ಪಾಠ 97
ಕೊರ್ನೇಲ್ಯನು ಪವಿತ್ರಶಕ್ತಿ ಪಡೆದನು
ಕೈಸರೈಯದಲ್ಲಿ ಒಬ್ಬ ಪ್ರಮುಖ ರೋಮನ್ ಸೇನಾಧಿಕಾರಿ ಇದ್ದನು. ಅವನ ಹೆಸರು ಕೊರ್ನೇಲ್ಯ. ಅವನು ಯೆಹೂದ್ಯನಲ್ಲದಿದ್ದರೂ, ಯೆಹೂದ್ಯರು ಅವನನ್ನು ತುಂಬ ಗೌರವಿಸುತ್ತಿದ್ದರು. ಅವನು ಬಡ ಜನರಿಗೆ ಮತ್ತು ಕಷ್ಟದಲ್ಲಿರುವವರಿಗೆ ಉದಾರವಾಗಿ ಸಹಾಯ ಮಾಡುತ್ತಿದ್ದನು. ಕೊರ್ನೇಲ್ಯನು ಯೆಹೋವನ ಮೇಲೆ ನಂಬಿಕೆಯಿಟ್ಟಿದ್ದನು ಮತ್ತು ಯಾವಾಗಲೂ ಪ್ರಾರ್ಥಿಸುತ್ತಿದ್ದನು. ಒಂದು ದಿನ, ದೇವದೂತನೊಬ್ಬ ಕೊರ್ನೇಲ್ಯನಿಗೆ ಕಾಣಿಸಿಕೊಂಡು, ‘ನಿನ್ನ ಪ್ರಾರ್ಥನೆ ದೇವ್ರಿಗೆ ಕೇಳಿಸಿದೆ. ಈಗ ಸ್ವಲ್ಪ ಜನ್ರನ್ನ ಯೊಪ್ಪಕ್ಕೆ ಕಳಿಸಿ ಪೇತ್ರನಿಗೆ ನಿನ್ನ ಹತ್ರ ಬರೋಕೆ ಹೇಳು’ ಎಂದನು. ತಕ್ಷಣ, ಕೊರ್ನೇಲ್ಯನು ಮೂವರು ಸೇವಕರನ್ನು ಯೊಪ್ಪಕ್ಕೆ ಕಳುಹಿಸಿದನು. ಅದು ದಕ್ಷಿಣದಲ್ಲಿ 50 ಕಿಲೊಮೀಟರ್ ದೂರದಲ್ಲಿತ್ತು.
ಅದೇ ವೇಳೆ ಯೊಪ್ಪದಲ್ಲಿ, ಪೇತ್ರನು ಒಂದು ದರ್ಶನವನ್ನು ನೋಡಿದನು. ಅದರಲ್ಲಿ ಯೆಹೂದ್ಯರಿಗೆ ತಿನ್ನಬಾರದೆಂದು ಹೇಳಿದ ಪ್ರಾಣಿಗಳನ್ನು ಕಂಡನು ಮತ್ತು ಅದನ್ನು ತಿನ್ನುವಂತೆ ಅವನಿಗೆ ಹೇಳಲಾಯಿತು. ಅದಕ್ಕೆ ಪೇತ್ರನು, ‘ಅಪವಿತ್ರ ಆಗಿರೋದನ್ನ ನಾನು ಯಾವತ್ತೂ ತಿಂದಿಲ್ಲ’ ಎಂದನು. ಆಗ ಆ ಧ್ವನಿ ಅವನಿಗೆ, ‘ದೇವರು ಶುದ್ಧ ಮಾಡಿರೋದನ್ನ ನೀನು ಅಶುದ್ಧ ಅನ್ನೋದನ್ನ ನಿಲ್ಲಿಸು’ ಎಂದಿತು. ಅಲ್ಲದೆ, ‘ಮನೆಯ ಬಾಗಿಲ ಹತ್ರ ಮೂರು ಜನ ನಿಂತಿದ್ದಾರೆ. ನೀನು ಅವ್ರ ಜೊತೆ ಹೋಗು’ ಎಂದೂ ಹೇಳಿತು. ಪೇತ್ರನು ಮನೆಯ ಬಾಗಿಲ ಹತ್ತಿರ ಹೋಗಿ, ಅವರು ಬಂದಿರುವುದು ಯಾಕೆಂದು ಕೇಳಿದನು. ಅದಕ್ಕೆ ಅವರು, ‘ರೋಮನ್ ಸೇನಾಧಿಕಾರಿ ಕೊರ್ನೇಲ್ಯ ನಮ್ಮನ್ನ ಕಳಿಸಿದ್ದಾನೆ. ನೀನು ಕೈಸರೈಯದಲ್ಲಿರೋ ಅವನ ಮನೆಗೆ ಬರಬೇಕು’ ಎಂದರು. ಆ ರಾತ್ರಿ ತನ್ನ ಮನೆಯಲ್ಲಿ ಉಳಿದುಕೊಳ್ಳುವಂತೆ ಪೇತ್ರನು ಅವರಿಗೆ ಹೇಳಿದನು. ಮರುದಿನ, ಯೊಪ್ಪದಲ್ಲಿದ್ದ ಕೆಲವು ಸಹೋದರರನ್ನು ಕರೆದುಕೊಂಡು ಪೇತ್ರನು ಆ ಪುರುಷರೊಂದಿಗೆ ಕೈಸರೈಯಕ್ಕೆ ಹೋದನು.
ಪೇತ್ರನನ್ನು ನೋಡಿದಾಗ ಕೊರ್ನೇಲ್ಯನು ಅವನ ಕಾಲಿಗೆ ಬಿದ್ದನು. ಆಗ ಪೇತ್ರನು, ‘ಎದ್ದೇಳು, ನಾನೂ ನಿನ್ನ ತರ ಒಬ್ಬ ಮನುಷ್ಯ ಅಷ್ಟೇ! ಯೆಹೂದ್ಯರು ಬೇರೆ ಜನಾಂಗದವರ ಮನೆಗೆ ಹೋಗದಿದ್ರೂ ನಾನು ನಿನ್ನ ಮನೆಗೆ ಬರುವಂತೆ ದೇವರು ನನಗೆ ಹೇಳಿದನು. ದಯವಿಟ್ಟು ನನ್ನನ್ನ ಯಾಕೆ ಕರಿಸಿದೆ ಅಂತ ಹೇಳು’ ಎಂದನು.
ಅದಕ್ಕೆ ಕೊರ್ನೇಲ್ಯನು, ‘ನಾಲ್ಕು ದಿನಗಳ ಹಿಂದೆ ನಾನು ದೇವ್ರಿಗೆ ಪ್ರಾರ್ಥಿಸ್ತಾ ಇದ್ದಾಗ ಒಬ್ಬ ದೇವದೂತ ನನಗೆ ಕಾಣಿಸಿಕೊಂಡು ನಿನ್ನನ್ನ ಕರಿಸುವಂತೆ ಹೇಳಿದನು. ದಯವಿಟ್ಟು ಯೆಹೋವನ ಬಗ್ಗೆ ನಮಗೆ ಕಲಿಸು’ ಎಂದನು. ಆಗ ಪೇತ್ರನು, ‘ದೇವರು ಭೇದಭಾವ ಮಾಡಲ್ಲ ಅಂತ ಈಗ ಚೆನ್ನಾಗಿ ಅರ್ಥ ಆಗಿದೆ. ಆತನನ್ನ ಆರಾಧಿಸೋಕೆ ಇಷ್ಟಪಡೋ ಯಾರನ್ನಾದ್ರೂ ಆತನು ಆರಿಸ್ಕೊಳ್ತಾನೆ’ ಎಂದನು. ಪೇತ್ರನು ಯೇಸುವಿನ ಬಗ್ಗೆ ಅನೇಕ ವಿಷಯಗಳನ್ನು ಅವರಿಗೆ ಕಲಿಸಿದನು. ನಂತರ, ಕೊರ್ನೇಲ್ಯನ ಮೇಲೆ ಮತ್ತು ಅವನೊಂದಿಗೆ ಇದ್ದ ಜನರ ಮೇಲೆ ಪವಿತ್ರಶಕ್ತಿ ಬಂತು. ಆಗ, ಎಲ್ಲರೂ ದೀಕ್ಷಾಸ್ನಾನ ಪಡೆದುಕೊಂಡರು.
“ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.”—ಅಪೊಸ್ತಲರ ಕಾರ್ಯ 10:35.