ಅವರು ಕೇಳುವುದು ಹೇಗೆ?
1. ಸಾರುವ ಕೆಲಸವು ಕಷ್ಟಕರವಾಗಿರಬಹುದು ಏಕೆ, ಆದರೆ ನಾವೇಕೆ ಬಿಡದೆ ಸಾರಬೇಕು?
1 ಯೆಹೋವನ ದಿನವು ವೇಗವಾಗಿ ಧಾವಿಸುತ್ತಾ ಬರುತ್ತಿದೆ. ಆದುದರಿಂದ ದೇವರ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು ಮತ್ತು ಮಾನವರಿಗಾಗಿ ದೇವರ ಉದ್ದೇಶವನ್ನು ತಿಳುಕೊಳ್ಳಲು ಅಸಂಖ್ಯಾತ ಜನರಿಗೆ ಸಹಾಯಮಾಡುವ ತೀವ್ರ ಅಗತ್ಯವು ನಮಗಿದೆ. (ಯೋಹಾ. 17:3; 2 ಪೇತ್ರ 3:9, 10) ಇದು ಕೆಲವೊಮ್ಮೆ ಕಷ್ಟಕರ ವಿಷಯ. ಏಕೆಂದರೆ ಅನೇಕ ಜನರು ಅಸಕ್ತಿ ತೋರಿಸುವುದಿಲ್ಲ. ಇನ್ನು ಕೆಲವರು ನಮ್ಮ ಸಾರುವ ಕಾರ್ಯದ ಕಾರಣ ನಮ್ಮನ್ನು ನಿಂದಿಸಲೂಬಹುದು. (2 ಪೇತ್ರ 3:3, 4) ಆದರೂ ಸುವಾರ್ತೆಯನ್ನು ಕೇಳುವ ಸಂದರ್ಭ ಒಮ್ಮೆ ಸಿಕ್ಕಿದ್ದಲ್ಲಿ ಅದನ್ನು ಸ್ವೀಕರಿಸುವ ಜನರು ಇನ್ನೂ ನಮ್ಮ ಟೆರಿಟೊರಿಯಲ್ಲಿ ಇದ್ದಾರೆ ಎಂದು ನಂಬಲು ನಮಗೆ ಸಕಾರಣಗಳಿವೆ. ಆದರೆ ಸಾರಿ ಹೇಳುವವನೇ ಇಲ್ಲದಿದ್ದಲ್ಲಿ ಅಂಥವರು ಕೇಳುವುದು ಹೇಗೆ?—ರೋಮಾ. 10:14, 15.
2. ಅಪೊಸ್ತಲ ಪೌಲನ ಮಾದರಿಯು ನಮ್ಮನ್ನು ಹೇಗೆ ಪ್ರಚೋದಿಸುತ್ತದೆ?
2 ವಿರೋಧದ ಎದುರು: ರಾಜ್ಯದ ಸಂದೇಶವನ್ನು ಕೇಳಲು ಸಿದ್ಧಮನಸ್ಸಿನ ಜನರಿರುವ ಕಾರಣ ನಾವು ಅದನ್ನು ಸಾರಲು ಎಂದೂ ಹಿಂಜರಿಯಬಾರದು. ಅಪೊಸ್ತಲ ಪೌಲನು ಸಾರಿದ ಸುವಾರ್ತೆಗೆ ಕಿವಿಗೊಟ್ಟ ಯುರೋಪ್ ಖಂಡದ ಮೊದಲ ಪಟ್ಟಣ ಫಿಲಿಪ್ಪಿ ಆಗಿತ್ತು. ಅಲ್ಲಿ ಪೌಲ ಮತ್ತು ಸೀಲರ ವಿರುದ್ಧವಾಗಿ ಸುಳ್ಳಾರೋಪಗಳು ಹೊರಿಸಲ್ಪಟ್ಟಾಗ, ಅವರಿಬ್ಬರಿಗೂ ಚಡಿಗಳಿಂದ ಬಹಳ ಪೆಟ್ಟುಗಳನ್ನು ಹೊಡೆದು ಸೆರೆಮನೆಯೊಳಗೆ ಹಾಕಲಾಯಿತು. (ಅ. ಕೃ. 16:16-24) ಆದರೆ ಆ ವೇದನಾಭರಿತ ಅನುಭವವು ಪೌಲನನ್ನು ಭಯದಿಂದ ಹಿಮ್ಮೆಟ್ಟುವಂತೆ ಮಾಡಿತೋ? ಇಲ್ಲ! ತನ್ನ ಮುಂದಿನ ಮಿಷನೆರಿ ಸಂಚಾರದ ಊರಾದ ಥೆಸಲೊನೀಕವನ್ನು ಸಂದರ್ಶಿಸಿದಾಗ ಅವನು “ದೇವರ ಮೂಲಕ ಧೈರ್ಯಗೊಂಡು” ಸಾರಿದನು. (1 ಥೆಸ. 2:2) ಪೌಲನ ಈ ಉತ್ತಮ ಮಾದರಿಯು ‘ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ’ ಇರುವಂತೆ ನಮ್ಮನ್ನು ಪ್ರಚೋದಿಸುವುದಿಲ್ಲವೇ?—ಗಲಾ. 6:9.
3. ಹಿಂದೆ ಆಸಕ್ತಿ ತೋರಿಸದಿದ್ದರೂ ಕೆಲವರಲ್ಲಿ ಯಾವುದು ಬದಲಾವಣೆಯನ್ನು ತರಬಹುದು?
3 ನಮ್ಮ ಸಂದೇಶವನ್ನು ಕೇಳಲು ವರ್ಷಗಳಿಂದ ನಿರಾಕರಿಸಿದ್ದ ಅನೇಕರ ಮನೋಭಾವವು ಈಗ ಬದಲಾಗಿರುತ್ತದೆ. ಆರ್ಥಿಕ ಮುಗ್ಗಟ್ಟು, ರೋಗರುಜಿನ, ಕುಟುಂಬದ ಪ್ರಿಯರೊಬ್ಬರ ಸಾವು ಅಥವಾ ಲೋಕದಲ್ಲಿ ನಡೆಯುತ್ತಿರುವ ನೆಮ್ಮದಿಗೆಡಿಸುವ ಘಟನೆಗಳು ಅಂಥ ಬದಲಾವಣೆಯನ್ನು ತಂದಿರಬಹುದು. (1 ಕೊರಿ. 7:31) ವಿರೋಧಿಸಿದ್ದ ಹೆತ್ತವರ ಕೆಲವು ಎಳೆಯ ಮಕ್ಕಳು ಈಗ ಪ್ರಾಪ್ತ ವಯಸ್ಕರಾಗಿದ್ದು ಸಂದೇಶಕ್ಕೆ ಕಿವಿಗೊಡಲು ಸಿದ್ಧರಾಗಿದ್ದಾರೆ. ನಮ್ಮ ಎಡೆಬಿಡದ ಸಾರುವಿಕೆಯು, ಕಾಲ ಮೀರಿಹೋಗುವ ಮುಂಚೆ ಅಂಥವರಿಗೆ ‘ಯೆಹೋವನ ನಾಮವನ್ನು ಹೇಳಿಕೊಳ್ಳುವ’ ಸಂದರ್ಭವನ್ನು ಒದಗಿಸುತ್ತದೆ.—ರೋಮಾ. 10:13.
4. ಶುಶ್ರೂಷೆಯನ್ನು “ಎಡೆಬಿಡದೆ” ಮುಂದುವರಿಸುವಂತೆ ಯಾವುದು ನಮ್ಮನ್ನು ಪ್ರಚೋದಿಸುತ್ತದೆ?
4 “ಎಡೆಬಿಡದೆ”: ಒಂದನೆಯ ಶತಮಾನದ ಅಪೊಸ್ತಲರಂತೆಯೇ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಎಡೆಬಿಡದೆ ಮುಂದುವರಿಸುವಂತೆ ದೇವರಲ್ಲಿ ಮತ್ತು ನೆರೆಯವರಲ್ಲಿ ನಮಗಿರುವ ಪ್ರೀತಿಯು ನಮ್ಮನ್ನು ಪ್ರಚೋದಿಸುತ್ತದೆ. (ಅ. ಕೃ. 5:42) ಇಂದು ಅನೇಕರು ಲೋಕದಲ್ಲಿ ನಡೆಯುತ್ತಿರುವ ‘ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿದ್ದಾರೆ.’ (ಯೆಹೆ. 9:4) ಅವರು ಸುವಾರ್ತೆಯನ್ನು ಕೇಳುವಾಗ ಅವರಿಗೆ ದೊರಕಲಿರುವ ನಿರೀಕ್ಷೆ ಮತ್ತು ನೆಮ್ಮದಿ ಎಷ್ಟೆಂದು ಊಹಿಸಿರಿ! ಹೆಚ್ಚಿನ ಜನರು ಕಿವಿಗೊಡಲು ನಿರಾಕರಿಸುವಾಗಲೂ, ನಾವು ಮಾಡುವ ಪ್ರಯತ್ನಗಳನ್ನು ಯೆಹೋವನು ತುಂಬಾ ಮೆಚ್ಚುತ್ತಾನೆಂಬ ಶಾಸ್ತ್ರೀಯ ಆಶ್ವಾಸನೆ ನಮಗಿದೆ.—ಇಬ್ರಿ. 13:15, 16.