ಜ್ಞಾಪಕಾಚರಣೆಗೆ ಹಾಜರಾದವರಿಗೆ ನಾವು ಹೇಗೆ ಸಹಾಯ ನೀಡಬಹುದು?
1. ಇಸವಿ 2008ರ ಮಾರ್ಚ್ 22ರಂದು ಯಾವ ಪ್ರಬಲ ಸಾಕ್ಷಿ ಕೊಡಲಾಗುವುದು?
1 ಇಸವಿ 2008ರ ಮಾರ್ಚ್ 22ರಂದು ಲೋಕದ ಸುತ್ತಲೂ ಲಕ್ಷಾಂತರ ಮಂದಿಗೆ ಪ್ರಬಲವಾದ ಸಾಕ್ಷಿ ಸಿಗಲಿದೆ. ಜ್ಞಾಪಕಾಚರಣೆಗೆ ಹಾಜರಾಗುವವರು ವಿಮೋಚನಾ ಮೌಲ್ಯದ ಯಜ್ಞವನ್ನು ಒದಗಿಸುವ ಮೂಲಕ ಯೆಹೋವನು ತೋರಿಸಿದ ಮಹಾನ್ ಪ್ರೀತಿಯ ಬಗ್ಗೆ ಕೇಳಲಿರುವರು. (ಯೋಹಾ. 3:16) ರಾಜ್ಯದ ಕುರಿತಾಗಿ ಮತ್ತು ಅದರ ಮೂಲಕವಾಗಿ ಯೆಹೋವನು ಇಡೀ ಭೂಮಿಗಾಗಿರುವ ತನ್ನ ಚಿತ್ತವನ್ನು ಹೇಗೆ ಪೂರೈಸಲಿದ್ದಾನೆಂಬುದರ ಕುರಿತು ಅವರು ಕಲಿಯಲಿರುವರು. (ಮತ್ತಾ. 6:9, 10) ದೇವರ ಸೇವಕರ ಪ್ರೀತಿ ಮತ್ತು ಐಕ್ಯವನ್ನು ಕಣ್ಣಾರೆ ನೋಡುವರು ಮತ್ತು ಆದರಣೀಯ ಆತಿಥ್ಯವನ್ನು ಅನುಭವಿಸುವರು.—ಕೀರ್ತ. 133:1.
2. ಹಾಜರಾಗುವ ಬೈಬಲ್ ವಿದ್ಯಾರ್ಥಿಗಳಿಗೆ ನಾವು ಹೇಗೆ ಸಹಾಯ ನೀಡಬಹುದು?
2 ಬೈಬಲ್ ವಿದ್ಯಾರ್ಥಿಗಳು: ಹಾಜರಾದವರಲ್ಲಿ ಕೆಲವರು ನಮ್ಮೊಂದಿಗೆ ಈಗೀಗ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದವರಾಗಿರಬಹುದು. ಅವರನ್ನು ಸಹೋದರ ಸಹೋದರಿಯರಿಗೆ ಪರಿಚಯಿಸಿರಿ. ಸಾಪ್ತಾಹಿಕ ಕೂಟಗಳ ಬಗ್ಗೆ ಅವರಿಗೆ ತಿಳಿಸಿರಿ ಮತ್ತು ರಾಜ್ಯ ಸಭಾಗೃಹದಲ್ಲಿ ಅವರನ್ನು ಸುತ್ತ ಕರೆದುಕೊಂಡು ಹೋಗಿ ಕೆಲವೊಂದು ವಿಷಯಗಳನ್ನು ತೋರಿಸಿ. ಅಂಥವರು ಆಧ್ಯಾತ್ಮಿಕ ಪ್ರಗತಿ ಮಾಡುತ್ತಾ ಇರುವಂತೆ ಭಾಷಣಕರ್ತನು ತನ್ನ ಭಾಷಣದಲ್ಲಿ ಉತ್ತೇಜಿಸುವನು. ಅವನು ಮಾಡಿದಂಥ ಆ ಹೇಳಿಕೆಗಳನ್ನು ಆಧಾರವಾಗಿ ಉಪಯೋಗಿಸುತ್ತಾ ನೀವು ನಿಮ್ಮ ವಿದ್ಯಾರ್ಥಿಗಳನ್ನು ಉತ್ತೇಜಿಸಬಹುದು.
3. ಹಾಜರಾದ ನಿಷ್ಕ್ರಿಯ ಪ್ರಚಾರಕರನ್ನು ನಾವು ಹೇಗೆ ಉತ್ತೇಜಿಸಸಾಧ್ಯವಿದೆ?
3 ನಿಷ್ಕ್ರಿಯರು: ಹಾಜರಾದವರಲ್ಲಿ ಕೆಲವರು ನಿಷ್ಕ್ರಿಯ ಪ್ರಚಾರಕರಾಗಿರಬಹುದು. ನೀವೇ ಮುಂದೆ ಹೋಗಿ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿರಿ. ವೈಯಕ್ತಿಕ ಪ್ರಶ್ನೆಗಳನ್ನು ಕೇಳುವುದರಿಂದ ಅಥವಾ ಅವರಿಗೆ ಮುಜುಗರ ಉಂಟುಮಾಡುವ ವಿಷಯಗಳನ್ನು ಹೇಳುವುದರಿಂದ ದೂರವಿರಿ. ಹಾಜರಾದ ಈ ನಿಷ್ಕ್ರಿಯ ಪ್ರಚಾರಕರನ್ನು ಹಿರಿಯರು ಜ್ಞಾಪಕಾಚರಣೆಯ ಸಮಯಾವಧಿಯ ನಂತರ ಭೇಟಿಮಾಡಿ, ಹಾಜರಾಗಲು ಅವರು ಮಾಡಿದ ಪ್ರಯತ್ನಗಳಿಗಾಗಿ ಪ್ರಶಂಸಿಸುತ್ತಾ ಮುಂದಿನ ಸಭಾ ಕೂಟಕ್ಕೆ ಅವರನ್ನು ಹಾರ್ದಿಕವಾಗಿ ಆಮಂತ್ರಿಸಬೇಕು.
4. ನಮ್ಮಲ್ಲಿ ಪ್ರತಿಯೊಬ್ಬರೂ ಸಂದರ್ಶಕರಿಗೆ ಹೇಗೆ ಸಹಾಯ ನೀಡಬಹುದು?
4 ಸಂದರ್ಶಕರು: ಹಾಜರಾದವರಲ್ಲಿ ಕೆಲವರು ನಾವು ವೈಯಕ್ತಿಕವಾಗಿ ಆಮಂತ್ರಿಸಿದ ಪರಿಚಯಸ್ಥರು ಅಥವಾ ಕುಟುಂಬ ಸದಸ್ಯರಾಗಿರಬಹುದು. ಇನ್ನಿತರರು ವಿಶೇಷ ಕಾರ್ಯಾಚರಣೆಯ ಸಮಯದಲ್ಲಿ ಆಮಂತ್ರಣವನ್ನು ಪಡೆದಿರಬಹುದು. ಕೆಲವರ ಪರಿಚಯ ನಿಮಗಿಲ್ಲದಿರುವಲ್ಲಿ ನೀವೇ ಮುಂದೆ ಹೋಗಿ ನಿಮ್ಮನ್ನು ಪರಿಚಯಿಸಿಕೊಂಡು ಅವರನ್ನು ಸ್ವಾಗತಿಸಿ. ಈ ಮುಂಚೆ ಅವರು ನಮ್ಮ ಯಾವುದೇ ಕೂಟಕ್ಕೆ ಹಾಜರಾಗಿರಲಿಕ್ಕಿಲ್ಲ. ಅವರನ್ನು ಹೇಗೆ ಸಂಪರ್ಕಿಸುವುದೆಂಬುದನ್ನು ಅವರೊಂದಿಗೆ ಮಾತಾಡಿ ತಿಳಿದುಕೊಳ್ಳಿ. ಜ್ಞಾಪಕಾಚರಣೆಯ ಕೆಲದಿನಗಳ ನಂತರ ವೈಯಕ್ತಿಕ ಭೇಟಿ ಅಥವಾ ಫೋನ್ ಕರೆಯ ಮೂಲಕ ಅವರ ಆಸಕ್ತಿ ಹೆಚ್ಚಿಸಿ ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಬಹುದು.
5. ಬೈಬಲ್ ಅಧ್ಯಯನವನ್ನು ಆರಂಭಿಸಲು ನಾವೇನು ಹೇಳಸಾಧ್ಯವಿದೆ?
5 ಪುನರ್ಭೇಟಿಯಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಪರಿಚಯಿಸಲು ಜ್ಞಾಪಕಾಚರಣೆಯ ಭಾಷಣದಲ್ಲಿನ ಮಾಹಿತಿಯನ್ನು ಉಪಯೋಗಿಸಬಹುದು. ಉದಾಹರಣೆಗೆ ಜ್ಞಾಪಕಾಚರಣೆಯ ಭಾಷಣಕರ್ತನು ಯೆಶಾಯ 65:21-23ನ್ನು ಓದುವನು. ಪುನರ್ಭೇಟಿಯಲ್ಲಿ ಆ ಭಾಷಣದ ಬಗ್ಗೆ ಪ್ರಸ್ತಾಪಿಸುತ್ತಾ ನೀವು ಹೀಗೆ ಹೇಳಬಹುದು: “ವಿಮೋಚನಾ ಮೌಲ್ಯದ ಯಜ್ಞದಿಂದ ಸಾಧ್ಯವಾಗುವ ಇತರ ಆಶೀರ್ವಾದಗಳನ್ನು ನಿಮಗೆ ತೋರಿಸಲು ಬಯಸುತ್ತೇನೆ.” ನಂತರ ಬೈಬಲ್ ಬೋಧಿಸುತ್ತದೆ ಪುಸ್ತಕದ 4-5ನೇ ಪುಟಗಳನ್ನು ಪರಿಗಣಿಸಿ. ಅಥವಾ ನೀವು ಹೀಗನ್ನಬಹುದು: “ಯೆಶಾಯನ ಪ್ರವಾದನೆಯು ಯಾವಾಗ ನೆರವೇರುವುದೆಂದು ಅನೇಕರು ಕುತೂಹಲಪಡುತ್ತಾರೆ.” ನಂತರ 9ನೇ ಅಧ್ಯಾಯದ 1-3ನೇ ಪ್ಯಾರಗ್ರಾಫ್ಗಳನ್ನು ಪರಿಗಣಿಸಿ. ಬೈಬಲ್ ಅಧ್ಯಯನವನ್ನು ಆರಂಭಿಸುವ ಇನ್ನೊಂದು ವಿಧಾನವು, ಜ್ಞಾಪಕಾಚರಣೆಯ ಭಾಷಣಕರ್ತರ ಹೇಳಿಕೆಗಳನ್ನು ಪ್ರಸ್ತಾಪಿಸಿ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಪರಿಚಯಿಸಿ ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸುವುದೇ ಆಗಿದೆ.
6. ತನ್ನ ಮರಣವನ್ನು ಸ್ಮರಿಸಬೇಕೆಂಬ ಯೇಸುವಿನ ಆಜ್ಞೆಗೆ ವಿಧೇಯರಾಗುವಾಗ ನಮಗೆ ಯಾವ ಅವಕಾಶಗಳಿವೆ?
6 ಹಾಜರಿರುವ ಬೈಬಲ್ ವಿದ್ಯಾರ್ಥಿಗಳಿಗೆ, ನಿಷ್ಕ್ರಿಯ ಪ್ರಚಾರಕರಿಗೆ ಮತ್ತು ಸಂದರ್ಶಕರಿಗೆ ಸಹಾಯ ನೀಡಲು ನಾವೆಲ್ಲರೂ ಅವಕಾಶಗಳನ್ನು ಹುಡುಕುತ್ತಿರೋಣ. (ಲೂಕ 22:19) ರಾಜ್ಯದ ಸೇವೆಯಲ್ಲಿ ನಾವು ಮಾಡುವ ಯಾವುದೇ ಹೆಚ್ಚಿನ ಚಟುವಟಿಕೆಯನ್ನು ಯೆಹೋವನು ಖಂಡಿತ ಹರಸುವನು.