ಅಧ್ಯಾಯ 46
ಚಿರಪರಿಚಿತ ಸನ್ನಿವೇಶಗಳ ಮೇಲಾಧಾರಿತ ದೃಷ್ಟಾಂತಗಳು
ನೀವು ಯಾವುದೇ ದೃಷ್ಟಾಂತಗಳನ್ನು ಉಪಯೋಗಿಸಲಿ, ಅವು ನೀವು ಚರ್ಚಿಸುತ್ತಿರುವ ವಿಷಯಭಾಗಕ್ಕೆ ಸೂಕ್ತವಾಗಿರುವುದು ಪ್ರಾಮುಖ್ಯ ಸಂಗತಿಯಾಗಿದೆ. ಆದರೆ ಅವು ಅತಿ ಹೆಚ್ಚು ಪರಿಣಾಮಕಾರಿಯಾಗಿರಬೇಕಾದರೆ, ಅವು ನಿಮ್ಮ ಸಭಿಕರಿಗೆ ತಕ್ಕದ್ದಾಗಿರುವುದೂ ಅಷ್ಟೇ ಪ್ರಾಮುಖ್ಯ.
ನೀವು ಒಂದು ಗುಂಪಿಗೆ ಮಾತಾಡುವಾಗ, ನಿಮ್ಮ ಸಭಿಕರಲ್ಲಿ ಯಾವ ರೀತಿಯ ಜನರಿದ್ದಾರೆ ಎಂಬ ವಿಷಯವು ನಿಮ್ಮ ದೃಷ್ಟಾಂತಗಳ ಆಯ್ಕೆಯನ್ನು ಹೇಗೆ ಪ್ರಭಾವಿಸಬಹುದು? ಯೇಸು ಕ್ರಿಸ್ತನು ಏನು ಮಾಡಿದನು? ಯೇಸು ಜನರ ಗುಂಪಿಗೆ ಅಥವಾ ತನ್ನ ಶಿಷ್ಯರೊಂದಿಗೆ ಮಾತಾಡಿದಾಗ, ಇಸ್ರಾಯೇಲಿನ ಹೊರಗಿದ್ದ ದೇಶಗಳ ಜೀವನಕ್ರಮದ ಉದಾಹರಣೆಗಳನ್ನು ಆಯ್ದುಕೊಳ್ಳಲಿಲ್ಲ. ಏಕೆಂದರೆ ಅಂತಹ ಉದಾಹರಣೆಗಳು ಅವನ ಸಭಿಕರಿಗೆ ಅಪರಿಚಿತವಾಗಿರುತ್ತಿದ್ದವು. ಉದಾಹರಣೆಗೆ, ಯೇಸು ಐಗುಪ್ತದ ಆಸ್ಥಾನದಲ್ಲಿನ ಜೀವಿತವನ್ನಾಗಲಿ ಭಾರತದ ಧಾರ್ಮಿಕ ಪದ್ಧತಿಗಳನ್ನಾಗಲಿ ಸೂಚಿಸಿ ಮಾತಾಡಲಿಲ್ಲ. ಆದರೂ, ಅವನ ದೃಷ್ಟಾಂತಗಳು ಎಲ್ಲಾ ದೇಶಗಳ ಜನರಿಗೆ ಸಾಮಾನ್ಯವಾಗಿದ್ದ ಚಟುವಟಿಕೆಗಳಿಂದ ಆಯ್ಕೆಮಾಡಲ್ಪಟ್ಟವುಗಳಾಗಿದ್ದವು. ಬಟ್ಟೆಯ ದುರಸ್ತು, ವ್ಯಾಪಾರವನ್ನು ನಡಿಸುವುದು, ಬೆಲೆಬಾಳುವ ವಸ್ತುವನ್ನು ಕಳೆದುಕೊಳ್ಳುವುದು ಮತ್ತು ಮದುವೆಯ ಔತಣಗಳಿಗೆ ಹೋಗುವುದರಂಥ ವಿಷಯಗಳ ಕುರಿತು ಅವನು ಮಾತಾಡಿದನು. ವಿವಿಧ ಸನ್ನಿವೇಶಗಳ ಕೆಳಗೆ ಜನರು ಹೇಗೆ ಪ್ರತಿಕ್ರಿಯೆಯನ್ನು ತೋರಿಸುವರು ಎಂಬುದನ್ನು ಅವನು ಅರ್ಥಮಾಡಿಕೊಂಡಿದ್ದನು ಮತ್ತು ಅವನು ಆ ಜ್ಞಾನವನ್ನು ಸದುಪಯೋಗಿಸಿದನು. (ಮಾರ್ಕ 2:21; ಲೂಕ 14:7-11; 15:8, 9; 19:15-23) ಯೇಸುವಿನ ಸಾರ್ವಜನಿಕ ಸಾರುವಿಕೆಯು ವಿಶೇಷವಾಗಿ ಇಸ್ರಾಯೇಲಿನ ಜನರ ಕಡೆಗೆ ನಿರ್ದೇಶಿಸಲ್ಪಟ್ಟದ್ದರಿಂದ, ಅವನ ದೃಷ್ಟಾಂತಗಳು ಹೆಚ್ಚು ಬಾರಿ ಅವರ ದೈನಂದಿನ ಜೀವಿತದ ಭಾಗವಾಗಿದ್ದ ವಸ್ತುಗಳನ್ನು ಮತ್ತು ಚಟುವಟಿಕೆಗಳನ್ನು ಸೂಚಿಸಿದವು. ಹೀಗೆ ಅವನು ಬೇಸಾಯದ ಕೆಲಸ, ತಮ್ಮ ಕುರುಬನ ಸ್ವರಕ್ಕೆ ಕುರಿಗಳು ಕಿವಿಗೊಡುವ ರೀತಿ, ಮತ್ತು ದ್ರಾಕ್ಷಾರಸವನ್ನು ಸಂಗ್ರಹಿಸಿಡಲಿಕ್ಕಾಗಿ ಪ್ರಾಣಿಗಳ ಚರ್ಮದ ಚೀಲಗಳ ಉಪಯೋಗದಂಥ ವಿಷಯಗಳಿಗೆ ಸೂಚಿಸಿದನು. (ಮಾರ್ಕ 2:22; 4:2-9; ಯೋಹಾ. 10:1-5) ಅವರಿಗೆ ಪರಿಚಿತವಾಗಿದ್ದ ಐತಿಹಾಸಿಕ ಉದಾಹರಣೆಗಳನ್ನು—ಪ್ರಥಮ ಮಾನವ ದಂಪತಿಯ ಸೃಷ್ಟಿ, ನೋಹನ ದಿನಗಳ ಜಲಪ್ರಳಯ, ಸೊದೋಮ್ ಮತ್ತು ಗೊಮೋರಗಳ ನಾಶನ, ಲೋಟನ ಹೆಂಡತಿಯ ಮರಣ, ಮುಂತಾದ ಉದಾಹರಣೆಗಳನ್ನೂ ಅವನು ಸೂಚಿಸಿ ಮಾತಾಡಿದನು. (ಮತ್ತಾ. 10:15; 19:4-6; 24:37-39; ಲೂಕ 17:32) ನೀವು ಸಹ ದೃಷ್ಟಾಂತಗಳನ್ನು ಆರಿಸಿಕೊಳ್ಳುವಾಗ ತದ್ರೀತಿಯಲ್ಲಿ ನಿಮ್ಮ ಸಭಿಕರಿಗೆ ಮತ್ತು ಅವರ ಸಾಂಸ್ಕೃತಿಕ ಹಿನ್ನೆಲೆಗೆ ಸಾಮಾನ್ಯವಾಗಿರುವ ಚಟುವಟಿಕೆಗಳನ್ನು ಜಾಗರೂಕತೆಯಿಂದ ಪರಿಗಣಿಸುತ್ತೀರೊ?
ಆದರೆ ನೀವು ದೊಡ್ಡ ಗುಂಪಿನೊಂದಿಗೆ ಅಲ್ಲ, ಬದಲಾಗಿ ಒಬ್ಬ ವ್ಯಕ್ತಿಯೊಂದಿಗೆ ಅಥವಾ ಕೇವಲ ಕೆಲವರೊಂದಿಗೆ ಮಾತಾಡುತ್ತಿರುವುದಾದರೆ ಆಗೇನು? ಆಗ ಆ ಸ್ವಲ್ಪ ಮಂದಿ ಸಭಿಕರಿಗೆ ವಿಶೇಷವಾಗಿ ಸೂಕ್ತವಾಗಿರುವ ಒಂದು ದೃಷ್ಟಾಂತವನ್ನು ಆರಿಸಿಕೊಳ್ಳಲು ಪ್ರಯತ್ನಿಸಿರಿ. ಯೇಸು ಸುಖರ್ ಊರಿನ ಬಾವಿಯ ಬಳಿ ಸಮಾರ್ಯದ ಒಬ್ಬ ಸ್ತ್ರೀಗೆ ಸಾಕ್ಷಿಕೊಟ್ಟಾಗ, ಅವನು “ಜೀವಕರವಾದ ನೀರು,” “ಎಂದಿಗೂ ನೀರಡಿಕೆ”ಯಾಗದ, ಮತ್ತು “ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು” ಕೊಡುವ ನೀರಿನ ಕುರಿತು ಮಾತಾಡಿದನು. ಇವೆಲ್ಲವೂ ಆ ಸ್ತ್ರೀಯ ಕೆಲಸಕ್ಕೆ ನೇರವಾಗಿ ಸಂಬಂಧಿಸಲ್ಪಟ್ಟಿದ್ದ ಆಲಂಕಾರಿಕ ಭಾಷೆಗಳಾಗಿದ್ದವು. (ಯೋಹಾ. 4:7-15) ಮತ್ತು ಮೀನು ಹಿಡಿಯುವ ಬಲೆಗಳನ್ನು ತೊಳೆಯುತ್ತಿದ್ದ ಜನರೊಂದಿಗೆ ಅವನು ಮಾತಾಡಿದಾಗ, ಮೀನಿನ ವ್ಯಾಪಾರಕ್ಕೆ ಸಂಬಂಧಿಸಿದ ಆಲಂಕಾರಿಕ ಭಾಷೆಯನ್ನು ಉಪಯೋಗಿಸಿದನು. (ಲೂಕ 5:2-11) ಇವೆರಡೂ ಸಂದರ್ಭಗಳಲ್ಲಿ, ಅವರು ಕೃಷಿ ಪ್ರದೇಶದಲ್ಲಿ ಜೀವಿಸುತ್ತಿದ್ದುದರಿಂದ ಅವನು ಬೇಸಾಯದ ವಿಷಯದಲ್ಲಿ ಮಾತಾಡಬಹುದಿತ್ತು. ಆದರೆ, ಅವರಲ್ಲಿ ಒಂದು ಮಾನಸಿಕ ಚಿತ್ರಣವನ್ನು ಮೂಡಿಸುತ್ತಾ, ಅವರ ವೈಯಕ್ತಿಕ ಚಟುವಟಿಕೆಯನ್ನು ಸೂಚಿಸಿ ಮಾತಾಡುವುದು ಅದೆಷ್ಟು ಹೆಚ್ಚು ಪರಿಣಾಮಕಾರಿಯಾಗಿತ್ತು! ನೀವೂ ಹಾಗೆ ಮಾಡಲು ಪ್ರಯತ್ನಿಸುತ್ತೀರೊ?
ಯೇಸು ತನ್ನ ಗಮನವನ್ನು “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದ” ಕಡೆಗೆ ಹರಿಸಿದನು. ಆದರೆ ಅಪೊಸ್ತಲ ಪೌಲನನ್ನು ಇಸ್ರಾಯೇಲ್ಯರ ಬಳಿಗೆ ಮಾತ್ರವಲ್ಲ ಅನ್ಯ ಜನಾಂಗಗಳವರ ಬಳಿಗೂ ಕಳುಹಿಸಲಾಯಿತು. (ಮತ್ತಾ. 15:24; ಅ. ಕೃ. 9:15) ಇದು ಪೌಲನು ಮಾತಾಡಿದ ರೀತಿಯಲ್ಲಿ ಬದಲಾವಣೆಯನ್ನು ಉಂಟುಮಾಡಿತೊ? ಹೌದು. ಕೊರಿಂಥದ ಕ್ರೈಸ್ತರಿಗೆ ಪತ್ರವನ್ನು ಬರೆದಾಗ, ಅವನು ಈ ಅನ್ಯರಿಗೆ ಚಿರಪರಿಚಿತವಾಗಿದ್ದ ಓಟಗಳ ವಿಷಯದಲ್ಲಿ, ವಿಗ್ರಹಾಲಯದಲ್ಲಿ ಊಟಮಾಡುವ ಪದ್ಧತಿಯ ವಿಷಯದಲ್ಲಿ ಮತ್ತು ಜಯೋತ್ಸವದ ಮೆರವಣಿಗೆಯ ವಿಷಯದಲ್ಲಿ ಬರೆದನು.—1 ಕೊರಿಂ. 8:1-10; 9:24, 25; 2 ಕೊರಿಂ. 2:14-16.
ನಿಮ್ಮ ಬೋಧಿಸುವಿಕೆಯಲ್ಲಿ ಉಪಯೋಗಿಸಲು ನೀವು ದೃಷ್ಟಾಂತಗಳನ್ನೂ ಉದಾಹರಣೆಗಳನ್ನೂ ಆರಿಸಿಕೊಳ್ಳುವಾಗ, ಯೇಸು ಮತ್ತು ಪೌಲರಷ್ಟು ಜಾಗ್ರತೆಯನ್ನು ವಹಿಸುತ್ತೀರೊ? ನಿಮಗೆ ಕಿವಿಗೊಡುವವರ ಹಿನ್ನೆಲೆ ಮತ್ತು ದಿನನಿತ್ಯದ ಚಟುವಟಿಕೆಯನ್ನು ನೀವು ಗಣನೆಗೆ ತೆಗೆದುಕೊಳ್ಳುತ್ತೀರೊ? ಒಂದನೆಯ ಶತಮಾನದಿಂದ ಇಂದಿನ ವರೆಗಿನ ಲೋಕದಲ್ಲಿ ಅನೇಕ ಬದಲಾವಣೆಗಳಾಗಿವೆ ಎಂಬುದೇನೋ ನಿಜ. ಅನೇಕರಿಗೆ ಲೋಕದ ಸುದ್ದಿಯು ಟೆಲಿವಿಷನ್ ಮುಖಾಂತರ ದೊರೆಯುತ್ತದೆ. ಅನೇಕವೇಳೆ ಪರದೇಶಗಳ ಸನ್ನಿವೇಶಗಳ ಪರಿಚಯ ಅವರಿಗಿರುತ್ತದೆ. ವಿಷಯವು ಹಾಗಿರುವಲ್ಲಿ, ಅಂತಹ ವಾರ್ತಾ ವಿಷಯಗಳಿಂದ ದೃಷ್ಟಾಂತಗಳನ್ನು ಕೊಡುವುದು ತಪ್ಪಲ್ಲವೆಂಬುದು ನಿಜ. ಆದರೂ, ಜನರನ್ನು ಹೆಚ್ಚು ಆಳವಾಗಿ ಸ್ಪರ್ಶಿಸುವ ಸಂಗತಿಗಳು, ಅವರ ವೈಯಕ್ತಿಕ ಜೀವನದ ವಿಷಯಗಳಾಗಿವೆ; ಅಂದರೆ ಅವರ ಮನೆ, ಅವರ ಕುಟುಂಬ, ಅವರ ಕೆಲಸ, ಅವರು ತಿನ್ನುವ ಆಹಾರ, ಅವರ ಪ್ರದೇಶದ ಹವಾಮಾನಗಳೇ ಆಗಿವೆ.
ನಿಮ್ಮ ದೃಷ್ಟಾಂತಕ್ಕೆ ತುಂಬ ವಿವರಣೆ ಕೊಡುವ ಅಗತ್ಯವಿರುವುದಾದರೆ, ಇದರರ್ಥ ನೀವು ಸಭಿಕರಿಗೆ ಪರಿಚಯವಿಲ್ಲದಂಥ ಒಂದು ವಿಷಯದ ಕುರಿತು ಮಾತಾಡುತ್ತಿರಬಹುದು. ಅಂತಹ ದೃಷ್ಟಾಂತವು ನಿಮ್ಮ ಭಾಷಣದ ಮುಖ್ಯ ಅಂಶವನ್ನು ಸುಲಭವಾಗಿ ಮರೆಮಾಡಬಲ್ಲದು. ಇದರ ಪರಿಣಾಮವಾಗಿ, ಸಭಿಕರು ನಿಮ್ಮ ದೃಷ್ಟಾಂತವನ್ನು ಜ್ಞಾಪಕದಲ್ಲಿಡಬಹುದಾದರೂ, ನೀವು ಅವರಿಗೆ ತಿಳಿಯಪಡಿಸಲು ಪ್ರಯತ್ನಿಸುತ್ತಿದ್ದ ಶಾಸ್ತ್ರೀಯ ಸತ್ಯವನ್ನು ಅವರು ಮರೆತುಬಿಟ್ಟಾರು.
ಯೇಸು ತುಂಬ ಜಟಿಲವಾದ ಹೋಲಿಕೆಗಳನ್ನು ಮಾಡುವ ಬದಲು, ಸರಳವಾದ, ದಿನನಿತ್ಯದ ವಿಷಯಗಳನ್ನು ಉಪಯೋಗಿಸಿದನು. ಅವನು ದೊಡ್ಡ ವಿಷಯಗಳನ್ನು ವಿವರಿಸಲಿಕ್ಕಾಗಿ ಚಿಕ್ಕ ವಿಷಯಗಳನ್ನೂ ಕಠಿನ ವಿಷಯಗಳನ್ನು ಸರಳವಾಗಿ ಮಾಡಲಿಕ್ಕಾಗಿ ಸುಲಭವಾದ ವಿಷಯಗಳನ್ನೂ ಉಪಯೋಗಿಸಿದನು. ದಿನನಿತ್ಯದ ಸಂಭವಗಳು ಮತ್ತು ಆತ್ಮಿಕ ಸತ್ಯಗಳ ನಡುವೆ ಸಂಬಂಧವನ್ನು ಕಲ್ಪಿಸುತ್ತಾ ಯೇಸು, ತಾನು ಕಲಿಸುತ್ತಿದ್ದ ಶಾಸ್ತ್ರೀಯ ಸತ್ಯಗಳನ್ನು ಜನರು ಹೆಚ್ಚು ಸುಲಭವಾಗಿ ಗ್ರಹಿಸಿ, ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಸಹಾಯಮಾಡಿದನು. ಅನುಸರಿಸಲು ಎಷ್ಟೊಂದು ಉತ್ತಮವಾದ ಮಾದರಿ!