‘ಜನರನ್ನು ಕೂಡಿಸು’
1. ಇಂದಿನ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಅಧಿವೇಶನಗಳಿಗೂ ಸೀನಾಯಿ ಬೆಟ್ಟದ ಬಳಿ ಇಸ್ರಾಯೇಲ್ಯರು ಸೇರಿಬಂದ ಸಂದರ್ಭಕ್ಕೂ ಯಾವ ಹೋಲಿಕೆಗಳಿವೆ?
1 ಈಜಿಪ್ಟಿನಿಂದ ಹೊರಬಂದ ಸ್ವಲ್ಪದರಲ್ಲೇ ಸೀನಾಯಿ ಬೆಟ್ಟದ ತಪ್ಪಲಲ್ಲಿ ಇಸ್ರಾಯೇಲ್ಯರು ಕೂಡಿಬರಬೇಕೆಂದು ಯೆಹೋವನು ಮೋಶೆಗೆ ಹೇಳಿದನು. ಈ ಕೂಟದ ಉದ್ದೇಶವೇನಾಗಿತ್ತು? ಇಸ್ರಾಯೇಲ್ಯರು ಯೆಹೋವನ ಮಾತುಗಳನ್ನು ಕೇಳಿ ಆತನಲ್ಲಿ ಭಯಭಕ್ತಿ ಬೆಳೆಸಿಕೊಂಡು, ಆತನ ಮಾರ್ಗದರ್ಶನವನ್ನು ತಮ್ಮ ಮಕ್ಕಳಿಗೆ ಕಲಿಸುವುದಾಗಿತ್ತು. (ಧರ್ಮೋ. 4:10-13) ನಂಬಿಕೆಯನ್ನು ಬಲಪಡಿಸುವಂಥ ಸಂದರ್ಭ ಅದಾಗಿತ್ತು. ಅದೇ ರೀತಿ ಮುಂದಿನ ಕೆಲವೇ ತಿಂಗಳುಗಳಲ್ಲಿ ಯೆಹೋವನ ಜನರಾದ ನಾವೆಲ್ಲರೂ ಆತನ ಮಾರ್ಗದರ್ಶನೆ ಪಡೆಯಲು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಅಧಿವೇಶನಗಳಿಗೆ ಕೂಡಿಬರಲಿದ್ದೇವೆ. ಇದರ ಸಂಪೂರ್ಣ ಪ್ರಯೋಜನ ಪಡೆಯಲು ನಾವು ಏನು ಮಾಡಬೇಕು?
2. ಅಧಿವೇಶನಕ್ಕೆ ‘ಸಿದ್ಧರಾಗಲು’ ಏನೆಲ್ಲಾ ಮಾಡಬೇಕು?
2 ‘ಸಿದ್ಧರಾಗಿರಿ’: ಸೀನಾಯಿ ಬೆಟ್ಟದ ಬಳಿ ನಡೆಯಲಿದ್ದ ಆ ಐತಿಹಾಸಿಕ ಕೂಟಕ್ಕೆ ‘ಸಿದ್ಧರಾಗಿರುವಂತೆ’ ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು. (ವಿಮೋ. 19:10, 11 ಪವಿತ್ರ ಗ್ರಂಥ) ಅದೇ ರೀತಿ, ಅಧಿವೇಶನದಲ್ಲಿ ನೇಮಕಗಳಿರುವವರು ಮಾತ್ರವಲ್ಲ ಅದಕ್ಕೆ ಹಾಜರಾಗಲಿರುವ ಎಲ್ಲರೂ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು. ಉದಾಹರಣೆಗೆ, ಹೆಚ್ಚಿನವರು ತಮ್ಮ ಕೆಲಸದ ಸ್ಥಳದಲ್ಲಿ ರಜೆ ಕೇಳಬೇಕಾಗಬಹುದು. ನೆಹೆಮೀಯನಿಗೂ ಇಂಥದೇ ಸನ್ನಿವೇಶ ಎದುರಾಗಿತ್ತು. ಅವನು ಯೆರೂಸಲೇಮಿನ ಗೋಡೆಗಳನ್ನು ಪುನರ್ನಿರ್ಮಾಣ ಮಾಡಬೇಕೆಂದು ಬಯಸಿದ್ದರಿಂದ, ರಾಜ ಅರ್ತಷಸ್ತನ ಪಾನದಾಯಕನಾಗಿ ಮಾಡುತ್ತಿದ್ದ ತನ್ನ ಕೆಲಸವನ್ನೇ ಬಿಡಲು ಸಿದ್ಧನಾದನು. ಆದರೆ ರಾಜನು ಅನುಮತಿಸುವುದಿಲ್ಲವೇನೋ ಎಂದು ನೆನೆಸಿದನು. ಆಗ ಧೈರ್ಯಕ್ಕಾಗಿ ಪ್ರಾರ್ಥನೆ ಮಾಡಿ ತನ್ನ ಬಯಕೆಯನ್ನು ಬಹಳ ವಿನಯದಿಂದ ರಾಜನಿಗೆ ಹೇಳಿದನು. ಆಶ್ಚರ್ಯಕರವಾಗಿ, ರಾಜ ಕೇವಲ ಹೋಗಲು ಅನುಮತಿಸಿದ್ದಲ್ಲದೆ ನಿರ್ಮಾಣದ ಯೋಜನೆಗೆ ಬೇಕಾದ ಸಹಾಯ ಕೂಡ ಮಾಡಿದ! (ನೆಹೆ. 2:1-9) ರಜೆ ಕೇಳುವುದು ಮಾತ್ರವಲ್ಲ ನಿಮ್ಮ ಪ್ರಯಾಣ ಮತ್ತು ಉಳಿದುಕೊಳ್ಳುವ ಸ್ಥಳದ ಬಗ್ಗೆಯೂ ಈಗಲೇ ಯೋಚಿಸಿ ಅಗತ್ಯವಾದ ಏರ್ಪಾಡು ಮಾಡಿ. ಈ ವಿಷಯದಲ್ಲಿ ಸಹಾಯದ ಅಗತ್ಯವಿದ್ದರೆ, ಹಿರಿಯರು ಸಂತೋಷದಿಂದ ನೆರವು ನೀಡುತ್ತಾರೆ. ಪ್ರತಿದಿನ ಕಾರ್ಯಕ್ರಮಕ್ಕೆ ಬೇಗನೆ ಬರಲು ಯೋಜಿಸಿ ಮತ್ತು ಕಾರ್ಯಕ್ರಮಕ್ಕೆ “ಸಾಮಾನ್ಯವಾದುದಕ್ಕಿಂತ ಹೆಚ್ಚಿನ ಗಮನವನ್ನು” ಕೊಡಲು ಸಿದ್ಧರಾಗಿರಿ.—ಇಬ್ರಿ. 2:1.
3. ಕಾರ್ಯಕ್ರಮಕ್ಕಾಗಿ ನಮ್ಮ ಹೃದಯವನ್ನು ಸಿದ್ಧಪಡಿಸಲು ಯಾವುದು ಸಹಾಯಮಾಡುತ್ತದೆ?
3 ಸಿದ್ಧರಾಗಿರುವುದರಲ್ಲಿ ಚೆನ್ನಾಗಿ ಕೇಳಿಸಿಕೊಳ್ಳಲು ಮತ್ತು ಕಲಿತುಕೊಳ್ಳಲು ನಮ್ಮ ಹೃದಯಗಳನ್ನು ಸಿದ್ಧಪಡಿಸಿಕೊಳ್ಳುವುದೂ ಸೇರಿದೆ. (ಎಜ್ರ 7:10) ಅಧಿವೇಶನದ ಕಾರ್ಯಕ್ರಮ ಮತ್ತು ಭಾಷಣಗಳ ಶೀರ್ಷಿಕೆಯೊಂದಿಗೆ ಮುಖ್ಯ ವಚನಗಳು ಸಾಕಷ್ಟು ಮುಂಚೆಯೇ jw.org ವೆಬ್ಸೈಟ್ನಲ್ಲಿ ಲಭ್ಯವಿರುತ್ತವೆ. ಇದು ಅಧಿವೇಶನಕ್ಕೆ ಮುಂಚೆ ಕುಟುಂಬ ಆರಾಧನೆಯಲ್ಲಿ ಚರ್ಚಿಸಲು ಅತ್ಯುತ್ತಮವಾದ ವಿಷಯವನ್ನು ಒದಗಿಸುತ್ತದೆ. ಕೆಲವು ಪ್ರಚಾರಕರು ಕಾರ್ಯಕ್ರಮದ ಮುದ್ರಿತ ಪ್ರತಿಯನ್ನು ತೆಗೆದುಕೊಂಡು ಅಧಿವೇಶನದ ಸಮಯದಲ್ಲಿ ಟಿಪ್ಪಣಿ ಬರೆಯಲು ಉಪಯೋಗಿಸುತ್ತಾರೆ.
4. ಅಧಿವೇಶನಗಳಿಂದ ಮಕ್ಕಳು ಕಲಿತುಕೊಳ್ಳುವಂತೆ ಹೆತ್ತವರು ಹೇಗೆ ಸಹಾಯ ಮಾಡಬಹುದು?
4 ‘ಮಕ್ಕಳಿಗೆ ಕಲಿಸಿ’: ಸೀನಾಯಿ ಬೆಟ್ಟದ ಬಳಿ ನಡೆದ ಆ ಕೂಟದ ಒಂದು ಉದ್ದೇಶ, ಹೆತ್ತವರು ತಮ್ಮ ‘ಮಕ್ಕಳಿಗೆ’ ಕಲಿಸುವುದಾಗಿತ್ತು. (ಧರ್ಮೋ. 4:10) ಈಗಿನ ಅಧಿವೇಶನಗಳೂ ತಮ್ಮ ಮಕ್ಕಳಿಗೆ ಕಲಿಸಲು ಹೆತ್ತವರಿಗೆ ಒಂದು ಅಮೂಲ್ಯ ಅವಕಾಶವನ್ನು ಕೊಡುತ್ತವೆ. ಕಾರ್ಯಕ್ರಮ ನಡೆಯುವಾಗ ಮಕ್ಕಳನ್ನು ಹೆತ್ತವರು ತಮ್ಮ ಜೊತೆಯಲ್ಲೇ ಕೂರಿಸಿಕೊಂಡು, ಗಮನಕೊಟ್ಟು ಆಲಿಸುವಂತೆ ಸಹಾಯಮಾಡಬೇಕು. ಪ್ರತಿದಿನದ ಕೊನೆಯಲ್ಲಿ ಮತ್ತು ತಮ್ಮ ಕುಟುಂಬ ಆರಾಧನೆಯಲ್ಲಿ ಅಧಿವೇಶನದಿಂದ ಕಲಿತ ವಿಷಯಗಳನ್ನು ಜೊತೆಯಾಗಿ ಚರ್ಚಿಸಬಹುದು.
5. ಮುಂಬರಲಿರುವ ಅಧಿವೇಶನಕ್ಕೆ ಹಾಜರಾಗುವುದರಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
5 ದೇವಜನರಾಗಿರುವ ಅಪೂರ್ವ ಅವಕಾಶವನ್ನು ಮಾನ್ಯಮಾಡಲು ಸೀನಾಯಿ ಬೆಟ್ಟದ ಬಳಿ ನಡೆದ ಅಧಿವೇಶನ ಇಸ್ರಾಯೇಲ್ಯರಿಗೆ ಸಹಾಯಮಾಡಿತು. (ಧರ್ಮೋ. 4:7, 8) ಅದೇ ರೀತಿಯ ಪ್ರಯೋಜನವನ್ನು ನಾವೂ ಪಡೆಯುವಂತೆ ನಮ್ಮ ಮುಂದಿನ ಅಧಿವೇಶನವನ್ನು ರೂಪಿಸಲಾಗಿದೆ. ಆ ಮೂರು ದಿನಗಳ ಕಾಲ ಸೈತಾನನ ಅಂಧಕಾರ ಲೋಕದಿಂದ ದೂರವಿದ್ದು, ಆಧ್ಯಾತ್ಮಿಕ ಚೈತನ್ಯ ಮತ್ತು ಭಕ್ತಿವೃದ್ಧಿಮಾಡುವ ಸಹವಾಸವನ್ನು ಆಧ್ಯಾತ್ಮಿಕ ಪರದೈಸಿನಲ್ಲಿ ಪಡೆಯುವೆವು. (ಯೆಶಾ. 35:7-9) ಯೆಹೋವನ ದಿನವು ಹೆಚ್ಚೆಚ್ಚು ಸಮೀಪವಾಗುತ್ತಿರುವುದರಿಂದ ಒಬ್ಬರನ್ನೊಬ್ಬರು ಪ್ರೇರೇಪಿಸಲು ಕೂಡಿಬರುವ ಈ ಅವಕಾಶವನ್ನು ಕಳೆದುಕೊಳ್ಳದಿರೋಣ. —ಇಬ್ರಿ. 10:24, 25.