ಪ್ರಶ್ನಾ ಚೌಕ
◼ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ, ಸೇವಾ ಕೂಟ, ಸಾರ್ವಜನಿಕ ಕೂಟ ಮತ್ತು ಕಾವಲಿನಬುರುಜು ಅಧ್ಯಯನಕ್ಕಾಗಿ ಆರಂಭದ ಗೀತೆಯನ್ನು ಹೇಗೆ ಮತ್ತು ಯಾರು ಪರಿಚಯಿಸಬೇಕು?
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್ನಲ್ಲಿ ಪ್ರತಿವಾರದ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿ ಆಯ್ಕೆ ಮಾಡಲ್ಪಟ್ಟ ಆರಂಭದ ಗೀತೆಗಳನ್ನು ಕೊಡಲಾಗಿದೆ. ಈ ಶೆಡ್ಯೂಲ್ ಅಕ್ಟೋಬರ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿದೆ. ಪ್ರತಿವಾರದ ಸೇವಾ ಕೂಟಕ್ಕಾಗಿರುವ ಆರಂಭದ ಮತ್ತು ಮುಕ್ತಾಯದ ಗೀತೆಗಳನ್ನು ನಮ್ಮ ರಾಜ್ಯದ ಸೇವೆಯ ಪುಟ 2ರಲ್ಲಿ ಸೂಚಿಸಲಾಗಿರುವುದು. ಅದರಂತೆಯೇ, ವಾರದ ಕಾವಲಿನಬುರುಜು ಅಧ್ಯಯನಕ್ಕಾಗಿರುವ ಗೀತೆ ನಂಬರುಗಳು ಕಾವಲಿನಬುರುಜು ಪತ್ರಿಕೆಯ ಪ್ರತಿ ಸಂಚಿಕೆಯ ಪುಟ 2ರಲ್ಲಿ ಕೊಡಲ್ಪಟ್ಟಿವೆ. ಈ ನಿಗದಿಪಡಿಸಿದ ಗೀತೆಗಳು ಸಂಬಂಧಪಟ್ಟ ಕೂಟದ ಭಾಗವೆಂದು ಪರಿಗಣಿಸಲ್ಪಡುತ್ತವೆ. ಆದುದರಿಂದ, ಕೂಟವನ್ನು ನಡಿಸುವ ಸಹೋದರನು ಆ ಗೀತೆಯನ್ನು ಪ್ರಾರಂಭಿಸಬೇಕೇ ಹೊರತು ಹಿಂದಿನ ಕೂಟದ ಅಧ್ಯಕ್ಷನು ಅಲ್ಲ.
ಉದಾಹರಣೆಗೆ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೇಲ್ವಿಚಾರಕನು ಸಭಿಕರನ್ನು ಸ್ವಾಗತಿಸಿ ಆರಂಭದ ಗೀತೆಯನ್ನು ಪರಿಚಯಿಸುವನು. ಶಾಲೆಯನ್ನು ನಿರ್ವಹಿಸಿದ ಬಳಿಕ ಅವನು ಸೇವಾ ಕೂಟದ ಮೊದಲ ಭಾಷಣಕರ್ತನನ್ನು ವೇದಿಕೆಗೆ ಆಮಂತ್ರಿಸುವನು. ಸೇವಾ ಕೂಟದ ಭಾಗವನ್ನು ನಿರ್ವಹಿಸುವ ಆ ಸಹೋದರನೇ ಸೇವಾ ಕೂಟವನ್ನು ಆರಂಭಿಸುವ ಗೀತೆಯನ್ನು ಪರಿಚಯಿಸಬೇಕು.
ತದ್ರೀತಿಯಲ್ಲಿ, ಸಾರ್ವಜನಿಕ ಕೂಟವು ಅಧ್ಯಕ್ಷನಿಂದ ಆರಂಭಿಸಲ್ಪಡುವುದು. ಅವನು ಹಾಜರಿರುವವರೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವನು ಮತ್ತು ಭಾಷಣಕರ್ತನು ಆಯ್ಕೆ ಮಾಡಿದ ಆರಂಭದ ಗೀತೆಯನ್ನು ಹಾಡುವುದರಲ್ಲಿ ಜೊತೆಗೂಡುವಂತೆ ಅವರನ್ನು ಆಮಂತ್ರಿಸುವನು. ಆ ಅಧ್ಯಕ್ಷನು (ಇಲ್ಲವೆ ಮುಂಚಿತವಾಗಿಯೇ ನೇಮಿಸಲ್ಪಟ್ಟ ಅರ್ಹ ಸಹೋದರನು) ಪ್ರಾರ್ಥನೆಯೊಂದಿಗೆ ಕೂಟವನ್ನು ಆರಂಭಿಸುವನು. ಅವನು ಭಾಷಣಕರ್ತನನ್ನು ಪರಿಚಯಿಸಿ ಭಾಷಣದ ಮುಖ್ಯ ವಿಷಯವನ್ನು ತಿಳಿಸುವನು. ಭಾಷಣದ ಬಳಿಕ ಅಧ್ಯಕ್ಷನು, ಭಾಷಣಕರ್ತನು ಆಗ ತಾನೇ ಹೇಳಿದ ವಿಷಯಗಳನ್ನು ಪುನಃ ಸಾರಾಂಶಿಸದೆ, ಅವನು ನೀಡಿದ ಸಲಹೆಗಾಗಿ ಚುಟುಕಾಗಿ ಗಣ್ಯತೆಯನ್ನು ವ್ಯಕ್ತಪಡಿಸುವನು. ಮುಂದಿನ ವಾರದ ಸಾರ್ವಜನಿಕ ಭಾಷಣದ ಶೀರ್ಷಿಕೆಯನ್ನು ಅವನು ಪ್ರಕಟಿಸುವನು. ಅನಂತರ ಹಾಜರಿರುವವರೆಲ್ಲರು ಕಾವಲಿನಬುರುಜು ಅಧ್ಯಯನಕ್ಕಾಗಿ ಉಪಸ್ಥಿತರಾಗಿರುವಂತೆ ಆಮಂತ್ರಿಸುವನು. ಸಭಿಕರು ಅತಿಥಿ ಭಾಷಣಕರ್ತನ ಸಭೆಗೆ ತಮ್ಮ ಪ್ರೀತಿ ಮತ್ತು ವಂದನೆಗಳನ್ನು ತಿಳಿಸಲು ಇಷ್ಟಪಡುವರೋ ಎಂದು ಅಧ್ಯಕ್ಷನು ಕೇಳಿಕೊಳ್ಳುವ ಅಗತ್ಯವಿಲ್ಲ. ಆಮೇಲೆ, ಅಧ್ಯಕ್ಷನು ಕಾವಲಿನಬುರುಜು ಅಧ್ಯಯನ ನಿರ್ವಾಹಕನನ್ನು ವೇದಿಕೆಗೆ ಆಮಂತ್ರಿಸುವನು.
ಕಾವಲಿನಬುರುಜು ಅಧ್ಯಯನ ನಿರ್ವಾಹಕನು ಅಧ್ಯಯನಕ್ಕಾಗಿ ಉಪಯೋಗಿಸಲ್ಪಡುವ ಮೊದಲ ಗೀತೆಯನ್ನು ಪರಿಚಯಿಸುತ್ತಾನೆ. ಪ್ರಕಟಿಸಲ್ಪಟ್ಟ ಸೂಚನೆಗಳಿಗನುಸಾರ ಅವನು ಅಧ್ಯಯನವನ್ನು ನಿರ್ವಹಿಸುವನು ಮತ್ತು ಸಮಾಪ್ತಿಯ ಗೀತೆಯನ್ನು ತಿಳಿಸುವನು. ಸಾಮಾನ್ಯವಾಗಿ ಕಾವಲಿನಬುರುಜು ಅಧ್ಯಯನ ನಿರ್ವಾಹಕನೇ ಸಾರ್ವಜನಿಕ ಭಾಷಣ ನೀಡಿದ ಸಹೋದರನನ್ನು ಮುಕ್ತಾಯದ ಪ್ರಾರ್ಥನೆಗಾಗಿ ಆಮಂತ್ರಿಸುವನು.
ಈ ಸೂಚನೆಗಳನ್ನು ಅನುಸರಿಸುವುದು ನಮ್ಮ ಸಭಾಕೂಟಗಳು ಏಕರೂಪವಾಗಿ ನಡಿಸಲ್ಪಡುತ್ತಿವೆ ಎಂಬುದನ್ನು ಖಾತ್ರಿಪಡಿಸಲು ಸಹಾಯವಾಗುವುದು.