ತಪ್ಪು ಯಾರದ್ದು?
ಅನೇಕರು ತಮ್ಮ ಸಂಕಷ್ಟಗಳಿಗೆ ದೇವರನ್ನು ದೂರುತ್ತಾರೆ. ಒಂದು ಬೈಬಲ್ ಜ್ಞಾನೋಕ್ತಿ ಹೇಳುವುದು: “ಮನುಷ್ಯನ ಸ್ವಂತ ಅವಿವೇಕತನವು ಅವನ ಜೀವನವನ್ನು ಧ್ವಂಸಗೊಳಿಸುತ್ತದೆ ಆದರೆ ಅನಂತರ ಅವನು ಕರ್ತನ ವಿರುದ್ಧವಾಗಿ ಅಸಮಾಧಾನವನ್ನು ತಾಳುತ್ತಾನೆ.” (ಜ್ಞಾನೋಕ್ತಿ 19:3, ದ ನ್ಯೂ ಇಂಗ್ಲಿಷ್ ಬೈಬಲ್) ಆದರೂ, ಮನುಷ್ಯನ ದುಃಖಸಂಕಷ್ಟಗಳಿಗಾಗಿ ದೇವರನ್ನು ಹೊಣೆಗಾರನಾಗಿಸುವುದು, ಸಲುವಳಿಯಲ್ಲಿರುವ ಕುಡಿದು ವಾಹನ ಓಡಿಸುವಾಗ ಆಗುವ ಅಪಘಾತಗಳಿಗಾಗಿ, ಕಾರಿನ ಉತ್ಪಾದಕನನ್ನು ದೂರುವಂತಿರುತ್ತದೆ.
ದೇವರು ಮನುಕುಲಕ್ಕೆ ತನ್ನ ವಾಕ್ಯವಾದ ಬೈಬಲಿನಲ್ಲಿ ಅತ್ಯಮೂಲ್ಯವಾದ ಮಾರ್ಗದರ್ಶನವನ್ನು ಕೊಟ್ಟಿದ್ದಾನೆ. ಈ ದೈವಿಕವಾದ ಪುಸ್ತಕಭಂಡಾರವನ್ನು ಓದುವ ಮೂಲಕ ಮತ್ತು ಅದು ಮುಂದಿಡುವ ನೇಮನಿಷ್ಠೆಗಳಿಗನುಸಾರ ಜೀವಿಸುವ ಮೂಲಕ ನಾವು ಜೀವಿತದ ಅನೇಕ ಪಾಶಗಳಿಂದ ದೂರವಿರಸಾಧ್ಯವಿದೆ. ಇದಕ್ಕೆ ವ್ಯತಿರಿಕ್ತವಾಗಿ, ದೇವರ ಮಾರ್ಗದರ್ಶನಕ್ಕೆ ವಿರುದ್ಧವಾಗಿ ಕಾರ್ಯಮಾಡುವುದು ವಿನಾಶಕಾರಿಯಾಗಿದೆ. ಉದಾಹರಣೆಗೆ, ಅತಿಯಾಗಿ ತಿನ್ನುವ, ಧೂಮಪಾನಮಾಡುವ, ಅತಿಯಾಗಿ ಕುಡಿಯುವ ಅಥವಾ ಅನೈತಿಕತೆಯನ್ನು ಮಾಡುವವರು ಅನೇಕ ವೇಳೆ ದಾರುಣ ಅಂತ್ಯವನ್ನು ಕಾಣುವ ಆರೋಗ್ಯ ಪರಿಣಾಮಗಳಿಂದ ಕಷ್ಟಾನುಭವಿಸುತ್ತಾರೆ. (ಲೂಕ 21:34; 1 ಕೊರಿಂಥ 6:18; 2 ಕೊರಿಂಥ 7:1) ಕ್ರೈಸ್ತ ಅಪೊಸ್ತಲ ಪೌಲನು ಬರೆದುದು: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.”—ಗಲಾತ್ಯ 6:7, 8.
ದೇವರ ನೇಮನಿಷ್ಠೆಗಳಿಗನುಸಾರ ಜೀವಿಸುವುದು ಎಷ್ಟೊಂದು ಹೆಚ್ಚು ಉತ್ತಮವಾಗಿರುವುದು! ನಾವು ಹಾಗೆ ನಡೆಯುವಲ್ಲಿ, ಪ್ರವಾದಿ ಯೆಶಾಯನ ಮೂಲಕ ಮಾತಾಡಿದ ದೇವರ ವಾಗ್ದಾನದ ನೈಜತೆಯನ್ನು ನಾವು ಅನುಭವಿಸುವೆವು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.”—ಯೆಶಾಯ 48:17, 18.