ಪಾಠ 79
ಯೇಸು ಅನೇಕ ಅದ್ಭುತಗಳನ್ನು ಮಾಡುತ್ತಾನೆ
ಯೇಸು ಭೂಮಿಗೆ ಬಂದದ್ದು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನು ಸಾರಲು. ಯೇಸು ರಾಜನಾದಾಗ ಏನೆಲ್ಲಾ ಮಾಡುತ್ತಾನೆಂದು ತೋರಿಸಲಿಕ್ಕಾಗಿ ಯೆಹೋವನು ಅವನಿಗೆ ಅದ್ಭುತಗಳನ್ನು ಮಾಡಲು ಪವಿತ್ರಶಕ್ತಿಯನ್ನು ಕೊಟ್ಟನು. ಅವನು ಯಾವುದೇ ಕಾಯಿಲೆಯನ್ನಾದರೂ ವಾಸಿ ಮಾಡ್ತಿದ್ದನು. ಅವನು ಎಲ್ಲೇ ಹೋದರೂ ಕಾಯಿಲೆಬಿದ್ದವರು ಸಹಾಯಕ್ಕಾಗಿ ಅವನ ಹತ್ತಿರ ಬರುತ್ತಿದ್ದರು. ಯೇಸು ಅವರೆಲ್ಲರನ್ನು ವಾಸಿ ಮಾಡಿದನು. ಕುರುಡರಿಗೆ ಕಣ್ಣು ಬಂತು, ಕಿವುಡರಿಗೆ ಕಿವಿ ಕೇಳಿಸಿತು, ಲಕ್ವ ಹೊಡೆದವರೂ ನಡೆದಾಡಲು ಆರಂಭಿಸಿದರು. ದೆವ್ವ ಹಿಡಿದವರನ್ನು ಯೇಸುವಿನ ಬಳಿ ಕರೆದುಕೊಂಡು ಬಂದಾಗ ಅವನು ಆ ದೆವ್ವಗಳನ್ನು ಬಿಡಿಸಿದನು. ಯೇಸುವಿನ ಬಟ್ಟೆಯ ತುದಿಯನ್ನು ಮುಟ್ಟಿದರೂ ಅವರು ವಾಸಿ ಆಗುತ್ತಿದ್ದರು. ಯೇಸು ಹೋದಲ್ಲೆಲ್ಲ ಜನರು ಅವನನ್ನು ಹಿಂಬಾಲಿಸುತ್ತಿದ್ದರು. ತಾನು ಏಕಾಂತವಾಗಿ ಇರಲು ಬಯಸಿದಾಗಲೂ ಜನ ಸಹಾಯ ಕೇಳಿ ಬಂದರೆ ಯೇಸು ‘ಇಲ್ಲ’ ಅಂದವನಲ್ಲ.
ಒಂದು ಸಲ, ಯೇಸು ಇದ್ದ ಮನೆಗೆ ಒಬ್ಬ ಲಕ್ವ ಹೊಡೆದ ಮನುಷ್ಯನನ್ನು ಜನ ತೆಗೆದುಕೊಂಡು ಬಂದರು. ಮನೆಯಲ್ಲಿ ಎಷ್ಟು ಜನ ಇದ್ದರು ಅಂದರೆ ಅವರಿಗೆ ಒಳಗೆ ಹೋಗಲು ಆಗಲಿಲ್ಲ. ಆಗ ಅವರು ಮನೆಯ ಚಾವಣಿಯ ಸ್ವಲ್ಪ ಭಾಗವನ್ನು ತೆಗೆದು ಹಾಸಿಗೆ ಸಮೇತ ಆ ಮನುಷ್ಯನನ್ನು ಯೇಸುವಿನ ಬಳಿ ಇಳಿಸಿದರು. ಯೇಸು ಆ ಮನುಷ್ಯನಿಗೆ, ‘ಎದ್ದು ನಡಿ’ ಅಂದನು. ಅವನು ನಡೆದನು. ಇದನ್ನು ನೋಡಿದಾಗ ಜನರಿಗೆ ತುಂಬ ಆಶ್ಚರ್ಯ ಆಯಿತು.
ಇನ್ನೊಂದು ಸಲ, ಯೇಸು ಒಂದು ಹಳ್ಳಿಗೆ ಹೋಗುವಾಗ ಹತ್ತು ಜನ ಕುಷ್ಠರೋಗಿಗಳು ದೂರದಲ್ಲಿ ನಿಂತುಕೊಂಡು, ‘ಯೇಸು, ನಮಗೆ ಸಹಾಯ ಮಾಡಿ’ ಅಂತ ಕೂಗಿ ಹೇಳಿದರು. ಆ ಕಾಲದಲ್ಲಿ ಕುಷ್ಠರೋಗಿಗಳು ಬೇರೆ ಜನರ ಹತ್ತಿರನೂ ಬರಬಾರದಿತ್ತು. ಕುಷ್ಠ ವಾಸಿಯಾದಾಗ ದೇವಾಲಯಕ್ಕೆ ಹೋಗಿ ತೋರಿಸಬೇಕು ಅಂತ ಯೆಹೋವನ ನಿಯಮ ಪುಸ್ತಕ ಹೇಳುತ್ತಿತ್ತು. ಹಾಗಾಗಿ ಯೇಸು ಆ ಕುಷ್ಠರೋಗಿಗಳನ್ನು ದೇವಾಲಯಕ್ಕೆ ಹೋಗುವಂತೆ ಹೇಳಿದನು. ಅವರು ದಾರಿಯಲ್ಲಿ ಹೋಗುತ್ತಾ ಇರುವಾಗಲೇ ಅವರ ಕುಷ್ಠ ವಾಸಿ ಆಯಿತು. ಆಗ ಆ ಹತ್ತು ಕುಷ್ಠರೋಗಿಗಳಲ್ಲಿ ಒಬ್ಬನು ಮಾತ್ರ ಯೇಸುವಿಗೆ ಧನ್ಯವಾದ ಹೇಳಲು ವಾಪಸ್ ಬಂದನು ಮತ್ತು ದೇವರನ್ನು ಸ್ತುತಿಸಿದನು.
ಒಬ್ಬ ಸ್ತ್ರೀಗೆ 12 ವರ್ಷಗಳಿಂದ ಒಂದು ಕಾಯಿಲೆಯಿತ್ತು. ಹೇಗಾದರೂ ತನ್ನ ಕಾಯಿಲೆ ವಾಸಿ ಆಗಬೇಕು ಅಂತ ಅವಳು ಹಾತೊರೆಯುತ್ತಿದ್ದಳು. ಅದಕ್ಕೆ ಅವಳು ಜನರ ಗುಂಪಿನ ಮಧ್ಯೆ ದಾರಿ ಮಾಡಿಕೊಂಡು ಬಂದು ಯೇಸುವಿನ ಬಟ್ಟೆ ತುದಿಯನ್ನು ಹಿಂದಿನಿಂದ ಮುಟ್ಟಿದಳು. ತಕ್ಷಣ ಅವಳ ಕಾಯಿಲೆ ವಾಸಿ ಆಯಿತು. ಆಗ ಯೇಸು, ‘ನನ್ನನ್ನ ಯಾರು ಮುಟ್ಟಿದ್ರು?’ ಅಂತ ಕೇಳಿದನು. ಆ ಸ್ತ್ರೀಗೆ ತುಂಬ ಭಯವಾಯಿತು. ಆದರೂ ಆಕೆ ಮುಂದೆ ಬಂದು ಸತ್ಯವನ್ನು ಹೇಳಿದಳು. ಆಗ ಯೇಸು, ‘ಮಗಳೇ, ಸಮಾಧಾನದಿಂದ ಹೋಗು’ ಎಂದು ಸಂತೈಸಿದನು.
ಯಾಯಿರ ಎಂಬ ಅಧಿಕಾರಿ ಯೇಸು ಹತ್ತಿರ ಬಂದು, ‘ದಯವಿಟ್ಟು ನನ್ನ ಮನೆಗೆ ಬಾ, ನನ್ನ ಪುಟ್ಟ ಮಗಳಿಗೆ ತುಂಬಾ ಹುಷಾರಿಲ್ಲ’ ಅಂತ ಬೇಡಿದನು. ಆದರೆ ಯೇಸು ಅವನ ಮನೆ ತಲುಪುವ ಮುಂಚೆನೇ ಅವನ ಮಗಳು ತೀರಿಕೊಂಡಳು. ತೀರಿಹೋಗಿದ್ದ ಮಗುವನ್ನು ನೋಡಲು ಅಲ್ಲಿ ತುಂಬ ಜನ ಬಂದಿದ್ದರು. ಯೇಸು ಅವರಿಗೆ, ‘ಅಳಬೇಡಿ, ಅವಳು ಬರೀ ನಿದ್ದೆ ಮಾಡ್ತಿದ್ದಾಳೆ’ ಅಂತ ಹೇಳಿದನು. ನಂತರ, ಅವನು ಆ ಹುಡುಗಿಯ ಕೈ ಹಿಡಿದು, “ಹುಡುಗಿ, ಎದ್ದೇಳು!” ಅಂದನು. ಕೂಡಲೇ ಅವಳು ಎದ್ದು ಕುಳಿತಳು. ಆಗ ಯೇಸು ಅವಳಿಗೆ ಏನಾದರೂ ತಿನ್ನಲು ಕೊಡುವಂತೆ ಅವಳ ಅಪ್ಪ-ಅಮ್ಮಂಗೆ ಹೇಳಿದನು. ತೀರಿಕೊಂಡಿದ್ದ ಮಗಳು ಬದುಕಿದಾಗ ಆ ಅಪ್ಪ-ಅಮ್ಮಂಗೆ ಹೇಗಾಗಿರಬಹುದು ಅಂತ ಸ್ವಲ್ಪ ಯೋಚಿಸು!
“ದೇವರು ಆತನನ್ನ ಪವಿತ್ರಶಕ್ತಿಯಿಂದ ಆರಿಸ್ಕೊಂಡನು. ಆತನಿಗೆ ಅಧಿಕಾರ ಕೊಟ್ಟನು. ಆತನು ಆ ಇಡೀ ಪ್ರದೇಶ ತಿರುಗಾಡ್ತಾ ಒಳ್ಳೇ ಕೆಲಸಗಳನ್ನ ಮಾಡಿದನು. ಸೈತಾನನಿಂದಾಗಿ ಕಷ್ಟಗಳನ್ನ ಅನುಭವಿಸ್ತಿದ್ದ ಜನ್ರನ್ನ ವಾಸಿಮಾಡಿದನು. ದೇವರು ಯಾವಾಗ್ಲೂ ಆತನ ಜೊತೆ ಇದ್ದ ಕಾರಣ ಆತನಿಗೆ ಇದನ್ನೆಲ್ಲ ಮಾಡೋಕಾಯ್ತು.”—ಅಪೊಸ್ತಲರ ಕಾರ್ಯ 10:38