-
ದೇವರ ಸರ್ಕಾರ ಅಂದರೇನು?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 31
ದೇವರ ಸರ್ಕಾರ ಅಂದರೇನು?
ದೇವರ ಸರ್ಕಾರದ ಬಗ್ಗೆ ಇರೋ ಸಂದೇಶವೇ ಬೈಬಲಿನಲ್ಲಿರೋ ಮುಖ್ಯ ವಿಷಯ. ಯೆಹೋವ ದೇವರು ಭೂಮಿಯನ್ನ ಸೃಷ್ಟಿ ಮಾಡಿದಾಗ ಆತನಿಗೆ ಒಂದು ಉದ್ದೇಶ ಇತ್ತು. ಆ ಉದ್ದೇಶ ಈ ಸರ್ಕಾರದ ಮೂಲಕ ನಿಜ ಆಗಲಿದೆ. ಹಾಗಾದರೆ ದೇವರ ಸರ್ಕಾರ ಅಂದರೇನು? ಅದು ಈಗ ಆಳ್ವಿಕೆ ನಡೆಸುತ್ತಿದೆ ಅಂತ ನಮಗೆ ಹೇಗೆ ಗೊತ್ತು? ಅದು ಈಗಾಗಲೇ ಏನೆಲ್ಲಾ ಮಾಡಿದೆ? ಮುಂದೆ ಏನೆಲ್ಲಾ ಮಾಡಲಿಕ್ಕಿದೆ? ಈ ಪಾಠದಲ್ಲಿ ಮತ್ತು ಮುಂದಿನ ಎರಡು ಪಾಠಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನ ತಿಳಿಯಲಿದ್ದೇವೆ.
1. ದೇವರ ಸರ್ಕಾರ ಅಂದರೇನು ಮತ್ತು ಅದರ ರಾಜ ಯಾರು?
ಯೆಹೋವ ದೇವರು ಏರ್ಪಾಡು ಮಾಡಿರುವ ಸರ್ಕಾರನೇ ದೇವರ ಸರ್ಕಾರ. ಅದರ ರಾಜ ಯೇಸು ಕ್ರಿಸ್ತ. ಆತನು ಸ್ವರ್ಗದಿಂದ ಆಳುತ್ತಾನೆ. (ಮತ್ತಾಯ 4:17; ಯೋಹಾನ 18:36) ಯೇಸು “ರಾಜನಾಗಿ ಸದಾಕಾಲ ಆಳ್ತಾನೆ” ಅಂತ ಬೈಬಲ್ ಹೇಳುತ್ತೆ. (ಲೂಕ 1:32, 33) ಆತನು ಭೂಮಿಯಲ್ಲಿರುವ ಎಲ್ಲರ ಮೇಲೆ ಆಳ್ವಿಕೆ ಮಾಡುತ್ತಾನೆ.
2. ಯೇಸುವಿನ ಜೊತೆ ಯಾರು ಆಳ್ವಿಕೆ ಮಾಡುತ್ತಾರೆ?
ಯೇಸು ಒಬ್ಬನೇ ಆಳ್ವಿಕೆ ಮಾಡಲ್ಲ. ಆತನ ಜೊತೆ ‘ಎಲ್ಲ ಭಾಷೆ, ಜಾತಿ, ದೇಶದಿಂದ ಬಂದವರು ರಾಜರಾಗಿ ಈ ಭೂಮಿಯನ್ನ ಆಳ್ತಾರೆ.’ (ಪ್ರಕಟನೆ 5:9, 10) ಯೇಸುವಿಗೆ ಲಕ್ಷಾಂತರ ಜನ ಶಿಷ್ಯರಿದ್ದಾರೆ. ಅವರೆಲ್ಲರೂ ಸೇರಿ ಭೂಮಿಯನ್ನ ಆಳುತ್ತಾರಾ? ಇಲ್ಲ. 1,44,000 ಜನರು ಮಾತ್ರ ಯೇಸುವಿನ ಜೊತೆ ಸ್ವರ್ಗದಲ್ಲಿ ಆಳುತ್ತಾರೆ. (ಪ್ರಕಟನೆ 14:1-4 ಓದಿ.) ಉಳಿದವರು ಇದೇ ಭೂಮಿಯಲ್ಲಿ ದೇವರ ಸರ್ಕಾರದ ಪ್ರಜೆಗಳಾಗಿರುತ್ತಾರೆ.—ಕೀರ್ತನೆ 37:29.
3. ದೇವರ ಸರ್ಕಾರ ಹೇಗೆ ಮಾನವ ಸರ್ಕಾರಗಳಿಗಿಂತ ಶ್ರೇಷ್ಠವಾಗಿದೆ?
ಮಾನವ ಅಧಿಕಾರಿಗಳು ಒಳ್ಳೇದನ್ನ ಮಾಡೋಕೆ ಪ್ರಯತ್ನಿಸುತ್ತಾರೆ. ಆದರೆ ಅವರು ಅಂದುಕೊಂಡ ಹಾಗೆ ಪ್ರತಿಯೊಂದನ್ನ ಮಾಡೋ ಸಾಮರ್ಥ್ಯ ಅಥವಾ ಶಕ್ತಿ ಅವರಿಗೆ ಇಲ್ಲ. ಅವರ ಆಳ್ವಿಕೆ ಮುಗಿದ ಮೇಲೆ ಇನ್ನೊಂದು ಸರ್ಕಾರ ಆಳ್ವಿಕೆ ಮಾಡುತ್ತೆ. ಅವರು ಸ್ವಾರ್ಥಿಗಳಾಗಿ ಇರಬಹುದು, ಜನರಿಗೆ ಒಳ್ಳೇದನ್ನ ಮಾಡೋಕೆ ಬಯಸದೇ ಇರಬಹುದು. ಆದರೆ ದೇವರ ಸರ್ಕಾರದ ರಾಜ ಯೇಸು ಹಾಗಲ್ಲ. ಆತನ ಅಧಿಕಾರವನ್ನ ಯಾರಿಂದಾನೂ ಕಸಿದುಕೊಳ್ಳೋಕೆ ಆಗಲ್ಲ. ಆತನೇ ಶಾಶ್ವತವಾಗಿ ರಾಜನಾಗಿ ಇರುತ್ತಾನೆ. “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ. ಅದಕ್ಕೆ ನಾಶನೇ ಇಲ್ಲ” ಅಂತ ಬೈಬಲ್ ತಿಳಿಸುತ್ತೆ. (ದಾನಿಯೇಲ 2:44) ಯೇಸು ಇಡೀ ಭೂಮಿಯ ಮೇಲೆ ಆಳ್ವಿಕೆಯನ್ನ ಮಾಡುತ್ತಾನೆ. ಆತನು ಯಾರಿಗೂ ಭೇದಭಾವ ಮಾಡಲ್ಲ. ಪ್ರೀತಿ, ಕರುಣೆ, ನ್ಯಾಯದಿಂದ ನಡೆದುಕೊಳ್ಳುತ್ತಾನೆ ಮತ್ತು ತನ್ನಂತೆಯೇ ನಡೆದುಕೊಳ್ಳಲು ಜನರಿಗೆ ಕಲಿಸುತ್ತಾನೆ.—ಯೆಶಾಯ 11:9 ಓದಿ.
ಹೆಚ್ಚನ್ನ ತಿಳಿಯೋಣ
ದೇವರ ಸರ್ಕಾರ ಎಲ್ಲಾ ಮಾನವ ಸರ್ಕಾರಗಳಿಗಿಂತ ಯಾಕೆ ಶ್ರೇಷ್ಠವಾಗಿದೆ ಅಂತ ತಿಳಿಯಿರಿ.
4. ದೇವರ ಸರ್ಕಾರ ಇಡೀ ಭೂಮಿಯ ಮೇಲೆ ಆಳ್ವಿಕೆ ಮಾಡುತ್ತೆ
ಬೇರೆಲ್ಲಾ ಅಧಿಕಾರಿಗಳಿಗಿಂತ ಯೇಸುವಿಗೆ ಹೆಚ್ಚು ಅಧಿಕಾರ ಇದೆ. ಮತ್ತಾಯ 28:18 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಮಾನವರ ಅಧಿಕಾರಕ್ಕಿಂತ ಯೇಸುವಿನ ಅಧಿಕಾರ ಹೇಗೆ ಶ್ರೇಷ್ಠವಾಗಿದೆ?
ಮಾನವ ಸರ್ಕಾರಗಳು ಆಗಾಗ ಬದಲಾಗುತ್ತಾ ಇರುತ್ತೆ. ಅಷ್ಟೇ ಅಲ್ಲ, ಅವು ಭೂಮಿಯ ಒಂದೊಂದು ಕಡೆಗಳಲ್ಲಿ ಮಾತ್ರ ಆಳ್ವಿಕೆ ಮಾಡುತ್ತವೆ. ಆದರೆ ದೇವರ ಸರ್ಕಾರದ ಬಗ್ಗೆ ಏನು? ದಾನಿಯೇಲ 7:14 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ದೇವರ ಸರ್ಕಾರ “ಯಾವತ್ತೂ ನಾಶ ಆಗಲ್ಲ” ಇದರಿಂದ ನಮಗೇನು ಪ್ರಯೋಜನ ಇದೆ?
ದೇವರ ಸರ್ಕಾರ ಇಡೀ ಭೂಮಿ ಮೇಲೆ ಆಳ್ವಿಕೆ ಮಾಡುವುದು ಯಾಕೆ ಒಳ್ಳೇದು?
5. ಮಾನವ ಆಳ್ವಿಕೆಗೆ ನಮ್ಮ ಸಮಸ್ಯೆಗಳನ್ನ ತೆಗೆದುಹಾಕೋಕೆ ಆಗಲ್ಲ
ದೇವರ ಸರ್ಕಾರ ಯಾಕೆ ಮಾನವ ಸರ್ಕಾರಗಳನ್ನ ತೆಗೆದುಹಾಕಬೇಕು? ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ಮಾನವ ಆಳ್ವಿಕೆಯಿಂದಾಗಿ ಯಾವೆಲ್ಲಾ ಕೆಟ್ಟ ಪರಿಣಾಮಗಳಾಗಿವೆ?
ಪ್ರಸಂಗಿ 8:9 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಮಾನವ ಸರ್ಕಾರಗಳ ಬದಲು ದೇವರ ಸರ್ಕಾರ ಬರಲೇಬೇಕು ಅಂತ ನಿಮಗೆ ಅನಿಸುತ್ತಾ? ಯಾಕೆ?
6. ದೇವರ ಸರ್ಕಾರದಲ್ಲಿ ಆಳ್ವಿಕೆ ಮಾಡುವವರು ನಮ್ಮನ್ನ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ
ನಮ್ಮ ರಾಜನಾಗಿರುವ ಯೇಸು ಭೂಮಿಗೆ ಬಂದು ಜೀವನ ಮಾಡಿದ್ರಿಂದ ‘ನಮ್ಮ ಬಲಹೀನತೆಗಳನ್ನ ಅರ್ಥ ಮಾಡಿಕೊಳ್ಳುತ್ತಾನೆ.’ (ಇಬ್ರಿಯ 4:15) ಯೇಸುವಿನ ಜೊತೆ ಆಳಲಿರುವ 1,44,000 ನಂಬಿಗಸ್ತ ಸ್ತ್ರೀ ಪುರುಷರನ್ನ ಯೆಹೋವ ದೇವರು ‘ಎಲ್ಲ ಭಾಷೆ, ಜಾತಿ, ದೇಶದಿಂದ’ ಆರಿಸಿಕೊಂಡಿದ್ದಾನೆ.—ಪ್ರಕಟನೆ 5:9.
ಯೇಸು ಮತ್ತು ಆತನ ಜೊತೆ ಆಳ್ವಿಕೆ ಮಾಡುವವರು ನಮ್ಮ ಭಾವನೆಗಳನ್ನ, ಸಮಸ್ಯೆಗಳನ್ನ ಅರ್ಥ ಮಾಡಿಕೊಳ್ಳುತ್ತಾರೆ ಅಂತ ಗೊತ್ತಾದಾಗ ನಿಮಗೆ ಹೇಗನಿಸುತ್ತೆ? ಯಾಕೆ?
ಯೇಸುವಿನ ಜೊತೆ ಆಳಲು ಎಲ್ಲಾ ಹಿನ್ನೆಲೆಯಿಂದ ಸ್ತ್ರೀ ಪುರುಷರನ್ನ ಯೆಹೋವನು ಆರಿಸಿದ್ದಾನೆ
7. ದೇವರ ಸರ್ಕಾರದ ನಿಯಮಗಳು ಶ್ರೇಷ್ಠವಾಗಿವೆ
ತಮ್ಮ ಪ್ರಜೆಗಳ ಪ್ರಯೋಜನಕ್ಕಾಗಿ, ಸಂರಕ್ಷಣೆಗಾಗಿ ಸರ್ಕಾರಗಳು ನಿಯಮಗಳನ್ನ ಮಾಡ್ತವೆ. ಅದೇ ರೀತಿ ದೇವರ ಸರ್ಕಾರಕ್ಕೂ ನಿಯಮಗಳಿವೆ. ಅದನ್ನ ನಾವೆಲ್ಲರೂ ಪಾಲಿಸಲೇಬೇಕು. 1 ಕೊರಿಂಥ 6:9-11 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಎಲ್ಲರೂ ದೇವರ ನೀತಿನಿಯಮಗಳನ್ನ ಪಾಲಿಸುವಾಗ ಈ ಭೂಮಿ ಹೇಗಿರುತ್ತೆ ಅಂತ ನಿಮಗನಿಸುತ್ತೆ?a
ತನ್ನ ಪ್ರಜೆಗಳೆಲ್ಲರೂ ತನ್ನ ನಿಯಮಗಳನ್ನ ಪಾಲಿಸಬೇಕು ಅಂತ ಯೆಹೋವ ದೇವರು ಬಯಸೋದು ಸರಿನಾ? ನಿಮಗೇನು ಅನಿಸುತ್ತೆ?
ಯೆಹೋವನ ನಿಯಮಗಳನ್ನ ಪಾಲಿಸದೇ ತಪ್ಪು ಮಾಡುತ್ತಿದ್ದ ವ್ಯಕ್ತಿಗಳು ಸಹ ಬದಲಾಗಬಹುದು ಅಂತ ನಿಮಗನಿಸುತ್ತಾ?—ವಚನ 11 ನೋಡಿ.
ಜನರಿಗೆ ಪ್ರಯೋಜನ ಮತ್ತು ಸಂರಕ್ಷಣೆ ಆಗಲಿ ಅಂತ ಸರ್ಕಾರಗಳು ನಿಯಮಗಳನ್ನ ಮಾಡ್ತವೆ. ಅದೇ ತರ ನಮ್ಮ ಪ್ರಯೋಜನಕ್ಕಾಗಿನೇ ದೇವರ ಸರ್ಕಾರ ಕೂಡ ಮಾನವ ಸರ್ಕಾರಕ್ಕಿಂತ ಶ್ರೇಷ್ಠವಾದ ನಿಯಮಗಳನ್ನ ಮಾಡಿದೆ
ಕೆಲವರು ಹೀಗೆ ಕೇಳಬಹುದು: “ದೇವರ ಸರ್ಕಾರ ಅಂದರೇನು?”
ನೀವೇನು ಹೇಳುತ್ತೀರಾ?
ನಾವೇನು ಕಲಿತ್ವಿ
ದೇವರ ಸರ್ಕಾರ ಸ್ವರ್ಗದಲ್ಲಿದೆ, ಅಲ್ಲಿಂದ ಇಡೀ ಭೂಮಿಯನ್ನ ಆಳ್ವಿಕೆ ಮಾಡುತ್ತೆ.
ನೆನಪಿದೆಯಾ
ದೇವರ ಸರ್ಕಾರದಲ್ಲಿ ಯಾರೆಲ್ಲಾ ಆಳ್ವಿಕೆ ಮಾಡ್ತಾರೆ?
ದೇವರ ಸರ್ಕಾರ ಮಾನವ ಸರ್ಕಾರಗಳಿಗಿಂತ ಶ್ರೇಷ್ಠವಾಗಿದೆ ಅಂತ ಹೇಗೆ ಹೇಳಬಹುದು?
ಯೆಹೋವ ದೇವರು ತನ್ನ ಪ್ರಜೆಗಳಿಂದ ಏನು ಬಯಸುತ್ತಾನೆ?
ಇದನ್ನೂ ನೋಡಿ
ದೇವರ ಸರ್ಕಾರ ಎಲ್ಲಿದೆ ಅಂತ ಯೇಸು ಕಲಿಸಿದನು?
“ದೇವರ ರಾಜ್ಯ ಇರೋದು ನಿಮ್ಮ ಹೃದಯದಲ್ಲಾ?” (jw.org ಲೇಖನ)
ಯೆಹೋವನ ಸಾಕ್ಷಿಗಳು ಮಾನವ ಸರ್ಕಾರಗಳಿಗಿಂತ ದೇವರ ಸರ್ಕಾರಕ್ಕೆ ಯಾಕೆ ನಿಷ್ಠೆ ತೋರಿಸುತ್ತಾರೆ?
ಯೇಸುವಿನ ಜೊತೆ ಆಳ್ವಿಕೆ ಮಾಡೋಕೆ ಯೆಹೋವ ದೇವರು ಆರಿಸಿರುವ 1,44,000 ಜನರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ತಿಳಿದುಕೊಳ್ಳಿ.
ಅನ್ಯಾಯ ಇಲ್ಲದಿರೋ ಲೋಕವನ್ನ ದೇವರು ಮಾತ್ರ ತರಲು ಸಾಧ್ಯ ಅಂತ ಜೈಲಿನಲ್ಲಿದ್ದ ಒಬ್ಬ ಸ್ತ್ರೀಗೆ ಹೇಗೆ ಗೊತ್ತಾಯ್ತು?
a ಇಂಥ ಕೆಲವು ನೀತಿನಿಯಮಗಳ ಬಗ್ಗೆ ಭಾಗ 3ರಲ್ಲಿ ಕಲಿಯಲಿದ್ದೇವೆ.
-
-
ತಟಸ್ಥರಾಗಿರೋದು ಅಂದರೇನು?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 45
ತಟಸ್ಥರಾಗಿರೋದು ಅಂದರೇನು?
ಯೇಸು ತನ್ನ ಶಿಷ್ಯರಿಗೆ ‘ಲೋಕದ ಜನ್ರ ತರ ಇರಬಾರದು’ ಅಂತ ಹೇಳಿದನು. (ಯೋಹಾನ 15:19) ಇದರಲ್ಲಿ ತಟಸ್ಥರಾಗಿರೋದು ಕೂಡ ಸೇರಿದೆ. ಹಾಗಾದ್ರೆ ತಟಸ್ಥರಾಗಿರೋದು ಅಂದರೆ ಏನು? ರಾಜಕೀಯದಲ್ಲಿ ಅಥವಾ ಯುದ್ಧಗಳಲ್ಲಿ ಯಾವುದೇ ಪಕ್ಷವಹಿಸದೆ ಇರೋದೇ ಆಗಿದೆ. ನಾವು ತಟಸ್ಥರಾಗಿ ಇರೋದ್ರಿಂದ ಜನರು ನಮ್ಮನ್ನ ಹೀಯಾಳಿಸಬಹುದು. ಹಾಗಾಗಿ ತಟಸ್ಥರಾಗಿರೋದು ಯಾವಾಗ್ಲೂ ಸುಲಭ ಅಲ್ಲ. ನಾವು ಹೇಗೆ ತಟಸ್ಥರಾಗಿ ಇರಬಹುದು? ಯೆಹೋವನಿಗೆ ನಿಷ್ಠೆ ತೋರಿಸುತ್ತಾ ಇರಬಹುದು?
1. ಕ್ರೈಸ್ತರು ಸರ್ಕಾರಕ್ಕೆ ಗೌರವ ಕೊಡ್ತಾರಾ?
ಕ್ರೈಸ್ತರಾದ ನಾವು ಸರ್ಕಾರಗಳಿಗೆ ಗೌರವ ಕೊಡುತ್ತೇವೆ. “ರಾಜಂದು ರಾಜನಿಗೆ ಕೊಡಿ” ಅನ್ನೋ ಮಾತನ್ನ ಪಾಲಿಸುತ್ತೇವೆ. ಹೇಗೆಂದರೆ ನಾವು ತೆರಿಗೆಯನ್ನ ಕಟ್ಟುತ್ತೇವೆ ಮತ್ತು ಸ್ಥಳೀಯ ನಿಯಮಗಳನ್ನ ಪಾಲಿಸುತ್ತೇವೆ. (ಮಾರ್ಕ 12:17) ಯೆಹೋವನ ಅನುಮತಿ ಇರೋದ್ರಿಂದನೇ ಈಗಿರುವ ಸರ್ಕಾರಗಳು ಅಧಿಕಾರದಲ್ಲಿವೆ ಅಂತ ಬೈಬಲ್ ಹೇಳುತ್ತೆ. (ರೋಮನ್ನರಿಗೆ 13:1) ಸರ್ಕಾರಿ ಅಧಿಕಾರಿಗಳಿಗೆ ಅಧಿಕಾರ ಇರೋದು ನಿಜ, ಆದರೆ ಅವರಿಗಿಂತ ಹೆಚ್ಚು ಅಧಿಕಾರ ಇರೋದು ಯೆಹೋವ ದೇವರಿಗೆ. ದೇವರ ಸರ್ಕಾರದಿಂದ ಮಾತ್ರ ಮಾನವರ ಸಮಸ್ಯೆಗಳನ್ನ ತೆಗೆದು ಹಾಕೋಕೆ ಸಾಧ್ಯ ಅಂತ ನಾವು ನಂಬುತ್ತೇವೆ.
2. ನಾವು ಹೇಗೆಲ್ಲಾ ತಟಸ್ಥರಾಗಿ ಇರಬಹುದು?
ಯೇಸು ಮಾಡಿದ ಒಂದು ಅದ್ಭುತವನ್ನ ನೋಡಿದ ಜನರು ಆತನನ್ನ ರಾಜನನ್ನಾಗಿ ಮಾಡಬೇಕು ಅಂತ ಅಂದುಕೊಂಡರು. ಆದ್ರೆ ಯೇಸು ಅದಕ್ಕೆ ಒಪ್ಪಲಿಲ್ಲ. (ಯೋಹಾನ 6:15) ಯೇಸು ತರ ನಾವೂ ಕೂಡ ರಾಜಕೀಯ ವಿಷಯಗಳಲ್ಲಿ ತಲೆ ಹಾಕಲ್ಲ. “ನನ್ನ ಆಳ್ವಿಕೆ ಈ ಲೋಕದ್ದಲ್ಲ” ಅಂತ ಯೇಸು ಹೇಳಿದನು. (ಯೋಹಾನ 18:36) ಯೇಸು ತರ ನಾವೂ ಕೂಡ ತಟಸ್ಥರಾಗಿದ್ದೇವೆ ಅಂತ ಅನೇಕ ವಿಧಗಳಲ್ಲಿ ತೋರಿಸಬಹುದು. ಉದಾಹರಣೆಗೆ, ನಾವು ಯುದ್ಧಗಳಲ್ಲಿ ಭಾಗವಹಿಸಲ್ಲ. (ಮೀಕ 4:3 ಓದಿ.) ಧ್ವಜದಂಥ ರಾಷ್ಟ್ರೀಯ ಚಿಹ್ನೆಗಳನ್ನ ನಾವು ಗೌರವಿಸುತ್ತೇವೆ ಆದರೆ ಅದನ್ನ ಆರಾಧಿಸಲ್ಲ. ಇನ್ನೊಂದು ಮಾತಲ್ಲಿ ಹೇಳೋದಾದ್ರೆ ದೇವರಿಗೆ ಕೊಡಬೇಕಾದ ಗೌರವವನ್ನ ಅವುಗಳಿಗೆ ಕೊಡಲ್ಲ. (1 ಯೋಹಾನ 5:21) ಅಷ್ಟೇ ಅಲ್ಲ, ಯಾವುದೇ ರಾಜಕೀಯ ಅಥವಾ ಪ್ರತಿನಿಧಿಯ ಪಕ್ಷ ವಹಿಸೋದು ಇಲ್ಲ, ವಿರೋಧಿಸೋದು ಇಲ್ಲ. ಹೀಗೆ ನಾವು ದೇವರ ಸರ್ಕಾರಕ್ಕೆ ಮಾತ್ರ ಪೂರ್ತಿ ನಿಷ್ಠೆಯನ್ನ ತೋರಿಸುತ್ತೇವೆ.
ಹೆಚ್ಚನ್ನ ತಿಳಿಯೋಣ
ತಟಸ್ಥರಾಗಿರಲು ಕಷ್ಟವಾದ ಸನ್ನಿವೇಶಗಳು ಯಾವುವು ಅಂತ ನೋಡಿ. ಅಂಥ ಸನ್ನಿವೇಶಗಳಲ್ಲಿ ಯೆಹೋವ ದೇವರಿಗೆ ಮೆಚ್ಚಿಗೆಯಾಗುವ ನಿರ್ಧಾರಗಳನ್ನ ಹೇಗೆ ಮಾಡಬಹುದು ಅಂತನೂ ತಿಳಿಯಿರಿ.
3. ಕ್ರೈಸ್ತರು ತಟಸ್ಥರಾಗಿ ಇರುತ್ತಾರೆ
ಇದಕ್ಕೆ ಯೇಸು ಮತ್ತು ಆತನ ಶಿಷ್ಯರು ಒಳ್ಳೆಯ ಮಾದರಿ ಇಟ್ಟಿದ್ದಾರೆ. ರೋಮನ್ನರಿಗೆ 13:1, 5-7 ಮತ್ತು 1 ಪೇತ್ರ 2:13, 14 ಓದಿ, ನಂತರ ವಿಡಿಯೋ ನೋಡಿ ಈ ಪ್ರಶ್ನೆಗಳನ್ನ ಚರ್ಚಿಸಿ.
ನಾವು ಯಾಕೆ ಸರ್ಕಾರಿ ಅಧಿಕಾರಿಗಳಿಗೆ ಗೌರವ ತೋರಿಸಬೇಕು?
ನಾವು ಅವರ ಮಾತು ಕೇಳುತ್ತೇವೆ ಅಂತ ಹೇಗೆಲ್ಲಾ ತೋರಿಸಬಹುದು?
ಯುದ್ಧಗಳು ನಡೆಯುತ್ತಿರುವಾಗ ಕೆಲವು ದೇಶದವರು ತಾವು ತಟಸ್ಥರಾಗಿದ್ದೇವೆ ಅಂತ ಹೇಳುತ್ತಾರೆ ಆದರೆ ಅವರು ಯುದ್ಧ ಮಾಡುತ್ತಿರುವ ಎರಡೂ ದೇಶದವರಿಗೆ ಬೆಂಬಲ ಕೊಡುತ್ತಾರೆ. ಹಾಗಾದ್ರೆ ನಿಜವಾಗಿಯೂ ತಟಸ್ಥರಾಗಿರೋದು ಅಂದರೆ ಏನು? ಯೋಹಾನ 17:16 ಓದಿ, ನಂತರ ವಿಡಿಯೋ ನೋಡಿ ಮತ್ತು ಈ ಪ್ರಶ್ನೆಯನ್ನ ಚರ್ಚಿಸಿ.
ತಟಸ್ಥರಾಗಿರೋದು ಅಂದರೆ ಏನು?
ಒಂದುವೇಳೆ ಸರ್ಕಾರದ ನಿಯಮಗಳು ದೇವರ ನಿಯಮಕ್ಕೆ ವಿರುದ್ಧವಾಗಿದ್ರೆ ಏನು ಮಾಡಬೇಕು? ಅಪೊಸ್ತಲರ ಕಾರ್ಯ 5:28, 29 ಓದಿ, ನಂತರ ವಿಡಿಯೋ ನೋಡಿ ಈ ಪ್ರಶ್ನೆಗಳನ್ನ ಚರ್ಚಿಸಿ.
ದೇವರ ನಿಯಮಕ್ಕೆ ವಿರುದ್ಧವಾದ ವಿಷಯಗಳನ್ನ ಸರ್ಕಾರಿ ಅಧಿಕಾರಿಗಳು ಮಾಡಕ್ಕೆ ಹೇಳಿದ್ರೆ ನೀವೇನು ಮಾಡುತ್ತೀರಾ?
ಒಬ್ಬ ಕ್ರೈಸ್ತನು ಯಾವೆಲ್ಲಾ ಸನ್ನಿವೇಶಗಳಲ್ಲಿ ಅಧಿಕಾರಿಗಳ ಮಾತನ್ನ ಕೇಳಲ್ಲ?
4. ಯೋಚನೆಯಲ್ಲಿ ಮತ್ತು ನಡತೆಯಲ್ಲಿ ತಾಟಸ್ಥ್ಯ ತೋರಿಸಿ
1 ಯೋಹಾನ 5:21 ಓದಿ, ನಂತರ ವಿಡಿಯೋ ನೋಡಿ ಈ ಪ್ರಶ್ನೆಗಳನ್ನ ಚರ್ಚಿಸಿ.
ವಿಡಿಯೋದಲ್ಲಿ ನೋಡಿದ ಹಾಗೆ ಅಯೆಂಗೆ ಯಾಕೆ ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳಲಿಲ್ಲ ಮತ್ತು ಧ್ವಜ ವಂದನೆ ಮಾಡಲಿಲ್ಲ?
ಆ ಸಹೋದರನ ನಿರ್ಧಾರ ಸರಿಯಾಗಿತ್ತು ಅಂತ ನಿಮಗೆ ಅನಿಸುತ್ತಾ?
ನಾವು ಇನ್ನೂ ಯಾವೆಲ್ಲಾ ಸನ್ನಿವೇಶಗಳಲ್ಲಿ ತಟಸ್ಥರಾಗಿ ಇರಬೇಕು? ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ.
ಎರಡು ದೇಶಗಳ ಮಧ್ಯೆ ಕ್ರೀಡೆಗಳು ನಡೆಯುವಾಗ ನಾವು ಹೇಗೆ ತಟಸ್ಥರಾಗಿರಬಹುದು?
ರಾಜಕಾರಣಿಗಳ ನಿರ್ಧಾರದಿಂದ ನಮಗೆ ಒಳ್ಳೇದಾದರೂ ಕೆಟ್ಟದಾದರೂ ನಾವು ಏನು ಮಾಡಬಾರದು?
ವಾರ್ತಾ ಮಾಧ್ಯಮ (ನ್ಯೂಸ್) ಮತ್ತು ನಮ್ಮ ಆಪ್ತರು ಹೇಗೆ ನಮ್ಮ ತಾಟಸ್ಥ್ಯಕ್ಕೆ ಅಡ್ಡಿಯಾಗಬಹುದು?
ಒಬ್ಬ ಕ್ರೈಸ್ತನು ತನ್ನ ಯೋಚನೆ ಮತ್ತು ನಡತೆಯಲ್ಲಿ ತಾಟಸ್ಥ್ಯವನ್ನ ತೋರಿಸಬೇಕಾದ ಸನ್ನಿವೇಶಗಳು ಯಾವುವು?
ಕೆಲವರು ಹೀಗೆ ಕೇಳಬಹುದು: “ನೀವು ಯಾಕೆ ಧ್ವಜ ವಂದನೆ ಮಾಡಲ್ಲ, ರಾಷ್ಟ್ರಗೀತೆ ಹಾಡಲ್ಲ?”
ನೀವೇನು ಹೇಳುತ್ತೀರಾ?
ನಾವೇನು ಕಲಿತ್ವಿ
ಕ್ರೈಸ್ತರು ತಮ್ಮ ಯೋಚನೆ, ಮಾತು ಮತ್ತು ನಡತೆಯಲ್ಲಿ ಯಾವುದೇ ರಾಜಕೀಯ ವಿಷಯಗಳಲ್ಲಿ ಪಕ್ಷವಹಿಸದಂತೆ ಜಾಗ್ರತೆವಹಿಸಬೇಕು.
ನೆನಪಿದೆಯಾ
ನಾವು ಸರ್ಕಾರಿ ಅಧಿಕಾರಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು?
ನಾವು ಯಾಕೆ ರಾಜಕೀಯ ವಿಷಯಗಳಲ್ಲಿ ತಟಸ್ಥರಾಗಿ ಇರುತ್ತೇವೆ?
ಯಾವೆಲ್ಲಾ ಸನ್ನಿವೇಶಗಳಲ್ಲಿ ತಟಸ್ಥರಾಗಿರಲು ಕಷ್ಟ ಆಗುತ್ತೆ?
ಇದನ್ನೂ ನೋಡಿ
ತಟಸ್ಥರಾಗಿರಲು ನಾವು ಯಾವೆಲ್ಲಾ ತ್ಯಾಗಗಳನ್ನ ಮಾಡಬೇಕಾಗಬಹುದು?
ತಟಸ್ಥರಾಗಿರಲು ಕಷ್ಟಕರವಾದ ಸನ್ನಿವೇಶಗಳು ಬರುವಾಗ ಏನು ಮಾಡಬೇಕು ಅಂತ ಕುಟುಂಬಗಳು ಹೇಗೆ ಮೊದಲೇ ತಯಾರಿ ಮಾಡಬಹುದು?
ಒಬ್ಬ ವ್ಯಕ್ತಿಯ ಜೀವನ ಯಾವಾಗ ಸಾರ್ಥಕ ಆಗುತ್ತೆ?
ಕೆಲಸದ ಬಗ್ಗೆ ತೀರ್ಮಾನಗಳನ್ನ ಮಾಡುವಾಗ ಯಾವೆಲ್ಲಾ ವಿಷಯಗಳನ್ನ ಗಮನಿಸಬೇಕು?
“ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” (ಕಾವಲಿನಬುರುಜು, ಮಾರ್ಚ್, 2006)
-