ಪಾಠ 94
ಶಿಷ್ಯರ ಮೇಲೆ ಪವಿತ್ರಶಕ್ತಿ ಬಂತು
ಯೇಸು ಸ್ವರ್ಗಕ್ಕೆ ಹೋಗಿ ಹತ್ತು ದಿನಗಳಾದ ಮೇಲೆ ಶಿಷ್ಯರ ಮೇಲೆ ಪವಿತ್ರಶಕ್ತಿ ಬಂತು. ಅದು ನಡೆದದ್ದು ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದಂದು. ಆ ದಿನ, ಜನರು ಹಬ್ಬ ಮಾಡಲು ಬೇರೆಬೇರೆ ಊರುಗಳಿಂದ ಯೆರೂಸಲೇಮಿಗೆ ಬಂದಿದ್ದರು. ಯೇಸುವಿನ ಸುಮಾರು 120 ಶಿಷ್ಯರು ಒಂದು ಮನೆಯ ಮೇಲಿನ ಕೋಣೆಯಲ್ಲಿ ಕೂಡಿಬಂದಿದ್ದರು. ಇದ್ದಕ್ಕಿದ್ದಂತೆ ಒಂದು ಅದ್ಭುತ ನಡೆಯಿತು. ಶಿಷ್ಯರಲ್ಲಿ ಪ್ರತಿಯೊಬ್ಬರ ತಲೆಯ ಮೇಲೆ ಬೆಂಕಿಯ ಜ್ವಾಲೆ ತರ ಏನೋ ಕಾಣಿಸಿತು! ಆಗ ಅವರು ಬೇರೆಬೇರೆ ಭಾಷೆಗಳಲ್ಲಿ ಮಾತಾಡಲು ಆರಂಭಿಸಿದರು. ಆಗ ಮನೆಯಲ್ಲಿ ಜೋರಾಗಿ ಗಾಳಿ ಬೀಸುವ ಶಬ್ದ ಕೇಳಿಸಿತು.
ಬೇರೆಬೇರೆ ಊರಿನಿಂದ ಬಂದವರು ಆ ಶಬ್ದ ಕೇಳಿ ಏನಾಯ್ತು ಎಂದು ನೋಡಲು ಆ ಮನೆಗೆ ಓಡೋಡಿ ಬಂದರು. ಬೇರೆಬೇರೆ ಭಾಷೆಗಳಲ್ಲಿ ಮಾತಾಡುತ್ತಾ ಇರುವ ಶಿಷ್ಯರನ್ನು ನೋಡಿ ಅವರಿಗೆ ತುಂಬ ಆಶ್ಚರ್ಯ ಆಯಿತು. ‘ಇದು ಹೇಗೆ ಸಾಧ್ಯ! ಇವ್ರೆಲ್ಲ ಗಲಿಲಾಯದವರು ಅಲ್ವಾ? ಇವರು ಹೇಗೆ ನಮ್ಮ ಭಾಷೆಯಲ್ಲಿ ಮಾತಾಡ್ತಾ ಇದ್ದಾರೆ’ ಅಂತ ಅವರವರೇ ಮಾತಾಡಿಕೊಂಡರು.
ಆಗ ಪೇತ್ರ ಮತ್ತು ಇತರ ಅಪೊಸ್ತಲರು ಜನರ ಮುಂದೆ ಬಂದರು. ಯೇಸುವನ್ನು ಹೇಗೆ ಕೊಲ್ಲಲಾಯಿತು ಮತ್ತು ಹೇಗೆ ಯೆಹೋವನು ಅವನನ್ನು ಮತ್ತೆ ಬದುಕಿಸಿದನು ಎಂದು ಪೇತ್ರ ಜನರಿಗೆ ಹೇಳಿದನು. ‘ಈಗ ಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಕೂತಿದ್ದಾನೆ ಮತ್ತು ಅವನು ಮೊದಲೇ ಹೇಳಿದಂತೆ ಪವಿತ್ರಶಕ್ತಿಯನ್ನು ಸುರಿಸಿದ್ದಾನೆ. ಆದ್ದರಿಂದಲೇ ನೀವು ಈ ಅದ್ಭುತಗಳನ್ನು ನೋಡ್ತಾ ಇದ್ದೀರ, ಕೇಳ್ತಾ ಇದ್ದೀರ’ ಎಂದನು.
ಪೇತ್ರನ ಮಾತು ಅವರ ಮನಮುಟ್ಟಿತು. ಅದಕ್ಕೆ ಅವರು “ನಾವೇನು ಮಾಡಬೇಕು?” ಎಂದು ಕೇಳಿದರು. ‘ಪಶ್ಚಾತ್ತಾಪಪಡಿ. ನಿಮ್ಮ ಪಾಪಗಳಿಗೆ ಕ್ಷಮೆ ಸಿಗಬೇಕಾದ್ರೆ ನಿಮ್ಮಲ್ಲಿ ಪ್ರತಿಯೊಬ್ರು ಯೇಸು ಕ್ರಿಸ್ತನ ಹೆಸ್ರಲ್ಲಿ ದೀಕ್ಷಾಸ್ನಾನ ತಗೊಳ್ಳಿ. ಆಗ ನಿಮಗೆ ದೇವರು ಉಚಿತವಾಗಿ ಕೊಡೋ ಪವಿತ್ರಶಕ್ತಿ ಸಿಗುತ್ತೆ’ ಎಂದನು ಪೇತ್ರ. ಅದೇ ದಿನ, ಸುಮಾರು ಮೂರು ಸಾವಿರ ಜನರು ದೀಕ್ಷಾಸ್ನಾನ ಪಡೆದುಕೊಂಡರು. ಅಂದಿನಿಂದ ಯೆರೂಸಲೇಮಿನಲ್ಲಿ ಶಿಷ್ಯರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಯೇಸು ಆಜ್ಞಾಪಿಸಿದ ಎಲ್ಲಾ ವಿಷಯಗಳನ್ನು ಶಿಷ್ಯರಿಗೆ ಕಲಿಸಬೇಕಿತ್ತು. ಅದಕ್ಕಾಗಿ ಅಪೊಸ್ತಲರು ಪವಿತ್ರಶಕ್ತಿಯ ಸಹಾಯದಿಂದ ತುಂಬ ಸಭೆಗಳನ್ನು ಸ್ಥಾಪಿಸಿದರು.
“ಯೇಸುನೇ ಪ್ರಭು ಅಂತ ಎಲ್ರಿಗೂ ಸಾರಿ ಹೇಳಿದ್ರೆ ಮತ್ತು ದೇವರು ಆತನಿಗೆ ಮತ್ತೆ ಜೀವ ಕೊಟ್ಟನು ಅಂತ ನಿನ್ನ ಹೃದಯದಲ್ಲಿ ನಂಬಿಕೆ ಇಟ್ರೆ ನಿನಗೆ ರಕ್ಷಣೆ ಸಿಗುತ್ತೆ.”—ರೋಮನ್ನರಿಗೆ 10:9