ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನಂಬಿಕೆಯ ಪರೀಕ್ಷೆ
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಅಬ್ರಹಾಮನು ಮತ್ತು ಇಸಾಕನು ಬೆಟ್ಟದ ವರೆಗೂ ನಡೆದುಹೋದರು

      ಪಾಠ 11

      ನಂಬಿಕೆಯ ಪರೀಕ್ಷೆ

      ಅಬ್ರಹಾಮನು ತನ್ನ ಮಗನಾದ ಇಸಾಕನಿಗೆ ಯೆಹೋವನನ್ನು ಪ್ರೀತಿಸಲು ಮತ್ತು ಆತನ ಎಲ್ಲಾ ವಾಗ್ದಾನಗಳ ಮೇಲೆ ಭರವಸೆ ಇಡಲು ಕಲಿಸಿದನು. ಇಸಾಕನಿಗೆ 25 ವರ್ಷ ಇದ್ದಾಗ ಯೆಹೋವನು ಒಂದು ಕಷ್ಟದ ಕೆಲಸ ಮಾಡಲು ಅಬ್ರಹಾಮನಿಗೆ ಹೇಳಿದನು. ಅದೇನು ಗೊತ್ತಾ?

      ದೇವರು ಅಬ್ರಹಾಮನಿಗೆ ‘ನಿನ್ನ ಒಬ್ಬನೇ ಮಗನನ್ನ ಮೊರೀಯ ದೇಶದ ಬೆಟ್ಟದಲ್ಲಿ ಬಲಿಯಾಗಿ ನನಗೆ ಕೊಡು’ ಅಂದನು. ಯೆಹೋವನು ಯಾಕೆ ಹೀಗೆ ಹೇಳುತ್ತಿದ್ದಾನೆಂದು ಅಬ್ರಹಾಮನಿಗೆ ಸ್ವಲ್ಪವೂ ಅರ್ಥ ಆಗಲಿಲ್ಲ. ಆದರೂ ಯೆಹೋವನ ಮಾತಿಗೆ ವಿಧೇಯನಾದನು.

      ಅಬ್ರಹಾಮ ಮಾರನೇ ದಿನ ಬೆಳಗ್ಗೆ ಇಸಾಕ ಮತ್ತು ಇಬ್ಬರು ಸೇವಕರನ್ನು ಕರೆದುಕೊಂಡು ಮೊರೀಯ ಕಡೆಗೆ ಹೆಜ್ಜೆ ಹಾಕಿದನು. ಮೂರು ದಿನಗಳ ನಂತರ ಅವರು ಬೆಟ್ಟದ ಹತ್ತಿರ ತಲುಪಿದರು. ಆಗ ಅಬ್ರಹಾಮ ತನ್ನ ಸೇವಕರಿಗೆ ‘ನೀವು ಇಲ್ಲೇ ಇರಿ. ನಾನು ನನ್ನ ಮಗ ದೇವರಿಗೆ ಬಲಿ ಅರ್ಪಿಸಿ ಬರ್ತಿವಿ’ ಎಂದು ಹೇಳಿದನು. ಕಟ್ಟಿಗೆಯನ್ನು ಇಸಾಕನ ಮೇಲೆ ಹೊರಿಸಿ ಅಬ್ರಹಾಮ ಕತ್ತಿಯನ್ನು ಕೈಯಲ್ಲಿಡಿದು ಹೋದನು. ಆಗ ಇಸಾಕನು ‘ಅಪ್ಪಾ, ಬಲಿಗೆ ಬೇಕಾದ ಪ್ರಾಣಿ ಎಲ್ಲಿ?’ ಎಂದು ಕೇಳಿದನು. ಅದಕ್ಕೆ ಅಬ್ರಹಾಮ ‘ಮಗನೇ ಅದನ್ನ ಯೆಹೋವನೇ ಕೊಡ್ತಾನೆ’ ಎಂದು ಉತ್ತರಿಸಿದನು.

      ಬೆಟ್ಟವನ್ನು ತಲುಪಿದ ನಂತರ ಅವರಿಬ್ಬರು ಸೇರಿ ಯಜ್ಞವೇದಿಯನ್ನು ಕಟ್ಟಿದರು. ಅಬ್ರಹಾಮನು ಇಸಾಕನ ಕೈಕಾಲುಗಳನ್ನು ಕಟ್ಟಿ ಯಜ್ಞವೇದಿಯ ಮೇಲೆ ಮಲಗಿಸಿದನು.

      ಇಸಾಕನನ್ನು ಕಟ್ಟಿ ಯಜ್ಞವೇದಿಯ ಮೇಲೆ ಮಲಗಿಸಿದನು ಮತ್ತು ಅಬ್ರಹಾಮನು ಕತ್ತಿಯನ್ನು ಕೈಗೆತ್ತಿಕೊಂಡನು

      ಅಬ್ರಹಾಮ ಕತ್ತಿಯನ್ನು ಕೈಗೆತ್ತಿಕೊಂಡನು. ತಕ್ಷಣ ಯೆಹೋವನ ದೂತನು ಆಕಾಶದಿಂದ ‘ಅಬ್ರಹಾಮ, ನಿನ್ನ ಮಗನನ್ನ ಕೊಲ್ಲಬೇಡ. ನಿನ್ನ ಒಬ್ಬನೇ ಮಗನನ್ನ ನನಗೆ ಅರ್ಪಿಸೋಕೆ ನೀನು ಹಿಂಜರಿಲಿಲ್ಲ. ಇದ್ರಿಂದ ದೇವರ ಮೇಲೆ ನಿನಗೆ ನಂಬಿಕೆ ಇದೆ ಅಂತ ಗೊತ್ತಾಯ್ತು’ ಅಂದನು. ಇದಾದ ಮೇಲೆ ಟಗರೊಂದು ಪೊದೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ಅಬ್ರಹಾಮ ಕಂಡನು. ತಕ್ಷಣ ಇಸಾಕನಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಅವನಿಗೆ ಬದಲಾಗಿ ಟಗರನ್ನು ಬಲಿಯಾಗಿ ಕೊಟ್ಟನು.

      ಆ ದಿನದಿಂದ ಯೆಹೋವನು ಅಬ್ರಹಾಮನನ್ನು ‘ನನ್ನ ಸ್ನೇಹಿತ’ ಎಂದು ಕರೆದನು. ಯಾಕೆ ಗೊತ್ತಾ? ಯಾಕೆಂದರೆ ಅಬ್ರಹಾಮ ಯೆಹೋವ ದೇವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೇ ಮಾಡುತ್ತಿದ್ದ. ಯೆಹೋವನು ಯಾಕೆ ಹೇಳಿದರು ಅಂತ ಅರ್ಥ ಆಗದೇ ಇದ್ದಾಗಲೂ ಅದನ್ನು ಮಾಡಿದ.

      ಅಬ್ರಹಾಮನು ಇಸಾಕನಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದನು

      ಮತ್ತೊಮ್ಮೆ ಯೆಹೋವ ದೇವರು ಅಬ್ರಹಾಮನಿಗೆ ‘ನಾನು ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಸಂತತಿನ ಹೆಚ್ಚಿಸ್ತೀನಿ’ ಎಂದು ಮಾತುಕೊಟ್ಟನು. ಇದರರ್ಥ ಯೆಹೋವ ದೇವರು ಎಲ್ಲಾ ಒಳ್ಳೇ ಜನರನ್ನು ಅಬ್ರಹಾಮನ ಸಂತತಿಯ ಮೂಲಕ ಆಶೀರ್ವದಿಸುವನು ಎಂದಾಗಿತ್ತು.

      “ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.”—ಯೋಹಾನ 3:16

      ಪ್ರಶ್ನೆಗಳು: ಯೆಹೋವ ದೇವರ ಮೇಲೆ ತುಂಬ ನಂಬಿಕೆ ಇದೆ ಎಂದು ಅಬ್ರಹಾಮ ಹೇಗೆ ತೋರಿಸಿದ? ಯೆಹೋವನು ಅಬ್ರಹಾಮನಿಗೆ ಏನೆಂದು ಮಾತು ಕೊಟ್ಟನು?

      ಆದಿಕಾಂಡ 22:1-18; ಇಬ್ರಿಯ 11:17-19; ಯಾಕೋಬ 2:21-23

  • ಯಾಕೋಬನಿಗೆ ಬಾಧ್ಯತೆ ಸಿಕ್ಕಿತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಏಸಾವ ತನ್ನ ಜ್ಯೇಷ್ಠ ಪುತ್ರ ಹಕ್ಕನ್ನು ಕೊಟ್ಟಾಗ ಯಾಕೋಬ ಅದಕ್ಕೆ ಬದಲಿಯಾಗಿ ಕೆಂಪು ಸಾರು ಅವನಿಗೆ ಕೊಟ್ಟನು

      ಪಾಠ 12

      ಯಾಕೋಬನಿಗೆ ಬಾಧ್ಯತೆ ಸಿಕ್ಕಿತು

      ಇಸಾಕ ಮತ್ತು ರೆಬೆಕ್ಕ ತಮ್ಮ ಅವಳಿ ಮಕ್ಕಳಾದ ಯಾಕೋಬ ಮತ್ತು ಏಸಾವನ ಜೊತೆ ಇದ್ದಾರೆ

      ಇಸಾಕನಿಗೆ 40 ವರ್ಷವಾದಾಗ ಅವನು ರೆಬೆಕ್ಕಳನ್ನು ಮದುವೆಯಾದ. ಅವನು ತನ್ನ ಹೆಂಡತಿಯನ್ನು ತುಂಬ ಪ್ರೀತಿಸುತ್ತಿದ್ದ. ನಂತರ ಅವರಿಗೆ ಇಬ್ಬರು ಅವಳಿ ಗಂಡುಮಕ್ಕಳು ಹುಟ್ಟಿದರು.

      ಮೊದಲ ಮಗನ ಹೆಸರು ಏಸಾವ. ಎರಡನೇ ಮಗನ ಹೆಸರು ಯಾಕೋಬ. ಏಸಾವನಿಗೆ ಹೊರಗೆ ಇರಲು ತುಂಬ ಇಷ್ಟ ಮತ್ತು ಅವನೊಬ್ಬ ಒಳ್ಳೇ ಬೇಟೆಗಾರ. ಆದರೆ ಯಾಕೋಬ ಹಾಗಲ್ಲ, ಅವನಿಗೆ ಮನೆಯಲ್ಲಿರಲು ಇಷ್ಟ.

      ಆ ಕಾಲದಲ್ಲಿ ತಂದೆ ತೀರಿಕೊಂಡ ನಂತರ ಹಣ, ಹೊಲ-ಗದ್ದೆಯಲ್ಲಿ ಹೆಚ್ಚಿನ ಪಾಲು ಮೊದಲನೇ ಮಗನಿಗೆ ಸಿಗುತ್ತಿತ್ತು. ಅದನ್ನು ಆಸ್ತಿ ಅನ್ನುತ್ತಾರೆ. ಇಸಾಕನ ಕುಟುಂಬದಲ್ಲಿ ಈ ಆಸ್ತಿ ಇನ್ನೂ ವಿಶೇಷವಾಗಿತ್ತು. ಯಾಕೆಂದರೆ ಇದರಲ್ಲಿ ಯೆಹೋವನು ಅಬ್ರಹಾಮನಿಗೆ ಮಾಡಿದ ವಾಗ್ದಾನದಿಂದ ಬರುವ ಆಶೀರ್ವಾದಗಳೂ ಸೇರಿತ್ತು. ಏಸಾವನಿಗೆ ಆ ಆಶೀರ್ವಾದಗಳ ಬಗ್ಗೆ ಒಂಚೂರು ಗಣ್ಯತೆ ಇರಲಿಲ್ಲ. ಆದರೆ ಯಾಕೋಬನಿಗೆ ಅವು ತುಂಬ ಮುಖ್ಯ ಎಂದು ಗೊತ್ತಿತ್ತು.

      ಯಾಕೋಬ ಮತ್ತು ಏಸಾವ

      ಒಂದು ದಿನ ಏಸಾವ ಇಡೀ ದಿನ ಬೇಟೆಯಾಡಿ ತುಂಬ ಸುಸ್ತಾಗಿ ಮನೆಗೆ ಬಂದ. ಯಾಕೋಬ ರುಚಿಯಾದ ಅಡುಗೆ ತಯಾರಿಸುತ್ತಿದ್ದ. ಅದರ ಪರಿಮಳ ಏಸಾವನ ಮೂಗಿಗೆ ಹತ್ತಿತು. ಆಗ ಏಸಾವ ಯಾಕೋಬನಿಗೆ ‘ನನಗೆ ತುಂಬ ಹಸಿವಾಗ್ತಿದೆ. ಆ ಕೆಂಪು ಸಾರು ತಿನ್ನೋಕೆ ಕೊಡು’ ಎಂದನು. ಆಗ ಯಾಕೋಬ ‘ಕೊಡುತ್ತೀನಿ, ಆದರೆ ಅದಕ್ಕೆ ಮುಂಚೆ ಜ್ಯೇಷ್ಠ ಪುತ್ರನಾಗಿ ನಿನಗಿರೋ ಹಕ್ಕನ್ನ ಮೊದಲು ನನಗೆ ಕೊಡುತ್ತೀನಿ ಅಂತ ಮಾತುಕೊಡು’ ಎಂದನು. ಅದಕ್ಕೆ ಏಸಾವ ‘ಜ್ಯೇಷ್ಠ ಪುತ್ರನಾಗಿ ನನಗಿರೋ ಹಕ್ಕನ್ನ ಇಟ್ಕೊಂಡು ನಾನೇನು ಮಾಡ್ಲಿ? ನೀನೇ ತಗೋ. ನನಗೀಗ ಊಟ ಕೊಡು ಸಾಕು’ ಎಂದ. ಏಸಾವ ಮಾಡಿದ್ದು ಜಾಣತನನಾ? ಖಂಡಿತ ಇಲ್ಲ. ಬರೀ ಒಂದು ಹೊತ್ತು ಊಟಕ್ಕಾಗಿ ಅವನು ತುಂಬ ಅಮೂಲ್ಯವಾದ ವಿಷಯವನ್ನೇ ಕೊಟ್ಟುಬಿಟ್ಟ.

      ವರ್ಷಗಳು ಉರುಳಿತು, ಬಹಳ ವೃದ್ಧನಾದ ಇಸಾಕನು ಮೊದಲ ಮಗನನ್ನು ಆಶೀರ್ವದಿಸುವ ಸಮಯ ಬಂದೇ ಬಿಟ್ಟಿತು. ಆದರೆ ರೆಬೆಕ್ಕ ಆ ಆಶೀರ್ವಾದ ಎರಡನೇ ಮಗನಾದ ಯಾಕೋಬನಿಗೆ ಸಿಗುವಂತೆ ಮಾಡಿದಳು. ಈ ವಿಷಯ ಏಸಾವನಿಗೆ ಗೊತ್ತಾದಾಗ ಅವನ ಕೋಪ ನೆತ್ತಿಗೇರಿತು. ಎಷ್ಟರ ಮಟ್ಟಿಗೆಂದರೆ ಅವನು ತನ್ನ ಜೊತೆ ಹುಟ್ಟಿದ ತಮ್ಮನನ್ನು ಕೊಲ್ಲಲು ಮುಂದಾದ. ಇಸಾಕ ಮತ್ತು ರೆಬೆಕ್ಕ ಯಾಕೋಬನನ್ನು ಏಸಾವನಿಂದ ಕಾಪಾಡಲು ಬಯಸಿದರು. ಆದ್ದರಿಂದ ಅವನಿಗೆ ‘ನಿನ್ನ ತಾಯಿಯ ಅಣ್ಣನಾದ ಲಾಬಾನನ ಮನೆಗೆ ಹೋಗು. ಏಸಾವನ ಕೋಪ ಇಳಿಯೋ ತನಕ ಅಲ್ಲೇ ಇರು’ ಎಂದರು. ಯಾಕೋಬ ಅಪ್ಪ-ಅಮ್ಮನ ಮಾತನ್ನು ಕೇಳಿದ ಮತ್ತು ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋದನು.

      “ಒಬ್ಬ ಮನುಷ್ಯ ಲೋಕವನ್ನೇ ಗೆದ್ದು ತನ್ನ ಪ್ರಾಣ ಕಳ್ಕೊಂಡ್ರೆ ಏನು ಪ್ರಯೋಜನ? ಪ್ರಾಣ ಉಳಿಸ್ಕೊಳ್ಳೋಕೆ ಒಬ್ಬ ಮನುಷ್ಯ ಏನು ತಾನೇ ಕೊಡೋಕಾಗುತ್ತೆ?”—ಮಾರ್ಕ 8:36, 37

      ಪ್ರಶ್ನೆಗಳು: ಏಸಾವ ಎಂಥವನಾಗಿದ್ದನು? ಯಾಕೋಬ ಎಂಥವನಾಗಿದ್ದನು? ಏಸಾವನ ಆಶೀರ್ವಾದ ಯಾಕೋಬನಿಗೆ ಹೇಗೆ ಸಿಕ್ಕಿತು?

      ಆದಿಕಾಂಡ 25:20-34; 27:1–28:5; ಇಬ್ರಿಯ 12:16, 17

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ