ಪ್ರಶ್ನಾ ಚೌಕ
◼ ಪ್ರಗತಿಪರ ಬೈಬಲ್ ವಿದ್ಯಾರ್ಥಿಯೊಂದಿಗೆ ಎಷ್ಟು ಸಮಯದ ವರೆಗೆ ಅಧ್ಯಯನ ನಡೆಸಬೇಕು?
ನಾವು ಪ್ರಗತಿಪರ ಬೈಬಲ್ ವಿದ್ಯಾರ್ಥಿಯೊಂದಿಗೆ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮತ್ತು “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂಬ ಎರಡು ಪುಸ್ತಕಗಳ ಅಧ್ಯಯನ ಮಾಡಿ ಮುಗಿಸುವುದು ಉತ್ತಮ. ಎರಡೂ ಪುಸ್ತಕಗಳ ಅಧ್ಯಯನ ಮುಗಿಯುವ ಮುಂಚೆಯೇ ವಿದ್ಯಾರ್ಥಿ ದೀಕ್ಷಾಸ್ನಾನ ತೆಗೆದುಕೊಂಡರೂ ಇದನ್ನು ಮಾಡಿ ಮುಗಿಸಬೇಕು. ಅವನ ದೀಕ್ಷಾಸ್ನಾನದ ಬಳಿಕವೂ ನಾವು ಅಧ್ಯಯನ, ಸಮಯ, ಪುನರ್ಭೇಟಿಗಳನ್ನು ವರದಿಸಬಹುದು. ನಮ್ಮ ಜೊತೆ ಒಬ್ಬ ಪ್ರಚಾರಕರಿದ್ದು ಅವರು ಅಧ್ಯಯನದಲ್ಲಿ ಭಾಗವಹಿಸಿದರೆ, ಅವರೂ ಸಮಯವನ್ನು ವರದಿಸಬಹುದು.—ಏಪ್ರಿಲ್ 2010ರ ನಮ್ಮ ರಾಜ್ಯ ಸೇವೆ ಪುಟ 6ನ್ನು ನೋಡಿ.
ಹೊಸಬರೊಂದಿಗೆ ನಾವು ಅಧ್ಯಯನ ನಿಲ್ಲಿಸುವ ಮುಂಚೆ ಅವರಿಗೆ ಸತ್ಯದಲ್ಲಿ ಸ್ಥಿರವಾದ ಬುನಾದಿ ಇರುವುದು ಪ್ರಾಮುಖ್ಯ. ಅವರು ಎದುರಿಸಲೇಬೇಕಾದ ಪರೀಕ್ಷೆಗಳನ್ನು ಜಯಿಸಿ ನಿಲ್ಲಬೇಕಾದರೆ ಕ್ರಿಸ್ತನಲ್ಲಿ “ಬೇರೂರಿದವರಾಗಿದ್ದು” ‘ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಡಬೇಕು.’ (ಕೊಲೊ. 2:6, 7; 2 ತಿಮೊ. 3:12; 1 ಪೇತ್ರ 5:8, 9) ಅಷ್ಟುಮಾತ್ರವಲ್ಲ ಇತರರಿಗೆ ಪರಿಣಾಮಕಾರಿಯಾಗಿ ಬೋಧಿಸಲಿಕ್ಕೆ ಅವರಿಗೆ “ಸತ್ಯದ ನಿಷ್ಕೃಷ್ಟ ಜ್ಞಾನ” ಇರಬೇಕು. (1 ತಿಮೊ. 2:4) ನಮ್ಮ ವಿದ್ಯಾರ್ಥಿಗಳೊಂದಿಗೆ ಎರಡೂ ಪುಸ್ತಕಗಳ ಅಧ್ಯಯನ ಮುಗಿಸುವ ಮೂಲಕ ‘ಜೀವಕ್ಕೆ ನಡಿಸುವ ದಾರಿಯಲ್ಲಿ’ ಭದ್ರವಾಗಿ ಕಾಲೂರುವಂತೆ ಅವರಿಗೆ ನೆರವಾಗುತ್ತಿದ್ದೇವೆ.—ಮತ್ತಾ. 7:14.
ವಿದ್ಯಾರ್ಥಿಗೆ ದೀಕ್ಷಾಸ್ನಾನ ಪಡೆಯಲು ಹಿರಿಯರು ಒಪ್ಪಿಗೆ ಕೊಡುವ ಮುಂಚೆ ಅವನಿಗೆ ಬೈಬಲಿನ ಪ್ರಮುಖ ಬೋಧನೆಗಳು ಸ್ಪಷ್ಟವಾಗಿ ಅರ್ಥವಾಗುತ್ತವೊ, ಅವುಗಳಿಗೆ ಹೊಂದಿಕೆಯಲ್ಲಿ ಜೀವಿಸುತ್ತಿದ್ದಾನೊ ಎಂಬದನ್ನು ಅವರು ಖಚಿತಪಡಿಸಿಕೊಳ್ಳಬೇಕು. ವಿದ್ಯಾರ್ಥಿಯೊಬ್ಬನು ಮೊದಲ ಅಧ್ಯಯನ ಪುಸ್ತಕವನ್ನು ಇನ್ನೂ ಮುಗಿಸಿಲ್ಲವಾದರೆ ಹಿರಿಯರು ಈ ಸಂಬಂಧದಲ್ಲಿ ವಿಶೇಷ ಜಾಗ್ರತೆ ವಹಿಸಬೇಕು. ಯಾವನಾದರೂ ದೀಕ್ಷಾಸ್ನಾನಕ್ಕೆ ಇನ್ನೂ ಅರ್ಹನಾಗಿರದಿದ್ದಲ್ಲಿ, ಅವನು ಮುಂದೆ ಅರ್ಹನಾಗುವಂತೆ ಬೇಕಾದ ವೈಯಕ್ತಿಕ ನೆರವನ್ನು ಕೊಡಲು ಹಿರಿಯರು ಏರ್ಪಡಿಸುವರು.—ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು, ಪುಟ 216-18 ನೋಡಿ.
[ಪುಟ 2ರಲ್ಲಿರುವ ಸಂಕ್ಷಿಪ್ತ ವಿವರಣೆ]
ಹೊಸಬರಿಗೆ ಸತ್ಯದಲ್ಲಿ ಸ್ಥಿರ ಬುನಾದಿ ಇರುವುದು ಪ್ರಾಮುಖ್ಯ