ನಮ್ಮ ಮಧ್ಯೆ ದೇವದೂತರು ಇದ್ದಾರೋ?
ಅದು ಬಹು ಥಟ್ಟನೆ ಸಂಭವಿಸಿತು. ಆಲೋಚನಾಮಗ್ನಳೂ ತನ್ನ ಸುತ್ತಮುತ್ತಲನ್ನು ಮರೆತವಳೂ ಆಗಿ ಮೆರಿಲಿನ್ ರೈಲುಹಾದಿಯ ಕಂಬಿಗಳ ಮೇಲೆ ಅಡಾಡ್ಡಿದಳು. ದಿಢೀರನೇ, ಒಂದು ಗಟ್ಟಿಯಾದ ಗುಡುಪಿಸುಗುಟ್ಟುವ ಸದ್ದು ಅವಳಿಗೆ ಕೇಳಿಬಂತು. ಮೇಲೆ ನೋಡಿದಾಗ, ಮುಂದೋಡಿ ಬರುತ್ತಿದ್ದ ರೈಲುಗಾಡಿಯ ಪಥದಲ್ಲಿ ತಾನು ನೇರವಾಗಿ ನಿಂತಿರುವುದನ್ನು ಕಂಡಳಾಕೆ! ಭಯದಿಂದ ಹೆಪ್ಪುಗಟ್ಟಿ ಸ್ತಂಭೀಭೂತಳಾಗಿ ನಿಂತಳು ಮೆರಿಲಿನ್. ರೈಲುಗಾಡಿ ಎಷ್ಟು ಹತ್ತಿರವಿತ್ತೆಂದರೆ, ರೈಲು ಚಾಲಕನ ನೀಲ ನೇತ್ರಗಳು ಮತ್ತು ಭಯಾರ್ತ ಮುಖವೂ ಅವಳಿಗೆ ಕಾಣಿಸಿದವು. ಮರುಕ್ಷಣ ಏನು ಸಂಭವಿಸಿತೆಂಬುದನ್ನು ಮೆರಿಲಿನ್ ಎಂದೂ ಮರೆಯದಾದಳು. “ಅದು ಹಿಂದಿನಿಂದ ದೈತ್ಯನೊಬ್ಬನು ಬಂದು ನನ್ನನ್ನು ತಳ್ಳಿದನೋ ಎಂಬಂತಿತ್ತು,” ಎಂದಳಾಕೆ. “ನಾನು ರೈಲು ಕಂಬಿಗಳಿಂದ ಹಾರಿಹೋಗಿ ತುಸು ಆಚೆಕಡೆ ತನಿಗೆಂಡದ ಮೇಲೆ ಬಿದ್ದುಬಿಟ್ಟೆ.” ಜಜ್ಜು ಗಾಯಗೊಂಡ ಮೆರಿಲಿನ್ ತನ್ನ ರಕ್ಷಕನಿಗೆ ಉಪಕಾರ ಹೇಳಲು ಎದ್ದುನಿಂತಾಗ—ಅಲ್ಲಿ ಯಾರೂ ಇರಲಿಲ್ಲ! ಅವಳ ತೀರ್ಮಾನವೇನು? “ನನ್ನ ರಕ್ಷಕ ದೂತನು ನನ್ನ ಜೀವವನ್ನುಳಿಸಿದನು,” ಅನ್ನುತ್ತಾಳೆ ಮೆರಿಲಿನ್. “ಅದು ಬೇರೆ ಯಾರಾಗಿದ್ದಿರಸಾಧ್ಯ?”
ಸಂದೇಹಾತ್ಮಕ ಜಗತ್ತಿಗೆ ಥಟ್ಟನೆ ದೇವದೂತರ ಭ್ರಾಂತಿ ಹತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಸ್ವರ್ಗೀಯ ಜೀವಿಗಳು ಟೆಲಿವಿಷನ್ ಶೋಗಳ, ಚಲನ ಚಿತ್ರಗಳ, ಮತ್ತು ಒಂದು ಬ್ರಾಡ್ವೇ ನಾಟಕದ ವಿಷಯವಾಗಿಯೂ ಇವೆ. ಧಾರ್ಮಿಕ ಜನಪ್ರಿಯ ಪುಸ್ತಕಗಳ ಪಟ್ಟಿಯಲ್ಲಿ ದೇವದೂತರ ಕುರಿತ ಪುಸ್ತಕಗಳು ಆದ್ಯ ಸ್ಥಾನದಲ್ಲಿವೆ. ದೇವದೂತರ ಕ್ಲಬ್ಗಳು, ಪ್ರೌಢ ವ್ಯಾಸಂಗಗಳು, ಮತ್ತು ಸುದ್ದಿಪತ್ರಗಳು ಇವೆ. ಒಂದು ಲೇಖನವು ಹೇಳಿದ ಪ್ರಕಾರ, “‘ದೂತಸಂಬಂಧದ ಬೆಂಬಲವನ್ನು’ ಪಡೆಯಲು—ನಿಮ್ಮ ಸಹಾಯಕ್ಕಾಗಿ ಕಾರ್ಯಕ್ರಮಗಳು ರಚಿಸಲ್ಪಟ್ಟಿವೆ.”
ಈ ದೇವದೂತ ಚಳುವಳಿಯ ಕಚ್ಚೆಯನ್ನು ಅನುಕೂಲವಾಗಿ ಹಿಡಿದುಕೊಳ್ಳುವವರು, ಬಳಕೆದಾರರ ಅಂತ್ಯರಹಿತ ಉತ್ಪಾದನೆಗಳಿಗೆ ಗಿರಾಕಿಗಳನ್ನು ಹಿಡಿಯುವ ಸಮಯಸಾಧಕ ವ್ಯಾಪಾರಿಗಳು. “ದೇವದೂತರ ಚಿತ್ರವಿರುವ ಯಾವುದೇ ವಸ್ತುವು ಲಾಭತರುತ್ತದೆ,” ಎನ್ನುತ್ತಾಳೆ ಅಮೆರಿಕದ ಒಬ್ಬ ಅಂಗಡಿಯ ಜೊತೆಒಡತಿ. ದೇವದೂತರ ಕುರಿತ ಅನೇಕಾನೇಕ ಪುಸ್ತಕಗಳ ಮಾರಾಟ ಮಾತ್ರವಲ್ಲದೆ, “ದೇವದೂತ ಮೂರ್ತಿಗಳು, ಪಿನ್ಗಳು, ಗೊಂಬೆಗಳು, ಟಿ-ಶರ್ಟುಗಳು, ಭಿತ್ತಿಪತ್ರಗಳು, ಮತ್ತು ಅಭಿನಂದನಾ ಕಾರ್ಡುಗಳನ್ನೂ” ಅವಳು ಪಟ್ಟಿಮಾಡುತ್ತಾಳೆ—ಇವೆಲ್ಲವು ಒಬ್ಬ ಪತ್ರಕರ್ತನು ಅದನ್ನು ಕರೆಯುವಂತೆ, “ಸ್ವರ್ಗೀಯ ಲಾಭಗಳನ್ನು” ಜಮಾಯಿಸುತ್ತವೆ.
ಆದರೆ ಇದು ಕೇವಲ ಒಂದು ಭ್ರಮೆಯಲ್ಲವೆಂದು ಆಗ್ರಹಪಡಿಸುತ್ತಾರೆ ದೇವದೂತ ಪ್ರತಿಪಾದಕರು. ತಮ್ಮ ವಾದವನ್ನು ಬೆಂಬಲಿಸಲು ಅವರು ದೇವದೂತರೊಂದಿಗಿನ “ನಿಜ-ಜೀವನ” ಸಮಾಗಮಗಳ ಕುರಿತ ಒಂದರ ಮೇಲೊಂದು ಸಾಕ್ಷ್ಯಗಳನ್ನು ನೀಡುತ್ತಿದ್ದಾರೆ. ಮನುಷ್ಯ ರೂಪದಲ್ಲಿ ಒಬ್ಬ ದೇವದೂತನನ್ನು ತಾವು ಕಂಡೆವೆಂದು ಕೆಲವರು ಹೇಳುತ್ತಾರೆ. ಇತರರು ಒಂದು ಬೆಳಕನ್ನು ಕಂಡರು, ಒಂದು ಧ್ವನಿಯನ್ನು ಕೇಳಿದರು, ಒಂದು ಸಮ್ಮುಖವನ್ನು ಅನುಭವಿಸಿದರು, ಅಥವಾ ದೇವದೂತರದ್ದೆಂದು ತಾವು ನಂಬಿದ ಒಂದು ಉದ್ರೇಕವನ್ನು ಹೊಂದಿದರು. ಮೆರಿಲಿನ್ನಂತೆ, ಅನೇಕರು, ದೇವದೂತನೊಬ್ಬನು ತಮ್ಮ ಜೀವ ಉಳಿಸಿದನೆಂದು ಹೇಳುತ್ತಾರೆ.
ಸಂಭವಿಸುತ್ತಿರುವುದೇನು? “ಆತ್ಮಿಕತೆಯ ಪುನರುಜ್ಜೀವನವಾಗುತಲ್ತಿದೆ ಎಂಬುದು ನನ್ನೆಣಿಕೆ,” ಎನ್ನುತ್ತಾಳೆ, “ಅಲೌಕಿಕ” ಸಮಾಗಮಗಳ ಕುರಿತು ಎರಡು ಪುಸ್ತಕಗಳನ್ನು ಬರೆದಿರುವ ಜೋನ್ ವೆಸರ್ಟ್ ಆ್ಯಂಡರ್ಸನ್. ಇನ್ನೊಂದು ಪುಸ್ತಕದ ಕೃತಿಗೆ ನೆರವಾದ ಆಲ್ಮ ಡ್ಯಾನಿಯೆಲ್, ಅದನ್ನು ಇನ್ನೊಂದು ಹೆಜ್ಜೆ ಮುಂದೆ ಒಯ್ಯುತ್ತಾಳೆ. ಅವಳನ್ನುವುದೇನಂದರೆ, ದೇವದೂತರಿಗೆ “ಅಧಿಕಾಧಿಕ ಜನರನ್ನು ತಲಪಲು ಸಾಧ್ಯವಾಗುವಂತೆ ತಮ್ಮನ್ನು ಜ್ಞಾತಪಡಿಸಿಕೊಳ್ಳುವ ಆಜ್ಞೆಯನ್ನು ಕೊಡಲಾಗಿದೆ. ಅವರ ಕುರಿತು ನಾವು ಬಹಳಷ್ಟನ್ನು ಕಾಣುತ್ತಿರುವುದು ಯಾಕೆಂದರೆ ಅವರದನ್ನು ಆ ರೀತಿ ಬಯಸುತ್ತಾರೆ. ಮತ್ತು ಅದನ್ನು ಮಾಡುತ್ತಿದ್ದಾರೆ.”
ಇದು ನಿಜವಾಗಿಯೂ ಹಾಗೋ? ಅಥವಾ ಸದ್ಯದ ದೇವದೂತ ಆಕರ್ಷಣೆಯ ಹಿಂದುಗಡೆ ಬೇರೇನಾದರೂ ಇದೆಯೇ? ಇದನ್ನು ಕಂಡುಹಿಡಿಯಲು ದೇವರ ವಾಕ್ಯವನ್ನು ನಾವು ಪರೀಕ್ಷಿಸಬೇಕು. ನಾವು ನೋಡಲಿರುವಂತೆ, ಬೈಬಲಿನಲ್ಲಿ ದೇವದೂತರ ಕುರಿತ ಸತ್ಯವು ಅಡಕವಾಗಿದೆ.
[ಪುಟ 2 ರಲ್ಲಿರುವ ಚಿತ್ರ ಕೃಪೆ]
Pages 3 and 4: The New Testament: A Pictorial Archive from Nineteenth-Century Sources, by Don Rice/Dover Publications, Inc.