ತುರ್ತಿನಿಂದ ಸಾರಿ!
1. ಪೌಲನ ಯಾವ ಉತ್ತೇಜನಕ್ಕೆ ನಾವಿಂದು ಗಮನಕೊಡಬೇಕು?
1 ‘ವಾಕ್ಯವನ್ನು ಸಾರು; ತುರ್ತಿನಿಂದ ಅದರಲ್ಲಿ ತಲ್ಲೀನನಾಗಿರು.’ (2 ತಿಮೊ. 4:2) ಪೌಲನ ಈ ಉತ್ತೇಜನ ನಮಗಿಂದು ಬಹು ಪ್ರಾಮುಖ್ಯವಾಗಿದೆ ಏಕೆ? ಅದು ನಮ್ಮ ಮತ್ತು ಇತರರ ಜೀವಗಳ ಮೇಲೆ ಹೇಗೆ ಪ್ರಭಾವಬೀರುತ್ತದೆ?
2. ಸುವಾರ್ತೆ ಕೇಳಿರದ ಜನರಿಗಾಗಿ ನಾವೇಕೆ ಶ್ರದ್ಧೆಯಿಂದ ಹುಡುಕುತ್ತೇವೆ?
2 ಜೀವಗಳ ಪ್ರಶ್ನೆ: ರಕ್ಷಣೆಗೆ ನಡೆಸಬಲ್ಲ ಸುವಾರ್ತೆ ಕೇಳಿರದ ಲಕ್ಷಾಂತರ ಜನರು ಜಗತ್ತಿನಾದ್ಯಂತ ಇನ್ನೂ ಇದ್ದಾರೆ. (ರೋಮ. 10:13-15; 1 ತಿಮೊ. 4:16) ಆಗಾಗ್ಗೆ ಆವರಿಸಿರುವ ಟೆರಿಟೊರಿಗಳಲ್ಲೂ ಅಂಥ ಎಷ್ಟೋ ಪ್ರಾಮಾಣಿಕ ಹೃದಯದ ಜನರು ಸಿಗುತ್ತಿರುತ್ತಾರೆ. ನಾವು ಬೇರೆ ಬೇರೆ ದಿನಗಳಲ್ಲೋ ಸಮಯದಲ್ಲೋ ಸಾರುವುದಾದರೆ ಮನೆಯಲ್ಲಿ ಬೇರೆ ಬೇರೆ ವ್ಯಕ್ತಿಗಳನ್ನು ಭೇಟಿಯಾಗಬಹುದು. ಸುವಾರ್ತೆ ಕೇಳಿರದ ಜನರನ್ನು ಹೀಗೆ ಶ್ರದ್ಧೆಯಿಂದ ಹುಡುಕುವುದರಿಂದ ನಮಗೆ ಶುದ್ಧ ಮನಸ್ಸಾಕ್ಷಿ ಇರುವುದು ಮತ್ತು ರಕ್ತಾಪರಾಧದಿಂದ ತಪ್ಪಿಸಿಕೊಳ್ಳುವೆವು.—ಅ. ಕಾ. 20:26.
3. ಶುಶ್ರೂಷೆಯಲ್ಲಿ ನಮ್ಮ ಸಮಯವನ್ನು ಹೇಗೆ ವಿವೇಕಯುತವಾಗಿ ಬಳಸಬಹುದು?
3 ಪ್ರಥಮ ಶತಮಾನದ ಕ್ರೈಸ್ತರು ಹಿಂಸಾತ್ಮಕ ವಿರೋಧದ ಮಧ್ಯೆಯೂ ‘ಯೆರೂಸಲೇಮನ್ನು ತಮ್ಮ ಬೋಧನೆಯಿಂದ ತುಂಬಿಸಿದ್ದರು.’ (ಅ. ಕಾ. 5:28) ‘ಕೂಲಂಕಷ ಸಾಕ್ಷಿ ನೀಡಲು’ ಅವರಿಗಿದ್ದ ಛಲ ನಮಗೂ ಇದೆಯೋ? ಅದೇ ಸಮಯದಲ್ಲಿ ನಮ್ಮ ಟೆರಿಟೊರಿಯ ಜನರ ಧಾರ್ಮಿಕ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೋ ಮತ್ತು ನಾವೆಲ್ಲಿ ಸೇವೆಮಾಡಬೇಕೆಂಬುದರ ಕುರಿತ ಹಿರಿಯರ ಸೂಚನೆಗಳನ್ನು ಪಾಲಿಸುತ್ತೇವೋ? (ಅ. ಕಾ. 10:42) ಶುಶ್ರೂಷೆಯಲ್ಲಿರುವಾಗ ನಮ್ಮ ಸಮಯವನ್ನು ವಿವೇಕಯುತವಾಗಿ ಬಳಸುತ್ತೇವೋ? ಕಾರಣಾಂತರದಿಂದ ಇನ್ನೊಬ್ಬ ಪ್ರಚಾರಕರಿಗೆ ಕಾಯುತ್ತಿರುವಾಗ ದಾರಿಯಲ್ಲಿ ಆಚೀಚೆ ಹೋಗುವವರ ಬಳಿ ಜಾಣ್ಮೆಯಿಂದ ಮಾತಾಡಲು ಮುಂದಾಗುತ್ತೇವೋ?
4. ತುರ್ತಿನಿಂದ ಸಾರುವುದು ಹೇಗೆ ನಮ್ಮನ್ನು ಎಚ್ಚರವಾಗಿರಿಸುತ್ತದೆ?
4 ಸದಾ ಎಚ್ಚರವಾಗಿರುತ್ತೇವೆ: ಈ ವ್ಯವಸ್ಥೆಯ ಅಂತ್ಯ ಧಾವಿಸಿ ಬರುತ್ತಿರುವುದರಿಂದ ನಾವು ಸದಾ ಎಚ್ಚರವಾಗಿರಬೇಕು. (1 ಥೆಸ. 5:1-6) ರಾಜ್ಯ ನಿರೀಕ್ಷೆಯ ಬಗ್ಗೆ ಯಾವಾಗಲೂ ಮಾತಾಡುವುದರಿಂದ ಈ ಲೋಕದ ವಿಷಯಗಳ ಭಾರದಿಂದ ಕುಗ್ಗಿಹೋಗೆವು. (ಲೂಕ 21:34-36) ಯೆಹೋವನ ದಿನವನ್ನು ‘ಮನಸ್ಸಿನಲ್ಲಿ ನಿಕಟವಾಗಿ ಇಡುವುದು’ ಈ ಜೀವರಕ್ಷಕ ಕೆಲಸದಲ್ಲಿ ನಮ್ಮ ಪಾಲನ್ನು ಹೆಚ್ಚಿಸಲು ಪ್ರೇರಿಸುತ್ತದೆ.—2 ಪೇತ್ರ 3:11, 12.
5. ಜೀವಕ್ಕಾಗಿ ಗೌರವವು ಶುಶ್ರೂಷೆಯಲ್ಲಿ ನಾವೇನು ಮಾಡುವಂತೆ ಪ್ರಚೋದಿಸುತ್ತದೆ?
5 ತುರ್ತಿನಿಂದ ಸಾರುವಾಗ ಜೀವದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಮಗೂ ಇದೆಯೆಂದು ತೋರಿಸುತ್ತೇವೆ: ‘ಯಾವನಾದರೂ ನಾಶವಾಗುವುದನ್ನು ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪ ಹೊಂದುವುದನ್ನು ಬಯಸುತ್ತಾನೆ.’ (2 ಪೇತ್ರ 3:9; ಯೆಹೆ. 33:11) ನಮ್ಮ ಟೆರಿಟೊರಿಯಲ್ಲಿ ಸಾಧ್ಯವಾದಷ್ಟು ಜನರೊಂದಿಗೆ ಮಾತಾಡುವುದು ನಮ್ಮ ದೃಢಸಂಕಲ್ಪವಾಗಿರಲಿ. ಇದು ಯೆಹೋವನಿಗೆ ಸ್ತುತಿ ತರುವುದು!—ಕೀರ್ತ. 109:30.