“ತಾಳ್ಮೆಯನ್ನು ತೋರಿಸಿರಿ”
1 ಸೈತಾನನ ಈ ಹಳೆಯ ವ್ಯವಸ್ಥೆಯ ಅಂತ್ಯವು ತುಂಬ ಹತ್ತಿರವಾಗುತ್ತಿರುವುದನ್ನು ನಾವು ನೋಡುವಾಗ, ಯೆಹೋವನ ಬಿಡುಗಡೆಯ ದಿನಕ್ಕಾಗಿ ಕಾಯುತ್ತಿರುವಾಗ ‘ತಾಳ್ಮಯಿಂದಿರುವುದು’ ಆವಶ್ಯಕ. ವಿಶೇಷವಾಗಿ ಈ ಕಡೇ ಗಳಿಗೆಯಲ್ಲಿ, ಯೆಹೋವನ ಪರಮಾಧಿಕಾರದ ಪ್ರಾಮುಖ್ಯ ವಿವಾದಾಂಶದಿಂದ ನಮ್ಮ ಗಮನವನ್ನು ಬೇರೆ ಕಡೆ ತಿರುಗಿಸಲು ಮತ್ತು ಅಪಾರ ವೈಯಕ್ತಿಕ ಅಭಿರುಚಿಗಳಿಂದ ಅಪಕರ್ಷಿಸಲ್ಪಡುವಂತೆ ಮಾಡಲು ದುಷ್ಟ ಶತ್ರು ಸೈನ್ಯಗಳು ಪಣತೊಟ್ಟಿವೆ. ಈ ರೀತಿಯಲ್ಲಿ, ರಾಜ್ಯ ಪ್ರಚಾರದ ಕೆಲಸವನ್ನು ನಾವು ಬಿಟ್ಟುಬಿಡುವಂತೆ ಇಲ್ಲವೇ ನಿಧಾನಿಸುವಂತೆ ಸೈತಾನನು ನಮ್ಮನ್ನು ಮೋಸಗೊಳಿಸುವನು. (ಯಾಕೋ. 5:7, 8; ಮತ್ತಾ. 24:13, 14) ಅಗತ್ಯವಿರುವ ದೀರ್ಘಶಾಂತಿಯನ್ನು ನಾವು ಯಾವ ವಿಧಗಳಲ್ಲಿ ತೋರಿಸಬಲ್ಲೆವು?
2 ಸಹನೆಯಿಂದ ವರ್ತಿಸುವ ಮೂಲಕ: ನಮ್ಮ ಶುಶ್ರೂಷೆಯಲ್ಲಿ ನಾವು ಉದಾಸೀನತೆ ಇಲ್ಲವೇ ವಿರೋಧವನ್ನು ಎದುರಿಸುವಾಗ, ಸಾರುವುದನದ್ನು ಪಟ್ಟುಬಿಡದೇ ಮುಂದುವರಿಸಲು ಸಹನೆಯು ಸಹಾಯಮಾಡುವುದು. ಒರಟು ಸ್ವಭಾವದ ಇಲ್ಲವೇ ಸ್ನೇಹಪರರಲ್ಲದ ಜನರನ್ನು ನಾವು ಭೇಟಿಯಾಗುವಾಗ ಸುಲಭವಾಗಿ ಹೆದರದೇ ಇರುವೆವು ಅಥವಾ ನಮ್ಮ ಮನಸ್ಸಿಗೆ ನೋವಾಗದಿರಬಹುದು. (1 ಪೇತ್ರ 2:23) ನಮ್ಮ ಕೆಲಸದ ಬಗ್ಗೆ ತಾತ್ಸಾರ ತೋರಿಸುವ ಅಥವಾ ಅದನ್ನು ದ್ವೇಷಿಸುವ ನಮ್ಮ ಕ್ಷೇತ್ರದ ಜನರ ಬಗ್ಗೆ ನಕಾರಾತ್ಮಕವಾಗಿ ಮಾತಾಡುವುದನ್ನು ಈ ಆಂತರಿಕ ಬಲವು ತಡೆಗಟ್ಟಬಲ್ಲದು. ಏಕೆಂದರೆ ಅಂಥ ಮಾತುಕತೆಯು ನಮ್ಮನ್ನು ಮಾತ್ರವಲ್ಲದೆ, ಶುಶ್ರೂಷೆಯಲ್ಲಿ ನಮ್ಮೊಂದಿಗೆ ಕೆಲಸಮಾಡುವವರನ್ನೂ ನಿರುತ್ತೇಜಿಸುವುದು.
3 ತಾಳ್ಮೆಯ ಪಟ್ಟುಹಿಡಿಯುವಿಕೆಯ ಮೂಲಕ: ಕ್ಷೇತ್ರ ಸೇವೆಯಲ್ಲಿ ಆಸಕ್ತ ವ್ಯಕ್ತಿಯನ್ನು ಭೇಟಿಮಾಡಿ, ಒಳ್ಳೆಯ ಚರ್ಚೆಯನ್ನು ಮಾಡಿರಬಹುದು, ಆದರೆ ಪುನಃ ಆ ಮನೆಗೆ ಹಿಂದಿರುಗಿ ಹೋಗುವಾಗ ಆ ವ್ಯಕ್ತಿಯು ಇಲ್ಲದಿದ್ದರೆ ಅದು ನಿಜವಾಗಿಯೂ ನಮ್ಮ ತಾಳ್ಮೆಯನ್ನು ಪರೀಕ್ಷಿಸಸಾಧ್ಯವಿದೆ. ನಾವು ಅಭ್ಯಾಸಮಾಡುತ್ತಿರುವ ಜನರು ಪ್ರಗತಿ ಮಾಡುವುದರಲ್ಲಿ ಇಲ್ಲವೇ ಸತ್ಯಕ್ಕಾಗಿ ನಿಲುವನ್ನು ತೆಗೆದುಕೊಳ್ಳಲು ನಿಧಾನಿಗಳಾಗಿರುವಲ್ಲಿ ಸಹ ಹೀಗೆ ಆಗುತ್ತದೆ. ಆದರೂ, ತಾಳ್ಮೆಯ ಪಟ್ಟುಹಿಡಿಯುವಿಕೆಯಿಂದಾಗಿ ಅನೇಕ ಬಾರಿ ಒಳ್ಳೆಯ ಫಲಿತಾಂಶಗಳು ಸಿಗುತ್ತವೆ. (ಗಲಾ. 6:9) ಒಂದು ಬೈಬಲ್ ಅಭ್ಯಾಸವನ್ನು ಪ್ರಾರಂಭಿಸುವ ಮೊದಲು ಸಹೋದರಿಯೊಬ್ಬಳು ಒಬ್ಬ ಯುವ ಸ್ತ್ರೀಗೆ ಅನೇಕ ಬಾರಿ ಪುನರ್ಭೇಟಿಗಳನ್ನು ಮಾಡಿದಳು. ಮೊದಲ ಐದು ಭೇಟಿಗಳ ಸಮಯದಲ್ಲಿ ಆ ಸ್ತ್ರೀಯು ಇತರ ವಿಷಯಗಳಲ್ಲಿ ಕಾರ್ಯಮಗ್ನಳಾಗಿದ್ದಳು. ಆದರೆ ಆರನೇ ಬಾರಿ ಆ ಸಹೋದರಿಯು ಮಳೆಯನ್ನು ಸಹ ಲೆಕ್ಕಿಸದೆ ಅವಳನ್ನು ಭೇಟಿಯಾಗಲು ಹೋದಳು. ಆದರೆ ಸಹೋದರಿಯು ಮಳೆಯಲ್ಲಿ ಸಂಪೂರ್ಣವಾಗಿ ತೋಯ್ದುಹೋದಳೇ ವಿನಾ ಮನೆಯಲ್ಲಿ ಯಾರೂ ಸಿಗಲಿಲ್ಲ. ಆದರೂ, ಆ ಸ್ತ್ರೀಗೆ ಮತ್ತೊಂದು ಅವಕಾಶವನ್ನು ಕೊಡಲು ನಿರ್ಧರಿಸಿ, ಆ ಸಹೋದರಿಯು ಪುನಃ ಅಲ್ಲಿಗೆ ಹೋದಾಗ, ಆ ಸ್ತ್ರೀಯು ಅಭ್ಯಾಸಕ್ಕೆ ಸಿದ್ಧವಾಗಿದ್ದಳು. ಅನಂತರ ಆ ವಿದ್ಯಾರ್ಥಿನಿಯು ಒಳ್ಳೆಯ ಪ್ರಗತಿಯನ್ನು ಮಾಡಿ, ಸ್ವಲ್ಪ ಸಮಯದಲ್ಲಿ ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿದಳು.
4 ಯೆಹೋವನ ದಿನವು ತಾಮಸವಾಗದೆಂದು ನಮಗೆ ತಿಳಿದಿದೆ. ಆದುದರಿಂದ ದೈವಿಕ ತಾಳ್ಮೆಯು ಒಳ್ಳೆಯ ಫಲಗಳನ್ನು ಉತ್ಪಾದಿಸುವುದು ಎಂಬುದನ್ನು ಮನಸ್ಸಿನಲ್ಲಿಡುತ್ತಾ, ಆತನ ಕಾರ್ಯವು ಪೂರ್ಣವಾಗುವ ತನಕ ನಾವು ಕಾಯುತ್ತೇವೆ. (ಹಬ. 2:3; 2 ಪೇತ್ರ 3:9-15) ಯೆಹೋವನಂತೆ ನಾವು ತಾಳ್ಮೆಯುಳ್ಳವರಾಗಿರಬೇಕು ಮತ್ತು ಶುಶ್ರೂಷೆಯನ್ನು ಬಿಟ್ಟುಬಿಡಬಾರದು. ನಿಮ್ಮ ಕಠಿನ ಪರಿಶ್ರಮದ ಪ್ರತಿಫಲಕ್ಕಾಗಿ, “ನಂಬಿಕೆ ಮತ್ತು ತಾಳ್ಮೆಯಿಂದ” ಯೆಹೋವನ ಕಡೆಗೆ ನೋಡಿರಿ.—ಇಬ್ರಿ. 6:10-12.