ಅಧ್ಯಾಯ ಇಪ್ಪತ್ತು
“ನಾನು ವಿಶ್ವಾಸವಿಟ್ಟಿದ್ದೇನೆ”
1. ಮಾರ್ಥಳ ದುಃಖವನ್ನು ಮತ್ತು ಅದಕ್ಕೆ ಕಾರಣವನ್ನು ವಿವರಿಸಿ.
ಮಾರ್ಥಳು ಊರ ಹೊರಗೆ ಬಂದು ನಿಂತಿದ್ದಳು. ಕ್ಷಣಕ್ಷಣವು ಅವಳಿಗೆ ತನ್ನ ಸಹೋದರನ ಸಮಾಧಿಯೇ ಕಣ್ಮುಂದೆ ಬರುತ್ತಿತ್ತು. ಆ ಸಮಾಧಿ ಒಂದು ಗುಹೆ. ಅದರ ಬಾಯನ್ನು ದೊಡ್ಡ ಬಂಡೆಯಿಂದ ಮುಚ್ಚಲಾಗಿತ್ತು. ಮಾರ್ಥಳ ಹೃದಯದಲ್ಲಿದ್ದ ದುಃಖ ಆ ಬಂಡೆಯಷ್ಟೇ ಭಾರವಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ ಅವಳ ಪ್ರೀತಿಯ ಸಹೋದರ ಲಾಜರ ಕೊನೆಯುಸಿರೆಳೆದಿದ್ದ. ಅವನು ಇನ್ನಿಲ್ಲವೆಂಬ ಸಂಗತಿಯನ್ನು ಅರಗಿಸಿಕೊಳ್ಳಲು ಆಕೆಗೆ ಆಗುತ್ತಲೇ ಇರಲಿಲ್ಲ. ಮನೆ ಶೋಕದಲ್ಲಿ ಮುಳುಗಿತ್ತು. ಬಂಧುಮಿತ್ರರು, ಪರಿಚಯಸ್ಥರು ಮನೆಗೆ ಬರುತ್ತಾ ಹೋಗುತ್ತಾ ಇದ್ದರು. ಸಂತಾಪ ಸೂಚಿಸಿ ಸಂತೈಸಲು ಪ್ರಯತ್ನಿಸುತ್ತಿದ್ದರು.
2, 3. (1) ಯೇಸುವಿನೊಂದಿಗಿನ ಭೇಟಿ ಮಾರ್ಥಳ ಮೇಲೆ ಯಾವ ಪ್ರಭಾವ ಬೀರಿರಬಹುದು? (2) ಮಾರ್ಥಳು ನುಡಿದ ಮಹತ್ವಪೂರ್ಣ ಮಾತಿನಿಂದ ಅವಳ ಬಗ್ಗೆ ಏನು ಗೊತ್ತಾಗುತ್ತದೆ?
2 ಈಗ ಮಾರ್ಥಳ ಎದುರಿಗೆ ಬಂದು ನಿಂತಿದ್ದವನು ಅವಳ ಸಹೋದರನ ಅಚ್ಚುಮೆಚ್ಚಿನ ಸ್ನೇಹಿತನಾದ ಯೇಸು. ಅವರಿಬ್ಬರು ನಿಂತಿದ್ದದ್ದು ಬೆಟ್ಟದ ಇಳಿಜಾರಿನಲ್ಲಿದ್ದ ಬೇಥಾನ್ಯ ಊರಿನ ಹೊರಗೆ. ಯೇಸುವನ್ನು ನೋಡಿದಾಕ್ಷಣ ಮಾರ್ಥಳಿಗೆ ಪುನಃ ದುಃಖ ಉಮ್ಮಳಿಸಿ ಬಂತು. ಏಕೆಂದರೆ ತನ್ನ ಸಹೋದರನನ್ನು ಸಾವಿನಿಂದ ತಪ್ಪಿಸಲು ಇಡೀ ಪ್ರಪಂಚದಲ್ಲೇ ಶಕ್ತಿಯಿದ್ದದ್ದು ಈತನೊಬ್ಬನಿಗೆ ಮಾತ್ರ. ಸಮಯಕ್ಕೆ ಮುಂಚೆ ಯೇಸು ಬರಲಿಲ್ಲ ಎಂಬ ನೋವು ಅವಳ ಮನಸ್ಸಿನಲ್ಲಿದ್ದರೂ ಆತನೊಂದಿಗಿನ ಕೆಲವೇ ಕ್ಷಣಗಳ ಈ ಭೇಟಿಯಿಂದ ಅವಳಿಗೆ ತುಸು ಸಾಂತ್ವನವಾಯಿತು. ಅವನ ಕಣ್ಣುಗಳಲ್ಲಿ ತೋರಿಬರುತ್ತಿದ್ದ ದಯೆ, ಮುಖಭಾವದಲ್ಲಿ ವ್ಯಕ್ತವಾಗುತ್ತಿದ್ದ ಅನುಕಂಪ ಅವಳಿಗೆ ಸಮಾಧಾನ ಪ್ರೋತ್ಸಾಹ ಕೊಟ್ಟಿತು. ಅವನು ಆಕೆಗೆ ಕೇಳಿದ ಪ್ರಶ್ನೆಗಳು ಮಾರ್ಥಳಿಗೆ ತನ್ನ ನಂಬಿಕೆಯ ಮೇಲೆ ಮತ್ತು ಪುನರುತ್ಥಾನದ ನಿರೀಕ್ಷೆಯ ಮೇಲೆ ಗಮನ ನೆಡುವಂತೆ ಸಹಾಯ ಮಾಡಿದವು. ಈ ಸಂಭಾಷಣೆಯ ಸಮಯದಲ್ಲೇ ಆಕೆ “ಲೋಕಕ್ಕೆ ಬರಲಿರುವ ದೇವರ ಮಗನಾದ ಕ್ರಿಸ್ತನು ನೀನೇ ಎಂದು ನಾನು ವಿಶ್ವಾಸವಿಟ್ಟಿದ್ದೇನೆ” ಎಂದು ಹೇಳಿದಳು. ಅವಳ ಜೀವಮಾನದಲ್ಲೇ ಅವಳಾಡಿದ ಅತಿ ಮಹತ್ವಪೂರ್ಣ ಮಾತುಗಳಿವು.—ಯೋಹಾ. 11:27.
3 ಈ ಮಾತುಗಳು ಮಾರ್ಥಳಲ್ಲಿ ಗಮನಾರ್ಹ ನಂಬಿಕೆಯಿತ್ತೆಂದು ತೋರಿಸುತ್ತವೆ. ಬೈಬಲ್ ಆಕೆಯ ಬಗ್ಗೆ ತಿಳಿಸುವ ಸಂಗತಿ ಸ್ವಲ್ಪವೇ ಆದರೂ ಅದರಲ್ಲಿ ನಮಗಾಗಿ ಗಹನವಾದ ಪಾಠಗಳಿವೆ. ಇವು ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಸಹಾಯಮಾಡುತ್ತವೆ. ಹೇಗೆಂದು ತಿಳಿಯಲಿಕ್ಕಾಗಿ, ಪ್ರಥಮವಾಗಿ ನಾವು ಮಾರ್ಥಳ ಬಗ್ಗೆ ಬೈಬಲಿನಲ್ಲಿರುವ ಮೊದಲ ವೃತ್ತಾಂತವನ್ನು ಪರಿಶೀಲಿಸೋಣ.
‘ಚಿಂತಿತಳಾಗಿದ್ದಳು ಮತ್ತು ಗಲಿಬಿಲಿಗೊಂಡಿದ್ದಳು’
4. (1) ಮಾರ್ಥಳ ಮನೆಯಲ್ಲಿ ಯಾರೆಲ್ಲ ಇದ್ದರು? (2) ಅವರು ಯೇಸುವಿನೊಂದಿಗೆ ಹೇಗಿದ್ದರು?
4 ಲಾಜರ ಸಾಯುವುದಕ್ಕೆ ಕೆಲವು ತಿಂಗಳ ಹಿಂದೆ ನಡೆದಂಥ ಸಂಗತಿ ಇದು. ಆಗ ಅವನು ಆರೋಗ್ಯದಿಂದಿದ್ದ. ಬೇಥಾನ್ಯದಲ್ಲಿ ಅವನ ಮನೆಗೆ ಅತಿ ಗಣ್ಯ ಅತಿಥಿಯೊಬ್ಬ ಬರಲಿದ್ದನು. ಆತ ಯೇಸು ಕ್ರಿಸ್ತನೇ. ಲಾಜರ, ಮಾರ್ಥ, ಮರಿಯ ಒಡಹುಟ್ಟಿದವರು. ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಮಾರ್ಥಳು ಹಿರಿಯವಳು ಆಗಿರಬಹುದೆಂದು ಕೆಲವು ಸಂಶೋಧಕರ ಅಭಿಪ್ರಾಯ. ಏಕೆಂದರೆ ಬೈಬಲಿನಲ್ಲಿ ಅವಳ ಬಗ್ಗೆ ಓದುವಾಗ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುತ್ತಿದ್ದದ್ದು ಅವಳೇ ಎಂದು ವ್ಯಕ್ತವಾಗುತ್ತದೆ. ಮಾತ್ರವಲ್ಲ ಕೆಲವೆಡೆ ಆ ಮೂವರ ಹೆಸರುಗಳನ್ನು ತಿಳಿಸುವಾಗ ಮಾರ್ಥಳ ಹೆಸರನ್ನೇ ಮೊದಲು ಪ್ರಸ್ತಾಪಿಸಲಾಗಿದೆ. (ಯೋಹಾ. 11:5) ಆ ಮೂವರಿಗೆ ಮದುವೆಯಾಗಿತ್ತಾ ಎಂಬ ಬಗ್ಗೆ ನಮಗೆ ಯಾವುದೇ ಸುಳಿವಿಲ್ಲ. ಆದರೆ ಅವರು ಯೇಸುವಿನ ಆಪ್ತ ಸ್ನೇಹಿತರಾಗಿದ್ದದ್ದು ನಿಶ್ಚಯ. ಯೂದಾಯದಲ್ಲಿ ಸೇವೆಮಾಡುತ್ತಿದ್ದಾಗ ಯೇಸು ಬೇಥಾನ್ಯಕ್ಕೆ ಬಂದು ಅವರ ಮನೆಯಲ್ಲಿ ತಂಗುತ್ತಿದ್ದ. ಯೂದಾಯದಲ್ಲಿ ಯೇಸು ತುಂಬ ವಿರೋಧ, ದ್ವೇಷ ಎದುರಿಸುತ್ತಿದ್ದ ಕಾರಣ ಇವರ ಮನೆಯಲ್ಲಿನ ಶಾಂತಿಯ ವಾತಾವರಣ ಹಾಗೂ ಇವರು ಕೊಡುತ್ತಿದ್ದ ಬೆಂಬಲದಿಂದ ಅವನಿಗೆ ಹಾಯೆನಿಸುತ್ತಿತ್ತು.
5, 6. (1) ಯೇಸು ಮನೆಗೆ ಬಂದಾಗ ಮುಖ್ಯವಾಗಿ ಮಾರ್ಥಳು ಏಕೆ ತುಂಬ ಕಾರ್ಯಮಗ್ನಳಾಗಿದ್ದಳು? (2) ಯೇಸು ಮನೆಗೆ ಬಂದ ನಂತರ ಮರಿಯಳು ಏನು ಮಾಡಿದಳು?
5 ಮನೆಗೆ ಬಂದವರನ್ನು ಆರಾಮವಾಗಿರುವಂತೆ ನೋಡಿಕೊಂಡು ಅವರ ಊಟೋಪಚಾರಕ್ಕೆಲ್ಲ ವಿಶೇಷ ಗಮನ ಕೊಡುತ್ತಿದ್ದವಳು ಮಾರ್ಥ. ಯಾವಾಗಲೂ ಕೆಲಸದಲ್ಲಿ ತೊಡಗಿರುತ್ತಿದ್ದಳು. ಶ್ರಮಜೀವಿ. ಆಚೀಚೆ ಓಡಾಡುತ್ತಾ ಏನಾದರೂ ಮಾಡುತ್ತಾ ಇರುತ್ತಿದ್ದಳೆಂದು ತೋರುತ್ತದೆ. ಈಗ ಯೇಸು ಅವರ ಮನೆಗೆ ಬರಲಿದ್ದ ಕಾರಣ ಈ ಸಲವೂ ಆಕೆ ತುಂಬ ಕಾರ್ಯಮಗ್ನಳಾಗಿದ್ದಳು. ಈ ಪ್ರತಿಷ್ಠಿತ ಅತಿಥಿಗಾಗಿ ಮತ್ತು ಬಹುಶಃ ಆತನೊಂದಿಗೆ ಸಂಚರಿಸುತ್ತಿದ್ದವರಿಗಾಗಿ ಕೂಡ ಆಕೆ ತರತರದ ಭಕ್ಷ್ಯಗಳ ವಿಶೇಷ ಅಡಿಗೆ ತಯಾರಿಸಬೇಕೆಂದಿದ್ದಳು. ಆ ಕಾಲದಲ್ಲಿ ಅತಿಥಿಸತ್ಕಾರಕ್ಕೆ ತುಂಬ ಮಹತ್ವ ಕೊಡಲಾಗುತ್ತಿತ್ತು. ಅತಿಥಿಗೆ ಸ್ವಾಗತ ಕೋರಲು ಮುದ್ದಿಡಲಾಗುತ್ತಿತ್ತು. ಬಳಿಕ ಅವನ ಕೆರಗಳನ್ನು ತೆಗೆದು ಪಾದಗಳನ್ನು ತೊಳೆಯಲಾಗುತ್ತಿತ್ತು. ಚೇತೋಹಾರಿಯಾದ ಸುಗಂಧಭರಿತ ಎಣ್ಣೆಯನ್ನು ಅವನ ತಲೆಗೆ ಹಚ್ಚಲಾಗುತ್ತಿತ್ತು. (ಲೂಕ 7:44-47 ಓದಿ.) ಅತಿಥಿಯ ವಿಶ್ರಾಂತಿ ಮತ್ತು ಊಟಕ್ಕಾಗಿ ಉತ್ತಮ ವ್ಯವಸ್ಥೆ ಮಾಡಲಾಗುತ್ತಿತ್ತು.
6 ಹಾಗಾಗಿ ಈಗ ಯೇಸು ಬರಲಿದ್ದ ಕಾರಣ ಮಾರ್ಥ, ಮರಿಯಳಿಗೆ ತುಂಬ ಕೆಲಸವಿತ್ತು. ಇವರಿಬ್ಬರಲ್ಲಿ ಮರಿಯಳು ಹೆಚ್ಚು ಸೂಕ್ಷ್ಮವೇದಿ ಹಾಗೂ ವಿಚಾರಪರಳೆಂಬುದು ಹೆಚ್ಚಿನವರ ಅಭಿಪ್ರಾಯ. ಖಂಡಿತವಾಗಿ ಆಕೆ ಆರಂಭದಲ್ಲಿ ಮಾರ್ಥಳ ಜೊತೆ ಕೆಲಸದಲ್ಲಿ ಕೈಜೋಡಿಸಿರಬೇಕು. ಆದರೆ ಯೇಸು ಮನೆಗೆ ಬಂದ ನಂತರ ಆಕೆ ಅವನ ಪಾದಗಳ ಬಳಿ ಕೂತುಕೊಂಡಳು. ಏಕೆ? ಯೇಸು ಆ ಸಂದರ್ಭವನ್ನು ಬಳಸಿ ಅಲ್ಲಿದ್ದವರಿಗೆ ಬೋಧಿಸಲಾರಂಭಿಸಿದ್ದನು. ಆತನು ಆ ಕಾಲದ ಧಾರ್ಮಿಕ ಮುಖಂಡರಂತಿರಲಿಲ್ಲ, ಸ್ತ್ರೀಯರನ್ನೂ ಗೌರವಿಸುತ್ತಿದ್ದನು. ಅವರಿಗೆ ತನ್ನ ಶುಶ್ರೂಷೆಯ ಮುಖ್ಯ ವಿಷಯವಾದ ದೇವರ ರಾಜ್ಯದ ಕುರಿತು ಕಲಿಸುತ್ತಿದ್ದನು. ಮರಿಯಳು ತನಗೆ ಸಿಕ್ಕಿದ ಈ ಅವಕಾಶದಿಂದ ಪುಳಕಿತಳಾಗಿ ಆತನು ಹೇಳುತ್ತಿದ್ದ ಒಂದೊಂದು ಪದವನ್ನೂ ಮೈಯೆಲ್ಲಾ ಕಿವಿಯಾಗಿಸಿ ಕೇಳುತ್ತಿದ್ದಳು.
7, 8. (1) ಮಾರ್ಥಳ ತಲೆಬಿಸಿ ಏಕೆ ಹೆಚ್ಚಾಯಿತು? (2) ಕೊನೆಗೂ ಅದನ್ನು ಹೇಗೆ ವ್ಯಕ್ತಪಡಿಸಿದಳು?
7 ಇತ್ತ ಮಾರ್ಥಳ ತಲೆಬಿಸಿ ಜಾಸ್ತಿಯಾಗುತ್ತಲೇ ಇದ್ದದ್ದನ್ನು ಸ್ವಲ್ಪ ಊಹಿಸಿ. ಏಕೆಂದರೆ ಅಡಿಗೆ ಕೆಲಸ ಇನ್ನೂ ಮುಗಿದಿರಲಿಲ್ಲ, ಎಷ್ಟೋ ಕೆಲಸ ಬಾಕಿ ಇತ್ತು. ಇವೆಲ್ಲದರ ಗಡಿಬಿಡಿಯಲ್ಲಿದ್ದ ಆಕೆಗೆ ಚಿಂತೆ, ತಳಮಳ ಹೆಚ್ಚುತ್ತಾ ಇತ್ತು. ಮಾರ್ಥ ತನ್ನ ಕೆಲಸದಲ್ಲಿ ಆಚೀಚೆ ಹೋಗುತ್ತಾ ಬರುತ್ತಾ ಇದ್ದಾಗ ಮರಿಯಳು ತನಗೆ ಸಹಾಯಮಾಡುವುದನ್ನು ಬಿಟ್ಟು ಅಲ್ಲಿ ಕೂತಿದ್ದನ್ನು ನೋಡಿ ಅವಳ ಮುಖ ಸಿಟ್ಟಿನಿಂದ ಕೆಂಪೇರಿತೇ? ಮರಿಯಳಿಗೆ ಕೇಳಿಸುವಂತೆ ದೊಡ್ಡ ನಿಟ್ಟುಸಿರುಬಿಟ್ಟು ಸೂಚನೆ ಕೊಟ್ಟಳೇ? ಹುಬ್ಬೇರಿಸಿ ಅವಳ ಕಡೆಗೆ ಬಿರುನೋಟ ಬೀರಿದಳೇ? ಏನೇ ಮಾಡಿದರೂ ಅವಳದೇನೂ ತಪ್ಪಿಲ್ಲ. ಪಾಪ, ಅಷ್ಟೂ ಕೆಲಸವನ್ನು ಅವಳೊಬ್ಬಳೇ ಹೇಗೆ ತಾನೇ ಮಾಡುವಳು?
8 ಸಿಟ್ಟನ್ನು ತಡೆದು ತಡೆದು ಸಾಕಾಗಿ ಕೊನೆಗೆ ಮಾರ್ಥ ಮಧ್ಯೆ ಬಾಯಿ ಹಾಕಿ “ಕರ್ತನೇ, ನಾನೊಬ್ಬಳೇ ಎಲ್ಲ ಕೆಲಸಗಳನ್ನು ಮಾಡುವಂತೆ ನನ್ನ ಸಹೋದರಿಯು ಬಿಟ್ಟಿರುವುದಕ್ಕೆ ನಿನಗೆ ಚಿಂತೆಯಿಲ್ಲವೆ? ನನಗೆ ಸಹಾಯಮಾಡುವಂತೆ ಅವಳಿಗೆ ಹೇಳು” ಎಂದು ಯೇಸುವಿಗೆ ಹೇಳಿಯೇ ಬಿಟ್ಟಳು. (ಲೂಕ 10:40) ಅವಳ ಮಾತು ಖಾರವಾಗಿತ್ತು. ಹಲವಾರು ಬೈಬಲ್ ಭಾಷಾಂತರಗಳಿಗನುಸಾರ ಆಕೆಯ ಪ್ರಶ್ನೆ “ಕರ್ತನೇ . . . ನಿನಗೇನೂ ಅನಿಸುವುದೇ ಇಲ್ಲವೇ?” ಎಂದಾಗಿದೆ. ಅನಂತರ ಆಕೆ ಯೇಸುವಿಗೆ ಮರಿಯಳನ್ನು ತಿದ್ದಿ ತನಗೆ ಕೆಲಸದಲ್ಲಿ ನೆರವಾಗಲು ಕಳುಹಿಸುವಂತೆ ತಿಳಿಸಿದಳು.
9, 10. (1) ಯೇಸು ಮಾರ್ಥಳಿಗೆ ಏನೆಂದು ಉತ್ತರ ಕೊಟ್ಟನು? (2) ಮಾರ್ಥಳು ಪಡುತ್ತಿದ್ದ ಶ್ರಮವೆಲ್ಲ ವ್ಯರ್ಥ ಅಂತ ಯೇಸು ಹೇಳುತ್ತಿರಲಿಲ್ಲವೆಂದು ಹೇಗೆ ಗೊತ್ತಾಗುತ್ತದೆ?
9 ಅವನು ಕೊಟ್ಟ ಉತ್ತರ ಕೇಳಿ ಮಾರ್ಥಳಿಗೆ ಅಚ್ಚರಿಯಾಗಿರಬಹುದು. ಅನೇಕ ಬೈಬಲ್ ವಾಚಕರಿಗೂ ಹಾಗೆ ಆಗಿದೆ. ಆತನು ಸೌಮ್ಯವಾಗಿ “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳ ಬಗ್ಗೆ ಚಿಂತಿತಳಾಗಿದ್ದಿ ಮತ್ತು ಗಲಿಬಿಲಿಗೊಂಡಿದ್ದಿ. ಆದರೆ ಬೇಕಾಗಿರುವುದು ಕೆಲವು ಮಾತ್ರ, ಅಥವಾ ಬರೀ ಒಂದೇ. ಮರಿಯಳಾದರೋ ಒಳ್ಳೆಯ ಭಾಗವನ್ನು ಆರಿಸಿಕೊಂಡಳು ಮತ್ತು ಅದು ಅವಳಿಂದ ತೆಗೆಯಲ್ಪಡುವುದಿಲ್ಲ” ಎಂದು ಹೇಳಿದನು. (ಲೂಕ 10:41, 42) ಅವನ ಮಾತಿನ ಅರ್ಥವೇನಾಗಿತ್ತು? ಮಾರ್ಥಳು ಪ್ರಾಪಂಚಿಕ ವಿಷಯಗಳನ್ನು ಪ್ರೀತಿಸುವವಳೆಂದು ಹೇಳುತ್ತಿದ್ದನೇ? ಅವನಿಗಾಗಿ ಒಳ್ಳೇ ಊಟ ತಯಾರಿಸಲು ಅವಳು ಪಡುತ್ತಿದ್ದ ಶ್ರಮವೆಲ್ಲ ವ್ಯರ್ಥವೆಂದು ತಿಳಿಸುತ್ತಿದ್ದನೇ?
ಮಾರ್ಥ ‘ಅನೇಕ ವಿಷಯಗಳ ಬಗ್ಗೆ ಚಿಂತಿತಳು, ಗಲಿಬಿಲಿಗೊಂಡವಳು’ ಆಗಿದ್ದರೂ ಯೇಸುವಿನ ತಿದ್ದುಪಾಟನ್ನು ದೀನತೆಯಿಂದ ಸ್ವೀಕರಿಸಿದಳು
10 ಖಂಡಿತ ಇಲ್ಲ. ಮಾರ್ಥಳು ಒಳ್ಳೇ ಮನಸ್ಸಿನಿಂದ, ಪ್ರೀತಿಯಿಂದ ಅದನ್ನೆಲ್ಲ ಮಾಡುತ್ತಿದ್ದಾಳೆಂದು ಯೇಸುವಿಗೆ ಚೆನ್ನಾಗಿ ತಿಳಿದಿತ್ತು. ಬಗೆಬಗೆಯ ಭಕ್ಷ್ಯ ತಯಾರಿಸಿ ಅತಿಥಿಸತ್ಕಾರ ಮಾಡುವುದು ಕೂಡ ಅವನಿಗೆ ತಪ್ಪೆನಿಸಲಿಲ್ಲ. ಏಕೆಂದರೆ ಸ್ವಲ್ಪ ಸಮಯದ ಹಿಂದೆಯಷ್ಟೇ ಮತ್ತಾಯನು ಅವನಿಗಾಗಿ “ಒಂದು ದೊಡ್ಡ ಔತಣ” ಏರ್ಪಡಿಸಿದ್ದಾಗ ಸಂತೋಷದಿಂದ ಅಲ್ಲಿಗೆ ಹೋಗಿದ್ದನು. (ಲೂಕ 5:29) ಹಾಗಾಗಿ ಇಲ್ಲಿ ಸಮಸ್ಯೆಯಾಗಿರೋದು, ಮಾರ್ಥಳು ಊಟ ತಯಾರಿಸುತ್ತಿದ್ದ ವಿಷಯದಲ್ಲಿ ಅಲ್ಲ ಬದಲಾಗಿ ಆಕೆಯ ಆದ್ಯತೆಯ ವಿಷಯದಲ್ಲಿ. ಭರ್ಜರಿ ಊಟದ ತಯಾರಿಯಲ್ಲೇ ಮಾರ್ಥ ಎಷ್ಟು ಮುಳುಗಿದ್ದಳೆಂದರೆ ಬಹುಮುಖ್ಯವಾದ ವಿಷಯವನ್ನೇ ಅಲಕ್ಷಿಸಿದ್ದಳು. ಅದೇನಾಗಿತ್ತು?
ಮಾರ್ಥಳ ಅತಿಥಿಸತ್ಕಾರವನ್ನು ಯೇಸು ಮಾನ್ಯಮಾಡಿದನು. ಅದನ್ನು ಒಳ್ಳೇ ಮನಸ್ಸಿನಿಂದ, ಪ್ರೀತಿಯಿಂದ ಮಾಡುತ್ತಿದ್ದಾಳೆಂದು ಅವನಿಗೆ ತಿಳಿದಿತ್ತು
11, 12. ಯೇಸು ಮಾರ್ಥಳನ್ನು ಹೇಗೆ ನಯವಾಗಿ ತಿದ್ದಿದನು?
11 ಯೆಹೋವ ದೇವರ ಏಕೈಕಜಾತ ಪುತ್ರನಾದ ಯೇಸು ಮಾರ್ಥಳ ಮನೆಗೆ ಬಂದದ್ದು ಸತ್ಯವನ್ನು ಕಲಿಸಲಿಕ್ಕೆ. ಹಾಗಾಗಿ ಅವನಿಗೆ ಮಾರ್ಥಳ ಸ್ವಾದಿಷ್ಟ ಭೋಜನವಾಗಲಿ ಅದಕ್ಕಾಗಿ ಆಕೆ ಮಾಡುತ್ತಿದ್ದ ತಯಾರಿಯಾಗಲಿ ಮುಖ್ಯವಾಗಿರಲಿಲ್ಲ. ಆದರೆ ಮಾರ್ಥಳು ತನ್ನ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಸಿಕ್ಕಿದ ಈ ಅವಕಾಶವನ್ನು ಕೈಬಿಡುತ್ತಿರುವುದನ್ನು ನೋಡಿ ಅವನಿಗೆ ಖಂಡಿತ ದುಃಖ ಆಗಿರಬೇಕು. ಹಾಗಿದ್ದರೂ ಆಯ್ಕೆಯನ್ನು ಅವಳಿಗೆ ಬಿಟ್ಟನು.a ಆದರೆ ಮರಿಯಳು ಸಹ ಆ ಸುವರ್ಣಾವಕಾಶವನ್ನು ಕೈಬಿಡುವಂತೆ ಒತ್ತಾಯಿಸೆಂದು ಮಾರ್ಥಳು ಹೇಳಿದ್ದು ಯೇಸುವಿಗೆ ಸರಿಕಾಣಲಿಲ್ಲ.
12 ಆದ್ದರಿಂದ ಆತನು ಮಾರ್ಥಳನ್ನು ನಯವಾಗಿ ತಿದ್ದಿದನು. ಸಿಡಿಮಿಡಿಗೊಂಡಿದ್ದ ಆಕೆಯನ್ನು ಹೆಸರು ಹಿಡಿದು ಮೃದುಸ್ವರದಲ್ಲಿ ‘ಮಾರ್ಥ, ಮಾರ್ಥ’ ಎಂದು ಎರಡು ಸಲ ಕರೆಯುವ ಮೂಲಕ ಶಾಂತಗೊಳಿಸಿದನು. ‘ಅನೇಕ ವಿಷಯಗಳ ಬಗ್ಗೆ ಚಿಂತಿತಳಾಗಿ ಗಲಿಬಿಲಿಗೊಳ್ಳುವ’ ಅಗತ್ಯವಿಲ್ಲವೆಂದು ಆಶ್ವಾಸನೆ ಕೊಟ್ಟನು. ಏಕೆಂದರೆ ಆಧ್ಯಾತ್ಮಿಕ ಔತಣ ಇರುವಾಗ ಬರೀ ಒಂದೆರಡು ಭಕ್ಷ್ಯಗಳುಳ್ಳ ಸಾದಾ ಊಟ ಸಾಕು. ಹಾಗಾಗಿ ಅನೇಕ ಭಕ್ಷ್ಯಗಳನ್ನು ತಯಾರಿಸಲಿಕ್ಕೆಂದು ಮರಿಯಳಿಂದ “ಒಳ್ಳೆಯ ಭಾಗ”ವನ್ನು ಅಂದರೆ ತನ್ನಿಂದ ಕಲಿಯುವ ಅವಕಾಶವನ್ನು ಯಾವ ಕಾರಣಕ್ಕೂ ಕಸಿದುಕೊಳ್ಳಲು ಯೇಸು ಸಿದ್ಧನಿರಲಿಲ್ಲ.
13. ಯೇಸು ಮಾರ್ಥಳಿಗೆ ಹೇಳಿದ ಮಾತಿನಿಂದ ನಮಗೇನು ಪಾಠಗಳಿವೆ?
13 ಈ ಚಿಕ್ಕ ವೃತ್ತಾಂತದಲ್ಲಿ ನಮಗೆ ಹಲವಾರು ಪಾಠಗಳಿವೆ. ನಮ್ಮ “ಆಧ್ಯಾತ್ಮಿಕ ಅಗತ್ಯವನ್ನು” ಪೂರೈಸಿಕೊಳ್ಳಲು ಯಾವುದೂ ಅಡ್ಡಬರದಂತೆ ನೋಡಿಕೊಳ್ಳಬೇಕು. (ಮತ್ತಾ. 5:3) ನಾವು ಮಾರ್ಥಳಂತೆ ಉದಾರಿಗಳೂ ಶ್ರಮಜೀವಿಗಳೂ ಆಗಿರಬೇಕು ನಿಜ. ಆದರೆ ಅದೇ ಸಮಯದಲ್ಲಿ ಅತಿಥಿಸತ್ಕಾರ ಮಾಡುವಾಗ ಅಷ್ಟೇನೂ ಮಹತ್ವವಲ್ಲದ ವಿಷಯಗಳ ಕುರಿತೇ ಅತಿಯಾಗಿ ‘ಚಿಂತಿಸಿ ಗಲಿಬಿಲಿಗೊಂಡು’ ಹೆಚ್ಚು ಮಹತ್ವದ ವಿಷಯವನ್ನು ಕಳಕೊಳ್ಳಬಾರದು. ಜೊತೆವಿಶ್ವಾಸಿಗಳನ್ನು ಆಮಂತ್ರಿಸಿದಾಗ ಇಲ್ಲವೇ ನಾವೇ ಅವರ ಮನೆಗೆ ಅತಿಥಿಗಳಾಗಿ ಹೋಗಿರುವಾಗ ನಮ್ಮ ಒಡನಾಟದ ಮುಖ್ಯ ಉದ್ದೇಶ ಭರ್ಜರಿ ಊಟ ಬಡಿಸುವುದಾಗಲಿ ಸೇವಿಸುವುದಾಗಲಿ ಅಲ್ಲ ಬದಲಾಗಿ ಪರಸ್ಪರ ಉತ್ತೇಜನ ವಿನಿಮಯ ಮಾಡಿಕೊಳ್ಳುವುದು ಹಾಗೂ ಆಧ್ಯಾತ್ಮಿಕ ವರಗಳನ್ನು ಕೊಡುವುದೇ ಆಗಿದೆ. (ರೋಮನ್ನರಿಗೆ 1:11, 12 ಓದಿ.) ಸಾದಾ ಊಟವಿದ್ದರೂ ಸೈ ಇಂಥ ಸಂದರ್ಭಗಳು ಭಕ್ತಿವರ್ಧಕವಾಗಿರಬಲ್ಲವು.
ಪ್ರೀತಿಯ ಸಹೋದರ ಸತ್ತು ಹೋದ, ಪುನಃ ಬದುಕಿದ
14. ತಿದ್ದುಪಾಟನ್ನು ಸ್ವೀಕರಿಸುವ ವಿಷಯದಲ್ಲಿ ಮಾರ್ಥಳು ನಿಶ್ಚಯವಾಗಿ ನಮಗೆ ಒಳ್ಳೇ ಮಾದರಿ ಏಕೆ?
14 ಯೇಸು ಕೊಟ್ಟ ಸೌಮ್ಯ ಗದರಿಕೆಯನ್ನು ಮಾರ್ಥ ಸ್ವೀಕರಿಸಿ ಅನ್ವಯಿಸಿದಳೇ? ಹೌದು. ಯೇಸು ಈ ತಿದ್ದುಪಾಟು ಕೊಟ್ಟ ಕೆಲವು ತಿಂಗಳ ಬಳಿಕ ನಡೆದ ಒಂದು ರೋಮಾಂಚಕ ಘಟನೆ ಬಗ್ಗೆ ಅಪೊಸ್ತಲ ಯೋಹಾನನು ಒಂದು ವೃತ್ತಾಂತ ಬರೆದನು. ಅದನ್ನು “ಯೇಸುವಿಗೆ ಮಾರ್ಥ, ಅವಳ ಸಹೋದರಿ ಮತ್ತು ಲಾಜರನ ಮೇಲೆ ಪ್ರೀತಿ ಇತ್ತು” ಎಂಬ ಮಾತುಗಳಿಂದ ಆರಂಭಿಸಿದ. (ಯೋಹಾ. 11:5) ಇದರಿಂದ ನಮಗೆ ಮಾರ್ಥಳು ಯೇಸುವಿನ ಮೇಲೆ ಮುನಿಸಿಕೊಂಡಿರಲಿಲ್ಲ, ಮನಸ್ಸಲ್ಲಿ ಯಾವುದೇ ಅಸಮಾಧಾನ ಇಟ್ಟುಕೊಂಡಿರಲಿಲ್ಲ ಎಂದು ಗೊತ್ತಾಗುತ್ತದೆ. ಆತನು ಪ್ರೀತಿಯಿಂದ ಕೊಟ್ಟಿದ್ದ ಬುದ್ಧಿವಾದವನ್ನು ಗಂಭೀರವಾಗಿ ಸ್ವೀಕರಿಸಿ, ಅನ್ವಯಿಸಿದ್ದಳು. ನಂಬಿಕೆಯನ್ನು ತೋರಿಸುವ ಈ ವಿಷಯದಲ್ಲೂ ಆಕೆ ನಮಗೊಂದು ಉತ್ತಮ ಮಾದರಿ. ಏಕೆಂದರೆ ನಮ್ಮೆಲ್ಲರಿಗೂ ಆಗಾಗ್ಗೆ ತಿದ್ದುಪಾಟು ಸಿಗುತ್ತದಲ್ಲವೇ?
15, 16. (1) ತನ್ನ ಸಹೋದರ ಅಸ್ವಸ್ಥನಾದಾಗ ಮಾರ್ಥ ಏನು ಮಾಡಿರಬಹುದು? (2) ಮಾರ್ಥ, ಮರಿಯಳ ನಿರೀಕ್ಷೆ ಏಕೆ ನುಚ್ಚುನೂರಾಯಿತು?
15 ಲಾಜರ ಅಸ್ವಸ್ಥನಾದ. ಮಾರ್ಥಳು ಅವನ ಆರೈಕೆಯಲ್ಲೇ ತಲ್ಲೀನಳಾದಳು. ಅವನ ನೋವನ್ನು ತಗ್ಗಿಸಲು, ಅವನು ಗುಣಮುಖನಾಗಲು ಕೈಲಾದದ್ದೆಲ್ಲ ಮಾಡಿದಳು. ಆದರೆ ಅವನ ಆರೋಗ್ಯ ಸ್ವಲ್ಪವೂ ಸುಧಾರಿಸಲಿಲ್ಲ. ಹಗಲಿರುಳೆನ್ನದೆ ಸಹೋದರಿಯರಿಬ್ಬರೂ ಅವನ ಶುಶ್ರೂಷೆ ಮಾಡಿದರು. ಪಕ್ಕದಲ್ಲಿದ್ದು ಅವನ ಕಳೆಗುಂದಿದ ಮೋರೆಯನ್ನು ದಿಟ್ಟಿಸುತ್ತಿದ್ದಾಗೆಲ್ಲ ಅದೆಷ್ಟೋ ಬಾರಿ ಮಾರ್ಥಳಿಗೆ ಅವರು ಚಿಕ್ಕಂದಿನಿಂದ ಇಲ್ಲಿಯ ತನಕ ಜೊತೆಯಾಗಿ ನೋವುನಲಿವನ್ನು ಹಂಚಿಕೊಂಡ ಸಂದರ್ಭಗಳೆಲ್ಲ ನೆನಪಿಗೆ ಬಂದಿರಬೇಕು.
16 ಲಾಜರ ಇನ್ನು ಉಳಿಯುವುದಿಲ್ಲವೆಂದು ತೋರಿದಾಗ ಮಾರ್ಥ, ಮರಿಯ ಯೇಸುವಿಗೆ ಸುದ್ದಿ ಕಳುಹಿಸಿದರು. ಆತನು ಬೇಥಾನ್ಯದಿಂದ ಎರಡು ದಿನಗಳ ಪ್ರಯಾಣದಷ್ಟು ದೂರದ ಸ್ಥಳದಲ್ಲಿ ಸಾರುತ್ತಿದ್ದನು. ಅವರು ಹೇಳಿಕಳುಹಿಸಿದ್ದು ಇಷ್ಟೇ: “ಕರ್ತನೇ, ನಿನಗೆ ಯಾರ ಮೇಲೆ ಮಮತೆಯಿದೆಯೋ ಅವನು ಅಸ್ವಸ್ಥನಾಗಿದ್ದಾನೆ.” (ಯೋಹಾ. 11:1, 3) ಯೇಸುವಿಗೆ ತನ್ನ ಮಿತ್ರ ಲಾಜರನ ಮೇಲೆ ತುಂಬ ಪ್ರೀತಿ ಇರುವುದರಿಂದ ಅವನಿಗಾಗಿ ಏನು ಬೇಕಾದರೂ ಮಾಡುವನೆಂಬ ನಂಬಿಕೆ ಆ ಸಹೋದರಿಯರಿಗಿತ್ತು. ಲಾಜರನಿಗೆ ಏನಾದರೂ ಆಗುವ ಮುಂಚೆ ಯೇಸು ಬಂದೇ ಬರುವನೆಂದು ಅವನ ದಾರಿ ಕಾಯುತ್ತಿದ್ದರೊ? ಕಾಯುತ್ತಿದ್ದಲ್ಲಿ ಆ ನಿರೀಕ್ಷೆ ನುಚ್ಚುನೂರಾಯಿತು. ಕಾರಣ ಲಾಜರನ ಉಸಿರು ನಿಂತೇಹೋಯಿತು.
17. (1) ಮಾರ್ಥಳ ಮನಸ್ಸನ್ನು ಕಾಡುತ್ತಿದ್ದ ವಿಷಯ ಯಾವುದು? (2) ಯೇಸು ಊರಿನ ಹತ್ತಿರ ಬರುತ್ತಿದ್ದಾನೆಂದು ತಿಳಿದೊಡನೆ ಅವಳೇನು ಮಾಡಿದಳು?
17 ಮಾರ್ಥ ಮತ್ತು ಮರಿಯ ಸಹೋದರನ ಮರಣಕ್ಕಾಗಿ ಶೋಕಿಸಿದರು. ಅವನ ಶವಸಂಸ್ಕಾರಕ್ಕಾಗಿ ಏರ್ಪಾಡುಗಳನ್ನು ಅವರೇ ಮಾಡಬೇಕಾಯಿತು. ಬೇಥಾನ್ಯ ಹಾಗೂ ಸುತ್ತಮುತ್ತಲಿನ ಸ್ಥಳಗಳಿಂದ ತುಂಬ ಜನರು ಬಂದಿದ್ದರು. ಆದರೆ ಯೇಸುವಿನ ಸುದ್ದಿಯೇ ಇರಲಿಲ್ಲ. ಸಮಯ ಸರಿದಂತೆ ‘ಯಾಕೆ ಯೇಸು ಬರಲಿಲ್ಲ?’ ಎಂಬ ಪ್ರಶ್ನೆ ಮಾರ್ಥಳ ಮನಸ್ಸಲ್ಲಿ ದೈತ್ಯಾಕಾರ ತಾಳಿರಬೇಕು. ಹೀಗೆ ನಾಲ್ಕು ದಿನಗಳು ಕಳೆದೇಹೋದವು. ಆಗ ಮಾರ್ಥಳಿಗೆ ಯೇಸು ಊರಿನ ಹತ್ತಿರ ಬರುತ್ತಿದ್ದಾನೆಂಬ ಸುದ್ದಿ ಕಿವಿಗೆ ಬಿತ್ತು. ಯಾವಾಗಲೂ ಪಾದರಸದಂತೆ ಚುರುಕಾಗಿದ್ದ ಈಕೆ ಈ ದುಃಖದ ಸಮಯದಲ್ಲೂ ತಕ್ಷಣ ಎದ್ದು ಯೇಸುವನ್ನು ಎದುರುಗೊಳ್ಳಲು ಓಡಿದಳು. ಮರಿಯಳಿಗೂ ಹೇಳಲಿಲ್ಲ.—ಯೋಹಾನ 11:18-20 ಓದಿ.
18, 19. (1) ಮಾರ್ಥಳು ಯಾವ ನಿರೀಕ್ಷೆಯನ್ನು ವ್ಯಕ್ತಪಡಿಸಿದಳು? (2) ಅವಳಿಗಿದ್ದ ಆ ನಂಬಿಕೆ ಮೆಚ್ಚತಕ್ಕದ್ದೇಕೆ?
18 ಊರ ಹೊರಗೆ ಬಂದ ಮಾರ್ಥಳು ಕರ್ತನಾದ ಯೇಸುವನ್ನು ಕಂಡ ಕೂಡಲೆ ಅನೇಕ ದಿನಗಳಿಂದ ತನ್ನ ಹಾಗೂ ಮರಿಯಳ ಮನಸ್ಸನ್ನು ಕೊರೆಯುತ್ತಿದ್ದ ವಿಚಾರವನ್ನು ಬಾಯಿಬಿಟ್ಟು ಹೇಳಿದಳು. “ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದಳು. ಸಹೋದರನು ಸತ್ತಿದ್ದನು ನಿಜ ಆದರೆ ಮಾರ್ಥಳ ನಿರೀಕ್ಷೆ, ನಂಬಿಕೆ ಮಾತ್ರ ಸತ್ತುಹೋಗಿರಲಿಲ್ಲ. ಹಾಗಾಗಿ ಅವಳು ಯೇಸುವಿಗೆ, “ಆದರೆ ಈಗಲೂ ದೇವರಿಂದ ನೀನು ಏನೆಲ್ಲ ಬೇಡಿಕೊಳ್ಳುತ್ತೀಯೋ ಅದೆಲ್ಲವನ್ನು ಆತನು ನಿನಗೆ ಕೊಡುವನೆಂದು ಬಲ್ಲೆನು” ಎಂದು ಹೇಳಿದಳು. ಆಕೆಯ ಆ ನಿರೀಕ್ಷೆಯನ್ನು ಬಲಪಡಿಸುತ್ತಾ ಯೇಸು ತಕ್ಷಣ ಆಕೆಗೆ “ನಿನ್ನ ಸಹೋದರನು ಎದ್ದುಬರುವನು” ಎಂದನು.—ಯೋಹಾ. 11:21-23.
19 ಯೇಸು ಭವಿಷ್ಯದಲ್ಲಾಗುವ ಪುನರುತ್ಥಾನದ ಬಗ್ಗೆ ಹೇಳುತ್ತಿದ್ದಾನೆಂದು ನೆನಸಿ ಮಾರ್ಥಳು, “ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ ಅವನು ಎದ್ದುಬರುವನೆಂದು ನಾನು ಬಲ್ಲೆನು” ಎಂದು ಉತ್ತರಿಸಿದಳು. (ಯೋಹಾ. 11:24) ಪುನರುತ್ಥಾನದ ಬೋಧನೆಯಲ್ಲಿ ಆಕೆಗಿದ್ದ ನಂಬಿಕೆ ಮೆಚ್ಚತಕ್ಕದ್ದು. ಏಕೆಂದರೆ ಆ ಬೋಧನೆಯು ದೇವಪ್ರೇರಿತ ಶಾಸ್ತ್ರಗ್ರಂಥದಲ್ಲಿ ಸ್ಪಷ್ಟವಾಗಿ ತಿಳಿಸಲ್ಪಟ್ಟಿದ್ದರೂ ಸದ್ದುಕಾಯರೆಂಬ ಯೆಹೂದಿ ಧಾರ್ಮಿಕ ಮುಖಂಡರು ಪುನರುತ್ಥಾನವೇ ಇಲ್ಲವೆಂದು ಹೇಳುತ್ತಿದ್ದರು. (ದಾನಿ. 12:13; ಮಾರ್ಕ 12:18) ಆದರೆ ಮಾರ್ಥಳು ಅವರಂತಿರಲಿಲ್ಲ. ಯೇಸು ಪುನರುತ್ಥಾನದ ನಿರೀಕ್ಷೆಯ ಕುರಿತು ಬೋಧಿಸುತ್ತಿದ್ದದ್ದು ಮತ್ತು ಆತನು ಈಗಾಗಲೇ ಕೆಲವರನ್ನು ಪುನರುತ್ಥಾನ ಮಾಡಿದ್ದು ಆಕೆಗೆ ಗೊತ್ತಿತ್ತು. ಆದರೆ ಸತ್ತು ನಾಲ್ಕು ದಿನಗಳಾಗಿರುವ ಯಾವ ವ್ಯಕ್ತಿಯನ್ನೂ ಯೇಸು ಪುನರುತ್ಥಾನಗೊಳಿಸಿದ್ದರ ಬಗ್ಗೆ ಆಕೆ ಅಷ್ಟರ ತನಕ ಕೇಳಿರಲಿಲ್ಲ. ಹೀಗಿರಲಾಗಿ ತನ್ನ ಸಹೋದರನ ವಿಷಯದಲ್ಲಿ ಏನಾಗಲಿದೆಯೆಂದು ಆಕೆಗೆ ಗೊತ್ತಿರಲಿಲ್ಲ.
20. ಯೋಹಾನ 11:25-27 ರಲ್ಲಿರುವ ಯೇಸುವಿನ ಅವಿಸ್ಮರಣೀಯ ಹೇಳಿಕೆ ಮತ್ತು ಮಾರ್ಥಳು ಕೊಟ್ಟ ಉತ್ತರದ ಅರ್ಥವನ್ನು ವಿವರಿಸಿ.
20 ಒಂದು ಅವಿಸ್ಮರಣೀಯ ಹೇಳಿಕೆಯನ್ನು ಯೇಸು ಹೇಳಿದ್ದು ಆ ಸಮಯದಲ್ಲೇ. “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ” ಎಂದನು ಯೇಸು. ಹೌದು, ಯೆಹೋವನು ತನ್ನ ಪುತ್ರನಿಗೆ ಭವಿಷ್ಯದಲ್ಲಿ ಭೂಮ್ಯಾದ್ಯಂತ ಪುನರುತ್ಥಾನಗಳನ್ನು ನಡೆಸುವ ಅಧಿಕಾರ ಕೊಟ್ಟಿದ್ದಾನೆ. ಯೇಸು ಮಾರ್ಥಳಿಗೆ “ನೀನು ಇದನ್ನು ನಂಬುತ್ತೀಯೊ?” ಎಂದು ಕೇಳಿದನು. “ಹೌದು ಕರ್ತನೇ, ಲೋಕಕ್ಕೆ ಬರಲಿರುವ ದೇವರ ಮಗನಾದ ಕ್ರಿಸ್ತನು ನೀನೇ ಎಂದು ನಾನು ವಿಶ್ವಾಸವಿಟ್ಟಿದ್ದೇನೆ” ಎಂದು ಮಾರ್ಥಳು ಹೇಳಿದ್ದು ಇದೇ ಸಮಯದಲ್ಲಿ. ಯೇಸುವೇ ಕ್ರಿಸ್ತ ಅಥವಾ ಮೆಸ್ಸೀಯ, ಯೆಹೋವ ದೇವರ ಪುತ್ರ, ಈ ಲೋಕಕ್ಕೆ ಬರುವುದಾಗಿ ಪ್ರವಾದಿಗಳು ಮುಂತಿಳಿಸಿದವ ಎಂಬ ನಂಬಿಕೆ ಆಕೆಗಿತ್ತು.—ಯೋಹಾ. 5:28, 29; ಯೋಹಾನ 11:25-27 ಓದಿ.
21, 22. (1) ಶೋಕಿಸುತ್ತಿದ್ದವರನ್ನು ನೋಡಿ ಯೇಸು ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದು ಹೇಗೆ? (2) ಲಾಜರನ ಪುನರುತ್ಥಾನದ ಸಂದರ್ಭವನ್ನು ವರ್ಣಿಸಿರಿ.
21 ಮಾರ್ಥಳಿಗಿದ್ದಂಥ ರೀತಿಯ ನಂಬಿಕೆಗೆ ಯೆಹೋವ ದೇವರ ಮತ್ತು ಆತನ ಪುತ್ರ ಯೇಸು ಕ್ರಿಸ್ತನ ದೃಷ್ಟಿಯಲ್ಲಿ ಏನಾದರೂ ಬೆಲೆಯಿದೆಯೇ? ಮುಂದೆ ಒಂದೊಂದಾಗಿ ನಡೆದ ಘಟನೆಗಳು ಇದಕ್ಕೆ ಸ್ಪಷ್ಟ ಉತ್ತರ ಕೊಡುತ್ತವೆ. ಮಾರ್ಥಳು ಓಡಿಹೋಗಿ ತನ್ನ ಸಹೋದರಿಯನ್ನು ಕರಕೊಂಡು ಬಂದಳು. ಮರಿಯ ಹಾಗೂ ಅಲ್ಲಿ ಶೋಕಿಸುತ್ತಿದ್ದ ಅನೇಕರೊಂದಿಗೆ ಯೇಸು ಮಾತಾಡುತ್ತಿದ್ದಾಗ ಅವನಿಗೆ ದುಃಖ ಒತ್ತರಿಸಿಕೊಂಡು ಬಂದದ್ದನ್ನು ಮಾರ್ಥ ನೋಡಿದಳು. ಸಾವು ತರುವ ತೀವ್ರ ನೋವನ್ನು ಹೊರಗೆ ತೋರಿಸಲು ಯೇಸು ಸಂಕೋಚಪಡದೆ ಅತ್ತದ್ದನ್ನೂ ನೋಡಿದಳು. ಸಮಾಧಿಯ ಬಾಯಿಗೆ ಮುಚ್ಚಲಾಗಿದ್ದ ದೊಡ್ಡ ಕಲ್ಲನ್ನು ಸರಿಸುವಂತೆ ಯೇಸು ಅಪ್ಪಣೆಕೊಟ್ಟದ್ದನ್ನು ಕೂಡ ಕಿವಿಯಾರೆ ಕೇಳಿಸಿಕೊಂಡಳು.—ಯೋಹಾ. 11:28-39.
22 ಯಾವಾಗಲೂ ವಾಸ್ತವಿಕತೆಯನ್ನು ಗಮನದಲ್ಲಿಡುವ ಮಾರ್ಥ ಇದನ್ನು ಆಕ್ಷೇಪಿಸುತ್ತಾ, ನಾಲ್ಕು ದಿನಗಳಾಗಿರುವ ಕಾರಣ ಶವವು ನಾರುತ್ತಿರುತ್ತದೆಂದು ಹೇಳಿದಳು. ಆಗ ಯೇಸು ಆಕೆಗೆ “ನೀನು ನಂಬುವುದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೊ” ಎಂದು ನೆನಪಿಸಿದನು. ಆಕೆ ನಿಜವಾಗಿಯೂ ನಂಬಿದಳು. ಹಾಗಾಗಿ ಯೆಹೋವ ದೇವರ ಮಹಿಮೆಯನ್ನು ಕಣ್ಣಾರೆ ಕಂಡಳು. ಅಲ್ಲೇ ಆ ಕ್ಷಣದಲ್ಲೇ ಲಾಜರನನ್ನು ಜೀವಂತಗೊಳಿಸಲು ದೇವರು ತನ್ನ ಪುತ್ರನಿಗೆ ಶಕ್ತಿಕೊಟ್ಟನು. “ಲಾಜರನೇ, ಹೊರಗೆ ಬಾ” ಎಂದು ಯೇಸು ಆಜ್ಞಾಪಿಸಿ ಕರೆದನು. ಶವವಾಗಿದ್ದವನು ಕೂಡಲೆ ಜೀವಂತವಾಗಿ ಎದ್ದನು. ಬಟ್ಟೆಗಳಿಂದ ಸುತ್ತಲ್ಪಟ್ಟಿದ್ದ ಅವನು ನಿಧಾನವಾಗಿ ನಡೆಯುತ್ತಾ ಗುಹೆಯ ಪ್ರವೇಶದ್ವಾರದೆಡೆಗೆ ಬರುವಾಗ ಗುಹೆಯೊಳಗಿಂದ ಸರಪರ ಸದ್ದು ಕೇಳಿಬಂದಿರಬೇಕು. “ಅವನನ್ನು ಬಿಚ್ಚಿರಿ, ಅವನು ಹೋಗಲಿ” ಎಂದು ಯೇಸು ಆದೇಶಿಸಿದನು. ಮಾರ್ಥ ಮರಿಯರು ಸಂತೋಷದಿಂದ ಭಾವಪರವಶರಾಗಿ ಓಡಿಹೋಗಿ ಸಹೋದರನ ತೋಳತೆಕ್ಕೆಗೆ ಬಿದ್ದರು. ಈ ಎಲ್ಲ ಸಂಗತಿಗಳು ಖಂಡಿತ ಮಾರ್ಥಳ ಉಸಿರಿರುವ ವರೆಗೂ ಅವಳ ಸ್ಮರಣೆಯಲ್ಲಿ ಮುದ್ರೆಯೊತ್ತಿದಂತೆ ಇತ್ತೆನ್ನುವುದರಲ್ಲಿ ಎರಡು ಮಾತಿಲ್ಲ. (ಯೋಹಾನ 11:40-44 ಓದಿ.) ಹೌದು, ಮಾರ್ಥಳ ಹೃದಯದಲ್ಲಿ ಹೆಬ್ಬಂಡೆಯಂತೆ ಭಾರವಾಗಿದ್ದ ದುಃಖ ಉರುಳಿಹೋಯಿತು!
ಮಾರ್ಥ ಯೇಸುವಿನಲ್ಲಿಟ್ಟಿದ್ದ ನಂಬಿಕೆಗೆ ಪ್ರತಿಫಲ ಸಿಕ್ಕಿದ್ದು ಆಕೆ ಮತ್ತು ಮರಿಯಳು ಅವರ ಸಹೋದರನ ಪುನರುತ್ಥಾನವನ್ನು ಕಂಡಾಗ
23. (1) ಯೆಹೋವ ಮತ್ತು ಯೇಸು ನಿಮಗಾಗಿ ಏನು ಮಾಡಲು ಇಚ್ಛಿಸುತ್ತಾರೆ? (2) ನೀವೇನು ಮಾಡಬೇಕು?
23 ಈ ವೃತ್ತಾಂತ ತೋರಿಸಿಕೊಡುವಂತೆ ಸತ್ತವರ ಪುನರುತ್ಥಾನ ಕಾಲ್ಪನಿಕವಲ್ಲ. ಅದು ಬೈಬಲಿನ ಒಂದು ಸಾಂತ್ವನದಾಯಕ ಬೋಧನೆ. ಹಿಂದೆ ಇದು ನಿಜವಾಗಿಯೂ ನಡೆದಿರುವುದಾಗಿ ಸಾಬೀತಾಗಿದೆ. (ಯೋಬ 14:14, 15) ಮಾರ್ಥ, ಮರಿಯ ಹಾಗೂ ಲಾಜರನಿಗೆ ಯೆಹೋವನೂ ಆತನ ಪುತ್ರನೂ ಪ್ರತಿಫಲ ಕೊಟ್ಟಂತೆ ನಂಬಿಕೆಯಿಡುವ ಇತರರಿಗೂ ಪ್ರತಿಫಲ ಕೊಡಲು ಅವರಿಬ್ಬರೂ ತವಕಿಸುತ್ತಾರೆ. ಬಲವಾದ ನಂಬಿಕೆಯನ್ನು ಬೆಳೆಸಿಕೊಂಡರೆ ಖಂಡಿತವಾಗಿ ನಿಮಗೂ ಅಂಥ ಪ್ರತಿಫಲಗಳನ್ನು ಕೊಡುವರು.
“ಮಾರ್ಥಳು ಉಪಚರಿಸುತ್ತಿದ್ದಳು”
24. ಮಾರ್ಥಳ ಬಗ್ಗೆ ಬೈಬಲ್ ಹೇಳುವ ಕೊನೆಯ ಮಾತು ಯಾವುದು?
24 ಬೈಬಲ್ ದಾಖಲೆ ಮಾರ್ಥಳ ಬಗ್ಗೆ ಮುಂದಕ್ಕೆ ಪ್ರಸ್ತಾಪಿಸುವುದು ಒಂದೇ ಒಂದು ಬಾರಿ. ಯೇಸುವಿನ ಮರಣಕ್ಕೆ ಇನ್ನೂ ಒಂದು ವಾರವಿತ್ತು. ತನಗೆ ಮುಂದೆ ಬರಲಿದ್ದ ಕಷ್ಟಗಳ ಬಗ್ಗೆ ಚೆನ್ನಾಗಿ ತಿಳಿದಿದ್ದ ಯೇಸು ಪುನಃ ಒಮ್ಮೆ ಬೇಥಾನ್ಯದಲ್ಲಿದ್ದ ಆ ಸ್ನೇಹಿತರ ಮನೆಯಲ್ಲಿ ತಂಗಿದನು. ಅಲ್ಲಿಂದ 3 ಕಿ.ಮೀ. ದೂರದಲ್ಲಿದ್ದ ಯೆರೂಸಲೇಮ್ಗೆ ಆತನು ನಡೆದು ಹೋಗಿಬರುತ್ತಿದ್ದನು. ಬೇಥಾನ್ಯದಲ್ಲಿ ಯೇಸು ಮತ್ತು ಲಾಜರನು ಕುಷ್ಠರೋಗಿಯಾಗಿದ್ದ ಸೀಮೋನನ ಮನೆಯಲ್ಲಿ ಊಟಕ್ಕಾಗಿ ಕೂತಿದ್ದರು. ಆಗ, ನಮ್ಮ ಚರ್ಚೆಯ ವಿಷಯವಾಗಿರುವಾಕೆಯ ಈ ಕೊನೆಯ ನಸುನೋಟ ಸಿಗುತ್ತದೆ: “ಮಾರ್ಥಳು ಉಪಚರಿಸುತ್ತಿದ್ದಳು.”—ಯೋಹಾ. 12:2.
25. ಮಾರ್ಥಳಂಥ ಸಹೋದರಿಯರು ಇಂದು ಸಭೆಗಳಲ್ಲಿ ಇರುವುದು ಒಂದು ಆಶೀರ್ವಾದವೇಕೆ?
25 ಆ ಶ್ರಮಜೀವಿ ಮಹಿಳೆಯ ಲಕ್ಷಣವೇ ಅದಲ್ಲವೇ? ಬೈಬಲ್ ಅವಳ ಬಗ್ಗೆ ಮೊದಲ ಸಲ ಹೇಳುವಾಗಲೂ, ಕೊನೆ ಸಲ ಹೇಳುವಾಗಲೂ ಆಕೆ ಕೆಲಸಮಾಡುತ್ತಿದ್ದದರ ಬಗ್ಗೆ ತಿಳಿಸುತ್ತದೆ. ತನ್ನ ಸುತ್ತಲಿದ್ದವರ ಅಗತ್ಯಗಳನ್ನು ಪೂರೈಸಲು ತನ್ನಿಂದಾದದ್ದೆಲ್ಲವನ್ನು ಮಾಡುವುದು ಅವಳ ಸ್ವಭಾವ. ಇಂದು ಕ್ರಿಸ್ತನ ಹಿಂಬಾಲಕರ ಸಭೆಗಳಲ್ಲೂ ಮಾರ್ಥಳಂಥ ಸ್ತ್ರೀಯರಿರುವುದು ನಿಜಕ್ಕೂ ಒಂದು ಆಶೀರ್ವಾದ. ಅವರು ದೃಢಮನಸ್ಕರೂ ಉದಾರಿಗಳೂ ಆಗಿದ್ದಾರೆ. ದೇವರ ಸೇವೆಯಲ್ಲಿ ಮತ್ತು ಇತರರಿಗೆ ಸಹಾಯ ಮಾಡುವುದರಲ್ಲಿ ಶ್ರಮಿಸುತ್ತಾ ತಮ್ಮ ನಂಬಿಕೆಯನ್ನು ಕ್ರಿಯೆಯಲ್ಲಿ ತೋರಿಸುತ್ತಾರೆ. ಮಾರ್ಥ ಇದನ್ನು ಮಾಡುತ್ತಾ ಮುಂದುವರಿದಳೇ? ಹೌದೆಂದು ತೋರುತ್ತದೆ. ಹಾಗೆ ಮಾಡಿರುವಲ್ಲಿ ಆಕೆ ವಿವೇಕದಿಂದ ಕ್ರಿಯೆಗೈದಳೆಂದು ಹೇಳಬಹುದು. ಏಕೆಂದರೆ ಅವಳು ಮುಂದೆ ಎದುರಿಸಲಿದ್ದ ಕಷ್ಟಗಳನ್ನು ತಾಳಿಕೊಳ್ಳಲು ಆ ನಂಬಿಕೆ ನೆರವಾಯಿತು.
26. ಮಾರ್ಥಳ ನಂಬಿಕೆ ಏನು ಮಾಡುವಂತೆ ಅವಳಿಗೆ ನೆರವು ನೀಡಿತು?
26 ಕೆಲವೇ ದಿನಗಳ ಬಳಿಕ ಮಾರ್ಥಳು ತನ್ನ ಪ್ರೀತಿಯ ಕರ್ತನಾದ ಯೇಸುವಿನ ಘೋರ ಮರಣದ ದುಃಖವನ್ನು ಸಹಿಸಿಕೊಳ್ಳಬೇಕಾಯಿತು. ಅಲ್ಲದೆ, ಆತನನ್ನು ಕೊಂದುಹಾಕಿದ ಅದೇ ಕೊಲೆಗಡುಕ ಕಪಟಿಗಳು ಅವಳ ಸಹೋದರನನ್ನೂ ಕೊಲ್ಲಲು ಪಣತೊಟ್ಟಿದ್ದರು. ಏಕೆಂದರೆ ಅವನ ಪುನರುತ್ಥಾನವು ಅನೇಕಾನೇಕರ ನಂಬಿಕೆಗೆ ಪುಷ್ಟಿಕೊಡುತ್ತಿತ್ತು. (ಯೋಹಾನ 12:9-11 ಓದಿ.) ಮಾರ್ಥಳಿಗೆ ತನ್ನ ಒಡಹುಟ್ಟಿದವರೊಂದಿಗಿದ್ದ ಪ್ರೀತಿಯ ಬಂಧವನ್ನು ಕಟ್ಟಕಡೆಗೆ ಮರಣವು ಕಡಿದುಹಾಕಿತು. ಇದು ಹೇಗೆ, ಯಾವಾಗ ಎಂದು ನಮಗೆ ಗೊತ್ತಿಲ್ಲದಿದ್ದರೂ, ಮಾರ್ಥಳಿಗಿದ್ದ ಅಮೂಲ್ಯ ನಂಬಿಕೆಯು ಆಕೆ ಕೊನೆ ತನಕ ತಾಳಿಕೊಳ್ಳಲು ನೆರವು ನೀಡಿತೆಂಬುದಂತೂ ನಿಶ್ಚಯ. ಆದ್ದರಿಂದ ಇಂದು ಕ್ರೈಸ್ತರು ಮಾರ್ಥಳ ನಂಬಿಕೆಯನ್ನು ಅನುಕರಿಸುವುದು ಉತ್ತಮ.
a ಒಂದನೇ ಶತಮಾನದ ಯೆಹೂದಿ ಸಮಾಜದಲ್ಲಿ ಸ್ತ್ರೀಯರನ್ನು ಸಾಮಾನ್ಯವಾಗಿ ಕಲಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸೇರಿಸಲಾಗುತ್ತಿರಲಿಲ್ಲ. ಅವರಿಗೆ ಕೊಡಲಾಗುತ್ತಿದ್ದ ತರಬೇತಿ ಹೆಚ್ಚಾಗಿ ಮನೆಕೆಲಸಕ್ಕೆ ಸಂಬಂಧಿಸಿರುತ್ತಿತ್ತು. ಆದ್ದರಿಂದಲೇ ಮಾರ್ಥಳ ದೃಷ್ಟಿಯಲ್ಲಿ ಸ್ತ್ರೀಯೊಬ್ಬಳು ಬೋಧಕನ ಪಾದದ ಬಳಿ ಕುಳಿತು ಕಲಿಯುವುದು ತುಂಬ ಅಸಾಮಾನ್ಯವೆಂದು ಕಂಡಿರಬಹುದು.