ದೇವರೊಂದಿಗೆ ನಡೆಯಿರಿ ಮತ್ತು ಒಳ್ಳೇದನ್ನು ಕೊಯ್ಯಿರಿ
“ಅವರು ಗಾಳಿಯನ್ನು ಬಿತ್ತುತ್ತಾರೆ, ಬಿರುಗಾಳಿಯನ್ನು ಕೊಯ್ದುಕೊಳ್ಳುವರು.”—ಹೋಶೇಯ 8:7.
1. ನಾವು ಯೆಹೋವನೊಂದಿಗೆ ಹೇಗೆ ನಡೆಯಸಾಧ್ಯವಿದೆ?
ಅಪಾಯಕರವಾದ ಒಂದು ಪ್ರದೇಶವನ್ನು ದಾಟಿಹೋಗಲಿಕ್ಕಿರುವಾಗ ಒಬ್ಬ ಅನುಭವಸ್ಥ ಮಾರ್ಗದರ್ಶಕನು ನಮಗೆ ದಾರಿತೋರಿಸುವಲ್ಲಿ ಅದು ಹೆಚ್ಚು ಸುರಕ್ಷಿತವಾಗಿರುವುದು. ಒಂಟಿಯಾಗಿ ಹೋಗುವುದಕ್ಕಿಂತ ಇಂಥ ಒಬ್ಬ ಮಾರ್ಗದರ್ಶಕನೊಂದಿಗೆ ನಡೆಯುವುದು ವಿವೇಕಯುತವಾಗಿರುವುದು. ಇದು ಕೆಲವು ವಿಧಗಳಲ್ಲಿ ನಾವಿರುವಂಥ ಸನ್ನಿವೇಶವನ್ನು ದೃಷ್ಟಾಂತಿಸುತ್ತದೆ. ಕಾರ್ಯತಃ ಯೆಹೋವನು ಈಗಿನ ದುಷ್ಟ ಲೋಕದ ವಿಶಾಲವಾದ ಮರುಭೂಮಿಯಲ್ಲಿ ನಮ್ಮನ್ನು ಮಾರ್ಗದರ್ಶಿಸಲಿಕ್ಕಾಗಿ ತನ್ನನ್ನೇ ನೀಡಿಕೊಂಡಿದ್ದಾನೆ. ಆದಕಾರಣ, ನಾವು ನಮ್ಮ ಸ್ವಂತ ಹೆಜ್ಜೆಗಳನ್ನು ನಿರ್ದೇಶಿಸಲು ಪ್ರಯತ್ನಿಸುವ ಬದಲು ಆತನೊಂದಿಗೆ ನಡೆಯುವುದು ವಿವೇಕಯುತವಾದದ್ದಾಗಿದೆ. ನಾವು ದೇವರೊಂದಿಗೆ ಹೇಗೆ ನಡೆಯಸಾಧ್ಯವಿದೆ? ಆತನು ತನ್ನ ವಾಕ್ಯದಲ್ಲಿ ಒದಗಿಸುವ ಮಾರ್ಗದರ್ಶನವನ್ನು ಅನುಸರಿಸುವ ಮೂಲಕವೇ.
2. ಈ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
2 ಹಿಂದಿನ ಲೇಖನವು, ಹೋಶೇಯ 1ರಿಂದ 5ನೇ ಅಧ್ಯಾಯಗಳಲ್ಲಿ ಕಂಡುಬರುವ ಸಾಂಕೇತಿಕ ನಾಟಕದ ಕುರಿತು ಚರ್ಚಿಸಿತು. ನಾವು ನೋಡಿರುವಂತೆ, ಆ ನಾಟಕವು ನಾವು ದೇವರೊಂದಿಗೆ ನಡೆಯಲು ಸಹಾಯಮಾಡಸಾಧ್ಯವಿರುವ ಪಾಠಗಳನ್ನು ಒಳಗೂಡಿದೆ. ಈಗ ನಾವು 6ರಿಂದ 9ರ ವರೆಗಿನ ಅಧ್ಯಾಯಗಳ ಕೆಲವು ಪ್ರಮುಖ ಭಾಗಗಳನ್ನು ಚರ್ಚಿಸೋಣ. ಈ ನಾಲ್ಕು ಅಧ್ಯಾಯಗಳ ಸ್ಥೂಲ ಸಮೀಕ್ಷೆಯೊಂದಿಗೆ ಆರಂಭಿಸುವುದು ಸಹಾಯಕರವಾಗಿದ್ದೀತು.
ಒಂದು ಸಂಕ್ಷಿಪ್ತವಾದ ಸ್ಥೂಲ ಸಮೀಕ್ಷೆ
3. ಹೋಶೇಯ 6ರಿಂದ 9ನೇ ಅಧ್ಯಾಯಗಳಲ್ಲಿರುವ ವಿಷಯವನ್ನು ಸಂಕ್ಷಿಪ್ತವಾಗಿ ತಿಳಿಸಿರಿ.
3 ಯೆಹೋವನು ಹೋಶೇಯನನ್ನು ಪ್ರಧಾನವಾಗಿ ಉತ್ತರದ ಹತ್ತು ಕುಲಗಳ ಇಸ್ರಾಯೇಲ್ ರಾಜ್ಯಕ್ಕೆ ಪ್ರವಾದಿಸಲಿಕ್ಕಾಗಿ ಕಳುಹಿಸಿದನು. ಇದರ ಪ್ರಮುಖ ಕುಲವಾಗಿರುವ ಎಫ್ರಾಯೀಮ್ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದ್ದ ಈ ಜನಾಂಗವು ದೇವರನ್ನು ತಿರಸ್ಕರಿಸಿತ್ತು. ಹೋಶೇಯ 6ರಿಂದ 9ನೇ ಅಧ್ಯಾಯಗಳು, ಜನರು ಯೆಹೋವನ ಒಡಂಬಡಿಕೆಯನ್ನು ಮೀರಿನಡೆದು ದುಷ್ಟತನವನ್ನು ರೂಢಿಸಿಕೊಳ್ಳುವ ಮೂಲಕ ನಿಷ್ಠಾಹೀನತೆಯನ್ನು ಪ್ರದರ್ಶಿಸಿದರು ಎಂಬುದನ್ನು ತೋರಿಸುತ್ತವೆ. (ಹೋಶೇಯ 6:7) ಅವರು ಯೆಹೋವನ ಬಳಿ ಹಿಂದಿರುಗುವುದಕ್ಕೆ ಬದಲಾಗಿ ಲೌಕಿಕ ಮೈತ್ರಿಗಳಲ್ಲಿ ಭರವಸೆಯಿಟ್ಟರು. ಅವರು ಕೆಟ್ಟದ್ದನ್ನೇ ಬಿತ್ತುತ್ತಾ ಇದ್ದ ಕಾರಣ ಕೆಟ್ಟದ್ದನ್ನೇ ಕೊಯ್ಯಲಿದ್ದರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅವರ ಮೇಲೆ ಪ್ರತಿಕೂಲವಾದ ನ್ಯಾಯತೀರ್ಪು ಬರಲಿಕ್ಕಿತ್ತು. ಆದರೆ ಹೋಶೇಯನ ಪ್ರವಾದನೆಯಲ್ಲಿ ಹೃದಯೋತ್ತೇಜಕವಾದ ಸಂದೇಶವೂ ಒಳಗೂಡಿತ್ತು. ಅವರು ಯೆಹೋವನ ಬಳಿ ಹಿಂದಿರುಗಸಾಧ್ಯವಿದೆ ಮತ್ತು ಹೃತ್ಪೂರ್ವಕವಾದ ಪಶ್ಚಾತ್ತಾಪದ ಪುರಾವೆಯನ್ನು ನೀಡುವಲ್ಲಿ ಅವರಿಗೆ ಕರುಣೆ ತೋರಿಸಲ್ಪಡುವುದು ಎಂಬ ಆಶ್ವಾಸನೆ ಜನರಿಗೆ ಕೊಡಲ್ಪಟ್ಟಿತ್ತು.
4. ಹೋಶೇಯ ಪ್ರವಾದನೆಯಿಂದ ಯಾವ ಪ್ರಾಯೋಗಿಕ ಪಾಠಗಳನ್ನು ನಾವು ಪರಿಗಣಿಸುವೆವು?
4 ಹೋಶೇಯನ ಪ್ರವಾದನೆಯ ಈ ನಾಲ್ಕು ಅಧ್ಯಾಯಗಳಿಂದ, ದೇವರೊಂದಿಗೆ ನಡೆಯಲು ನಮಗೆ ಸಹಾಯಮಾಡುವಂಥ ಇನ್ನೂ ಹೆಚ್ಚಿನ ಮಾರ್ಗದರ್ಶನವನ್ನು ಪಡೆಯಬಲ್ಲೆವು. ನಾವು ನಾಲ್ಕು ಪ್ರಾಯೋಗಿಕ ಪಾಠಗಳನ್ನು ಪರಿಗಣಿಸೋಣ: (1) ನಿಜ ಪಶ್ಚಾತ್ತಾಪವು ಕೇವಲ ಮಾತುಗಳಿಂದಲ್ಲ, ಕ್ರಿಯೆಗಳಿಂದ ತೋರಿಸಲ್ಪಡುತ್ತದೆ; (2) ದೇವರು ಕೇವಲ ಯಜ್ಞಗಳಲ್ಲಿ ಮಾತ್ರ ಸಂತೋಷಪಡುವುದಿಲ್ಲ; (3) ತನ್ನ ಆರಾಧಕರು ತನ್ನಿಂದ ದೂರಹೋಗುವುದು ಯೆಹೋವನನ್ನು ನೋಯಿಸುತ್ತದೆ; ಮತ್ತು (4) ನಾವು ಒಳ್ಳೇದನ್ನು ಕೊಯ್ಯಬೇಕಾದರೆ ಒಳ್ಳೇದನ್ನೇ ಬಿತ್ತಬೇಕು.
ನಿಜ ಪಶ್ಚಾತ್ತಾಪವು ಹೇಗೆ ತೋರಿಸಲ್ಪಡುತ್ತದೆ?
5. ಹೋಶೇಯ 6:1-3ರಲ್ಲಿ ಏನು ಹೇಳಲಾಗಿದೆಯೋ ಅದರ ಸಾರಾಂಶವನ್ನು ತಿಳಿಸಿರಿ.
5 ಹೋಶೇಯನ ಪ್ರವಾದನೆಯು ನಮಗೆ ಪಶ್ಚಾತ್ತಾಪ ಮತ್ತು ಕರುಣೆಯ ವಿಷಯದಲ್ಲಿ ಬಹಳಷ್ಟನ್ನು ಕಲಿಸುತ್ತದೆ. ಹೋಶೇಯ 6:1-3ರಲ್ಲಿ ನಾವು ಓದುವುದು: “ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ; ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥಮಾಡುವನು; ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು. ಒಂದೆರಡು ದಿನದ ಮೇಲೆ ಆತನು ನಮ್ಮನ್ನು ಬದುಕಿಸುವನು; ಮೂರನೆಯ ದಿನದಲ್ಲಿ ಆತನು ನಮ್ಮನ್ನೆಬ್ಬಿಸಲು ಆತನ ಸಾನ್ನಿಧ್ಯದಲ್ಲಿ ಬಾಳುವೆವು. ಯೆಹೋವನನ್ನು ತಿಳಿದುಕೊಳ್ಳೋಣ, ಹುಡುಕಿಹುಡುಕಿ ತಿಳಿದುಕೊಳ್ಳೋಣ; ಆತನ ಆಗಮನವು ಉದಯದಂತೆ ನಿಶ್ಚಯ; ಆತನು ಮುಂಗಾರಿನಂತೆಯೂ ಭೂಮಿಯನ್ನು ತಂಪುಮಾಡುವ ಹಿಂಗಾರಿನಂತೆಯೂ ನಮಗೆ ಸಿಕ್ಕುವನು.”
6-8. ಇಸ್ರಾಯೇಲ್ ತೋರಿಸಿದ ಪಶ್ಚಾತ್ತಾಪದಲ್ಲಿ ಏನು ತಪ್ಪಿತ್ತು?
6 ಈ ವಚನಗಳಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳನ್ನು ಯಾರು ನುಡಿದರು? ಕೆಲವರು ಈ ಮಾತುಗಳನ್ನು ಅಪನಂಬಿಗಸ್ತ ಇಸ್ರಾಯೇಲ್ಯರು ನುಡಿದರೆಂದು ಹೇಳಿ, ಆ ಅವಿಧೇಯ ಜನರು ಪಶ್ಚಾತ್ತಾಪದ ಸೋಗುಹಾಕಿ ಯೆಹೋವನ ಕರುಣೆಯ ದುರುಪಯೋಗ ಮಾಡುತ್ತಿದ್ದರೆಂದು ತಿಳಿಸುತ್ತಾರೆ. ಇತರರಾದರೊ, ಆ ಮಾತುಗಳನ್ನು ಪ್ರವಾದಿ ಹೋಶೇಯನೇ ನುಡಿದನೆಂದೂ ಜನರು ಯೆಹೋವನ ಬಳಿ ಹಿಂದಿರುಗುವಂತೆ ಅವನು ಬೇಡಿಕೊಳ್ಳುತ್ತಿದ್ದನೆಂದೂ ಹೇಳುತ್ತಾರೆ. ಈ ಮಾತುಗಳನ್ನು ಯಾರೇ ನುಡಿದಿರಲಿ, ನಿರ್ಣಾಯಕವಾದ ಪ್ರಶ್ನೆಯೇನಂದರೆ, ಹತ್ತು ಕುಲಗಳ ಇಸ್ರಾಯೇಲ್ ರಾಜ್ಯದ ಜನರಲ್ಲಿ ಹೆಚ್ಚಿನವರು ನಿಜವಾದ ಪಶ್ಚಾತ್ತಾಪವನ್ನು ತೋರಿಸುತ್ತಾ ಯೆಹೋವನ ಬಳಿ ಹಿಂದಿರುಗಿದರೋ? ಇದಕ್ಕೆ ಉತ್ತರವು ಇಲ್ಲ ಎಂದಾಗಿದೆ. ಯೆಹೋವನು ಹೋಶೇಯನ ಮುಖಾಂತರ ಹೀಗೆ ತಿಳಿಸುತ್ತಾನೆ: “ಎಫ್ರಾಯೀಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಯೆಹೂದವೇ, ನಿನ್ನನ್ನು ಹೇಗೆ ಸರಿಮಾಡಲಿ? ನಿಮ್ಮ ಭಕ್ತಿಯು [“ಪ್ರೀತಿಪೂರ್ವಕ ದಯೆಯು,” NW] ಪ್ರಾತಃಕಾಲದ ಮೋಡಕ್ಕೂ ಬೇಗನೆ ಮಾಯವಾಗುವ ಇಬ್ಬನಿಗೂ ಸಮಾನವಾಗಿದೆ.” (ಹೋಶೇಯ 6:4) ದೇವಜನರ ಕೀಳ್ಮಟ್ಟದ ಆಧ್ಯಾತ್ಮಿಕ ಸ್ಥಿತಿಗೆ ಇದೆಷ್ಟು ಶೋಚನೀಯ ಸಾಕ್ಷಿಯಾಗಿತ್ತು! ಪ್ರೀತಿಪೂರ್ವಕ ದಯೆ ಅಥವಾ ನಿಷ್ಠಾವಂತ ಪ್ರೀತಿಯು ಬಹುಮಟ್ಟಿಗೆ ಮಾಯವಾಗಿತ್ತು; ಸೂರ್ಯನು ಮೇಲೇರುವಾಗ ಬೇಗನೆ ಕರಗುವ ಪ್ರಾತಃಕಾಲದ ಮಂಜಿನ ಮೋಡಗಳಂತೆ ಅದು ಕಣ್ಮರೆಯಾಯಿತು. ಸುವ್ಯಕ್ತವಾಗಿಯೇ ಜನರು ಪಶ್ಚಾತ್ತಾಪದ ಸೋಗನ್ನು ಹಾಕಿಕೊಂಡಿದ್ದರಾದರೂ, ಯೆಹೋವನು ಕರುಣೆಯನ್ನು ತೋರಿಸಲು ಯಾವ ಆಧಾರವನ್ನೂ ಕಂಡುಕೊಳ್ಳಲಿಲ್ಲ. ಸಮಸ್ಯೆ ಏನಾಗಿತ್ತು?
7 ಇಸ್ರಾಯೇಲಿನ ಪಶ್ಚಾತ್ತಾಪವು ನಿಜವಾಗಿಯೂ ಹೃದಯದಿಂದ ಬಂದದ್ದಾಗಿರಲಿಲ್ಲ. ಯೆಹೋವನಿಗೆ ತನ್ನ ಜನರ ಮೇಲಿರುವ ಅಸಮಾಧಾನದ ಕುರಿತು ಹೋಶೇಯ 7:14 ಹೀಗೆ ತಿಳಿಸುತ್ತದೆ: “ಅವರು ಹಾಸಿಗೆಯ ಮೇಲೆ ಬಿದ್ದುಕೊಂಡು . . . ಅರಚಿಕೊಳ್ಳುತ್ತಾರೆಯೇ ಹೊರತು ನನ್ನನ್ನು ಮನಃಪೂರ್ವಕವಾಗಿ ಎಂದೂ ಪ್ರಾರ್ಥಿಸಲಿಲ್ಲ.” 16ನೇ ವಚನ ಕೂಡಿಸಿ ಹೇಳುವುದು: ‘ಅವರು ಅತ್ತಿತ್ತ ತಿರುಗಿಕೊಳ್ಳುತ್ತಾರೆ, ಮೇಲಕ್ಕೆ ಮಾತ್ರ ತಿರುಗಿಕೊಳ್ಳುವದಿಲ್ಲ’ ಅಥವಾ ನೂತನ ಲೋಕ ಭಾಷಾಂತರದ ರೆಫರೆನ್ಸ್ ಬೈಬಲಿನ ಪಾದಟಿಪ್ಪಣಿ ಹೇಳುವಂತೆ, “ಉನ್ನತ ರೀತಿಯ ಆರಾಧನೆಗೆ” ತಿರುಗಿಕೊಳ್ಳುವುದಿಲ್ಲ. ಆ ಜನರು ಯೆಹೋವನೊಂದಿಗಿನ ತಮ್ಮ ಸಂಬಂಧವನ್ನು ಸರಿಪಡಿಸಲು ಬೇಕಾದ ಬದಲಾವಣೆಗಳನ್ನು ಮಾಡುವ ಮೂಲಕ ಆತನ ಉನ್ನತ ಆರಾಧನೆಗೆ ಹಿಂದಿರುಗಲು ಸಿದ್ಧರಿರಲಿಲ್ಲ. ದೇವರೊಂದಿಗೆ ನಡೆಯಲು ಅವರಿಗೆ ನಿಜವಾಗಿಯೂ ಮನಸ್ಸಿರಲಿಲ್ಲ.
8 ಇಸ್ರಾಯೇಲಿನ ಪಶ್ಚಾತ್ತಾಪದ ವಿಷಯದಲ್ಲಿ ಇನ್ನೊಂದು ಸಮಸ್ಯೆಯೂ ಇತ್ತು. ಆ ಜನರು ಇನ್ನೂ ಪಾಪಮಾಡುವುದನ್ನು ಮುಂದುವರಿಸುತ್ತಿದ್ದರು; ವಾಸ್ತವದಲ್ಲಿ ವಂಚನೆ, ಕೊಲೆ, ಕಳ್ಳತನ, ವಿಗ್ರಹಾರಾಧನೆ ಮತ್ತು ಬೇರೆ ಜನಾಂಗಗಳೊಂದಿಗೆ ಅವಿವೇಕಯುತವಾದ ಮೈತ್ರಿಗಳನ್ನು ಮಾಡಿಕೊಳ್ಳುವುದನ್ನೂ ಸೇರಿಸಿ ವಿವಿಧ ರೀತಿಯ ಪಾಪಗಳನ್ನು ಮಾಡುತ್ತಾ ಇದ್ದರು. ಹೋಶೇಯ 7:4ರಲ್ಲಿ, ಜನರನ್ನು ಒಂದು “ಒಲೆಗೆ” ಅಂದರೆ ರೊಟ್ಟಿಗಾರನ ಗೂಡು ಒಲೆಗೆ ಹೋಲಿಸಲಾಗಿದೆ. ಅವರೊಳಗೆ ಕೆಟ್ಟ ಅಪೇಕ್ಷೆಗಳು ಉರಿಯುತ್ತಿದ್ದ ಕಾರಣದಿಂದಾಗಿ ಅವರನ್ನು ಹೀಗೆ ಸಂಬೋಧಿಸಲಾಗಿತ್ತು. ಇಂಥ ಆಧ್ಯಾತ್ಮಿಕ ದುರವಸ್ಥೆಯನ್ನು ನೋಡುವಾಗ, ಆ ಜನರು ದಯಾಪಾತ್ರರಾಗಿದ್ದರೆಂದು ಹೇಳಬಹುದೊ? ನಿಶ್ಚಯವಾಗಿಯೂ ಇಲ್ಲ! ಯೆಹೋವನು ಆ ದಂಗೆಕೋರ ಜನರ “ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗೆ ಪ್ರತಿದಂಡನೆಮಾಡುವನು” ಎಂದು ಹೋಶೇಯನು ಅವರಿಗೆ ತಿಳಿಸುತ್ತಾನೆ. (ಹೋಶೇಯ 9:9) ಅವರಿಗೆ ಕರುಣೆ ದೊರಕದು!
9. ಪಶ್ಚಾತ್ತಾಪ ಮತ್ತು ಕರುಣೆಯ ವಿಷಯದಲ್ಲಿ ಹೋಶೇಯನ ಮಾತುಗಳು ಏನನ್ನು ಕಲಿಸುತ್ತವೆ?
9 ನಾವು ಹೋಶೇಯನ ಮಾತುಗಳನ್ನು ಓದುವಾಗ, ಪಶ್ಚಾತ್ತಾಪ ಮತ್ತು ಕರುಣೆಯ ವಿಷಯದಲ್ಲಿ ಏನನ್ನು ಕಲಿಯುತ್ತೇವೆ? ನಂಬಿಕೆ ಇಲ್ಲದವರಾಗಿದ್ದ ಆ ಇಸ್ರಾಯೇಲ್ಯರ ಎಚ್ಚರಿಕೆಯ ಮಾದರಿಯು, ಯೆಹೋವನ ಕರುಣೆಯಿಂದ ಪ್ರಯೋಜನ ಪಡೆಯಬೇಕಾದರೆ ನಾವು ಹೃತ್ಪೂರ್ವಕವಾದ ಪಶ್ಚಾತ್ತಾಪವನ್ನು ತೋರಿಸಬೇಕು ಎಂಬುದನ್ನು ಕಲಿಸುತ್ತದೆ. ಅಂತಹ ಪಶ್ಚಾತ್ತಾಪವು ಹೇಗೆ ತೋರಿಸಲ್ಪಡುತ್ತದೆ? ಕಣ್ಣೀರಿನಿಂದ ಅಥವಾ ಕೇವಲ ಮಾತುಗಳಿಂದ ಯೆಹೋವನು ಮೋಸಹೋಗುವುದಿಲ್ಲ. ನಿಜವಾದ ಪಶ್ಚಾತ್ತಾಪವು ಕ್ರಿಯೆಗಳಿಂದ ವ್ಯಕ್ತಪಡಿಸಲ್ಪಡುತ್ತದೆ. ಒಬ್ಬ ತಪ್ಪುಗಾರನು ಕರುಣಾಪಾತ್ರನಾಗಬೇಕಾದರೆ, ಅವನು ತನ್ನ ಪಾಪಮಾರ್ಗವನ್ನು ಪೂರ್ತಿಯಾಗಿ ತ್ಯಜಿಸಿ, ತನ್ನ ಜೀವನವನ್ನು ಯೆಹೋವನ ಉನ್ನತವಾದ ಆರಾಧನೆಯ ಶ್ರೇಷ್ಠ ಮಟ್ಟಗಳಿಗೆ ಹೊಂದಿಸಿಕೊಳ್ಳಬೇಕು.
ಯೆಹೋವನು ಕೇವಲ ಯಜ್ಞಗಳಲ್ಲಿ ಮಾತ್ರ ಸಂತೋಷಪಡುವುದಿಲ್ಲ
10, 11. ಇಸ್ರಾಯೇಲಿನ ವಿಷಯದಲ್ಲಿ ದೃಷ್ಟಾಂತಿಸಲ್ಪಟ್ಟಿರುವಂತೆ, ಯೆಹೋವನು ಕೇವಲ ಯಜ್ಞಗಳಲ್ಲಿ ಮಾತ್ರ ಸಂತೋಷಪಡುವುದಿಲ್ಲವೇಕೆ?
10 ಯೆಹೋವನೊಂದಿಗೆ ನಡೆಯಲು ನಮಗೆ ಸಹಾಯಮಾಡಸಾಧ್ಯವಿರುವ ಎರಡನೆಯ ಪಾಠವನ್ನು ನಾವೀಗ ಚರ್ಚಿಸೋಣ. ಅದೇನೆಂದರೆ, ದೇವರು ಕೇವಲ ಯಜ್ಞಗಳಲ್ಲಿ ಮಾತ್ರ ಸಂತೋಷಪಡುವುದಿಲ್ಲ. ಹೋಶೇಯ 6:6 ಹೀಗನ್ನುತ್ತದೆ: “ನನಗೆ [ಯೆಹೋವನಿಗೆ] ಯಜ್ಞವು ಬೇಡ, ಕರುಣೆಯೇ [“ಪ್ರೀತಿಪೂರ್ವಕ ದಯೆಯೇ,” NW] ಬೇಕು; ಹೋಮಗಳಿಗಿಂತ ದೇವಜ್ಞಾನವೇ ಇಷ್ಟ.” ಯೆಹೋವನು ಪ್ರೀತಿಪೂರ್ವಕ ದಯೆ ಅಥವಾ ಹೃದಯದ ಗುಣವಾಗಿರುವ ನಿಷ್ಠಾವಂತ ಪ್ರೀತಿಯನ್ನು ಮತ್ತು ಆತನ ಕುರಿತಾದ ಜ್ಞಾನವನ್ನು ಮೆಚ್ಚುತ್ತಾನೆಂಬುದನ್ನು ಗಮನಿಸಿರಿ. ಆದರೆ ನೀವು ಹೀಗೆ ಆಲೋಚಿಸುತ್ತಿರಬಹುದು: ‘ಈ ವಚನವು ಯೆಹೋವನಿಗೆ “ಯಜ್ಞ” ಮತ್ತು “ಹೋಮಗಳು” ಇಷ್ಟ ಇಲ್ಲ ಎಂದು ಏಕೆ ಹೇಳುತ್ತದೆ? ಮೋಶೆಯ ಧರ್ಮಶಾಸ್ತ್ರವು ಅವುಗಳನ್ನು ಅಗತ್ಯಪಡಿಸಿತ್ತಲ್ಲವೊ?’
11 ಯಜ್ಞ ಮತ್ತು ಹೋಮಗಳು ಧರ್ಮಶಾಸ್ತ್ರದ ಕೆಳಗೆ ಅಗತ್ಯಪಡಿಸಲ್ಪಟ್ಟಿದ್ದವು, ಆದರೆ ಹೋಶೇಯನ ಸಮಕಾಲೀನರಲ್ಲಿ ಈ ವಿಷಯದಲ್ಲಿ ಒಂದು ಗಂಭೀರವಾದ ಸಮಸ್ಯೆಯಿತ್ತು. ಕೆಲವು ಮಂದಿ ಇಸ್ರಾಯೇಲ್ಯರು ಕರ್ತವ್ಯಪರತೆಯಿಂದ ಇಂತಹ ಯಜ್ಞಗಳನ್ನು ಭಕ್ತಿಯ ಆಡಂಬರದ ಪ್ರದರ್ಶನವಾಗಿ ಅರ್ಪಿಸಿದರೆಂಬುದು ಸುವ್ಯಕ್ತ. ಆದರೆ ಅದೇ ಸಮಯದಲ್ಲಿ ಅವರು ಪಾಪಗಳನ್ನು ಮಾಡುತ್ತಾ ಇದ್ದರು. ಅವರ ಪಾಪಗಳಿಂದ ಅವರು, ತಮ್ಮ ಹೃದಯದಲ್ಲಿ ನಿಷ್ಠಾವಂತ ಪ್ರೀತಿಯಿಲ್ಲವೆಂಬುದನ್ನು ಸೂಚಿಸಿದರು. ತಾವು ದೇವಜ್ಞಾನವನ್ನು ತಿರಸ್ಕರಿಸಿದ್ದೇವೆಂಬುದನ್ನು ಸಹ ಅವರು ತೋರಿಸಿದರು, ಏಕೆಂದರೆ ಅವರು ಅದಕ್ಕನುಸಾರ ಜೀವಿಸುತ್ತಿರಲಿಲ್ಲ. ಜನರಲ್ಲಿ ಯೋಗ್ಯ ಹೃದಯ ಸ್ಥಿತಿಯು ಇಲ್ಲದಿದ್ದರೆ ಮತ್ತು ಅವರು ಸರಿಯಾದ ಜೀವನ ಮಾರ್ಗವನ್ನು ಬೆನ್ನಟ್ಟದೆ ಇರುವುದಾದರೆ, ಅವರ ಯಜ್ಞಗಳಿಗೇನು ಬೆಲೆಯಿದೆ? ಅವರ ಯಜ್ಞಗಳು ಯೆಹೋವ ದೇವರಿಗೆ ಅಸಹ್ಯವಾಗಿದ್ದವು.
12. ಇಂದು ಜೀವಿಸುತ್ತಿರುವ ಜನರಿಗೆ ಹೋಶೇಯ 6:6ರಲ್ಲಿ ಯಾವ ಎಚ್ಚರಿಕೆಯಿದೆ?
12 ಹೋಶೇಯನ ಮಾತುಗಳು ಇಂದಿನ ಅನೇಕ ಚರ್ಚ್ಹೋಕರಿಗೆ ಒಂದು ಎಚ್ಚರಿಕೆಯನ್ನು ಒಳಗೂಡಿವೆ. ಅವರು ಧಾರ್ಮಿಕ ಆಚರಣೆಗಳ ರೂಪದಲ್ಲಿ ದೇವರಿಗೆ ಹೋಮಗಳನ್ನು ಮಾಡುತ್ತಾರೆ. ಆದರೆ ಅವರ ಆರಾಧನೆಯು ಅವರ ದೈನಂದಿನ ನಡತೆಯ ಮೇಲೆ ಬೀರುವ ನೈಜ ಪ್ರಭಾವವು ಕೊಂಚವೇ. ದೇವರ ಬಗ್ಗೆ ನಿಷ್ಕೃಷ್ಟ ಜ್ಞಾನವನ್ನು ತೆಗೆದುಕೊಳ್ಳುವಂತೆ ಮತ್ತು ಪಾಪಾಚರಣೆಗಳಿಂದ ದೂರಸರಿಯುವ ಮೂಲಕ ಆ ಜ್ಞಾನವನ್ನು ಅನ್ವಯಿಸಿಕೊಳ್ಳುವಂತೆ ಅವರ ಹೃದಯವು ಅವರನ್ನು ಪ್ರಚೋದಿಸದಿರುವಲ್ಲಿ, ಅಂತಹ ಜನರು ದೇವರನ್ನು ನಿಜವಾಗಿಯೂ ಸಂತೋಷಪಡಿಸುತ್ತಿದ್ದಾರೊ? ಧಾರ್ಮಿಕ ಕಾರ್ಯಗಳು ಮಾತ್ರ ದೇವರನ್ನು ಸಂತೋಷಪಡಿಸುತ್ತವೆಂದು ಯಾವನೂ ಭಾವಿಸದಿರಲಿ. ತನ್ನ ವಾಕ್ಯಕ್ಕನುಸಾರ ನಿಜವಾಗಿಯೂ ಜೀವಿಸುವ ಬದಲು ಬರಿಯ ಬಾಹ್ಯರೂಪದ ಆರಾಧನೆಯನ್ನು ಸಲ್ಲಿಸುವ ಮೂಲಕ ತನ್ನ ಅನುಗ್ರಹವನ್ನು ಪಡೆಯಲು ಪ್ರಯತ್ನಿಸುವಂಥ ಜನರಲ್ಲಿ ಯೆಹೋವನು ಸ್ವಲ್ಪವೂ ಸಂತೋಷಿಸುವುದಿಲ್ಲ.—2 ತಿಮೊಥೆಯ 3:5.
13. ನಾವು ಯಾವ ರೀತಿಯ ಯಜ್ಞಗಳನ್ನು ಅರ್ಪಿಸುತ್ತೇವೆ, ಆದರೆ ಅವುಗಳ ಮೌಲ್ಯದ ಕುರಿತು ಏನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?
13 ಸತ್ಯ ಕ್ರೈಸ್ತರಾಗಿರುವ ನಾವು, ದೇವರು ಕೇವಲ ಯಜ್ಞಗಳಲ್ಲಿ ಮಾತ್ರ ಸಂತೋಷಪಡುವುದಿಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ. ನಾವು ಯೆಹೋವನಿಗೆ ಪ್ರಾಣಿ ಯಜ್ಞಗಳನ್ನು ಅರ್ಪಿಸುವುದಿಲ್ಲವೆಂಬುದು ನಿಜ. ಆದರೂ, ನಾವು ‘ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸುತ್ತೇವೆ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ.’ (ಇಬ್ರಿಯ 13:15) ದೇವರಿಗೆ ಇಂಥ ಆಧ್ಯಾತ್ಮಿಕ ಯಜ್ಞಗಳನ್ನು ಅರ್ಪಿಸುವ ಮೂಲಕ ನಾವು ಮಾಡುವ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಸಾಧ್ಯವಿದೆ ಎಂದು ನೆನಸುತ್ತಾ ಹೋಶೇಯನ ದಿನಗಳಲ್ಲಿದ್ದ ಪಾಪಪೂರ್ಣ ಇಸ್ರಾಯೇಲ್ಯರಂತೆ ನಾವು ಆಗದಿರುವುದು ಅತ್ಯಾವಶ್ಯಕವಾದದ್ದಾಗಿದೆ. ಲೈಂಗಿಕ ಅನೈತಿಕತೆಯಲ್ಲಿ ಗುಪ್ತವಾಗಿ ಒಳಗೂಡಿದ್ದ ಒಬ್ಬ ಯುವತಿಯ ಉದಾಹರಣೆಯನ್ನು ಪರಿಗಣಿಸಿರಿ. ಸಮಯಾನಂತರ ಅವಳು ಒಪ್ಪಿಕೊಂಡದ್ದು: “ನಾನು ನನ್ನ ಕ್ಷೇತ್ರ ಸೇವೆಯನ್ನು ಹೆಚ್ಚಿಸಿದೆ, ಇದು ನನ್ನ ಪಾಪಗಳನ್ನು ಹೇಗೊ ಮುಚ್ಚಿಹಾಕುವುದೆಂದು ನೆನಸಿದೆ.” ಇದು, ಹಟಮಾರಿಗಳಾಗಿದ್ದ ಆ ಇಸ್ರಾಯೇಲ್ಯರು ಏನನ್ನು ಮಾಡಲು ಪ್ರಯತ್ನಿಸಿದರೋ ಅದಕ್ಕೆ ಸಮಾನವಾದದ್ದಾಗಿತ್ತು. ಆದರೆ ನಮ್ಮ ಸ್ತೋತ್ರಯಜ್ಞವು ಯೋಗ್ಯವಾದ ಹೃದಯದ ಪ್ರಚೋದನೆಯಿಂದ ಮತ್ತು ದೈವಿಕ ನಡತೆಯಿಂದ ಜೊತೆಗೂಡಲ್ಪಟ್ಟಿರುವಲ್ಲಿ ಮಾತ್ರ ಅದು ಯೆಹೋವನಿಗೆ ಸ್ವೀಕಾರಯೋಗ್ಯವಾಗಿರುತ್ತದೆ.
ತನ್ನ ಆರಾಧಕರು ತನ್ನನ್ನು ತೊರೆಯುವಾಗ ಯೆಹೋವನಿಗೆ ನೋವಾಗುತ್ತದೆ
14. ಹೋಶೇಯನ ಪ್ರವಾದನೆಯು ದೇವರ ಭಾವನೆಗಳ ಕುರಿತು ಏನನ್ನು ತಿಳಿಯಪಡಿಸುತ್ತದೆ?
14 ಹೋಶೇಯ 6-9ನೇ ಅಧ್ಯಾಯಗಳಿಂದ ನಾವು ಕಲಿಯುವ ಮೂರನೆಯ ಪಾಠವು, ಆತನ ಆರಾಧಕರು ಆತನಿಂದ ದೂರ ಹೋಗುವಾಗ ಯೆಹೋವನಿಗೆ ಹೇಗನಿಸುತ್ತದೆ ಎಂಬುದರ ಕುರಿತಾಗಿದೆ. ದೇವರು ತೀಕ್ಷ್ಣವಾದ ಮತ್ತು ಅದೇ ಸಮಯದಲ್ಲಿ ಕೋಮಲವಾದ ಭಾವನೆಗಳುಳ್ಳವನಾಗಿದ್ದಾನೆ. ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡುವವರ ವಿಷಯದಲ್ಲಿ ಆತನಿಗೆ ಆನಂದ ಮತ್ತು ಸಹಾನುಭೂತಿಯ ಕೋಮಲ ಭಾವನೆಗಳಿವೆ. ಆದರೆ, ಆತನ ಜನರು ಪಶ್ಚಾತ್ತಾಪಪಡದಿರುವಾಗ ಆತನು ಗಂಭೀರವಾದ, ನಿರ್ಣಾಯಕ ಕ್ರಿಯೆಯನ್ನು ಕೈಗೊಳ್ಳುತ್ತಾನೆ. ನಮ್ಮ ಹಿತಕ್ಷೇಮದ ಬಗ್ಗೆ ದೇವರಿಗೆ ಗಾಢವಾದ ಚಿಂತೆಯಿರುವುದರಿಂದ, ನಾವು ಆತನೊಂದಿಗೆ ನಂಬಿಗಸ್ತಿಕೆಯಿಂದ ನಡೆಯುವಾಗ ಆತನು ಹರ್ಷಿಸುತ್ತಾನೆ. “ಯೆಹೋವನು ತನ್ನ ಜನರಲ್ಲಿ ಪ್ರಸನ್ನನಾಗುತ್ತಾನೆ” (NIBV) ಎಂದು ಕೀರ್ತನೆ 149:4 ಹೇಳುತ್ತದೆ. ಆದರೆ, ತನ್ನ ಸೇವಕರು ಅಪನಂಬಿಗಸ್ತರಾಗಿರುವಾಗ ದೇವರಿಗೆ ಹೇಗನಿಸುತ್ತದೆ?
15. ಹೋಶೇಯ 6:7ಕ್ಕನುಸಾರ, ಕೆಲವು ಇಸ್ರಾಯೇಲ್ಯರು ಹೇಗೆ ವರ್ತಿಸುತ್ತಿದ್ದರು?
15 ಅಪನಂಬಿಗಸ್ತರಾದ ಇಸ್ರಾಯೇಲ್ಯರಿಗೆ ಸೂಚಿಸುತ್ತಾ ಯೆಹೋವನು ಹೇಳುವುದು: “ಅವರು ಪ್ರಾಪಂಚಿಕರಂತೆ ನನ್ನ ನಿಬಂಧನೆಯನ್ನು ಮೀರಿದ್ದಾರೆ; ಅಲ್ಲಲ್ಲಿ ನನಗೆ ದ್ರೋಹಮಾಡಿದ್ದಾರೆ.” (ಹೋಶೇಯ 6:7) ‘ದ್ರೋಹಮಾಡು’ ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದಕ್ಕೆ, “ವಂಚನೆಯಿಂದ ವ್ಯವಹರಿಸು, ಅಪನಂಬಿಗಸ್ತಿಕೆಯಿಂದ (ವ್ಯವಹರಿಸು)” ಎಂಬ ಅರ್ಥವೂ ಇದೆ. ಮಲಾಕಿಯ 2:10-16ರಲ್ಲಿ, ಅದೇ ಹೀಬ್ರು ಪದವನ್ನು ತಮ್ಮ ವಿವಾಹ ಸಂಗಾತಿಗಳಿಗೆ ಅಪನಂಬಿಗಸ್ತರಾಗಿ ನಡೆದುಕೊಂಡ ಇಸ್ರಾಯೇಲ್ಯರ ನಿಷ್ಠಾರಹಿತ ನಡತೆಯನ್ನು ವರ್ಣಿಸಲು ಉಪಯೋಗಿಸಲಾಗಿದೆ. ಹೋಶೇಯ 6:7ರಲ್ಲಿ ಉಪಯೋಗಿಸಲಾಗಿರುವ ಈ ಪದದ ಕುರಿತು ಒಂದು ಪರಾಮರ್ಶೆ ಗ್ರಂಥವು ಹೇಳುವುದೇನೆಂದರೆ, ಇದು “ವಿವಾಹಕ್ಕೆ ಸಂಬಂಧಿಸಿದ ಒಂದು ರೂಪಕಾಲಂಕಾರವಾಗಿದ್ದು, ಆ ಸಂಬಂಧದಲ್ಲಿ ವೈಯಕ್ತಿಕ ಗುಣಗಳನ್ನು ಪರಿಚಯಿಸುವಂಥದ್ದಾಗಿದೆ . . . ಪ್ರೀತಿಯು ಉಲ್ಲಂಘಿಸಲ್ಪಟ್ಟಿರುವಂಥ ಒಂದು ವೈಯಕ್ತಿಕ ಸನ್ನಿವೇಶ ಅದಾಗಿದೆ.”
16, 17. (ಎ) ಇಸ್ರಾಯೇಲ್ ಜನಾಂಗದೊಂದಿಗಿನ ದೇವರ ಒಡಂಬಡಿಕೆಯ ಸಂಬಂಧದಲ್ಲಿ ಇಸ್ರಾಯೇಲ್ ಹೇಗೆ ವರ್ತಿಸಿತು? (ಬಿ) ನಮ್ಮ ಕೃತ್ಯಗಳ ವಿಷಯದಲ್ಲಿ ನಾವೇನನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು?
16 ಯೆಹೋವನು ಇಸ್ರಾಯೇಲ್ ಜನಾಂಗದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದ ಕಾರಣ, ಆ ಜನಾಂಗವನ್ನು ತನ್ನ ಸಾಂಕೇತಿಕ ಪತ್ನಿಯಾಗಿ ಪರಿಗಣಿಸಿದನು. ಆದುದರಿಂದ ಆತನ ಜನರು ಆ ಒಡಂಬಡಿಕೆಯ ಷರತ್ತುಗಳನ್ನು ಉಲ್ಲಂಘಿಸಿದಾಗ, ಅದು ಅವರು ವ್ಯಭಿಚಾರ ಮಾಡುತ್ತಿದ್ದರೋ ಎಂಬಂತಿತ್ತು. ದೇವರು ಒಬ್ಬ ನಂಬಿಗಸ್ತ ಪತಿಯಂತಿದ್ದನು, ಆದರೆ ಆತನ ಜನರು ಆತನನ್ನು ತೊರೆದುಹೋದರು!
17 ನಮ್ಮ ಕುರಿತಾಗಿ ಏನು? ನಾವು ಆತನೊಂದಿಗೆ ನಡೆಯುತ್ತೇವೊ ಇಲ್ಲವೊ ಎಂಬ ವಿಷಯದಲ್ಲಿ ದೇವರು ಆಸಕ್ತಿವಹಿಸುತ್ತಾನೆ. “ದೇವರು ಪ್ರೀತಿಸ್ವರೂಪಿ” ಎಂಬುದನ್ನೂ ನಮ್ಮ ಕೃತ್ಯಗಳು ಆತನ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನೂ ನಾವು ಜ್ಞಾಪಕದಲ್ಲಿಡುವುದು ಒಳ್ಳೇದು. (1 ಯೋಹಾನ 4:16) ಆದುದರಿಂದ, ನಾವು ಕೆಟ್ಟದಾರಿಯಲ್ಲಿ ನಡೆಯುವಲ್ಲಿ ಯೆಹೋವನಿಗೆ ನೋವನ್ನು ಉಂಟುಮಾಡಬಹುದು ಮತ್ತು ನಿಶ್ಚಯವಾಗಿಯೂ ಆತನಿಗೆ ಅಸಂತೋಷವನ್ನು ಉಂಟುಮಾಡುವೆವು. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ನಾವು ಪ್ರಲೋಭನೆಗೆ ಒಳಗಾಗದಂತೆ ಪ್ರಬಲವಾದ ರೀತಿಯಲ್ಲಿ ತಡೆಯಬಲ್ಲದು.
ನಾವು ಒಳ್ಳೇದನ್ನು ಹೇಗೆ ಕೊಯ್ಯಸಾಧ್ಯವಿದೆ?
18, 19. ಹೋಶೇಯ 8:7ರಲ್ಲಿ ಯಾವ ಮೂಲತತ್ತ್ವವನ್ನು ನಾವು ಕಂಡುಕೊಳ್ಳುತ್ತೇವೆ, ಮತ್ತು ಇಸ್ರಾಯೇಲ್ಯರ ಸಂಬಂಧದಲ್ಲಿ ಈ ಮೂಲತತ್ತ್ವವು ಹೇಗೆ ಸತ್ಯವಾಗಿ ಪರಿಣಮಿಸಿತು?
18 ಹೋಶೇಯನ ಪ್ರವಾದನೆಯಿಂದ ನಾಲ್ಕನೆಯ ಪಾಠವನ್ನು, ಅಂದರೆ ನಾವು ಒಳ್ಳೇದನ್ನು ಹೇಗೆ ಕೊಯ್ಯಸಾಧ್ಯವಿದೆ ಎಂಬುದನ್ನು ಪರಿಗಣಿಸೋಣ. ಇಸ್ರಾಯೇಲ್ಯರ ಕುರಿತು ಮತ್ತು ಅವರ ಅಪನಂಬಿಗಸ್ತ ಜೀವನ ಮಾರ್ಗದ ಮೂರ್ಖತನ ಹಾಗೂ ವ್ಯರ್ಥತೆಯ ಕುರಿತು ಹೋಶೇಯನು ಬರೆಯುವುದು: “ಅವರು ಗಾಳಿಯನ್ನು ಬಿತ್ತುತ್ತಾರೆ, ಬಿರುಗಾಳಿಯನ್ನು ಕೊಯ್ದುಕೊಳ್ಳುವರು.” (ಹೋಶೇಯ 8:7) ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಒಂದು ಮೂಲತತ್ತ್ವವನ್ನು ಇಲ್ಲಿ ಕಂಡುಕೊಳ್ಳುತ್ತೇವೆ: ನಾವು ಈಗ ಏನು ಮಾಡುತ್ತೇವೋ ಮತ್ತು ಮುಂದೆ ನಮಗೆ ಏನು ಸಂಭವಿಸಲಿದೆಯೋ ಇವುಗಳ ಮಧ್ಯೆ ನೇರವಾದ ಸಂಬಂಧವಿದೆ. ಅಪನಂಬಿಗಸ್ತ ಇಸ್ರಾಯೇಲ್ಯರ ಸಂಬಂಧದಲ್ಲಿ ಈ ಮೂಲತತ್ತ್ವವು ಹೇಗೆ ಸತ್ಯವಾಗಿ ಪರಿಣಮಿಸಿತು?
19 ಪಾಪವನ್ನು ಆಚರಿಸುವ ಮೂಲಕ ಆ ಇಸ್ರಾಯೇಲ್ಯರು ಕೆಟ್ಟದ್ದನ್ನು ಬಿತ್ತುತ್ತಾ ಇದ್ದರು. ಕೆಟ್ಟ ಪರಿಣಾಮಗಳನ್ನು ಕೊಯ್ಯದೇ ಅವರು ಇದನ್ನೇ ಮಾಡುತ್ತಾ ಮುಂದುವರಿಯಲು ಶಕ್ತರಾಗಿದ್ದರೋ? ನಿಶ್ಚಯವಾಗಿಯೂ ಅವರು ಪ್ರತಿಕೂಲ ನ್ಯಾಯತೀರ್ಪನ್ನು ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹೋಶೇಯ 8:13 ತಿಳಿಸುವುದು: “[ಯೆಹೋವನು] ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಕ್ಕೆ ದಂಡನೆಮಾಡುವನು.” ಮತ್ತು ಹೋಶೇಯ 9:17ರಲ್ಲಿ ನಾವು ಓದುವುದು: “ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನ ಮಾತಿಗೆ ಕಿವಿಗೊಡಲಿಲ್ಲ; ಅವರಿಗೆ ಜನಾಂಗಗಳಲ್ಲಿ ಅಲೆದಾಡುವ ಗತಿಯಾಗುವದು.” ಇಸ್ರಾಯೇಲ್ಯರ ಪಾಪಗಳಿಗಾಗಿ ಯೆಹೋವನು ಅವರನ್ನು ಹೊಣೆಗಾರರನ್ನಾಗಿ ಮಾಡಲಿದ್ದನು. ಅವರು ಕೆಟ್ಟದ್ದನ್ನು ಬಿತ್ತಿದ್ದರಿಂದ ಕೆಟ್ಟದ್ದನ್ನೇ ಕೊಯ್ಯಲಿದ್ದರು. ಅವರ ವಿರುದ್ಧವಾದ ದೇವರ ನ್ಯಾಯತೀರ್ಪು ಸಾ.ಶ.ಪೂ. 740ರಲ್ಲಿ ಕಾರ್ಯರೂಪಕ್ಕೆ ತರಲ್ಪಟ್ಟಿತು, ಆಗ ಅಶ್ಶೂರರು ಹತ್ತು ಕುಲಗಳ ಇಸ್ರಾಯೇಲ್ ರಾಜ್ಯವನ್ನು ಸೋಲಿಸಿದರು ಮತ್ತು ಅದರ ನಿವಾಸಿಗಳನ್ನು ಬಂಧಿವಾಸಿಗಳಾಗಿ ಕರೆದೊಯ್ದರು.
20. ಇಸ್ರಾಯೇಲ್ಯರ ಅನುಭವವು ನಮಗೆ ಯಾವ ಪಾಠವನ್ನು ಕಲಿಸುತ್ತದೆ?
20 ಆ ಇಸ್ರಾಯೇಲ್ಯರ ಅನುಭವವು ನಮಗೊಂದು ಮೂಲಭೂತ ಸತ್ಯವನ್ನು ಕಲಿಸುತ್ತದೆ: ನಾವು ಏನನ್ನು ಬಿತ್ತುತ್ತೇವೋ ಅದನ್ನೇ ಕೊಯ್ಯುತ್ತೇವೆ. ದೇವರ ವಾಕ್ಯವು ನಮ್ಮನ್ನು ಎಚ್ಚರಿಸುವುದು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” (ಗಲಾತ್ಯ 6:7) ನಾವು ಕೆಟ್ಟದ್ದನ್ನು ಬಿತ್ತುವಲ್ಲಿ ಕೆಟ್ಟದ್ದನ್ನೇ ಕೊಯ್ಯುವೆವು. ಉದಾಹರಣೆಗೆ, ಅನೈತಿಕ ಜೀವನ ರೀತಿಯನ್ನು ಬೆನ್ನಟ್ಟುವವರು ಕಹಿಯಾದ ಫಲವನ್ನು ಕೊಯ್ಯುವರು. ಪಶ್ಚಾತ್ತಾಪಪಡದಿರುವಂಥ ಒಬ್ಬ ತಪ್ಪಿತಸ್ಥನು ದುಃಖಕರವಾದ ಪರಿಣಾಮವನ್ನು ಅನುಭವಿಸುವನು.
21. ನಾವು ಒಳ್ಳೇದನ್ನು ಹೇಗೆ ಕೊಯ್ಯಸಾಧ್ಯವಿದೆ?
21 ಹಾಗಾದರೆ ನಾವು ಒಳ್ಳೇದನ್ನು ಹೇಗೆ ಕೊಯ್ಯಬಲ್ಲೆವು? ಒಂದು ಸರಳ ದೃಷ್ಟಾಂತದಿಂದ ಈ ಪ್ರಶ್ನೆಗೆ ಉತ್ತರವನ್ನು ಕೊಡಸಾಧ್ಯವಿದೆ. ಒಬ್ಬ ರೈತನು ಭತ್ತವನ್ನು ಕೊಯ್ಯಲು ಬಯಸುವುದಾದರೆ ಅವನು ಗೋದಿಯನ್ನು ಬಿತ್ತುವನೋ? ಖಂಡಿತವಾಗಿಯೂ ಇಲ್ಲ! ಅವನು ಏನನ್ನು ಕೊಯ್ಯಲು ಬಯಸುತ್ತಾನೊ ಅದನ್ನೇ ಅವನು ಬಿತ್ತಬೇಕಾಗಿದೆ. ತದ್ರೀತಿಯಲ್ಲಿ, ನಾವು ಒಳ್ಳೇದನ್ನು ಕೊಯ್ಯಲು ಬಯಸುವುದಾದರೆ, ಒಳ್ಳೇದನ್ನೇ ಬಿತ್ತಬೇಕಾಗಿದೆ. ನೀವು ಒಳ್ಳೇದನ್ನು ಅಂದರೆ ಈಗ ಸಂತೃಪ್ತಿಕರ ಜೀವನ ಮತ್ತು ದೇವರ ನೂತನ ಲೋಕದಲ್ಲಿ ನಿತ್ಯಜೀವದ ಪ್ರತೀಕ್ಷೆಯನ್ನು ಕೊಯ್ಯುತ್ತಾ ಇರಲು ಬಯಸುತ್ತೀರೊ? ಹಾಗಿರುವಲ್ಲಿ, ನೀವು ದೇವರೊಂದಿಗೆ ನಡೆಯುವ ಮೂಲಕ ಹಾಗೂ ಆತನ ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ ಒಳ್ಳೇದನ್ನು ಬಿತ್ತುತ್ತಾ ಇರತಕ್ಕದ್ದು.
22. ಹೋಶೇಯ 6-9ನೇ ಅಧ್ಯಾಯಗಳಿಂದ ನಾವು ಯಾವ ಪಾಠಗಳನ್ನು ಕಲಿತಿದ್ದೇವೆ?
22 ಹೋಶೇಯ 6-9ನೇ ಅಧ್ಯಾಯಗಳಿಂದ, ದೇವರೊಂದಿಗೆ ನಡೆಯುವಂತೆ ನಮಗೆ ಸಹಾಯಮಾಡಬಲ್ಲ ನಾಲ್ಕು ಪಾಠಗಳನ್ನು ನಾವು ಕಲಿತಿದ್ದೇವೆ: (1) ನಿಜ ಪಶ್ಚಾತ್ತಾಪವು ಕ್ರಿಯೆಗಳಿಂದ ತೋರಿಸಲ್ಪಡುತ್ತದೆ; (2) ದೇವರು ಕೇವಲ ಯಜ್ಞಗಳಲ್ಲಿ ಮಾತ್ರ ಸಂತೋಷಪಡುವುದಿಲ್ಲ; (3) ತನ್ನ ಆರಾಧಕರು ತನ್ನಿಂದ ದೂರಹೋಗುವುದು ಯೆಹೋವನನ್ನು ನೋಯಿಸುತ್ತದೆ; (4) ನಾವು ಒಳ್ಳೇದನ್ನು ಕೊಯ್ಯಬೇಕಾದರೆ ಒಳ್ಳೇದನ್ನೇ ಬಿತ್ತಬೇಕು. ಈ ಬೈಬಲ್ ಪುಸ್ತಕದ ಕೊನೆಯ ಐದು ಅಧ್ಯಾಯಗಳು, ದೇವರೊಂದಿಗೆ ನಡೆಯಲು ನಮಗೆ ಹೇಗೆ ಸಹಾಯಮಾಡಬಲ್ಲವು?
ನೀವು ಹೇಗೆ ಉತ್ತರಿಸುವಿರಿ?
• ನಿಜ ಪಶ್ಚಾತ್ತಾಪವು ಹೇಗೆ ತೋರಿಸಲ್ಪಡುತ್ತದೆ?
• ನಮ್ಮ ಸ್ವರ್ಗೀಯ ತಂದೆಯು ಕೇವಲ ಯಜ್ಞಗಳಲ್ಲಿ ಮಾತ್ರ ಸಂತೋಷಪಡುವುದಿಲ್ಲವೇಕೆ?
• ತನ್ನ ಆರಾಧಕರು ತನ್ನನ್ನು ತೊರೆಯುವಾಗ ದೇವರಿಗೆ ಹೇಗನಿಸುತ್ತದೆ?
• ನಾವು ಒಳ್ಳೇದನ್ನು ಕೊಯ್ಯಬೇಕಾದರೆ ಏನನ್ನು ಬಿತ್ತಬೇಕಾಗಿದೆ?
[ಪುಟ 23ರಲ್ಲಿರುವ ಚಿತ್ರ]
ಪ್ರಾತಃಕಾಲದ ಮೋಡಗಳಂತೆ, ಇಸ್ರಾಯೇಲಿನ ನಿಷ್ಠಾವಂತ ಪ್ರೀತಿಯು ಕಣ್ಮರೆಯಾಯಿತು
[ಪುಟ 23ರಲ್ಲಿರುವ ಚಿತ್ರ]
ಇಸ್ರಾಯೇಲ್ಯರ ಕೆಟ್ಟ ಅಪೇಕ್ಷೆಗಳು ಒಲೆಯಂತೆ ಉರಿಯುತ್ತಿದ್ದವು
[ಪುಟ 24ರಲ್ಲಿರುವ ಚಿತ್ರ]
ಯೆಹೋವನು ತನ್ನ ಜನರ ಯಜ್ಞಗಳನ್ನು ಏಕೆ ತಿರಸ್ಕರಿಸಿದನು?
[ಪುಟ 25ರಲ್ಲಿರುವ ಚಿತ್ರ]
ನಾವು ಒಳ್ಳೇದನ್ನು ಕೊಯ್ಯಬೇಕಾದರೆ, ಒಳ್ಳೇದನ್ನೇ ಬಿತ್ತಬೇಕು