ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ಏಪ್ರಿಲ್‌ ಪು. 23-27
  • ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಿಮಗಿದೆಯಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಿಮಗಿದೆಯಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಘೋರ ಅನ್ಯಾಯ
  • ದೇವರು ಮಾಡಿದ ನ್ಯಾಯ
  • ದೀನತೆ ಕೊಡುವ ಸಂರಕ್ಷಣೆ
  • ಸಭೆಯಲ್ಲಿ ಕಪಟತನ
  • ಕ್ಷಮಾಗುಣ
  • ಒಬ್ಬ ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ದುಷ್ಟ ರಾಣಿ-ಈಜಬೇಲ್‌
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಬಲಿಷ್ಠರು ಬಲಹೀನರ ಮೇಲೆ ದಬ್ಬಾಳಿಕೆ ಮಾಡುವಾಗ ದೇವರು ಏಕೆ ಸುಮ್ಮನಿರುತ್ತಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ‘ನೀನು ಒಪ್ಪುವ ಮಾರ್ಗ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ಏಪ್ರಿಲ್‌ ಪು. 23-27
ಅಂತಿಯೋಕ್ಯದಲ್ಲಿ ಅಪೊಸ್ತಲ ಪೇತ್ರನು ಅನ್ಯಜನಾಂಗದ ಕ್ರೈಸ್ತರೊಂದಿಗೆ ಸೇರದೆ ಯೆಹೂದಿ ಕ್ರೈಸ್ತರೊಂದಿಗೆ ಸೇರಿ ಊಟ ಮಾಡುತ್ತಿದ್ದಾನೆ

ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಿಮಗಿದೆಯಾ?

“ಯೆಹೋವನ ನಾಮಮಹತ್ವವನ್ನು ಪ್ರಕಟಿಸುವೆನು . . . ಆತನು ನಡಿಸುವದೆಲ್ಲಾ ನ್ಯಾಯ.” —ಧರ್ಮೋ. 32:3, 4.

ಗೀತೆಗಳು: 110, 2

ನಮಗೆ ಅನ್ಯಾಯವಾದಾಗ ಈ ವಚನಗಳನ್ನು ನೆನಪಿಸಿಕೊಂಡರೆ ಹೇಗೆ ಸಹಾಯವಾಗುತ್ತದೆ?

  • ಧರ್ಮೋಪದೇಶಕಾಂಡ 32:4

  • 1 ಪೇತ್ರ 5:5

  • ಮತ್ತಾಯ 6:14

1, 2. (ಎ) ನಾಬೋತ ಮತ್ತು ಅವನ ಗಂಡುಮಕ್ಕಳಿಗೆ ಯಾವ ಘೋರ ಅನ್ಯಾಯ ಆಯಿತು? (ಬಿ) ಈ ಲೇಖನದಲ್ಲಿ ಯಾವ ಎರಡು ಗುಣಗಳ ಬಗ್ಗೆ ಚರ್ಚಿಸಲಿದ್ದೇವೆ?

ದೊಡ್ಡ ಅಪರಾಧ ಮಾಡಿದ್ದಾನೆ ಎಂಬ ಆರೋಪ ಹಾಕಿ ಒಬ್ಬ ವ್ಯಕ್ತಿಯನ್ನು ಹಿಡಿದು ತರಲಾಗಿದೆ. ಅವನು ಯಾವ ತಪ್ಪನ್ನೂ ಮಾಡಿಲ್ಲ. ಆದರೂ ಅವನು ತಪ್ಪಿತಸ್ಥನೆಂದು ತೀರ್ಪು ಕೊಡಲಾಗುತ್ತದೆ. ಮರಣದಂಡನೆ ವಿಧಿಸಲಾಗುತ್ತದೆ. ನಿರ್ದೋಷಿಗಳಾಗಿದ್ದ ಇವನನ್ನು, ಇವನ ಪುತ್ರರನ್ನು ಜನರು ಕಲ್ಲೆಸೆದು ಕೊಲ್ಲುವುದನ್ನು ನೋಡುವಾಗ ನ್ಯಾಯವನ್ನು ಪ್ರೀತಿಸುವವರಿಗೆ ಹೇಗನಿಸಿರಬೇಕು ಸ್ವಲ್ಪ ಯೋಚಿಸಿ! ಇದು ಕಥೆಯಲ್ಲ, ನಿಜವಾಗಿ ನಡೆದ ಘಟನೆ. ಅರಸನಾದ ಅಹಾಬನು ಇಸ್ರಾಯೇಲನ್ನು ಆಳುತ್ತಿದ್ದಾಗ ಯೆಹೋವನ ನಂಬಿಗಸ್ತ ಆರಾಧಕನಾದ ನಾಬೋತ ಎಂಬ ವ್ಯಕ್ತಿಗೆ ನಡೆದ ಘೋರ ಅನ್ಯಾಯ ಇದು.—1 ಅರ. 21:11-13; 2 ಅರ. 9:26.

2 ಈ ಲೇಖನದಲ್ಲಿ ನಾಬೋತನಿಗಾದ ಅನ್ಯಾಯದ ಬಗ್ಗೆ ನೋಡಲಿದ್ದೇವೆ. ಮಾತ್ರವಲ್ಲ ಮೊದಲನೇ ಶತಮಾನದ ಕ್ರೈಸ್ತ ಸಭೆಯಲ್ಲಿದ್ದ ಒಬ್ಬ ನಂಬಿಗಸ್ತ ಹಿರಿಯನು ಮಾಡಿದ ದೊಡ್ಡ ತಪ್ಪಿನ ಬಗ್ಗೆ ಚರ್ಚಿಸಲಿದ್ದೇವೆ. ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವೇ ನಮಗೂ ಇರಬೇಕಾದರೆ ನಮ್ಮಲ್ಲಿ ದೀನತೆ ಮತ್ತು ಕ್ಷಮಾಗುಣ ಇರಬೇಕೆಂದು ಈ ಎರಡು ಉದಾಹರಣೆಗಳಿಂದ ಕಲಿಯಲಿದ್ದೇವೆ.

ಘೋರ ಅನ್ಯಾಯ

3, 4. (ಎ) ನಾಬೋತನು ಯಾವ ರೀತಿಯ ವ್ಯಕ್ತಿ? (ಬಿ) ನಾಬೋತ ತನ್ನ ದ್ರಾಕ್ಷೇತೋಟವನ್ನು ಅರಸನಾದ ಅಹಾಬನಿಗೆ ಮಾರಲು ಒಪ್ಪಲಿಲ್ಲ ಯಾಕೆ?

3 ನಾಬೋತನ ಸಮಯದಲ್ಲಿ ಅಹಾಬ ರಾಜನಾಗಿದ್ದ. ಅಹಾಬ ಮತ್ತು ಅವನ ಪತ್ನಿಯಾದ ದುಷ್ಟ ರಾಣಿ ಈಜೆಬೆಲಳ ಕೆಟ್ಟ ಮಾದರಿಯನ್ನು ಹೆಚ್ಚಿನ ಇಸ್ರಾಯೇಲ್ಯರು ಅನುಕರಿಸುತ್ತಾ ಸುಳ್ಳು ದೇವತೆಯಾದ ಬಾಳನನ್ನು ಆರಾಧಿಸುತ್ತಿದ್ದರು. ಯೆಹೋವನಿಗೆ ಗೌರವ ಕೊಡುತ್ತಿರಲಿಲ್ಲ. ಆತನ ಆಜ್ಞೆಗಳನ್ನು ತಾತ್ಸಾರಮಾಡುತ್ತಿದ್ದರು. ಆದರೆ ನಾಬೋತ ಯೆಹೋವನಿಗೆ ನಂಬಿಗಸ್ತನಾಗಿದ್ದ. ಅವನಿಗೆ ತನ್ನ ಪ್ರಾಣಕ್ಕಿಂತಲೂ ಯೆಹೋವನೊಂದಿಗಿನ ಸಂಬಂಧವೇ ಮುಖ್ಯವಾಗಿತ್ತು.

4 ಒಂದನೇ ಅರಸುಗಳು 21:1-3 ಓದಿ. ಅಹಾಬನು ನಾಬೋತನಿಗೆ ‘ನಿನ್ನ ದ್ರಾಕ್ಷೇತೋಟವನ್ನು ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ ಅಥವಾ ಅದಕ್ಕೆ ಬದಲಿಯಾಗಿ ಇನ್ನೊಂದು ತೋಟ ಕೊಡುತ್ತೇನೆ’ ಅಂದಾಗ ಅವನು ಒಪ್ಪಲಿಲ್ಲ. ಯಾಕೆ? ಯಾಕೆಂದರೆ ಒಬ್ಬ ಇಸ್ರಾಯೇಲ್ಯನು ಪಿತ್ರಾರ್ಜಿತ ಆಸ್ತಿಯನ್ನು ಇನ್ನೊಬ್ಬರಿಗೆ ಶಾಶ್ವತವಾಗಿ ಮಾರಬಾರದೆಂದು ಯೆಹೋವನ ನಿಯಮವಿತ್ತು. (ಯಾಜ. 25:23; ಅರ. 36:7) ಆದ್ದರಿಂದ ನಾಬೋತನು ಅಹಾಬನಿಗೆ, “ನಾನು ಪಿತ್ರಾರ್ಜಿತಸ್ವಾಸ್ತ್ಯವನ್ನು ನಿನಗೆ ಮಾರದಂತೆ ಯೆಹೋವನು ನನ್ನನ್ನು ತಡೆಯಲಿ” ಎಂದು ಗೌರವದಿಂದ ಹೇಳಿದನು. ಅವನು ಯೆಹೋವನ ಮಾತಿಗೆ ಬೆಲೆ ಕೊಡುತ್ತಿದ್ದ ಅನ್ನುವುದು ಇದರಿಂದ ಸ್ಪಷ್ಟ.

5. ನಾಬೋತನ ದ್ರಾಕ್ಷೇತೋಟವನ್ನು ಕಿತ್ತುಕೊಳ್ಳಲು ಈಜೆಬೆಲಳು ಏನು ಮಾಡಿದಳು?

5 ನಾಬೋತನು ತನ್ನ ದ್ರಾಕ್ಷೇತೋಟವನ್ನು ಮಾರುವುದಿಲ್ಲ ಅಂದಾಗ ಅಹಾಬ ಮತ್ತು ಅವನ ಪತ್ನಿ ನೀಚ ಕೃತ್ಯಗಳಿಗೆ ಕೈಹಾಕಿದರು. ಅದನ್ನು ಹೇಗಾದರೂ ಮಾಡಿ ಕಿತ್ತುಕೊಳ್ಳಬೇಕೆಂಬ ಪ್ರಯತ್ನದಲ್ಲಿ ರಾಣಿ ಈಜೆಬೆಲಳು ಇಬ್ಬರನ್ನು ಉಪಯೋಗಿಸಿ ನಾಬೋತನ ಮೇಲೆ ಸುಳ್ಳಾರೋಪ ಹಾಕಿಸಿದಳು. ಇದರಿಂದ ನಾಬೋತನನ್ನು ಮತ್ತು ಅವನ ಪುತ್ರರನ್ನು ಕೊಲ್ಲಲಾಯಿತು. ಈ ಘೋರ ಅನ್ಯಾಯವನ್ನು ನೋಡಿ ಯೆಹೋವನು ಏನು ಮಾಡಿದನು?

ದೇವರು ಮಾಡಿದ ನ್ಯಾಯ

6, 7. (ಎ) ಯೆಹೋವನು ತಾನು ನ್ಯಾಯವನ್ನು ಮೆಚ್ಚುವ ದೇವರು ಎಂದು ಹೇಗೆ ತೋರಿಸಿದನು? (ಬಿ) ಇದರಿಂದ ನಾಬೋತನ ಬಂಧುಮಿತ್ರರಿಗೆ ಹೇಗೆ ಸಮಾಧಾನ ಆಗಿರಬೇಕು?

6 ಯೆಹೋವನು ಕೂಡಲೆ ಎಲೀಯನನ್ನು ಅಹಾಬನ ಬಳಿ ಕಳುಹಿಸಿದನು. ಅಹಾಬ ಒಬ್ಬ ಕೊಲೆಗಾರ, ಕಳ್ಳ ಎಂದು ಎಲೀಯ ಅವನಿಗೆ ಹೇಳಿದನು. ಯೆಹೋವನು ಅಹಾಬನ ಮೇಲೆ ಹೊರಡಿಸಿದ ತೀರ್ಪು ಏನಾಗಿತ್ತು? ನಾಬೋತ ಮತ್ತು ಅವನ ಮಕ್ಕಳಿಗಾದಂತೆ ಅಹಾಬ, ಅವನ ಪತ್ನಿ ಮತ್ತು ಅವನ ಮಕ್ಕಳನ್ನು ಕೊಲ್ಲಲಾಗುವುದು.—1 ಅರ. 21:17-25.

7 ಅಹಾಬನು ಮಾಡಿದ ಘೋರ ಕೃತ್ಯಗಳಿಂದಾಗಿ ನಾಬೋತನ ಬಂಧುಮಿತ್ರರಿಗೆ ತುಂಬ ನೋವಾಯಿತು. ಆದರೆ ನಡೆದ ಅನ್ಯಾಯವನ್ನು ಯೆಹೋವನು ನೋಡಿ ತಕ್ಷಣ ಪ್ರತಿಕ್ರಿಯಿಸಿದನು ಎಂಬ ವಿಷಯದಿಂದ ಅವರಿಗೆ ಸಮಾಧಾನ ಆಗಿರಬೇಕು. ಹೀಗಿದ್ದರೂ ಮುಂದೆ ನಡೆದ ವಿಷಯ, ಅವರಲ್ಲಿ ನಿಜವಾದ ದೀನತೆ ಇದೆಯಾ ಮತ್ತು ಯೆಹೋವನಲ್ಲಿ ನಿಜವಾಗಿಯೂ ಭರವಸೆ ಇಟ್ಟಿದ್ದಾರಾ ಎಂದು ಪರೀಕ್ಷಿಸಿತು.

8. (ಎ) ಅಹಾಬನಿಗೆ ಯೆಹೋವನ ತೀರ್ಪಿನ ಬಗ್ಗೆ ಗೊತ್ತಾದಾಗ ಏನು ಮಾಡಿದನು? (ಬಿ) ಇದರ ಪರಿಣಾಮ ಏನಾಯಿತು?

8 ಯೆಹೋವನು ತನಗೇನು ಮಾಡಲಿದ್ದಾನೆಂದು ಅಹಾಬನಿಗೆ ಗೊತ್ತಾದಾಗ “ತನ್ನ ಬಟ್ಟೆಯನ್ನು ಹರಿದುಕೊಂಡು ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು ಉಪವಾಸಮಾಡುತ್ತಾ ದೀನಮನಸ್ಸಿನಿಂದ ಪ್ರವರ್ತಿಸಿದನು.” ಪರಿಣಾಮ? “ಅವನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡದೆ ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಬರಮಾಡುವೆನು” ಎಂದು ಯೆಹೋವನು ಎಲೀಯನಿಗೆ ಹೇಳಿದನು. (1 ಅರ. 21:27-29; 2 ಅರ. 10:10, 11, 17) “ಹೃದಯಗಳನ್ನು ಶೋಧಿಸುವವನು” ಅಂದರೆ ಅಂತರಾಳದಲ್ಲಿ ಏನಿದೆ ಎಂದು ನೋಡುವ ಯೆಹೋವನು, ಅಹಾಬನಿಗೆ ದಯೆ ತೋರಿಸಿದನು.—ಜ್ಞಾನೋ. 17:3.

ದೀನತೆ ಕೊಡುವ ಸಂರಕ್ಷಣೆ

9. ನಾಬೋತನ ಬಂಧುಮಿತ್ರರಿಗೆ ದೀನತೆ ಹೇಗೆ ಸಂರಕ್ಷಣೆಯಾಗಿ ಇದ್ದಿರಬೇಕು?

9 ಅಹಾಬನ ಕುಟುಂಬಕ್ಕೆ ಯೆಹೋವನು ಮುಂತಿಳಿಸಿದ ಕೇಡು ಅಹಾಬನ ಜೀವಮಾನದಲ್ಲಿ ಬರುವುದಿಲ್ಲ ಎಂದು ಗೊತ್ತಾದಾಗ ನಾಬೋತನ ಬಂಧುಮಿತ್ರರಿಗೆ ದೇವರಲ್ಲಿದ್ದ ನಂಬಿಕೆ ಪರೀಕ್ಷೆಗೆ ಒಳಗಾಗಿರಬೇಕು. ಆದರೆ ನಂಬಿಕೆ ಕಳೆದುಕೊಳ್ಳದಿರಲು ಅವರಿಗೆ ದೀನತೆ ಸಹಾಯ ಮಾಡಿರಬೇಕು. ದೇವರು ನ್ಯಾಯವನ್ನೇ ನಡಿಸುತ್ತಾನೆ ಎಂಬ ಭರವಸೆ ಇಡುತ್ತಾ ಆತನನ್ನು ಆರಾಧಿಸುವುದನ್ನು ಅವರು ಮುಂದುವರಿಸಿರಬೇಕು. (ಧರ್ಮೋಪದೇಶಕಾಂಡ 32:3, 4 ಓದಿ.) ಮುಂದೆ ನಾಬೋತ ಮತ್ತು ಅವನ ಗಂಡುಮಕ್ಕಳು ಪುನರುತ್ಥಾನವಾಗಿ ಬರುವಾಗ ಅವರ ಕುಟುಂಬಕ್ಕೆ ತುಂಬ ಸಂತೋಷವಾಗುತ್ತದೆ. ಆಗ ಅವರಿಗೆ ಸಂಪೂರ್ಣ ನ್ಯಾಯ ಸಿಗಲಿದೆ. (ಯೋಬ 14:14, 15; ಯೋಹಾ. 5:28, 29) “ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು” ಎಂದು ಒಬ್ಬ ದೀನ ವ್ಯಕ್ತಿಗೆ ಗೊತ್ತಿದೆ. (ಪ್ರಸಂ. 12:14) ಯೆಹೋವನು ನಮಗೆ ಗೊತ್ತಿಲ್ಲದ ವಿಷಯಗಳನ್ನೂ ಗಮನಿಸಿ ತೀರ್ಪು ಹೊರಡಿಸುತ್ತಾನೆ. ಇದನ್ನು ನಾವು ದೀನತೆಯಿಂದ ಒಪ್ಪಿಕೊಂಡರೆ ಯೆಹೋವನಲ್ಲಿ ನಂಬಿಕೆ ಕಳೆದುಕೊಳ್ಳುವುದಿಲ್ಲ. ಹೀಗೆ ದೀನತೆ ನಮಗೆ ಸಂರಕ್ಷಣೆ ಕೊಡುತ್ತದೆ.

10, 11. (ಎ) ಯಾವ ಸನ್ನಿವೇಶಗಳಲ್ಲಿ ಅನ್ಯಾಯವಾಗಿದೆ ಎಂದು ನಮಗೆ ಅನಿಸಬಹುದು? (ಬಿ) ಯಾವ ವಿಧಗಳಲ್ಲಿ ದೀನತೆ ನಮಗೆ ಸಂರಕ್ಷಣೆ ಆಗಿರುತ್ತದೆ?

10 ಹಿರಿಯರು ಒಂದು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಇಟ್ಟುಕೊಳ್ಳಿ. ಯಾಕೆ ಈ ತೀರ್ಮಾನ ತೆಗೆದುಕೊಂಡರು ಎಂದು ನಿಮಗೆ ಅರ್ಥವಾಗುವುದಿಲ್ಲ ಅಥವಾ ನಿಮಗೆ ಯಾಕೋ ಅದು ಸರಿ ಅಂತ ಅನಿಸುವುದಿಲ್ಲ. ಆಗೇನು ಮಾಡುವಿರಿ? ಉದಾಹರಣೆಗೆ, ಒಂದು ಸೇವಾ ಸುಯೋಗವನ್ನು ನಿಮ್ಮ ಆಪ್ತರು ಇಲ್ಲವೆ ನೀವು ಕಳೆದುಕೊಳ್ಳುತ್ತೀರಿ. ಅಥವಾ ನಿಮಗೊ ನಿಮ್ಮ ಸಂಗಾತಿಗೊ ಮಗನಿಗೊ ಮಗಳಿಗೊ ಆಪ್ತ ಸ್ನೇಹಿತನಿಗೊ ಬಹಿಷ್ಕಾರವಾಗುತ್ತದೆ. ಅಥವಾ ಪಾಪ ಮಾಡಿದ ಒಬ್ಬ ವ್ಯಕ್ತಿಗೆ ಹಿರಿಯರು ಕರುಣೆ ತೋರಿಸಿದ್ದು ಸರಿಯಲ್ಲ ಎಂದು ನಿಮಗನಿಸುತ್ತದೆ. ಇಂಥ ಸನ್ನಿವೇಶಗಳು ಯೆಹೋವನಲ್ಲಿ ಮತ್ತು ಆತನು ಸಭೆಯನ್ನು ನಡೆಸುವ ವಿಧದಲ್ಲಿ ನಾವಿಟ್ಟಿರುವ ನಂಬಿಕೆಯನ್ನು ಪರೀಕ್ಷಿಸಬಹುದು. ಆಗೆಲ್ಲ ದೀನತೆ ಹೇಗೆ ಒಂದು ಸಂರಕ್ಷಣೆ ಆಗಿರಬಹುದು? ಎರಡು ವಿಧಗಳನ್ನು ಪರಿಗಣಿಸೋಣ.

ಹಿರಿಯರು ತೆಗೆದುಕೊಂಡ ತೀರ್ಮಾನವೊಂದರ ಬಗ್ಗೆ ಸಭೆಯಲ್ಲಿ ಪ್ರಕಟಿಸುವಾಗ ಆ ತೀರ್ಮಾನ ಇಷ್ಟವಾಗಲಿಲ್ಲ ಎಂದು ಒಬ್ಬ ಸಹೋದರ ತನ್ನ ಮುಖದಲ್ಲಿ ತೋರಿಸುತ್ತಿದ್ದಾನೆ

ಹಿರಿಯರು ಪ್ರಕಟಿಸುವ ಒಂದು ತೀರ್ಮಾನ ನಿಮಗೆ ಇಷ್ಟವಾಗದಿದ್ದರೆ ಏನು ಮಾಡುತ್ತೀರಿ? (ಪ್ಯಾರ 10, 11 ನೋಡಿ)

11 ಮೊದಲನೇದಾಗಿ, ನಮ್ಮಲ್ಲಿ ದೀನತೆ ಇದ್ದರೆ ನಮಗೆ ಪೂರ್ತಿ ವಿಷಯ ಗೊತ್ತಿಲ್ಲ ಎಂದು ಒಪ್ಪಿಕೊಳ್ಳುತ್ತೇವೆ. ನಮಗೆ ಒಂದು ಸನ್ನಿವೇಶದ ಬಗ್ಗೆ ಪೂರ್ತಿ ಗೊತ್ತಿದೆ ಎಂದು ಅನಿಸಿದರೂ ಒಬ್ಬ ವ್ಯಕ್ತಿಯ ಹೃದಯದಲ್ಲಿ ಏನಿದೆ ಎಂದು ಯೆಹೋವನಿಗೆ ಮಾತ್ರ ಗೊತ್ತು. (1 ಸಮು. 16:7) ನಾವಿದನ್ನು ಮನಸ್ಸಿನಲ್ಲಿಟ್ಟುಕೊಂಡರೆ ನಮಗೆ ಇತಿಮಿತಿಗಳಿವೆ, ನಾವೇ ನಮ್ಮ ಯೋಚನಾ ರೀತಿಯನ್ನು ತಿದ್ದಿಕೊಳ್ಳಬೇಕೆಂದು ದೀನತೆಯಿಂದ ಒಪ್ಪಿಕೊಳ್ಳುತ್ತೇವೆ. ಎರಡನೇದಾಗಿ, ನಮಗೋ ಬೇರೆ ಯಾರಿಗೋ ಅನ್ಯಾಯವಾಗಿದೆ ಎಂದು ಅನಿಸಿದರೆ ಯೆಹೋವನು ವಿಷಯಗಳನ್ನು ತಕ್ಕ ಸಮಯದಲ್ಲಿ ಸರಿ ಮಾಡುತ್ತಾನೆ ಅಂತ ತಾಳ್ಮೆಯಿಂದ ಕಾಯಲು, ವಿಧೇಯತೆ ತೋರಿಸಲು ದೀನತೆ ಸಹಾಯ ಮಾಡುತ್ತದೆ. “ದೇವರ ಮುಂದೆ ಹೆದರಿ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗುವದೆಂದು” ಬೈಬಲ್‌ ಹೇಳುತ್ತದೆ. “ಆದರೆ ದುಷ್ಟನಿಗೆ ಮೇಲಾಗದು, ನೆರಳಿನಂತಿರುವ ಅವನ ದಿನಗಳು ಹೆಚ್ಚುವದಿಲ್ಲ” ಎಂದು ಸಹ ಬೈಬಲ್‌ ಹೇಳುತ್ತದೆ ಅನ್ನುವುದನ್ನು ಮನಸ್ಸಿನಲ್ಲಿಡಿ. (ಪ್ರಸಂ. 8:12, 13) ನಾವು ದೀನರಾಗಿದ್ದರೆ ನಮಗೆ ಮತ್ತು ಸಂಬಂಧಪಟ್ಟಿರುವ ಎಲ್ಲರಿಗೆ ಪ್ರಯೋಜನವಾಗುತ್ತದೆ.—1 ಪೇತ್ರ 5:5 ಓದಿ.

ಸಭೆಯಲ್ಲಿ ಕಪಟತನ

12. ಈಗ ನಾವು ಯಾವ ಘಟನೆಯನ್ನು ಪರಿಗಣಿಸಲಿದ್ದೇವೆ? ಏಕೆ?

12 ಮೊದಲನೇ ಶತಮಾನದಲ್ಲಿ ಸಿರಿಯದ ಅಂತಿಯೋಕ್ಯದಲ್ಲಿದ್ದ ಕ್ರೈಸ್ತರು ಒಂದು ಸನ್ನಿವೇಶವನ್ನು ಎದುರಿಸಿದರು. ಇದು ಅವರಲ್ಲಿ ದೀನತೆ ಮತ್ತು ಕ್ಷಮಾಗುಣ ಇದೆಯಾ ಎಂದು ಪರೀಕ್ಷಿಸಿತು. ಈಗ ನಾವು ಆ ಘಟನೆಯನ್ನು ಪರಿಗಣಿಸೋಣ ಮತ್ತು ಇಂಥ ಸನ್ನಿವೇಶದಲ್ಲಿ ನಾವು ಕ್ಷಮಿಸಲು ಸಿದ್ಧರಿರುತ್ತೇವಾ ಎಂದು ನಮ್ಮನ್ನೇ ಪರೀಕ್ಷಿಸಿಕೊಳ್ಳೋಣ. ಯೆಹೋವನು ತನ್ನ ಮಟ್ಟಗಳನ್ನು ಬಿಟ್ಟುಕೊಡದೆ ಹೇಗೆ ಅಪರಿಪೂರ್ಣ ವ್ಯಕ್ತಿಗಳನ್ನು ತನ್ನ ಸೇವೆಯಲ್ಲಿ ಉಪಯೋಗಿಸುತ್ತಾನೆ ಎಂದು ಅರ್ಥಮಾಡಿಕೊಳ್ಳಲು ಈ ಘಟನೆ ಸಹಾಯ ಮಾಡುತ್ತದೆ.

13, 14. (ಎ) ಅಪೊಸ್ತಲ ಪೇತ್ರನಿಗೆ ಯಾವ ನೇಮಕಗಳನ್ನು ಕೊಡಲಾಗಿತ್ತು? (ಬಿ) ಅವನು ಧೈರ್ಯಶಾಲಿ ಎಂದು ಹೇಗೆ ತೋರಿಸಿದನು?

13 ಅಪೊಸ್ತಲ ಪೇತ್ರ ಒಬ್ಬ ಹಿರಿಯನಾಗಿದ್ದನು. ಮೊದಲನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಅವನ ಒಳ್ಳೇ ಪರಿಚಯ ಇತ್ತು. ಅವನು ಯೇಸುವಿನ ಆಪ್ತ ಸ್ನೇಹಿತನಾಗಿದ್ದನು ಮತ್ತು ಯೇಸು ಅವನಿಗೆ ಅನೇಕ ಪ್ರಮುಖ ನೇಮಕಗಳನ್ನು ಕೊಟ್ಟಿದ್ದನು. (ಮತ್ತಾ. 16:19) ಉದಾಹರಣೆಗೆ, ಕ್ರಿ.ಶ. 36ರಲ್ಲಿ ಕೊರ್ನೇಲ್ಯನಿಗೆ ಮತ್ತು ಅವನ ಮನೆಯಲ್ಲಿದ್ದವರಿಗೆ ಸುವಾರ್ತೆ ಸಾರುವ ನೇಮಕ ಪೇತ್ರನಿಗೆ ಸಿಕ್ಕಿತು. ಇದು ಯಾಕೆ ವಿಶೇಷವಾಗಿತ್ತು? ಯಾಕೆಂದರೆ ಕೊರ್ನೇಲ್ಯ ಯೆಹೂದಿ ಅಲ್ಲ, ಸುನ್ನತಿಯಾಗಿಲ್ಲದ ಅನ್ಯಜನಾಂಗದವ. ಕೊರ್ನೇಲ್ಯ ಮತ್ತು ಅವನ ಮನೆಯಲ್ಲಿದ್ದವರ ಮೇಲೆ ಪವಿತ್ರಾತ್ಮ ಸುರಿಸಲ್ಪಟ್ಟಾಗ, ಅವರು ದೀಕ್ಷಾಸ್ನಾನ ತೆಗೆದುಕೊಳ್ಳಲು ಅರ್ಹರು ಎಂದು ಪೇತ್ರನಿಗೆ ಅರ್ಥವಾಯಿತು. ಆಗ ಅವನು “ನಮ್ಮಂತೆಯೇ ಪವಿತ್ರಾತ್ಮವನ್ನು ಹೊಂದಿದವರಾದ ಇವರಿಗೆ ನೀರಿನಿಂದ ದೀಕ್ಷಾಸ್ನಾನವಾಗದಂತೆ ಯಾರಾದರೂ ಅಭ್ಯಂತರ ಮಾಡಬಲ್ಲರೇ?” ಎಂದು ಹೇಳಿದನು.—ಅ. ಕಾ. 10:47.

14 ಕ್ರಿ.ಶ. 49ರಲ್ಲಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಹಿರಿಯರು ಸಭೆ ಸೇರಿದರು. ಅನ್ಯಜನಾಂಗದವರು ಕ್ರೈಸ್ತರಾದಾಗ ಸುನ್ನತಿ ಮಾಡಿಸಿಕೊಳ್ಳಬೇಕಾ ಎಂಬ ವಿಷಯದಲ್ಲಿ ಆಡಳಿತ ಮಂಡಲಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಸುನ್ನತಿ ಮಾಡಿಸಿಕೊಂಡಿಲ್ಲದ ಅನ್ಯಜನಾಂಗದವರ ಮೇಲೆ ಪವಿತ್ರಾತ್ಮ ಬಂದದ್ದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಪೇತ್ರ ಈ ಕೂಟದಲ್ಲಿ ಧೈರ್ಯದಿಂದ ಹೇಳಿದನು. ಸುನ್ನತಿಯ ವಿಷಯದಲ್ಲಿ ಸರಿಯಾದ ತೀರ್ಮಾನ ಮಾಡಲು ಆಡಳಿತ ಮಂಡಲಿಗೆ ಸಹಾಯ ಮಾಡಿದ್ದು ಪೇತ್ರನ ಈ ಅನುಭವವೇ. (ಅ. ಕಾ. 15:6-11, 13, 14, 28, 29) ಪೇತ್ರನು ವಾಸ್ತವಾಂಶಗಳನ್ನು ಧೈರ್ಯದಿಂದ ಹೇಳಿದ್ದರಿಂದ ಯೆಹೂದಿ ಮತ್ತು ಅನ್ಯಜನಾಂಗದ ಕ್ರೈಸ್ತರಿಗೆ ಸಂತೋಷವಾಗಿರಬೇಕು. ಈ ನಂಬಿಗಸ್ತ ಪ್ರೌಢ ಕ್ರೈಸ್ತನಲ್ಲಿ ಭರವಸೆ ಇಡುವುದು ಆಗಿನ ಕ್ರೈಸ್ತರಿಗೆ ಸುಲಭವಾಗಿರಬೇಕು.—ಇಬ್ರಿ. 13:7.

15. ಸಿರಿಯದ ಅಂತಿಯೋಕ್ಯದಲ್ಲಿದ್ದಾಗ ಪೇತ್ರನು ಯಾವ ತಪ್ಪು ಮಾಡಿದನು? (ಲೇಖನದ ಆರಂಭದ ಚಿತ್ರ ನೋಡಿ.)

15 ಈ ಕೂಟವಾಗಿ ಸ್ವಲ್ಪ ಸಮಯದಲ್ಲೇ ಪೇತ್ರನು ಸಿರಿಯದ ಅಂತಿಯೋಕ್ಯಕ್ಕೆ ಹೋದನು. ಅಲ್ಲಿದ್ದಾಗ ಅನ್ಯಜನಾಂಗದ ಕ್ರೈಸ್ತ ಸಹೋದರರೊಂದಿಗೆ ಸಮಯ ಕಳೆದನು. ಆ ಸಹೋದರರು ಪೇತ್ರನಿಗಿದ್ದ ಜ್ಞಾನ, ಅನುಭವದಿಂದ ತುಂಬ ಪ್ರಯೋಜನ ಪಡೆದಿರಬೇಕು. ಆದರೆ ಇದ್ದಕ್ಕಿದ್ದ ಹಾಗೆ ಪೇತ್ರನು ಅವರೊಂದಿಗೆ ಊಟ ಮಾಡುವುದನ್ನು ನಿಲ್ಲಿಸಿಬಿಟ್ಟನು. ಇದರಿಂದ ಆ ಸಹೋದರರಿಗೆ ತುಂಬ ಆಶ್ಚರ್ಯ, ಆಘಾತ ಆಗಿರಬಹುದು. ಪೇತ್ರ ಮಾಡಿದ್ದನ್ನು ನೋಡಿ ಬಾರ್ನಬನು ಮತ್ತು ಬೇರೆ ಯೆಹೂದಿ ಕ್ರೈಸ್ತರು ಸಹ ಹಾಗೆಯೇ ಮಾಡಿದರು. ಇಷ್ಟು ಪ್ರೌಢನಾಗಿದ್ದ ಈ ಕ್ರೈಸ್ತ ಹಿರಿಯನು ಯಾಕೆ ಈ ತಪ್ಪು ಮಾಡಿದನು? ಇದು ಸಭೆಯನ್ನೇ ಒಡೆಯುವ ಸಾಧ್ಯತೆ ಇತ್ತು. ಒಬ್ಬ ಹಿರಿಯನು ಹೇಳಿದ ಅಥವಾ ಮಾಡಿದ ವಿಷಯದಿಂದ ನಮಗೆ ನೋವಾಗಿದ್ದರೆ ಅದನ್ನು ಹೇಗೆ ನಿಭಾಯಿಸುವುದೆಂದು ಈ ಘಟನೆಯಿಂದ ಕಲಿಯಲಿದ್ದೇವೆ.

16. (ಎ) ಪೇತ್ರನಿಗೆ ಯಾವ ತಿದ್ದುಪಾಟು ಸಿಕ್ಕಿತು? (ಬಿ) ಯಾವ ಪ್ರಶ್ನೆಗಳು ಏಳುತ್ತವೆ?

16 ಗಲಾತ್ಯ 2:11-14 ಓದಿ. ಪೇತ್ರನಿಗೆ ಮನುಷ್ಯರ ಭಯ ಹಿಡಿಯಿತು. (ಜ್ಞಾನೋ. 29:25) ಅನ್ಯಜನಾಂಗದವರನ್ನು ಯೆಹೋವನು ತನ್ನ ಸಭೆಯೊಳಗೆ ಸ್ವೀಕರಿಸಿದ್ದಾನೆ ಅನ್ನುವುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಆದರೂ, ಯೆರೂಸಲೇಮಿನಿಂದ ಬಂದ ಯೆಹೂದಿ ಕ್ರೈಸ್ತರು ತಾನು ಅನ್ಯಜನಾಂಗದ ಕ್ರೈಸ್ತರೊಂದಿಗೆ ಸಹವಾಸ ಮಾಡುತ್ತಿರುವುದನ್ನು ನೋಡಿ ಏನು ನೆನಸುತ್ತಾರೋ ಎಂದು ಹೆದರಿದನು. ಇದು ಸೋಗು ಅಥವಾ ಕಪಟತನ ಎಂದು ಅಪೊಸ್ತಲ ಪೌಲನು ಪೇತ್ರನಿಗೆ ಹೇಳಿದನು. ಯಾಕೆಂದರೆ ಸ್ವಲ್ಪ ಸಮಯದ ಹಿಂದೆನೇ ಕ್ರಿ.ಶ. 49ರಲ್ಲಿ ಪೇತ್ರನು ಅನ್ಯಜನಾಂಗದ ಕ್ರೈಸ್ತರ ಪರವಹಿಸಿ ಮಾತಾಡಿದ್ದನ್ನು ಪೌಲನೇ ಕೇಳಿದ್ದನು. (ಅ. ಕಾ. 15:12) ಪೇತ್ರನ ವರ್ತನೆಯಿಂದ ಆಘಾತಗೊಂಡಿದ್ದ ಅನ್ಯಜನಾಂಗದ ಕ್ರೈಸ್ತರು ಏನು ಮಾಡಿದರು? ಸಭೆಯನ್ನೇ ಬಿಟ್ಟು ಹೋದರಾ? ಪೇತ್ರನಿಗೆ ಏನಾಯಿತು? ತನ್ನ ಸುಯೋಗಗಳನ್ನು ಕಳೆದುಕೊಂಡನಾ?

ಕ್ಷಮಾಗುಣ

17. ಯೆಹೋವನು ಪೇತ್ರನನ್ನು ಕ್ಷಮಿಸಿದನೆಂದು ನಮಗೆ ಹೇಗೆ ಗೊತ್ತು?

17 ಪೇತ್ರನಲ್ಲಿ ದೀನತೆ ಇದ್ದದರಿಂದ ಪೌಲನು ಕೊಟ್ಟ ತಿದ್ದುಪಾಟನ್ನು ಸ್ವೀಕರಿಸಿದನು. ಅವನು ತನ್ನ ಸುಯೋಗಗಳನ್ನು ಕಳೆದುಕೊಂಡನು ಎಂದು ಬೈಬಲ್‌ ಹೇಳುವುದಿಲ್ಲ. ಮುಂದೆ ಅವನು ದೇವರ ಪ್ರೇರಣೆಯಿಂದ ಎರಡು ಪತ್ರಗಳನ್ನೂ ಬರೆದನು. ಇವು ನಮ್ಮ ಕೈಯಲ್ಲಿರುವ ಬೈಬಲಿನ ಭಾಗವಾಗಿವೆ. ಅವನು ಬರೆದ ಎರಡನೇ ಪತ್ರದಲ್ಲಿ ಪೌಲನನ್ನು “ಪ್ರಿಯ ಸಹೋದರ” ಎಂದು ಸಹ ಕರೆದಿದ್ದಾನೆ. (2 ಪೇತ್ರ 3:15) ಪೇತ್ರನು ಮಾಡಿದ ತಪ್ಪಿನಿಂದ ಅನ್ಯಜನಾಂಗದ ಕ್ರೈಸ್ತರಿಗೆ ನೋವಾಗಿದ್ದರೂ ಸಭೆಯ ಶಿರಸ್ಸಾದ ಯೇಸು ಅವನನ್ನು ತನ್ನ ಸೇವೆಯಲ್ಲಿ ಮುಂದಕ್ಕೂ ಉಪಯೋಗಿಸಿದನು. (ಎಫೆ. 1:22) ಯೇಸು ಮತ್ತು ಅವನ ತಂದೆಯ ಮಾದರಿಯನ್ನು ಅನುಕರಿಸುತ್ತಾ ಪೇತ್ರನನ್ನು ಕ್ಷಮಿಸುವ ಅವಕಾಶ ಈಗ ಸಭೆಯ ಸಹೋದರ ಸಹೋದರಿಯರ ಮುಂದೆ ಇತ್ತು. ಈ ಅಪರಿಪೂರ್ಣ ವ್ಯಕ್ತಿ ಮಾಡಿದ ತಪ್ಪಿನಿಂದ ಯಾರೂ ಸಭೆಯನ್ನು ಬಿಟ್ಟುಹೋಗಲಿಲ್ಲ ಎಂದು ನಂಬುತ್ತೇವೆ.

18. ಯಾವ ಸನ್ನಿವೇಶಗಳಲ್ಲಿ ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವೇ ನಮಗೂ ಇದೆ ಎಂದು ತೋರಿಸಬೇಕು?

18 ಮೊದಲನೇ ಶತಮಾನದ ಕ್ರೈಸ್ತ ಸಭೆಯಲ್ಲಿದ್ದ ಹಿರಿಯರು ಪರಿಪೂರ್ಣರಾಗಿರಲಿಲ್ಲ. ಇವತ್ತು ಸಹ ಕ್ರೈಸ್ತ ಸಭೆಯಲ್ಲಿರುವ ಹಿರಿಯರು ಪರಿಪೂರ್ಣರಲ್ಲ. “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ” ಅಥವಾ ತಪ್ಪುಮಾಡುತ್ತೇವೆ ಎಂದು ಬೈಬಲ್‌ ಹೇಳುತ್ತದೆ. (ಯಾಕೋ. 3:2) ಇದನ್ನು ಒಪ್ಪಿಕೊಳ್ಳುವುದು ನಮಗೆಲ್ಲರಿಗೂ ಸುಲಭ. ಆದರೆ ಸಹೋದರರ ಅಪರಿಪೂರ್ಣತೆಯ ಬಿಸಿ ತಟ್ಟಿದಾಗ ನಮಗೆ ಕಷ್ಟವಾಗಬಹುದು. ಈ ಸನ್ನಿವೇಶದಲ್ಲಿ ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವೇ ನಮಗೂ ಇದೆ ಎಂದು ತೋರಿಸುತ್ತೇವಾ? ಉದಾಹರಣೆಗೆ, ಒಬ್ಬ ಹಿರಿಯನು ಹೇಳಿದ ಯಾವುದೋ ಮಾತಿನಲ್ಲಿ ಸ್ವಲ್ಪ ಪೂರ್ವಗ್ರಹ ಇದೆ ಎಂದು ನಿಮಗನಿಸಿದರೆ ಏನು ಮಾಡುತ್ತೀರಿ? ಅಥವಾ ಒಬ್ಬ ಹಿರಿಯನು ಯೋಚಿಸದೆ ಏನಾದರೂ ಹೇಳಿಬಿಟ್ಟರೆ ಅದರಿಂದ ಸಿಟ್ಟುಗೊಂಡೊ, ನೊಂದುಕೊಂಡೊ ಸಭೆಯನ್ನೇ ಬಿಟ್ಟು ಹೋಗುತ್ತೀರಾ? ಈ ಸಹೋದರನು ಹಿರಿಯನಾಗಿರಲಿಕ್ಕೇ ಲಾಯಕ್ಕಿಲ್ಲ ಎಂಬ ತೀರ್ಮಾನಕ್ಕೆ ಬರದೆ ಸಭೆಯ ಶಿರಸ್ಸಾದ ಯೇಸು ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ತಾಳ್ಮೆಯಿಂದ ಇರುವಿರಾ? ಸಹೋದರನ ತಪ್ಪಿನ ಮೇಲೆ ಗಮನ ಕೇಂದ್ರೀಕರಿಸುವ ಬದಲು ಅವನ ಅನೇಕ ವರ್ಷಗಳ ನಂಬಿಗಸ್ತ ಸೇವೆಯನ್ನು ನೆನಪಿಸಿಕೊಳ್ಳುವಿರಾ? ನಿಮ್ಮ ವಿರುದ್ಧ ಪಾಪಮಾಡಿದ ಸಹೋದರನು ಹಿರಿಯನಾಗಿಯೇ ಮುಂದುವರಿದರೆ, ಹೆಚ್ಚಿನ ಸುಯೋಗಗಳನ್ನೂ ಪಡೆದರೆ ನೀವು ಸಂತೋಷಪಡುವಿರಾ? ನಿಮ್ಮಲ್ಲಿ ಕ್ಷಮಾಗುಣ ಇದ್ದರೆ ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವೇ ನಿಮಗೂ ಇದೆ ಎಂದು ತೋರಿಸುವಿರಿ.—ಮತ್ತಾಯ 6:14, 15 ಓದಿ.

19. ನಮ್ಮ ದೃಢತೀರ್ಮಾನ ಏನಾಗಿರಬೇಕು?

19 ಸೈತಾನ ಮತ್ತು ಅವನ ದುಷ್ಟ ಲೋಕ ಮಾಡಿರುವ ಎಲ್ಲ ಅನ್ಯಾಯವನ್ನು ಯೆಹೋವನು ಸಂಪೂರ್ಣವಾಗಿ ತೆಗೆದುಹಾಕಲಿದ್ದಾನೆ. (ಯೆಶಾ. 65:17) ನಾವು ನ್ಯಾಯವನ್ನು ಪ್ರೀತಿಸುವುದರಿಂದ ಆ ಸಮಯಕ್ಕಾಗಿ ಎದುರುನೋಡುತ್ತೇವೆ. ಅಷ್ಟರ ತನಕ ನಮಗೆ ಏನಾದರೂ ಅನ್ಯಾಯವಾದರೆ ನಮಗೆ ಸನ್ನಿವೇಶದ ಬಗ್ಗೆ ಪೂರ್ತಿ ವಿಷಯ ಗೊತ್ತಿಲ್ಲ ಎಂದು ದೀನತೆಯಿಂದ ಒಪ್ಪಿಕೊಂಡು ನಮ್ಮ ವಿರುದ್ಧ ಪಾಪಮಾಡಿದವರನ್ನು ಉದಾರವಾಗಿ ಕ್ಷಮಿಸೋಣ. ಹೀಗೆ ಮಾಡಿದರೆ ನ್ಯಾಯದ ಬಗ್ಗೆ ಯೆಹೋವನಿಗಿರುವ ನೋಟ ನಮಗೂ ಇದೆ ಎಂದು ತೋರಿಸುತ್ತೇವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ