಟಿಗೆ 15 ಶೇಕಡ ಜನರು ಬಡತನದಲ್ಲಿ ಜೀವಿಸುತ್ತಾರೆಂದು ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರ್ಯಾಮ್ ಗಮನಿಸುತ್ತದೆ.
ಲೋಕದ ಹೆಚ್ಚಿನ ಬಡವರಿಗೆ ಜೀವನವು “ಹೆಚ್ಚೆಚ್ಚಾಗಿ ಕಷ್ಟವೂ ಹತಾಶೆಯದ್ದೂ ಆಗುತ್ತಿದೆ” ಎಂದು ಕೂಡಿಸುತ್ತಾ, ಲೋಕದ ಜನಸಂಖ್ಯೆಯ ಐದರಲ್ಲಿ ಒಂದಂಶವು ಸಂಪೂರ್ಣ ಬಡತನದಲ್ಲಿ ಜೀವಿಸುತ್ತಿದೆಯೆಂದು, ಭೌಗೋಲಿಕ ಚಿತ್ರಣದ ಕುರಿತಾಗಿ ಯೂನಿಸೆಫ್ (ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ನಿಧಿ) ಇಂದ ಒಂದು ವರದಿಯಾದ ದ ಸ್ಟೇಟ್ ಆಫ್ ದ ವರ್ಲ್ಡ್ಸ್ ಚಿಲ್ಡ್ರನ್ 1994 ಅವಲೋಕಿಸುತ್ತದೆ.
ಕೆಲವು ದೇಶಗಳಲ್ಲಿ, ಗಗನಕ್ಕೇರುತ್ತಿರುವ ಹಣದುಬ್ಬರವು ಬಡವರ ಕಷ್ಟಗಳನ್ನು ಹೆಚ್ಚಿಸುತ್ತದೆ. ಆಫ್ರಿಕನ್ ದೇಶವೊಂದರಲ್ಲಿರುವ ಒಬ್ಬ ಹೆಂಗಸು ಹೇಳಿದ್ದು: “ನೀವು ಮಾರುಕಟ್ಟೆಯಲ್ಲಿ ಯಾವದಾದರೊಂದು ವಸ್ತುವನ್ನು ನೋಡಿ ‘ನಾನು ಮನೆಗೆ ಹೋಗಿ, ಅದನ್ನು ಖರೀದಿಸಲು ಹಣವನ್ನು ತರುತ್ತೇನೆ’ ಎಂದು ಹೇಳುತ್ತೀರಿ. ಒಂದು ತಾಸಿನ ಬಳಿಕ ನೀವು ಹಿಂತೆರಳುತ್ತೀರಿ ಮತ್ತು ಆಗ ಬೆಲೆಯು ಈಗತಾನೇ ಹೆಚ್ಚಾಗಿರುವದರಿಂದ ನೀವದನ್ನು ಖರೀದಿಸಲಾರಿರೆಂದು ನಿಮಗೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ಏನು ಮಾಡುವನು? ಅದು ತುಂಬ ಹತಾಶೆಗೊಳಿಸುವಂತಹದ್ದಾಗಿರುತ್ತದೆ.”
ಅಲ್ಲಿದ್ದ ಇನ್ನೊಬ್ಬ ಹೆಂಗಸು ಅಂದದ್ದು: ‘ಬದುಕಿ ಉಳಿಯಲು, ನಾವು ಇತರ ಅಗತ್ಯಗಳ ಕುರಿತಾಗಿ ಮರೆಯುತ್ತೇವೆ. ಆಹಾರವನ್ನು ಹೇಗೆ ಪಡೆಯುವುದು ಎಂಬುದೇ ಈಗ ನಮ್ಮ ಪ್ರಧಾನ ಕಾರ್ಯವಾಗಿದೆ.’
ಸಂಯುಕ್ತ ರಾಷ್ಟ್ರಗಳಿಗನುಸಾರ, ಭವಿಷ್ಯತ್ತು ನಿರಾಶಾಜನಕವಾಗಿ ತೋರುತ್ತದೆ. ಉದಾಹರಣೆಗಾಗಿ, ಸದ್ಯದ ಜನಸಂಖ್ಯಾ ಪ್ರವೃತ್ತಿಗಳು ಮುಂದುವರಿಯುವಲ್ಲಿ, ಲೋಕವ್ಯಾಪಕವಿರುವ ಬಡ ಜನರ ಸಂಖ್ಯೆಯು “ಒಂದೇ ಜೀವಮಾನಕಾಲದೊಳಗೆ” ನಾಲ್ಕುಪಟ್ಟು ಹೆಚ್ಚಾಗುವುದೆಂದು ಯೂನಿಸೆಫ್ ಅಂದಾಜು ಮಾಡುತ್ತದೆ.
ಆದರೂ, ಕೆಡುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಹೊರತೂ, ದೇವರ ಸೇವಕರು ಆಶಾವಾದಿಗಳಾಗಿರಲು ಕಾರಣವಿದೆ. ಭವಿಷ್ಯತ್ತನ್ನು, ಹೆಚ್ಚುತ್ತಿರುವ ಕೇಡುನೋಟದೊಂದಿಗೆ ವೀಕ್ಷಿಸುವವರ ಮಧ್ಯದಲ್ಲಿ ಅವರು ಜೀವಿಸುತ್ತಿರುವುದಾದರೂ, ದೇವರ ಸೇವಕರು ಭವಿಷ್ಯದ ಕಡೆಗೆ ಆನಂದ ಮತ್ತು ಭರವಸೆಯಿಂದ ನೋಡುತ್ತಾರೆ. ಯಾಕೆ ಎಂಬ ಕಾರಣಗಳನ್ನು ಮುಂದಿನ ಲೇಖನವು ಪರಿಶೋಧಿಸುವುದು.
[ಪುಟ 3 ರಲ್ಲಿರುವ ಚಿತ್ರ ಕೃಪೆ]
De Grunne/Sipa Press