“ಮುಂದೆ ನಾನೇನಾಗಬೇಕು?”
1 ಯೌವನದಿಂದ ಪ್ರೌಢವಯಸ್ಕತೆಗೆ ಕಾಲಿಡುವಾಗ ನೀವು ನಿಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಬಹುದು, ‘ಜೀವನದಲ್ಲಿ ಮುಂದೆ ನಾನೇನಾಗಬೇಕು?’ ಕ್ರೈಸ್ತ ಯುವಜನರು ಯೆಹೋವನಿಗಾಗಿ ತಮ್ಮ ಸೇವೆಯನ್ನು ಶುಶ್ರೂಷೆಯಲ್ಲಿ ವೃದ್ಧಿಸಲು ಬಯಸುತ್ತಾರೆ. ಆದರೆ ನಿಮ್ಮ ಸ್ವಂತ ಭೌತಿಕ ಅಗತ್ಯಗಳನ್ನು ನೋಡಿಕೊಳ್ಳುತ್ತಾ, ಪ್ರೌಢಾವಸ್ಥೆಯ ಜವಾಬ್ದಾರಿಗಳನ್ನು ಹೆಗಲಿಗೇರಿಸಿ, ಇದನ್ನು ನೀವು ಹೇಗೆ ಮಾಡಸಾಧ್ಯವಿದೆ? ಉತ್ತರವನ್ನು ಕಂಡುಹಿಡಿಯುವುದು ಅಷ್ಟೇನೂ ಸುಲಭವಾಗಿರಲಾರದು.
2 ಲೋಕದ ಆರ್ಥಿಕ ಸ್ಥಿತಿಗತಿಗಳನ್ನು ಮತ್ತು ಮುಂದೆ ಭವಿಷ್ಯತ್ತಿನ ಹೇಳಿಕೆಗಳನ್ನು ನೋಡಿ ಕೆಲವು ಯುವಜನರು ಚಿಂತೆಗೊಳಗಾಗಬಹುದು. ಅವರು ಹೀಗೆ ಯೋಚಿಸುತ್ತಾರೆ: ‘ಹೆಚ್ಚಿನ ಐಹಿಕ ಶಿಕ್ಷಣವನ್ನು ನಾನು ಬೆನ್ನಟ್ಟಬೇಕೋ? ಈಗಲೇ ನಾನು ಪೂರ್ಣಸಮಯದ ಸೇವೆಯನ್ನು ಪ್ರಾರಂಭಿಸಬೇಕೋ?’ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿಕ್ಕಾಗಿ, ವ್ಯಕ್ತಿಯೊಬ್ಬನು ‘ಜೀವಿತದಲ್ಲಿ ನನ್ನ ಆದ್ಯ ಅಭಿರುಚಿಯು ಏನಾಗಿದೆ?’ ಎಂಬಂತಹ ಪ್ರಶ್ನೆಯನ್ನು ಪ್ರಾಮಾಣಿಕವಾಗಿ ಉತ್ತರಿಸುವ ಅಗತ್ಯವಿದೆ. ಅವನು ತನ್ನ ಹೇತುಗಳನ್ನು ಪರೀಕ್ಷಿಸಿ ನೋಡಬೇಕು.
3 ನಿಮ್ಮ ಯೌವನದ ಮುಖ್ಯ ಗುರಿಯು ಏನಾಗಿದೆ? ಹಣಕಾಸಿನ ಲಾಭವನ್ನು ಪಡೆಯಲು ನೀವು ಮುಖ್ಯವಾಗಿ ಆಸಕ್ತರಾಗಿದ್ದೀರೋ ಇಲ್ಲವೇ ರಾಜ್ಯಾಭಿರುಚಿಗಳನ್ನು ಅಭಿವೃದ್ಧಿಗೊಳಿಸಲು ನಿಮ್ಮ ಜೀವಿತವನ್ನು ಮುಡಿಪಾಗಿಡಲು ಇಷ್ಟಪಡುತ್ತೀರೋ? ವಿಶ್ವವಿದ್ಯಾನಿಲಯದಲ್ಲಿ ನೀವು ಪಡೆದುಕೊಳ್ಳುವ ಪದವಿಯು ನಿಮಗೆ ಉದ್ಯೋಗದ ಖಾತ್ರಿಯನ್ನು ಕೊಡುವುದಿಲ್ಲ. ಆದುದರಿಂದ ಇದಕ್ಕೆ ಬದಲಿಯಾಗಿ, ಅನೇಕರು ಕಡಿಮೆ ಸಮಯ ಮತ್ತು ಒಳಗೂಡುವಿಕೆಯನ್ನು ಕೇಳಿಕೊಳ್ಳುವ ಅಪ್ರೆಂಟಿಸ್ಷಿಪ್ ಕಾರ್ಯಕ್ರಮಗಳು, ಜೀವನೋಪಾಯದ ಕಸಬು ಅಥವಾ ತಾಂತ್ರಿಕ ಶಾಲಾ ಶಿಕ್ಷಣ, ಅಥವಾ ಅಲ್ಪಕಾಲಿಕ ಕಾಲೇಜ್ ಕೋರ್ಸುಗಳ ಮೂಲಕ ಮಾರುಕಟ್ಟೆಯಲ್ಲಿ ಬೇಕಾಗಿರುವ ಉದ್ಯೋಗ ಕೌಶಲಗಳನ್ನು ಪಡೆದುಕೊಂಡಿದ್ದಾರೆ.
4 ಯೆಹೋವನ ವಾಕ್ಯದಲ್ಲಿ ಭರವಸೆಯಿಡಿರಿ: ಜೀವಿತದಲ್ಲಿ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವವರಿಗೆ ತಾನು ಒದಗಿಸುವೆನೆಂಬ ಯೆಹೋವನ ಆಶ್ವಾಸನೆಯನ್ನು ಪರಿಗಣಿಸುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. (ಮತ್ತಾ. 6:33) ಇದು ಪೊಳ್ಳು ಭರವಸೆಯಾಗಿರುವುದಿಲ್ಲ. ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲನ್ನು ಹಾಜರಾಗುತ್ತಿರುವ ಅನೇಕ ಸಹೋದರರು ಸತ್ಯವನ್ನು ಕಲಿತುಕೊಳ್ಳುವ ಮುಂಚೆಯೇ ಕಾಲೇಜ್ ಪದವಿಯನ್ನು ಪಡೆದುಕೊಂಡಿದ್ದರು. ಆದರೆ ಅವರು ಉದ್ಯೋಗಕ್ಕಾಗಿ ಏನು ಮಾಡುತ್ತಿದ್ದರು? ಯಾವ ಕ್ಷೇತ್ರದಲ್ಲಿ ಶಿಕ್ಷಣವನ್ನು ಪಡೆದುಕೊಂಡಿದ್ದರೋ ಆ ಕ್ಷೇತ್ರದಲ್ಲಿ ಕೆಲವರು ಮಾತ್ರ ಕೆಲಸಮಾಡುತ್ತಿದ್ದರು. ಅನೇಕರು ಉಪಯುಕ್ತ ಕೆಲಸಗಳ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಾ ಪಯನೀಯರಿಂಗ್ ಮಾಡುತ್ತಿದ್ದರು. ಮತ್ತು ಹೀಗೆ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಂಡರು. ಶುಶ್ರೂಷೆಯಲ್ಲಿ ತಮ್ಮ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ, ಅವರು ಹಣಕಾಸಿಗಿಂತಲೂ ಹೆಚ್ಚಿನ ಆಶೀರ್ವಾದಗಳನ್ನು ಪಡೆದುಕೊಳ್ಳುತ್ತಿದ್ದಾರೆ.
5 ಪ್ರೌಢಶಾಲೆಯಲ್ಲಿ ಉತ್ತೀರ್ಣಗೊಂಡ ಮೇಲೆ ಮುಂದೆ ಏನಾಗಬೇಕು ಎಂಬುದನ್ನು ನಿರ್ಧರಿಸುವಲ್ಲಿ, ಎಲ್ಲ ಅಂಶಗಳನ್ನು ಪರಿಶೀಲಿಸಿರಿ ಮತ್ತು ನಿಮ್ಮ ಹೇತುಗಳನ್ನು ಬಹಳ ಜಾಗರೂಕವಾಗಿ ಪರೀಕ್ಷಿಸಿ ನೋಡಿರಿ. ನಿಮ್ಮ ಆಯ್ಕೆಗಳ ಕುರಿತು ಒಂದು ಸಮತೂಕ ನೋಟವನ್ನು ಪಡೆದುಕೊಳ್ಳಲಿಕ್ಕಾಗಿ, ಏಪ್ರಿಲ್ 8, 1998ರ ಎಚ್ಚರ! ಪತ್ರಿಕೆಯ 15-17ರ ಪುಟಗಳಲ್ಲಿರುವ ವಿಷಯಗಳನ್ನು ಪರಿಗಣಿಸಿರಿ. ನಿಮ್ಮ ಹೆತ್ತವರು, ಹಿರಿಯರು, ಸರ್ಕಿಟ್ ಮೇಲ್ವಿಚಾರಕರು ಮತ್ತು ನಿಮ್ಮ ಕ್ಷೇತ್ರದಲ್ಲಿರುವ ಯಶಸ್ವಿ ಪಯನೀಯರರೊಂದಿಗೆ ಮಾತಾಡಿರಿ. ಜೀವನದಲ್ಲಿ ನೀವು ಮುಂದೇನಾಗಬೇಕು ಎಂಬುದರ ಕುರಿತಾಗಿ ವಿವೇಕಯುಕ್ತ ನಿರ್ಣಯವನ್ನು ಮಾಡಲು ಇದು ಸಹಾಯಕಾರಿಯಾಗಿರುವುದು. —ಪ್ರಸಂ. 12:1, 13.