ಯೋಹಾನ
19 ಆಗ ಪಿಲಾತನು ಯೇಸುವನ್ನು ಕರೆದುಕೊಂಡುಹೋಗಿ ಕೊರಡೆಯಿಂದ ಹೊಡೆಸಿದನು. 2 ಮತ್ತು ಸೈನಿಕರು ಮುಳ್ಳಿನ ಕಿರೀಟವನ್ನು ಹೆಣೆದು ಅವನ ತಲೆಯ ಮೇಲಿಟ್ಟು ಅವನಿಗೆ ಕೆನ್ನೀಲಿ ಬಣ್ಣದ ಮೇಲಂಗಿಯನ್ನು ಹೊದಿಸಿದರು. 3 ಅವರು ಅವನ ಬಳಿಗೆ ಬಂದು, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಎಂದು ಹೇಳತೊಡಗಿದರು. ಇದಲ್ಲದೆ, ಅವನ ಮುಖಕ್ಕೆ ಹೊಡೆಯುತ್ತಿದ್ದರು. 4 ತರುವಾಯ ಪಿಲಾತನು ಪುನಃ ಹೊರಗೆ ಹೋಗಿ ಅವರಿಗೆ, “ನೋಡಿ! ನಾನು ಅವನಲ್ಲಿ ಯಾವ ತಪ್ಪನ್ನೂ ಕಂಡುಕೊಳ್ಳಲಿಲ್ಲ ಎಂದು ನೀವು ತಿಳಿದುಕೊಳ್ಳುವಂತೆ ನಾನು ಅವನನ್ನು ನಿಮ್ಮ ಬಳಿಗೆ ಹೊರಗೆ ಕರೆದುಕೊಂಡು ಬರುತ್ತೇನೆ” ಎಂದನು. 5 ಆಗ ಯೇಸು ಮುಳ್ಳಿನ ಕಿರೀಟವನ್ನೂ ಕೆನ್ನೀಲಿ ಬಣ್ಣದ ಮೇಲಂಗಿಯನ್ನೂ ಧರಿಸಿದವನಾಗಿ ಹೊರಗೆ ಬಂದನು. ಪಿಲಾತನು ಅವರಿಗೆ, “ಇಗೋ, ಈ ಮನುಷ್ಯನು!” ಎಂದು ಹೇಳಿದನು. 6 ಆದರೆ ಮುಖ್ಯ ಯಾಜಕರೂ ಅಧಿಕಾರಿಗಳೂ ಅವನನ್ನು ನೋಡುತ್ತಲೇ, “ಅವನನ್ನು ಶೂಲಕ್ಕೇರಿಸು! ಅವನನ್ನು ಶೂಲಕ್ಕೇರಿಸು!” ಎಂದು ಗಟ್ಟಿಯಾಗಿ ಕೂಗಿದರು. ಆಗ ಪಿಲಾತನು ಅವರಿಗೆ, “ನೀವೇ ಇವನನ್ನು ತೆಗೆದುಕೊಂಡುಹೋಗಿ ಶೂಲಕ್ಕೇರಿಸಿರಿ, ಏಕೆಂದರೆ ನನಗೆ ಇವನಲ್ಲಿ ಯಾವ ತಪ್ಪೂ ಕಂಡುಬಂದಿಲ್ಲ” ಎಂದನು. 7 ಅದಕ್ಕೆ ಯೆಹೂದ್ಯರು ಅವನಿಗೆ, “ನಮಗೆ ಒಂದು ನಿಯಮವಿದೆ ಮತ್ತು ಆ ನಿಯಮಕ್ಕನುಸಾರ ಅವನು ಸಾಯಲೇಬೇಕು, ಏಕೆಂದರೆ ಇವನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ” ಎಂದರು.
8 ಪಿಲಾತನು ಈ ಮಾತನ್ನು ಕೇಳಿಸಿಕೊಂಡಾಗ ಇನ್ನಷ್ಟು ಭಯಪಟ್ಟನು. 9 ಅವನು ಪುನಃ ರಾಜ್ಯಪಾಲನ ಅರಮನೆಯೊಳಗೆ ಹೋಗಿ ಯೇಸುವಿಗೆ, “ನೀನು ಎಲ್ಲಿಂದ ಬಂದವನು?” ಎಂದು ಕೇಳಿದನು. ಯೇಸು ಅವನಿಗೆ ಯಾವುದೇ ಉತ್ತರ ಕೊಡಲಿಲ್ಲ. 10 ಆದುದರಿಂದ ಪಿಲಾತನು ಅವನಿಗೆ, “ನೀನು ನನ್ನೊಂದಿಗೆ ಮಾತಾಡುವುದಿಲ್ಲವೊ? ನಿನ್ನನ್ನು ಬಿಡುಗಡೆಮಾಡುವ ಅಧಿಕಾರವೂ ನಿನ್ನನ್ನು ಶೂಲಕ್ಕೇರಿಸುವ ಅಧಿಕಾರವೂ ನನಗಿದೆ ಎಂಬುದು ನಿನಗೆ ಗೊತ್ತಿಲ್ಲವೊ?” ಎಂದು ಕೇಳಿದನು. 11 ಅದಕ್ಕೆ ಯೇಸು, “ಮೇಲಣಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದುದರಿಂದಲೇ ನನ್ನನ್ನು ನಿನಗೆ ಒಪ್ಪಿಸಿಕೊಟ್ಟ ಆ ಮನುಷ್ಯನಿಗೆ ಹೆಚ್ಚಿನ ಪಾಪವಿದೆ” ಎಂದು ಹೇಳಿದನು.
12 ಈ ಕಾರಣದಿಂದಲೇ ಪಿಲಾತನು ಅವನನ್ನು ಬಿಡುಗಡೆಮಾಡಲು ಪ್ರಯತ್ನಿಸುತ್ತಾ ಇದ್ದನು. ಆದರೆ ಯೆಹೂದ್ಯರು, “ನೀನು ಈ ಮನುಷ್ಯನನ್ನು ಬಿಡುಗಡೆಮಾಡಿದರೆ ನೀನು ಕೈಸರನಿಗೆ ಮಿತ್ರನಲ್ಲ. ತನ್ನನ್ನು ಅರಸನನ್ನಾಗಿ ಮಾಡಿಕೊಳ್ಳುವ ಪ್ರತಿಯೊಬ್ಬನು ಕೈಸರನಿಗೆ ವಿರುದ್ಧವಾಗಿ ಮಾತಾಡುವವನಾಗಿದ್ದಾನೆ” ಎಂದು ಕೂಗಿಹೇಳಿದರು. 13 ಪಿಲಾತನು ಈ ಮಾತುಗಳನ್ನು ಕೇಳಿಸಿಕೊಂಡ ಬಳಿಕ ಯೇಸುವನ್ನು ಹೊರಗೆ ಕರೆದುಕೊಂಡು ಬಂದು ಹೀಬ್ರು ಭಾಷೆಯಲ್ಲಿ ಗಬ್ಬಥಾ ಎನಿಸಿಕೊಳ್ಳುವ ಕಲ್ಲುಹಾಸಿದ ಕಟ್ಟೆ ಎಂದು ಕರೆಯಲ್ಪಡುವ ಸ್ಥಳದಲ್ಲಿದ್ದ ನ್ಯಾಯಾಸನದ ಮೇಲೆ ಕುಳಿತುಕೊಂಡನು. 14 ಅದು ಪಸ್ಕಹಬ್ಬದ ಸಿದ್ಧತೆಯ ದಿನವಾಗಿದ್ದು ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಯಾಗಿತ್ತು. ಅವನು ಯೆಹೂದ್ಯರಿಗೆ, “ನೋಡಿ! ನಿಮ್ಮ ಅರಸನು!” ಎಂದು ಹೇಳಿದನು. 15 ಆಗ ಅವರು, “ಅವನನ್ನು ಕೊಲ್ಲಿಸು! ಅವನನ್ನು ಕೊಲ್ಲಿಸು! ಅವನನ್ನು ಶೂಲಕ್ಕೇರಿಸು!” ಎಂದು ಕೂಗಿದರು. ಪಿಲಾತನು ಅವರಿಗೆ, “ನಿಮ್ಮ ಅರಸನನ್ನು ನಾನು ಶೂಲಕ್ಕೇರಿಸಲೊ?” ಎಂದು ಕೇಳಿದನು. ಅದಕ್ಕೆ ಮುಖ್ಯ ಯಾಜಕರು, “ನಮಗೆ ಕೈಸರನನ್ನು ಬಿಟ್ಟರೆ ಬೇರೆ ಅರಸನಿಲ್ಲ” ಎಂದು ಉತ್ತರಿಸಿದರು. 16 ಆಗ ಪಿಲಾತನು ಅವನನ್ನು ಶೂಲಕ್ಕೇರಿಸಲು ಅವರಿಗೆ ಒಪ್ಪಿಸಿಕೊಟ್ಟನು.
ಅವರು ಯೇಸುವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 17 ಅವನು ತನ್ನ ಯಾತನಾ ಕಂಬವನ್ನು ತಾನೇ ಹೊತ್ತುಕೊಂಡು ಕಪಾಲ ಸ್ಥಳ ಎಂಬಲ್ಲಿಗೆ ಹೋದನು; ಇದು ಹೀಬ್ರು ಭಾಷೆಯಲ್ಲಿ ಗೊಲ್ಗೊಥಾ ಎಂದು ಕರೆಯಲ್ಪಡುತ್ತದೆ. 18 ಅಲ್ಲಿ ಅವರು ಅವನನ್ನೂ ಅವನೊಂದಿಗೆ ಇನ್ನಿಬ್ಬರನ್ನೂ ಶೂಲಕ್ಕೇರಿಸಿದರು; ಆ ಕಡೆ ಒಬ್ಬನನ್ನು, ಈ ಕಡೆ ಒಬ್ಬನನ್ನು ಮತ್ತು ನಡುವೆ ಯೇಸುವನ್ನು ಇಟ್ಟರು. 19 ಪಿಲಾತನು ಒಂದು ತಲೆಬರಹವನ್ನು ಬರೆದು ಯಾತನಾ ಕಂಬದ ಮೇಲೆ ಹಾಕಿದನು. ಅದರಲ್ಲಿ, “ಯೆಹೂದ್ಯರ ಅರಸನಾದ ನಜರೇತಿನ ಯೇಸು” ಎಂದು ಬರೆದಿತ್ತು. 20 ಯೇಸು ಶೂಲಕ್ಕೇರಿಸಲ್ಪಟ್ಟ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಈ ತಲೆಬರಹವನ್ನು ಓದಿದರು. ಏಕೆಂದರೆ ಅದನ್ನು ಹೀಬ್ರು, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು. 21 ಯೆಹೂದ್ಯರ ಮುಖ್ಯ ಯಾಜಕರು ಪಿಲಾತನಿಗೆ, “ ‘ಯೆಹೂದ್ಯರ ಅರಸನು’ ಎಂದು ಬರೆಯಬೇಡ, ‘ನಾನು ಯೆಹೂದ್ಯರ ಅರಸನು’ ಎಂದು ಹೇಳಿದವನು ಎಂದು ಬರೆ” ಎಂದರು. 22 ಅದಕ್ಕೆ ಪಿಲಾತನು, “ನಾನು ಬರೆದದ್ದು ಬರೆದಾಯಿತು” ಎಂದು ಉತ್ತರಕೊಟ್ಟನು.
23 ಸೈನಿಕರು ಯೇಸುವನ್ನು ಶೂಲಕ್ಕೇರಿಸಿದ ಮೇಲೆ ಅವನ ಮೇಲಂಗಿಗಳನ್ನು ತೆಗೆದುಕೊಂಡು ನಾಲ್ಕು ಪಾಲುಗಳಾಗಿ ಮಾಡಿ ಪ್ರತಿಯೊಬ್ಬ ಸೈನಿಕನಿಗೆ ಒಂದರಂತೆ ಹಂಚಿಕೊಂಡರು ಮತ್ತು ಅವನ ಒಳಂಗಿಯನ್ನು ಸಹ ತೆಗೆದುಕೊಂಡರು. ಆದರೆ ಆ ಒಳಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಕೆಳಗಿನವರೆಗೆ ನೆಯ್ದದ್ದಾಗಿತ್ತು. 24 ಆದುದರಿಂದ ಅವರು, “ನಾವು ಇದನ್ನು ಹರಿಯುವುದು ಬೇಡ; ಅದು ಯಾರಿಗೆ ಸೇರುತ್ತದೆ ಎಂಬುದನ್ನು ಚೀಟುಹಾಕಿ ನಿರ್ಧರಿಸೋಣ” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. ಇದರಿಂದಾಗಿ, “ಅವರು ನನ್ನ ಮೇಲಂಗಿಗಳನ್ನು ತಮ್ಮೊಳಗೆ ಪಾಲುಮಾಡಿಕೊಂಡರು ಮತ್ತು ನನ್ನ ಬಟ್ಟೆಗಾಗಿ ಚೀಟುಹಾಕಿದರು” ಎಂಬ ಶಾಸ್ತ್ರವಚನವು ನೆರವೇರುವಂತಾಯಿತು. ಹೀಗೆ ಸೈನಿಕರು ಇದನ್ನೆಲ್ಲ ನಿಜವಾಗಿಯೂ ಮಾಡಿದರು.
25 ಯೇಸುವಿನ ಯಾತನಾ ಕಂಬದ ಬಳಿಯಲ್ಲಿ ಅವನ ತಾಯಿಯೂ ಅವನ ತಾಯಿಯ ಸಹೋದರಿಯೂ ಕ್ಲೋಪನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತುಕೊಂಡಿದ್ದರು. 26 ಆಗ ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ ನೋಡು! ನಿನ್ನ ಮಗನು!” ಎಂದು ಹೇಳಿದನು. 27 ಬಳಿಕ ಆ ಶಿಷ್ಯನಿಗೆ, “ನೋಡು! ನಿನ್ನ ತಾಯಿ!” ಎಂದನು. ಆ ಗಳಿಗೆಯಿಂದ ಆ ಶಿಷ್ಯನು ಅವಳನ್ನು ತನ್ನ ಮನೆಯಲ್ಲಿಯೇ ಇರಿಸಿಕೊಂಡನು.
28 ಇದಾದ ಬಳಿಕ ಈಗ ಎಲ್ಲವೂ ಪೂರೈಸಲ್ಪಟ್ಟಿದೆ ಎಂಬುದನ್ನು ಅರಿತವನಾದ ಯೇಸು ಶಾಸ್ತ್ರವಚನವು ನೆರವೇರುವಂತೆ, “ನನಗೆ ದಾಹವಾಗಿದೆ” ಎಂದನು. 29 ಅಲ್ಲಿ ಹುಳಿ ದ್ರಾಕ್ಷಾಮದ್ಯದಿಂದ ತುಂಬಿದ್ದ ಒಂದು ಪಾತ್ರೆಯಿತ್ತು. ಅವರು ಒಂದು ಸ್ಪಂಜನ್ನು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಅವನ ಬಾಯಿಯ ಬಳಿಗೆ ತಂದರು. 30 ಯೇಸು ಆ ಹುಳಿ ದ್ರಾಕ್ಷಾಮದ್ಯವನ್ನು ತೆಗೆದುಕೊಂಡ ಮೇಲೆ, “ನೆರವೇರಿತು” ಎಂದು ಹೇಳಿ ತಲೆಬಾಗಿಸಿ ತನ್ನ ಜೀವಶಕ್ತಿಯನ್ನು ಒಪ್ಪಿಸಿಕೊಟ್ಟನು.
31 ಅದು ಸಿದ್ಧತೆಯ ದಿನವಾಗಿದ್ದುದರಿಂದ ಸಬ್ಬತ್ ದಿನದಲ್ಲಿ (ಅಂದಿನ ಸಬ್ಬತ್ ದಿನವು ಒಂದು ವಿಶೇಷ ದಿನವಾಗಿತ್ತು) ಮೃತದೇಹಗಳು ಯಾತನಾ ಕಂಬಗಳ ಮೇಲೆ ಉಳಿಯಬಾರದೆಂದು, ಅವರ ಕಾಲುಗಳನ್ನು ಮುರಿಸಿ ಅವರ ಮೃತದೇಹಗಳನ್ನು ತೆಗೆದುಹಾಕುವಂತೆ ಯೆಹೂದ್ಯರು ಪಿಲಾತನನ್ನು ಕೇಳಿಕೊಂಡರು. 32 ಆದುದರಿಂದ ಸೈನಿಕರು ಬಂದು ಅವನೊಂದಿಗೆ ಶೂಲಕ್ಕೇರಿಸಲ್ಪಟ್ಟಿದ್ದ ಮೊದಲನೆಯವನ ಕಾಲುಗಳನ್ನೂ ಇನ್ನೊಬ್ಬನ ಕಾಲುಗಳನ್ನೂ ಮುರಿದರು. 33 ಆದರೆ ಯೇಸುವಿನ ಬಳಿಗೆ ಬಂದಾಗ ಅವನು ಈಗಾಗಲೇ ಸತ್ತಿರುವುದನ್ನು ನೋಡಿ ಅವರು ಅವನ ಕಾಲುಗಳನ್ನು ಮುರಿಯಲಿಲ್ಲ. 34 ಆದರೂ ಸೈನಿಕರಲ್ಲಿ ಒಬ್ಬನು ಈಟಿಯಿಂದ ಅವನ ಪಕ್ಕೆಗೆ ತಿವಿದನು ಮತ್ತು ಕೂಡಲೆ ರಕ್ತವೂ ನೀರೂ ಹೊರಬಂತು. 35 ಅದನ್ನು ನೋಡಿದವನೇ ಸಾಕ್ಷಿಹೇಳಿದ್ದಾನೆ ಮತ್ತು ಅವನ ಸಾಕ್ಷಿಯು ಸತ್ಯವಾಗಿದೆ; ನೀವು ಸಹ ನಂಬುವಂತೆ ತಾನು ಸತ್ಯ ಸಂಗತಿಗಳನ್ನೇ ಹೇಳುತ್ತಿದ್ದೇನೆಂದು ಅವನು ಬಲ್ಲನು. 36 ವಾಸ್ತವದಲ್ಲಿ, “ಅವನ ಎಲುಬುಗಳಲ್ಲಿ ಒಂದೂ ಮುರಿಯಲ್ಪಡದು” ಎಂಬ ಶಾಸ್ತ್ರವಚನವು ನೆರವೇರುವಂತೆ ಇದೆಲ್ಲ ಸಂಭವಿಸಿತು. 37 ಮತ್ತು ಇನ್ನೊಂದು ಶಾಸ್ತ್ರವಚನವು, “ಅವರು ತಾವು ಇರಿದವನನ್ನು ನೋಡುವರು” ಎಂದು ಹೇಳುತ್ತದೆ.
38 ಇದಾದ ಬಳಿಕ, ಯೆಹೂದ್ಯರ ಭಯದಿಂದ ರಹಸ್ಯವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗಲು ಅನುಮತಿಕೊಡುವಂತೆ ಪಿಲಾತನನ್ನು ಕೇಳಿಕೊಂಡನು. ಪಿಲಾತನು ಅವನಿಗೆ ಅನುಮತಿಕೊಟ್ಟನು. ಆದುದರಿಂದ ಅವನು ಬಂದು ದೇಹವನ್ನು ತೆಗೆದುಕೊಂಡು ಹೋದನು. 39 ಮೊದಲಬಾರಿ ರಾತ್ರಿವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ಸುಮಾರು ಮೂವತ್ತೆರಡು ಕಿಲೊಗ್ರಾಮ್ಗಳಷ್ಟು ರಕ್ತಬೋಳ ಅಗರುಗಳನ್ನು ಕಲಸಿದ ಮಿಶ್ರಣವನ್ನು ತೆಗೆದುಕೊಂಡು ಅಲ್ಲಿಗೆ ಬಂದನು. 40 ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಣಿಡಲಿಕ್ಕಾಗಿ ಸಿದ್ಧತೆಯನ್ನು ಮಾಡುವ ಪದ್ಧತಿಯ ಪ್ರಕಾರವೇ ಅದನ್ನು ಸುಗಂಧದ್ರವ್ಯಗಳೊಂದಿಗೆ ನಾರುಪಟ್ಟಿಯಲ್ಲಿ ಸುತ್ತಿದರು. 41 ಪ್ರಾಸಂಗಿಕವಾಗಿ, ಅವನು ಶೂಲಕ್ಕೇರಿಸಲ್ಪಟ್ಟಿದ್ದ ಸ್ಥಳದಲ್ಲಿ ಒಂದು ತೋಟವಿತ್ತು; ಆ ತೋಟದಲ್ಲಿ ಒಂದು ಹೊಸತಾದ ಸ್ಮರಣೆಯ ಸಮಾಧಿಯಿತ್ತು ಮತ್ತು ಇಷ್ಟರ ತನಕ ಅದರಲ್ಲಿ ಯಾರನ್ನೂ ಇಟ್ಟಿರಲಿಲ್ಲ. 42 ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾಗಿದ್ದುದರಿಂದಲೂ ಆ ಸ್ಮರಣೆಯ ಸಮಾಧಿಯು ಹತ್ತಿರದಲ್ಲಿ ಇದ್ದುದರಿಂದಲೂ ಅವರು ಯೇಸುವನ್ನು ಅಲ್ಲೇ ಇಟ್ಟರು.