-
ಯೆಹೋವನಿಗೆ ಕೊಟ್ಟ ಮಾತುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 23
ಯೆಹೋವನಿಗೆ ಕೊಟ್ಟ ಮಾತು
ಈಜಿಪ್ಟಿನಿಂದ ಬಂದ ಎರಡು ತಿಂಗಳ ನಂತರ, ಇಸ್ರಾಯೇಲ್ಯರು ಸಿನಾಯಿ ಬೆಟ್ಟದ ಹತ್ತಿರ ಡೇರೆಗಳನ್ನು ಹಾಕಿ ಅಲ್ಲಿ ವಾಸಿಸಿದರು. ಯೆಹೋವನು ಮೋಶೆಯನ್ನು ಬೆಟ್ಟಕ್ಕೆ ಕರೆದು ‘ಇಸ್ರಾಯೇಲ್ಯರನ್ನು ಕಾಪಾಡಿದ್ದು ನಾನೇ. ಅವರು ನನ್ನ ಮಾತನ್ನ ತಪ್ಪದೆ ಕೇಳಿದ್ರೆ, ನನ್ನ ನಿಯಮಗಳನ್ನು ಪಾಲಿಸಿದರೆ ಅವರು ನನಗೆ ವಿಶೇಷ ಜನರಾಗ್ತಾರೆ’ ಅಂದನು. ಮೋಶೆ ಬೆಟ್ಟದಿಂದ ಇಳಿದು ಬಂದು ಯೆಹೋವನು ಹೇಳಿದ್ದನ್ನು ಇಸ್ರಾಯೇಲ್ಯರಿಗೆ ತಿಳಿಸಿದನು. ಅವರು ಏನು ಉತ್ತರ ಕೊಟ್ಟರು ಗೊತ್ತಾ? ‘ಯೆಹೋವ ಹೇಳಿದ ಪ್ರತಿಯೊಂದನ್ನ ನಾವು ಖಂಡಿತ ಮಾಡ್ತೀವಿ’ ಅಂದರು.
ಮೋಶೆ ಪುನಃ ಬೆಟ್ಟಕ್ಕೆ ಹೋದನು. ಯೆಹೋವನು ಮೋಶೆಗೆ ‘ಮೂರು ದಿನಗಳಾದ ಮೇಲೆ ನಾನು ನಿನ್ನ ಹತ್ತಿರ ಮಾತಾಡುತ್ತೇನೆ. ಜನರು ಸಿನಾಯಿ ಬೆಟ್ಟಕ್ಕೆ ಬರದಂತೆ ಎಚ್ಚರಿಸು’ ಅಂದನು. ಮೋಶೆ ಕೆಳಗೆ ಹೋಗಿ ಇಸ್ರಾಯೇಲ್ಯರಿಗೆ ‘ಯೆಹೋವನ ಮಾತನ್ನು ಕೇಳಿಸಿಕೊಳ್ಳಲು ಸಿದ್ಧರಾಗಿರಿ’ ಅಂದನು.
ಮೂರು ದಿನಗಳ ನಂತರ, ಇಸ್ರಾಯೇಲ್ಯರು ಬೆಟ್ಟದ ಮೇಲೆ ದಟ್ಟವಾದ ಕಪ್ಪು ಮೋಡ ಹಾಗೂ ಮಿಂಚನ್ನು ನೋಡಿದರು. ಅದರೊಟ್ಟಿಗೆ ಭಯಂಕರವಾದ ಗುಡುಗು ಮತ್ತು ಕೊಂಬೂದೋ ಶಬ್ದವನ್ನೂ ಕೇಳಿಸಿಕೊಂಡರು. ನಂತರ ಯೆಹೋವನು ಬೆಂಕಿಯಲ್ಲಿ ಸಿನಾಯಿ ಬೆಟ್ಟದ ಮೇಲೆ ಇಳಿದು ಬಂದನು. ಇದನ್ನೆಲ್ಲಾ ನೋಡಿ ಇಸ್ರಾಯೇಲ್ಯರು ಭಯದಿಂದ ನಡುಗಿದರು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು ಮತ್ತು ಎಲ್ಲಾ ಕಡೆ ಹೊಗೆ ತುಂಬಿಕೊಂಡಿತು. ಕೊಂಬೂದೋ ಶಬ್ದ ಹೆಚ್ಚಾಗುತ್ತಾ ಬಂತು. ಆಮೇಲೆ ದೇವರು ‘ನಾನು ನಿಮ್ಮ ದೇವರಾದ ಯೆಹೋವ. ನನ್ನನ್ನು ಬಿಟ್ಟು ಬೇರೆ ಯಾರೂ ನಿಮಗೆ ದೇವರು ಆಗಿರಬಾರದು’ ಎಂದನು.
ಮೋಶೆ ಪುನಃ ಬೆಟ್ಟಕ್ಕೆ ಹೋದನು. ಅಲ್ಲಿ ಯೆಹೋವನು ಅವನಿಗೆ ಆಜ್ಞೆಗಳನ್ನ ಕೊಟ್ಟನು. ಅದರಲ್ಲಿ ಜನರು ದೇವರನ್ನು ಹೇಗೆ ಆರಾಧಿಸಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು ಅಂತ ಇತ್ತು. ಮೋಶೆ ಆ ಆಜ್ಞೆಗಳನ್ನ ಬರೆದು ಇಸ್ರಾಯೇಲ್ಯರ ಮುಂದೆ ಓದಿದನು. ಆಗ ಇಸ್ರಾಯೇಲ್ಯರು ‘ಯೆಹೋವ ಹೇಳಿದ ಪ್ರತಿಯೊಂದನ್ನ ನಾವು ಖಂಡಿತ ಮಾಡ್ತೀವಿ’ ಎಂದು ಮಾತು ಕೊಟ್ಟರು. ಅವರು ಮಾತು ಕೊಟ್ಟಿದ್ದು ಸ್ವತಃ ಯೆಹೋವನಿಗೆ. ಆದರೆ ಅವರು ಕೊಟ್ಟ ಮಾತನ್ನು ಉಳಿಸಿಕೊಂಡರಾ?
“ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು.”—ಮತ್ತಾಯ 22:37
-
-
ಅವರು ಕೊಟ್ಟ ಮಾತನ್ನು ತಪ್ಪಿದರುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 24
ಅವರು ಕೊಟ್ಟ ಮಾತನ್ನು ತಪ್ಪಿದರು
ಯೆಹೋವನು ಮೋಶೆಗೆ ‘ಬೆಟ್ಟದ ಮೇಲೆ ಬಾ. ನನ್ನ ಆಜ್ಞೆಗಳನ್ನ ಕಲ್ಲಿನ ಹಲಗೆಗಳ ಮೇಲೆ ಬರೆದು ನಿನಗೆ ಕೊಡ್ತೀನಿ’ ಅಂದನು. ಮೋಶೆ ಬೆಟ್ಟಕ್ಕೆ ಹೋಗಿ 40 ದಿನ ಹಗಲೂರಾತ್ರಿ ಅಲ್ಲೇ ಉಳಿದನು. ಅಲ್ಲಿ ಯೆಹೋವನು ಎರಡು ಕಲ್ಲಿನ ಹಲಗೆಗಳ ಮೇಲೆ ಹತ್ತು ಪ್ರಾಮುಖ್ಯವಾದ ಆಜ್ಞೆಗಳನ್ನು ಬರೆದು ಅದನ್ನು ಮೋಶೆಗೆ ಕೊಟ್ಟನು. ಈ ಆಜ್ಞೆಗಳನ್ನು ದಶಾಜ್ಞೆಗಳು ಎನ್ನುತ್ತಾರೆ.
ಸ್ವಲ್ಪ ಸಮಯದ ನಂತರ ಮೋಶೆ ತಮ್ಮನ್ನು ಬಿಟ್ಟು ಹೋಗಿದ್ದಾನೆ ಎಂದು ಇಸ್ರಾಯೇಲ್ಯರು ನೆನಸಿದರು. ಅವರು ಆರೋನನಿಗೆ ‘ನಮ್ಮನ್ನು ಮುನ್ನಡೆಸಲು ನಮಗೆ ಯಾರಾದರೂ ಬೇಕು. ಹಾಗಾಗಿ ನಮಗೊಂದು ದೇವರನ್ನ ಮಾಡಿಕೊಡು!’ ಎಂದರು. ಆಗ ಆರೋನನು ಜನರಿಗೆ ‘ನಿಮ್ಮಲ್ಲಿರುವ ಚಿನ್ನವನ್ನು ನನಗೆ ಕೊಡಿ’ ಅಂದನು. ಅವನು ಚಿನ್ನವನ್ನು ಕರಗಿಸಿ ಕರುವಿನ ಮೂರ್ತಿಯನ್ನು ಮಾಡಿದ. ಆಗ ಜನರು ನಮ್ಮನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದಿದ್ದು ಈ ದೇವರೇ ಅಂದರು. ಅವರು ಚಿನ್ನದ ಕರುವನ್ನ ಆರಾಧಿಸುತ್ತಾ ದೊಡ್ಡ ಉತ್ಸವವನ್ನು ಮಾಡಿದರು. ಇದು ಸರಿನಾ? ಇಲ್ಲ. ಏಕೆಂದರೆ ಅವರು ಯೆಹೋವನನ್ನು ಮಾತ್ರ ಆರಾಧಿಸುತ್ತೇವೆ ಎಂದು ಮಾತು ಕೊಟ್ಟಿದ್ದರು. ಆದರೆ ಈಗ ಅವರು ಕೊಟ್ಟ ಮಾತನ್ನು ಮುರಿದರು.
ಯೆಹೋವನು ಇದನ್ನೆಲ್ಲಾ ನೋಡಿ ಮೋಶೆಗೆ ‘ಬೇಗ ಇಳಿದು ಹೋಗು. ಜನರು ನನ್ನ ಮಾತನ್ನು ಮೀರಿ ಸುಳ್ಳು ದೇವರನ್ನು ಆರಾಧಿಸುತ್ತಿದ್ದಾರೆ’ ಅಂದನು. ಮೋಶೆ ಎರಡು ಕಲ್ಲಿನ ಹಲಗೆಗಳನ್ನು ತೆಗೆದುಕೊಂಡು ಕೆಳಗೆ ಹೋದನು.
ಅವನು ಹತ್ತಿರ ಹತ್ತಿರ ಬರುತ್ತಿದ್ದಂತೆ ಜನರು ಹಾಡುತ್ತಿದ್ದ ಸದ್ದು ಮೋಶೆಗೆ ಕೇಳಿಸಿತು. ಬಂದು ನೋಡಿದರೆ ಜನರು ಕುಣಿದಾಡುತ್ತಾ ಕರು ಮೂರ್ತಿಗೆ ಅಡ್ಡಬೀಳುತ್ತಿದ್ದರು. ಆಗ ಮೋಶೆಯ ಕೋಪ ನೆತ್ತಿಗೇರಿತು. ಕೈಯಲ್ಲಿದ್ದ ಎರಡು ಕಲ್ಲಿನ ಹಲಗೆಗಳನ್ನು ನೆಲಕ್ಕೆ ಎಸೆದನು. ಅವು ಒಡೆದು ಚೂರುಚೂರಾಯ್ತು ಮತ್ತು ಅವನು ಕೂಡಲೇ ಆ ಮೂರ್ತಿಯನ್ನು ನಾಶಮಾಡಿದನು. ಮೋಶೆ ಆರೋನನಿಗೆ ‘ಈ ಘೋರ ಪಾಪವನ್ನ ನೀನು ಯಾಕೆ ಮಾಡಿದೆ?’ ಎಂದು ಕೇಳಿದನು. ಆಗ ಆರೋನ ‘ಕೋಪ ಮಾಡ್ಕೊಬೇಡ, ಈ ಜನ್ರ ಕೆಟ್ಟ ಬುದ್ಧಿ ನಿನಗೆ ಗೊತ್ತೇ ಇದೆ. ಅವರು ದೇವರು ಬೇಕು ಅಂದರು. ನಾನು ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಕರುವಿನ ಮೂರ್ತಿ ಬಂತು!’ ಅಂದನು. ಆರೋನನು ಇಂಥ ಕೆಲಸವನ್ನು ಮಾಡಬಾರದಿತ್ತು. ಮೋಶೆ ಪುನಃ ಬೆಟ್ಟಕ್ಕೆ ಹೋಗಿ ಜನರನ್ನು ಕ್ಷಮಿಸುವಂತೆ ಯೆಹೋವನನ್ನು ಬೇಡಿದನು.
ಯಾರು ಯೆಹೋವನ ಮಾತನ್ನ ಕೇಳಿದರೋ ಅವರನ್ನು ಆತನು ಕ್ಷಮಿಸಿದನು. ಇಸ್ರಾಯೇಲ್ಯರು ಮೋಶೆಯ ಮಾತನ್ನು ಕೇಳುವುದು ಎಷ್ಟು ಪ್ರಾಮುಖ್ಯ ಆಗಿತ್ತಲ್ವಾ?
“ನೀನು ದೇವ್ರಿಗೆ ಹರಕೆ ಹೊತ್ರೆ ಅದನ್ನ ತೀರಿಸೋಕೆ ತಡಮಾಡಬೇಡ. ಯಾಕಂದ್ರೆ ಹರಕೆ ತೀರಿಸದ ಮೂರ್ಖರನ್ನ ಆತನು ಇಷ್ಟಪಡಲ್ಲ. ನಿನ್ನ ಹರಕೆ ತೀರಿಸು.”—ಪ್ರಸಂಗಿ 5:4
-