ಮತ್ತಾಯ
26 ಯೇಸು ಈ ಮಾತುಗಳನ್ನೆಲ್ಲ ಹೇಳಿ ಮುಗಿಸಿದ ಬಳಿಕ ತನ್ನ ಶಿಷ್ಯರಿಗೆ, 2 “ಇಂದಿಗೆ ಎರಡು ದಿನಗಳ ಬಳಿಕ ಪಸ್ಕಹಬ್ಬವು ಬರುತ್ತದೆ ಎಂಬುದು ನಿಮಗೆ ತಿಳಿದಿದೆ; ಆಗ ಮನುಷ್ಯಕುಮಾರನನ್ನು ಶೂಲಕ್ಕೇರಿಸಲಿಕ್ಕಾಗಿ ಒಪ್ಪಿಸಲಾಗುವುದು” ಎಂದು ಹೇಳಿದನು.
3 ಮುಖ್ಯ ಯಾಜಕರೂ ಜನರ ಹಿರೀಪುರುಷರೂ ಕಾಯಫನೆಂಬ ಮಹಾ ಯಾಜಕನ ಅಂಗಳದಲ್ಲಿ ಕೂಡಿಬಂದು 4 ಯೇಸುವನ್ನು ಕುತಂತ್ರದಿಂದ ಹಿಡಿದು ಕೊಲ್ಲಲಿಕ್ಕಾಗಿ ಸಮಾಲೋಚನೆ ನಡೆಸಿದರು. 5 ಆದರೆ ಅವರು, “ಜನರಲ್ಲಿ ದೊಂಬಿ ಏಳಬಹುದು; ಆದುದರಿಂದ ಹಬ್ಬದಲ್ಲಿ ಹಿಡಿಯುವುದು ಬೇಡ” ಎಂದು ಹೇಳುತ್ತಾ ಇದ್ದರು.
6 ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾಗಿದ್ದ ಸೀಮೋನನ ಮನೆಯಲ್ಲಿದ್ದಾಗ 7 ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸುಗಂಧ ತೈಲದ ಹಾಲುಗಲ್ಲಿನ ಭರಣಿಯನ್ನು ತೆಗೆದುಕೊಂಡು ಅವನ ಬಳಿಗೆ ಬಂದು ಅವನು ಊಟಕ್ಕೆ ಕುಳಿತುಕೊಂಡಿದ್ದಾಗ ಅದರಲ್ಲಿದ್ದ ತೈಲವನ್ನು ಅವನ ತಲೆಯ ಮೇಲೆ ಹೊಯ್ಯಲಾರಂಭಿಸಿದಳು. 8 ಇದನ್ನು ನೋಡಿ ಶಿಷ್ಯರು ಕೋಪಗೊಂಡು, “ಯಾಕೆ ಈ ರೀತಿ ಹಾಳುಮಾಡುತ್ತಿದ್ದೀ? 9 ಇದನ್ನು ಹೆಚ್ಚು ಬೆಲೆಗೆ ಮಾರಿ ಬಡವರಿಗೆ ನೀಡಬಹುದಿತ್ತಲ್ಲಾ” ಎಂದು ಹೇಳಿದರು. 10 ಯೇಸು ಇದನ್ನು ಗ್ರಹಿಸಿದವನಾಗಿ ಅವರಿಗೆ, “ನೀವು ಈ ಸ್ತ್ರೀಗೆ ಯಾಕೆ ತೊಂದರೆಕೊಡುತ್ತೀರಿ? ಅವಳು ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. 11 ಏಕೆಂದರೆ ಬಡವರು ಯಾವಾಗಲೂ ನಿಮ್ಮ ಬಳಿ ಇರುತ್ತಾರೆ; ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ. 12 ಈ ಸ್ತ್ರೀಯು ನನ್ನ ದೇಹದ ಮೇಲೆ ಸುಗಂಧ ತೈಲವನ್ನು ಹಾಕಿದಾಗ, ಹೂಣಿಡುವುದಕ್ಕಾಗಿ ನನ್ನನ್ನು ಸಿದ್ಧಪಡಿಸಲು ಹೀಗೆ ಮಾಡಿದಳು. 13 ಲೋಕದ ಸುತ್ತಲೂ ಎಲ್ಲೆಲ್ಲ ಸುವಾರ್ತೆಯು ಸಾರಲ್ಪಡುತ್ತದೋ ಅಲ್ಲೆಲ್ಲ ಈ ಸ್ತ್ರೀಯು ಮಾಡಿದ ಕಾರ್ಯವು ಸಹ ಅವಳ ನೆನಪಿಗಾಗಿ ತಿಳಿಸಲ್ಪಡುವುದು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಅಂದನು.
14 ಆ ಮೇಲೆ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದ ಇಸ್ಕರಿಯೋತ ಯೂದನೆಂಬವನು ಮುಖ್ಯ ಯಾಜಕರ ಬಳಿಗೆ ಹೋಗಿ, 15 “ನಾನು ಅವನನ್ನು ಮೋಸದಿಂದ ಹಿಡಿದುಕೊಟ್ಟರೆ ನೀವು ನನಗೇನು ಕೊಡುವಿರಿ?” ಎಂದು ಕೇಳಿದನು. ಅವರು ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡಲು ಒಪ್ಪಿಕೊಂಡರು. 16 ಅಂದಿನಿಂದ ಅವನು ಯೇಸುವನ್ನು ದ್ರೋಹದಿಂದ ಹಿಡಿದುಕೊಡುವ ಸುಸಂದರ್ಭಕ್ಕಾಗಿ ಕಾಯುತ್ತಾ ಇದ್ದನು.
17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಪಸ್ಕದ ಊಟವನ್ನು ಮಾಡುವಂತೆ ನಾವು ಎಲ್ಲಿ ಸಿದ್ಧಮಾಡಬೇಕೆನ್ನುತ್ತಿ?” ಎಂದು ಕೇಳಿದರು. 18 ಅದಕ್ಕೆ ಅವನು, “ನೀವು ಪಟ್ಟಣದೊಳಗೆ ಇಂಥವನ ಬಳಿಗೆ ಹೋಗಿ ಅವನಿಗೆ, ‘ನನ್ನ ನೇಮಿತ ಸಮಯವು ಸಮೀಪಿಸಿದೆ; ನಿನ್ನ ಮನೆಯಲ್ಲಿ ನಾನು ನನ್ನ ಶಿಷ್ಯರೊಂದಿಗೆ ಪಸ್ಕವನ್ನು ಆಚರಿಸುವೆನು’ ಎಂದು ಬೋಧಕನು ಹೇಳುತ್ತಾನೆ ಎಂದು ತಿಳಿಸಿರಿ” ಅಂದನು. 19 ಶಿಷ್ಯರು ಯೇಸು ಆಜ್ಞಾಪಿಸಿದಂತೆಯೇ ಮಾಡಿದರು ಮತ್ತು ಅವರು ಪಸ್ಕಕ್ಕಾಗಿ ಎಲ್ಲವನ್ನೂ ಸಿದ್ಧಗೊಳಿಸಿದರು.
20 ಸಂಜೆಯಾದಾಗ ಅವನು ತನ್ನ ಹನ್ನೆರಡು ಮಂದಿ ಶಿಷ್ಯರೊಂದಿಗೆ ಮೇಜಿನ ಬಳಿ ಕುಳಿತುಕೊಂಡು ಊಟಮಾಡುತ್ತಿದ್ದನು. 21 ಆಗ ಅವನು, “ನಿಮ್ಮಲ್ಲಿ ಒಬ್ಬನು ನನಗೆ ನಂಬಿಕೆ ದ್ರೋಹಮಾಡುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಅಂದನು. 22 ಅದನ್ನು ಕೇಳಿ ಶಿಷ್ಯರು ಬಹಳ ದುಃಖಿತರಾಗಿ, “ಕರ್ತನೇ, ನಾನಲ್ಲವಲ್ಲ?” ಎಂದು ಪ್ರತಿಯೊಬ್ಬರೂ ಅವನನ್ನು ಕೇಳತೊಡಗಿದರು. 23 ಆಗ ಅವನು ಅವರಿಗೆ, “ನನ್ನ ಸಂಗಡ ಬಟ್ಟಲಲ್ಲಿ ಕೈಯನ್ನು ಅದ್ದುವವನೇ ನನಗೆ ನಂಬಿಕೆ ದ್ರೋಹಮಾಡುವನು. 24 ಮನುಷ್ಯಕುಮಾರನ ವಿಷಯದಲ್ಲಿ ಬರೆಯಲ್ಪಟ್ಟಿರುವ ಪ್ರಕಾರವೇ ಅವನು ನಿಮ್ಮನ್ನು ಬಿಟ್ಟುಹೋಗುತ್ತಾನೆ ನಿಜ; ಆದರೆ ಯಾವನ ಮೂಲಕ ಮನುಷ್ಯಕುಮಾರನಿಗೆ ದ್ರೋಹವಾಗುತ್ತದೋ ಅವನ ಗತಿಯನ್ನು ಏನು ಹೇಳಲಿ! ಆ ಮನುಷ್ಯನು ಹುಟ್ಟದೇಹೋಗಿದ್ದರೆ ಅವನಿಗೆ ಎಷ್ಟೋ ಒಳ್ಳೇದಾಗಿತ್ತು” ಎಂದು ಹೇಳಿದನು. 25 ಆಗ ಅವನಿಗೆ ನಂಬಿಕೆ ದ್ರೋಹಮಾಡಲಿದ್ದ ಯೂದನು “ರಬ್ಬಿಯೇ, ನಾನಲ್ಲವಲ್ಲ?” ಎಂದು ಹೇಳಿದನು. ಅದಕ್ಕೆ ಅವನು, “ನೀನೇ ಹೇಳಿದ್ದೀ” ಎಂದನು.
26 ಶಿಷ್ಯರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅದನ್ನು ಮುರಿದು ಅವರಿಗೆ ಕೊಡುತ್ತಾ, “ತೆಗೆದುಕೊಳ್ಳಿರಿ, ತಿನ್ನಿರಿ. ಇದು ನನ್ನ ದೇಹವನ್ನು ಸೂಚಿಸುತ್ತದೆ” ಎಂದು ಹೇಳಿದನು. 27 ಅನಂತರ ಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತೆ ಸಲ್ಲಿಸಿ ಅದನ್ನು ಅವರಿಗೆ ಕೊಡುತ್ತಾ, “ನೀವೆಲ್ಲರೂ ಇದರಲ್ಲಿರುವುದನ್ನು ಕುಡಿಯಿರಿ; 28 ಏಕೆಂದರೆ ಇದು ಪಾಪಗಳ ಕ್ಷಮಾಪಣೆಗಾಗಿ ಅನೇಕರಿಗೋಸ್ಕರ ಸುರಿಸಲ್ಪಡಲಿರುವ ನನ್ನ ‘ಒಡಂಬಡಿಕೆಯ ರಕ್ತವನ್ನು’ ಸೂಚಿಸುತ್ತದೆ. 29 ನಾನು ನನ್ನ ತಂದೆಯ ರಾಜ್ಯದಲ್ಲಿ ನಿಮ್ಮೊಂದಿಗೆ ಹೊಸದಾಗಿ ದ್ರಾಕ್ಷಾಮದ್ಯವನ್ನು ಕುಡಿಯುವ ತನಕ ಇಂದಿನಿಂದ ಇನ್ನೆಂದೂ ಇದನ್ನು ಕುಡಿಯುವುದೇ ಇಲ್ಲ ಎಂದು ನಿಮಗೆ ಹೇಳುತ್ತೇನೆ” ಅಂದನು. 30 ಬಳಿಕ ಅವರು ಸ್ತುತಿಗೀತೆಗಳನ್ನು ಹಾಡಿ ಆಲೀವ್ ಮರಗಳ ಗುಡ್ಡಕ್ಕೆ ಹೋದರು.
31 ತರುವಾಯ ಯೇಸು ಅವರಿಗೆ, “ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಎಡವಲ್ಪಡುವಿರಿ, ಏಕೆಂದರೆ ‘ನಾನು ಕುರುಬನನ್ನು ಹೊಡೆಯುವೆನು ಆಗ ಮಂದೆಯ ಕುರಿಗಳು ಚೆದರಿಹೋಗುವವು’ ಎಂದು ಬರೆದಿದೆ. 32 ಆದರೆ ನಾನು ಎಬ್ಬಿಸಲ್ಪಟ್ಟ ಬಳಿಕ ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗುವೆನು” ಅಂದನು. 33 ಆಗ ಪೇತ್ರನು ಅವನಿಗೆ, “ನಿನ್ನ ವಿಷಯದಲ್ಲಿ ಬೇರೆಲ್ಲರೂ ಎಡವಿದರೂ ನಾನು ಎಂದಿಗೂ ಎಡವುವುದಿಲ್ಲ” ಎಂದು ಉತ್ತರಿಸಿದನು. 34 ಯೇಸು ಅವನಿಗೆ, “ಇದೇ ರಾತ್ರಿ ಹುಂಜವು ಕೂಗುವುದರೊಳಗೆ ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ ಎಂದು ನಿನಗೆ ನಿಜವಾಗಿ ಹೇಳುತ್ತೇನೆ” ಅಂದನು. 35 ಆಗ ಪೇತ್ರನು ಅವನಿಗೆ, “ನಾನು ನಿನ್ನೊಂದಿಗೆ ಸಾಯಬೇಕಾದರೂ ನಿನ್ನನ್ನು ಅಲ್ಲಗಳೆಯುವುದಿಲ್ಲ” ಎಂದು ಹೇಳಿದನು. ಬೇರೆ ಶಿಷ್ಯರು ಸಹ ಹಾಗೆಯೇ ಹೇಳಿದರು.
36 ಬಳಿಕ ಯೇಸು ಅವರೊಂದಿಗೆ ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದನು ಮತ್ತು ತನ್ನ ಶಿಷ್ಯರಿಗೆ, “ನೀವು ಇಲ್ಲೇ ಕುಳಿತುಕೊಂಡಿರಿ, ನಾನು ಅಲ್ಲಿಗೆ ಹೋಗಿ ಪ್ರಾರ್ಥನೆಮಾಡಿ ಬರುತ್ತೇನೆ” ಎಂದು ಹೇಳಿದನು. 37 ಅವನು ತನ್ನೊಂದಿಗೆ ಪೇತ್ರನನ್ನೂ ಜೆಬೆದಾಯನ ಇಬ್ಬರು ಪುತ್ರರನ್ನೂ ಕರೆದುಕೊಂಡು ಹೋಗುತ್ತಿದ್ದಾಗ, ಅವನು ದುಃಖಪಟ್ಟು ತೀರ ಕ್ಷೋಭೆಗೊಳಗಾದನು. 38 ಅವನು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ತೀವ್ರವಾದ ದುಃಖಕ್ಕೆ ಒಳಗಾಗಿದೆ. ಇಲ್ಲೇ ಇದ್ದು ನನ್ನೊಂದಿಗೆ ಎಚ್ಚರವಾಗಿರಿ” ಎಂದು ಹೇಳಿದನು. 39 ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಅಧೋಮುಖವಾಗಿ ಬಿದ್ದು, “ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ. ಆದರೂ ನನ್ನ ಚಿತ್ತದಂತಲ್ಲ ನಿನ್ನ ಚಿತ್ತದಂತೆಯೇ ಆಗಲಿ” ಎಂದು ಹೇಳುತ್ತಾ ಪ್ರಾರ್ಥಿಸಿದನು.
40 ಅವನು ಶಿಷ್ಯರ ಬಳಿಗೆ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡು ಪೇತ್ರನಿಗೆ, “ನಿಮಗೆ ಒಂದು ತಾಸಾದರೂ ನನ್ನೊಂದಿಗೆ ಎಚ್ಚರವಿರಲು ಆಗಲಿಲ್ಲವೆ? 41 ನೀವು ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ. ಹೃದಯವು ಸಿದ್ಧವಾಗಿದೆ ನಿಜ, ಆದರೆ ದೇಹಕ್ಕೆ ಬಲ ಸಾಲದು” ಎಂದು ಹೇಳಿದನು. 42 ಅವನು ಪುನಃ ಎರಡನೆಯ ಸಲ ಹೋಗಿ, “ನನ್ನ ತಂದೆಯೇ, ನಾನು ಕುಡಿದ ಹೊರತು ಇದು ನನ್ನನ್ನು ಬಿಟ್ಟುಹೋಗಬಾರದಾಗಿರುವಲ್ಲಿ ನಿನ್ನ ಚಿತ್ತದಂತೆಯೇ ಆಗಲಿ” ಎಂದು ಪ್ರಾರ್ಥಿಸಿದನು. 43 ಅವನು ತಿರಿಗಿ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡನು. ಏಕೆಂದರೆ ಅವರ ಕಣ್ಣುಗಳು ತುಂಬ ಭಾರವಾಗಿದ್ದವು. 44 ಅವನು ಅವರನ್ನು ಬಿಟ್ಟುಹೋಗಿ ಪುನಃ ಅದೇ ಮಾತುಗಳಲ್ಲಿ ಮೂರನೆಯ ಸಾರಿ ಪ್ರಾರ್ಥಿಸಿದನು. 45 ಬಳಿಕ ಶಿಷ್ಯರ ಬಳಿಗೆ ಬಂದು, “ಇಂತಹ ಸಮಯದಲ್ಲಿ ನೀವು ನಿದ್ರಿಸಿ ವಿಶ್ರಾಂತಿಯನ್ನು ಪಡೆಯುತ್ತಿದ್ದೀರೋ? ಇಗೋ, ಮನುಷ್ಯಕುಮಾರನು ಪಾಪಿಗಳ ಕೈಗೆ ದ್ರೋಹದಿಂದ ಒಪ್ಪಿಸಲ್ಪಡುವ ಗಳಿಗೆ ಸಮೀಪಿಸಿದೆ. 46 ಏಳಿರಿ ಹೋಗೋಣ. ಇಗೋ, ನನಗೆ ದ್ರೋಹಮಾಡುವವನು ಹತ್ತಿರಕ್ಕೆ ಬಂದಿದ್ದಾನೆ” ಎಂದು ಹೇಳಿದನು. 47 ಅವನು ಇನ್ನೂ ಮಾತಾಡುತ್ತಿರುವಾಗಲೇ ಆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು; ಮುಖ್ಯ ಯಾಜಕರಿಂದಲೂ ಜನರ ಹಿರೀಪುರುಷರಿಂದಲೂ ಕಳುಹಿಸಲ್ಪಟ್ಟ ಜನರ ಒಂದು ದೊಡ್ಡ ಗುಂಪು ಕತ್ತಿದೊಣ್ಣೆಗಳನ್ನು ಹಿಡಿದುಕೊಂಡು ಅವನೊಂದಿಗೆ ಬಂತು.
48 ಅವನಿಗೆ ದ್ರೋಹಮಾಡುವವನು ಅವರಿಗೆ ಒಂದು ಗುರುತನ್ನು ಕೊಟ್ಟು, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆ ಮನುಷ್ಯನು; ಅವನನ್ನು ಬಂಧಿಸಿರಿ” ಎಂದು ಹೇಳಿದ್ದನು. 49 ಅವನು ನೇರವಾಗಿ ಯೇಸುವಿನ ಬಳಿಗೆ ಹೋಗಿ, “ರಬ್ಬೀ ನಮಸ್ಕಾರ” ಎಂದು ಹೇಳಿ ಅವನಿಗೆ ಕೋಮಲವಾಗಿ ಮುದ್ದಿಟ್ಟನು. 50 ಆಗ ಯೇಸು ಅವನಿಗೆ, “ಗೆಳೆಯ, ನೀನು ಯಾವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೀ?” ಎಂದು ಕೇಳಿದನು. ಆಗ ಅವರು ಮುಂದೆ ಬಂದು ಯೇಸುವನ್ನು ಹಿಡಿದು ಬಂಧಿಸಿದರು. 51 ಆದರೆ ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ತನ್ನ ಕೈಚಾಚಿ ಕತ್ತಿಯನ್ನು ತೆಗೆದು ಮಹಾ ಯಾಜಕನ ಆಳಿಗೆ ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು. 52 ಆಗ ಯೇಸು ಅವನಿಗೆ, “ನಿನ್ನ ಕತ್ತಿಯನ್ನು ಒರೆಗೆ ಸೇರಿಸು; ಕತ್ತಿಯನ್ನು ಹಿಡಿಯುವವರೆಲ್ಲರು ಕತ್ತಿಯಿಂದಲೇ ನಾಶವಾಗುವರು. 53 ಇದೇ ಕ್ಷಣದಲ್ಲಿ ಹನ್ನೆರಡು ಗಣಗಳಿಗಿಂತಲೂ ಹೆಚ್ಚು ದೇವದೂತರನ್ನು ಕಳುಹಿಸಿಕೊಡುವಂತೆ ನನ್ನ ತಂದೆಯನ್ನು ನಾನು ಕೇಳಿಕೊಳ್ಳಲಾರೆನೆಂದು ನೀನು ನೆನಸುತ್ತೀಯೊ? 54 ಹಾಗಿರುವಲ್ಲಿ, ಇದು ಈ ರೀತಿಯಲ್ಲಿಯೇ ನಡೆಯಬೇಕು ಎಂಬ ಶಾಸ್ತ್ರಗ್ರಂಥದ ಮಾತುಗಳು ನೆರವೇರುವುದು ಹೇಗೆ?” ಎಂದನು. 55 ಆ ಗಳಿಗೆಯಲ್ಲಿ ಯೇಸು ಜನರ ಗುಂಪುಗಳಿಗೆ, “ಒಬ್ಬ ಕಳ್ಳನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ಹಿಡಿದುಕೊಂಡು ನನ್ನನ್ನು ಬಂಧಿಸುವುದಕ್ಕೆ ಬಂದಿದ್ದೀರೊ? ನಾನು ಪ್ರತಿದಿನವೂ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಬಂಧಿಸಲಿಲ್ಲ. 56 ಆದರೆ ಪ್ರವಾದಿಗಳು ಬರೆದ ಶಾಸ್ತ್ರಗ್ರಂಥವು ನೆರವೇರುವಂತೆ ಇದೆಲ್ಲಾ ಸಂಭವಿಸಿದೆ” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಅವನನ್ನು ಬಿಟ್ಟು ಓಡಿಹೋದರು.
57 ಯೇಸುವನ್ನು ಬಂಧಿಸಿದವರು ಅವನನ್ನು ಮಹಾ ಯಾಜಕನಾದ ಕಾಯಫನ ಬಳಿಗೆ ತೆಗೆದುಕೊಂಡು ಹೋದರು; ಅಲ್ಲಿ ಶಾಸ್ತ್ರಿಗಳೂ ಹಿರೀಪುರುಷರೂ ಕೂಡಿಬಂದಿದ್ದರು. 58 ಪೇತ್ರನಾದರೋ ದೂರದಿಂದ ಅವನನ್ನು ಹಿಂಬಾಲಿಸುತ್ತಾ ಮಹಾ ಯಾಜಕನ ಅಂಗಳದ ವರೆಗೂ ಬಂದನು ಮತ್ತು ಒಳಗೆ ಹೋಗಿ ಪರಿಣಾಮ ಏನಾಗುತ್ತದೆಂದು ನೋಡಲಿಕ್ಕಾಗಿ ಮನೆಯಾಳುಗಳೊಂದಿಗೆ ಕುಳಿತುಕೊಂಡಿದ್ದನು.
59 ಈ ಮಧ್ಯೆ ಮುಖ್ಯ ಯಾಜಕರೂ ಹಿರೀಸಭೆಯವರೆಲ್ಲರೂ * ಯೇಸುವನ್ನು ಕೊಲ್ಲಿಸಲಿಕ್ಕಾಗಿ ಅವನ ವಿರುದ್ಧ ಸುಳ್ಳು ಸಾಕ್ಷಿಯನ್ನು ಹುಡುಕುತ್ತಿದ್ದರು. 60 ಅನೇಕ ಮಂದಿ ಸುಳ್ಳು ಸಾಕ್ಷಿಗಳು ಮುಂದೆ ಬಂದರೂ ಅವರಿಗೆ ಯಾವ ಸಾಕ್ಷಿಯೂ ಸಿಗಲಿಲ್ಲ. ಕೊನೆಗೆ ಇಬ್ಬರು ಮುಂದೆ ಬಂದು, 61 “ ‘ನಾನು ಈ ದೇವಾಲಯವನ್ನು ಕೆಡವಿಹಾಕಿ ಅದನ್ನು ಮೂರು ದಿನಗಳಲ್ಲಿ ಕಟ್ಟಬಲ್ಲೆ’ ಎಂದು ಇವನು ಹೇಳಿದನು” ಎಂದರು. 62 ಆಗ ಮಹಾ ಯಾಜಕನು ಎದ್ದುನಿಂತು ಅವನಿಗೆ, “ನೀನು ಏನೂ ಉತ್ತರ ಕೊಡುವುದಿಲ್ಲವೊ? ನಿನ್ನ ವಿರುದ್ಧವಾಗಿ ಇವರು ಹೇಳುತ್ತಿರುವ ಸಾಕ್ಷಿ ಏನು?” ಎಂದು ಕೇಳಿದನು. 63 ಆದರೆ ಯೇಸು ಸುಮ್ಮನಿದ್ದನು. ಆದುದರಿಂದ ಮಹಾ ಯಾಜಕನು ಅವನಿಗೆ, “ಜೀವವುಳ್ಳ ದೇವರಾಣೆ, ನೀನು ದೇವರ ಮಗನಾದ ಕ್ರಿಸ್ತನೊ ಅಲ್ಲವೊ ಎಂಬುದನ್ನು ನಮಗೆ ಹೇಳು” ಎಂದನು. 64 ಯೇಸು ಅವನಿಗೆ, “ನೀನೇ ಅದನ್ನು ಹೇಳಿದಿ. ಆದರೂ ಇನ್ನುಮೇಲೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಕುಳಿತುಕೊಂಡಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು. 65 ಇದನ್ನು ಕೇಳಿ ಮಹಾ ಯಾಜಕನು ತನ್ನ ಮೇಲಂಗಿಗಳನ್ನು ಹರಿದುಕೊಂಡು, “ಇವನು ದೇವದೂಷಣೆ ಮಾಡಿದ್ದಾನೆ! ನಮಗೆ ಇದಕ್ಕಿಂತ ಹೆಚ್ಚಿನ ಸಾಕ್ಷಿಗಳು ಇನ್ನು ಏಕೆ ಬೇಕು? ಇವನು ಆಡಿದ ದೇವದೂಷಣೆಯ ಮಾತುಗಳನ್ನು ಕೇಳಿದಿರಲ್ಲಾ. 66 ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದನು. ಅದಕ್ಕೆ ಅವರು, “ಇವನು ಮರಣಕ್ಕೆ ಪಾತ್ರನಾಗಿದ್ದಾನೆ” ಎಂದು ಉತ್ತರಿಸಿದರು. 67 ಆಮೇಲೆ ಅವರು ಅವನ ಮುಖದ ಮೇಲೆ ಉಗುಳಿದರು ಮತ್ತು ತಮ್ಮ ಮುಷ್ಟಿಗಳಿಂದ ಗುದ್ದಿದರು. ಇತರರು ಅವನ ಮುಖಕ್ಕೆ ಹೊಡೆದು, 68 “ಕ್ರಿಸ್ತನೇ, ಪ್ರವಾದಿಸು. ನಿನ್ನನ್ನು ಹೊಡೆದವರು ಯಾರು?” ಎಂದರು.
69 ಇತ್ತಲಾಗಿ ಪೇತ್ರನು ಹೊರಗೆ ಅಂಗಳದಲ್ಲಿ ಕುಳಿತುಕೊಂಡಿದ್ದನು. ಒಬ್ಬ ಸೇವಕಿಯು ಅವನ ಬಳಿಗೆ ಬಂದು, “ನೀನು ಸಹ ಗಲಿಲಾಯದವನಾದ ಯೇಸುವಿನೊಂದಿಗೆ ಇದ್ದವನು” ಎಂದು ಹೇಳಿದಳು. 70 ಆದರೆ ಅವನು ಅವರೆಲ್ಲರ ಮುಂದೆ ಅದನ್ನು ಅಲ್ಲಗಳೆಯುತ್ತಾ, “ನೀನು ಏನು ಹೇಳುತ್ತಿದ್ದೀಯೋ ಅದು ನನಗೆ ಅರ್ಥವಾಗುತ್ತಿಲ್ಲ” ಎಂದನು. 71 ಅವನು ಮುಖ್ಯದ್ವಾರದ ಬಳಿಗೆ ಹೋದಾಗ ಇನ್ನೊಬ್ಬ ಹುಡುಗಿಯು ಅವನನ್ನು ನೋಡಿ ಅಲ್ಲಿದ್ದವರಿಗೆ, “ಇವನು ನಜರೇತಿನವನಾದ ಯೇಸುವಿನೊಂದಿಗೆ ಇದ್ದನು” ಎಂದು ಹೇಳಿದಳು. 72 ಅವನು ಪುನಃ ಅದನ್ನು ಅಲ್ಲಗಳೆದು, “ಆ ಮನುಷ್ಯನನ್ನು ನಾನರಿಯೆ” ಎಂದು ಆಣೆಯಿಟ್ಟು ಹೇಳಿದನು. 73 ಸ್ವಲ್ಪ ಸಮಯದ ನಂತರ ಸುತ್ತಲೂ ನಿಂತಿದ್ದವರು ಪೇತ್ರನ ಬಳಿಗೆ ಬಂದು, “ಖಂಡಿತವಾಗಿ ನೀನು ಸಹ ಅವರಲ್ಲಿ ಒಬ್ಬನು; ನಿನ್ನ ಭಾಷೆಯೇ ಅದನ್ನು ತೋರಿಸಿಕೊಡುತ್ತದೆ” ಎಂದು ಹೇಳಿದರು. 74 ಆಗ ಅವನು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಆರಂಭಿಸಿ, “ಆ ಮನುಷ್ಯನನ್ನು ನಾನರಿಯೆ” ಎಂದನು. ಆ ಕೂಡಲೆ ಹುಂಜವು ಕೂಗಿತು. 75 ಆಗ ಪೇತ್ರನು, “ಹುಂಜವು ಕೂಗುವುದರೊಳಗೆ ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ” ಎಂದು ಯೇಸು ತನಗೆ ಹೇಳಿದ್ದನ್ನು ನೆನಪಿಸಿಕೊಂಡು ಹೊರಗೆ ಹೋಗಿ ಬಹಳವಾಗಿ ಅತ್ತನು.