ವಾಚಕರಿಂದ ಪ್ರಶ್ನೆಗಳು
ಸಾರೋ ಕೆಲಸ ಯಾವಾಗ ನಿಲ್ಲುತ್ತೆ?
“ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ದೇಶಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ. ಆಮೇಲೆ ಅಂತ್ಯ ಬರುತ್ತೆ” ಅಂತ ಯೇಸು ಹೇಳಿದನು. (ಮತ್ತಾ. 24:14) ಈ ವಚನದಲ್ಲಿ, 6 ಹಾಗೂ 13ನೇ ವಚನದಲ್ಲಿ ಬಳಸಿರೋ “ಅಂತ್ಯ” ಅನ್ನೋ ಪದನ ಗ್ರೀಕ್ ಭಾಷೆಯಲ್ಲಿ ಟೆಲೋಸ್ ಅಂತಾರೆ. ಈ ಪದ ಹರ್ಮಗೆದೋನ್ ಯುದ್ಧದಲ್ಲಿ ಸೈತಾನನ ಲೋಕದ ಅಂತ್ಯವನ್ನ ಸೂಚಿಸುತ್ತೆ. (ಪ್ರಕ. 16:14, 16) ಹಾಗಾಗಿ, ಹರ್ಮಗೆದೋನ್ ಯುದ್ಧ ಶುರುವಾಗೋ ಸ್ವಲ್ಪ ಮುಂಚೆವರೆಗೂ ಈ ಸಿಹಿಸುದ್ದಿ ಸಾರೋ ಕೆಲ್ಸ ನಡೀತಿರುತ್ತೆ. ಆಮೇಲೆ ನಿಲ್ಲುತ್ತೆ. ಈ ಕಾರಣದಿಂದಾಗಿ ಹಿಂದೆ ನಮಗಿದ್ದ ತಿಳುವಳಿಕೆಯಲ್ಲಿ ಸ್ವಲ್ಪ ಹೊಂದಾಣಿಕೆ ಮಾಡ್ಕೋಬೇಕಾಗಿದೆ.
ಈ ಹಿಂದೆ ನಾವು ಮಹಾಸಂಕಟದ ಆರಂಭದಲ್ಲಿ ಮಹಾ ಬಾಬೆಲ್ ನಾಶ ಆಗುತ್ತೆ, ಆಗ ಸಿಹಿಸುದ್ದಿ ಸಾರೋ ಕೆಲ್ಸ ನಿಂತು ಹೋಗುತ್ತೆ ಅಂತ ಹೇಳಿದ್ವಿ. (ಪ್ರಕ. 17:3, 5, 15, 16) ಆಗ “ಯೆಹೋವ ತನ್ನ ಕೃಪೆ ತೋರಿಸೋ ವರ್ಷ” ಕೊನೆಯಾಗುತ್ತೆ ಅಂತ ನಾವು ನಂಬಿದ್ವಿ. (ಯೆಶಾ. 61:2, ಪಾದಟಿಪ್ಪಣಿ.) ಒಂದು ಸಲ ಮಹಾಸಂಕಟ ಶುರುವಾದ್ರೆ ಜನ ಸತ್ಯಕ್ಕೆ ಬರೋಕೆ ಯೆಹೋವ ದೇವರು ಅವಕಾಶ ಕೊಡಲ್ಲ ಅಂತಾನೂ ಅಂದ್ಕೊಂಡಿದ್ವಿ. ಮಹಾ ಸಂಕಟದವರೆಗೂ ಯಾರು ನಿಯತ್ತಾಗಿ ಇರ್ತಾರೋ ಅವರು ಮಾತ್ರನೇ ಮಹಾ ಸಂಕಟ ಪಾರಾಗ್ತಾರೆ ಅಂತಾನೂ ನೆನಸಿದ್ವಿ. ಹೀಗೆ ಪಾರಾಗುವವರು ಕ್ರಿಸ್ತ ಪೂರ್ವ 607ರಲ್ಲಿ ಯೆರೂಸಲೇಮ್ ನಾಶ ಆದಾಗ ಪಾರಾದ ಯೆಹೂದ್ಯರ ತರ ಇದ್ದಾರೆ ಅಂತ ಹೋಲಿಕೆ ಮಾಡಿದ್ವಿ. ಆ ಯೆಹೂದ್ಯರು ಯೆಹೋವನಿಗೆ ಅಲ್ಲಿವರೆಗೂ ನಿಯತ್ತಾಗಿ ಸೇವೆ ಮಾಡ್ತಿದ್ರು ಮತ್ತು ಕೆಟ್ಟತನವನ್ನ ದ್ವೇಷಿಸಿದ್ರು ಅನ್ನೋ ಕಾರಣಕ್ಕೆ ಈ ಹೋಲಿಕೆ ಮಾಡಿದ್ವಿ. (ಯೆಹೆ. 5:11; 9:4) ಆದ್ರೆ ಈ ರೀತಿ ಹೋಲಿಕೆ ಮಾಡೋದು ಸರಿಯಲ್ಲ ಅಂತ ಮತ್ತಾಯ 24:14ರಲ್ಲಿ ಯೇಸು ಹೇಳಿರೋ ಮಾತುಗಳನ್ನ ನೋಡಿದ್ರೆ ಗೊತ್ತಾಗುತ್ತೆ. ಯಾಕಂದ್ರೆ ಅಂತ್ಯ ಬರೋವರೆಗೂ ಅಂದ್ರೆ ಹರ್ಮಗೆದೋನ್ ಶುರುವಾಗೋ ಸ್ವಲ್ಪ ಮುಂಚಿನವರೆಗೂ ಜನ್ರು ಸಿಹಿಸುದ್ದಿಯನ್ನ ಕೇಳಿ ಸತ್ಯಕ್ಕೆ ಬರೋ ಅವಕಾಶ ಇದೆ.
ನಾವು ಮತ್ತಾಯ 24:14ರ ತಿಳುವಳಿಕೆಯಲ್ಲಿ ಸ್ವಲ್ಪ ಹೊಂದಾಣಿಕೆ ಮಾಡ್ಕೊಂಡಿದ್ದೀವಿ, ಆದ್ರಿಂದ ಪ್ರಕಟಣೆ 16:21ರ ತಿಳುವಳಿಕೆಯಲ್ಲೂ ಸ್ವಲ್ಪ ಹೊಂದಾಣಿಕೆ ಮಾಡ್ಕೊಬೇಕಾಗಿದೆ. ಯಾಕಂದ್ರೆ ಈ ಎರಡೂ ವಚನಗಳಿಗೂ ಸಂಬಂಧ ಇದೆ. ಏನು ಸಂಬಂಧ ಇದೆ? ಸಿಹಿಸುದ್ದಿ ಸಾರಿದಾಗ ಜನ ಹೇಗೆ ಪ್ರತಿಕ್ರಿಯಿಸ್ತಾರೆ ಅನ್ನೋದೇ ಆ ಸಂಬಂಧ. ಅಪೊಸ್ತಲ ಪೌಲ ಇದ್ರ ಬಗ್ಗೆ, ‘ಯಾರು ರಕ್ಷಣೆಯ ದಾರಿಯಲ್ಲಿದ್ದಾರೋ, ಅವ್ರಿಗೆ ಈ ಸುದ್ದಿ ಜೀವದ ಪರಿಮಳ ಆಗಿದೆ.’ ಆದ್ರೆ ದೇವರ ಶತ್ರುಗಳಿಗೆ ಇದು ಕಹಿಸುದ್ದಿ ಆಗಿದೆ. ಅಂದ್ರೆ ‘ಇದು ಅವ್ರಿಗೆ ಸಾವಿನ ವಾಸನೆಯಾಗಿದೆ’ ಅಂತ ಬರೆದಿದ್ದಾನೆ. (2 ಕೊರಿಂ. 2:15, 16) ಜನ ಈ ಲೋಕವನ್ನ ತುಂಬ ಪ್ರೀತಿಸ್ತಾರೆ. ಹಾಗಾಗಿ ನಾವು ‘ಈ ಲೋಕ ಕೆಟ್ಟು ಹೋಗಿದೆ, ಇದನ್ನ ಸೈತಾನ ಆಳ್ತಿದ್ದಾನೆ ಮತ್ತು ಇದು ಬೇಗ ನಾಶ ಆಗುತ್ತೆ’ ಅಂತ ಸಾರಿದಾಗ ಜನ ನಮ್ಮನ್ನ ಮತ್ತು ನಾವು ಸಾರೋ ಆ ಸಿಹಿಸುದ್ದಿಯನ್ನ ದ್ವೇಷಿಸ್ತಾರೆ.—ಯೋಹಾ. 7:7; 1 ಯೋಹಾ. 2:17; 5:19.
ಪ್ರಕಟಣೆ 16:21ರಲ್ಲಿ ಆಲಿಕಲ್ಲಿನ ಮಳೆ ದೊಡ್ಡ ಪ್ರಮಾಣದಲ್ಲಿ ಆಗುತ್ತೆ ಅಂತ ಇದೆ. ಆದ್ರಿಂದ ಮಹಾಸಂಕಟದ ಸಮಯದಲ್ಲಿ ಸಾರೋ ಕೆಲಸ ತುಂಬ ಜಾಸ್ತಿ ನಡೆಯುತ್ತೆ, ಯೆಹೋವನ ಹೆಸರು ಹಿಂದೆಂದಿಗಿಂತಲೂ ಹೆಚ್ಚಾಗಿ ಎಲ್ರಿಗೂ ಗೊತ್ತಾಗುತ್ತೆ ಅಂತ ನಾವು ಹೇಳಬಹುದು. (ಯೆಹೆ. 39:7) ಆ ಸಮಯದಲ್ಲಿ ಅಂದ್ರೆ ಮಹಾ ಬಾಬೆಲ್ ನಾಶ ಆದ್ಮೇಲೆ ನಾವು ಸಾರೋ ಸಂದೇಶನ ಜನ ಪರಿಮಳನ ಇಷ್ಟ ಪಡೋ ತರ ಇಷ್ಟಪಡ್ತಾರಾ? ಇಷ್ಟಪಡ್ತಾರೆ ಅಂತ ಅನಿಸುತ್ತೆ. ಯಾಕಂದ್ರೆ ಆಗ ಜನ, ‘ಯೆಹೋವನ ಸಾಕ್ಷಿಗಳು ಇಲ್ಲಿವರೆಗೂ ಸುಳ್ಳು ಧರ್ಮ ನಾಶ ಆಗುತ್ತೆ ಅಂತ ಹೇಳ್ತಿದ್ರಲ್ವಾ? ಅದು ಇದೇ!’ ಅಂತ ನೆನಸ್ಕೊಳ್ತಾರೆ ಅಥವಾ ಅರ್ಥ ಮಾಡ್ಕೊತಾರೆ.
ಈ ಘಟನೆಯನ್ನ ಈಜಿಪ್ಟಿನಲ್ಲಿ ಯೆಹೋವ ಹತ್ತು ಶಿಕ್ಷೆಗಳು ಕೊಟ್ಟಾಗ ಏನಾಯ್ತೋ ಅದಕ್ಕೆ ಹೋಲಿಸಬಹುದು. ಯೆಹೋವ ‘ಈಜಿಪ್ಟಿನ ಎಲ್ಲ ದೇವರುಗಳಿಗೆ ಶಿಕ್ಷೆ ಕೊಟ್ಟ’ ಮೇಲೆ ತನ್ನ ಜನ್ರ ಜೊತೆ ಇಸ್ರಾಯೇಲ್ಯರಲ್ಲದ ‘ತುಂಬ ಬೇರೆ ಜನ್ರು ಸೇರಿಕೊಂಡ್ರು.’ (ವಿಮೋ. 12:12, 37, 38) ಹತ್ತು ಶಿಕ್ಷೆಗಳ ಬಗ್ಗೆ ಮೋಶೆ ಎಚ್ಚರಿಸಿದ್ದನ್ನ ಈ ಜನ್ರು ಕೇಳಿಸಿಕೊಂಡಿದ್ರು. ಆದ್ರೆ ಯಾವಾಗ ಮೋಶೆ ಹೇಳಿದಂತೆ ನಡೆಯೋದನ್ನ ಅವರು ಕಣ್ಣಾರೆ ನೋಡಿದ್ರೋ, ಆಗ ಯೆಹೋವನಲ್ಲಿ ನಂಬಿಕೆ ಇಟ್ಟು ಆತನ ಪಕ್ಷ ಸೇರಿಕೊಂಡ್ರು.
ಮಹಾ ಬಾಬೆಲ್ ನಾಶ ಆದ್ಮೇಲೆ ಯಾರೆಲ್ಲ ಯೆಹೋವನಲ್ಲಿ ನಂಬಿಕೆ ಇಟ್ಟು ಸತ್ಯಕ್ಕೆ ಬರ್ತಾರೋ, ಅವ್ರಿಗೆ ಭೂಮಿಯಲ್ಲಿ ಉಳಿದಿರೋ ಅಭಿಷಿಕ್ತರಿಗೆ ಬೆಂಬಲ ನೀಡೋ ಅವಕಾಶ ಇರುತ್ತೆ. (ಮತ್ತಾ. 25:34-36, 40) ಈ ತರ ಬದಲಾದವ್ರನ್ನ ಕುರಿಗಳು ಅಂತ ನ್ಯಾಯ ತೀರ್ಪು ಮಾಡೋಕೆ ಸ್ವಲ್ಪ ಸಮಯ ಮಾತ್ರ ಇರುತ್ತೆ. ಯಾಕಂದ್ರೆ ಅರ್ಮಗೆದೋನ್ ಶುರುವಾಗೋದಕ್ಕಿಂತ ಮುಂಚೆ ಅಭಿಷಿಕ್ತರಲ್ಲಿ ಉಳಿದವರು ಸ್ವರ್ಗಕ್ಕೆ ಹೋದಾಗ ಈ ನ್ಯಾಯತೀರ್ಪನ್ನ ಮಾಡಬೇಕಿರುತ್ತೆ.
ನಮ್ಮ ತಿಳುವಳಿಕೆಯಲ್ಲಾದ ಈ ಹೊಂದಾಣಿಕೆ ಯೆಹೋವನ ಅಪಾರ ಪ್ರೀತಿ ಮತ್ತು ಕರುಣೆಗೆ ಹಿಡಿದ ಕನ್ನಡಿಯಾಗಿದೆ. ಇದನ್ನೆಲ್ಲಾ ನೋಡಿದ್ರೆ “ಯಾರೂ ನಾಶ ಆಗಬಾರದು ಮತ್ತು ಪಶ್ಚಾತ್ತಾಪ ಪಡೋಕೆ ಎಲ್ರಿಗೂ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ” ಅಂತ ನಮಗೆ ಗೊತ್ತಾಗುತ್ತೆ.—2 ಪೇತ್ರ 3:9.