ವಾಚಕರಿಂದ ಪ್ರಶ್ನೆಗಳು
ಪಾರಿಭಾಷಿಕವಾಗಿ ಮಾತಾಡುವುದಾದರೆ, “ಬೇರೆ ಕುರಿಗಳು” ಮತ್ತು “ಮಹಾ ಸಮೂಹ” ಎಂಬ ಬೈಬಲಿನ ಪದಗಳ ನಡುವೆ ಏನಾದರೂ ಭಿನ್ನತೆ ಇದೆಯೋ?
ಹೌದು, ಆದರೂ ಶಬ್ದ ಬಳಕೆಯ ಕುರಿತಾಗಿ ಅನಾವಶ್ಯಕವಾಗಿ ನಾವು ಸೂಕ್ಷ್ಮಸಂವೇದಿಗಳಾಗಿರುವ ಅಗತ್ಯವಿಲ್ಲ ಅಥವಾ ಯಾರಾದರೂ ಈ ಪದಗಳನ್ನು ಪರ್ಯಾಯವಾಗಿ ಬಳಸಿದರೆ, ನಾವು ಕ್ಷೋಭೆಗೊಳ್ಳುವ ಅಗತ್ಯವೂ ಇಲ್ಲ.
ಈ ಪದಗಳನ್ನು ಕಂಡುಕೊಳ್ಳುವ ಭಾಗಗಳೊಂದಿಗೆ ಹೆಚ್ಚಿನ ಕ್ರೈಸ್ತರು ಪರಿಚಿತರಾಗಿದ್ದಾರೆ. ಒಂದು, ಯೋಹಾನ 10:16 ಆಗಿದೆ. ಅಲ್ಲಿ ಯೇಸು ಹೇಳಿದ್ದು: “ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು; ಅವು ನನ್ನ ಸರ್ವಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು.” ಇನ್ನೊಂದು ಅಭಿವ್ಯಕ್ತಿಯಾದ “ಮಹಾ ಸಮೂಹ,” ಪ್ರಕಟನೆ 7:9 ರಲ್ಲಿ ಕಂಡುಬರುತ್ತದೆ. ನಾವು ಓದುವುದು: “ಇವುಗಳಾದ ಮೇಲೆ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡೆನು. ಅವರು ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.”
ನಾವು ಮೊದಲು ಯೋಹಾನ 10:16ನ್ನು ಪರಿಗಣಿಸೋಣ. ಕುರಿಗಳು ಯಾರಾಗಿದ್ದಾರೆ? ಒಳ್ಳೇದು, ಯೇಸುವಿನ ನಿಷ್ಠೆಯ ಎಲ್ಲಾ ಹಿಂಬಾಲಕರು “ಕುರಿ” ಗಳೋಪಾದಿ ಸೂಚಿಸಲ್ಪಟ್ಟಿದ್ದಾರೆಂಬುದನ್ನು ನೆನಪಿನಲ್ಲಿಡುವುದು ಪ್ರಯೋಜನಕಾರಿಯಾಗಿರುವುದು. ಲೂಕ 12:32 ರಲ್ಲಿ, ತನ್ನ ಶಿಷ್ಯರಲ್ಲಿ ಸ್ವರ್ಗಕ್ಕೆ ಹೋಗುವವರನ್ನು ಅವನು ‘ಚಿಕ್ಕ ಹಿಂಡು’ ಎಂದು ಕರೆದನು. ಯಾವುದರ ಹಿಂಡು? ಕುರಿಗಳ ಒಂದು ಹಿಂಡು. ‘ಚಿಕ್ಕ ಹಿಂಡಿನ’ “ಕುರಿಗಳು” ಸ್ವರ್ಗದಲ್ಲಿನ ರಾಜ್ಯದ ಭಾಗವಾಗುವರು. ಆದಾಗ್ಯೂ, ಭಿನ್ನವಾದ ನಿರೀಕ್ಷೆಯಿರುವ ಇತರರು ಇದ್ದಾರೆ, ಅವರನ್ನೂ ಸಹ ಯೇಸು ಕುರಿಗಳೋಪಾದಿ ದೃಷ್ಟಿಸುತ್ತಾನೆ.
ನಾವಿದನ್ನು ಯೋಹಾನ ಅಧ್ಯಾಯ 10 ರಲ್ಲಿ ನೋಡಬಹುದು. ಪರಲೋಕದ ಜೀವಿತಕ್ಕೆ ತಾನು ಕರೆಯಲಿರುವ ತನ್ನ ಅಪೊಸ್ತಲರಂತಹ ಕುರಿಗಳ ಕುರಿತು ಮಾತಾಡಿದ ಅನಂತರ, ಯೇಸು 16 ನೆಯ ವಚನದಲ್ಲಿ ಕೂಡಿಸಿದ್ದು: “ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು.” ಐಹಿಕ ಪ್ರತೀಕ್ಷೆಗಳಿರುವ ಜನರ ಕುರಿತಾಗಿ ಯೇಸು ಇಲ್ಲಿ ಮಾತಾಡುತ್ತಿದ್ದಾನೆಂದು ಯೆಹೋವನ ಸಾಕ್ಷಿಗಳು ಬಹಳ ಸಮಯದಿಂದ ಗುರುತಿಸಿದ್ದಾರೆ. ಕ್ರೈಸ್ತ-ಪೂರ್ವ ಸಮಯಗಳ ಅಬ್ರಹಾಮ, ಸಾರ, ನೋಹ, ಮತ್ತು ಮಲಾಕಿಯರಂತಹ ಅನೇಕ ನಂಬಿಗಸ್ತರಿಗೆ ಅಂತಹ ಪ್ರತೀಕ್ಷೆಗಳಿದ್ದವು. ಆದುದರಿಂದ ಯೋಹಾನ 10:16ರ “ಬೇರೆ ಕುರಿಗಳ” ಭಾಗವಾಗಿ ನಾವು ಯುಕ್ತವಾಗಿಯೇ ಅವರನ್ನು ಸೇರಿಸಬಹುದು. ಸಹಸ್ರ ವರುಷಗಳ ಆಳಿಕೆಯ ಸಮಯದಲ್ಲಿ ಇಂತಹ ನಂಬಿಗಸ್ತ ಕ್ರೈಸ್ತ-ಪೂರ್ವ ಸಾಕ್ಷಿಗಳು ಪುನರುತ್ಥಾನಗೊಳಿಸಲ್ಪಡುವರು, ಮತ್ತು ಅನಂತರ ಕ್ರಿಸ್ತ ಯೇಸುವಿನ ಕುರಿತು ಕಲಿಯುವರು ಮತ್ತು ಅವನನ್ನು ಸ್ವೀಕರಿಸುತ್ತಾ “ಒಳ್ಳೇ ಕುರುಬ”ನ “ಬೇರೆ ಕುರಿಗಳು” ಆಗುವರು.
ಸ್ವರ್ಗೀಯ ವರ್ಗದವರ ಸಾಮಾನ್ಯ ಕರೆಯು ಕೊನೆಗೊಂಡಂದಿನಿಂದ, ಲಕ್ಷಾಂತರ ಮಂದಿ ಕ್ರೈಸ್ತರಾಗಿದ್ದಾರೆ ಎಂದು ಸಹ ನಾವು ತಿಳಿದಿದ್ದೇವೆ. ಇವರು ಕೂಡ ಯೋಗ್ಯವಾಗಿಯೇ “ಬೇರೆ ಕುರಿಗಳು” ಎಂದು ಹೇಳಲ್ಪಡುತ್ತಾರೆ, ಯಾಕಂದರೆ ಅವರು “ಚಿಕ್ಕ ಹಿಂಡಿನ” ಭಾಗವಾಗಿರುವುದಿಲ್ಲ. ಬದಲಾಗಿ, ಇಂದು ಬೇರೆ ಕುರಿಗಳು, ಐಹಿಕ ಪ್ರಮೋದವನವೊಂದರೊಳಗೆ ಜೀವಿಸುತ್ತಾ ಮುಂದುವರಿಯುವುದನ್ನು ಮುನ್ನೋಡುತ್ತಾರೆ.
ಈಗ, ಪ್ರಕಟನೆ 7:9 ರಲ್ಲಿ ತಿಳಿಸಲ್ಪಟ್ಟಿರುವ “ಮಹಾ ಸಮೂಹ”ದ ಗುರುತಿನ ಕುರಿತು ಏನು ಹೇಳಲ್ಪಡಸಾಧ್ಯವಿದೆ? ಒಳ್ಳೇದು, ವಚನ 13ಮತ್ತು “ಇವರು ಯಾರು? ಎಲ್ಲಿಂದ ಬಂದರು?” ಎಂಬ ಪ್ರಶ್ನೆಯನ್ನು ನೋಡಿರಿ. ನಾವು ಉತ್ತರವನ್ನು ಪ್ರಕಟನೆ 7:14 ರಲ್ಲಿ ಕಂಡುಕೊಳ್ಳುತ್ತೇವೆ: “ಇವರು ಆ ಮಹಾ ಹಿಂಸೆಯನ್ನು (ಸಂಕಟವನ್ನು NW) ಅನುಭವಿಸಿ ಬಂದವರು.” ಆದುದರಿಂದ “ಮಹಾ ಸಮೂಹ”ವು ಸಂಕಟದಿಂದ, ಹೊರಬಂದವರಿಂದ, ಯಾ ಪಾರಾದವರಿಂದ ಉಂಟುಮಾಡಲ್ಪಡುತ್ತದೆ. ವಚನ 17 ಹೇಳುವಂತೆ, ಅವರು ಭೂಮಿಯ ಮೇಲೆ ‘ಜೀವಜಲದ ಒರತೆಗಳ ಬಳಿಗೆ ನಡಿಸಲ್ಪಡುತ್ತಾರೆ.’
ಆದರೂ, ಇವರು ಮಹಾ ಸಂಕಟವನ್ನು ಪಾರಾಗಬೇಕಾದರೆ, ಆಗಲೇ ತಮ್ಮ ನಿಲುವಂಗಿಗಳನ್ನು ಕುರಿಮರಿಯ ರಕ್ತದಲ್ಲಿ ತೊಳೆದುಕೊಂಡು ಸತ್ಯಾರಾಧಕರಾಗಬೇಕು ಎಂಬುದು ಗ್ರಾಹ್ಯ. ಆದಕಾರಣ, ಪ್ರಕಟನೆ 7:9 ರಲ್ಲಿ ಈ ಸಮೂಹವನ್ನು ಸಂಕಟದ ಅನಂತರ ಎಂದು ವರ್ಣಿಸಿದರೂ, ಮಹಾ ಸಂಕಟವು ಸುಳ್ಳು ಧರ್ಮದ ಮೇಲೆ ರಾಷ್ಟ್ರಗಳ ಆಕ್ರಮಣದೊಂದಿಗೆ ಪ್ರಾರಂಭಿಸುವ ಮೊದಲು, ಈಗಲೇ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸುವ ಐಹಿಕ ನಿರೀಕ್ಷೆಗಳಿರುವ ಎಲ್ಲರಿಗೂ “ಮಹಾ ಸಮೂಹ” ಶಬ್ದವನ್ನು ಅನ್ವಯಿಸಸಾಧ್ಯವಿದೆ.
ಸಾರಾಂಶದಲ್ಲಿ, “ಬೇರೆ ಕುರಿಗಳು” ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯಿರುವ ದೇವರ ಎಲ್ಲಾ ಸೇವಕರನ್ನು ಒಳಗೂಡಿಸುವ ಒಂದು ಹೆಚ್ಚು ವಿಶಾಲವಾದ ಪದವೆಂದು ನಾವು ನೆನಪಿನಲ್ಲಿಡಬಹುದು. ಆಸನ್ನವಾಗಿರುವ ಮಹಾ ಸಂಕಟವನ್ನು ಜೀವಂತವಾಗಿ ಪಾರಾಗುವ ನಿರೀಕ್ಷೆಯಿರುವ ಒಂದು “ಮಹಾ ಸಮೂಹ” ವಾಗಿ ಜೊತೆಗೂಡಿಸಲ್ಪಡುವ ಇಂದು ಜೀವಿಸುತ್ತಿರುವ ಕುರಿಗಳಂತಹವರ ಸೀಮಿತ ವರ್ಗವನ್ನು ಅದು ಒಳಗೊಳ್ಳುತ್ತದೆ. ಇಂದು ಜೀವಿಸುತ್ತಿರುವ ಆ ನಿಷ್ಠಾವಂತ ಕ್ರೈಸ್ತರಲ್ಲಿ ಹೆಚ್ಚಿನವರು “ಬೇರೆ ಕುರಿಗಳು” ಆಗಿದ್ದಾರೆ ಮತ್ತು “ಮಹಾ ಸಮೂಹ”ದ ಒಂದು ಭಾಗವೂ ಆಗಿದ್ದಾರೆ.
ಈ ಅರ್ಥ ನಿರೂಪಣೆಗಳ ಕುರಿತು ಸ್ಪಷ್ಟವಾಗಿದ ವಿವೇಚನೆಯವರಾಗಿರುವುದು ತಕ್ಕದ್ದಾಗಿದ್ದರೂ, ಅತಿಯಾಗಿ ಶಬ್ದಗಳ ಪ್ರಜ್ಞೆಯುಳ್ಳವರಾಗುವ, ಯಾವುದನ್ನು ಶಬ್ದಗಳ ಟೀಕೆಯೆಂದು ಕರೆಯಬಹುದೋ ಹಾಗಿರುವ ಜರೂರಿ ಇಲ್ಲ ಎಂದು ಪುನಃ ಒಮ್ಮೆ ಹೇಳುವುದು ಪ್ರಯೋಜನಕಾರಿ. “ಶಬ್ದಗಳ ಕುರಿತಾಗಿ ವಾಗ್ವಾದ” ಗಳಲ್ಲಿ ಒಳಗೂಡಿದ್ದ “ಗರ್ವದಲ್ಲಿ ಉಬ್ಬಿ” ಕೊಂಡಿದ್ದ ಕೆಲವರ ಕುರಿತಾಗಿ ಪೌಲನು ಎಚ್ಚರಿಸಿದನು. (1 ತಿಮೊಥೆಯ 6:4, NW) ಪದಗಳ ನಡುವೆ ನಿರ್ದಿಷ್ಟ ವಿಶಿಷ್ಟತೆಗಳನ್ನು ನಾವು ವೈಯಕ್ತಿಕವಾಗಿ ಗುರುತಿಸುವುದಾದರೆ, ಅದು ಒಳ್ಳೆಯದು. ಆದರೂ, ಇನ್ನೊಬ್ಬನು ಬೈಬಲಿನ ಪದಗಳನ್ನು ಅಷ್ಟೊಂದು ನಿಖರವಾಗಿ ಬಳಸದಿದ್ದರೂ, ನಾವು ಬಾಹ್ಯ ಯಾ ಆಂತರಿಕ ರೀತಿಯಲ್ಲಿ ಟೀಕಿಸುವ ಅಗತ್ಯವಿಲ್ಲ.