‘ಒಗ್ಗಟ್ಟನ್ನ ಕಾಪಾಡ್ಕೊಳ್ಳೋಕೆ ಶ್ರಮ ಪಡಿ’
ಅಪೊಸ್ತಲ ಪೌಲ ಎಫೆಸದಲ್ಲಿದ್ದ ಕ್ರೈಸ್ತರಿಗೆ, “ಪ್ರೀತಿಯಿಂದ ಒಬ್ರನ್ನೊಬ್ರು ಸಹಿಸ್ಕೊಳ್ಳಿ. ಪವಿತ್ರಶಕ್ತಿಯಿಂದ ನೀವು ಒಂದಾಗಿದ್ದೀರ. ಹಾಗಾಗಿ ಒಬ್ರು ಇನ್ನೊಬ್ರ ಜೊತೆ ಶಾಂತಿಯಿಂದ ಇದ್ದು ಒಗ್ಗಟ್ಟನ್ನ ಕಾಪಾಡ್ಕೊಳ್ಳೋಕೆ ಶ್ರಮ ಪಡಿ” ಅಂತ ಹೇಳಿದ.—ಎಫೆ. 4:2, 3.
ಪವಿತ್ರಶಕ್ತಿಯ ಸಹಾಯದಿಂದಾಗಿ ನಾವು ‘ಒಂದಾಗಿರೋಕೆ’ ಅಥವಾ ‘ಒಗ್ಗಟ್ಟಾಗಿರೋಕೆ’ ಸಾಧ್ಯ ಆಗುತ್ತೆ. ಆದ್ರೆ ಪೌಲ ಈ ಒಗ್ಗಟ್ಟನ್ನ ಕಾಪಾಡ್ಕೊಳ್ಳಬೇಕು, ಅದಕ್ಕಾಗಿ ಶ್ರಮ ಪಡಬೇಕು ಅಂತ ಹೇಳ್ತಿದ್ದಾನೆ. ಇದನ್ನ ಯಾರು ಮಾಡಬೇಕು? ಕ್ರೈಸ್ತರಾಗಿರೋ ಪ್ರತಿಯೊಬ್ರು ಮಾಡಬೇಕು.
ಇದನ್ನ ಚೆನ್ನಾಗಿ ಅರ್ಥಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ನಿಮಗೆ ಒಬ್ರು ಹೊಸ ಕಾರ್ ಗಿಫ್ಟ್ ಕೊಟ್ಟಿದ್ದಾರೆ ಅಂದ್ಕೊಳಿ. ಅದನ್ನ ಚೆನ್ನಾಗಿ ನೋಡ್ಕೊಳೋದು ಯಾರ ಜವಾಬ್ದಾರಿ? ನಿಮ್ಮದೇ ಅಲ್ವಾ? ಅಕಸ್ಮಾತ್ ಅದು ಹಾಳಾದ್ರೆ ಅದಕ್ಕೆ ಯಾರು ಕಾರಣ? ಗಿಫ್ಟ್ ಕೊಟ್ಟೋರು ಕಾರಣ ಅಂತ ಹೇಳೋಕೆ ಆಗುತ್ತಾ? ಇಲ್ಲ. ಅದು ಹಾಳಾದ್ರೆ ನೀವೇ ಕಾರಣ, ಅದನ್ನ ನೋಡ್ಕೊಬೇಕಾಗಿದದ್ದು ನೀವೇ!
ಅದೇ ತರ ಕ್ರೈಸ್ತರಾಗಿ ನಮ್ಮ ಮಧ್ಯೆ ಇರೋ ಒಗ್ಗಟ್ಟು ದೇವರು ನಮಗೆ ಕೊಟ್ಟಿರೋ ಗಿಫ್ಟ್. ಆದ್ರೆ ಅದನ್ನ ಕಾಪಾಡ್ಕೊಳ್ಳೋಕೆ ನಾವು ಪ್ರತಿಯೊಬ್ರೂ ಪ್ರಯತ್ನ ಹಾಕ್ತಾ ಇರಬೇಕು. ನಿಮಗೆ ಒಬ್ಬ ಬ್ರದರ್ ಅಥವಾ ಸಿಸ್ಟರ್ ಜೊತೆ ಮನಸ್ತಾಪ ಆಗಿದೆ, ಅವ್ರ ಜೊತೆ ನೀವು ಸರಿಯಾಗಿ ಮಾತಾಡ್ತಿಲ್ಲ ಅಂದ್ರೆ ನಿಮ್ಮನ್ನೇ ನೀವು ಹೀಗೆ ಕೇಳ್ಕೊಳ್ಳಿ, ‘ಅವ್ರ ಜೊತೆ ಮತ್ತೆ ಒಗ್ಗಟ್ಟಿಂದ ಇರೋಕೆ, ಶಾಂತಿಯಿಂದ ಇರೋಕೆ ನನ್ನ ಕೈಲಾಗಿರೋ ಎಲ್ಲಾ ಪ್ರಯತ್ನನ ನಾನು ಹಾಕ್ತಿದ್ದೀನಾ?’
ಒಗ್ಗಟ್ಟನ್ನ ಕಾಪಾಡ್ಕೊಳ್ಳೋಕೆ ‘ಶ್ರಮ ಪಡಿ’
ಒಗ್ಗಟ್ಟನ್ನ ಕಾಪಾಡ್ಕೊಳ್ಳೋದು ಹೇಳಿದಷ್ಟು ಸುಲಭ ಅಲ್ಲ. ಅದಕ್ಕೇ ಪೌಲ, ‘ಅದನ್ನ ಕಾಪಾಡ್ಕೊಳ್ಳೋಕೆ ಶ್ರಮ ಪಡ್ತಾ ಇರಿ’ ಅಂತ ಹೇಳಿದ. ಅದ್ರಲ್ಲೂ ಯಾರಾದ್ರೂ ನಮ್ಮ ಮನಸ್ಸಿಗೆ ನೋವು ಮಾಡಿಬಿಟ್ಟಿದ್ರೆ ಇದನ್ನ ಮಾಡೋದು ತುಂಬ ಕಷ್ಟ. ಒಗ್ಗಟ್ಟನ್ನ ಕಾಪಾಡ್ಕೊಬೇಕು ಅಂದ್ರೆ ನಮಗೆ ಯಾರಾದ್ರೂ ನೋವು ಮಾಡಿದ್ರೆ ಪ್ರತಿಸಲ ಅವ್ರ ಹತ್ರ ನೇರವಾಗಿ ಅದ್ರ ಬಗ್ಗೆ ಮಾತಾಡಿ ಬಗೆಹರಿಸಬೇಕು ಅಂತಾನಾ? ಹಾಗೇನಿಲ್ಲ. ಅವ್ರ ಹತ್ರ ಮಾತಾಡೋ ಮುಂಚೆ ನೀವು ನಿಮ್ಮನ್ನ ಹೀಗೆ ಕೇಳ್ಕೊಳ್ಳಿ, ‘ಆ ವ್ಯಕ್ತಿ ಹತ್ರ ನಾನು ಹೋಗಿ ಆ ಸಮಸ್ಯೆ ಬಗ್ಗೆ ಮಾತಾಡಿದ್ರೆ ಸಮಸ್ಯೆ ಬಗೆಹರಿಯುತ್ತಾ ಅಥವಾ ಇನ್ನೂ ದೊಡ್ಡದಾಗುತ್ತಾ?’ ಕೆಲವೊಮ್ಮೆ ಆ ವ್ಯಕ್ತಿ ಮಾಡಿರೋ ಸಮಸ್ಯೆನ ಮರೆತು ಅವನನ್ನ ಕ್ಷಮಿಸೋದು ಒಳ್ಳೇದಾಗಿರುತ್ತೆ.—ಜ್ಞಾನೋ. 19:11; ಮಾರ್ಕ 11:25.
ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ, ‘ಆ ವ್ಯಕ್ತಿ ಹತ್ರ ನಾನು ಹೋಗಿ ಆ ಸಮಸ್ಯೆ ಬಗ್ಗೆ ಮಾತಾಡಿದ್ರೆ ಸಮಸ್ಯೆ ಬಗೆಹರಿಯುತ್ತಾ ಅಥವಾ ಇನ್ನೂ ದೊಡ್ಡದಾಗುತ್ತಾ?’
ಪೌಲ ಹೇಳಿದ ತರ ನಾವೆಲ್ರೂ ‘ಪ್ರೀತಿಯಿಂದ ಒಬ್ರನ್ನೊಬ್ರು ಸಹಿಸ್ಕೊಳ್ಳೋಣ.’ (ಎಫೆ. 4:2) ಪ್ರೀತಿಯಿಂದ ಸಹಿಸ್ಕೊಳ್ಳೋದು ಅಂದ್ರೆ ‘ಒಬ್ಬ ವ್ಯಕ್ತಿ ಇರೋ ತರಾನೇ ಅವನನ್ನ ಒಪ್ಕೊಳ್ಳೋದು’ ಅಂತ ಒಂದು ರೆಫರೆನ್ಸ್ ಹೇಳುತ್ತೆ. ಇದ್ರರ್ಥ ನಾವು ಪಾಪಿಗಳು, ಅಪರಿಪೂರ್ಣರು ಆಗಿರೋ ತರಾನೇ ನಮ್ಮ ಸಹೋದರ ಸಹೋದರಿಯರು ಪಾಪಿಗಳೇ, ಅವರೂ ಅಪರಿಪೂರ್ಣರೇ ಅಂತ ಒಪ್ಕೊಳ್ಳೋದಾಗಿದೆ. ನಿಜ, ನಾವೆಲ್ರೂ “ಹೊಸ ವ್ಯಕ್ತಿತ್ವವನ್ನ” ಹಾಕೊಳ್ಳೋಕೆ ಪ್ರಯತ್ನ ಪಡ್ತಾನೇ ಇದ್ದೀವಿ. (ಎಫೆ. 4:23, 24) ಆದ್ರೆ ಯಾರ ಕೈಯಲ್ಲೂ ಅದನ್ನ ಸಂಪೂರ್ಣವಾಗಿ ಹಾಕೊಳ್ಳೋಕೆ ಆಗಲ್ಲ. (ರೋಮ. 3:23) ಈ ವಿಷ್ಯನ ನಾವು ಅರ್ಥ ಮಾಡ್ಕೊಂಡ್ರೆ ಒಬ್ರನ್ನೊಬ್ರು ಸಹಿಸ್ಕೊಳ್ತೀವಿ ಮತ್ತು ಉದಾರವಾಗಿ ಕ್ಷಮಿಸ್ತೀವಿ. ಆಗ ಎಲ್ರ ಜೊತೆ ‘ಒಂದಾಗಿ ಒಗ್ಗಟ್ಟಿಂದ’ ಇರೋಕಾಗುತ್ತೆ.
ಬೇರೆಯವರು ನಮಗೆ ಮಾಡಿರೋ ನೋವಲ್ಲೇ ಕೊರಗದೇ ಆ ತಪ್ಪನ್ನ ಮರೆತು ಅವ್ರನ್ನ ಕ್ಷಮಿಸಿದ್ರೆ ನಾವು ‘ಶಾಂತಿಯಿಂದ ಇದ್ದು ಒಗ್ಗಟ್ಟನ್ನ’ ಕಾಪಾಡ್ಕೊಳ್ಳೋಕೆ ಆಗುತ್ತೆ. ಎಫೆಸ 4:3ರಲ್ಲಿ ‘ಒಗ್ಗಟ್ಟನ್ನ ಕಾಪಾಡ್ಕೊಳ್ಳಿ’ ಅನ್ನೋದಕ್ಕೆ ಕೊಲೊಸ್ಸೆ 2:19ರಲ್ಲಿ “ಸ್ನಾಯುಗಳು” ಅನ್ನೋ ಗ್ರೀಕ್ ಪದನ ಬಳಸಿದ್ದಾರೆ. ಇದು ದೇಹದ ಮೂಳೆಗಳು ಒಂದಕ್ಕೊಂದು ಸೇರಿಕೊಳ್ಳೋಕೆ ಸಹಾಯ ಮಾಡುತ್ತೆ. ಸ್ನಾಯುಗಳ ತರನೇ ನಮ್ಮಲ್ಲಿರೋ ಶಾಂತಿ ಅನ್ನೋ ಗುಣ ಸಭೆಯಲ್ಲಿ ಮನಸ್ತಾಪದ ವಿಷ್ಯಗಳು ನಡೆದ್ರೂ ಅದನ್ನ ಸಹಿಸ್ಕೊಂಡು ಎಲ್ಲರ ಜೊತೆ ಒಗ್ಗಟ್ಟಿಂದ ಇರೋಕೆ ಸಹಾಯ ಮಾಡುತ್ತೆ.
ಹಾಗಾಗಿ ಯಾರಾದ್ರೂ ನಿಮಗೆ ನೋವು, ಕಿರಿಕಿರಿ, ಬೇಜಾರು ಮಾಡಿದ್ರೆ ಅವ್ರಲ್ಲಿ ತಪ್ಪನ್ನ ಹುಡುಕಬೇಡಿ. ಬದಲಿಗೆ ಅವರ ಜೊತೆ ದಯೆಯಿಂದ ನಡ್ಕೊಳ್ಳಿ. (ಕೊಲೊ. 3:12) ನಾವೆಲ್ರೂ ಅಪರಿಪೂರ್ಣರು ಅಂತ ನೆನಪಿಡಿ. ಹಾಗಾಗಿ ಒಂದಲ್ಲ ಒಂದು ಸಮಯದಲ್ಲಿ ನೀವೂ ಯಾರಿಗಾದ್ರೂ ನೋವು ಮಾಡಿರ್ತೀರ. ಈ ವಿಷ್ಯನ ನೀವು ನೆನಪಲ್ಲಿಟ್ರೆ ‘ಶಾಂತಿಯಿಂದ ಇದ್ದು ಒಗ್ಗಟನ್ನ ಕಾಪಾಡ್ಕೊಳ್ಳೋಕೆ’ ಆಗುತ್ತೆ.