ಪಾಠ 23
ಯೆಹೋವನಿಗೆ ಕೊಟ್ಟ ಮಾತು
ಈಜಿಪ್ಟಿನಿಂದ ಬಂದ ಎರಡು ತಿಂಗಳ ನಂತರ, ಇಸ್ರಾಯೇಲ್ಯರು ಸಿನಾಯಿ ಬೆಟ್ಟದ ಹತ್ತಿರ ಡೇರೆಗಳನ್ನು ಹಾಕಿ ಅಲ್ಲಿ ವಾಸಿಸಿದರು. ಯೆಹೋವನು ಮೋಶೆಯನ್ನು ಬೆಟ್ಟಕ್ಕೆ ಕರೆದು ‘ಇಸ್ರಾಯೇಲ್ಯರನ್ನು ಕಾಪಾಡಿದ್ದು ನಾನೇ. ಅವರು ನನ್ನ ಮಾತನ್ನ ತಪ್ಪದೆ ಕೇಳಿದ್ರೆ, ನನ್ನ ನಿಯಮಗಳನ್ನು ಪಾಲಿಸಿದರೆ ಅವರು ನನಗೆ ವಿಶೇಷ ಜನರಾಗ್ತಾರೆ’ ಅಂದನು. ಮೋಶೆ ಬೆಟ್ಟದಿಂದ ಇಳಿದು ಬಂದು ಯೆಹೋವನು ಹೇಳಿದ್ದನ್ನು ಇಸ್ರಾಯೇಲ್ಯರಿಗೆ ತಿಳಿಸಿದನು. ಅವರು ಏನು ಉತ್ತರ ಕೊಟ್ಟರು ಗೊತ್ತಾ? ‘ಯೆಹೋವ ಹೇಳಿದ ಪ್ರತಿಯೊಂದನ್ನ ನಾವು ಖಂಡಿತ ಮಾಡ್ತೀವಿ’ ಅಂದರು.
ಮೋಶೆ ಪುನಃ ಬೆಟ್ಟಕ್ಕೆ ಹೋದನು. ಯೆಹೋವನು ಮೋಶೆಗೆ ‘ಮೂರು ದಿನಗಳಾದ ಮೇಲೆ ನಾನು ನಿನ್ನ ಹತ್ತಿರ ಮಾತಾಡುತ್ತೇನೆ. ಜನರು ಸಿನಾಯಿ ಬೆಟ್ಟಕ್ಕೆ ಬರದಂತೆ ಎಚ್ಚರಿಸು’ ಅಂದನು. ಮೋಶೆ ಕೆಳಗೆ ಹೋಗಿ ಇಸ್ರಾಯೇಲ್ಯರಿಗೆ ‘ಯೆಹೋವನ ಮಾತನ್ನು ಕೇಳಿಸಿಕೊಳ್ಳಲು ಸಿದ್ಧರಾಗಿರಿ’ ಅಂದನು.
ಮೂರು ದಿನಗಳ ನಂತರ, ಇಸ್ರಾಯೇಲ್ಯರು ಬೆಟ್ಟದ ಮೇಲೆ ದಟ್ಟವಾದ ಕಪ್ಪು ಮೋಡ ಹಾಗೂ ಮಿಂಚನ್ನು ನೋಡಿದರು. ಅದರೊಟ್ಟಿಗೆ ಭಯಂಕರವಾದ ಗುಡುಗು ಮತ್ತು ಕೊಂಬೂದೋ ಶಬ್ದವನ್ನೂ ಕೇಳಿಸಿಕೊಂಡರು. ನಂತರ ಯೆಹೋವನು ಬೆಂಕಿಯಲ್ಲಿ ಸಿನಾಯಿ ಬೆಟ್ಟದ ಮೇಲೆ ಇಳಿದು ಬಂದನು. ಇದನ್ನೆಲ್ಲಾ ನೋಡಿ ಇಸ್ರಾಯೇಲ್ಯರು ಭಯದಿಂದ ನಡುಗಿದರು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು ಮತ್ತು ಎಲ್ಲಾ ಕಡೆ ಹೊಗೆ ತುಂಬಿಕೊಂಡಿತು. ಕೊಂಬೂದೋ ಶಬ್ದ ಹೆಚ್ಚಾಗುತ್ತಾ ಬಂತು. ಆಮೇಲೆ ದೇವರು ‘ನಾನು ನಿಮ್ಮ ದೇವರಾದ ಯೆಹೋವ. ನನ್ನನ್ನು ಬಿಟ್ಟು ಬೇರೆ ಯಾರೂ ನಿಮಗೆ ದೇವರು ಆಗಿರಬಾರದು’ ಎಂದನು.
ಮೋಶೆ ಪುನಃ ಬೆಟ್ಟಕ್ಕೆ ಹೋದನು. ಅಲ್ಲಿ ಯೆಹೋವನು ಅವನಿಗೆ ಆಜ್ಞೆಗಳನ್ನ ಕೊಟ್ಟನು. ಅದರಲ್ಲಿ ಜನರು ದೇವರನ್ನು ಹೇಗೆ ಆರಾಧಿಸಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು ಅಂತ ಇತ್ತು. ಮೋಶೆ ಆ ಆಜ್ಞೆಗಳನ್ನ ಬರೆದು ಇಸ್ರಾಯೇಲ್ಯರ ಮುಂದೆ ಓದಿದನು. ಆಗ ಇಸ್ರಾಯೇಲ್ಯರು ‘ಯೆಹೋವ ಹೇಳಿದ ಪ್ರತಿಯೊಂದನ್ನ ನಾವು ಖಂಡಿತ ಮಾಡ್ತೀವಿ’ ಎಂದು ಮಾತು ಕೊಟ್ಟರು. ಅವರು ಮಾತು ಕೊಟ್ಟಿದ್ದು ಸ್ವತಃ ಯೆಹೋವನಿಗೆ. ಆದರೆ ಅವರು ಕೊಟ್ಟ ಮಾತನ್ನು ಉಳಿಸಿಕೊಂಡರಾ?
“ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು.”—ಮತ್ತಾಯ 22:37