ಹೀಗೊಂದು ಸಂಭಾಷಣೆ
ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು?—ಭಾಗ 1
ಈ ಮುಂದಿನ ಸಂಭಾಷಣೆ ಯೆಹೋವನ ಸಾಕ್ಷಿಯೊಬ್ಬರ ಮತ್ತು ಬೈಬಲಿನ ಬಗ್ಗೆ ಆಸಕ್ತಿಯಿರುವ ವ್ಯಕ್ತಿಯ ನಡುವೆ ನಡೆಯುವ ಮಾದರಿ ಸಂಭಾಷಣೆಯಾಗಿದೆ. ಯೆಹೋವನ ಸಾಕ್ಷಿಯಾಗಿರುವ ಕುಮಾರ್ ಎಂಬವರು ಜಾನ್ ಎಂಬ ವ್ಯಕ್ತಿಯ ಮನೆಗೆ ಬೈಬಲ್ ಬಗ್ಗೆ ಚರ್ಚಿಸಲು ಬಂದಿದ್ದಾರೆ ಎಂದು ಊಹಿಸೋಣ.
ಅರ್ಥಮಾಡಿಕೊಳ್ಳಲು ‘ಹುಡುಕುತ್ತಾ ಇರಿ’
ಕುಮಾರ್: ನಿಮ್ಮ ಜೊತೆ ಬೈಬಲ್ ಅಧ್ಯಯನ ಮಾಡೋಕೆ ನನಗಂತೂ ತುಂಬ ಇಷ್ಟ.a ಹೋದ ಸಲ ನಾವು ಚರ್ಚೆ ಮಾಡುವಾಗ ನೀವೊಂದು ಪ್ರಶ್ನೆ ಕೇಳಿದ್ರಿ. 1914ರಲ್ಲೇ ದೇವರ ರಾಜ್ಯದ ಆಳ್ವಿಕೆ ಆರಂಭವಾಗಿದೆ ಎಂದು ಯೆಹೋವನ ಸಾಕ್ಷಿಗಳು ಯಾಕೆ ನಂಬುತ್ತಾರೆ ಅಂತ, ಅಲ್ವಾ?
ಜಾನ್: ಹೌದು, ನೀವೊಂದು ಪುಸ್ತಕ ಕೊಟ್ಟಿದ್ರಲ್ಲ, ಅದರಲ್ಲಿ ದೇವರ ರಾಜ್ಯದ ಆಳ್ವಿಕೆ 1914ರಲ್ಲಿ ಪ್ರಾರಂಭವಾಗಿದೆ ಅಂತ ಇತ್ತು! ಇದೇನು ಹೊಸದಾಗಿದೆಯಲ್ಲಾ ಅಂತ ಅಂದುಕೊಂಡೆ. ನೀವು ಹೇಳುತ್ತೀರ ನಿಮ್ಮ ಎಲ್ಲ ನಂಬಿಕೆಗಳೂ ಬೈಬಲ್ ಆಧರಿತವಾಗಿವೆ ಅಂತ. ನಿಜಾನಾ ಅದು?
ಕುಮಾರ್: ಹೌದು ನಿಜ, ನಮ್ಮ ನಂಬಿಕೆಗಳೆಲ್ಲ ಬೈಬಲ್ ಆಧರಿತವಾಗಿವೆ.
ಜಾನ್: ಆದರೆ ನಾನು ಇಡೀ ಬೈಬಲ್ ಓದಿದ್ದೀನಿ, ಯಾವತ್ತೂ 1914 ಇಸವಿ ಬಗ್ಗೆ ಓದಿದ್ದು ನೆನಪಿಲ್ಲ. ಆನ್ಲೈನ್ ಬೈಬಲ್ನಲ್ಲೂ 1914 ಅಂತ ಟೈಪ್ ಮಾಡಿ ಹುಡುಕಿದೆ, ಆದರೆ ಏನೂ ಬರಲಿಲ್ಲ.
ಕುಮಾರ್: ಹಾಗಾದರೆ ನೀವು ಇಡೀ ಬೈಬಲ್ನ ಓದಿದ್ದೀರಿ. ಇದರಿಂದ ನಿಮಗೆ ಬೈಬಲ್ ಅಂದ್ರೆ ಎಷ್ಟು ಇಷ್ಟ ಅಂತ ಗೊತ್ತಾಗುತ್ತೆ.
ಜಾನ್: ಹೌದು, ನಂಗೆ ತುಂಬ ಇಷ್ಟ, ನನ್ನ ಪ್ರಕಾರ ಅಂಥ ಪುಸ್ತಕ ಬೇರೆ ಯಾವುದೂ ಇಲ್ಲ.
ಕುಮಾರ್: ನಾನೂ ಆ ಮಾತನ್ನು ಒಪ್ಪಿಕೊಳ್ತೀನಿ. ಮತ್ತೆ, ನಿಮ್ಮ ಪ್ರಶ್ನೆಗಳಿಗೆ ಬೈಬಲ್ನಿಂದ ಉತ್ತರ ಹುಡುಕಲು ಪ್ರಯತ್ನಿಸುತ್ತಿರೋದು ನಿಜಕ್ಕೂ ಒಳ್ಳೇದೆ. ಯಾಕೆಂದ್ರೆ, ವಿಷಯಗಳನ್ನು ಅರ್ಥಮಾಡಿಕೊಳ್ಳಲು ‘ಹುಡುಕುತ್ತಾ ಇರಿ’ ಅಂತ ಸ್ವತಃ ಬೈಬಲೇ ಹೇಳುತ್ತದೆ.b ಈ ವಿಷಯದಲ್ಲಿ ನೀವು ಸಾಕಷ್ಟು ಪ್ರಯತ್ನ ಮಾಡುತ್ತೀದ್ದೀರಲ್ಲ, ನಿಮ್ಮನ್ನು ಶ್ಲಾಘಿಸಲೇಬೇಕು.
ಜಾನ್: ಥ್ಯಾಂಕ್ಸ್, ಹೀಗೆ ಯಾವಾಗಲೂ ವಿಷಯಗಳನ್ನು ಕಲಿಯಬೇಕು ಅಂತ ನಂಗಿಷ್ಟ. ನಾವು ಬೈಬಲ್ ಚರ್ಚೆ ಮಾಡುತ್ತೀವಲ್ವ, ಆ ಪುಸ್ತಕದಲ್ಲಿ 1914ರ ಬಗ್ಗೆ ವಿವರಿಸಿರುವುದನ್ನು ಓದಿದೆ. ಅದರಲ್ಲಿ ಒಬ್ಬ ರಾಜನು ಕಂಡ ಕನಸಿನ ಬಗ್ಗೆ ತಿಳಿಸುತ್ತದೆ. ಆ ಕನಸಲ್ಲಿ ಒಂದು ದೊಡ್ಡ ಮರವನ್ನು ಕಡಿಯಲಾಯಿತು, ಆದರೆ ಆ ಮರ ಮತ್ತೆ ಬೆಳೆಯಿತು ಅಂತೇನೋ ಇತ್ತು.
ಕುಮಾರ್: ಹ್ಞಾಂ, ಹೌದು. ಅದೊಂದು ಪ್ರವಾದನೆ. ದಾನಿಯೇಲ ಪುಸ್ತಕದ 4ನೇ ಅಧ್ಯಾಯದಲ್ಲಿದೆ. ಬಾಬೆಲಿನ ರಾಜನಾಗಿದ್ದ ನೆಬೂಕದ್ನೆಚ್ಚರನಿಗೆ ಬಂದ ಕನಸಿನ ಬಗ್ಗೆ ಅದರಲ್ಲಿದೆ.
ಜಾನ್: ಕರೆಕ್ಟ್, ಅದೇ. ನಾನು ಆ ಪ್ರವಾದನೇನ ಮತ್ತೆ ಮತ್ತೆ ಓದಿದೆ. ಆದರೆ ಇದಕ್ಕೂ, ದೇವರ ರಾಜ್ಯಕ್ಕೂ, 1914ನೇ ಇಸವಿಗೂ ಏನು ಸಂಬಂಧ ಅಂತ ಒಂಚೂರು ಅರ್ಥ ಆಗ್ಲಿಲ್ಲ.
ಕುಮಾರ್: ನಿಮಗೆ ಗೊತ್ತಾ? ಈ ಪ್ರವಾದನೆಯನ್ನು ದೇವರಿಂದ ಪ್ರೇರಿತನಾಗಿ ಬರೆದ ಪ್ರವಾದಿ ದಾನಿಯೇಲನಿಗೇ ಇದರ ಸಂಪೂರ್ಣ ಅರ್ಥ ಗೊತ್ತಿರಲಿಲ್ಲ!
ಜಾನ್: ನಿಜವಾಗಲೂ?
ಕುಮಾರ್: ಹೌದು. ಹಾಗಂತ ಸ್ವತಃ ದಾನಿಯೇಲನೇ ಹೇಳಿದ್ದಾನೆ, ದಾನಿಯೇಲ ಪುಸ್ತಕದ 12:8 ನೋಡಿ. ಆ ವಚನದಲ್ಲಿ, “ನನಗೆ ಕೇಳಿಸಿದರೂ ಅರ್ಥವಾಗಲಿಲ್ಲ” ಅಂತ ಹೇಳಿದ್ದಾನೆ.
ಜಾನ್: ಹಾಗಾದ್ರೆ ಇದನ್ನು ಅರ್ಥ ಮಾಡಿಕೊಳ್ಳೋಕೆ ಆಗದಿರೋದು ನನಗೊಬ್ಬನಿಗೇ ಅಲ್ಲ ಅಂತಾಯ್ತು. ಅಬ್ಬ! ಈಗ ಸ್ವಲ್ಪ ಸಮಾಧಾನ ಆಯ್ತಪ್ಪಾ.
ಕುಮಾರ್: ದಾನಿಯೇಲನಿಗೆ ಯಾಕೆ ಅರ್ಥ ಆಗಿರಲಿಲ್ಲ ಅಂದ್ರೆ, ಅವನು ಬರೆದ ಪ್ರವಾದನೆಗಳನ್ನು ಆ ಸಮಯದಲ್ಲೇ ಮನುಷ್ಯರು ಅರ್ಥ ಮಾಡಿಕೊಳ್ಳಬೇಕು ಅನ್ನೋದು ದೇವರ ಚಿತ್ತ ಆಗಿರಲಿಲ್ಲ. ಆದರೆ, ಇಂದು ಆ ಪ್ರವಾದನೆಗಳ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯ.
ಜಾನ್: ಹೌದಾ, ಅದು ಹೇಗೆ?
ಕುಮಾರ್: ದಾನಿಯೇಲ ಪುಸ್ತಕದ 12:9ನೇ ವಚನ ನೋಡಿ: “ಈ ಮಾತುಗಳು ಅಂತ್ಯಕಾಲದವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿವೆ” ಅಂತ ಅದು ಹೇಳುತ್ತೆ. ಹಾಗಿರೋದ್ರಿಂದ ಆ ಎಲ್ಲ ಪ್ರವಾದನೆಗಳು ದೀರ್ಘ ಸಮಯದ ನಂತರವೇ ಅಂದ್ರೆ ‘ಅಂತ್ಯಕಾಲದಲ್ಲಿ’ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಮತ್ತೆ, ನಾವು ಜೀವಿಸುತ್ತಿರುವ ಸಮಯವೇ ಅಂತ್ಯಕಾಲ. ಇದಕ್ಕಿರುವ ಆಧಾರವನ್ನು ಇನ್ನು ಸ್ವಲ್ಪ ದಿನದಲ್ಲೇ ನಮ್ಮ ಬೈಬಲ್ ಅಧ್ಯಯನದಲ್ಲಿ ಕಲಿಯಲಿದ್ದೇವೆ.c
ಜಾನ್: ದಾನಿಯೇಲ ಪುಸ್ತಕದಲ್ಲಿರುವ ಪ್ರವಾದನೆಯ ಬಗ್ಗೆ ನಂಗೆ ಸ್ವಲ್ಪ ವಿವರಿಸ್ತೀರಾ?
ಕುಮಾರ್: ನನ್ನ ಕೈಲಾದಷ್ಟು ವಿವರಿಸ್ತೀನಿ.
ನೆಬೂಕದ್ನೆಚ್ಚರ ಕಂಡ ಕನಸು
ಕುಮಾರ್: ಇದನ್ನು ವಿವರಿಸೋದಕ್ಕಿಂತ ಮುಂಚೆ, ನೆಬೂಕದ್ನೆಚ್ಚರನು ಕನಸಿನಲ್ಲಿ ಏನು ನೋಡಿದನೋ ಅದನ್ನು ಸ್ವಲ್ಪ ಗಮನಿಸೋಣ. ಆಮೇಲೆ ಅದರ ಅರ್ಥ ಏನೆಂದು ತಿಳಿದುಕೊಳ್ಳೋಣ.
ಜಾನ್: ಆಯ್ತು.
ಕುಮಾರ್: ನೆಬೂಕದ್ನೆಚ್ಚರನು ಕನಸಿನಲ್ಲಿ ತುಂಬ ಎತ್ತರದ ಒಂದು ಮರ ನೋಡಿದನು. ಅದರ ತುದಿ ಆಕಾಶವನ್ನು ಮುಟ್ಟುತ್ತಿತ್ತು. ನಂತರ ‘ಆ ಮರವನ್ನು ಕಡಿಯಿರಿ, ಆದರೆ ಆ ಮರದ ಬುಡದ ಮೋಟನ್ನು ಹಾಗೆಯೇ ಬಿಡಿ. ಏಳು ಕಾಲಗಳಾದ ಮೇಲೆ ಮತ್ತೆ ಆ ಮರ ಬೆಳೆಯುತ್ತದೆ’ ಎಂದು ದೇವದೂತನೊಬ್ಬನು ಹೇಳಿದ್ದನ್ನು ಅವನು ಕೇಳಿಸಿಕೊಂಡನು.d ಮೊದಲು, ಈ ಪ್ರವಾದನೆ ರಾಜನಾಗಿದ್ದ ನೆಬೂಕದ್ನೆಚ್ಚರನ ಜೀವನದಲ್ಲೇ ನೆರವೇರಿತು. ಅವನೊಬ್ಬ ಪ್ರಖ್ಯಾತ ರಾಜನಾಗಿದ್ದರಿಂದ ಆಕಾಶವನ್ನು ಮುಟ್ಟುತ್ತಿದ್ದ ಆ ದೊಡ್ಡ ಮರಕ್ಕೆ ಅವನನ್ನು ಹೋಲಿಸಬಹುದು. ಆ ಮರ ಏಳು ವರ್ಷ ಬೆಳೆಯದಂತೆ ಹೇಗೆ ಬಿಡಲಾಯಿತೋ ಅದೇ ರೀತಿ ಆ ರಾಜನು ಏಳು ವರ್ಷ ಅಧಿಕಾರದಲ್ಲಿರಲಿಲ್ಲ. ಯಾಕೆ ಅಂತ ನಿಮಗೆ ಗೊತ್ತಾ?
ಜಾನ್: ಗೊತ್ತಿಲ್ಲ.
ಕುಮಾರ್: ನೆಬೂಕದ್ನೆಚ್ಚರನಿಗೆ ಏಳು ವರುಷ ಬುದ್ಧಿ ಭ್ರಮಣೆ ಆಗಿತ್ತು ಅಂತ ಬೈಬಲ್ ಹೇಳುತ್ತದೆ. ಆ ಸಮಯದಲ್ಲಿ ರಾಜನಾಗಿ ಆಳಲು ಅವನ ಕೈಯಲ್ಲಿ ಆಗಲಿಲ್ಲ. ಆದರೆ ಏಳು ವರುಷಗಳಾದ ನಂತರ ಅವನು ಸರಿಹೋದನು ಮತ್ತು ಪುನಃ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದನು.e
ಜಾನ್: ನೀವು ಇಲ್ಲೀವರೆಗೂ ಹೇಳಿದ್ದು ನಂಗೆ ಅರ್ಥ ಆಯ್ತು. ಆದರೆ ದೇವರ ರಾಜ್ಯ ಮತ್ತು 1914ನೇ ಇಸವಿಗೂ ನೀವು ಹೇಳಿದ ವಿಷಯಕ್ಕೂ ಏನು ಸಂಬಂಧ?
ಕುಮಾರ್: ಸಂಬಂಧ ಇದೆ, ಅದು ಹೇಗೆ ಅಂತ ವಿವರಿಸ್ತೀನಿ. ಈ ಪ್ರವಾದನೆ ಎರಡು ಬಾರಿ ನೆರವೇರಿತು. ಮೊದಲನೆಯದಾಗಿ ರಾಜ ನೆಬೂಕದ್ನೆಚ್ಚರನ ಆಳ್ವಿಕೆ ಸ್ವಲ್ಪ ಸಮಯ ನಿಂತುಹೋದಾಗ ಮತ್ತು ಎರಡನೆಯದಾಗಿ ದೇವರ ಆಳ್ವಿಕೆ ನಿಂತುಹೋದಾಗ ನೆರವೇರಿತು. ಹಾಗಾಗಿ ಈ ಪ್ರವಾದನೆಯ ಎರಡನೆಯ ನೆರವೇರಿಕೆ ದೇವರ ರಾಜ್ಯಕ್ಕೆ ಸಂಬಂಧಪಟ್ಟಿದೆ.
ಜಾನ್: ಈ ಪ್ರವಾದನೆಗೆ ಎರಡನೆಯ ನೆರವೇರಿಕೆ ಇದೆ ಅಂತ ಹೇಗೆ ಹೇಳ್ತೀರಾ?
ಕುಮಾರ್: ಹೇಗೆಂದರೆ ಪ್ರವಾದನೆಯೇ ಈ ವಿಷಯದ ಬಗ್ಗೆ ಸೂಚನೆ ಕೊಡುತ್ತದೆ. ದಾನಿಯೇಲ 4:17ರಲ್ಲಿ ‘ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದರ ಆಳಿಕೆಯನ್ನು ತನಗೆ ಬೇಕಾದವರಿಗೆ ಒಪ್ಪಿಸಿ ಕನಿಷ್ಠರನ್ನೂ ಅದರ ಮೇಲೆ ನೇಮಿಸುತ್ತಾನೆಂಬದು ಜೀವಂತರಿಗೆ ತಿಳಿದು ಬರಬೇಕು’ ಎಂದು ತಿಳಿಸಲಾಗಿದೆ. ಇಲ್ಲಿ “ಮನುಷ್ಯರ ರಾಜ್ಯದಲ್ಲಿ” ಅನ್ನೋ ಪದವನ್ನು ಗಮನಿಸಿದ್ರಾ?
ಜಾನ್: ಹೌದು ಗಮನಿಸಿದೆ, “ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ” ಅಂತ ಅದು ಹೇಳುತ್ತೆ.
ಕುಮಾರ್: ಕರೆಕ್ಟ್. ಆ “ಪರಾತ್ಪರನು” ಯಾರಿರಬಹುದು ಅಂತ ನಿಮಗನಿಸುತ್ತದೆ?
ಜಾನ್: ದೇವರೇ ಆಗಿರಬಹುದು.
ಕುಮಾರ್: ಸರಿಯಾಗಿ ಹೇಳಿದ್ರಿ. ಆದ್ದರಿಂದನೇ, ಈ ಪ್ರವಾದನೆಯಲ್ಲಿ ಕೇವಲ ನೆಬೂಕದ್ನೆಚ್ಚರನ ಆಳ್ವಿಕೆ ಮಾತ್ರ ಅಲ್ಲ ಬದಲಿಗೆ “ಮನುಷ್ಯರ ರಾಜ್ಯ” ಅಂದ್ರೆ ಮಾನವಕುಲದ ಮೇಲಿನ ದೇವರ ಆಳ್ವಿಕೆ ಸಹ ಒಳಗೂಡಿದೆ ಅಂತ ಹೇಳಬಹುದು. ಆದರೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಪ್ರವಾದನೆಗೆ ಮುಂಚೆ ಮತ್ತು ನಂತರ ಇರುವ ಕೆಲವು ವಿಷಯಗಳನ್ನು ನಾವು ಚೆನ್ನಾಗಿ ತಿಳಿದುಕೊಳ್ಳಬೇಕು.
ಜಾನ್: ಅಂದ್ರೆ?
ದಾನಿಯೇಲ ಪುಸ್ತಕದ ಮುಖ್ಯ ವಿಷಯ
ಕುಮಾರ್: ಈ ದಾನಿಯೇಲ ಪುಸ್ತಕದಲ್ಲಿ ಒಂದು ಮುಖ್ಯ ವಿಷಯದ ಬಗ್ಗೆ ಅನೇಕ ಬಾರಿ ಉಲ್ಲೇಖಿಸಲಾಗಿದೆ. ದೇವರು ತನ್ನ ಮಗನಾದ ಯೇಸುವಿನ ಮೂಲಕ ತನ್ನ ರಾಜ್ಯವನ್ನು ಸ್ಥಾಪಿಸುತ್ತಾನೆ ಎನ್ನುವುದೇ ಆ ಮುಖ್ಯ ವಿಷಯ. ಉದಾಹರಣೆಗೆ, ದಾನಿಯೇಲ ಪುಸ್ತಕದ 2ನೇ ಅಧ್ಯಾಯದ 44ನೇ ವಚನದಲ್ಲಿ ಇದರ ಬಗ್ಗೆ ತಿಳಿಸಲಾಗಿದೆ. ದಯವಿಟ್ಟು ಆ ವಚನ ಓದ್ತೀರಾ?
ಜಾನ್: ಹ್ಞಾಂ! ಓದ್ತೀನಿ. “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”
ಕುಮಾರ್: ಓದಿದ್ದಕ್ಕೆ ಥ್ಯಾಂಕ್ಸ್ ಜಾನ್. ಈ ವಚನ ದೇವರ ರಾಜ್ಯದ ಬಗ್ಗೆ ತಿಳಿಸುತ್ತದಲ್ವಾ?
ಜಾನ್: ಏನೋ ಸರಿಯಾಗಿ ಗೊತ್ತಾಗುತ್ತಿಲ್ಲ.
ಕುಮಾರ್: ಅಲ್ಲಿ ಈ ರಾಜ್ಯ “ಶಾಶ್ವತವಾಗಿ ನಿಲ್ಲುವುದು” ಅಂತ ತಿಳಿಸಿರುವುದನ್ನು ನೀವು ಗಮನಿಸಬಹುದು. ದೇವರ ರಾಜ್ಯ ಬಿಟ್ಟು ಬೇರೆ ಯಾವುದೇ ಮಾನವ ಸರ್ಕಾರಗಳು ಶಾಶ್ವತವಾಗಿ ಇರುತ್ತವೆ ಅಂತ ಹೇಳೋದಕ್ಕೆ ಸಾಧ್ಯನೇ ಇಲ್ಲ, ಅಲ್ವಾ?
ಜಾನ್: ಸಾಧ್ಯ ಇಲ್ಲ ಅನಿಸುತ್ತೆ.
ಕುಮಾರ್: ದೇವರ ರಾಜ್ಯದ ಬಗ್ಗೆ ತಿಳಿಸುವ ಇನ್ನೊಂದು ಪ್ರವಾದನೆ ಇದೇ ದಾನಿಯೇಲ ಪುಸ್ತಕದಲ್ಲಿದೆ. ದಾನಿಯೇಲ 7:13, 14ರಲ್ಲಿ ಆ ಪ್ರವಾದನೆಯನ್ನು ದಾಖಲಿಸಲಾಗಿದೆ. ಭವಿಷ್ಯದಲ್ಲಿ ಆಳುವ ರಾಜನ ಬಗ್ಗೆ ಅದು ವಿವರಿಸುತ್ತದೆ: “ಸಕಲಜನಾಂಗಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು; ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.” ನಾವು ಮಾತಾಡುತ್ತಿರುವ ವಿಷಯಕ್ಕೂ ಈ ಪ್ರವಾದನೆಗೂ ಯಾವ ಸಂಬಂಧ ಇದೆ?
ಜಾನ್: ಇದು ಕೂಡ ರಾಜ್ಯದ ಬಗ್ಗೆ ಮಾತಾಡ್ತಾ ಇದೆ ಅಲ್ವಾ?
ಕುಮಾರ್: ಕರೆಕ್ಟ್. ಮತ್ತೆ ಅದು ಯಾವುದೋ ರಾಜ್ಯದ ಬಗ್ಗೆ ಮಾತಾಡುತ್ತಿಲ್ಲ. ಗಮನಿಸಿ, ಅದು ಹೇಳುತ್ತೆ ಆ ರಾಜ್ಯಕ್ಕೆ ‘ಸಕಲಜನಾಂಗಕುಲಭಾಷೆಗಳವರ’ ಮೇಲೆ ಅಧಿಕಾರ ಇರುತ್ತದೆ. ಇನ್ನೊಂದು ರೀತಿಯಲ್ಲಿ, ಆ ರಾಜ್ಯ ಇಡೀ ಮಾನವಕುಲವನ್ನೇ ಆಳುತ್ತದೆ ಅಂತ ಹೇಳಬಹುದು.
ಜಾನ್: ನೀವು ಹೇಳಿದ್ದು ನಿಜ, ಈ ವಚನಕ್ಕೆ ಇಷ್ಟೊಂದು ಅರ್ಥ ಇದೆ ಅಂತ ಗೊತ್ತಿರಲಿಲ್ಲ.
ಕುಮಾರ್: ಮುಂದೆ ಆ ವಚನ ಏನು ಹೇಳುತ್ತದೆ ಅಂತ ಗಮನಿಸಿದ್ರಾ? “ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.” ಈ ಮಾತು ದಾನಿಯೇಲ 2:44ರಲ್ಲಿದ್ದ ಪ್ರವಾದನೆ ಥರಾನೇ ಇದೆ ಅಂತ ಅನಿಸಲ್ವಾ?
ಜಾನ್: ಹೌದು.
ಕುಮಾರ್: ನಾವು ಇಲ್ಲಿಯವರೆಗೂ ಮಾಡಿದ ಚರ್ಚೆ ಬಗ್ಗೆ ಸ್ವಲ್ಪ ನೋಡೋಣ. ‘ಪರಾತ್ಪರನು ಅಂದರೆ ದೇವರು, ಮನುಷ್ಯರ ರಾಜ್ಯದಲ್ಲಿ ರಾಜನು’ ಎನ್ನುವುದನ್ನು ಜನರು ತಿಳಿದುಕೊಳ್ಳಬೇಕೆಂದು ದಾನಿಯೇಲ ಪುಸ್ತಕದ ಅಧ್ಯಾಯ 4ರಲ್ಲಿ ಈ ಪ್ರವಾದನೆಯನ್ನು ದಾಖಲಿಸಲಾಯಿತು. ಹಾಗಾಗಿ ಈ ಪ್ರವಾದನೆಯು ಮೊದಲು ನೆಬೂಕದ್ನೆಚ್ಚರನಲ್ಲಿ ನೆರವೇರಿದರೂ ಅದರ ಎರಡನೇ ಮತ್ತು ಪ್ರಾಮುಖ್ಯವಾದ ನೆರವೇರಿಕೆ ಭವಿಷ್ಯದಲ್ಲಿ ಆಗಲಿತ್ತು ಎನ್ನುವುದನ್ನು ಸೂಚಿಸುತ್ತದೆ. ಮತ್ತು ದಾನಿಯೇಲ ಪುಸ್ತಕದಿಡೀ ದೇವರು ತನ್ನ ಮಗನ ಮೂಲಕ ತನ್ನ ರಾಜ್ಯವನ್ನು ಸ್ಥಾಪಿಸುವ ಪ್ರವಾದನೆಗಳ ಬಗ್ಗೆ ಇರುವುದನ್ನು ನಾವು ನೋಡಿದೆವು. ಈ ಎಲ್ಲ ವಿಷಯಗಳಿಂದ ದಾನಿಯೇಲ 4ನೇ ಅಧ್ಯಾಯಕ್ಕೂ ದೇವರ ರಾಜ್ಯಕ್ಕೂ ಸಂಬಂಧ ಇದೆ ಅಂತ ಅನಿಸುತ್ತದಲ್ವಾ?
ಜಾನ್: ಅದೇನೋ ಸರಿ. ಆದರೆ ಈ 1914 ಎಲ್ಲಿಂದ ಬಂತು ಅನ್ನೋದೇ ಗೊತ್ತಾಗಲಿಲ್ಲ?
“ಏಳು ಕಾಲಗಳು ಕಳೆಯಲಿ”
ಕುಮಾರ್: ನೆಬೂಕದ್ನೆಚ್ಚರನ ಬಗ್ಗೆ ಮತ್ತೆ ನೋಡೋಣ. ಆ ಪ್ರವಾದನೆಯಲ್ಲಿದ್ದ ಮರ ರಾಜ ನೆಬೂಕದ್ನೆಚ್ಚರನನ್ನು ಪ್ರತಿನಿಧಿಸುತ್ತಿತ್ತು. ಆ ಮರ ಕಡಿದು ಏಳು ವರ್ಷಗಳು ಹಾಗೆ ಬಿಟ್ಟಿದ್ದು ಅವನಿಗೆ ಏಳು ವರ್ಷ ಬುದ್ಧಿ ಭ್ರಮಣೆ ಆಗಿ ಅವನ ಆಳ್ವಿಕೆಯು ನಿಂತುಹೋಗಿದ್ದಕ್ಕೆ ಸೂಚಿಸುತ್ತದೆ. ನೆಬೂಕದ್ನೆಚ್ಚರನು ಗುಣವಾಗಿ ರಾಜನಾದಾಗ ಆ ಏಳು ವರ್ಷ ಮುಕ್ತಾಯಗೊಂಡಿತು. ಆ ಪ್ರವಾದನೆಯ ಎರಡನೆಯ ನೆರವೇರಿಕೆ ದೇವರ ಆಳ್ವಿಕೆ ನಿಂತುಹೋದಾಗ ಸಂಭವಿಸುತ್ತದೆ ಎಂದು ಕಲಿತಿದ್ದೆವು. ಆದರೆ ಇದಕ್ಕೆ ಕಾರಣ ದೇವರಲ್ಲಿ ಏನೋ ಬಲಹೀನತೆ ಇತ್ತು ಅಂತಲ್ಲ.
ಜಾನ್: ಅಂದ್ರೆ?
ಕುಮಾರ್: ಬೈಬಲಿನ ಸಮಯದಲ್ಲಿ, ಯೆರೂಸಲೇಮನ್ನು ಆಳುತ್ತಿದ್ದ ಇಸ್ರಾಯೇಲ್ ರಾಜರು “ಯೆಹೋವನ ಸಿಂಹಾಸನದಲ್ಲಿ” ಕುಳಿತಿದ್ದಾರೆಂದು ಪರಿಗಣಿಸಲಾಗುತ್ತಿತ್ತು.f ಅವರು ದೇವರನ್ನು ಪ್ರತಿನಿಧಿಸುತ್ತಾ ಆತನ ಜನರನ್ನು ಆಳುತ್ತಿದ್ದರು. ಹಾಗಾಗಿ, ಆ ರಾಜರ ಆಳ್ವಿಕೆ ದೇವರ ಆಳ್ವಿಕೆಯನ್ನು ಸೂಚಿಸುತ್ತಿತ್ತು. ಆದರೆ ಸ್ವಲ್ಪ ಸಮಯದಲ್ಲೇ ಹೆಚ್ಚಿನ ರಾಜರು ದೇವರಿಗೆ ಅವಿಧೇಯರಾದರು ಜೊತೆಗೆ ಪ್ರಜೆಗಳು ಅವರ ಮಾದರಿಯನ್ನೇ ಅನುಸರಿಸಿದರು. ಇಸ್ರಾಯೇಲ್ಯರು ತೋರಿಸಿದ ಅವಿಧೇಯತೆಯಿಂದಾಗಿ ಕ್ರಿ.ಪೂ. 607ರಲ್ಲಿ ಬಾಬೆಲಿನವರು ಅವರ ಮೇಲೆ ಆಕ್ರಮಣ ಮಾಡುವಂತೆ ದೇವರು ಅನುಮತಿಸಿದನು. ಆ ಸಮಯದಿಂದ ಯೆಹೋವನನ್ನು ಪ್ರತಿನಿಧಿಸುತ್ತಿದ್ದ ರಾಜರು ಆಳ್ವಿಕೆ ಮಾಡದಿದ್ದ ಕಾರಣ, ದೇವರ ಆಳ್ವಿಕೆ ಸ್ವಲ್ಪ ಸಮಯಕ್ಕೆ ನಿಂತುಹೋಯಿತು. ಈ ವಿಷಯ ನಿಮಗೀಗ ಅರ್ಥ ಆಗಿರಬೇಕಲ್ವಾ?
ಜಾನ್: ಹ್ಞಾಂ ಅರ್ಥ ಆಯ್ತು.
ಕುಮಾರ್: ಕ್ರಿ.ಪೂ. 607ರಲ್ಲಿ ದೇವರ ಆಳ್ವಿಕೆ ನಿಂತುಹೋದದ್ದರಿಂದ ಆ ಇಸವಿ ಏಳು ಕಾಲಗಳ ಪ್ರಾರಂಭ ಬಿಂದುವಾಗಿತ್ತು. ಆದರೆ ದೇವರು ಏಳು ಕಾಲಗಳ ಕೊನೆಯಲ್ಲಿ ಒಬ್ಬ ಹೊಸ ರಾಜನನ್ನು ನೇಮಿಸಿದನು. ಆದರೆ ಈ ಬಾರಿ ಆ ಹೊಸ ರಾಜ ಸ್ವರ್ಗದಲ್ಲಿ ಇದ್ದಂಥವನು. ಇದಾದ ಮೇಲೆ ದಾನಿಯೇಲ ಪುಸ್ತಕದಲ್ಲಿರುವ ಇತರ ಪ್ರವಾದನೆಗಳು ನೆರವೇರಲಿವೆ. ಆದರೆ ಪ್ರಶ್ನೆ, ಈ ಏಳು ಕಾಲಗಳು ಯಾವಾಗ ಕೊನೆಯಾಗುತ್ತೆ? ಈ ಪ್ರಶ್ನೆಗೆ ಉತ್ತರ ಗೊತ್ತಾದರೆ ದೇವರ ರಾಜ್ಯದ ಆಳ್ವಿಕೆ ಮತ್ತೆ ಯಾವಾಗಿಂದ ಪ್ರಾರಂಭವಾಯಿತು ಅನ್ನೋದು ಕೂಡ ನಮಗೆ ಗೊತ್ತಾಗುತ್ತೆ.
ಜಾನ್: ಹಾಗಾದರೆ ಆ ಏಳು ಕಾಲ ಕೊನೆಯಾಗೋದು 1914ರಲ್ಲಾ?
ಕುಮಾರ್: ಕರೆಕ್ಟಾಗಿ ಹೇಳಿದ್ರಿ.
ಜಾನ್: ಅದೇ ವರ್ಷ ಅಂತ ಹೇಗೆ ಹೇಳಕ್ಕಾಗುತ್ತೆ?
ಕುಮಾರ್: ಯೇಸು ಭೂಮಿಯಲ್ಲಿ ಜೀವಿಸುವಾಗ ಆ ಏಳು ಕಾಲಗಳು ಇನ್ನೂ ಮುಗಿದಿರಲಿಲ್ಲ ಎಂದು ಸ್ವತಃ ಆತನೇ ಹೇಳಿದನು.g ಹಾಗಾಗಿ ಆ ಏಳು ಕಾಲಗಳು ದೀರ್ಘ ಸಮಯವಾಗಿತ್ತೇ ಹೊರತು ಕೇವಲ ಏಳು ವರ್ಷಗಳಾಗಿರಲಿಲ್ಲ. ಆ ದೀರ್ಘ ಸಮಯ ಯೇಸು ಬರುವ ಎಷ್ಟೋ ಸಮಯದ ಮುಂಚೆಯೇ ಪ್ರಾರಂಭವಾಗಿತ್ತು ಮತ್ತು ಆತನು ಸ್ವರ್ಗಕ್ಕೆ ಹೋದ ಮೇಲೂ ಮುಂದುವರಿದಿತ್ತು. ‘ಅಂತ್ಯಕಾಲದವರೆಗೂ’ ದಾನಿಯೇಲನ ಪ್ರವಾದನೆಯಲ್ಲಿದ್ದ ಸಂಪೂರ್ಣ ಅರ್ಥವನ್ನು ಗ್ರಹಿಸಲು ಸಾಧ್ಯವಾಗಲಿಲ್ಲ ಎನ್ನುವುದನ್ನು ನಾವು ಮಾತಾಡಿದ್ದು ನಿಮಗೆ ನೆನಪಿರಬಹುದು.h ಅದರಂತೆಯೇ, 19ನೇ ಶತಮಾನದ ಕೊನೆಯ ವರ್ಷಗಳಲ್ಲಿ ಬೈಬಲನ್ನು ಓದುತ್ತಿದ್ದ ಕೆಲವು ಯಥಾರ್ಥ ಜನರು ಈ ಪ್ರವಾದನೆ ಮತ್ತು ಇನ್ನಿತರ ಪ್ರವಾದನೆಗಳನ್ನು ಆಳವಾಗಿ ಪರೀಕ್ಷಿಸಲು ಪ್ರಾರಂಭಿಸಿದರು. ಆ ಏಳು ವರ್ಷಗಳು 1914ರಲ್ಲೇ ಕೊನೆಗೊಳ್ಳಲಿದೆ ಎಂದು ಆಗ ತಿಳಿದುಕೊಂಡರು. ಜೊತೆಗೆ, 1914ರಿಂದ ನಡೆದ ಮಹತ್ತರ ಘಟನೆಗಳು ಅದೇ ವರ್ಷದಲ್ಲಿ ದೇವರ ಆಳ್ವಿಕೆ ಆರಂಭವಾಯಿತು ಎನ್ನುವುದನ್ನು ಸೂಚಿಸಿದವು. ಆದ್ದರಿಂದ ಈ ಪ್ರಪಂಚಕ್ಕೆ ಕಡೇ ದಿನಗಳು ಅಥವಾ ಅಂತ್ಯಕಾಲ ಶುರುವಾಗಿದ್ದು ಈ ಇಸವಿಯಿಂದಲೇ. ತುಂಬ ಹೇಳಿಬಿಟ್ಟೆ ಅನಿಸುತ್ತೆ. ಇದನ್ನೆಲ್ಲ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ನಿಮಗೆ ಸ್ವಲ್ಪ ಸಮಯ ಬೇಕಲ್ವ?
ಜಾನ್: ಹೌದು. ಖಂಡಿತ ಬೇಕು. ಅದಕ್ಕೆ ನಾನು ಇದನ್ನು ಇನ್ನೊಂದು ಸಾರಿ ಓದುತ್ತೇನೆ.
ಕುಮಾರ್: ನೀವೇನು ಚಿಂತೆ ಮಾಡಬೇಡಿ. ನಂಗೂ ಈ ಪ್ರವಾದನೆಗಳನ್ನು ಮತ್ತು ಅವುಗಳ ನೆರವೇರಿಕೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಮಯ ಹಿಡಿಯಿತು. ಆದರೆ ಈ ಚರ್ಚೆ, ದೇವರ ರಾಜ್ಯದ ಬಗ್ಗೆ ಯೆಹೋವನ ಸಾಕ್ಷಿಗಳು ಇಟ್ಟಿರುವ ನಂಬಿಕೆ ಬೈಬಲ್ ಆಧರಿತವಾಗಿದೆ ಅನ್ನೋದನ್ನು ತಿಳಿದುಕೊಳ್ಳೋಕೆ ನಿಮಗೆ ಸಹಾಯ ಮಾಡಿತು ಅಂತ ಅಂದುಕೊಳ್ಳುತ್ತೇನೆ.
ಜಾನ್: ತುಂಬನೇ ಸಹಾಯ ಮಾಡಿತು. ನಾನು ಯಾವುದೇ ಪ್ರಶ್ನೆ ಕೇಳಿದಾಗಲೂ ನಿಮ್ಮ ನಂಬಿಕೆಯನ್ನು ವಿವರಿಸಲು ನೀವು ಬೈಬಲನ್ನು ಉಪಯೋಗಿಸುವುದು ನಂಗೆ ತುಂಬ ಇಷ್ಟ ಆಗುತ್ತೆ.
ಕುಮಾರ್: ನಿಮಗೂ ಅದೇ ಥರ ಬೈಬಲನ್ನು ಉಪಯೋಗಿಸಬೇಕಂತ ಇಷ್ಟ ಅಲ್ವಾ? ನಾನು ಆಗಲೇ ಹೇಳಿದ ಹಾಗೆ ಒಂದೇ ಸಲಕ್ಕೆ ಎಲ್ಲ ವಿಷಯಗಳನ್ನು ಕಲಿಯಲು ಕಷ್ಟ ಆಗುತ್ತೆ. ನಾವು ಈಗಾಗಲೇ ಏಳು ಕಾಲಗಳು ದೇವರ ರಾಜ್ಯಕ್ಕೂ ಅನ್ವಯಿಸುತ್ತೆ ಮತ್ತು ಅದು ಕ್ರಿ.ಪೂ. 607ರಿಂದ ಪ್ರಾರಂಭವಾಗಿದೆ ಅನ್ನೋದನ್ನು ಚರ್ಚೆ ಮಾಡಿದೆವು. ಆದರೆ ಆ ಸಮಯಾವಧಿ ಕರೆಕ್ಟಾಗಿ 1914ಕ್ಕೆನೇ ಕೊನೆಯಾಯಿತು ಅಂತ ಹೇಗೆ ಹೇಳಬಹುದು ಅನ್ನುವಂಥ ಕೆಲವು ಪ್ರಶ್ನೆಗಳು ನಿಮಗಿರಬಹುದು. ಅದನ್ನೂ ಚರ್ಚಿಸಬೇಕಲ್ವಾ?i
ಜಾನ್: ಹೌದು, ಅದರ ಬಗ್ಗೇನೂ ನಾನೂ ತಿಳಿದುಕೊಳ್ಳಬೇಕು.
ಕುಮಾರ್: ಆ ಏಳು ವರ್ಷಗಳ ನಿರ್ದಿಷ್ಟ ಸಮಾಯಾವಧಿಯನ್ನು ಬೈಬಲ್ ನಮಗೆ ತಿಳಿಸುತ್ತದೆ. ನಾನು ಮುಂದಿನ ಸಲ ಬಂದಾಗ ಅದರ ಬಗ್ಗೆ ಚರ್ಚೆ ಮಾಡೋಣ್ವಾ?j
ಜಾನ್: ಹ್ಞಾಂ, ಮಾಡೋಣ. ▪ (w14-E 10/01)
ಬೈಬಲಿನಲ್ಲಿರುವ ಯಾವುದಾದರೂ ವಿಷಯವನ್ನು ಕಲಿಯಲು ನಿಮಗೆ ಆಸಕ್ತಿಯಿದೆಯಾ? ಯೆಹೋವನ ಸಾಕ್ಷಿಗಳ ನಂಬಿಕೆಗಳೇನು ಅಥವಾ ಅವರ ಆಚಾರ-ವಿಚಾರಗಳೇನು ಎನ್ನುವುದರ ಬಗ್ಗೆ ಕುತೂಹಲವಿದೆಯಾ? ಈ ವಿಷಯಗಳನ್ನು ತಿಳಿದುಕೊಳ್ಳಲು ನಿಮಗೆ ಇಷ್ಟವಿದ್ದರೆ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ. ಅವರು ನಿಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತಾರೆ.
a ಬೈಬಲ್ ಅಧ್ಯಯನ ಎಂದರೆ ಬೈಬಲ್ ಬಗ್ಗೆ ಕಲಿಯಲು ಆಸಕ್ತಿ ಇರುವವರ ಜೊತೆ ಯೆಹೋವನ ಸಾಕ್ಷಿಗಳು ಮಾಡುವ ಬೈಬಲ್ ಆಧರಿತ ಚರ್ಚೆಯಾಗಿದೆ. ಈ ಅಧ್ಯಯನದಲ್ಲಿ ಬೈಬಲ್ ಬಗ್ಗೆ ಒಂದೊಂದೇ ವಿಷಯಗಳನ್ನು ಹಂತಹಂತವಾಗಿ ಚರ್ಚಿಸಲಾಗುತ್ತದೆ.
c ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 9ನೇ ಅಧ್ಯಾಯ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.jw.orgನಲ್ಲೂ ಲಭ್ಯ.
g ತನ್ನ ಪ್ರವಾದನೆಯಲ್ಲಿ ಯೇಸು ಹೀಗೆ ಹೇಳುತ್ತಾನೆ: “ಅನ್ಯಜನಾಂಗಗಳ ನೇಮಿತ ಕಾಲಗಳು ತೀರುವ ತನಕ ಯೆರೂಸಲೇಮ್ ಪಟ್ಟಣವು [ಅಂದರೆ ದೇವರ ಆಳ್ವಿಕೆ] ಅನ್ಯಜನಾಂಗಗಳಿಂದ ತುಳಿದಾಡಲ್ಪಡುವುದು.” (ಲೂಕ 21:24) ಇನ್ನೊಂದರ್ಥದಲ್ಲಿ ದೇವರ ಆಳ್ವಿಕೆ ನಿಂತುಹೋದ ಸಮಯಾವಧಿಯು ಯೇಸುವಿನ ಸಮಯದಲ್ಲಿಯೂ ಇತ್ತು ಮತ್ತು ಅದು ಕಡೇ ದಿನಗಳವರೆಗೂ ಮುಂದುವರಿಯಲಿತ್ತು.
i ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 215ರಿಂದ 218ನ್ನು ನೋಡಿ. www.jw.orgನಲ್ಲೂ ಇದು ಲಭ್ಯವಿದೆ.
j ಮುಂದಿನ ಸಂಚಿಕೆಯಲ್ಲಿ ಏಳು ಕಾಲಗಳ ನಿರ್ದಿಷ್ಟ ಸಮಯಾವಧಿಯ ಬಗ್ಗೆ ಬೆಳಕು ಚೆಲ್ಲುವ ಬೈಬಲ್ ವಚನಗಳನ್ನು ನೋಡಲಿದ್ದೇವೆ.