ವಾಚಕರಿಂದ ಪ್ರಶ್ನೆಗಳು
ಯೆಶಾಯ 60:1ರಲ್ಲಿ ಹೇಳಿರೋ “ಸ್ತ್ರೀ” ಯಾರು? ಅವಳು ಹೇಗೆ “ಎದ್ದು” ‘ಬೆಳಕನ್ನ ಬೀರುತ್ತಾಳೆ?’
ಯೆಶಾಯ 60:1ರಲ್ಲಿ ಹೀಗಿದೆ: “ಸ್ತ್ರೀಯೇ ಎದ್ದೇಳು, ಎದ್ದು ನಿನ್ನ ಬೆಳಕನ್ನ ಬೀರು. ಯಾಕಂದ್ರೆ ನಿನ್ನ ಬೆಳಕು ಬಂದಿದೆ. ಯೆಹೋವನ ಮಹಿಮೆ ನಿನ್ನ ಮೇಲೆ ಪ್ರಕಾಶಿಸ್ತಿದೆ.” ಇಲ್ಲಿ ಹೇಳಿರೋ “ಸ್ತ್ರೀ” ಚೀಯೋನನ್ನ ಅಥವಾ ಹಿಂದಿನ ಕಾಲದಲ್ಲಿ ಯೆಹೂದದ ರಾಜಧಾನಿಯಾಗಿದ್ದ ಯೆರೂಸಲೇಮನ್ನ ಸೂಚಿಸುತ್ತೆ.a (ಯೆಶಾ. 60:14; 62:1, 2) ಯೆರೂಸಲೇಮ್ ಇಡೀ ಇಸ್ರಾಯೇಲ್ ಜನಾಂಗವನ್ನ ಸೂಚಿಸುತ್ತೆ. ಯೆಶಾಯನ ಈ ಮಾತುಗಳಿಂದ ನಮ್ಮ ಮನಸ್ಸಿಗೆ ಎರಡು ಪ್ರಶ್ನೆಗಳು ಬರಬಹುದು. ಒಂದು, ಯಾವಾಗ ಮತ್ತು ಹೇಗೆ ಯೆರೂಸಲೇಮ್ ‘ಎದ್ದೇಳ್ತು’ ಮತ್ತು ಸಾಂಕೇತಿಕ ಬೆಳಕನ್ನ ಬೀರಿತು? ಎರಡು, ಯೆಶಾಯನ ಮಾತಿನ ನೆರವೇರಿಕೆ ನಮ್ಮ ಸಮಯದಲ್ಲೂ ಆಗ್ತಿದ್ಯಾ?
ಯಾವಾಗ ಮತ್ತು ಹೇಗೆ ಯೆರೂಸಲೇಮ್ ‘ಎದ್ದೇಳ್ತು’ ಮತ್ತು ಸಾಂಕೇತಿಕ ಬೆಳಕನ್ನ ಬೀರಿತು? ಯೆಹೂದ್ಯರು 70 ವರ್ಷ ಬಾಬೆಲಿನಲ್ಲಿ ಕೈದಿಗಳಾಗಿದ್ದಾಗ ಯೆರೂಸಲೇಮ್ ಪಟ್ಟಣ ಮತ್ತು ದೇವಾಲಯ ಹಾಳು ಬಿದ್ದಿತ್ತು. ಆಮೇಲೆ ಮೇದ್ಯ ಮತ್ತು ಪರ್ಶಿಯದವರು ಬಾಬೆಲನ್ನ ವಶಪಡಿಸ್ಕೊಂಡ್ರು. ಆಗ ಇಸ್ರಾಯೇಲ್ಯರಿಗೆ ತಮ್ಮ ಸ್ವಂತ ಊರುಗಳಿಗೆ ವಾಪಸ್ ಹೋಗಿ ಸತ್ಯ ಆರಾಧನೆ ಮಾಡೋಕೆ ಅವಕಾಶ ಸಿಕ್ತು. (ಎಜ್ರ 1:1-4) ಹಾಗಾಗಿ ಕ್ರಿಸ್ತಪೂರ್ವ 537ರ ಶುರುವಿನಲ್ಲಿ 12 ಕುಲಗಳಲ್ಲಿ ದೇವರಿಗೆ ನಂಬಿಗಸ್ತರಾಗಿದ್ದವರು ಸ್ವಂತ ಊರಿಗೆ ವಾಪಸ್ ಹೋದ್ರು. (ಯೆಶಾ. 60:4) ಅಲ್ಲಿ ಅವರು ಯೆಹೋವನಿಗೆ ಬಲಿಗಳನ್ನ ಅರ್ಪಿಸಿದ್ರು, ಹಬ್ಬಗಳನ್ನ ಮಾಡಿದ್ರು, ದೇವಾಲಯವನ್ನ ಮತ್ತೆ ಕಟ್ಟೋಕೆ ಶುರುಮಾಡಿದ್ರು. (ಎಜ್ರ 3:1-4, 7-11; 6:16-22) ಹೀಗೆ ಯೆಹೋವನ ಮಹಿಮೆ ಯೆರೂಸಲೇಮಿನ ಮೇಲೆ ಅಂದ್ರೆ ದೇವಜನ್ರ ಮೇಲೆ ಮತ್ತೆ ಪ್ರಕಾಶಿಸೋಕೆ ಶುರು ಆಯ್ತು. ಹೀಗೆ ಅವರು ಯೆಹೋವನ ಬಗ್ಗೆ ಗೊತ್ತಿಲ್ಲದೆ ಇರೋ ಜನ್ರಿಗೆ ಸಾಂಕೇತಿಕ ಬೆಳಕಾದ್ರು.
ಯೆಶಾಯನ ಭವಿಷ್ಯವಾಣಿಗಳು ಆ ಸಮಯದಲ್ಲಿ ಪೂರ್ತಿ ನೆರವೇರಲಿಲ್ಲ. ಯಾಕಂದ್ರೆ ಹೆಚ್ಚಿನ ಇಸ್ರಾಯೇಲ್ಯರು ದೇವರ ಮಾತನ್ನ ಕೇಳಲಿಲ್ಲ. (ನೆಹೆ. 13:27; ಮಲಾ. 1:6-8; 2:13, 14; ಮತ್ತಾ. 15:7-9) ಅಷ್ಟೇ ಅಲ್ಲ ಅವರು ಯೇಸು ಕ್ರಿಸ್ತನನ್ನ ಮೆಸ್ಸೀಯ ಅಂತ ಒಪ್ಕೊಳ್ಳಲಿಲ್ಲ. (ಮತ್ತಾ. 27:1, 2) ಕ್ರಿಸ್ತಶಕ 70ರಲ್ಲಿ ಯೆರೂಸಲೇಮ್ ಮತ್ತು ದೇವಾಲಯ ಎರಡನೇ ಸಲ ನಾಶ ಆಯ್ತು.
ಈ ನಾಶನದ ಬಗ್ಗೆ ಯೆಹೋವ ಮುಂಚೆನೇ ಹೇಳಿದ್ದನು. (ದಾನಿ. 9:24-27) ಇದ್ರಿಂದ ನಮಗೇನು ಗೊತ್ತಾಗುತ್ತೆ? ಯೆಶಾಯ 60ನೇ ಅಧ್ಯಾಯದಲ್ಲಿರೋ ಭವಿಷ್ಯವಾಣಿಗಳು ಪೂರ್ತಿಯಾಗಿ ಆಗಿನ ಯೆರೂಸಲೇಮಲ್ಲಿ ನೆರವೇರಬೇಕು ಅನ್ನೋದು ಯೆಹೋವನ ಉದ್ದೇಶ ಆಗಿರಲಿಲ್ಲ ಅಂತ ಗೊತ್ತಾಗುತ್ತೆ.
ಯೆಶಾಯನ ಮಾತುಗಳ ನೆರವೇರಿಕೆ ನಮ್ಮ ಸಮಯದಲ್ಲೂ ಆಗ್ತಿದ್ಯಾ? ಹೌದು. ಆದ್ರೆ ಈ ಮಾತುಗಳು “ಮೇಲಿರೋ ಯೆರೂಸಲೇಮ್” ಅನ್ನೋ ಇನ್ನೊಂದು ಸಾಂಕೇತಿಕ ಸ್ತ್ರೀಯಲ್ಲಿ ನೆರವೇರುತ್ತಾ ಇದೆ. ಅಪೊಸ್ತಲ ಪೌಲ ಅವಳ ಬಗ್ಗೆ, “ಅವಳೇ ನಮ್ಮ ತಾಯಿ” ಅಂತ ಹೇಳಿದ್ದಾನೆ. (ಗಲಾ. 4:26) ಮೇಲಿರೋ ಯೆರೂಸಲೇಮ್ ಅಂದ್ರೆ ದೇವರ ಸಂಘಟನೆಯ ಸ್ವರ್ಗೀಯ ಭಾಗ. ಅದ್ರಲ್ಲಿ ನಿಯತ್ತಾಗಿರೋ ದೇವದೂತರು ಇದ್ದಾರೆ. ಅವಳ ಮಕ್ಕಳು ಯಾರಂದ್ರೆ ಯೇಸು ಮತ್ತು 1,44,000 ಅಭಿಷಿಕ್ತ ಕ್ರೈಸ್ತರು. ಈ ಅಭಿಷಿಕ್ತರಿಗೆ ಪೌಲನ ತರ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇದೆ. ಇವರೆಲ್ಲ ಒಟ್ಟು ಸೇರಿ “ಪವಿತ್ರ ಜನಾಂಗ” ಅಥವಾ ‘ದೇವರ ಇಸ್ರಾಯೇಲ್’ ಆಗ್ತಾರೆ.—1 ಪೇತ್ರ 2:9; ಗಲಾ. 6:16.
ಮೇಲಿರೋ ಯೆರೂಸಲೇಮ್ ಹೇಗೆ ‘ಎದ್ದು ಬೆಳಕನ್ನ ಬೀರಿತು’? ಅವಳು ಅದನ್ನ ಭೂಮಿಯಲ್ಲಿರೋ ಅಭಿಷಿಕ್ತ ಮಕ್ಕಳ ಮೂಲಕ ಮಾಡ್ತಾಳೆ. ಯೆಶಾಯ 60ನೇ ಅಧ್ಯಾಯದಲ್ಲಿರೋ ಭವಿಷ್ಯವಾಣಿಗೂ ಇವ್ರಿಗೂ ಯಾವ ಸಂಬಂಧ ಇದೆ ಅಂತ ನೋಡೋಣ.
ಅಭಿಷಿಕ್ತ ಕ್ರೈಸ್ತರು ಸಾಂಕೇತಿಕ ಕತ್ತಲೆಯಲ್ಲಿ ಇದ್ದಿದ್ರಿಂದ ‘ಎದ್ದೇಳಬೇಕಾಯ್ತು.’ ಯಾಕಂದ್ರೆ ಕ್ರಿಸ್ತಶಕ ಎರಡನೇ ಶತಮಾನದಲ್ಲಿ ಅಪೊಸ್ತಲರು ತೀರಿ ಹೋದ ಮೇಲೆ ಧರ್ಮಭ್ರಷ್ಟತೆ ಜಾಸ್ತಿ ಆಯ್ತು. (ಮತ್ತಾ. 13:37-43) ಅದಕ್ಕೇ ಅವರು ಸುಳ್ಳು ಧರ್ಮಗಳ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಕೈವಶ ಆದ್ರು. 1914ರಲ್ಲಿ “ಲೋಕದ ಅಂತ್ಯಕಾಲ” ಶುರುವಾಯ್ತು. ಅಲ್ಲಿವರೆಗೂ ಅಭಿಷಿಕ್ತ ಕ್ರೈಸ್ತರು ಮಹಾ ಬಾಬೆಲಿನ ಕೈ ಕೆಳಗಿದ್ರು. (ಮತ್ತಾ. 13:39, 40) ಆಮೇಲೆ 1919ರಲ್ಲಿ ಅವ್ರಿಗೆ ಬಿಡುಗಡೆ ಆಯ್ತು. ತಕ್ಷಣ ಅವರು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಸಾರುತ್ತಾ ಸಾಂಕೇತಿಕ ಬೆಳಕನ್ನ ಬೀರಿದ್ರು.b ವರ್ಷಗಳು ಕಳೆದ ಹಾಗೆ ಈ ಸಾಂಕೇತಿಕ ಬೆಳಕು ಎಲ್ಲಾ ಜನಾಂಗಗಳ ಮೇಲೆ ಪ್ರಕಾಶಿಸ್ತು. ಅದ್ರಲ್ಲಿ ಉಳಿದ ದೇವರ ಇಸ್ರಾಯೇಲ್ಯರು ಅಂದ್ರೆ ಯೆಶಾಯ 60:3ರಲ್ಲಿ ಹೇಳಿರೋ “ರಾಜರು” ಇದ್ರು.—ಪ್ರಕ. 5:9, 10.
ಭವಿಷ್ಯದಲ್ಲಿ ಅಭಿಷಿಕ್ತ ಕ್ರೈಸ್ತರು ಯೆಹೋವನಿಂದ ಸಿಗೋ ಬೆಳಕನ್ನ ಇನ್ನೂ ಜಾಸ್ತಿ ಬೀರುತ್ತಾರೆ. ಅದು ಹೇಗೆ? ಅಭಿಷಿಕ್ತ ಕ್ರೈಸ್ತರು ತೀರಿ ಹೋದ ಮೇಲೆ ‘ಹೊಸ ಯೆರೂಸಲೇಮಿನ’ ಭಾಗ ಆಗ್ತಾರೆ ಅಥವಾ ಕ್ರಿಸ್ತನ ಮದುಮಗಳಾದ ಈ 1,44,000 ಮಂದಿ ಅಭಿಷಿಕ್ತರು ಆತನ ಸಹರಾಜರು ಮತ್ತು ಪುರೋಹಿತರು ಆಗ್ತಾರೆ.—ಪ್ರಕ. 14:1; 21:1, 2, 24; 22:3-5.
ಯೆಶಾಯ 60:1ರ ನೆರವೇರಿಕೆಯಲ್ಲಿ ಹೊಸ ಯೆರೂಸಲೇಮಿಗೆ ಒಂದು ಪ್ರಾಮುಖ್ಯವಾದ ಪಾತ್ರ ಇದೆ. (ಯೆಶಾಯ 60:1, 3, 5, 11, 19, 20ನ್ನ ಪ್ರಕಟನೆ 21:2, 9-11, 22-26ಕ್ಕೆ ಹೋಲಿಸಿ.) ಹಿಂದೆ ಇಡೀ ಇಸ್ರಾಯೇಲನ್ನ ಆಳ್ವಿಕೆ ಮಾಡ್ತಿದ್ದ ಸರ್ಕಾರ ಯೆರೂಸಲೇಮಿನಲ್ಲಿತ್ತು. ಅದೇ ತರ ಹೊಸ ಲೋಕನ ಆಳ್ವಿಕೆ ಮಾಡೋ ಸರ್ಕಾರ ಹೊಸ ಯೆರೂಸಲೇಮ್ ಮತ್ತು ಯೇಸು ಆಗಿರುತ್ತಾನೆ. ಹೊಸ ಯೆರೂಸಲೇಮ್ ಹೇಗೆ ‘ದೇವರ ಹತ್ರದಿಂದ ಇಳಿದು ಬರುತ್ತೆ‘? ಅದು ನಿಜವಾಗ್ಲೂ ಭೂಮಿಗೆ ಇಳಿದು ಬರಲ್ಲ, ಬದಲಿಗೆ ಭೂಮಿಯಲ್ಲಿರೋ ಜನ್ರಿಗೆ ಸಹಾಯ ಮಾಡುತ್ತೆ. ಇಡೀ ಜನಾಂಗದಲ್ಲಿ ದೇವರಿಗೆ ಭಯಪಡೋ ಜನ್ರು “ಆ ಬೆಳಕಲ್ಲಿ ನಡಿತಾರೆ.” ಅಷ್ಟೇ ಅಲ್ಲ, ಅವರು ಪಾಪ ಮತ್ತು ಮರಣದಿಂದ ಬಿಡುಗಡೆ ಪಡಿತಾರೆ. (ಪ್ರಕ. 21:3, 4, 24) ಆಗ ಅದು, ಯೆಶಾಯ ಮತ್ತು ಬೇರೆ ಪ್ರವಾದಿಗಳು ಹೇಳಿದ ತರ ‘ಎಲ್ಲವನ್ನ ಪೂರ್ತಿಯಾಗಿ ಸರಿ ಮಾಡೋ ಸಮಯ’ ಆಗಿರುತ್ತೆ. (ಅ. ಕಾ. 3:21) ಈ ಮಹಾ ಪುನಸ್ಥಾಪನೆ ಕ್ರಿಸ್ತ ರಾಜ ಆದಾಗ ಶುರುವಾಯ್ತು ಮತ್ತು ಸಾವಿರ ವರ್ಷದ ಕೊನೆಯಲ್ಲಿ ಮುಗಿಯುತ್ತೆ.
a ಹೊಸ ಲೋಕ ಭಾಷಾಂತರ ಬೈಬಲಿನ ಯೆಶಾಯ 60:1ರಲ್ಲಿ “ಚೀಯೋನ್” ಮತ್ತು “ಯೆರೂಸಲೇಮ್” ಅಂತ ಹಾಕೋ ಬದಲು “ಸ್ತ್ರೀ” ಅಂತ ಬಳಸಲಾಗಿದೆ. ಯಾಕಂದ್ರೆ ಹೀಬ್ರು ಕ್ರಿಯಾಪದವಾಗಿರೋ “ಎದ್ದೇಳು” ಮತ್ತು “ಬೆಳಕನ್ನ ಬೀರು” ಅನ್ನೋ ಪದಗಳು ಸ್ತ್ರೀಲಿಂಗದಲ್ಲಿ ಇದೆ. ಅದೇ ತರನೇ “ನಿನ್ನ” ಅನ್ನೋ ಪದನೂ ಸ್ತ್ರೀಲಿಂಗದಲ್ಲಿದೆ.
b 1919ರಲ್ಲಿ ಆದ ಶುದ್ಧಾರಾಧನೆಯ ಪುನಸ್ಥಾಪನೆ ಬಗ್ಗೆ ಯೆಹೆಜ್ಕೇಲ 37:1-14ರಲ್ಲಿ ಮತ್ತು ಪ್ರಕಟನೆ 11:7-12ರಲ್ಲಿ ತಿಳಿಸಲಾಗಿದೆ. ಎಲ್ಲ ಅಭಿಷಿಕ್ತ ಕ್ರೈಸ್ತರು ತುಂಬ ಸಮಯದ ತನಕ ಬಂಧಿವಾಸದಲ್ಲಿದ್ದ ಮೇಲೆ ಶುದ್ಧಾರಾಧನೆಯ ಪುನಸ್ಥಾಪನೆ ಆಗೋದ್ರ ಬಗ್ಗೆ ಯೆಹೆಜ್ಕೇಲ ಭವಿಷ್ಯವಾಣಿಯಲ್ಲಿ ಹೇಳಿದ. ಅಷ್ಟೇ ಅಲ್ಲ ಪ್ರಕಟನೆಯಲ್ಲಿರೋ ಭವಿಷ್ಯವಾಣಿಯಲ್ಲಿ ಮುಂದಾಳತ್ವ ತಗೊಳ್ತಿದ್ದ ಅಭಿಷಿಕ್ತ ಕ್ರೈಸ್ತರ ಒಂದು ಚಿಕ್ಕ ಗುಂಪಿಗೆ ಸಾಂಕೇತಿಕವಾಗಿ ಮತ್ತೆ ಜೀವ ಕೊಡೋದ್ರ ಬಗ್ಗೆ ಮಾತಾಡಲಾಗಿದೆ. ಅವರು ಒಂದು ಅರ್ಥದಲ್ಲಿ ಸತ್ತವರಂತೆ ಇದ್ರು. ಯಾಕಂದ್ರೆ ಅವರನ್ನ ಜೈಲಿನಲ್ಲಿ ಹಾಕಿದ್ರಿಂದ ಅವರಿಗೆ ಸ್ವಲ್ಪ ಸಮಯದ ತನಕ ಯೆಹೋವನ ಸೇವೆಯನ್ನ ಮಾಡೋಕೆ ಆಗ್ಲಿಲ್ಲ. ಆದ್ರೆ ಆಮೇಲೆ ಅವರು ಜೈಲಿಂದ ಬಿಡುಗಡೆ ಆದ್ರು. ಆಗ ಅವ್ರಿಗೆ ಮತ್ತೆ ಜೀವ ಬಂದಂತಿತ್ತು. 1919ರಲ್ಲಿ ಅವರನ್ನ “ನಂಬಿಗಸ್ತ, ವಿವೇಕಿ ಆದ” ಆಳಾಗಿ ನೇಮಿಸಲಾಯ್ತು.—ಮತ್ತಾ. 24:45. ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ!, ಪುಟ 118 ನೋಡಿ.