ಪಾಠ 57
ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ
ಯೆಹೋವನು ಯೆರೆಮೀಯನನ್ನು ಪ್ರವಾದಿಯಾಗಿ ಆರಿಸಿದನು. ಆತನು ಅವನಿಗೆ ಯೆಹೂದದ ಜನರಿಗೆ ಸಾರಲು ಮತ್ತು ಅವರು ಮಾಡುತ್ತಿದ್ದ ಕೆಟ್ಟ ಕೆಲಸಗಳನ್ನು ನಿಲ್ಲಿಸುವಂತೆ ಎಚ್ಚರಿಸಲು ಹೇಳಿದನು. ಆಗ ಯೆರೆಮೀಯನು ‘ಯೆಹೋವನೇ, ನಾನಿನ್ನೂ ಚಿಕ್ಕ ಹುಡುಗ. ನನಗೆ ಜನರ ಹತ್ತಿರ ಸರಿಯಾಗಿ ಮಾತಾಡೋಕ್ಕೂ ಬರಲ್ಲ’ ಅಂದನು. ಯೆಹೋವನು ಅವನಿಗೆ ‘ಭಯಪಡಬೇಡ. ಏನು ಹೇಳಬೇಕು ಅಂತ ನಾನು ನಿನಗೆ ಹೇಳ್ತೀನಿ, ನಾನು ನಿನಗೆ ಸಹಾಯ ಮಾಡ್ತೀನಿ’ ಅಂದನು.
ಯೆಹೋವನು ಯೆರೆಮೀಯನಿಗೆ ಹಿರಿಯರಲ್ಲಿ ಕೆಲವ್ರನ್ನ ಸೇರಿ ಬರಲು ಹೇಳಿದನು. ಅವರ ಮುಂದೆ ಮಣ್ಣಿನ ಜಾಡಿಯನ್ನು ಒಡೆದು ‘ಈ ಮಣ್ಣಿನ ಪಾತ್ರೆ ತರಾನೇ ಯೆರೂಸಲೇಮ್ ನಾಶವಾಗುವುದು ಎಂದು ಹೇಳು’ ಅಂದನು. ಯೆಹೋವನು ಹೇಳಿದಂತೆ ಯೆರೆಮೀಯ ಮಾಡಿದಾಗ ಅಲ್ಲಿನ ಹಿರಿಯರಿಗೆ ತುಂಬ ಸಿಟ್ಟು ಬಂತು. ಪಷ್ಹೂರನೆಂಬ ಪುರೋಹಿತ ಯೆರೆಮೀಯನನ್ನು ಹೊಡೆದು ಮರದ ಬೇಡಿಗಳಿಂದ ಅವನ ಕೈಕಾಲುಗಳನ್ನು ಬಿಗಿದ. ಇಡೀ ರಾತ್ರಿ ಯೆರೆಮೀಯನಿಗೆ ಅಲುಗಾಡಲೂ ಆಗಲಿಲ್ಲ. ಮಾರನೇ ದಿನ ಬೆಳಗ್ಗೆ ಪಷ್ಹೂರನು ಯೆರೆಮೀಯನನ್ನು ಬಿಡಿಸಿದ. ಆಗ ಯೆರೆಮೀಯ ‘ನನಗೆ ಸಾಕಾಯಿತು. ನಾನು ಇನ್ನು ಮುಂದೆ ಸಾರೋದಿಲ್ಲ’ ಅಂದನು. ಆದರೆ ಯೆರೆಮೀಯ ಸಾರೋದನ್ನ ನಿಜವಾಗಿಯೂ ನಿಲ್ಲಿಸಿಬಿಟ್ಟನಾ? ಇಲ್ಲ. ಈ ವಿಚಾರದ ಬಗ್ಗೆ ಅವನು ಸ್ವಲ್ಪ ಯೋಚಿಸಿದ. ಆಮೇಲೆ ಅವನು ‘ಯೆಹೋವನ ಸಂದೇಶ ಬೆಂಕಿ ತರ ನನ್ನ ಮೂಳೆಗಳ ಒಳಗೆ ಉರಿಯುತ್ತಿದೆ. ನಾನು ಸಾರುವುದನ್ನು ನಿಲ್ಲಿಸಲು ಆಗಲ್ಲ’ ಅಂದನು. ಅವನು ಜನರನ್ನು ಎಚ್ಚರಿಸುವುದನ್ನು ಮುಂದುವರೆಸಿದ.
ವರ್ಷಗಳು ಕಳೆದಂತೆ ಯೆಹೂದವನ್ನು ಒಬ್ಬ ಹೊಸ ರಾಜ ಆಳಲು ಶುರು ಮಾಡಿದ. ಯೆರೆಮೀಯ ಹೇಳುತ್ತಿದ್ದ ಸಂದೇಶ ಪುರೋಹಿತರಿಗೆ ಮತ್ತು ಸುಳ್ಳು ಪ್ರವಾದಿಗಳಿಗೆ ಇಷ್ಟ ಆಗುತ್ತಿರಲಿಲ್ಲ. ಅವರು ಅಧಿಕಾರಿಗಳಿಗೆ ‘ಇವನಿಗೆ ಮರಣ ಶಿಕ್ಷೆ ಕೊಡಿ’ ಅಂದರು. ಅದಕ್ಕೆ ಯೆರೆಮೀಯ ‘ನೀವೇನಾದ್ರೂ ನನ್ನನ್ನ ಕೊಂದ್ರೆ ಒಬ್ಬ ಅಮಾಯಕನನ್ನು ಕೊಂದಂತೆ. ನಾನು ಹೇಳುತ್ತಿರುವುದು ನನ್ನ ಸ್ವಂತ ಮಾತುಗಳಲ್ಲ, ಯೆಹೋವನ ಮಾತುಗಳು’ ಅಂದನು. ಆಗ ಅಧಿಕಾರಿಗಳು ‘ಇವನಿಗೆ ಮರಣ ಶಿಕ್ಷೆ ಕೊಡುವುದು ಬೇಡ’ ಅಂದರು.
ಯೆರೆಮೀಯ ಸಾರುವುದನ್ನು ಮುಂದುವರೆಸಿದ. ಇದರಿಂದ ಅಧಿಕಾರಿಗಳಿಗೆ ತುಂಬ ಕೋಪ ಬಂತು. ಅವರು ಅವನಿಗೆ ಮರಣ ಶಿಕ್ಷೆ ವಿಧಿಸುವಂತೆ ರಾಜನನ್ನು ಕೇಳಿಕೊಂಡರು. ಆಗ ರಾಜ ‘ಯೆರೆಮೀಯನಿಗೆ ಏನು ಬೇಕಾದ್ರೂ ಮಾಡಿ’ ಅಂದ. ಅವರು ಯೆರೆಮೀಯನನ್ನು ಆಳವಾದ ಕೆಸರಿನ ಗುಂಡಿಗೆ ಹಾಕಿದರು. ಅವನು ಅಲ್ಲೇ ಸಾಯಲಿ ಅಂತ ಅಂದುಕೊಂಡರು. ಆ ಕೆಸರಿನಲ್ಲಿ ಯೆರೆಮೀಯ ಸ್ವಲ್ಪಸ್ವಲ್ಪನೇ ಹೂತುಹೋಗ್ತಾ ಇದ್ದ.
ಆಸ್ಥಾನದ ಅಧಿಕಾರಿಯಾದ ಎಬೆದ್ಮೆಲೆಕ ರಾಜನಿಗೆ ‘ಅಧಿಕಾರಿಗಳು ಯೆರೆಮೀಯನನ್ನ ಗುಂಡಿಗೆ ಹಾಕಿದ್ದಾರೆ! ಅವನನ್ನ ಅಲ್ಲೇ ಬಿಟ್ರೆ ಸತ್ತೇ ಹೋಗ್ತಾನೆ’ ಅಂದನು. ಆಗ ರಾಜ ಅವನಿಗೆ ‘ಗಂಡಸರನ್ನ ಕರ್ಕೊಂಡು ಹೋಗಿ ಯೆರೆಮೀಯನನ್ನ ಗುಂಡಿಯಿಂದ ಹೊರಗೆ ಎತ್ತು’ ಎಂದು ಅಪ್ಪಣೆಕೊಟ್ಟನು. ಯೆರೆಮೀಯನಿಗೆ ಎಷ್ಟೇ ಕಷ್ಟ ಬಂದರೂ ಅವನು ಸಾರೋದನ್ನ ಮಾತ್ರ ನಿಲ್ಲಿಸಲಿಲ್ಲ. ನಾವು ಅವನಂತೆ ಇರಬೇಕಲ್ವಾ?
“ನೀವು ನನ್ನ ಶಿಷ್ಯರಾಗಿರೋ ಕಾರಣ ಜನ್ರೆಲ್ಲ ನಿಮ್ಮನ್ನ ದ್ವೇಷಿಸ್ತಾರೆ. ಆದ್ರೆ ಕೊನೆ ತನಕ ತಾಳ್ಕೊಳ್ಳುವವನಿಗೆ ರಕ್ಷಣೆ ಸಿಗುತ್ತೆ.”—ಮತ್ತಾಯ 10:22