ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಯೋಬ 1: 1-42: 17
  • ಯೋಬ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೋಬ
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೋಬ

ಯೋಬ

1 ಊಚ್‌ ದೇಶದಲ್ಲಿ ಯೋಬ*+ ಅನ್ನೋ ಮನುಷ್ಯ ಇದ್ದ. ಅವನು ನೀತಿವಂತನಾಗಿದ್ದ, ದೇವರಿಗೆ ನಿಯತ್ತಾಗಿದ್ದ.*+ ದೇವರಿಗೆ ಭಯಪಡ್ತಿದ್ದ, ಕೆಟ್ಟದು ಮಾಡ್ತಿರಲಿಲ್ಲ.+ 2 ಅವನಿಗೆ ಏಳು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳು ಇದ್ರು. 3 ಅವನ ಹತ್ರ 7,000 ಕುರಿ, 3,000 ಒಂಟೆ, 1,000 ದನ,* 500 ಕತ್ತೆ* ಇತ್ತು. ತುಂಬ ಕೆಲಸದವರು ಇದ್ರು. ಅವನು ಪೂರ್ವ ದಿಕ್ಕಲ್ಲಿ ವಾಸಿಸ್ತಿದ್ದ ಜನ್ರಲ್ಲಿ ಶ್ರೀಮಂತನಾಗಿದ್ದ, ಜನ್ರೆಲ್ಲ ಅವನಿಗೆ ತುಂಬ ಗೌರವ ಕೊಡ್ತಿದ್ರು.

4 ಅವನ ಗಂಡು ಮಕ್ಕಳು ಒಬ್ಬರಾದ ಮೇಲೆ ಒಬ್ರು ತಮ್ಮ ಮನೆಯಲ್ಲಿ ಔತಣ ಮಾಡಿಸ್ತಿದ್ರು. ತಮ್ಮ ಮೂವರು ತಂಗಿಯರನ್ನ* ಕರೆದು ಒಟ್ಟಿಗೆ ಊಟ ಮಾಡ್ತಿದ್ರು. 5 ಎಲ್ರ ಸರದಿ ಮುಗಿದ ಮೇಲೆ ಯೋಬ “ಒಂದು ವೇಳೆ ನನ್ನ ಮಕ್ಕಳು ಪಾಪ ಮಾಡಿರಬಹುದು, ಮನಸ್ಸಲ್ಲೇ ದೇವ್ರ ಬಗ್ಗೆ ತಪ್ಪಾಗಿ ಮಾತಾಡಿರಬಹುದು” ಅಂದ್ಕೊಂಡು ಅವ್ರನ್ನ ಶುದ್ಧೀಕರಿಸ್ತಿದ್ದ. ಬೆಳಿಗ್ಗೆ ಬೇಗ ಎದ್ದು ತನ್ನ ಮಕ್ಕಳಲ್ಲಿ ಪ್ರತಿಯೊಬ್ರಿಗಾಗಿ ಸರ್ವಾಂಗಹೋಮ ಬಲಿಗಳನ್ನ+ ಅರ್ಪಿಸ್ತಿದ್ದ. ಹೀಗೆ ಯೋಬ ಪ್ರತಿ ಸಲ ಮಾಡ್ತಿದ್ದ.+

6 ದೇವದೂತರು*+ ದೇವರ ಮುಂದೆ ಸೇರಿಬರಬೇಕಾದ ದಿನ ಬಂತು. ಅವರು ಯೆಹೋವನ ಮುಂದೆ ಸೇರಿ ಬಂದಾಗ+ ಸೈತಾನ+ ಕೂಡ ಅಲ್ಲಿ ಬಂದ.+

7 ಆಗ ಯೆಹೋವ ಸೈತಾನನಿಗೆ “ನೀನು ಎಲ್ಲಿಂದ ಬಂದೆ?” ಅಂತ ಕೇಳಿದನು. ಅದಕ್ಕೆ ಸೈತಾನ ಯೆಹೋವನಿಗೆ “ನಾನು ಭೂಮಿ ಮೇಲೆ ಸುತ್ತಾಡ್ತಾ ಬಂದೆ”+ ಅಂದ. 8 ಯೆಹೋವ ಸೈತಾನನಿಗೆ “ನನ್ನ ಸೇವಕನಾದ ಯೋಬನನ್ನ ಗಮನಿಸಿದ್ಯಾ? ಅವನ ಹಾಗೆ ಭೂಮಿ ಮೇಲೆ ಬೇರೆ ಯಾರೂ ಇಲ್ಲ. ಅವನು ನೀತಿವಂತ, ಅವನಲ್ಲಿ ಯಾವುದೇ ತಪ್ಪು ಇಲ್ಲ.*+ ಅವನು ನನಗೆ ಭಯಪಡ್ತಾನೆ, ಕೆಟ್ಟ ಕೆಲಸ ಮಾಡಲ್ಲ” ಅಂದನು. 9 ಅದಕ್ಕೆ ಸೈತಾನ ಯೆಹೋವನಿಗೆ “ಯೋಬ ಲಾಭ ಇಲ್ಲದೆ ದೇವರಿಗೆ ಭಯಪಡ್ತಾನಾ?+ 10 ನೀನು ಅವನನ್ನ, ಅವನ ಮನೆಯನ್ನ ಅವನಿಗಿರೋ ಎಲ್ಲವನ್ನ ಬೇಲಿ ಹಾಕಿ ಕಾಪಾಡ್ತಾ ಇದ್ದೀಯಲ್ಲಾ.+ ಅವನು ಮಾಡೋ ಎಲ್ಲ ಕೆಲಸಗಳನ್ನ ಆಶೀರ್ವದಿಸ್ತಾ ಇದ್ದೀಯ.+ ದೇಶದಲ್ಲೆಲ್ಲಾ ಅವನ ಪ್ರಾಣಿಗಳೇ ತುಂಬಿವೆ. 11 ನಿನ್ನ ಕೈಚಾಚಿ ಅವನಿಗೆ ಇರೋದನ್ನೆಲ್ಲ ಕಿತ್ಕೋ. ಆಗ ಎಲ್ರ ಮುಂದೆ ನಿಂಗೆ ಶಾಪ ಹಾಕ್ತಾನಾ ಇಲ್ವಾ ಅಂತ ನೋಡು” ಅಂದ. 12 ಅದಕ್ಕೆ ಯೆಹೋವ ಸೈತಾನನಿಗೆ “ನೋಡು! ಅವನ ಹತ್ರ ಇರೋದೆಲ್ಲ ಈಗ ನಿನ್ನ ಕೈಯಲ್ಲಿದೆ. ಆದ್ರೆ ಅವನನ್ನ ಮಾತ್ರ ನೀನು ಮುಟ್ಟಬಾರದು!” ಅಂದನು. ಆಗ ಸೈತಾನ ಯೆಹೋವನ ಸನ್ನಿಧಿಯಿಂದ ಹೋದ.+

13 ಒಂದಿನ ಯೋಬನ ಎಲ್ಲ ಮಕ್ಕಳು ದೊಡ್ಡವನ ಮನೇಲಿ ಊಟಮಾಡ್ತಾ ದ್ರಾಕ್ಷಾಮದ್ಯ ಕುಡಿತಾ ಇದ್ರು.+ 14 ಆಗ ಯೋಬನ ಹತ್ರ ಒಬ್ಬ ಸೇವಕ ಬಂದು “ಎತ್ತುಗಳು ಹೊಲ ಊಳ್ತಾ ಇತ್ತು, ಅಲ್ಲೇ ಪಕ್ಕದಲ್ಲಿ ಕತ್ತೆಗಳು ಮೇಯ್ತಿತ್ತು. 15 ಆಗ ಇದ್ದಕ್ಕಿದ್ದ ಹಾಗೇ ಶೆಬದವರು ದಾಳಿ ಮಾಡಿ ಸೇವಕರನ್ನ ಕೊಂದು ಹಾಕಿ ದನಕತ್ತೆಗಳನ್ನೆಲ್ಲ ತಗೊಂಡು ಹೋದ್ರು. ನಾನೊಬ್ಬನೇ ತಪ್ಪಿಸ್ಕೊಂಡೆ. ಇದನ್ನೆಲ್ಲ ನಿನಗೆ ಹೇಳೋಕೆ ಬಂದೆ” ಅಂದ.

16 ಅವನು ಹೇಳಿ ಮುಗಿಸೋ ಮುಂಚೆನೇ ಇನ್ನೊಬ್ಬ ಬಂದು “ದೇವರು ಕಳಿಸಿದ ಬೆಂಕಿ* ಆಕಾಶದಿಂದ ಬಿದ್ದು ಕುರಿಗಳನ್ನ, ಸೇವಕರನ್ನ ಸುಟ್ಟುಬಿಡ್ತು. ಎಲ್ಲಾ ಸುಟ್ಟು ಬೂದಿ ಆಯ್ತು. ನಾನೊಬ್ಬನೇ ಉಳ್ಕೊಂಡೆ. ಇದನ್ನೆಲ್ಲ ಹೇಳೋಕೆ ಬಂದೆ” ಅಂದ.

17 ಅವನು ಹೇಳಿ ಮುಗಿಸೋ ಮುಂಚೆನೇ ಇನ್ನೊಬ್ಬ ಬಂದು “ಕಸ್ದೀಯರು+ ಮೂರು ಗುಂಪಾಗಿ ಬಂದು ಒಂಟೆಗಳ ಮೇಲೆ ದಾಳಿ ಮಾಡಿ ಅವುಗಳನ್ನ ತಗೊಂಡು ಹೋದ್ರು. ಸೇವಕರನ್ನ ಕತ್ತಿಯಿಂದ ಕೊಂದು ಹಾಕಿದ್ರು. ನಾನೊಬ್ಬನೇ ತಪ್ಪಿಸ್ಕೊಂಡೆ. ನಿನಗೆ ಹೇಳೋಕೆ ಬಂದೆ” ಅಂದ.

18 ಅವನು ಹೇಳಿ ಮುಗಿಸೋ ಮುಂಚೆನೇ ಇನ್ನೊಬ್ಬ ಬಂದು “ನಿನ್ನ ಮಕ್ಕಳು ದೊಡ್ಡವನ ಮನೇಲಿ ಊಟಮಾಡ್ತಾ ದ್ರಾಕ್ಷಾಮದ್ಯ ಕುಡಿತಿದ್ರು. 19 ತಕ್ಷಣ ಕಾಡಿಂದ* ಬಿರುಗಾಳಿ ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿತು. ಮನೆ ಕುಸಿದು ನಿನ್ನ ಮಕ್ಕಳ ಮೇಲೆ ಬಿತ್ತು, ಅವ್ರೆಲ್ಲ ಸತ್ತು ಹೋದ್ರು. ನನ್ನೊಬ್ಬನ ಜೀವ ಮಾತ್ರ ಉಳಿತು. ಇದನ್ನೆಲ್ಲ ಹೇಳೋಕೆ ಬಂದೆ” ಅಂದ.

20 ಆ ವಿಷ್ಯ ಕೇಳಿ ಯೋಬ ಎದ್ದು ತನ್ನ ಬಟ್ಟೆ ಹರ್ಕೊಂಡು ತಲೆ ಬೋಳಿಸ್ಕೊಂಡ. ಆಮೇಲೆ ನೆಲದ ಮೇಲೆ ಬಿದ್ದು ದೇವರಿಗೆ ನಮಸ್ಕಾರ ಮಾಡಿ 21 ಹೀಗಂದ:

“ನಾನು ಅಮ್ಮನ ಹೊಟ್ಟೆಯಿಂದ ಬಂದಾಗ ಏನೂ ತಗೊಂಡು ಬರಲಿಲ್ಲ,

ಹೋಗುವಾಗ್ಲೂ ಏನೂ ತಗೊಂಡು ಹೋಗಲ್ಲ.+

ಯೆಹೋವನೇ ಕೊಟ್ಟನು,+ ಯೆಹೋವನೇ ತಗೊಂಡನು.

ಯೆಹೋವನ ಹೆಸ್ರಿಗೆ ಯಾವಾಗ್ಲೂ ಹೊಗಳಿಕೆ ಸಿಗ್ಲಿ.”

22 ಇಷ್ಟೆಲ್ಲಾ ಆದ್ರೂ ಯೋಬ ಪಾಪ ಮಾಡಲಿಲ್ಲ, ದೇವರು ಕೆಟ್ಟದು ಮಾಡಿದ್ದಾನೆ ಅಂತ ದೂರಲಿಲ್ಲ.

2 ಆಮೇಲೆ ದೇವದೂತರು*+ ಮತ್ತೆ ಸೇರಿಬರಬೇಕಾದ ದಿನ ಬಂತು. ಅವರು ಯೆಹೋವನ ಮುಂದೆ ಸೇರಿಬಂದಾಗ+ ಸೈತಾನ ಕೂಡ ಯೆಹೋವನ ಮುಂದೆ ಬಂದು ನಿಂತ.+

2 ಆಗ ಯೆಹೋವ ಸೈತಾನನಿಗೆ “ಎಲ್ಲಿಂದ ಬಂದೆ?” ಅಂತ ಕೇಳಿದನು. ಅದಕ್ಕೆ ಸೈತಾನ ಯೆಹೋವನಿಗೆ “ನಾನು ಭೂಮಿ ಮೇಲೆ ಅಲ್ಲಿ ಇಲ್ಲಿ ಸುತ್ತಾಡ್ತಾ ಬಂದೆ”+ ಅಂದ. 3 ಯೆಹೋವ ಸೈತಾನನಿಗೆ “ನನ್ನ ಸೇವಕನಾದ ಯೋಬನನ್ನ ಗಮನಿಸಿದ್ಯಾ? ಅವನ ಹಾಗೆ ಭೂಮಿ ಮೇಲೆ ಬೇರೆ ಯಾರೂ ಇಲ್ಲ. ಅವನು ನೀತಿವಂತ, ಅವನಲ್ಲಿ ಯಾವುದೇ ತಪ್ಪು ಇಲ್ಲ.*+ ಅವನು ನನಗೆ ಭಯಪಡ್ತಾನೆ, ಕೆಟ್ಟ ಕೆಲಸ ಮಾಡಲ್ಲ. ಅವನನ್ನ ನಾಶ ಮಾಡೋ ಹಾಗೇ ನನ್ನನ್ನ ಪ್ರಚೋದಿಸೋಕೆ ನೀನು ಪ್ರಯತ್ನಿಸಿದೆ.+ ಆದ್ರೂ ಅವನು ತನ್ನ ನಿಷ್ಠೆಯನ್ನ ಸ್ವಲ್ಪನೂ ಬಿಡಲಿಲ್ಲ”+ ಅಂದನು. 4 ಅದಕ್ಕೆ ಸೈತಾನ ಯೆಹೋವನಿಗೆ “ಒಬ್ಬ ಮನುಷ್ಯ ತನ್ನ ಜೀವ ಹೋಗುತ್ತೆ* ಅನ್ನುವಾಗ ಪ್ರಾಣ ಉಳಿಸ್ಕೊಳ್ಳೋಕೆ ತನ್ನ ಹತ್ರ ಇರೋದನ್ನೆಲ್ಲ ಕೊಟ್ಟುಬಿಡ್ತಾನೆ. 5 ನೀನು ಕೈಚಾಚಿ ಅವನ ದೇಹಕ್ಕೆ* ಏನಾದ್ರೂ ಮಾಡು. ಆಗ ಅವನು ಎಲ್ರ ಮುಂದೆ ನಿಂಗೆ ಶಾಪ ಹಾಕ್ತಾನಾ ಇಲ್ವಾ ಅಂತ ನೋಡು”+ ಅಂದ.

6 ಆಗ ಯೆಹೋವ ಸೈತಾನನಿಗೆ “ನೋಡು, ಅವನು ನಿನ್ನ ಕೈಯಲ್ಲಿ ಇದ್ದಾನೆ. ಅವನ ಜೀವ ಮಾತ್ರ ತೆಗಿಬೇಡ” ಅಂದನು. 7 ಆಗ ಸೈತಾನ ಯೆಹೋವನ ಸನ್ನಿಧಿಯಿಂದ ಹೋಗಿ ಯೋಬನಿಗೆ ಕಾಲಿಂದ ತಲೆ ತನಕ ದೇಹದಲ್ಲೆಲ್ಲ ಹುಣ್ಣು ಬರೋ ಹಾಗೇ ಮಾಡಿದ. ಇದ್ರಿಂದ ಯೋಬ ನೋವಿಂದ ನರಳಿದ.+ 8 ಬೂದಿಯಲ್ಲಿ ಕೂತ್ಕೊಂಡು,+ ಮಡಿಕೆ ಚೂರಿಂದ ಮೈಯನ್ನ ಕೆರ್ಕೊಳ್ತಿದ್ದ.

9 ಕೊನೆಗೆ ಅವನ ಹೆಂಡತಿ “ಇಷ್ಟೆಲ್ಲ ಆದ್ರೂ ನೀನು ದೇವರಿಗೆ ನಿಷ್ಠೆ ಕಾಪಾಡ್ಕೊಳ್ಳಬೇಕು ಅಂತ ಇದ್ದೀಯಾ? ದೇವ್ರಿಗೆ ಶಾಪ ಹಾಕಿ ಸತ್ತುಹೋಗು!” ಅಂದಳು. 10 ಆಗ ಅವನು “ನೀನೇನ್‌ ಮಾತಾಡ್ತಾ ಇದ್ದೀಯಾ? ತಲೆ ಕೆಟ್ಟವಳ ತರ ಮಾತಾಡಬೇಡ. ಸತ್ಯ ದೇವ್ರಿಂದ ನಾವು ಒಳ್ಳೇದನ್ನ ಮಾತ್ರ ಸ್ವೀಕರಿಸಬೇಕಾ? ಕೆಟ್ಟದ್ದನ್ನ ಸ್ವೀಕರಿಸಬಾರದಾ?”+ ಅಂದ. ಇಷ್ಟೆಲ್ಲಾ ಆದ್ರೂ ದೇವರ ವಿರುದ್ಧ ಒಂದೇ ಒಂದು ಮಾತು ಕೂಡ ಅವನ ಬಾಯಿಂದ ಬರಲಿಲ್ಲ.+

11 ಯೋಬನಿಗೆ ಬಂದ ಎಲ್ಲ ಕಷ್ಟಗಳ ಬಗ್ಗೆ ಅವನ ಮೂವರು ಸ್ನೇಹಿತರು* ಕೇಳಿಸ್ಕೊಂಡ್ರು. ಅವರು ಯಾರಂದ್ರೆ ತೇಮಾನ್ಯನಾದ ಎಲೀಫಜ,+ ಶೂಹ್ಯನಾದ+ ಬಿಲ್ದದ,+ ನಾಮಾಥ್ಯನಾದ ಚೋಫರ.+ ಈ ಮೂವರು ಯೋಬನನ್ನ ನೋಡ್ಕೊಂಡು ಬರೋಕೆ ತಮ್ಮ ತಮ್ಮ ಊರಿಂದ ಹೊರಟ್ರು. ಅವರು ಒಟ್ಟಿಗೆ ಬಂದು ಯೋಬನಿಗೆ ಸಮಾಧಾನದ ಮಾತನ್ನ ಹೇಳಬೇಕು ಅಂತ ನೆನಸಿದ್ರು. 12 ದೂರದಿಂದ ನೋಡಿದಾಗ ಅವ್ರಿಗೆ ಅವನ ಗುರುತೇ ಸಿಗಲಿಲ್ಲ. ಆಗ ಅವರು ಜೋರಾಗಿ ಅಳ್ತಾ ತಮ್ಮ ಬಟ್ಟೆ ಹರ್ಕೊಂಡ್ರು, ಮಣ್ಣನ್ನ ಮೇಲಕ್ಕೆ ಬಿಸಾಡ್ತಾ ತಮ್ಮ ತಲೆ ಮೇಲೆ ಮಣ್ಣು ಹಾಕೊಂಡ್ರು.+ 13 ಆಮೇಲೆ ಅವರು ಏಳು ದಿನ ಹಗಲೂರಾತ್ರಿ ಅವನ ಜೊತೆ ನೆಲದ ಮೇಲೆ ಕೂತ್ಕೊಂಡ್ರು. ಅವನು ವಿಪರೀತ ನೋವು ಅನುಭವಿಸೋದನ್ನ ನೋಡಿ ಅವ್ರಲ್ಲಿ ಒಬ್ರ ಬಾಯಲ್ಲೂ ಒಂದು ಮಾತೂ ಬರ್ಲಿಲ್ಲ.+

3 ಇದಾದ ಮೇಲೆ ಯೋಬ ಮಾತಾಡೋಕೆ ಶುರುಮಾಡಿ ತಾನು ಹುಟ್ಟಿದ ದಿನವನ್ನ ಶಪಿಸ್ತಾ+ 2 ಹೀಗಂದ:

 3 “ನಾನು ಹುಟ್ಟಿದ ದಿನ ಹಾಳಾಗಿ ಹೋಗಬೇಕಿತ್ತು,+

‘ಗಂಡು ಮಗು ಹುಟ್ಟಿದೆ’ ಅಂತ ಹೇಳಿದ ರಾತ್ರಿ ಹಾಳಾಗಿ ಹೋಗಬೇಕಿತ್ತು.

 4 ಆ ದಿನ ಕತ್ತಲೆ ಆಗಬೇಕಿತ್ತು.

ಮೇಲಿರೋ ದೇವರು ಆ ದಿನವನ್ನ ಲೆಕ್ಕಿಸಬಾರದಿತ್ತು,

ಆ ದಿನ ಬೆಳಕು ಬರ್ಲೇ ಬಾರದಿತ್ತು.

 5 ಗಾಢ ಅಂಧಕಾರ* ಆ ದಿನವನ್ನ ಮುಚ್ಚಿ ಬಿಡಬೇಕಿತ್ತು.

ದಟ್ಟ ಮೋಡ ಕವಿಬೇಕಿತ್ತು.

ಆ ದಿನದ ಬೆಳಕು ಭಯಾನಕ ಕತ್ತಲೆಯಲ್ಲಿ ಹೂತು ಹೋಗಬೇಕಿತ್ತು.

 6 ಆ ರಾತ್ರಿ ಕತ್ತಲೆಯಲ್ಲಿ ಕಳೆದು ಹೋಗಬೇಕಿತ್ತು,+

ವರ್ಷದ ಬೇರೆ ದಿನಗಳ ಹಾಗೇ ಆ ದಿನ ಸಂತೋಷವನ್ನೇ ನೋಡಬಾರದಿತ್ತು,

ಆ ದಿನ ಯಾವ ತಿಂಗಳಲ್ಲೂ ಸೇರಬಾರದಿತ್ತು.

 7 ಆ ರಾತ್ರಿ ಬರಡಾಗಬೇಕಿತ್ತು,

ಅದ್ರಲ್ಲಿ ಹರ್ಷಾನಂದ ಕೇಳಿಬರಬಾರದಿತ್ತು.

 8 ದಿನವನ್ನ ಶಪಿಸುವವರು, ಲಿವ್ಯಾತಾನನ್ನ*+ ಎಬ್ಬಿಸಬಲ್ಲವರು

ನಾನು ಹುಟ್ಟಿದ ದಿನವನ್ನ ಶಪಿಸಬೇಕಿತ್ತು.

 9 ಆ ದಿನದ ಮುಂಜಾನೆ ಮಸುಕಲ್ಲಿ ನಕ್ಷತ್ರಗಳು ಕಪ್ಪಾಗಬೇಕಿತ್ತು,

ಆ ದಿನ ಬೆಳಕಿಗಾಗಿ ಕಾಯೋದು ವ್ಯರ್ಥ ಆಗಬೇಕಿತ್ತು,

ಸೂರ್ಯೋದಯದ ಕಿರಣಗಳನ್ನ ಆ ದಿನ ನೋಡಬಾರದಿತ್ತು.

10 ಯಾಕಂದ್ರೆ ಅದು ನನ್ನ ಅಮ್ಮನ ಗರ್ಭದ ಬಾಯನ್ನ ಮುಚ್ಚಿಬಿಡಲಿಲ್ಲ,+

ಕಷ್ಟಗಳನ್ನ ನನ್ನಿಂದ ಮರೆಮಾಡಲಿಲ್ಲ.

11 ಹುಟ್ಟಿದಾಗ್ಲೇ ನಾನು ಸಾಯಬಾರದಿತ್ತಾ?

ಅಮ್ಮನ ಗರ್ಭದಿಂದ ಹೊರಗೆ ಬಂದಾಗ್ಲೇ ನನ್ನ ಉಸಿರು ನಿಂತು ಹೋಗಬಾರದಿತ್ತಾ?+

12 ನನ್ನ ಅಮ್ಮ ನನ್ನನ್ನ ಯಾಕೆ ಮಡಿಲಲ್ಲಿ ಹಾಕೊಂಡಳು?

ಯಾಕೆ ನನಗೆ ಹಾಲು ಕೊಟ್ಟಳು?

13 ಹಾಗೆ ಮಾಡದೇ ಇದ್ದಿದ್ರೆ ಸಮಾಧಿಯಲ್ಲಿ ಚಿಂತೆಯಿಲ್ಲದೆ ಮಲಗಿರ್ತಿದ್ದೆ,+

ವಿಶ್ರಾಂತಿ ಪಡೀತಾ ನೆಮ್ಮದಿಯಿಂದ ನಿದ್ದೆ ಮಾಡ್ತಿದ್ದೆ+

14 ತಮಗಾಗಿ ಕಟ್ಕೊಂಡಿದ್ದ ಆದ್ರೆ ಈಗ ನಾಶ ಆಗಿಹೋಗಿರೋ ಕಟ್ಟಡಗಳಲ್ಲಿ*

ಆ ರಾಜರ, ಅವ್ರ ಸಲಹೆಗಾರರ ಜೊತೆ ನಿದ್ದೆ ಮಾಡ್ತಿದ್ದೆ.

15 ಮನೇಲಿ ಚಿನ್ನ ಬೆಳ್ಳಿಯನ್ನ ತುಂಬಿಸಿ ಇಟ್ಕೊಂಡಿದ್ದ

ರಾಜಕುಮಾರರ* ಜೊತೆ ಮಣ್ಣಾಗಿರ್ತಿದ್ದೆ.

16 ಗರ್ಭಸ್ರಾವವಾಗಿ ಹೋದ,

ಬೆಳಕನ್ನೇ ನೋಡದೆ ಸತ್ತುಹೋದ ಕೂಸಿನ ಹಾಗೆ ನಾನು ಇರಬಾರದಿತ್ತಾ?

17 ಸಮಾಧಿಯಲ್ಲಿ ಕೆಟ್ಟವರಿಗೆ ಕಳವಳ ಇಲ್ಲ,

ಬಳಲಿಹೋದವರೂ ಅಲ್ಲಿ ಹಾಯಾಗಿ ಇರ್ತಾರೆ.+

18 ಕೈದಿಗಳೂ ಅಲ್ಲಿ ಆರಾಮವಾಗಿ ಇರ್ತಾರೆ,

ಒತ್ತಾಯದಿಂದ ಕೆಲಸ ಮಾಡಿಸುವವರ ಸ್ವರ ಅವ್ರಿಗೆ ಕೇಳಿಸಲ್ಲ.

19 ಅಲ್ಲಿ ಶ್ರೇಷ್ಠ, ಕನಿಷ್ಠ ಅನ್ನೋ ಭೇದ ಇಲ್ಲ,+

ದಾಸನಿಗೆ ಯಜಮಾನನ ಕಟ್ಟುಪಾಡಿಲ್ಲ.

20 ಕಷ್ಟದಲ್ಲಿ ಇರುವವನಿಗೆ ದೇವರು ಬೆಳಕು ಕೊಡೋದು ಯಾಕೆ?

ನೋವಲ್ಲಿ ಬೆಂದು ನೊಂದವನನ್ನ ಬದುಕೋಕೆ ಬಿಟ್ಟಿರೋದು ಯಾಕೆ?+

21 ಸಾವಿಗಾಗಿ ಹಂಬಲಿಸುವವರಿಗೆ ಸಾವು ಯಾಕೆ ಬರೋದಿಲ್ಲ?+

ನಿಧಿನಿಕ್ಷೇಪ ಹುಡುಕೋದಕ್ಕಿಂತ ಹೆಚ್ಚಾಗಿ ಸಾವನ್ನ ಹುಡುಕಿದ್ರೂ ಯಾಕೆ ಸಿಗೋದಿಲ್ಲ?

22 ಸಮಾಧಿ ಸಿಕ್ಕಿದಾಗ ಅವರು ಖುಷಿಪಡ್ತಾರೆ,

ಸಂತೋಷದಿಂದ ಸಂಭ್ರಮಿಸ್ತಾರೆ.

23 ದಾರಿ ತಪ್ಪಿದವನ ಸುತ್ತ ದೇವರು ಯಾಕೆ ಬೇಲಿ ಹಾಕ್ತಾನೆ?+

ಅವನನ್ನ ಯಾಕೆ ಬದುಕೋಕೆ ಬಿಡ್ತಾನೆ?

24 ದುಃಖದ ನಿಟ್ಟುಸಿರೇ ನನಗೆ ಆಹಾರ,+

ಹರಿಯೋ ನೀರಿನ ಹಾಗೇ ನನ್ನ ನರಳಾಟಕ್ಕೆ+ ಕೊನೆ ಇಲ್ಲ.

25 ಯಾವುದಕ್ಕೆ ತುಂಬ ಭಯಪಡ್ತಿನೋ ಅದೇ ನನಗೆ ಬಂದಿದೆ,

ಯಾವುದಕ್ಕೆ ಹೆದರುತ್ತಿನೋ ಅದ್ರಲ್ಲೇ ಸಿಕ್ಕಿಹಾಕೊಂಡಿದ್ದೀನಿ.

26 ನನಗೆ ಶಾಂತಿ, ನೆಮ್ಮದಿ, ವಿಶ್ರಾಂತಿ ಇಲ್ಲ,

ಒಂದಾದ ಮೇಲೊಂದು ಕಷ್ಟ ಬರ್ತಾನೇ ಇದೆ.”

4 ಅದಕ್ಕೆ ತೇಮಾನ್ಯನಾದ ಎಲೀಫಜ+ ಹೀಗೆ ಹೇಳಿದ:

 2 “ನಿನ್ನತ್ರ ಮಾತಾಡಿದ್ರೆ ಕೇಳುವಷ್ಟು ತಾಳ್ಮೆ ಇದ್ಯಾ?

ಈಗ ಮಾತಾಡದೆ ಸುಮ್ಮನಿರೋಕೆ ನನ್ನಿಂದಾಗಲ್ಲ,

 3 ನಿಜ, ನೀನು ಎಷ್ಟೋ ಜನ್ರನ್ನ ತಿದ್ದುತ್ತಿದ್ದೆ,

ಕುಗ್ಗಿಹೋದವ್ರನ್ನ* ಬಲಪಡಿಸ್ತಿದ್ದೆ.

 4 ಎಡವಿ ಬೀಳೋರನ್ನ ನಿನ್ನ ಮಾತುಗಳಿಂದ ಎಬ್ಬಿಸಿ ನಿಲ್ಲಿಸ್ತಿದ್ದೆ.

ನಡುಗೋ ಮಂಡಿಗಳಿಗೆ ಶಕ್ತಿ ಕೊಡ್ತಾ ಇದ್ದೆ.

 5 ಆದ್ರೆ ನಿನಗೇ ಅಂಥ ಸ್ಥಿತಿ ಬಂದಾಗ ಸೋತು ಹೋಗಿದ್ದೀಯ,

ಅಂಥ ಕಷ್ಟ ನಿನಗೆ ಬಂದಾಗ ಎದೆಗುಂದಿ ಹೋಗಿದ್ದೀಯ.

 6 ನಿನಗೆ ದೇವರ ಮೇಲೆ ಭಯಭಕ್ತಿ ಇದ್ಯಲ್ಲಾ, ಮತ್ಯಾಕೆ ಹೆದರ್ತೀಯಾ?

ನಿಷ್ಠೆಯಿಂದ+ ನಡ್ಕೊಂಡಿದ್ದೀಯ ಅಂದ್ಮೇಲೆ ನಿನಗೆ ಒಳ್ಳೇದಾಗುತ್ತೆ ಅನ್ನೋ ಭರವಸೆ ಯಾಕಿಲ್ಲ?

 7 ದಯವಿಟ್ಟು ಸ್ವಲ್ಪ ಯೋಚ್ನೆ ಮಾಡು, ತಪ್ಪು ಮಾಡದವನು ಯಾವತ್ತಾದ್ರೂ ನಾಶ ಆಗಿದ್ದಾನಾ?

ನೀತಿವಂತ ಯಾವತ್ತಾದ್ರೂ ಸರ್ವನಾಶ ಆಗಿದ್ದಾನಾ?

 8 ಹಾನಿ ಅನ್ನೋ ಹೊಲವನ್ನ ಉಳುಮೆ ಮಾಡಿ,*

ಕೇಡು ಅನ್ನೋ ಬೀಜ ಬಿತ್ತುವವರು ಕೇಡನ್ನೇ ಕೊಯ್ಯೋದನ್ನ ನೋಡಿದ್ದೀನಿ.

 9 ಅವರು ದೇವರ ಉಸಿರಿಂದಾನೇ ನಾಶ ಆಗ್ತಾರೆ,

ಆತನ ಕೋಪ ಸಿಡಿದು ಬೂದಿಯಾಗಿ ಹೋಗ್ತಾರೆ.

10 ಸಿಂಹ ಗರ್ಜಿಸುತ್ತೆ, ಎಳೇ ಸಿಂಹ ಇನ್ನೂ ಜೋರಾಗಿ ಗರ್ಜಿಸುತ್ತೆ,

ಆದ್ರೆ ಅಂಥ ಬಲಿಷ್ಠ ಸಿಂಹಗಳ ಹಲ್ಲುಗಳು ಕೂಡ ಮುರಿದುಹೋಗುತ್ತೆ.

11 ಬೇಟೆ ಸಿಗದೆ ಸಿಂಹ ಸತ್ತುಹೋಗುತ್ತೆ,

ಸಿಂಹದ ಮರಿಗಳು ಚೆಲ್ಲಾಪಿಲ್ಲಿ ಆಗುತ್ತೆ.

12 ರಹಸ್ಯವಾಗಿ ನನ್ಗೊಂದು ವಿಷ್ಯ ಗೊತ್ತಾಯ್ತು,

ಪಿಸುಗುಟ್ಟೋ ಧ್ವನಿ ನನ್ನ ಕಿವಿಗೆ ಬಿತ್ತು.

13 ರಾತ್ರಿ ಜನ ಗಾಢ ನಿದ್ದೆ ಮಾಡ್ತಿದ್ದಾಗ ದರ್ಶನಗಳನ್ನ* ನೋಡ್ದೆ.

ಅವು ನನ್ನ ಮನಸ್ಸನ್ನ ಕದಡಿದ್ವು.

14 ಆಗ ನಾನು ಭಯಪಟ್ಟೆ,

ಭೀತಿಯಿಂದ ನನ್ನ ಮೂಳೆಗಳೆಲ್ಲ ನಡುಗ್ತು.

15 ಏನೋ ಒಂದು* ನನ್ನ ಹತ್ರದಿಂದ ದಾಟಿಹೋಯ್ತು,

ಆಗ ನನ್ನ ಮೈಮೇಲಿನ ಕೂದಲುಗಳೆಲ್ಲ ನೆಟ್ಟಗೆ ನಿಂತ್ವು.

16 ಆಮೇಲೆ ಅದು ಒಂದು ಕಡೆ ನಿಲ್ತು.

ಅದು ಏನಂತ ನನಗೆ ಗೊತ್ತಾಗಲಿಲ್ಲ.

ಒಂದು ರೂಪ ನನ್ನ ಕಣ್ಮುಂದೆ ನಿಲ್ತು,

ಎಲ್ಲೆಲ್ಲೂ ನಿಶ್ಯಬ್ದ, ಆಮೇಲೆ ಒಂದು ಧ್ವನಿ ಕೇಳಿಸ್ತು.

17 ‘ನಶಿಸಿಹೋಗೋ ಮನುಷ್ಯ ದೇವ್ರಿಗಿಂತ ಹೆಚ್ಚು ನೀತಿವಂತ ಆಗೋಕೆ ಸಾಧ್ಯನಾ?

ಒಬ್ಬ ಮನುಷ್ಯ ತನ್ನನ್ನ ಸೃಷ್ಟಿ ಮಾಡಿದವನಿಗಿಂತ ಹೆಚ್ಚು ಪರಿಶುದ್ಧ ಆಗೋಕೆ ಸಾಧ್ಯನಾ?’ ಅಂತ ಹೇಳ್ತು.

18 ನೋಡು! ದೇವರಿಗೆ ತನ್ನ ಸೇವಕರಲ್ಲಿ ನಂಬಿಕೆಯಿಲ್ಲ.

ಆತನು ದೇವದೂತರಲ್ಲೂ* ತಪ್ಪು ಕಂಡುಹಿಡಿತಾನೆ.

19 ನೆಲದ ಧೂಳಲ್ಲಿ ಅಡಿಪಾಯ ಹಾಕೊಂಡು+ ಮಣ್ಣಿನ ಮನೆಗಳಲ್ಲಿ ವಾಸಿಸೋ ಮನುಷ್ಯರನ್ನ,

ಹುಳವನ್ನ ಹೊಸಕಿಹಾಕೋ ಹಾಗೇ ಸುಲಭವಾಗಿ ಸಾಯಿಸಬಹುದು,

ಹೀಗಿರುವಾಗ ಮನುಷ್ಯರು ಯಾವ ಲೆಕ್ಕ?

20 ಬೆಳಿಗ್ಗೆಯಿಂದ ಸಂಜೆ ಒಳಗೆ ಅವರು ಪೂರ್ತಿ ಅಳಿದು ಹೋಗ್ತಾರೆ,

ಅವರು ಸರ್ವನಾಶ ಆಗ್ತಾರೆ, ಯಾರ ಗಮನಕ್ಕೂ ಬರಲ್ಲ.

21 ಹಗ್ಗ ಕಿತ್ತಾಗ ಬಿದ್ದುಹೋಗೋ ಡೇರೆ ಹಾಗೇ ಅವರಿದ್ದಾರೆ,

ವಿವೇಕ ಇಲ್ಲದ್ರಿಂದ ಅವರು ಸತ್ತು ಹೋಗ್ತಾರೆ.

5 ಸಹಾಯಕ್ಕಾಗಿ ಕೂಗು, ಯಾರಾದ್ರೂ ಬರ್ತಾರಾ ನೋಡೋಣ,

ಪವಿತ್ರ ದೇವದೂತರಲ್ಲಿ ಯಾರ ಹತ್ರ ಸಹಾಯ ಕೇಳ್ತೀಯಾ?

 2 ಮನಸ್ಸಲ್ಲಿ ಸಿಟ್ಟು ಇಟ್ಕೊಳ್ಳೋ ಮೂರ್ಖ ಅದ್ರಿಂದಾನೇ ಸಾಯ್ತಾನೆ,

ಹೊಟ್ಟೆಕಿಚ್ಚು ಪಡೋ ಮೂಢ ಅದ್ರಿಂದಾನೇ ಪ್ರಾಣ ಕಳ್ಕೊಳ್ತಾನೆ.

 3 ಮೂರ್ಖನಿಗೆ ಒಳ್ಳೇದು ಆಗೋದನ್ನ ನಾನು ನೋಡ್ದೆ,

ಆದ್ರೆ ಅಚಾನಕ್ಕಾಗಿ ಅವನ ಮನೆ ಶಾಪಕ್ಕೆ ತುತ್ತಾಗುತ್ತೆ.

 4 ಅವನ ಮಕ್ಕಳಿಗೆ ಸಂರಕ್ಷಣೆನೇ ಇಲ್ಲ,

ಪಟ್ಟಣದ ಬಾಗಿಲಲ್ಲಿ+ ಜನ್ರು ಅವ್ರನ್ನ ತುಳಿತಾರೆ, ಕಾಪಾಡೋಕೆ ಯಾರೂ ಇಲ್ಲ.

 5 ಮೂರ್ಖ ಕೊಯ್ದ ಬೆಳೆಯನ್ನ ಹಸಿದವನು ತಿಂತಾನೆ,

ಅದು ಮುಳ್ಳುಗಳ ಮಧ್ಯ ಇದ್ರೂ ತಗೊಂಡು ತಿಂತಾನೆ,

ಮೂರ್ಖನ, ಅವನ ಮಕ್ಕಳ ಆಸ್ತಿಪಾಸ್ತಿ ಬೇರೆಯವ್ರ ಪಾಲಾಗುತ್ತೆ.

 6 ಕೆಟ್ಟದು ಮಣ್ಣಿಂದ ಮೊಳೆಕೆ ಒಡೆಯಲ್ಲ,

ಕಷ್ಟ ನೆಲದಿಂದ ಚಿಗುರಲ್ಲ.

 7 ಬೆಂಕಿ ಇದ್ರೆ ಕಿಡಿಗಳು ಹಾರೇ ಹಾರುತ್ತೆ,

ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ಬಂದೇ ಬರುತ್ತೆ.

 8 ನಾನೇನಾದ್ರೂ ನಿನ್ನ ಜಾಗದಲ್ಲಿ ಇದ್ರೆ ದೇವರ ಸಹಾಯ ಕೇಳ್ತಿದ್ದೆ,

ನನ್ನ ಮೊಕದ್ದಮೆಯನ್ನ ದೇವರ ಮುಂದೆ ಇಡ್ತಿದ್ದೆ,

 9 ದೊಡ್ಡದೊಡ್ಡ ವಿಷ್ಯಗಳನ್ನ, ಅದ್ಭುತಗಳನ್ನ,

ಲೆಕ್ಕ ಇಲ್ಲದಷ್ಟು ಆಶ್ಚರ್ಯ ವಿಷ್ಯಗಳನ್ನ ಮಾಡೋ ದೇವರಿಗೆ ಅದನ್ನ ತಿಳಿಸ್ತಿದ್ದೆ.

10 ಆತನು ಭೂಮಿಗೆ ಮಳೆ ಕೊಡ್ತಾನೆ,

ಜಮೀನಿಗೆ ನೀರು ಸುರಿಸ್ತಾನೆ.

11 ಬಡವರನ್ನ ಒಳ್ಳೇ ಸ್ಥಿತಿಗೆ ತರ್ತಾನೆ,

ನೊಂದಿರುವವರನ್ನ ಮೇಲಕ್ಕೆತ್ತಿ ರಕ್ಷಿಸ್ತಾನೆ.

12 ವಂಚಕರ ಸಂಚುಗಳನ್ನ ಕೆಡಿಸ್ತಾನೆ,

ಅವ್ರ ಕೆಲಸಗಳು ಯಾವುದೂ ನಡಿಯಲ್ಲ.

13 ವಿವೇಕಿಗಳು ತಮ್ಮ ಕುತಂತ್ರಗಳಲ್ಲೇ ಸಿಕ್ಕಿಹಾಕೊಳ್ಳೋ ಹಾಗೆ ಮಾಡ್ತಾನೆ,+

ಬುದ್ಧಿವಂತರ ಉಪಾಯಗಳು ಮಣ್ಣುಮುಕ್ಕುತ್ತೆ.

14 ಅವ್ರ ಬಾಳಲ್ಲಿ ಹಗಲು ಕತ್ತಲೆ ಆಗುತ್ತೆ,

ಮಧ್ಯಾಹ್ನದಲ್ಲೇ ರಾತ್ರಿ ತರ ತಡಕಾಡ್ತಾರೆ.

15 ಕತ್ತಿಯಷ್ಟು ಹರಿತವಾದ ನಾಲಿಗೆಯಿಂದ ತಪ್ಪಿಸಿ ಜನ್ರನ್ನ ಕಾಪಾಡ್ತಾನೆ,

ಬಲಿಷ್ಠರ ಕೈಯಿಂದ ಬಡವರನ್ನ ತಪ್ಪಿಸಿ ರಕ್ಷಿಸ್ತಾನೆ.

16 ಅದಕ್ಕೇ ಬಡವರಿಗೆ ನಿರೀಕ್ಷೆ ಇದೆ,

ಅನೀತಿವಂತರ ಬಾಯಿ ಮುಚ್ಚಿಹೋಗುತ್ತೆ.

17 ನೋಡು! ದೇವರು ಯಾರನ್ನ ತಿದ್ದುತ್ತಾನೋ ಅವನು ಖುಷಿಯಾಗಿ ಇರ್ತಾನೆ,

ಹಾಗಾಗಿ ನೀನು ಸರ್ವಶಕ್ತನ ಶಿಕ್ಷೆಯನ್ನ ಬೇಡ ಅನ್ನಬೇಡ.

18 ಆತನೇ ಗಾಯ ಮಾಡ್ತಾನೆ, ಆತನೇ ಗಾಯ ಕಟ್ತಾನೆ,

ಆತನೇ ಹೊಡಿತಾನೆ, ಆತನ ಕೈಗಳೇ ವಾಸಿ ಮಾಡುತ್ತೆ.

19 ಆರು ಕಷ್ಟ ಬಂದ್ರೂ ನಿನ್ನನ್ನ ಕಾಪಾಡ್ತಾನೆ,

ಏಳನೇ ಕಷ್ಟ ಬಂದ್ರೂ ನಿನಗೇನೂ ಆಗಲ್ಲ.

20 ಬರಗಾಲದಲ್ಲಿ ನೀನು ಹಸಿವೆಯಿಂದ ಸಾಯದ ಹಾಗೆ,

ಯುದ್ಧದಲ್ಲಿ ನೀನು ಕತ್ತಿಯಿಂದ ಸಾಯದ ಹಾಗೆ ಕಾಪಾಡ್ತಾನೆ.

21 ಮಾತಿನ ಚಾಟಿಯಿಂದ+ ನಿನ್ನನ್ನ ತಪ್ಪಿಸ್ತಾನೆ.

ವಿನಾಶ ಬಂದಾಗ ನೀನು ಭಯಪಡಲ್ಲ.

22 ಕಷ್ಟ ಬಂದ್ರೂ, ಊಟ ಇಲ್ಲದಿದ್ರೂ ನೀನು ಚಿಂತೆ ಮಾಡಲ್ಲ,

ಕಾಡುಪ್ರಾಣಿಗಳಿಗೆ ನೀನು ಹೆದರಲ್ಲ.

23 ಹೊಲದಲ್ಲಿರೋ ಕಲ್ಲುಗಳು ನಿನಗೆ ಹಾನಿ ಮಾಡಲ್ಲ,*

ಕಾಡುಪ್ರಾಣಿಗಳು ನಿನಗೆ ಕೇಡು ಮಾಡಲ್ಲ.

24 ನಿನ್ನ ಡೇರೆ ಸುರಕ್ಷಿತವಾಗಿದೆ ಅಂತ ನೆಮ್ಮದಿಯಾಗಿ ಇರ್ತಿಯ,

ಹುಲ್ಲುಗಾವಲಿಗೆ ಹೋಗಿ ನೋಡಿದಾಗ ನಿನ್ನ ಪ್ರಾಣಿಗಳಲ್ಲಿ ಒಂದೂ ಕಡಿಮೆ ಆಗಿರಲ್ಲ.

25 ನಿನಗೆ ತುಂಬ ಮಕ್ಕಳು ಇರ್ತಾರೆ,

ನಿನ್ನ ವಂಶದವರು ಭೂಮಿ ಮೇಲೆ ಹುಲ್ಲಿನಷ್ಟು ಹೆಚ್ಚಾಗ್ತಾರೆ.

26 ಕೊಯ್ಲಿಗೆ ಮುಂಚೆ ತುಂಬಿ ನಿಂತಿರೋ ತೆನೆಗಳ ತರ

ನೀನು ಸಮಾಧಿ ಸೇರುವಾಗ್ಲೂ ಗಟ್ಟಿಮುಟ್ಟಾಗಿ ಇರ್ತಿಯ.

27 ನೋಡು! ಇದನ್ನೆಲ್ಲ ನಾವು ಪರಿಶೀಲಿಸಿ ತಿಳ್ಕೊಂಡ್ವಿ, ಇದೆಲ್ಲ ಸತ್ಯ.

ಹಾಗಾಗಿ ನೀನೇ ಯೋಚ್ನೆ ಮಾಡಿ ನಾವು ಹೇಳಿದ ಹಾಗೆ ಮಾಡು.”

6 ಅದಕ್ಕೆ ಯೋಬ ಹೀಗಂದ:

 2 “ನನ್ನ ನೋವನ್ನ+ ತಕ್ಕಡಿಯಲ್ಲಿ ಇಟ್ಟು ತೂಗಿ ನೋಡಿ,

ಅದ್ರ ಜೊತೆ ನನ್ನ ಕಷ್ಟವನ್ನ ಇಟ್ಟು ತೂಕ ಮಾಡಿ!

 3 ಅದು ಸಮುದ್ರದ ಮರಳಿಗಿಂತ ಭಾರ ಇದೆ.

ಅದಕ್ಕೇ ಹಿಂದೆಮುಂದೆ ಯೋಚ್ನೆ ಮಾಡದೆ ಏನೇನೋ* ಮಾತಾಡಿಬಿಟ್ಟೆ.+

 4 ಸರ್ವಶಕ್ತನ ಬಾಣಗಳು ನನ್ನನ್ನ ತಿವಿದಿವೆ,

ಅವುಗಳ ವಿಷವನ್ನ ನನ್ನ ದೇಹ ಹೀರಿಕೊಳ್ತಿದೆ,+

ದೇವರು ಕಳಿಸಿದ ಕಷ್ಟ, ಅಪಾಯಗಳು ನನ್ನನ್ನ ಸುತ್ಕೊಂಡಿವೆ,

ಹಾಗಾಗಿ ನಾನು ತುಂಬ ಹೆದರಿ ಹೋಗಿದ್ದೀನಿ.

 5 ತಿನ್ನೋಕೆ ಹುಲ್ಲು ಇದ್ದಾಗ ಕಾಡುಕತ್ತೆ+ ಕೂಗುತ್ತಾ?

ಮೇವು ಇದ್ದಾಗ ಎತ್ತು ಕೂಗುತ್ತಾ?

 6 ರುಚಿಯಿಲ್ಲದ ಊಟಕ್ಕೆ ಉಪ್ಪು ಹಾಕದೆ ತಿನ್ನಕ್ಕಾಗುತ್ತಾ?

ರುಚಿಯಿಲ್ಲದ ಗಿಡದ ರಸವನ್ನ ಕುಡಿಯಕ್ಕಾಗುತ್ತಾ?

 7 ಅಂಥದ್ದನ್ನ ನಾನು ಮುಟ್ಟಿನೂ ನೋಡಲ್ಲ.

ಅವು ನನಗೆ ಕೆಟ್ಟು ಹೋದ ಆಹಾರದ ತರ ಇದೆ.

 8 ದೇವರು ನನ್ನ ಕೋರಿಕೆ ಕೇಳಿ,

ನನ್ನ ಆಸೆ ಈಡೇರಿಸಬಾರದಾ?

 9 ದೇವರು ನನ್ನನ್ನ ಜಜ್ಜಿಬಿಡಬಾರದಾ?

ಆತನು ಕೈಚಾಚಿ ನನ್ನನ್ನ ಸಾಯಿಸಬಾರದಾ?+

10 ಆಗಲಾದ್ರೂ ನನಗೆ ಸಮಾಧಾನ ಸಿಗುತ್ತೆ,

ನನಗೆ ತುಂಬ ದುಃಖ ಇದ್ರೂ ಖುಷಿಯಿಂದ ಸಾವನ್ನ ಸ್ವೀಕರಿಸ್ತೀನಿ,

ಯಾಕಂದ್ರೆ ಪವಿತ್ರನಾದ ದೇವರ+ ಮಾತುಗಳನ್ನ ನಾನು ಯಾವತ್ತೂ ತಿರಸ್ಕರಿಸಲ್ಲ.

11 ಇನ್ನು ಸಹಿಸ್ಕೊಳ್ಳೋಕೆ ನನ್ನಲ್ಲಿ ಶಕ್ತಿ ಇಲ್ಲ.+

ಮುಂದೆ ಒಳ್ಳೆದಾಗುತ್ತೆ ಅನ್ನೋ ಭರವಸೆನೇ ಇಲ್ಲದಿರುವಾಗ ನಾನ್ಯಾಕೆ ಬದುಕಿರಬೇಕು?

12 ನನಗೇನು ಬಂಡೆಯಷ್ಟು ಶಕ್ತಿ ಇದ್ಯಾ?

ನನ್ನ ದೇಹವೇನು ತಾಮ್ರದ್ದಾ?

13 ನನಗಿರೋ ಆಸರೆಯನ್ನೆಲ್ಲ ಕಿತ್ತು ಹಾಕಿದ ಮೇಲೆ

ನನ್ನನ್ನ ನಾನೇ ಹೇಗೆ ನೋಡ್ಕೊಳ್ಳೋದು?

14 ಸ್ನೇಹಿತನಿಗೆ ಪ್ರೀತಿ ತೋರಿಸದವನಿಗೆ+

ಸರ್ವಶಕ್ತನ ಮೇಲೆ ಭಯ ಎಲ್ಲಿರುತ್ತೆ?+

15 ನನ್ನ ಸ್ವಂತ ಸಹೋದರರು ಚಳಿಗಾಲದ ನದಿಗಳ ತರ ಕೈಕೊಡ್ತಾರೆ,

ನೀರು ಬೇಕಾಗಿದ್ದಾಗಲೇ ಅವು ಒಣಗಿ ಹೋಗ್ತವೆ.+

16 ಆ ನದಿಗಳು ಮಂಜುಗಡ್ಡೆಯಿಂದ ಕಪ್ಪಾಗಿವೆ,

ಕರಗೋ ಹಿಮ ಅವುಗಳಲ್ಲಿ ಅಡಗಿದೆ.

17 ಆದ್ರೆ ಬೇಸಿಗೆಯ ಬೇಗೆಗೆ ಅದ್ರ ನೀರು ಒಣಗಿ ಹೋಗುತ್ತೆ,

ಬಿಸಿಲು ಬಂದಾಗ ಬತ್ತಿ ಹೋಗುತ್ತೆ.

18 ಅವು ಹರಿಯೋ ದಿಕ್ಕು ಬದಲಾಗುತ್ತೆ,

ಮರುಭೂಮಿಗೆ ಹರಿದು ಹೋಗಿ ಕಾಣೆ ಆಗುತ್ತೆ.

19 ಆ ನದಿ ಎಲ್ಲಿ ಅಂತ ತೇಮಾದ+ ವ್ಯಾಪಾರಿಗಳ ಗುಂಪು ಹುಡುಕುತ್ತೆ,

ಶೆಬದ+ ಪ್ರಯಾಣಿಕರು ಅವುಗಳಿಗಾಗಿ ಕಾಯ್ತಾರೆ.

20 ಅವ್ರ ನಂಬಿಕೆ ಸುಳ್ಳಾದ ಕಾರಣ ತಲೆತಗ್ಗಿಸ್ತಾರೆ,

ಅವ್ರಿಗೆ ಬರೀ ನಿರಾಶೆನೇ ಸಿಗುತ್ತೆ.

21 ನನ್ನ ವಿಷ್ಯದಲ್ಲಿ ನೀವು ಕೂಡ ಹಾಗೆನೇ,+

ನನಗೆ ಬಂದಿರೋ ಕಷ್ಟ ನೋಡಿ ಹೆದರಿದ್ದೀರ.+

22 ‘ಏನಾದ್ರೂ ಕೊಡಿ’ ಅಂತ ನಾನು ನಿಮ್ಮನ್ನ ಕೇಳಿದ್ನಾ?

ನಿಮ್ಮ ಆಸ್ತಿಯಿಂದ ಉಡುಗೊರೆ ಕೊಡಿ ಅಂತ ಕೇಳಿದ್ನಾ?

23 ಶತ್ರು ಕೈಯಿಂದ ನನ್ನನ್ನ ಬಿಡಿಸಿ,

ಪೀಡಕರ ಕೈಯಿಂದ ಬಿಡಿಸಿ ಅಂತ ಕೇಳಿದ್ನಾ?

24 ನಾನೇನು ತಪ್ಪು ಮಾಡಿದೆ ಅಂತ ಹೇಳಿ,

ನನಗೆ ಅರ್ಥಮಾಡಿಸಿ. ಸುಮ್ಮನಿದ್ದು ಕೇಳಿಸ್ಕೊಳ್ತೀನಿ.+

25 ಇದ್ದದ್ದನ್ನ ಇದ್ದ ಹಾಗೆ ಹೇಳಿದ್ರೆ ಮನಸ್ಸಿಗೆ ನೋವಾಗಲ್ಲ,+

ಆದ್ರೆ ನೀವು ಬೈದು ಮಾತಾಡಿದ್ರೆ ನನಗೇನೂ ಪ್ರಯೋಜನ ಆಗಲ್ಲ.+

26 ನಾನಾಡಿದ ಮಾತುಗಳಲ್ಲಿ ತಪ್ಪು ಹುಡುಕೋದೇ ನಿಮ್ಮ ಉದ್ದೇಶನಾ?

ಬೇಜಾರಲ್ಲಿ ಇರುವವರು ಹೇಳೋ ಮಾತುಗಳನ್ನ+ ಗಾಳಿ ಬಡಿದ್ಕೊಂಡು ಹೋಗುತ್ತಲ್ವಾ?

27 ನೀವು ಅನಾಥನಿಗಾಗಿ ಚೀಟು ಹಾಕುವುದಕ್ಕೂ+

ನಿಮ್ಮ ಸ್ನೇಹಿತನನ್ನೇ ಮಾರುವುದಕ್ಕೂ ಹೇಸಲ್ಲ!+

28 ಈಗ ಸ್ವಲ್ಪ ತಿರುಗಿ ನನ್ನನ್ನ ನೋಡಿ,

ನಾನೇನು ನಿಮಗೆ ಸುಳ್ಳು ಹೇಳ್ತಿಲ್ಲ.

29 ಇನ್ನೊಂದು ಸಾರಿ ಯೋಚಿಸಿ ನೋಡಿ,

ದಯವಿಟ್ಟು ನನ್ನ ಬಗ್ಗೆ ತಪ್ಪು ತೀರ್ಮಾನಕ್ಕೆ ಬರಬೇಡಿ,

ಮತ್ತೆ ಯೋಚಿಸಿ, ಯಾಕಂದ್ರೆ ನಾನಿನ್ನೂ ದೇವರ ದೃಷ್ಟಿಯಲ್ಲಿ ನೀತಿವಂತ.

30 ಏನಾದ್ರೂ ತಪ್ಪಾಗಿ ಮಾತಾಡ್ತಾ ಇದ್ದೀನಾ?

ನನಗೆ ಬಂದಿರೋ ಕಷ್ಟಗಳನ್ನ ಅರ್ಥಮಾಡ್ಕೊಳ್ಳದೆ ಮಾತಾಡ್ತಾ ಇದ್ದೀನಾ?

7 ಒಂದಲ್ಲ ಒಂದಿನ ಸಾಯೋ ಮನುಷ್ಯ ಜೀವನ ಪೂರ್ತಿ ಕತ್ತೆ ತರ ದುಡಿಲೇಬೇಕು,

ಭೂಮಿ ಮೇಲೆ ಅವನ ಬದುಕು ಕೂಲಿ ಕೆಲಸದವನ ಬದುಕಿನ ತರ ಇದೆ.+

 2 ಅವನು ದಾಸನ ಹಾಗೆ ನೆರಳಿಗಾಗಿ ಹಾತೊರಿತಾನೆ,

ಕೂಲಿ ಕೆಲಸದವನ ಹಾಗೇ ಸಂಬಳಕ್ಕಾಗಿ ಕಾಯ್ತಾನೆ.+

 3 ಹಾಗಾಗಿ ನನ್ನ ಜೀವನ ಎಷ್ಟೋ ತಿಂಗಳು ವ್ಯರ್ಥವಾಗಿ ಹೋಗ್ತಿದೆ,*

ಎಷ್ಟೋ ರಾತ್ರಿ ನಾನು ದುಃಖದಲ್ಲೇ ಕಳೀತಾ ಇದ್ದೀನಿ.*+

 4 ಮಲಗಿದಾಗ ‘ಯಾವಾಗ ಬೆಳಗಾಗುತ್ತೋ’ ಅಂತ ಕಾಯ್ತಾ ಇರ್ತಿನಿ,+

ಒಂದೊಂದು ಕ್ಷಣ ಒಂದೊಂದು ಯುಗದ ಹಾಗೇ ಅನಿಸುತ್ತೆ,

ಮುಂಜಾನೆ ತನಕ ಅತ್ತಿತ್ತ ಹೊರಳಾಡಿ ಸಾಕಾಗಿ ಹೋಗುತ್ತೆ.

 5 ನನ್ನ ದೇಹವನ್ನೆಲ್ಲ ಹುಳಗಳು ಮುತ್ಕೊಂಡಿವೆ, ಎಲ್ಲ ಕಡೆ ಕೊಳಕು ಮೆತ್ಕೊಂಡಿದೆ,+

ಮೈಯಲ್ಲೆಲ್ಲ ಗಾಯದ ಮೇಲೆ ಗಟ್ಟಿ ಚರ್ಮ ಕೀವು ತುಂಬ್ಕೊಂಡಿದೆ.+

 6 ನನ್ನ ದಿನಗಳು ಮಗ್ಗಕ್ಕಿಂತ ವೇಗವಾಗಿ ಓಡ್ತಿದೆ,+

ನಿರೀಕ್ಷೆಯಿಲ್ಲದೆ ಮುಗಿದು ಹೋಗ್ತಿದೆ.+

 7 ನನ್ನ ಜೀವನ ಬರೀ ಗಾಳಿ ಅಂತ ನೆನಪಿಸ್ಕೊ,*+

ನಾನಿನ್ನು ಬದುಕಲ್ಲಿ ಸಂತೋಷ ನೋಡೋದೇ ಇಲ್ಲ.

 8 ಈಗ ನನ್ನನ್ನ ನೋಡ್ತಾ ಇರೋರು ಇನ್ಯಾವತ್ತೂ ನೋಡಲ್ಲ,

ನಿನ್ನ ಕಣ್ಣುಗಳು ನನ್ನನ್ನ ಹುಡುಕುತ್ತೆ, ಆದ್ರೆ ನಾನು ಇರಲ್ಲ.+

 9 ಮೋಡ ನಿಧಾನವಾಗಿ ಕಣ್ಮರೆ ಆಗೋ ತರ

ಸಮಾಧಿ* ಸೇರೋನು ಕಣ್ಮರೆ ಆಗ್ತಾನೆ, ವಾಪಸ್‌ ಬರಲ್ಲ.+

10 ಅವನು ಮತ್ತೆ ಮನೆಗೆ ಹೋಗಲ್ಲ,

ಊರಿನ ಜನ್ರು ಅವನನ್ನ ಮರೆತು ಹೋಗ್ತಾರೆ.+

11 ಹಾಗಾಗಿ ನಾನಂತೂ ಬಾಯಿ ಮುಚ್ಚಲ್ಲ.

ಮನದಾಳದ ನೋವನ್ನ ಹೊರಹಾಕ್ತೀನಿ,

ನೋವು ನರಳಾಟವನ್ನ ಹೇಳ್ಕೊಳ್ತೀನಿ.+

12 ನೀನು ನನ್ನ ಮೇಲೆ ಕಾವಲುಗಾರರನ್ನ ಯಾಕೆ ಇಟ್ಟಿದ್ದೀಯಾ?

ನಾನೇನು ಸಮುದ್ರನಾ? ಸಮುದ್ರದಲ್ಲಿರೋ ದೊಡ್ಡ ಜೀವಿನಾ?

13 ‘ಮಲಗಿದಾಗ ನನಗೆ ಸಮಾಧಾನ ಆಗುತ್ತೆ,

ಹಾಸಿಗೆ ಮೇಲಿದ್ದಾಗ ನೋವು ಕಡಿಮೆ ಆಗುತ್ತೆ’ ಅಂದ್ಕೊಂಡೆ.

14 ಆದ್ರೆ ನೀನು ಕನಸುಗಳಿಂದ ನನ್ನನ್ನ ಬೆಚ್ಚಿ ಬೀಳಿಸ್ತೀಯ,

ದರ್ಶನಗಳನ್ನ ಕೊಟ್ಟು ಗಾಬರಿ ಪಡಿಸ್ತೀಯ,

15 ಹಾಗಾಗಿ ನಾನು ಉಸಿರುಗಟ್ಟಿ ಸಾಯೋದೇ ಒಳ್ಳೇದು,

ನನ್ನ ದೇಹ ಈ ರೀತಿ ಇರೋದಕ್ಕಿಂತ ಸತ್ತು ಹೋಗೋದೇ ಒಳ್ಳೇದು.+

16 ನನಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿದೆ,+ ಬದುಕೋ ಆಸೆ ನನಗಿಲ್ಲ.

ನನ್ನ ದಿನಗಳು ಉಸಿರಿನ ತರ ಇದೆ,+ ನನ್ನನ್ನ ಬಿಟ್ಟುಬಿಡು.

17 ಇವತ್ತು ಇದ್ದು ನಾಳೆ ಇಲ್ಲದೆ ಹೋಗೋ ಮನುಷ್ಯನ ಬಗ್ಗೆ ನೀನ್ಯಾಕೆ ಯೋಚಿಸಬೇಕು?

ಅವನಿಗೆ ನೀನ್ಯಾಕೆ ಗಮನ ಕೊಡಬೇಕು?+

18 ಅವನನ್ನ ಯಾಕೆ ಪ್ರತಿದಿನ ಪರೀಕ್ಷೆ ಮಾಡ್ತೀಯ?

ಯಾಕೆ ಕ್ಷಣಕ್ಷಣ ಪರೀಕ್ಷೆ ಮಾಡ್ತೀಯ?+

19 ನಿನ್ನ ದೃಷ್ಟಿಯನ್ನ ನನ್ನ ಕಡೆಯಿಂದ ತಿರುಗಿಸಬಾರದಾ?

ಉಗುಳು ನುಂಗುವಷ್ಟು ಸಮಯವಾದ್ರೂ ನನ್ನನ್ನ ಬಿಟ್ಟುಬಿಡಬಾರದಾ?+

20 ಮನುಷ್ಯರನ್ನ ಗಮನಿಸೋ ದೇವರೇ,+ ನಾನು ಪಾಪ ಮಾಡಿರೋದಾದ್ರೆ ಅದ್ರಿಂದ ನಿನಗೇನು ನಷ್ಟ ಆಗಿರುತ್ತೆ?

ನನ್ನನ್ನ ಯಾಕೆ ನಿನ್ನ ಗುರಿಹಲಗೆ ಮಾಡಿದ್ದೀಯ?

ನಾನು ನಿನಗೆ ಭಾರ ಆಗಿದ್ದೀನಾ?

21 ನನ್ನ ಅಪರಾಧವನ್ನ ಕ್ಷಮಿಸಿ ಬಿಡಬಾರದಾ?

ನನ್ನ ತಪ್ಪನ್ನ ಮನ್ನಿಸಬಾರದಾ?

ಹೇಗೂ ನಾನು ಬೇಗ ಮಣ್ಣಿಗೆ ಸೇರ್ತಿನಿ,+

ನೀನು ಹುಡುಕಿದ್ರೂ ನಾನು ಸಿಗಲ್ಲ.”

8 ಅದಕ್ಕೆ ಶೂಹ್ಯನಾದ+ ಬಿಲ್ದದ+ ಹೀಗಂದ:

 2 “ಇನ್ನೆಷ್ಟು ಹೊತ್ತು ಹೀಗೆ ಮಾತಾಡ್ತಾ ಇರ್ತಿಯ?+

ನಿನ್ನ ಮಾತುಗಳು ಸುಂಟರಗಾಳಿ ತರ ಇದೆ!

 3 ದೇವರು ಅನ್ಯಾಯ ಮಾಡ್ತಾನಾ?

ಸರ್ವಶಕ್ತ ನೀತಿಯನ್ನ ಡೊಂಕು ಮಾಡ್ತಾನಾ?

 4 ನಿನ್ನ ಮಕ್ಕಳು ಆತನ ವಿರುದ್ಧ ಪಾಪ ಮಾಡಿರಬೇಕು, ದಂಗೆ ಎದ್ದಿರಬೇಕು,

ಅದಕ್ಕೇ ದೇವರು ಅವ್ರಿಗೆ ಶಿಕ್ಷೆ ಕೊಟ್ಟಿದ್ದಾನೆ.

 5 ಆದ್ರೆ ನೀನು ದೇವರ ಮೇಲೆ ನಂಬಿಕೆ ಇಟ್ರೆ,+

ಸರ್ವಶಕ್ತನ ದಯೆಗಾಗಿ ಅಂಗಲಾಚಿ ಬೇಡಿದ್ರೆ,

 6 ನೀನು ನಿಜವಾಗಿ ತಪ್ಪು ಮಾಡದೆ ನೀತಿವಂತನಾಗಿದ್ರೆ+

ದೇವರು ನಿನಗೆ ಸಹಾಯ ಮಾಡ್ತಾನೆ,*

ಮೊದಲಿನ ತರ ಒಳ್ಳೇ ಸ್ಥಿತಿಗೆ ತರ್ತಾನೆ.

 7 ಈಗ ನಿನ್ನ ಸ್ಥಿತಿ ತುಂಬ ಕೆಟ್ಟದಾಗಿದ್ರೂ

ಮುಂದೆ ನೀನು ತುಂಬ ಸುಖವಾಗಿ ಇರ್ತಿಯ.+

 8 ದಯವಿಟ್ಟು ಪೂರ್ವಜರನ್ನ ಕೇಳು,

ಅವ್ರ ತಂದೆಯಂದಿರು ಕಂಡುಹಿಡಿದ ವಿಷ್ಯಗಳಿಗೆ ಗಮನಕೊಡು.+

 9 ನಾವು ನಿನ್ನೆಮೊನ್ನೆ ಹುಟ್ಟಿದವರು, ನಮಗೇನೂ ಗೊತ್ತಿಲ್ಲ,

ಈ ಭೂಮಿಯಲ್ಲಿ ನಮ್ಮ ಜೀವನ ನೆರಳಿನ ತರ ಇದೆ.

10 ಆ ಪೂರ್ವಜರು ನಿನಗೆ ಕಲಿಸ್ತಾರೆ,

ತಮಗೆ ಗೊತ್ತಿರೋದನ್ನ ಹೇಳ್ತಾರೆ.

11 ಜವುಗುನೆಲ ಇಲ್ಲದಿರೋ ಜಾಗದಲ್ಲಿ ಪಪೈರಸ್‌ ಗಿಡ ಎತ್ರ ಬೆಳೆಯುತ್ತಾ?

ನೀರೇ ಇಲ್ಲದಿದ್ರೆ ಆಪುಹುಲ್ಲು ಎತ್ರ ಬೆಳೆಯುತ್ತಾ?

12 ಅದು ಮೊಗ್ಗು ಬಿಟ್ಟಿದ್ರೂ ಕೀಳದಿದ್ರೂ

ಬೇರೆ ಗಿಡಗಳಿಗಿಂತ ಮೊದ್ಲು ಒಣಗಿ ಹೋಗುತ್ತೆ.

13 ದೇವರನ್ನ ಮರೆತಿರೋ ಜನ್ರಿಗೆಲ್ಲ ಇದೇ ಗತಿ,

ದೇವರನ್ನ ಬಿಟ್ಟುಬಿಟ್ಟವನು* ಇಟ್ಟಿರೋ ನಿರೀಕ್ಷೆ ನುಚ್ಚುನೂರಾಗುತ್ತೆ.

14 ಅವನು ಯಾವುದ್ರ ಮೇಲೆ ನಂಬಿಕೆ ಇಟ್ಟಿದ್ದಾನೋ ಅದು ಜೇಡರ ಬಲೆ ತರ ದುರ್ಬಲ,

ಹಾಗಾಗಿ ಅವನ ಭರವಸೆ ಸುಳ್ಳಾಗುತ್ತೆ.

15 ಅವನು ಅದಕ್ಕೆ ಒರಗಿಕೊಂಡ್ರೆ ಅದು ಹರಿದು ಹೋಗುತ್ತೆ,

ಅದನ್ನ ಹಿಡ್ಕೊಳ್ಳೋಕೆ ಹೋದ್ರೆ ತುಂಡು ತುಂಡಾಗುತ್ತೆ.

16 ಅವನು ನೀರಲ್ಲಿ, ಸೂರ್ಯನ ಬೆಳಕಲ್ಲಿ ಬೆಳೆದ ಗಿಡದ ತರ ಇದ್ದಾನೆ,

ತೋಟದಲ್ಲಿ ಅದ್ರ ರೆಂಬೆಕೊಂಬೆಗಳು ಹರಡಿರುತ್ತೆ.+

17 ಕಲ್ಲುಗಳ ರಾಶಿ ಒಳಗೆ ಬೇರುಗಳನ್ನ ಹೆಣೆದ್ಕೊಂಡು

ಅದೇ ತನ್ನ ಮನೆ ಅಂದ್ಕೊಳ್ಳುತ್ತೆ.

18 ಆದ್ರೆ ಆ ಗಿಡವನ್ನ ಅಲ್ಲಿಂದ ಬೇರುಸಮೇತ ಕಿತ್ತುಹಾಕಿದಾಗ

ಆ ಜಾಗ ಅದಕ್ಕೆ ‘ನೀನು ಯಾರೋ ನಂಗೊತ್ತಿಲ್ಲ’ ಅನ್ನುತ್ತೆ.+

19 ಆ ಗಿಡದ ಹಾಗೆ ಅವನು ಕಣ್ಮರೆ ಆಗ್ತಾನೆ,+

ಆ ಗಿಡವಿದ್ದ ಜಾಗದಲ್ಲಿ ಬೇರೆ ಗಿಡಗಳು ಹುಟ್ಟುತ್ತೆ.

20 ತಪ್ಪು ಮಾಡದವನನ್ನ ದೇವರು ಕೈಬಿಡಲ್ಲ,

ದೇವರು ಕೆಟ್ಟವ್ರ ಕೈಹಿಡಿಯಲ್ಲ.*

21 ನೀನು ಮತ್ತೆ ನಗ್‌ನಗ್ತಾ ಇರೋ ಹಾಗೆ,

ಖುಷಿಯಿಂದ ಇರೋ ಹಾಗೆ ಮಾಡ್ತಾನೆ.

22 ನಿನ್ನನ್ನ ದ್ವೇಷಿಸುವವರಿಗೆ ತುಂಬ ಅವಮಾನ ಆಗುತ್ತೆ,

ಕೆಟ್ಟವ್ರ ಡೇರೆ ನಾಶವಾಗಿ ಹೋಗುತ್ತೆ.”

9 ಅದಕ್ಕೆ ಯೋಬ ಹೀಗೆ ಉತ್ತರ ಕೊಟ್ಟ:

 2 “ನಿಜ, ಅದು ಸರಿನೇ.

ಆದ್ರೆ ಇವತ್ತೋ ನಾಳೆನೋ ಸಾಯೋ ಮನುಷ್ಯ ದೇವರ ಮುಂದೆ ತಾನು ಸರಿ ಅಂತ ಸಾಬೀತು ಮಾಡೋಕೆ ಹೇಗಾಗುತ್ತೆ?+

 3 ಯಾರಾದ್ರೂ ದೇವರ ಜೊತೆ ವಾದಿಸೋಕೆ* ಹೋದ್ರೆ+

ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಕೊಡಕ್ಕಾಗಲ್ಲ.

 4 ದೇವರು ತುಂಬ ಬುದ್ಧಿವಂತ, ಶಕ್ತಿಶಾಲಿ.+

ದೇವರ ವಿರುದ್ಧ ಹೋಗಿ ಚೆನ್ನಾಗಿ ಇರೋಕೆ ಸಾಧ್ಯನಾ?+

 5 ದೇವರು ಬೆಟ್ಟಗಳನ್ನ ಸರಿಸಿ ಇನ್ನೊಂದು ಕಡೆ ಇಡ್ತಾನೆ, ಆದ್ರೆ ಒಬ್ರಿಗೂ ಗೊತ್ತಾಗಲ್ಲ,

ಕೋಪದಿಂದ ಅವುಗಳನ್ನ ಎತ್ತಿ ಎಸಿತಾನೆ.

 6 ಭೂಮಿಯನ್ನ ಅಲುಗಾಡಿಸ್ತಾನೆ,

ಆಗ ಅದ್ರ ಅಸ್ತಿವಾರಗಳು ನಡುಗುತ್ತೆ.+

 7 ಬೆಳಕು ಕೊಡಬೇಡ ಅಂತ ಆತನು ಸೂರ್ಯನಿಗೆ ಆಜ್ಞೆ ಕೊಡ್ತಾನೆ,

ಮಿನುಗೋ ನಕ್ಷತ್ರಗಳು+ ಕಾಣದ ಹಾಗೆ ಮುಚ್ಚಿಬಿಡ್ತಾನೆ.

 8 ಆತನೊಬ್ಬನೇ ಆಕಾಶ ಅನ್ನೋ ಚಾದರವನ್ನ ಹರಡ್ತಾನೆ,+

ಸಮುದ್ರದ ದೊಡ್ಡ ದೊಡ್ಡ ಅಲೆಗಳ+ ಮೇಲೆ ನಡಿತಾನೆ.

 9 ಆ್ಯಷ್‌,* ಕೀಸಿಲ್‌,* ಕೈಮಾ* ನಕ್ಷತ್ರ ಪುಂಜಗಳನ್ನ,+

ದಕ್ಷಿಣದ ನಕ್ಷತ್ರ ಪುಂಜಗಳನ್ನ ಮಾಡಿದಾತನೂ ದೇವರೇ.

10 ಎಂಥೆಂಥ ಅದ್ಭುತವಾದ ವಿಷ್ಯಗಳನ್ನ,+

ಆಶ್ಚರ್ಯ ಹುಟ್ಟಿಸೋ ಸಂಗತಿಗಳನ್ನ ಮಾಡಿದ್ದಾನೆ ಅಂದ್ರೆ ಲೆಕ್ಕಾನೇ ಇಲ್ಲ.+

11 ದೇವರು ನನ್ನ ಪಕ್ಕದಲ್ಲೇ ಹೋದ್ರೂ ನನಗೆ ನೋಡಕ್ಕಾಗಲ್ಲ,

ನನ್ನ ಮುಂದಿಂದ ಹೋದ್ರೂ ನನಗೆ ಆತನ ಗುರುತು ಸಿಗಲ್ಲ.

12 ಆತನು ಏನನ್ನಾದ್ರೂ ಕಿತ್ಕೊಳ್ಳುವಾಗ ಯಾರಿಂದಾದ್ರೂ ತಡಿಯಕ್ಕಾಗುತ್ತಾ?

‘ಯಾಕೆ ಈ ತರ ಮಾಡ್ತೀಯಾ’ ಅಂತ ಕೇಳಕ್ಕಾಗುತ್ತಾ?+

13 ದೇವರು ತನ್ನ ಕೋಪವನ್ನ ತಡೆದು ಹಿಡಿಯಲ್ಲ,+

ರಾಹಾಬಿನ*+ ಸಹಾಯಕರು ಕೂಡ ಆತನಿಗೆ ಅಡ್ಡಬೀಳ್ತಾರೆ.

14 ಹೀಗಿದ್ದ ಮೇಲೆ ನಾನು ಆತನಿಗೆ ಉತ್ತರ ಕೊಡುವಾಗ, ವಾದ ಮಾಡುವಾಗ

ತುಂಬ ಯೋಚ್ನೆ ಮಾಡಿ ಮಾತಾಡಬೇಕಲ್ವಾ?

15 ನಾನೇ ಸರಿಯಾಗಿದ್ರೂ ಆತನಿಗೆ ಉತ್ತರ ಕೊಡುವಷ್ಟು ಧೈರ್ಯ ನನಗಿಲ್ಲ,+

ಕರುಣೆ ತೋರಿಸು ಅಂತ ನನ್ನ ನ್ಯಾಯಾಧೀಶನ* ಹತ್ರ ಕೈಮುಗಿದು ಬೇಡಬಹುದಷ್ಟೇ.

16 ನಾನು ಕರೆದ್ರೆ ಆತನು ಉತ್ತರ ಕೊಡ್ತಾನಾ?

ನನ್ನ ಕೂಗು ಕೇಳ್ತಾನೆ ಅನ್ನೋ ನಂಬಿಕೆ ನನಗಿಲ್ಲ,

17 ಯಾಕಂದ್ರೆ ಬಿರುಗಾಳಿ ತರ ಆತನು ನನ್ನನ್ನ ಹೊಡೆದು ಉರುಳಿಸ್ತಾನೆ,

ಸುಮ್‌ಸುಮ್ನೆ ಒಂದ್ರ ಮೇಲೊಂದು ಗಾಯ ಮಾಡ್ತಾನೆ.+

18 ಆತನು ನನಗೆ ಉಸಿರಾಡಕ್ಕೂ ಬಿಡ್ತಿಲ್ಲ,

ಕಷ್ಟಗಳ ಮೇಲೆ ಕಷ್ಟ ಕೊಡ್ತಾನೇ ಇದ್ದಾನೆ.

19 ಶಕ್ತಿ ಬಗ್ಗೆ ಪ್ರಶ್ನೆ ಬಂದ್ರೆ ಆತನಿಗೆ ಇರೋಷ್ಟು ಶಕ್ತಿ ಬೇರೆ ಯಾರಿಗೂ ಇಲ್ಲ,+

ನ್ಯಾಯದ ಬಗ್ಗೆ ಪ್ರಶ್ನೆ ಬಂದ್ರೆ ‘ಯಾರೂ ನನ್ನನ್ನ ಪ್ರಶ್ನೆ ಮಾಡೋಕೆ* ಆಗಲ್ಲ’ ಅಂತಾನೆ.

20 ನಾನು ಸರಿಯಾಗಿದ್ರೂ ನನ್ನ ಬಾಯಿನೇ ನನ್ನನ್ನ ತಪ್ಪು ಅಂತ ಹೇಳುತ್ತೆ,

ತಪ್ಪೇ ಮಾಡದಿದ್ರೂ* ಅಪರಾಧಿ ಅಂತ ಆತನೇ ತೀರ್ಪು ಕೊಡ್ತಾನೆ.

21 ನಾನು ನಿಜವಾಗ್ಲೂ ತಪ್ಪು ಮಾಡಿಲ್ವಾ* ಅಂತ ನನಗೇ ಸಂಶಯ ಬರ್ತಿದೆ,

ನನಗೆ ಇಂಥ ಜೀವನ ಬೇಡ.

22 ಎಲ್ಲ ಒಂದೇ, ‘ದೇವರು ಕೆಟ್ಟವ್ರನ್ನ ನಾಶಮಾಡೋ ಹಾಗೇ

ನಿರಪರಾಧಿಗಳನ್ನೂ* ನಾಶ ಮಾಡ್ತಾನೆ’ ಅಂತ ಹೇಳ್ತೀನಿ.

23 ದಿಢೀರಂತ ಪ್ರವಾಹ ಬಂದು ಜನ ಸತ್ತುಹೋದ್ರೆ

ಆತನು ನಿರಪರಾಧಿಗಳ ಪಾಡು ನೋಡಿ ಗೇಲಿ ಮಾಡ್ತಾನೆ.

24 ಭೂಮಿಯನ್ನ ಕೆಟ್ಟವ್ರ ಕೈಗೆ ಕೊಟ್ಟಿದ್ದಾನೆ,+

ಆತನು ನ್ಯಾಯಾಧೀಶರ ಕಣ್ಣುಗಳನ್ನ ಮುಚ್ಚುತ್ತಾನೆ.

ಇದನ್ನ ಆತನಲ್ಲದೆ ಇನ್ಯಾರು ಮಾಡ್ತಾರೆ?

25 ನನ್ನ ಜೀವನದ ದಿನಗಳು ಓಟಗಾರನಿಗಿಂತ ವೇಗವಾಗಿ ಓಡ್ತಿದೆ,+

ಯಾವ ಸುಖವನ್ನೂ ನೋಡದೆ ಓಡಿ ಹೋಗ್ತಿದೆ.

26 ಆಪುಹುಲ್ಲಿನ ದೋಣಿಯನ್ನ ನೀರು ಸರ್ರಂತ ಎಳ್ಕೊಳ್ಳೋ ಹಾಗೆ,

ಹದ್ದು ಬೇಟೆ ಮೇಲೆ ಎರಗೋ ಹಾಗೆ ನನ್ನ ಜೀವನ ಮುಗಿತಿದೆ.

27 ‘ನನ್ನ ನೋವನ್ನ ಮರೆತು,

ಮುಖ ಸಪ್ಪಗೆ ಇಟ್ಕೊಳ್ಳದೆ ಖುಷಿಯಾಗಿ ಇರ್ತಿನಿ’ ಅಂದ್ಕೊಂಡ್ರೂ

28 ನೋವನ್ನೆಲ್ಲ ನೆನಸ್ಕೊಂಡ್ರೆ ಭಯ ಆಗುತ್ತೆ,+

ನೀನು ನನ್ನನ್ನ ನಿರಪರಾಧಿ ಅಂತ ತೀರ್ಪು ಕೊಡಲ್ಲ ಅಂತ ನಂಗೊತ್ತು.

29 ತಪ್ಪು ಮಾಡಿದ್ದೀಯ ಅಂತ ನೀನು ನನಗೆ ಹೇಳೇ ಹೇಳ್ತೀಯ ಅಂದ್ಮೇಲೆ,

ನಾನ್ಯಾಕೆ ಸುಮ್ಮನೆ ಹೋರಾಡಬೇಕು?+

30 ಹಿಮ ಕರಗಿದ ನೀರಲ್ಲಿ ನಾನು ಸ್ನಾನ ಮಾಡಿದ್ರೂ

ಬೂದಿ ನೀರಲ್ಲಿ* ನನ್ನ ಕೈಗಳನ್ನ ತೊಳ್ಕೊಂಡ್ರೂ+

31 ನನ್ನನ್ನ ಕೆಸರು ಗುಂಡಿಯಲ್ಲಿ ಮುಳುಗಿಸಿ ಬಿಡ್ತೀಯ,

ಆಗ ನನ್ನ ಬಟ್ಟೆಗಳು ಕೂಡ ನನ್ನನ್ನ ನೋಡಿ ಅಸಹ್ಯಪಡುತ್ತೆ.

32 ದೇವರು ನನ್ನ ತರ ಮನುಷ್ಯನಲ್ಲ,

ಅಂದ್ಮೇಲೆ ಆತನ ಜೊತೆ ವಾದ ಮಾಡಕ್ಕಾಗುತ್ತಾ?

ಇಬ್ರೂ ಒಟ್ಟಿಗೆ ನ್ಯಾಯಾಲಯಕ್ಕೆ ಹೋಗಕ್ಕಾಗುತ್ತಾ?+

33 ನಮ್ಮಿಬ್ರ ನ್ಯಾಯ ವಿಚಾರಿಸೋಕೆ,*

ನ್ಯಾಯಾಧೀಶನಾಗಿ ತೀರ್ಪು ಕೊಡೋಕೆ ಯಾರೂ ಇಲ್ಲ.

34 ಆತನು ನನಗೆ ಹೊಡಿಯೋದನ್ನ ನಿಲ್ಲಿಸಿದ್ರೆ,

ಭಯಾನಕ ವಿಷ್ಯಗಳಿಂದ ನನ್ನನ್ನ ಹೆದರಿಸೋದನ್ನ ಬಿಟ್ಟುಬಿಟ್ರೆ,+

35 ಆಗ ನಾನು ಭಯಪಡದೆ ಆತನ ಜೊತೆ ಮಾತಾಡ್ತೀನಿ,

ಯಾಕಂದ್ರೆ ಭಯ ಆದಾಗ ನನಗೆ ಮಾತೇ ಹೊರಡಲ್ಲ.

10 ನನಗೆ ಜೀವನದಲ್ಲಿ ಜಿಗುಪ್ಸೆ ಬಂದಿದೆ.+

ನನ್ನ ದುಃಖವನ್ನೆಲ್ಲ ಹೊರಗೆ ಹಾಕ್ತೀನಿ.

ನೋವನ್ನೆಲ್ಲ ಮನಸ್ಸುಬಿಚ್ಚಿ ಹೇಳ್ಕೊಳ್ತೀನಿ.

 2 ನಾನು ದೇವರಿಗೆ ಹೀಗೆ ಹೇಳ್ತೀನಿ: ‘ನಾನು ಅಪರಾಧಿ ಅಂತ ತೀರ್ಪು ಕೊಡಬೇಡ.

ಹೇಳು! ನೀನ್ಯಾಕೆ ನನ್ನ ಜೊತೆ ಜಗಳಕ್ಕೆ ಇಳಿದಿದ್ದೀಯ?

 3 ಕೆಟ್ಟವನ ಯೋಚನೆಯನ್ನ ಮೆಚ್ಚಿ,

ನೀನು ಕೈಯಾರೆ ಮಾಡಿದ ನನ್ನನ್ನ+ ತುಳಿತಾ ಇದ್ದೀಯಾ, ಕೀಳಾಗಿ ನೋಡ್ತಾ ಇದ್ದೀಯಾ,

ಇದ್ರಿಂದ ನಿನಗೇನು ಸಿಗುತ್ತೆ?

 4 ನಿನ್ನ ಕಣ್ಣುಗಳು ಮನುಷ್ಯನ ಕಣ್ಣುಗಳ ತರ ಅಲ್ಲ ತಾನೇ?

ಒಂದಲ್ಲ ಒಂದಿನ ಸಾಯೋ ಮನುಷ್ಯನ ತರ ನೀನು ನೋಡಲ್ಲ ತಾನೇ?

 5 ನಿನ್ನ ಆಯಸ್ಸು ಮನುಷ್ಯರ ಆಯಸ್ಸು ತರ ಇದ್ಯಾ?

ಮನುಷ್ಯನ ಆಯಸ್ಸು ತರ ನಿನ್ನ ಆಯಸ್ಸನ್ನ ಲೆಕ್ಕ ಮಾಡೋಕೆ ಆಗುತ್ತಾ?+

 6 ಮತ್ಯಾಕೆ ನೀನು ನನ್ನಲ್ಲಿ ತಪ್ಪು ಹುಡುಕ್ತೀಯ?

ಪಾಪ ಮಾಡ್ತೀನಾ ಅಂತ ನೋಡ್ತಾ ಇದ್ದೀಯ?+

 7 ನಾನು ಯಾವ ಪಾಪನೂ ಮಾಡಿಲ್ಲ ಅಂತ ನಿನಗೇ ಗೊತ್ತು.+

ನಿನ್ನ ಕೈಯಿಂದ ನನ್ನನ್ನ ಯಾರೂ ಕಾಪಾಡೋಕೆ ಆಗಲ್ಲ.+

 8 ನಿನ್ನ ಕೈಗಳಿಂದಾನೇ ನನ್ನನ್ನ ಸೃಷ್ಟಿ ಮಾಡಿದೆ,+

ಈಗ ಅದೇ ಕೈಗಳಿಂದ ನನ್ನನ್ನ ಸರ್ವನಾಶ ಮಾಡ್ತಾ ಇದ್ದೀಯ.

 9 ದಯವಿಟ್ಟು ನೆನಪು ಮಾಡ್ಕೋ, ನನ್ನನ್ನ ಮಣ್ಣಿಂದ ನೀನೇ ಮಾಡಿದೆ,+

ಅದೇ ಮಣ್ಣಿಗೆ ಸೇರೋ ಹಾಗೆ ನೀನೇ ಮಾಡ್ತಾ ಇದ್ದೀಯ.+

10 ನನ್ನನ್ನ ತಾಯಿಯ ಗರ್ಭದಲ್ಲಿಟ್ಟು

ಅಲ್ಲಿ ನನಗೆ ಆಕಾರ ಕೊಟ್ಟೆ.*

11 ನನಗೆ ಮೂಳೆ, ಸ್ನಾಯು ಕೊಟ್ಟು ಹೆಣೆದೆ,

ಮಾಂಸ, ಚರ್ಮ ಕೊಟ್ಟು ಹೊದಿಸಿದೆ.+

12 ನನಗೆ ಜೀವ ಕೊಟ್ಟು, ಶಾಶ್ವತ ಪ್ರೀತಿ ತೋರಿಸಿದೆ,

ನನ್ನ ಆರೈಕೆ ಮಾಡ್ತಾ, ಜೀವ* ಕಾಪಾಡ್ತಾ ಬಂದೆ.+

13 ಆದ್ರೆ ನನಗೆ ಕಷ್ಟಗಳನ್ನ ಕೊಡಬೇಕಂತ ಒಳಗೊಳಗೇ ಉಪಾಯ ಮಾಡಿದೆ,

ಇದೆಲ್ಲ ನಿನ್ನದೇ ಕೈವಾಡ ಅಂತ ನಂಗೊತ್ತು.

14 ನಾನು ಪಾಪ ಮಾಡಿದ್ರೆ ನೀನದನ್ನ ಗಮನಿಸದೆ ಬಿಡಲ್ಲ,+

ನನ್ನ ತಪ್ಪನ್ನ ನೀನು ಕ್ಷಮಿಸಲ್ಲ.

15 ನಾನು ತಪ್ಪು ಮಾಡಿದ್ರೆ ನನಗೆ ಕೆಟ್ಟದೇ ಆಗ್ಲಿ.

ಆದ್ರೆ ನಾನು ತಪ್ಪು ಮಾಡಿಲ್ಲ, ತಲೆಯೆತ್ತಿ ನಡಿಯೋಕೆ ಆಗ್ತಿಲ್ಲ.+

ಯಾಕಂದ್ರೆ ನನಗೆ ಆಗಿರೋ ಅವಮಾನ, ನೋವು ಸ್ವಲ್ಪ ಏನಲ್ಲ.+

16 ತಲೆ ಎತ್ತಿದ್ರೆ ನನ್ನನ್ನ ಸಿಂಹ ತರ ಬೇಟೆ ಆಡ್ತೀಯ,+

ನನ್ನ ವಿರುದ್ಧ ಮತ್ತೆ ನಿನ್ನ ಶಕ್ತಿ ತೋರಿಸ್ತೀಯ.

17 ನನ್ನ ವಿರುದ್ಧ ಹೊಸ ಹೊಸ ಸಾಕ್ಷಿಗಳನ್ನ ಕರ್ಕೊಂಡು ಬರ್ತಿಯ,

ನನ್ನ ಮೇಲೆ ಇನ್ನೂ ಜಾಸ್ತಿ ಕೋಪ ತೋರಿಸ್ತೀಯ,

ಒಂದ್ರ ಮೇಲೊಂದು ಕಷ್ಟ ಕೊಡ್ತೀಯ.

18 ಅದಕ್ಯಾಕೆ ನನ್ನನ್ನ ತಾಯಿ ಗರ್ಭದಿಂದ ಹೊರಗೆ ತಂದೆ?+

ಯಾರೂ ನೋಡದೆ ಇರೋ ತರ ನಾನು ಮುಂಚೆನೇ ಸಾಯಬೇಕಿತ್ತು.

19 ಆಗ ನಾನು ಲೋಕದಲ್ಲಿ ಇಲ್ಲದೆನೇ ಹೋಗ್ತಿದ್ದೆ,

ಗರ್ಭದಿಂದ ನೇರ ಸಮಾಧಿ ಸೇರ್ತಿದ್ದೆ.

20 ನಾನು ಇನ್ನೆಷ್ಟು ದಿನ ಇರ್ತಿನಿ?+ ಈಗಲಾದ್ರೂ ದೇವರು ನನ್ನನ್ನ ಬಿಟ್ಟುಬಿಟ್ರೆ ಚೆನ್ನಾಗಿರುತ್ತೆ,

ಆತನು ತನ್ನ ದೃಷ್ಟಿಯನ್ನ ನನ್ನಿಂದ ಬೇರೆ ಕಡೆ ತಿರುಗಿಸಿದ್ರೆ ಸ್ವಲ್ಪ ನೆಮ್ಮದಿಯಾಗಿ ಇರ್ತಿನಿ.+

21 ಆಮೇಲೆ ಹೇಗೂ ಗಾಢ ಅಂಧಕಾರದ* ಜಾಗಕ್ಕೆ ಹೋಗ್ತೀನಿ,+

ಅಲ್ಲಿಂದ ವಾಪಸ್‌ ಬರಲ್ಲ.+

22 ಅದು ಬರೀ ಕತ್ತಲೆ ತುಂಬಿರೋ ಜಾಗ,

ಕರಿನೆರಳಿರೋ ಅಸ್ತವ್ಯಸ್ತವಾದ ಜಾಗ,

ಅಲ್ಲಿ ಹಗಲು ಕೂಡ ರಾತ್ರಿ ತರಾನೇ ಇರುತ್ತೆ.”

11 ಆಗ ನಾಮಾಥ್ಯನಾದ ಚೋಫರ+ ಹೀಗಂದ:

 2 “ನೀನು ಬಾಯಿಗೆ ಬಂದಿದ್ದೆಲ್ಲ ಮಾತಾಡ್ತಾ ಇದ್ರೆ ಯಾರೂ ಏನೂ ಹೇಳಲ್ಲ ಅಂದ್ಕೊಂಡಿದ್ದೀಯಾ?

ತುಂಬ ಮಾತಾಡಿದ್ರೆ* ನೀನೇ ಸರಿ ಅಂತ ಆಗಿಬಿಡುತ್ತಾ?

 3 ನಿನ್ನ ಟೊಳ್ಳು ಮಾತುಗಳಿಂದ ಜನ್ರ ಬಾಯಿ ಮುಚ್ಚಿಸ್ತೀಯಾ?

ಬೇರೆಯವ್ರನ್ನ ತಮಾಷೆ ಮಾಡಿದ್ರೆ ನಿನಗ್ಯಾರೂ ಬೈಯಲ್ವಾ?+

 4 ‘ನಾನು ಕಲಿಸೋದೆಲ್ಲ ಸರಿ,+

ದೇವರ ದೃಷ್ಟಿಯಲ್ಲಿ ನಾನೇನೂ ತಪ್ಪು ಮಾಡಿಲ್ಲ’ ಅಂತ ಹೇಳಿದ್ಯಲ್ಲಾ.+

 5 ಆದ್ರೆ ದೇವರೇ ಬಾಯಿ ಬಿಟ್ಟು ನಿನ್ನ ಜೊತೆ ಮಾತಾಡಿದ್ರೆ

ವಿಷ್ಯ ಹೊರಗೆ ಬರುತ್ತೆ!+

 6 ಆತನು ನಿನ್ನ ಮುಂದೆ ವಿವೇಕದ ಗುಟ್ಟುಗಳನ್ನ ಬಿಚ್ಚಿಡ್ತಾನೆ,

ಯಾಕಂದ್ರೆ ಬುದ್ಧಿಯಿಂದ ಕೆಲಸ ಮಾಡಿದ್ರೆ ತುಂಬ ಪ್ರಯೋಜನ ಸಿಗುತ್ತೆ.

ನೀನು ಮಾಡಿರೋ ಕೆಲವು ತಪ್ಪನ್ನ ದೇವರು ಮರೆತುಬಿಟ್ಟಿದ್ದಾನೆ ಅಂತ ಆಗ ನಿನಗೆ ಗೊತ್ತಾಗುತ್ತೆ.

 7 ದೇವರ ಬಗ್ಗೆ ಜನ್ರಿಗೆ ಅರ್ಥ ಆಗದಿರೋ ವಿಷ್ಯಗಳನ್ನ ನಿನ್ನಿಂದ ಕಂಡುಹಿಡಿಯೋಕೆ ಆಗುತ್ತಾ?

ಸರ್ವಶಕ್ತನ ಬಗ್ಗೆ ಪೂರ್ತಿ ತಿಳ್ಕೊಳ್ಳೋಕೆ ಆಗುತ್ತಾ?

 8 ಆತನ ವಿವೇಕ ಆಕಾಶಕ್ಕಿಂತ ಎತ್ತರ. ನಿನಗೆ ಹೇಗೆ ತಿಳ್ಕೊಳ್ಳೋಕೆ ಆಗುತ್ತೆ?

ಸಮಾಧಿಗಿಂತಲೂ* ಆಳ. ನಿನಗೆ ಹೇಗೆ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ?

 9 ಅದು ಭೂಮಿಗಿಂತ ದೊಡ್ಡದು,

ಸಮುದ್ರಕ್ಕಿಂತ ವಿಶಾಲ.

10 ದೇವರು ಯಾರನ್ನಾದ್ರೂ ಬಂಧಿಸಿ ನ್ಯಾಯಾಲಯಕ್ಕೆ ಕರ್ಕೊಂಡು ಬಂದ್ರೆ

ಅದನ್ನ ತಡಿಯಕ್ಕಾಗುತ್ತಾ?

11 ಯಾಕಂದ್ರೆ ಮನುಷ್ಯರು ಮೋಸ ಮಾಡಿದ್ರೆ ದೇವರಿಗೆ ಗೊತ್ತಾಗುತ್ತೆ.

ಕೆಟ್ಟದು ಮಾಡ್ತಿದ್ರೆ ಆತನು ನೋಡಿನೂ ನೋಡದ ಹಾಗೆ ಇರ್ತಾನಾ?

12 ಕಾಡುಕತ್ತೆಗೆ ಮನುಷ್ಯ ಹುಟ್ಟಲ್ಲ,*

ಅದೇ ತರ ಮೂರ್ಖನಿಗೆ ಬುದ್ಧಿ ಬರಲ್ಲ.

13 ನೀನು ನಿನ್ನ ಹೃದಯ ಶುದ್ಧ ಮಾಡ್ಕೊಂಡ್ರೆ,*

ನಿನ್ನ ಕೈಗಳನ್ನ ಎತ್ತಿ ಪ್ರಾರ್ಥಿಸಿದ್ರೆ,

14 ಮಾಡ್ತಾ ಇರೋ ತಪ್ಪನ್ನ ಬಿಟ್ಟುಬಿಟ್ರೆ,

ಇನ್ನು ಮುಂದೆ ನಿನ್ನ ಡೇರೆಗಳಲ್ಲಿ ಕೆಟ್ಟ ಕೆಲಸ ನಡಿಯದ ಹಾಗೆ ನೋಡ್ಕೊಂಡ್ರೆ

15 ನಿನ್ನಲ್ಲೇನೂ ತಪ್ಪಿರಲ್ಲ, ಆಗ ನೀನು ತಲೆಯೆತ್ತಿ ನಡಿಬಹುದು,

ಭಯ ಇಲ್ಲದೆ ನೆಟ್ಟಗೆ ನಿಲ್ಲಬಹುದು.

16 ನಿನ್ನ ಕಷ್ಟಗಳನ್ನೆಲ್ಲ ಮರೆತುಬಿಡ್ತೀಯ,

ನೀರಿನ ತರ ಕಷ್ಟಗಳೆಲ್ಲ ಹರಿದು ಹೋಗುತ್ತೆ.

17 ನಿನ್ನ ಬದುಕಲ್ಲಿ ಮಧ್ಯಾಹ್ನಕ್ಕಿಂತಲೂ ಜಾಸ್ತಿ ಬೆಳಕಿರುತ್ತೆ,

ರಾತ್ರಿ ಕೂಡ ಹಗಲಿನ ತರ ಇರುತ್ತೆ.

18 ನಿನಗೆ ನಿರೀಕ್ಷೆ ಇರೋದ್ರಿಂದ ಯಾವ ಭಯನೂ ಇರಲ್ಲ,

ನಿನ್ನ ಸುತ್ತ ಅಪಾಯ ಇಲ್ಲದೇ ಇರೋದ್ರಿಂದ ಆರಾಮವಾಗಿ ನಿದ್ದೆ ಮಾಡ್ತೀಯ.

19 ನೀನು ಮಲಗಿದ್ದಾಗ ಯಾರೂ ನಿನ್ನನ್ನ ಹೆದರಿಸಲ್ಲ,

ತುಂಬ ಜನ ಬಂದು ನಿನ್ನ ಸಹಾಯ ಕೇಳ್ತಾರೆ.

20 ಆದ್ರೆ ಕೆಟ್ಟವ್ರಿಗೆ ಕಣ್ಣು ಮಂಜಾಗುತ್ತೆ,

ತಪ್ಪಿಸ್ಕೊಂಡು ಹೋಗೋಕೆ ಅವ್ರಿಗೆ ದಾರಿನೇ ಕಾಣಲ್ಲ,

ಅವ್ರಿಗೆ ಸಾವು ಬಿಟ್ರೆ ಬೇರೆ ದಾರಿನೇ ಇಲ್ಲ.”+

12 ಅದಕ್ಕೆ ಯೋಬ ಹೀಗಂದ:

 2 “ಹೌದೌದು, ನೀವೇ ತುಂಬ ಬುದ್ಧಿವಂತರು,

ನೀವೇನಾದ್ರೂ ಇಲ್ಲದೇ ಹೋದ್ರೆ ಭೂಮಿಯಲ್ಲಿ ವಿವೇಕಿಗಳೇ ಇರಲ್ವೇನೋ!

 3 ನನಗೂ ತಿಳುವಳಿಕೆ ಇದೆ.

ನಾನು ನಿಮಗಿಂತ ಕಮ್ಮಿ ಇಲ್ಲ.

ನೀವು ಹೇಳಿದ ವಿಷ್ಯಗಳೆಲ್ಲ ಯಾರಿಗೆ ತಾನೇ ಗೊತ್ತಿಲ್ಲ?

 4 ನಾನು ದೇವರನ್ನ ಬೇಡ್ಕೊಂಡು ಆತನ ಉತ್ತರಕ್ಕಾಗಿ ಕಾಯ್ತಾ ಇದ್ದೀನಿ,+

ಇದನ್ನ ನೋಡಿ ನನ್ನ ಗೆಳೆಯರು ಆಡ್ಕೊಳ್ತಾರೆ.+

ಒಬ್ಬ ನೀತಿವಂತನನ್ನ, ನಿರಪರಾಧಿಯನ್ನ ನೋಡಿದ್ರೆ ಜನ ನಗೋದು ಸಹಜ.

 5 ನಮಗೆ ಯಾವ ಕಷ್ಟಾನೂ ಬರಲ್ಲ,

ಕಷ್ಟ ಬರೋದು ಚಂಚಲ ಮನಸ್ಸಿನವ್ರಿಗೆ* ಮಾತ್ರ ಅಂತ ಯೋಚಿಸ್ತಾರೆ.

 6 ಲೂಟಿ ಮಾಡೋರು ನೆಮ್ಮದಿಯಿಂದ ಬದುಕ್ತಾರೆ,+

ತಾವು ಆರಾಧಿಸೋ ಮೂರ್ತಿಗಳನ್ನ ಕೈಗಳಲ್ಲಿ ಹೊತ್ಕೊಂಡು ಹೋಗುವವರು

ದೇವರನ್ನ ರೇಗಿಸುವವರು ಚೆನ್ನಾಗಿ ಇರ್ತಾರೆ.+

 7 ಆದ್ರೆ ನೀವು ದಯವಿಟ್ಟು ಪ್ರಾಣಿಗಳನ್ನ ಕೇಳಿ, ಅವು ಕಲಿಸುತ್ತೆ,

ಹಾರಾಡೋ ಪಕ್ಷಿಗಳನ್ನ ಕೇಳಿ, ಅವು ಹೇಳುತ್ತೆ.

 8 ಭೂಮಿ ಬಗ್ಗೆ ಸ್ವಲ್ಪ ಯೋಚಿಸಿ,* ಅದು ಕಲಿಸುತ್ತೆ,

ಸಮುದ್ರದಲ್ಲಿರೋ ಮೀನುಗಳು ಕೂಡ ನಿಮಗೆ ಕಲಿಸುತ್ತೆ.

 9 ಯೆಹೋವನೇ ತಮ್ಮನ್ನ ಸೃಷ್ಟಿ ಮಾಡಿದ್ದು ಅಂತ

ಇವುಗಳಲ್ಲಿ ಎಲ್ಲದ್ದಕ್ಕೂ ಗೊತ್ತು.

10 ಪ್ರತಿಯೊಂದು ಜೀವಿಯ ಪ್ರಾಣ,

ಪ್ರತಿಯೊಬ್ಬ ಮನುಷ್ಯನ ಉಸಿರು* ದೇವರ ಕೈಯಲ್ಲಿದೆ.+

11 ನಾಲಿಗೆ ರುಚಿ ನೋಡೋ ತರ

ಕಿವಿ ಮಾತುಗಳನ್ನ ಕೇಳಿಸ್ಕೊಂಡಾಗ ಯಾವುದು ಸರಿ ಯಾವುದು ತಪ್ಪು ಅಂತ ತಿಳ್ಕೊಳ್ಳಲ್ವಾ?+

12 ವಯಸ್ಸಾದವರಲ್ಲಿ ವಿವೇಕ ಇರುತ್ತೆ,+

ತುಂಬ ಕಾಲ ಬದುಕಿದವರಲ್ಲಿ ತಿಳುವಳಿಕೆ ಇರುತ್ತೆ.

13 ಆದ್ರೆ ದೇವರಿಗೆ ಅದಕ್ಕಿಂತ ತುಂಬ ವಿವೇಕ, ಶಕ್ತಿ,+ ತಿಳುವಳಿಕೆ ಇದೆ.+

ಆತನು ತನ್ನ ಉದ್ದೇಶವನ್ನ ನೆರವೇರಿಸ್ತಾನೆ.

14 ಆತನು ಕೆಡವಿ ಹಾಕಿದ್ದನ್ನ ಯಾರು ಕಟ್ತಾರೆ?+

ಆತನು ಮುಚ್ಚಿದ್ದನ್ನ ತೆರೆಯೋಕೆ ಯಾರಿಂದ ಆಗುತ್ತೆ?

15 ಆತನು ನೀರನ್ನ ತಡೆದ್ರೆ ಭೂಮಿ ಒಣಗಿ ಹೋಗುತ್ತೆ,+

ನೀರನ್ನ ಬಿಟ್ರೆ ಇಡೀ ಭೂಮಿ ಪ್ರವಾಹದಲ್ಲಿ ಮುಳುಗುತ್ತೆ.+

16 ಆತನಿಗೆ ಶಕ್ತಿ, ವಿವೇಕ* ಇದೆ,+

ದಾರಿತಪ್ಪಿದವನು ದಾರಿತಪ್ಪಿಸುವವನು ಆತನ ಕೈಯಲ್ಲಿದ್ದಾರೆ.

17 ಸಲಹೆಗಾರರ ಹತ್ರ ಇರೋದನ್ನೆಲ್ಲ ಕಿತ್ಕೊಳ್ತಾನೆ,*

ನ್ಯಾಯಾಧೀಶರನ್ನ ಮೂರ್ಖರಾಗಿ ಮಾಡ್ತಾನೆ.+

18 ರಾಜರನ್ನ ಅಧಿಕಾರದಿಂದ ತೆಗೆದು ಹಾಕ್ತಾನೆ,*+

ಅವ್ರಿಗೆ ದಾಸರ ಬಟ್ಟೆ ಹಾಕಿಸ್ತಾನೆ.

19 ಸುಳ್ಳು ದೇವರ ಪುರೋಹಿತರನ್ನ ಬರಿಗಾಲಲ್ಲಿ ನಡಿಸ್ತಾನೆ,+

ಅಧಿಕಾರ ಸ್ಥಾನದಲ್ಲಿ ಗಟ್ಟಿಯಾಗಿ ಕೂತವರನ್ನ ಕೆಳಗೆ ಬೀಳಿಸ್ತಾನೆ.+

20 ಭರವಸಾರ್ಹ ಸಲಹೆಗಾರರ ಬಾಯಿ ಮುಚ್ಚುತ್ತಾನೆ,

ವೃದ್ಧರ* ಬುದ್ಧಿವಂತಿಕೆಯನ್ನ ತೆಗೆದುಬಿಡ್ತಾನೆ.

21 ಆತನು ನಾಯಕರ ಮೇಲೆ ಅವಮಾನವನ್ನ ಮಳೆಯಾಗಿ ಸುರಿತಾನೆ,+

ಬಲಶಾಲಿಗಳ ಬಲವನ್ನ ಬತ್ತಿಸಿಬಿಡ್ತಾನೆ.

22 ಕತ್ತಲೆಯಲ್ಲಿ ಮರೆಯಾಗಿ ಇರೋದನ್ನ ಬೆಳಕಿಗೆ ತರ್ತಾನೆ,+

ಕಾರ್ಗತ್ತಲೆ ಮೇಲೆ ಬೆಳಕು ಹರಿಸ್ತಾನೆ.

23 ದೇಶಗಳನ್ನ ದೊಡ್ಡದಾಗಿ ಬೆಳೆಯೋ ಹಾಗೆ ಮಾಡಿ ನಾಶ ಮಾಡ್ತಾನೆ,

ಅವುಗಳ ಗಡಿ ವಿಸ್ತರಿಸೋ ಹಾಗೆ ಮಾಡಿ ಆಮೇಲೆ ಸೆರೆ ಹಿಡ್ಕೊಂಡು ಹೋಗೋ ಹಾಗೆ ಮಾಡ್ತಾನೆ.

24 ಜನನಾಯಕರ ತಿಳುವಳಿಕೆಯನ್ನ ಕಿತ್ಕೊಳ್ತಾನೆ,

ದಾರಿಯಿಲ್ಲದ ಬಂಜರು ಭೂಮಿಯಲ್ಲಿ ಅವ್ರನ್ನ ಅಲೆದಾಡಿಸ್ತಾನೆ.+

25 ಅವರು ಕತ್ತಲೆಯಲ್ಲಿ ತಡಕಾಡ್ತಾರೆ,+

ಅಮಲೇರಿದವರು ಅಲೆದಾಡೋ ತರ ಅಲೆದಾಡ್ತಾರೆ.+

13 ಇದನ್ನೆಲ್ಲ ನಾನು ಕಣ್ಣಾರೆ ನೋಡಿದ್ದೀನಿ,

ಕಿವಿಯಾರೆ ಕೇಳಿ ಅರ್ಥ ಮಾಡ್ಕೊಂಡಿದ್ದೀನಿ.

 2 ನಿಮಗೆ ಗೊತ್ತಿರೋದು ನನಗೂ ಗೊತ್ತು,

ನಾನು ನಿಮಗಿಂತ ಕಮ್ಮಿ ಅಲ್ಲ.

 3 ನಿಮ್ಮ ಹತ್ರ ಮಾತಾಡೋದಕ್ಕಿಂತ ದೇವರ* ಹತ್ರ ಮಾತಾಡೋದೇ ಒಳ್ಳೇದು,

ನನ್ನ ಮೊಕದ್ದಮೆಯನ್ನ ದೇವರ ಮುಂದೆ ಇಟ್ಟು ವಾದಿಸ್ತೀನಿ.+

 4 ನೀವು ಸುಳ್ಳುಗಳನ್ನ ಹೇಳಿ ನನ್ನ ಹೆಸ್ರಿಗೆ ಮಸಿ ಬಳಿದಿದ್ದೀರ,

ನೀವೆಲ್ಲ ಕೆಲಸಕ್ಕೆ ಬಾರದ ವೈದ್ಯರು.+

 5 ನಿಮಗೆ ನಿಜವಾಗ್ಲೂ ಬುದ್ಧಿ ಇದ್ರೆ

ಬಾಯಿ ತೆರೀದೆ ಸುಮ್ನಿರಿ.+

 6 ದಯವಿಟ್ಟು ನನ್ನ ವಾದಗಳನ್ನ ಕಿವಿಗೊಟ್ಟು ಕೇಳಿ,

ನನ್ನ ಮಾತುಗಳನ್ನ ಕೇಳಿ.

 7 ನೀವು ದೇವರ ಹೆಸ್ರಲ್ಲಿ ಅನ್ಯಾಯವಾದ,

ಮೋಸದ ಮಾತುಗಳನ್ನ ಆಡ್ತೀರಾ?

 8 ದೇವರ ಪರವಹಿಸ್ತೀರಾ?

ಸತ್ಯದೇವರ ಪರವಾಗಿ ವಾದ ಮಾಡ್ತೀರಾ?

 9 ಆತನು ನಿಮ್ಮನ್ನ ಪರೀಕ್ಷಿಸಿದ್ರೆ ನಿಮಗೆ ಒಳ್ಳೇದಾಗುತ್ತಾ?+

ಮನುಷ್ಯನಿಗೆ* ಮೋಸ ಮಾಡೋ ತರ ದೇವರಿಗೆ ಮೋಸ ಮಾಡೋಕೆ ನಿಮ್ಮಿಂದಾಗುತ್ತಾ?

10 ಯಾರಿಗೂ ಗೊತ್ತಾಗದ ಹಾಗೆ ಭೇದಭಾವ ಮಾಡೋಕೆ ಹೋದ್ರೆ

ಆತನು ನಿಮ್ಮನ್ನ ಬೈತಾನೆ.+

11 ಆತನ ಮಹಿಮೆ ನೋಡಿ ನಿಮಗೆ ಹೆದರಿಕೆ ಆಗಲ್ವಾ?

ಭಯದಿಂದ ಗಡಗಡ ನಡುಗಲ್ವಾ?

12 ನಿಮ್ಮ ಬುದ್ಧಿಮಾತೆಲ್ಲ* ಕೆಲಸಕ್ಕೆ ಬಾರದ ಬೂದಿ ತರ,

ನಿಮ್ಮ ಕೋಟೆಗಳು* ಬಿದ್ದುಹೋಗೋ ಮಣ್ಣಿನ ಕೋಟೆ ತರ.

13 ನೀವು ಸುಮ್ಮನಿರಿ, ನಾನು ಮಾತಾಡಬೇಕು.

ಆಮೇಲೆ ನನಗೆ ಏನಾಗುತ್ತೋ ಆಗ್ಲಿ!

14 ನನ್ನ ಪ್ರಾಣಕ್ಕೆ ನಾನೇ ಯಾಕೆ ಅಪಾಯ ತಂದ್ಕೊಬೇಕು?

ನನ್ನ ಕೈಯಾರೆ ನನ್ನ ಜೀವನ ಯಾಕೆ ಹಾಳು ಮಾಡ್ಕೋಬೇಕು?

15 ಆತನು ನನ್ನನ್ನ ಕೊಂದ್ರೂ ಪರ್ವಾಗಿಲ್ಲ, ಕೊನೇ ತನಕ ಕಾಯ್ಕೊಂಡು ಇರ್ತಿನಿ,+

ಆತನ ಮುಂದೆ ವಾದ ಮಾಡ್ತೀನಿ.*

16 ಆಗ ಆತನು ನನ್ನನ್ನ ಕಾಪಾಡ್ತಾನೆ,+

ಯಾಕಂದ್ರೆ ಆತನ ಮೇಲೆ ನಂಬಿಕೆ ಇಲ್ಲದ ಜನ್ರನ್ನ* ಆತನು ತನ್ನ ಮುಂದೆ ಬರೋಕೆ ಬಿಡಲ್ವಲ್ಲಾ.+

17 ನಾನು ಹೇಳೋ ಮಾತನ್ನ ಕೇಳಿ,

ನನ್ನ ಮಾತುಗಳಿಗೆ ಗಮನಕೊಡಿ.

18 ನೋಡಿ, ನಾನು ನನ್ನ ಪರ ವಾದ ಮಾಡೋಕೆ ಸಿದ್ಧ,

ನಾನು ತಪ್ಪೇ ಮಾಡಿಲ್ಲ ಅಂತ ನಂಗೊತ್ತು.

19 ಪ್ರತಿವಾದ ಮಾಡೋಕೆ ಯಾರಿದ್ದಾರೆ?

ನಾನೇನೂ ಹೇಳದೆ ಸುಮ್ಮನಿದ್ರೆ ಸತ್ತೇ ಹೋಗ್ತೀನಿ!*

20 ದೇವರೇ, ನಾನು ಎರಡೇ ಎರಡು ವಿಷ್ಯಗಳನ್ನ ಕೇಳ್ಕೊಳ್ತೀನಿ,

ಆಗ ನಾನು ನಿನ್ನಿಂದ ಬಚ್ಚಿಟ್ಕೊಳ್ಳಬೇಕಾಗಿಲ್ಲ.

21 ನಿನ್ನ ಕೈಯಿಂದ ನನ್ನನ್ನ ಹೊಡೆಯೋದನ್ನ ನಿಲ್ಲಿಸು,

ನಿನ್ನ ಭಯದಿಂದ ನಡುಗೋ ತರ ಮಾಡಬೇಡ.+

22 ಒಂದಿಲ್ಲ ನೀನು ಮಾತಾಡು, ನಾನಾಗ ಉತ್ತರ ಕೊಡ್ತೀನಿ,

ಅಥವಾ ನನಗೆ ಮಾತಾಡೋಕೆ ಬಿಡು, ನೀನು ಉತ್ತರ ಕೊಡು.

23 ನಾನೇನು ತಪ್ಪು ಮಾಡಿದೆ? ನಾನೇನು ಪಾಪ ಮಾಡಿದೆ?

ನನ್ನ ಅಪರಾಧ ಏನು, ಯಾವ ಪಾಪ ಮಾಡಿದೆ ಅಂತ ಹೇಳು.

24 ನಿನ್ನ ಮುಖವನ್ನ ಯಾಕೆ ಮರೆಮಾಡ್ತೀಯ?+

ನನ್ನನ್ನ ಯಾಕೆ ಶತ್ರು ತರ ನೋಡ್ತೀಯ?+

25 ಗಾಳಿಯಲ್ಲಿ ಹಾರಿಹೋಗ್ತಿರೋ ಎಲೆಯನ್ನ ಯಾಕೆ ಹೆದರಿಸ್ತೀಯ?

ಒಣಹುಲ್ಲನ್ನ ಯಾಕೆ ಓಡಿಸ್ಕೊಂಡು ಹೋಗ್ತೀಯ?

26 ನನ್ನ ವಿರುದ್ಧ ದೊಡ್ಡ ದೊಡ್ಡ ಆರೋಪಗಳನ್ನ ಬರೆದು ಇಟ್ಕೊಂಡಿದ್ದೀಯ,

ಯೌವನದಲ್ಲಿ ನಾನು ಮಾಡಿದ ಪಾಪಗಳಿಗೆ ಈಗ ಲೆಕ್ಕ ಕೇಳ್ತಾ ಇದ್ದೀಯ.

27 ನೀನು ನನ್ನ ಕಾಲುಗಳಿಗೆ ಕೋಳ* ಹಾಕಿದ್ದೀಯ,

ನನ್ನ ಪ್ರತಿಯೊಂದು ಕೆಲಸದ ಮೇಲೂ ಕಣ್ಣಿಟ್ಟಿದ್ದೀಯ,

ನನ್ನ ಹೆಜ್ಜೆ ಗುರುತು ನೋಡಿ ಹಿಂದೆನೇ ಬರ್ತಾ ಇದ್ದೀಯ.

28 ಹಾಗಾಗಿ ನಾನು* ನುಸಿ ತಿಂದ ಬಟ್ಟೆ ತರ,

ಕೊಳೆತುಹೋದ ವಸ್ತು ತರ ಹಾಳಾಗಿ ಹೋಗ್ತಾ ಇದ್ದೀನಿ.

14 ಸ್ತ್ರೀಗೆ ಹುಟ್ಟಿದ ಮನುಷ್ಯ ಬದುಕೋದು ಸ್ವಲ್ಪ ದಿನ,+

ಅವನ ಬದುಕಿನ ದಾರಿ ತುಂಬ ತೊಂದರೆಗಳು ಅನ್ನೋ ಮುಳ್ಳುಗಳೇ ಜಾಸ್ತಿ.*+

 2 ಅವನು ಹೂವಿನ ತರ ಅರಳಿ ಬಾಡಿಹೋಗ್ತಾನೆ.*+

ನೆರಳು ತರ ಓಡಿ ನಾಪತ್ತೆ ಆಗ್ತಾನೆ.+

 3 ಅಂಥವನ ಮೇಲೆ ನೀನು ಕಣ್ಣಿಟ್ಟಿದ್ದೀಯ,

ಅವನಿಗೆ* ತೀರ್ಪು ಕೊಡೋಕೆ ನ್ಯಾಯಾಲಯಕ್ಕೆ ಕರ್ಕೊಂಡು ಬರ್ತಿಯ.*+

 4 ಅಶುದ್ಧ ಮನುಷ್ಯನಿಗೆ ಶುದ್ಧ ಮನುಷ್ಯ ಹುಟ್ತಾನಾ?+

ಯಾವತ್ತೂ ಹುಟ್ಟಲ್ಲ!

 5 ಮನುಷ್ಯನ ಜೀವಮಾನಕ್ಕೆ ಒಂದು ಮಿತಿ ಇದೆ,

ಅವನು ಬದುಕೋ ತಿಂಗಳುಗಳ ಲೆಕ್ಕ ನಿನ್ನ ಕೈಯಲ್ಲಿದೆ,

ನೀನಿಟ್ಟಿರೋ ಮಿತಿಯನ್ನ ಮೀರೋಕೆ ಅವನಿಗೆ ಆಗಲ್ಲ.+

 6 ಅವನ ಮೇಲಿಂದ ನಿನ್ನ ಕಣ್ಣು ತೆಗಿ, ಅವನು ಸ್ವಲ್ಪ ಆರಾಮಾಗಿ ಇರಲಿ,

ಕೂಲಿ ಕೆಲಸದವನ ಹಾಗೇ ಇಡೀ ದಿನ ಕೆಲಸ ಮುಗಿಸ್ಲಿ.+

 7 ಕಡಿದ ಮರಕ್ಕೂ ನಿರೀಕ್ಷೆ ಇದೆ,

ಅದು ಮತ್ತೆ ಚಿಗುರಿ, ಹೊಸ ರೆಂಬೆಕೊಂಬೆ ಬೆಳೆಯುತ್ತೆ.

 8 ಅದ್ರ ಬೇರು ಎಷ್ಟೋ ಕಾಲದಿಂದ ಮಣ್ಣಲ್ಲೇ ಇದ್ರೂ

ಅದ್ರ ಬುಡ ಮಣ್ಣಲ್ಲಿ ಸತ್ತುಹೋಗಿದ್ರೂ

 9 ನೀರು ಸೋಕಿದ ಕೂಡ್ಲೇ ಚಿಗುರುತ್ತೆ,

ಹೊಸ ಗಿಡದ ತರ ಮತ್ತೆ ರೆಂಬೆಕೊಂಬೆ ಬೆಳೆಯುತ್ತೆ.

10 ಆದ್ರೆ ಒಬ್ಬ ಮನುಷ್ಯ ಸತ್ರೆ ಅವನ ಶಕ್ತಿಯೆಲ್ಲ ಖಾಲಿ ಆಗುತ್ತೆ,

ಒಬ್ಬನ ಉಸಿರು ನಿಂತ್ರೆ ಅವನು ಇಲ್ಲದೆ ಹೋಗ್ತಾನೆ.+

11 ಸಮುದ್ರದ ನೀರು ಬತ್ತಿಹೋಗುತ್ತೆ,

ನದಿ ನೀರು ಇಂಗಿ ಒಣಗಿಹೋಗುತ್ತೆ.

12 ಅದೇ ರೀತಿ ಮನುಷ್ಯ ಮರಣ ನಿದ್ರೆಗೆ ಜಾರಿದ್ರೆ ಮತ್ತೆ ಏಳಲ್ಲ,+

ಆಕಾಶ ಇರೋ ತನಕ ಅವನು ಕಣ್ಣು ತೆರಿಯಲ್ಲ.

ಅವನನ್ನ ಯಾರೂ ಆ ನಿದ್ದೆಯಿಂದ ಎಬ್ಬಿಸಲ್ಲ.+

13 ನನ್ನನ್ನ ಸಮಾಧಿಯಲ್ಲಿ* ಮುಚ್ಚಿಟ್ರೆ,+

ನಿನ್ನ ಕೋಪ ಇಳಿಯೋ ತನಕ ನನ್ನನ್ನ ಅಲ್ಲಿ ಬಚ್ಚಿಟ್ರೆ,

ನನಗೆ ಇಂತಿಷ್ಟು ಸಮಯ ಅಂತ ನಿರ್ಧಾರ ಮಾಡಿ ಆಮೇಲೆ ನನ್ನನ್ನ ನೆನಪಿಸ್ಕೊ!+

14 ಒಬ್ಬ ಮನುಷ್ಯ ಸತ್ರೆ ಮತ್ತೆ ಬದುಕ್ತಾನಾ?+

ನೀನು ಹೇಳಿರುವಷ್ಟು* ದಿನ ಕಾಯ್ತಾ ಅಲ್ಲೇ ಇರ್ತಿನಿ,

ಆಮೇಲೆ ನನಗೆ ಬಿಡುಗಡೆ ಆಗುತ್ತೆ.+

15 ನೀನು ನನ್ನನ್ನ ಕರೀತಿಯ, ಆಗ ನಾನು ಉತ್ತರ ಕೊಡ್ತೀನಿ.+

ನಿನ್ನ ಕೈಯಾರೆ ಸೃಷ್ಟಿ ಮಾಡಿದ ನನ್ನನ್ನ ಮತ್ತೆ ನೋಡೋಕೆ ಹಂಬಲಿಸ್ತೀಯ.*

16 ಆದ್ರೆ ಈಗ, ನಾನಿಡೋ ಒಂದೊಂದು ಹೆಜ್ಜೆಯನ್ನ ಲೆಕ್ಕ ಮಾಡ್ತೀಯ,

ನನ್ನಲ್ಲಿ ತಪ್ಪು ಹುಡುಕೋದೇ ನಿನ್ನ ಕೆಲಸ.

17 ನನ್ನ ಅಪರಾಧಗಳನ್ನ ಒಂದು ಚೀಲದಲ್ಲಿ ಹಾಕಿ ಕಟ್ಟಿ ಇಟ್ಟಿದ್ದೀಯ,

ನನ್ನ ತಪ್ಪುಗಳನ್ನ ಅಂಟುಹಾಕಿ ಮುದ್ರೆ ಒತ್ತಿ ಇಟ್ಟಿದ್ದೀಯ.

18 ಬೆಟ್ಟ ಕುಸಿದು ಪುಡಿಪುಡಿ ಆಗೋ ಹಾಗೆ,

ಬಂಡೆ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗೋ ಹಾಗೆ,

19 ನೀರು ಕಲ್ಲುಗಳನ್ನ ಸವೆಸಿ ಬಿಡೋ ಹಾಗೆ,

ಪ್ರವಾಹ ಮಣ್ಣನ್ನೆಲ್ಲ ಕೊಚ್ಕೊಂಡು ಹೋಗೋ ಹಾಗೆ,

ಒಂದಲ್ಲ ಒಂದಿನ ಸಾಯೋ ಮನುಷ್ಯನ ನಿರೀಕ್ಷೆಯನ್ನ ನುಚ್ಚುನೂರು ಮಾಡಿದ್ದೀಯ.

20 ಅವನು ಸಾಯೋ ತನಕ ಅವನನ್ನ ತುಳಿತೀಯ,+

ಅವನ ರೂಪ ಬದಲಾಯಿಸಿ ಕಳಿಸಿಬಿಡ್ತೀಯ.

21 ಅವನ ಮಕ್ಕಳಿಗೆ ಗೌರವ ಸಿಕ್ಕಿದ್ರೂ,

ಸಿಗದೇ ಇದ್ರೂ ಅವನಿಗೆ ಗೊತ್ತಾಗಲ್ಲ.+

22 ಬದುಕಿರೋ ತನಕ ಅವನಿಗೆ ನೋವು ಗೊತ್ತಾಗುತ್ತೆ,

ಉಸಿರಿರೋ ತನಕ ಅವನು ದುಃಖಪಡ್ತಾನೆ ಅಷ್ಟೇ.”

15 ಅದಕ್ಕೆ ತೇಮಾನ್ಯನಾದ ಎಲೀಫಜ+ ಹೀಗಂದ:

 2 “ಬುದ್ಧಿ ಇರೋನು ತಲೆಬುಡ ಇಲ್ಲದೆ ವಾದ ಮಾಡ್ತಾನಾ?

ಮನಸ್ಸಲ್ಲಿ ಕೆಟ್ಟ ಯೋಚನೆಗಳನ್ನ ತುಂಬಿಸ್ಕೊಳ್ತಾನಾ?*

 3 ವಟವಟ ಅಂತ ಮಾತಾಡಿ ಬೈದ್ರೆ ಪ್ರಯೋಜನ ಇಲ್ಲ,

ದೊಡ್ಡ ದೊಡ್ಡ ಮಾತುಗಳನ್ನ ಹೇಳೋದ್ರಿಂದ ಕೂಡ ಪ್ರಯೋಜನ ಇಲ್ಲ.

 4 ನಿನ್ನಿಂದಾಗಿ ಬೇರೆಯವ್ರಿಗೆ ದೇವರ ಮೇಲೆ ಭಯ ಕಮ್ಮಿ ಆಗಿದೆ,

ದೇವರ ಬಗ್ಗೆ ಯೋಚ್ನೆ ಮಾಡೋದನ್ನೇ ಬಿಟ್ಟುಬಿಟ್ಟಿದ್ದಾರೆ.

 5 ನೀನು ತಪ್ಪು ಮಾಡಿರೋದ್ರಿಂದ ಹೀಗೆಲ್ಲ ಮಾತಾಡ್ತೀಯ,

ಕುತಂತ್ರದಿಂದ ಮಾತಾಡ್ತೀಯ.

 6 ನೀನು ತಪ್ಪು ಮಾಡಿದ್ದೀಯ ಅಂತ ನಾನು ಹೇಳಬೇಕಾಗಿಲ್ಲ, ನಿನ್ನ ಮಾತಿಂದಾನೇ ಗೊತ್ತಾಗುತ್ತೆ,

ನಿನ್ನ ಮಾತುಗಳೇ ನಿನ್ನ ವಿರುದ್ಧ ಸಾಕ್ಷಿ ಹೇಳ್ತಿವೆ.+

 7 ಮನುಷ್ಯರಲ್ಲಿ ನೀನೇನಾ ಮೊದ್ಲು ಹುಟ್ಟಿದ್ದು?

ಬೆಟ್ಟಗಳು ಸೃಷ್ಟಿ ಆಗೋ ಮುಂಚೆನೇ ನೀನು ಹುಟ್ಟಿದ್ಯಾ?

 8 ದೇವರು ನಿನ್ನ ಹತ್ರ ಗುಟ್ಟಾಗಿ ಮಾತಾಡ್ತಾನಾ?

ನೀನೊಬ್ಬನೇ ತುಂಬ ಬುದ್ಧಿವಂತನಾ?

 9 ನಮಗೆ ಗೊತ್ತಿಲ್ಲದೇ ಇರೋ ಯಾವ ವಿಷ್ಯ ನಿನಗೆ ಗೊತ್ತು?+

ನಮಗೆ ಅರ್ಥವಾಗದೇ ಇರೋ ಯಾವ ವಿಷ್ಯ ನಿನಗೆ ಅರ್ಥ ಆಗಿದೆ?

10 ತಲೆನರೆತವರು, ವಯಸ್ಸಾದವರು ನಮ್ಮ ಜೊತೆ ಇದ್ದಾರೆ,+

ನಿನ್ನ ಅಪ್ಪನಿಗಿಂತ ದೊಡ್ಡವರೂ ಇಲ್ಲಿದ್ದಾರೆ.

11 ದೇವರು ಸಮಾಧಾನ ಹೇಳಿದ್ದು ನಿನಗೆ ಸಾಕಾಗಿಲ್ವಾ?

ಮೃದುವಾಗಿ ಹೇಳಿದ್ದನ್ನ ನೀನು ಕೇಳಲ್ವಾ?

12 ನಿನ್ನ ಹೃದಯ ಯಾಕೆ ನೀನೇ ಸರಿ ಅಂತ ಹೇಳ್ತಿದೆ?

ಕೋಪದಿಂದ ಯಾಕೆ ಕಣ್ಣು ಕೆಂಡದ ಹಾಗೆ ಕೆಂಪಾಗಿದೆ?

13 ನಿನ್ನ ಕೋಪವನ್ನ ದೇವರ ಮೇಲೆ ತೋರಿಸ್ತಾ ಇದ್ದೀಯ,

ಅದಕ್ಕೇ ನಿನ್ನ ಬಾಯಿಂದ ಇಂಥ ಮಾತು ಬರ್ತಿದೆ.

14 ಇವತ್ತು ಇದ್ದು ನಾಳೆ ಸಾಯೋ ಮನುಷ್ಯ ತಪ್ಪು ಮಾಡದೇ ಇರೋಕೆ ಆಗುತ್ತಾ?

ಸ್ತ್ರೀಗೆ ಹುಟ್ಟಿದವನು ನೀತಿವಂತನಾಗಿ ಇರೋಕೆ ಆಗುತ್ತಾ?+

15 ನೋಡು, ಆತನಿಗೆ ತನ್ನ ದೇವದೂತರಲ್ಲಿ* ನಂಬಿಕೆ ಇಲ್ಲ,

ಸ್ವರ್ಗ ಸಹ ಆತನ ದೃಷ್ಟಿಯಲ್ಲಿ ಪರಿಶುದ್ಧ ಅಲ್ಲ.+

16 ಹೀಗಿರುವಾಗ ನೀರು ಕುಡಿದಷ್ಟು ಸುಲಭವಾಗಿ ಕೆಟ್ಟದು ಮಾಡೋ ಮನುಷ್ಯ,

ಭ್ರಷ್ಟನಾದ ಅಸಹ್ಯನಾದ ಮನುಷ್ಯ ಯಾವ ಲೆಕ್ಕಕ್ಕೆ?+

17 ನಾನು ಹೇಳೋದನ್ನ ಸ್ವಲ್ಪ ಕೇಳು!

ನಾನು ನೋಡಿದ್ದನ್ನ ಹೇಳ್ತೀನಿ,

18 ವಿವೇಕಿಗಳು ತಾತಮುತ್ತಾತರಿಂದ ತಿಳ್ಕೊಂಡ ವಿಷ್ಯವನ್ನ,+

ಗುಟ್ಟಾಗಿಡದೆ ಹೇಳಿದ ವಿಚಾರವನ್ನ ಹೇಳ್ತೀನಿ, ಕೇಳು!

19 ಅವ್ರಿಗೆ ಮಾತ್ರ ದೇಶ ಸಿಕ್ತು,

ಅಲ್ಲಿ ಯಾವ ಅಪರಿಚಿತರಿಗೂ ಜಾಗ ಸಿಗಲಿಲ್ಲ.

20 ಕೆಟ್ಟವರು ಜೀವನಪೂರ್ತಿ ದುಃಖದಲ್ಲೇ ನರಳಾಡ್ತಾರೆ,

ಕ್ರೂರಿಗಳು ಇಡೀ ಜೀವನ ಕಷ್ಟಪಡ್ತಾರೆ.

21 ಭಯಾನಕ ಸದ್ದು ಅವರ ಕಿವಿಗೆ ಬೀಳುತ್ತೆ,+

ನೆಮ್ಮದಿಯಿಂದ ಇರುವಾಗ ಲೂಟಿಗಾರರು ದಾಳಿ ಮಾಡ್ತಾರೆ.

22 ಕತ್ತಲೆಯಿಂದ ಬಿಡುಗಡೆ ಸಿಗುತ್ತೆ ಅನ್ನೋ ನಂಬಿಕೆ ಅವ್ರಿಗಿಲ್ಲ,+

ಕತ್ತಿಯಿಂದ ಸಾಯೋದು ಖಂಡಿತ.

23 ‘ಊಟ ಎಲ್ಲಿ? ಎಲ್ಲಿ?’ ಅಂತ ಕೇಳ್ತಾ ಆಹಾರಕ್ಕಾಗಿ ಅಲೆದಾಡ್ತಾರೆ,

ಆಗ ಜೀವನ ಕತ್ತಲೆಯಲ್ಲಿ ಮುಳುಗುತ್ತೆ ಅಂತ ಅವ್ರಿಗೆ ಗೊತ್ತಾಗುತ್ತೆ.

24 ನೋವು, ಆತಂಕ ಅವ್ರನ್ನ ಹೆದರಿಸಿ ಬೆದರಿಸುತ್ತೆ,

ಅವು ರಾಜನು ಸೈನ್ಯದ ಜೊತೆ ಬಂದು ದಾಳಿ ಮಾಡೋ ಹಾಗೆ ಮುತ್ಕೊಳ್ಳುತ್ತೆ.

25 ಯಾಕಂದ್ರೆ ಅವರು ದೇವರ ವಿರುದ್ಧ ತಿರುಗಿಬಿದ್ದಿದ್ದಾರೆ,

ಸರ್ವಶಕ್ತನ ಜೊತೆ ಜಗಳ ಮಾಡೋಕೆ* ಧೈರ್ಯ ಮಾಡಿದ್ದಾರೆ.

26 ದೊಡ್ಡ ಗುರಾಣಿ ಹಿಡ್ಕೊಂಡು

ಆತನ ವಿರುದ್ಧ ಮೊಂಡನ ಹಾಗೇ ನುಗ್ಗಿದ್ದಾರೆ,

27 ಅವ್ರ ಮುಖದಲ್ಲೆಲ್ಲ ಕೊಬ್ಬು ಬಂದಿದೆ,

ಸೊಂಟದ ಸುತ್ತ ಬೊಜ್ಜು ತುಂಬಿದೆ.*

28 ಅವ್ರಿದ್ದ ಪಟ್ಟಣಗಳು ಬೇಗ ನಾಶ ಆಗುತ್ತೆ,

ಅವ್ರಿದ್ದ ಮನೆಗಳು ಹಾಳು ಕುಪ್ಪೆಯಾಗುತ್ತೆ,

ಅಲ್ಲಿ ಯಾರೂ ಇರಲ್ಲ.

29 ಅವರು ಶ್ರೀಮಂತರಾಗಲ್ಲ, ಅವ್ರಿಂದ ಹಣ-ಆಸ್ತಿಯನ್ನ ಕೂಡಿಸಿಡೋಕೆ ಆಗಲ್ಲ,

ಅವ್ರ ಆಸ್ತಿ ಹೆಚ್ಚಾಗದೇ ಇರೋದ್ರಿಂದ ಅದು ದೇಶದಲ್ಲೆಲ್ಲ ತುಂಬ್ಕೊಳ್ಳಲ್ಲ.

30 ಕತ್ತಲೆಯಿಂದ ತಪ್ಪಿಸ್ಕೊಳ್ಳೋಕೆ ಅವ್ರಿಂದಾಗಲ್ಲ,

ಅವರು ರೆಂಬೆಕೊಂಬೆಗಳು ಸುಟ್ಟು ಹೋಗಿರೋ ಮರದ ಹಾಗೇ,*

ದೇವರು ಬಾಯಿಂದ ಜೋರಾಗಿ ಊದಿದಾಗ ಸತ್ತು ಹೋಗ್ತಾರೆ.+

31 ಕೆಲಸಕ್ಕೆ ಬಾರದ ವಿಷ್ಯಗಳ ಮೇಲೆ ನಂಬಿಕೆ ಇಟ್ಟು ದಾರಿ ತಪ್ಪಬಾರದು,

ದಾರಿ ತಪ್ಪಿದ್ರೆ ಸಿಗೋದು ಬರೀ ನಿರಾಶೆ.

32 ಅದು ಬೇಗ ಆಗುತ್ತೆ,

ಅವರು ಯಾವತ್ತೂ ರೆಂಬೆಕೊಂಬೆಗಳು ಸೊಂಪಾಗಿ ಬೆಳೆಯದ ಮರ ತರ,+

33 ಹಣ್ಣಾಗೋದಕ್ಕೆ ಮುಂಚೆನೇ ದ್ರಾಕ್ಷಿಗಳು ಉದುರಿಹೋದ ದ್ರಾಕ್ಷಿಬಳ್ಳಿ ತರ,

ಹೂವೆಲ್ಲ ಉದುರಿಹೋದ ಆಲಿವ್‌ ಮರ ತರ.

34 ದೇವರನ್ನ ನಂಬದವ್ರ* ಸಭೆ ಬೆಳೆಯಲ್ಲ,+

ಲಂಚಕೋರರ ಡೇರೆಗಳನ್ನ ಬೆಂಕಿ ಸುಟ್ಟುಬಿಡುತ್ತೆ.

35 ಅವರು ಕೆಟ್ಟದ್ದನ್ನೇ ಯೋಚಿಸ್ತಾರೆ, ಕೆಟ್ಟದ್ದನ್ನೇ ಮಾಡ್ತಾರೆ,

ಹೇಗೆ ಮೋಸ ಮಾಡೋದು ಅಂತ ಸಂಚು ಮಾಡ್ತಾರೆ.”

16 ಅದಕ್ಕೆ ಯೋಬ ಹೀಗಂದ:

 2 “ಇಂಥ ಮಾತುಗಳನ್ನ ಎಷ್ಟೋ ಕೇಳಿದ್ದೀನಿ,

ಸಮಾಧಾನ ಹೇಳೋದನ್ನ ಬಿಟ್ಟು ನನ್ನ ನೋವು ಜಾಸ್ತಿ ಮಾಡಿದ್ದೀರ!+

 3 ನೀನು ಸುಮ್‌ಸುಮ್ನೆ ಏನೇನೋ* ಹೇಳೋದನ್ನ ನಿಲ್ಲಿಸಲ್ವಾ?

ನೀನ್ಯಾಕೆ ನನ್ನ ಮೇಲೆ ಈ ರೀತಿ ರೇಗ್ತೀಯ?

 4 ನೀವು ನನ್ನ ಜಾಗದಲ್ಲಿ ಇದ್ದಿದ್ರೆ

ನಾನೂ ನಿಮ್ಮ ತರ ಮಾತಾಡೋಕೆ,

ನಿಮ್ಮ ಬಗ್ಗೆ ಉದ್ದುದ್ದ ಭಾಷಣ ಬಿಗಿಯೋಕೆ,

ನಿಮ್ಮನ್ನ ಅಣಕಿಸಿ ತಲೆಯಾಡಿಸೋಕೆ ಆಗ್ತಿತ್ತು.+

 5 ಆದ್ರೆ ನಾನು ಹಾಗೆ ಮಾಡದೆ ಧೈರ್ಯ ತುಂಬೋ ಮಾತುಗಳನ್ನ ಹೇಳ್ತಿದ್ದೆ,

ಸಮಾಧಾನ ಹೇಳಿ ನಿಮ್ಮ ನೋವು ಕಡಿಮೆ ಮಾಡ್ತಿದ್ದೆ.+

 6 ನಾನು ಮಾತಾಡಿದ್ರೂ ನನ್ನ ನೋವು ಕಡಿಮೆ ಆಗ್ತಿಲ್ಲ,+

ಹಾಗಂತ ಮಾತಾಡದೇ ಸುಮ್ಮನಿದ್ರೂ ನೋವು ಕಮ್ಮಿ ಆಗಲ್ಲ.

 7 ನಾನು ಧೈರ್ಯ ಕಳ್ಕೊಳ್ಳೋ ಹಾಗೆ ದೇವರು ಮಾಡಿದ್ದಾನೆ,+

ನನ್ನ ಮನೆಯವ್ರನ್ನೆಲ್ಲ ಮಣ್ಣುಪಾಲು ಮಾಡಿದ್ದಾನೆ.

 8 ಆಮೇಲೆ ನನ್ನನ್ನ ಹಿಡ್ಕೊಂಡಿದ್ದಾನೆ, ಅದು ಜನ್ರಿಗೆ ಕಾಣ್ತಿದೆ,

ನನ್ನ ಬಡಕಲು ದೇಹಾನೇ ನನ್ನ ವಿರುದ್ಧ ಸಾಕ್ಷಿ ಹೇಳ್ತಿದೆ.

 9 ಕೋಪದಿಂದ ಆತನು ನನ್ನನ್ನ ಸೀಳಿ ಹಾಕಿದ್ದಾನೆ,

ನನ್ನ ಮೇಲೆ ಹಗೆ ಸಾಧಿಸ್ತಾ ಇದ್ದಾನೆ,+

ನನ್ನನ್ನ ನೋಡಿ ಹಲ್ಲು ಕಡೀತಾ ಇದ್ದಾನೆ,

ಶತ್ರು ಕಣ್ಣಲ್ಲೇ ನನ್ನನ್ನ ಕೊಲ್ತಾ ಇದ್ದಾನೆ.+

10 ಅವರು ನನ್ನ ವಿರುದ್ಧ ಏನೇನೋ ಹೇಳ್ತಿದ್ದಾರೆ,+

ಕೆನ್ನೆಗೆ ಹೊಡೆದು ಅವಮಾನ ಮಾಡಿದ್ದಾರೆ,

ತುಂಬ ಜನ ನನ್ನ ವಿರುದ್ಧ ಸೇರ್ಕೊಂಡಿದ್ದಾರೆ.+

11 ಹುಡುಗರು ಗುಂಪಾಗಿ ನನ್ನ ಮೇಲೆ ಹಲ್ಲೆ ಮಾಡೋ ಹಾಗೇ ದೇವರು ಬಿಟ್ಟಿದ್ದಾನೆ,

ನನ್ನನ್ನ ಕೆಟ್ಟವ್ರ ಕೈಗೆ ಕೊಟ್ಟಿದ್ದಾನೆ.+

12 ನಾನು ನೆಮ್ಮದಿಯಾಗಿದ್ದೆ, ಆದ್ರೆ ದೇವರು ನನ್ನ ಬದುಕನ್ನ ಚೂರುಚೂರು ಮಾಡಿದ್ದಾನೆ,+

ನನ್ನ ಕತ್ತು ಹಿಡಿದು ಜಜ್ಜಿ ಬಿಟ್ಟಿದ್ದಾನೆ,

ನನ್ನನ್ನ ಗುರಿಹಲಗೆ ಮಾಡ್ಕೊಂಡಿದ್ದಾನೆ.

13 ಆತನ ಬಿಲ್ಲುಗಾರರು ನನ್ನ ಸುತ್ತ ನಿಂತಿದ್ದಾರೆ,+

ಆತನು ನನಗೆ ಸ್ವಲ್ಪನೂ ಕನಿಕರ ತೋರಿಸದೆ ನನ್ನ ಮೂತ್ರಪಿಂಡಗಳನ್ನ+ ತಿವಿದಿದ್ದಾನೆ,

ನನ್ನ ಪಿತ್ತರಸವನ್ನ ಭೂಮಿ ಮೇಲೆ ಸುರಿದಿದ್ದಾನೆ.

14 ಗೋಡೆ ಒಡೆದು ಹಾಕೋ ತರ ನನ್ನನ್ನ ಮತ್ತೆ ಮತ್ತೆ ಹೊಡೀತಾ ಇದ್ದಾನೆ,

ಸೈನಿಕನ ತರ ದಾಳಿ ಮಾಡೋಕೆ ನನ್ನ ಕಡೆ ನುಗ್ಗುತ್ತಿದ್ದಾನೆ.

15 ಮೈಮೇಲೆ ಗೋಣಿ ಸುತ್ಕೊಂಡಿದ್ದೀನಿ,+

ನನ್ನ ಗೌರವವನ್ನೆಲ್ಲ* ಮಣ್ಣಲ್ಲಿ ಹೂತು ಹಾಕಿದ್ದೀನಿ.+

16 ಅತ್ತು ಅತ್ತು ನನ್ನ ಮುಖ ಕೆಂಪಾಗಿದೆ,+

ಕಣ್ಣುಗಳ ಸುತ್ತ ಕಪ್ಪಾಗಿದೆ,*

17 ನನ್ನ ಕೈಗಳು ಯಾರಿಗೂ ಹಿಂಸೆ ಮಾಡಿಲ್ಲ,

ನಾನು ಶುದ್ಧ ಮನಸ್ಸಿಂದ ಪ್ರಾರ್ಥನೆ ಮಾಡಿದ್ರೂ ಹೀಗೆಲ್ಲ ಆಯ್ತು.

18 ಭೂಮಿಯೇ, ನನ್ನ ರಕ್ತವನ್ನ ಮುಚ್ಚಬೇಡ!+

ನನ್ನ ಕೂಗು ಯಾವತ್ತೂ ನಿಲ್ಲಬಾರದು!

19 ಈಗ್ಲೂ ನನಗಾಗಿ ಸಾಕ್ಷಿ ಹೇಳುವವನು ಸ್ವರ್ಗದಲ್ಲಿದ್ದಾನೆ,

ನನ್ನ ಪರವಾಗಿ ಸಾಕ್ಷಿ ಹೇಳುವವನು ಮೇಲಿದ್ದಾನೆ.

20 ನಾನು ದೇವರ ಮುಂದೆ ಕಣ್ಣೀರು ಹಾಕ್ತಿದ್ರೆ*+

ನನ್ನ ಸ್ನೇಹಿತರು ಗೇಲಿ ಮಾಡ್ತಾರೆ.+

21 ಇಬ್ರು ಮನುಷ್ಯರ ಮಧ್ಯ ಇನ್ನೊಬ್ಬ ಮಧ್ಯಸ್ಥಿಕೆ ವಹಿಸೋ ತರ

ನನ್ನ ಮತ್ತು ದೇವರ ಮಧ್ಯ ಯಾರಾದ್ರೂ ಮಧ್ಯಸ್ಥಿಕೆ ವಹಿಸಿದ್ರೆ ಚೆನ್ನಾಗಿತ್ತು.+

22 ಇನ್ನೇನೂ ನಾಲ್ಕು ದಿನ ಬದುಕ್ತೀನಿ ಅಷ್ಟೇ,

ಆಮೇಲೆ ಕಣ್ಮರೆ ಆಗ್ತೀನಿ, ವಾಪಸ್‌ ಬರಲ್ಲ.+

17 ನನಗೆ ಒಂಚೂರೂ ಬಲ ಇಲ್ಲ, ನನ್ನ ಜೀವನ ಮುಗಿದು ಹೋಗ್ತಾ ಇದೆ,

ಸಮಾಧಿ ನನಗಾಗಿ ಕಾಯ್ತಿದೆ.+

 2 ಗೇಲಿ ಮಾಡುವವರು ನನ್ನ ಸುತ್ತ ಇದ್ದಾರೆ,+

ಅವ್ರ ಕೆಟ್ಟ ನಡತೆ ನೋಡಿ ನೋಡಿ ಸಾಕಾಗಿದೆ.

 3 ದೇವರೇ, ದಯವಿಟ್ಟು ನನ್ನ ಜಾಮೀನನ್ನ ಸ್ವೀಕರಿಸಿ, ಅದನ್ನ ನಿನ್ನ ಹತ್ರಾನೇ ಇಟ್ಕೊ.

ನಿನ್ನನ್ನ ಬಿಟ್ರೆ ನನ್ನ ಪರವಹಿಸಿ ನನಗೆ ಜಾಮೀನು ಕೊಡೋಕೆ ಬೇರೆ ಯಾರೂ ಇಲ್ಲ.+

 4 ಅವ್ರಿಗೆ ಬುದ್ಧಿ ಬರದ ಹಾಗೆ ನೀನು ಅವ್ರ ಹೃದಯವನ್ನ ಮುಚ್ಚಿಬಿಟ್ಟಿದ್ದೀಯ,+

ಅದಕ್ಕೇ ಅವ್ರಿಗೆ ಗೌರವ ಸಿಗೋ ತರ ನೀನು ಮಾಡಲ್ಲ.

 5 ಇಂಥವನು ತನ್ನ ಆಸ್ತಿಯನ್ನ ಸ್ನೇಹಿತರಿಗೆ ಹಂಚ್ತಾನೆ,

ಆದ್ರೆ ಅವನ ಮಕ್ಕಳೇ ಹಸಿವೆಯಿಂದ ಕಂಗಾಲಾಗಿ ಹೋಗ್ತಾರೆ.

 6 ಜನ್ರು ನನ್ನನ್ನ ನೋಡಿ ನಗೋ ಹಾಗೆ* ದೇವರು ಮಾಡಿದ್ದಾನೆ,+

ಅವರು ನನ್ನ ಮುಖಕ್ಕೆ ಉಗುಳ್ತಾರೆ.+

 7 ಕಷ್ಟಗಳಿಂದ ನನ್ನ ಕಣ್ಣುಗಳು ಮಬ್ಬಾಗಿವೆ,+

ನನ್ನೆಲ್ಲ ಅಂಗಗಳು ಬಡಕಲಾಗಿವೆ.

 8 ಇದನ್ನ ನೋಡಿ ನೀತಿವಂತ ಜನ್ರು ಆಶ್ಚರ್ಯ ಪಡ್ತಾರೆ,

ದೇವರ ಮೇಲೆ ನಂಬಿಕೆ ಇಲ್ಲದವನನ್ನ* ನೋಡಿ ಒಳ್ಳೇ ಜನ್ರಿಗೆ* ಕೋಪ ಬಂದಿದೆ.

 9 ಆದ್ರೆ ನೀತಿವಂತ ನೀತಿಯ ದಾರಿಯಲ್ಲಿ ನಡಿತಾ ಇದ್ದಾನೆ,+

ತಪ್ಪು ಮಾಡದವ್ರಿಗೆ ಬಲ ಜಾಸ್ತಿ ಆಗಿದೆ.+

10 ನೀವೆಲ್ಲ ನಿಮ್ಮ ವಾದವನ್ನ ಮತ್ತೆ ಶುರು ಮಾಡಿ,

ಯಾಕಂದ್ರೆ ಇಲ್ಲಿ ತನಕ ನಿಮ್ಮಲ್ಲಿ ಒಬ್ರೂ ಬುದ್ಧಿವಂತರ ಹಾಗೇ ಮಾತಾಡಲಿಲ್ಲ.+

11 ನಾನಿನ್ನು ಹೆಚ್ಚು ದಿನ ಬದುಕಲ್ಲ,+

ನನ್ನ ಕನಸುಗಳು, ಆಸೆಗಳು ನುಚ್ಚುನೂರಾಗಿವೆ.+

12 ನನ್ನ ಸ್ನೇಹಿತರು ರಾತ್ರಿನ ಹಗಲು ಅಂತಾರೆ

‘ಬೆಳಗಾಗುತ್ತಿದೆ’ ಅಂತಾರೆ, ಆದ್ರೆ ನನಗೆ ಕತ್ತಲೆ ಬಿಟ್ರೆ ಬೇರೇನೂ ಕಾಣ್ತಿಲ್ಲ.

13 ನಾನು ಹೀಗೆ ಕಾಯ್ತಾ ಕಾಯ್ತಾ ಸಮಾಧಿನೇ* ನನ್ನ ಮನೆ ಆಗುತ್ತೆ,+

ಆ ಕತ್ತಲೆಯಲ್ಲಿ ನಾನು ಹಾಸಿಗೆ ಹಾಸಿಕೊಳ್ಳಬೇಕಾಗುತ್ತೆ.+

14 ಆಗ ನಾನು ಸಮಾಧಿಯನ್ನ+ ‘ನೀನೇ ನನ್ನ ಅಪ್ಪ!’ ಅಂತ ಹೇಳ್ತೀನಿ.

ಹುಳವನ್ನ ‘ಅಮ್ಮ, ತಂಗಿ’ ಅಂತ ಕರಿತೀನಿ.

15 ನನಗೆ ಇನ್ನೇನು ನಿರೀಕ್ಷೆ ಇದೆ?+

ನನಗೆ ನಿರೀಕ್ಷೆಯಿದೆ ಅಂತ ಯಾರಿಗಾದ್ರೂ ಅನಿಸ್ತಾ?

16 ನನ್ನ ನಿರೀಕ್ಷೆ ಮಣ್ಣಾಗುತ್ತೆ,

ಅದ್ರ ಜೊತೆ ನಾನೂ ಮಣ್ಣಾಗಿ ಹೋಗ್ತೀನಿ.”+

18 ಆಗ ಶೂಹ್ಯನಾದ ಬಿಲ್ದದ+ ಹೀಗಂದ:

 2 “ಸಾಕಪ್ಪಾ ನಿನ್ನ ಭಾಷಣ!

ಮೊದ್ಲು ಚೆನ್ನಾಗಿ ಯೋಚ್ನೆ ಮಾಡು, ಆಮೇಲೆ ಮಾತಾಡೋಣ.

 3 ನಾವೇನು ಪ್ರಾಣಿಗಳಾ?+

ಮೂರ್ಖರಾ?

 4 ಕೋಪದಿಂದ ನಿನ್ನನ್ನೇ ತುಂಡುತುಂಡು ಮಾಡ್ಕೊಂಡ್ರೆ

ನೀನಿಲ್ಲ ಅಂತ ಭೂಮಿ ಖಾಲಿಯಾಗಿ ಇರುತ್ತಾ?

ಬಂಡೆ ತನ್ನ ಜಾಗ ಬಿಟ್ಟು ಬೇರೆ ಕಡೆ ಹೋಗುತ್ತಾ?

 5 ಕೆಟ್ಟವನ ದೀಪ ಖಂಡಿತ ಆರಿಹೋಗುತ್ತೆ,

ಅವನ ಬೆಂಕಿ ಉರಿಯಲ್ಲ.+

 6 ಅವನ ಡೇರೆಯಲ್ಲಿ ಬೆಳಕು ಇಲ್ಲದೆ ಕತ್ತಲೆ ಕವಿಯುತ್ತೆ,

ಅವನ ಮನೆ ದೀಪ ಆರಿಹೋಗುತ್ತೆ.

 7 ಬೇಗ ಬೇಗ ನಡಿತಾ ಇದ್ದವನು ನಿಧಾನವಾಗಿ ನಡಿತಾನೆ,

ಅವನ ಸಲಹೆ ಅವನನ್ನೇ ಕೆಳಗೆ ಬೀಳಿಸುತ್ತೆ.+

 8 ಅವನ ಕಾಲುಗಳೇ ಅವನನ್ನ ಬಲೆ ಕಡೆಗೆ ಕರ್ಕೊಂಡು ಹೋಗುತ್ತೆ,

ಬಲೆ ಮೇಲೆ ನಡಿತಾನೆ.

 9 ಉರ್ಲು ಅವನ ಹಿಮ್ಮಡಿ ಹಿಡಿಯುತ್ತೆ,

ಅದು ಅವನನ್ನ ಸಿಕ್ಕಿಸಿ ಹಾಕುತ್ತೆ.+

10 ಅವನನ್ನ ಬೀಳಿಸೋಕೆ ನೆಲದ ಮೇಲೆ ಕಾಣದ ಹಾಗೆ ಹಗ್ಗ ಇಟ್ಟಿರ್ತಾರೆ,

ಅವನು ನಡಿಯೋ ದಾರೀಲಿ ಉರ್ಲು ಇಟ್ಟಿರ್ತಾರೆ.

11 ನಾಲ್ಕೂ ದಿಕ್ಕಿಂದ ಅವನಿಗೆ ಭಯ ಕಾಡುತ್ತೆ,+

ಅದು ಅವನ ಬೆನ್ನುಬಿಡದೆ ಅಟ್ಟಿಸ್ಕೊಂಡು ಹೋಗುತ್ತೆ.

12 ಅವನ ಬಲ ಕಮ್ಮಿ ಆಗ್ತಾ ಹೋಗುತ್ತೆ,

ಕಷ್ಟದಿಂದ+ ತತ್ತರಿಸಿ ಓಲಾಡ್ತಾ* ನಡಿತಾನೆ.

13 ದೊಡ್ಡ ರೋಗ ಬಂದು ಅವನ ಚರ್ಮ ಕೊಳೆತು ಹೋಗುತ್ತೆ,

ಅವನ ಎಲ್ಲಾ ಅಂಗಗಳನ್ನ ತಿಂದುಹಾಕುತ್ತೆ.

14 ಅವನು ಸುರಕ್ಷಿತವಾಗಿದ್ದ ಡೇರೆಯಿಂದ ಅವನನ್ನ ಎಳ್ಕೊಂಡು ಹೋಗಿ+

ಭಯಂಕರ ರಾಜನ* ಹತ್ರ ಬಿಟ್ಟುಬಿಡ್ತಾರೆ.

15 ಅಪರಿಚಿತರು ಅವನ ಡೇರೆಯಲ್ಲಿ ವಾಸ ಮಾಡ್ತಾರೆ,

ಅವನ ಮನೆಗೆ ಬೆಂಕಿ ಇಡ್ತಾರೆ.+

16 ಅವನ ಬೇರುಗಳು ಒಣಗಿಹೋಗುತ್ತೆ,

ರೆಂಬೆಕೊಂಬೆಗಳು ಬಾಡಿಹೋಗುತ್ತೆ.

17 ಭೂಮಿ ಮೇಲೆ ಯಾರಿಗೂ ಅವನ ನೆನಪು ಇರಲ್ಲ,

ಬೀದಿಯಲ್ಲಿ ಯಾರಿಗೂ ಅವನ ಹೆಸ್ರು ಗೊತ್ತಿರಲ್ಲ.

18 ಬೆಳಕಿಂದ ಕತ್ತಲೆಗೆ ಅವನನ್ನ ನೂಕ್ತಾರೆ,

ಈ ಲೋಕದಿಂದಾನೇ ಅವನನ್ನ ಅಟ್ಟಿಸಿಬಿಡ್ತಾರೆ.

19 ಅವನಿಗೆ ಮಕ್ಕಳು ಇರಲ್ಲ, ವಂಶನೂ ಇರಲ್ಲ,

ಅವನಿದ್ದ ಜಾಗದಲ್ಲಿ ಅವನಿಗೆ ವಂಶೋದ್ಧಾರಕ ಇರಲ್ಲ.

20 ಅವನ ಕಷ್ಟದ ದಿನ ಬಂದಾಗ ಪಶ್ಚಿಮದ ಜನ್ರು ಭಯಪಡ್ತಾರೆ,

ಪೂರ್ವದ ಜನ್ರಿಗೆ ಭಯದಿಂದ ಕೈಕಾಲು ಓಡಲ್ಲ.

21 ಕೆಟ್ಟದು ಮಾಡುವವರಿಗೆ ಇದೇ ಗತಿ ಬರುತ್ತೆ,

ದೇವರನ್ನ ತಿಳ್ಕೊಳ್ಳದೆ ಇರೋ ಜನ್ರಿಗೂ ಇದೇ ಗತಿ ಆಗುತ್ತೆ.”

19 ಅದಕ್ಕೆ ಯೋಬ ಹೀಗೆ ಉತ್ತರ ಕೊಟ್ಟ:

 2 “ನೀವು ಇನ್ನೆಷ್ಟು ಹೊತ್ತು ಹೀಗೆ ನನ್ನ ಪ್ರಾಣ* ತಿಂತೀರಾ?+

ಮಾತುಗಳಿಂದ ಚುಚ್ಚಿ ಚುಚ್ಚಿ ಸಾಯಿಸ್ತೀರ?+

 3 ಯಾವಾಗ್ಲೂ* ನನಗೆ ಬೈತೀರಾ,*

ನನಗೆ ಸ್ವಲ್ಪನೂ ದಯೆ ತೋರಿಸ್ತಿಲ್ಲ, ನಿಮಗೆ ನಾಚಿಕೆ ಆಗಲ್ವಾ?+

 4 ನಾನು ತಪ್ಪು ಮಾಡಿದ್ರೆ

ನಾನು ತಾನೇ ಕಷ್ಟಪಡೋದು, ನಿಮಗೇನು ಕಷ್ಟ?

 5 ನನಗಿಂತ ನೀವೇ ಒಳ್ಳೆಯವರು ಅಂತ ಸಾಧಿಸೋಕೆ ಒಂಟಿಕಾಲಲ್ಲಿ ನಿಂತಿದ್ದೀರಾ?

‘ಇವನಿಗೆ ಸರಿಯಾದ ಶಿಕ್ಷೆ ಸಿಕ್ಕಿದೆ’ ಅಂತ ಸಾಬೀತು ಮಾಡೋಕೆ ಪ್ರಯತ್ನಿಸ್ತಾ ಇದ್ದೀರಾ?

 6 ಆದ್ರೆ ಒಂದು ವಿಷ್ಯ ತಿಳ್ಕೊಳ್ಳಿ, ದೇವರೇ ನನಗೆ ಅನ್ಯಾಯ ಮಾಡಿದ್ದಾನೆ,

ಆತನು ಬಲೆ ಬೀಸಿ ನನ್ನನ್ನ ಬೇಟೆಯಾಡಿದ್ದಾನೆ.

 7 ‘ಈ ಕಷ್ಟ ಸಹಿಸೋಕೆ ಆಗ್ತಿಲ್ಲ’ ಅಂತ ಕೂಗುತ್ತಾ ಇದ್ದೀನಿ, ಆದ್ರೆ ಯಾರೂ ಕೇಳ್ತಿಲ್ಲ,+

ಸಹಾಯಕ್ಕಾಗಿ ಅರಚುತ್ತಾ ಇದ್ದೀನಿ, ನನಗೆ ನ್ಯಾಯ ಸಿಗ್ತಿಲ್ಲ.+

 8 ನಾನು ಮುಂದೆ ಹೋಗದ ಹಾಗೆ ದಾರಿಗೆ ಅಡ್ಡವಾಗಿ ಕಲ್ಲಿನ ಗೋಡೆ ಕಟ್ಟಿದ್ದಾನೆ,

ದಾರೀಲಿ ಕತ್ತಲೆ ಕವಿಯೋ ಹಾಗೆ ಮಾಡಿದ್ದಾನೆ.+

 9 ಆತನು ನನ್ನ ಗೌರವ ಕಿತ್ಕೊಂಡಿದ್ದಾನೆ,

ಕಿರೀಟದ ಹಾಗಿದ್ದ ನನ್ನ ಮಾನ ಮರ್ಯಾದೆ ತೆಗೆದುಬಿಟ್ಟಿದ್ದಾನೆ.

10 ನಾನು ಕಣ್ಮರೆಯಾಗಿ ಹೋಗಬೇಕು ಅಂತ ನಾಲ್ಕೂ ಕಡೆಯಿಂದ ನಾಶ ಮಾಡ್ತಿದ್ದಾನೆ,

ನನ್ನ ನಿರೀಕ್ಷೆಯನ್ನ ಬೇರುಸಮೇತ ಕಿತ್ತು ಹಾಕ್ತಾ ಇದ್ದಾನೆ.

11 ಆತನಿಗೆ ನನ್ನ ಮೇಲೆ ಕೋಪ ಉರಿತಿದೆ,

ಆತನು ನನ್ನನ್ನ ಶತ್ರು ತರ ನೋಡ್ತಾ ಇದ್ದಾನೆ.+

12 ಆತನ ಸೈನ್ಯಗಳು ಒಟ್ಟಿಗೆ ಬಂದು ನನಗೆ ಮುತ್ತಿಗೆ ಹಾಕ್ತಾ ಇವೆ,

ನನ್ನ ಡೇರೆ ಸುತ್ತಾ ಪಾಳೆಯ ಹೂಡಿವೆ.

13 ನನ್ನ ಸ್ವಂತ ಅಣ್ಣತಮ್ಮಂದಿರನ್ನ ನನ್ನಿಂದ ದೂರ ಮಾಡಿದ್ದಾನೆ,

ಪರಿಚಯಸ್ಥರು ನನ್ನ ಹತ್ರ ಬರ್ತಿಲ್ಲ.+

14 ಆಪ್ತ ಸ್ನೇಹಿತರು* ನನ್ನನ್ನ ಬಿಟ್ಟುಹೋಗಿದ್ದಾರೆ,

ನನಗೆ ತುಂಬ ಗೊತ್ತಿರೋರು ಕೂಡ ನನ್ನ ಗುರುತು ಹಿಡಿತಿಲ್ಲ.+

15 ನನ್ನ ಮನೆಯ ಅತಿಥಿಗಳು,+ ದಾಸಿಯರು ನನ್ನನ್ನ ಹೊರಗಿನವನ ತರ ನೋಡ್ತಾರೆ,

ಅವ್ರ ಕಣ್ಣಿಗೆ ನಾನು ವಿದೇಶಿ.

16 ನನ್ನ ಸೇವಕನನ್ನ ಕರೆದ್ರೂ ಕಿವಿಗೆ ಹಾಕೊಳ್ತಿಲ್ಲ,

ದಯೆ ತೋರಿಸು ಅಂತ ಬಾಯಿಬಿಟ್ಟು ಬೇಡ್ಕೊಂಡ್ರೂ ಉತ್ತರ ಕೊಡ್ತಿಲ್ಲ.

17 ನನ್ನ ಉಸಿರು ನನ್ನ ಹೆಂಡತಿಗೆ ಅಸಹ್ಯವಾಗಿದೆ,+

ನನ್ನ ಕೆಟ್ಟ ವಾಸನೆಯಿಂದ ಒಡಹುಟ್ಟಿದ ಸಹೋದರರು ದೂರ ಓಡ್ತಾರೆ.

18 ಚಿಕ್ಕ ಮಕ್ಕಳು ಕೂಡ ನನ್ನ ಹತ್ರ ಬರ್ತಿಲ್ಲ,

ನಾನು ಎದ್ದು ನಿಂತ್ರೆ ಸಾಕು ಗೇಲಿ ಮಾಡ್ತಾರೆ.

19 ಪ್ರಾಣ ಸ್ನೇಹಿತರೆಲ್ಲ ನನ್ನನ್ನ ನೋಡಿ ಅಸಹ್ಯಪಡ್ತಾರೆ,+

ನಾನು ತುಂಬ ಪ್ರೀತಿಸಿದವರೇ ತಿರುಗಿ ಬಿದ್ದಿದ್ದಾರೆ.+

20 ನನ್ನ ದೇಹದಲ್ಲಿ ಮೂಳೆ, ಚರ್ಮ ಮಾತ್ರ ಇದೆ,+

ಜೀವ ಒಂದು ಬಿಟ್ರೆ ನನ್ನ ಹತ್ರ ಬೇರೇನೂ ಉಳಿದಿಲ್ಲ.

21 ಸ್ನೇಹಿತರೇ, ನನಗೆ ಕರುಣೆ ತೋರಿಸಿ, ದಯವಿಟ್ಟು ಕರುಣೆ ತೋರಿಸಿ,

ಯಾಕಂದ್ರೆ ದೇವರು ನನ್ನನ್ನ ಹೊಡೆದಿದ್ದಾನೆ.+

22 ದೇವರ ಹಾಗೆ ನೀವು ಕೂಡ ನಂಗೆ ಯಾಕೆ ಹಿಂಸೆ ಕೊಡ್ತೀರ?+

ಯಾಕೆ ನನ್ನ ಮೇಲೆ ದಾಳಿ ಮಾಡ್ತಾನೇ ಇದ್ದೀರ?+

23 ನಾನು ಹೇಳೋ ಮಾತುಗಳನ್ನ ಬರೆದಿಟ್ರೆ,

ಪುಸ್ತಕದಲ್ಲಿ ಬರೆದಿಟ್ರೆ ಎಷ್ಟೋ ಚೆನ್ನಾಗಿತ್ತು!

24 ನನ್ನ ಮಾತುಗಳನ್ನ ಬಂಡೆ ಮೇಲೆ ಕಬ್ಬಿಣದ ಲೇಖನಿಯಿಂದ* ಕೆತ್ತಿ,

ಅದ್ರಲ್ಲಿ ಸೀಸ ತುಂಬಿಸಿ ಹಾಳಾಗದ ಹಾಗೆ ಮಾಡಿದ್ರೆ ಚೆನ್ನಾಗಿತ್ತು!

25 ನನ್ನನ್ನ ಕಾಪಾಡುವವನು*+ ಒಬ್ಬನಿದ್ದಾನೆ ಅಂತ ನಂಗೆ ಚೆನ್ನಾಗಿ ಗೊತ್ತು,

ಅವನು ಭವಿಷ್ಯದಲ್ಲಿ ಬರ್ತಾನೆ, ಭೂಮಿ ಮೇಲೆ ನಿಂತ್ಕೊಳ್ತಾನೆ.

26 ಈ ರೀತಿ ನನ್ನ ಚರ್ಮವೆಲ್ಲ ಹಾಳಾಗಿ ಹೋದ್ರೂ

ನಾನು ಬದುಕಿರುವಾಗ್ಲೇ ದೇವರನ್ನ ನೋಡ್ತೀನಿ,

27 ನಾನೇ ಆತನನ್ನ ನೋಡ್ತೀನಿ,

ಬೇರೆಯವ್ರ ಮೂಲಕ ಅಲ್ಲ, ನಾನೇ ಕಣ್ಣಾರೆ ನೋಡ್ತೀನಿ.+

ಆದ್ರೂ ಚಿಂತೆಯಲ್ಲಿ ಮುಳುಗಿ ಹೋಗಿದ್ದೀನಿ.

28 ‘ಅವನಿಗೆ ನಾವೇನು ಹಿಂಸೆ ಕೊಡ್ತಾ ಇದ್ದೀವಿ?’ ಅಂತ ಹೇಳ್ತಾ ಇದ್ದೀರಲ್ಲಾ.+

ತಪ್ಪೆಲ್ಲ ನಂದೇ ಅನ್ನೋ ತರ ಮಾತಾಡ್ತಾ ಇದ್ದೀರಲ್ಲಾ.

29 ನಿಮಗೆ ಭಯನೇ ಇಲ್ವಾ? ದೇವರ ಕತ್ತಿಗೆ ಭಯಪಡಿ,+

ತಪ್ಪು ಮಾಡುವವರಿಗೆ ಅದು ಶಿಕ್ಷೆ ಕೊಡದೆ ಬಿಡಲ್ಲ,

ನ್ಯಾಯಾಧೀಶನೊಬ್ಬ ಇದ್ದಾನೆ ಅಂತ ಮರಿಬೇಡಿ!”+

20 ಆಗ ನಾಮಾಥ್ಯನಾದ ಚೋಫರ+ ಹೀಗಂದ:

 2 “ನೀನು ಹೀಗೆಲ್ಲ ಮಾತಾಡೋದು ಕೇಳಿ

ಕಿರಿಕಿರಿ ಆಗ್ತಿದೆ, ಕಳವಳ ಆಗ್ತಿದೆ,

ಮಾತಾಡದೆ ಸುಮ್ನೆ ಇರೋಕೂ ಆಗ್ತಿಲ್ಲ.

 3 ಬಾಯಿಗೆ ಬಂದ ಹಾಗೆ ಮಾತಾಡಿ ನನ್ನನ್ನ ಅವಮಾನ ಮಾಡಿದ್ದೀಯ,

ನನಗೆ ಬುದ್ಧಿ ಇರೋದ್ರಿಂದ ಮಾತಾಡದೇ ಇರಲ್ಲ.

 4 ಭೂಮಿ ಮೇಲೆ ಮನುಷ್ಯ* ಸೃಷ್ಟಿಯಾದ ಸಮಯದಿಂದ ನಡಿತಿರೋ

ಒಂದು ವಿಷ್ಯ ಹೇಳ್ತೀನಿ, ಕೇಳು.

ಅದು ನಿನಗೆ ಗೊತ್ತಿರೋ ವಿಷ್ಯಾನೇ,+

 5 ಕೆಟ್ಟವನು ಖುಷಿಯಿಂದ ಹಿಗ್ಗುವುದು ಸ್ವಲ್ಪನೇ ಕಾಲ,

ದೇವರನ್ನ ನಂಬದವನ* ಖುಷಿ ಜಾಸ್ತಿ ಸಮಯ ಇರಲ್ಲ.+

 6 ಅವನ ಅಹಂಕಾರ ಆಕಾಶದಷ್ಟು ಎತ್ರ ಬೆಳೆದ್ರೂ

ಅವನ ತಲೆ ಮುಗಿಲೆತ್ತರಕ್ಕೆ ಬೆಳೆದ್ರೂ

 7 ಅವನ ಮಲದ ಹಾಗೇ ಅವನು ಕೂಡ ಮಣ್ಣಾಗ್ತಾನೆ.

ಅವನ ಪರಿಚಯ ಇದ್ದವರು ‘ಎಲ್ಲಿ ಹೋದ?’ ಅಂತ ಕೇಳ್ತಾರೆ.

 8 ಅವನು ಕನಸಿನ ಹಾಗೆ ಹಾರಿಹೋಗ್ತಾನೆ, ಹುಡುಕಿದ್ರೂ ಸಿಗಲ್ಲ,

ರಾತ್ರಿ ಬಿದ್ದ ಕನಸಿನ ಹಾಗೆ ಕಣ್ಮರೆ ಆಗ್ತಾನೆ.

 9 ಮೊದ್ಲು ಅವನನ್ನ ನೋಡ್ತಾ ಇದ್ದವ್ರಿಗೆ ಅವನು ಕಾಣಲ್ಲ,

ಅವನ ಮನೆಯಲ್ಲಿ ಅವನು ಇರಲ್ಲ.+

10 ಅವನ ಮಕ್ಕಳು ಬಡವರ ದಯೆಯಿಂದ ಬದುಕ್ತಾರೆ,

ಬೇರೆಯವ್ರಿಂದ ಲಪಟಾಯಿಸಿದ ಸಂಪತ್ತನ್ನ ಅವನು ತನ್ನ ಕೈಯಾರೆ ವಾಪಸ್‌ ಕೊಡ್ತಾನೆ.+

11 ಅವನಲ್ಲಿ* ಯೌವನದ ಶಕ್ತಿ ಯಾವಾಗ್ಲೂ ಇರ್ತಿತ್ತು,

ಆದ್ರೆ ಈಗ ಅವನ ಜೊತೆ ಮಣ್ಣಿಗೆ ಹೋಗುತ್ತೆ.

12 ಕೆಟ್ಟದು ಮಾಡೋದು ಅವನಿಗೆ ಸಿಹಿ ತರ,

ಅದನ್ನ ನಾಲಿಗೆ ಕೆಳಗೆ ಇಟ್ಕೊಂಡು ಕರಗಿಸ್ತಾನೆ.

13 ಅದನ್ನ ಉಗುಳೋಕೆ ಮನಸ್ಸಿಲ್ಲದೆ

ಚಪ್ಪರಿಸ್ತಾ ಬಾಯಲ್ಲೇ ಇಟ್ಕೊಳ್ತಾನೆ,

14 ಆದ್ರೆ ಅದು ಅವನ ಹೊಟ್ಟೆ ಒಳಗೆ ಹೋದ ಕೂಡ್ಲೇ ಕಹಿಯಾಗುತ್ತೆ,

ನಾಗರಹಾವಿನ ವಿಷದ ತರ ಆಗುತ್ತೆ.

15 ಅವನು ನುಂಗಿಹಾಕಿದ ಸಂಪತ್ತನ್ನೆಲ್ಲ ಕಾರಿಬಿಡ್ತಾನೆ,

ಹೊಟ್ಟೆ ಒಳಗಿರೋದನ್ನ ಕಕ್ಕೋ ಹಾಗೆ ದೇವರು ಮಾಡ್ತಾನೆ.

16 ಅವನು ನಾಗರಹಾವಿನ ವಿಷ ಹೀರ್ತಾನೆ,

ಮಂಡಲ ಹಾವು ಅವನನ್ನ ಕಚ್ಚಿ ಸಾಯಿಸುತ್ತೆ.

17 ನದಿ ತರ, ಪ್ರವಾಹದ ತರ ಸಮೃದ್ಧವಾಗಿರೋ

ಜೇನುತುಪ್ಪ ಆಗ್ಲಿ ಬೆಣ್ಣೆ ಆಗ್ಲಿ ಅವನಿಗೆ ಸಿಗಲ್ಲ.

18 ಅವನು ಸೇರಿಸಿಟ್ಟ ಆಸ್ತಿಯನ್ನ ಅನುಭವಿಸದೆ ವಾಪಸ್‌ ಕೊಡ್ತಾನೆ,

ವ್ಯಾಪಾರದಿಂದ ಕೂಡಿಸಿಟ್ಟ ಹಣ ಅವನಿಗೆ ಸಿಗಲ್ಲ.+

19 ಯಾಕಂದ್ರೆ ಅವನು ಬಡವರನ್ನ ಒದ್ದು ಓಡಿಸಿಬಿಟ್ಟಿದ್ದಾನೆ,

ಬೇರೆಯವ್ರ ಮನೆಯನ್ನ ಕಿತ್ಕೊಂಡಿದ್ದಾನೆ.

20 ಆದ್ರೆ ಅವನ ಮನಸ್ಸಿಗೆ ನೆಮ್ಮದಿ ಇರಲ್ಲ.

ಕಷ್ಟದಿಂದ ತಪ್ಪಿಸ್ಕೊಳ್ಳೋಕೆ ಅವನ ಆಸ್ತಿಪಾಸ್ತಿ ಸಹಾಯ ಮಾಡಲ್ಲ.

21 ನುಂಗಿಹಾಕೋಕೆ ಇನ್ನೇನು ಉಳಿದಿಲ್ಲ,

ಹಾಗಾಗಿ ಅವನ ಸಮೃದ್ಧಿ ಜಾಸ್ತಿ ಕಾಲ ಉಳಿಯಲ್ಲ.

22 ಅವನು ದೊಡ್ಡ ಶ್ರೀಮಂತನಾದಾಗ ಚಿಂತೆಯಿಂದ ನಿದ್ದೆ ಬರಲ್ಲ,

ಅವನ ಜೀವನದಲ್ಲಿ ಒಂದ್ರ ಮೇಲೊಂದು ದುರಂತ ಆಗುತ್ತೆ.

23 ಅವನು ಹೊಟ್ಟೆ ತುಂಬಿಸ್ಕೊಳ್ತಾ ಇರುವಾಗ್ಲೇ

ದೇವರು ತನ್ನ ಕೋಪವನ್ನ ಅವನ ಮೇಲೆ ಸುರಿಸ್ತಾನೆ,

ಕಷ್ಟಗಳನ್ನ ಮಳೆ ತರ ಅವನ ಮೇಲೆ ಬೀಳಿಸ್ತಾನೆ.

24 ಅವನು ಕಬ್ಬಿಣದ ಆಯುಧಗಳಿಂದ ತಪ್ಪಿಸ್ಕೊಂಡು ಓಡುವಾಗ

ತಾಮ್ರದ ಬಿಲ್ಲಿಂದ ಬಂದ ಬಾಣಗಳು ಅವನ ದೇಹವನ್ನ ಚುಚ್ಚುತ್ತೆ.

25 ಅವನು ತನ್ನ ಬೆನ್ನಿಂದ ಬಾಣ ಹೊರಗೆ ಎಳಿತಾನೆ,

ಪಳಪಳ ಅನ್ನೋ ಆಯುಧವನ್ನ ಪಿತ್ತಕೋಶದಿಂದ ಎಳೆದು ತೆಗಿತಾನೆ,

ಭಯ ಅವನನ್ನ ಮುತ್ತಿಕೊಳ್ಳುತ್ತೆ.+

26 ಅವನ ಐಶ್ವರ್ಯವನ್ನೆಲ್ಲ ಕತ್ತಲೆಗೆ ಎಸಿತಾರೆ,

ತಾನಾಗೇ ಉರಿದ ಬೆಂಕಿ ಅವನನ್ನ ಸುಟ್ಟು ಹಾಕುತ್ತೆ,

ಅವನ ಮನೆಯವ್ರಲ್ಲಿ ಬದುಕಿ ಉಳಿದವ್ರಿಗೆ ಕಷ್ಟ ಬಡಿಯುತ್ತೆ.

27 ಸ್ವರ್ಗ ಅವನ ತಪ್ಪನ್ನ ಬಯಲು ಮಾಡುತ್ತೆ,

ಭೂಮಿ ಅವನ ವಿರುದ್ಧ ಏಳುತ್ತೆ.

28 ದೇವರ ಕೋಪದ ದಿನದಲ್ಲಿ ದೊಡ್ಡ ಪ್ರವಾಹ ಬಂದು,

ಅವನ ಮನೆಯನ್ನ ಕೊಚ್ಕೊಂಡು ಹೋಗುತ್ತೆ.

29 ಕೆಟ್ಟವನಿಗೆ ದೇವ್ರಿಂದ ಸಿಗೋ ಬಹುಮಾನ ಇದು,

ದೇವರು ಅವನಿಗಂತ ಇಟ್ಟಿರೋ ಆಸ್ತಿ ಇದು.”

21 ಅದಕ್ಕೆ ಯೋಬ ಏನು ಉತ್ತರ ಕೊಟ್ಟ ಅಂದ್ರೆ,

 2 “ನಾನು ಹೇಳೋದನ್ನ ಸ್ವಲ್ಪ ಗಮನಕೊಟ್ಟು ಕೇಳಿ,

ಅದೇ ನೀವು ನನಗೆ ಕೊಡೋ ಸಾಂತ್ವನ.

 3 ಸ್ವಲ್ಪ ಇರಿ, ನನಗೂ ಮಾತಾಡೋಕೆ ಬಿಡಿ,

ಆಮೇಲೆ ಬೇಕಾದ್ರೆ ನೀವು ನನ್ನನ್ನ ಗೇಲಿ ಮಾಡಿದ್ರೂ ಪರ್ವಾಗಿಲ್ಲ.+

 4 ನಾನು ಮನುಷ್ಯನ ಹತ್ರ ನನ್ನ ಕಷ್ಟ ಹೇಳ್ತಾ ಇದ್ದೀನಾ?

ಹಾಗಿದ್ರೆ ಇಷ್ಟು ಹೊತ್ತಿಗೆ ನನ್ನ ತಾಳ್ಮೆ ಕಟ್ಟೆ ಒಡೆದು ಹೋಗ್ತಿತ್ತು.

 5 ನನ್ನನ್ನ ಸ್ವಲ್ಪ ಚೆನ್ನಾಗಿ ನೋಡಿ, ಆಗ ನೀವೇ ಆಶ್ಚರ್ಯಪಡ್ತೀರ,

ನಿಮ್ಮ ಬಾಯಿ ಮೇಲೆ ಕೈ ಇಟ್ಕೊಳ್ತೀರ.

 6 ಇಲ್ಲಿ ತನಕ ಆಗಿರೋ ವಿಷ್ಯ ನೆನಸ್ಕೊಂಡ್ರೆ

ನನ್ನ ಮನಸ್ಸು ಚಡಪಡಿಸುತ್ತೆ, ಮೈಯೆಲ್ಲಾ ನಡುಗುತ್ತೆ.

 7 ಕೆಟ್ಟವರು ಯಾಕೆ ಜಾಸ್ತಿ ದಿನ ಬದುಕ್ತಾರೆ?+

ಶ್ರೀಮಂತರಾಗಿ, ಸುಖವಾಗಿ ಬದುಕ್ತಾರೆ?+

 8 ಅವ್ರ ಮಕ್ಕಳು ಯಾವಾಗ್ಲೂ ಅವ್ರ ಕಣ್ಮುಂದೆ ಇರ್ತಾರೆ,

ಅವರು ಅನೇಕ ಪೀಳಿಗೆಯವ್ರನ್ನ ನೋಡುವಷ್ಟು ಕಾಲ ಬದುಕಿರ್ತಾರೆ.

 9 ಅವರು ತಮ್ಮ ಮನೇಲಿ ಸುರಕ್ಷಿತವಾಗಿ, ಭಯ ಇಲ್ಲದೆ ಇರ್ತಾರೆ,+

ದೇವರು ಕೋಲು ಹಿಡಿದು ಅವ್ರಿಗೆ ಶಿಕ್ಷೆ ಕೊಡಲ್ಲ.

10 ಅವ್ರ ಹೋರಿಗಳಿಗೆ ತುಂಬ ಮರಿ ಆಗುತ್ತೆ,*

ಹಸುಗಳಿಗೆ ಗರ್ಭಪಾತ ಆಗಲ್ಲ, ಅವುಗಳಿಗೆ ಕರುಗಳು ಹುಟ್ಟೇ ಹುಟ್ಟುತ್ತೆ.

11 ಹಟ್ಟಿಯಿಂದ ಹೊರಗೆ ಬಿಟ್ಟ ಆಡು-ಕುರಿಗಳ ತರ ಅವ್ರ ಮಕ್ಕಳು

ಮನೆಯಿಂದ ಹೊರಗೆ ಓಡಿ, ಕುಣಿದು ಕುಪ್ಪಳಿಸ್ತಾರೆ.

12 ದಮ್ಮಡಿ, ತಂತಿವಾದ್ಯ ನುಡಿಸ್ತಾ ಹಾಡ್ತಾರೆ,

ಕೊಳಲಿನ ಸ್ವರಕ್ಕೆ ಕುಣಿದಾಡ್ತಾರೆ.+

13 ಅವ್ರ ಬಾಳು ಸಂತೋಷ ತೃಪ್ತಿಯಿಂದ ತುಂಬಿರುತ್ತೆ,

ಅವ್ರಿಗೆ ಒಳ್ಳೇ ಸಾವು ಬರುತ್ತೆ.

14 ಆದ್ರೆ ಅವರು ಸತ್ಯ ದೇವ್ರಿಗೆ ‘ನಮ್ಮನ್ನ ಬಿಟ್ಟುಬಿಡು,

ನಿನ್ನ ಮಾರ್ಗಗಳ ಬಗ್ಗೆ ತಿಳ್ಕೊಳ್ಳೋಕೆ ನಮಗೆ ಸ್ವಲ್ಪನೂ ಇಷ್ಟ ಇಲ್ಲ.+

15 ಯಾರು ಆ ಸರ್ವಶಕ್ತ? ನಾವ್ಯಾಕೆ ಅವನ ಸೇವೆ ಮಾಡಬೇಕು?+

ಅವನ ಬಗ್ಗೆ ತಿಳ್ಕೊಂಡ್ರೆ ನಮಗೇನು ಲಾಭ?’ ಅಂತ ಕೇಳ್ತಾರೆ.+

16 ಆದ್ರೆ ನಂಗೊತ್ತು, ಅವ್ರಿಗೆ ಎಷ್ಟೇ ಆಸ್ತಿ, ಐಶ್ವರ್ಯ ಇದ್ರೂ ಅದು ಅವ್ರ ಕೈಯಲ್ಲಿ ನಿಲ್ಲಲ್ಲ.+

ನಾನಂತೂ ಆ ಕೆಟ್ಟವ್ರ ತರ ಯೋಚ್ನೆ* ಮಾಡಲ್ಲ.+

17 ಕೆಟ್ಟವ್ರ ದೀಪ ಯಾವತ್ತಾದ್ರೂ ಆರಿಹೋಗಿದ್ಯಾ?+

ಅವ್ರಿಗೆ ಯಾವತ್ತಾದ್ರೂ ಕಷ್ಟ ಬಂದಿದ್ಯಾ?

ದೇವರು ಕೋಪದಿಂದ ಅವ್ರನ್ನ ಯಾವತ್ತಾದ್ರೂ ನಾಶ ಮಾಡಿದ್ದಾನಾ?

18 ಗಾಳಿಗೆ ಹಾರಿಹೋಗೋ ಹುಲ್ಲಿನ ಹಾಗೆ ಕಣ್ಮರೆ ಆಗಿದ್ದಾರಾ?

ಬಿರುಗಾಳಿಗೆ ಬಡಿದ್ಕೊಂಡು ಹೋಗೋ ಹೊಟ್ಟಿನ ತರ ಇಲ್ಲದೆ ಹೋಗಿದ್ದಾರಾ?

19 ಕೆಟ್ಟವ್ರ ಪಾಪದ ಫಲವನ್ನ ಅವ್ರ ಮಕ್ಕಳು ಅನುಭವಿಸೋ ಹಾಗೆ ದೇವರು ಮಾಡ್ತಾನೆ.

ಆದ್ರೆ ಆ ಪಾಪದ ಫಲವನ್ನ ಕೆಟ್ಟವನೇ ತಿನ್ನೋ ಹಾಗೆ ದೇವರು ಮಾಡಬೇಕು,

ಆಗ ಅವನಿಗೆ ಆ ನೋವು ಅರ್ಥ ಆಗುತ್ತೆ.+

20 ಅವನಿಗೆ ಬರೋ ಕಷ್ಟವನ್ನ ಅವನೇ ಕಣ್ಣಾರೆ ನೋಡ್ಲಿ,

ಸರ್ವಶಕ್ತನ ಕಡುಕೋಪದ ಪಾತ್ರೆಯಲ್ಲಿ ಇರೋದನ್ನ ಅವನೇ ಕುಡಿಲಿ.+

21 ಅವನ ಆಯಸ್ಸನ್ನ ಕಡಿಮೆ ಮಾಡಿದ್ರೆ

ಅವನ ಮಕ್ಕಳ ಗತಿ ಏನು ಅನ್ನೋ ಚಿಂತೆ ಅವನಿಗೆ ಇದ್ಯಾ?+

22 ದೇವರು ದೊಡ್ಡ ದೊಡ್ಡ ವ್ಯಕ್ತಿಗಳಿಗೆ ನ್ಯಾಯತೀರಿಸ್ತಾನೆ,+

ಹೀಗಿರುವಾಗ ಆತನಿಗೆ ಯಾರಾದ್ರೂ ಏನನ್ನಾದ್ರೂ* ಕಲಿಸಕ್ಕಾಗುತ್ತಾ?+

23 ಗಟ್ಟಿಮುಟ್ಟಾಗಿರೋ,+

ನೆಮ್ಮದಿಯಿಂದ ಬದುಕ್ತಿರೋ,+

24 ತೊಡೆಗಳು ಕೊಬ್ಬಿರೋ,

ಮೂಳೆಗಳು ಗಟ್ಟಿಯಾಗಿರೋ* ಒಬ್ಬ ವ್ಯಕ್ತಿ ಸಾಯೋ ತರಾನೇ,

25 ಬಾಳಲ್ಲಿ ತುಂಬ ನೊಂದಿರೋ, ಸುಖವನ್ನೇ ಕಾಣದ

ವ್ಯಕ್ತಿ ಕೂಡ ಸತ್ತು ಹೋಗ್ತಾನೆ.

26 ಇಬ್ರೂ ಹೋಗೋದು ಮಣ್ಣಿಗೇ,+

ಅವರಿಬ್ರನ್ನ ಹುಳಗಳು ಮುತ್ತಿಕೊಳ್ಳುತ್ತೆ.+

27 ಹಾ! ನಿಮ್ಮ ಮನಸ್ಸಲ್ಲಿ ಏನು ಓಡ್ತಿದೆ ಅಂತ ನನಗೆ ಚೆನ್ನಾಗಿ ಗೊತ್ತು,

ನನ್ನ ಜೊತೆ ದಯೆಯಿಲ್ಲದೆ ನಡ್ಕೊಳ್ಳೋಕೆ* ಸಂಚು ಮಾಡ್ತಾ ಇದ್ದೀರ ಅಂತ ನಂಗೊತ್ತು.+

28 ‘ಯಾವ ಪ್ರಖ್ಯಾತ ವ್ಯಕ್ತಿಯ ಮನೆ ಉಳ್ಕೊಂಡಿದೆ?

ಯಾವ ಕೆಟ್ಟವನ ಡೇರೆ ಬೀಳದೆ ನಿಂತಿದೆ?’ ಅಂತ ನೀವು ಕೇಳ್ತೀರ.+

29 ಬೇರೆ ಬೇರೆ ಊರಿಗೆ ಪ್ರಯಾಣ ಮಾಡುವವರನ್ನ ನೀವು ಕೇಳಿ ತಿಳ್ಕೊಳ್ಳಲಿಲ್ವಾ?

ಅವರು ಹೇಳಿದಕ್ಕೆ ಜಾಗ್ರತೆಯಿಂದ ಗಮನಕೊಡಲಿಲ್ವಾ?

30 ಕಷ್ಟದ ದಿನದಲ್ಲಿ ಪಾರಾಗೋದು

ಕೋಪದ ದಿನದಲ್ಲಿ ಬದುಕಿ ಉಳಿಯೋದು ಕೆಟ್ಟವ್ರೇ ಅಂತ ನಿಮಗೆ ಗೊತ್ತಾಗ್ತಿತ್ತು.

31 ‘ನೀನು ಮಾಡ್ತಿರೋದು ತಪ್ಪು’ ಅಂತ ಕೆಟ್ಟವನ ಮುಖ ನೋಡಿ ಹೇಳೋ ಧೈರ್ಯ ಯಾರಿಗಿದೆ?

ಅವನಿಗೆ ಶಿಕ್ಷೆ ಯಾರು ಕೊಡ್ತಾರೆ?

32 ಅವನು ಸತ್ತ ಮೇಲೆ ಅವನನ್ನ ಸಮಾಧಿ ಮಾಡ್ತಾರೆ,

ಅವನ ಸಮಾಧಿಗೆ ಕಾವಲು ಕಾಯ್ತಾರೆ.

33 ಸಮಾಧಿಯ ಮಣ್ಣು ಕೂಡ ಅವನು ಹಾಯಾಗಿರೋ ಹಾಗೆ ನೋಡ್ಕೊಳ್ಳುತ್ತೆ,+

ಅವನಿಗಿಂತ ಮುಂಚೆ ಲೆಕ್ಕ ಇಲ್ಲದಷ್ಟು ಜನ್ರು ಅಲ್ಲಿಗೆ ಹೋಗಿದ್ದಾರೆ,

ಇನ್ನು ಎಷ್ಟೋ ಜನ್ರು ಅಲ್ಲಿಗೆ ಹೋಗ್ತಾರೆ.+

34 ಹೀಗಿರುವಾಗ ಯಾಕೆ ಸುಮ್ಮನೆ ನನ್ನನ್ನ ಸಮಾಧಾನ ಮಾಡ್ತೀರ?+

ನಿಮ್ಮ ಬಾಯಿಂದ ಬರೀ ಸುಳ್ಳು, ಮೋಸದ ಮಾತುಗಳು ಬಿಟ್ರೆ ಬೇರೇನೂ ಬರಲ್ಲ.”

22 ಅದಕ್ಕೆ ತೇಮಾನ್ಯನಾದ ಎಲೀಫಜ+ ಹೀಗಂದ:

 2 “ಮನುಷ್ಯನಿಂದ ದೇವರಿಗೇನು ಪ್ರಯೋಜನ?

ಯಾರಾದ್ರೂ ವಿವೇಚನೆಯಿಂದ* ನಡ್ಕೊಂಡ್ರೆ ಆತನಿಗೇನು ಲಾಭ?+

 3 ನೀನು ನೀತಿವಂತ ಆಗಿರೋದನ್ನ ನೋಡಿ ಸರ್ವಶಕ್ತ ಸಂತೋಷ ಪಡ್ತಾನಾ?

ನೀನು ನಿಯತ್ತಿಂದ* ನಡ್ಕೊಂಡ್ರೆ ಆತನಿಗೇನಾದ್ರೂ ಪ್ರಯೋಜನ ಇದ್ಯಾ?+

 4 ನೀನು ದೇವ್ರಿಗೆ ಭಯಭಕ್ತಿ ತೋರಿಸಿದ್ರೆ

ಆತನು ನಿನ್ನನ್ನ ನ್ಯಾಯಾಲಯಕ್ಕೆ ಕರ್ಕೊಂಡು ಹೋಗ್ತಾನಾ, ನಿನಗೆ ಶಿಕ್ಷೆ ಕೊಡ್ತಾನಾ?

 5 ನಿನ್ನ ಕೆಟ್ಟತನ ತುಂಬಿ ತುಳುಕ್ತಾ ಇರೋದ್ರಿಂದ

ಲೆಕ್ಕ ಇಲ್ಲದಷ್ಟು ತಪ್ಪು ಮಾಡಿರೋದ್ರಿಂದ

ದೇವರು ನಿನಗೆ ಶಿಕ್ಷೆ ಕೊಟ್ಟಿದ್ದಾನೆ.+

 6 ನೀನು ನಿನ್ನ ಸಹೋದರರಿಂದ ಅನ್ಯಾಯವಾಗಿ ಒತ್ತೆ ಇಡಿಸಿದೆ,

ಬಡವ್ರಿಂದ* ಬಟ್ಟೆ ಕಿತ್ಕೊಂಡು ಅವ್ರನ್ನ ಬೆತ್ತಲೆ ಮಾಡಿದೆ.+

 7 ದಣಿದು ಸುಸ್ತಾದವ್ರಿಗೆ ನೀನು ಒಂದು ತೊಟ್ಟು ನೀರು ಕೊಡಲಿಲ್ಲ,

ಹಸಿದವ್ರಿಗೆ ಊಟ ಕೊಡಲಿಲ್ಲ.+

 8 ಶಕ್ತಿ ಇರುವವರು ದೇಶವನ್ನ ವಶ ಮಾಡ್ಕೊಳ್ತಾರೆ,+

ದೊಡ್ಡ ದೊಡ್ಡ ಜನ್ರು ಆ ದೇಶದಲ್ಲಿ ವಾಸಿಸ್ತಾರೆ.

 9 ನೀನು ವಿಧವೆಯರನ್ನ ಬರಿಗೈಯಲ್ಲಿ ಕಳಿಸಿದೆ,

ಅನಾಥ ಮಕ್ಕಳಿಗೆ* ಕಷ್ಟ ಕೊಟ್ಟೆ.

10 ಅದಕ್ಕೇ ನಿನ್ನ ಸುತ್ತ ಅಪಾಯ ಸುತ್ಕೊಂಡಿದೆ,+

ಅಚಾನಕ್ಕಾಗಿ ದಿಗಿಲು ಬಡಿದು ನೀನು ನಡುಗಿ ಹೋಗಿದ್ದೀಯ.

11 ನಿನ್ನ ಮುಂದೆ ಬರೀ ಕತ್ತಲೆ ಕವಿದು ಏನೂ ಕಾಣಿಸ್ತಿಲ್ಲ,

ಪ್ರವಾಹದ ನೀರು ನಿನ್ನನ್ನ ಮುಳುಗಿಸಿಬಿಟ್ಟಿದೆ.

12 ದೇವರು ಎತ್ರದಲ್ಲಿರೋ ಆಕಾಶದಲ್ಲಿ ಇದ್ದಾನಲ್ಲಾ,

ನಕ್ಷತ್ರಗಳನ್ನ ಸ್ವಲ್ಪ ನೋಡು, ಅವು ಎಷ್ಟೋ ಎತ್ರದಲ್ಲಿವೆ.

13 ಆದ್ರೆ ನೀನು ಏನಂದೆ? ‘ದೇವ್ರಿಗೆ ಏನು ಗೊತ್ತು?

ಕಾರ್ಮೋಡಗಳ ಹಿಂದೆ ನಿಂತು ನಮಗೆ ತೀರ್ಪು ಕೊಡೋಕೆ ಆತನಿಗೆ ಆಗುತ್ತಾ?

14 ಆತನು ಆಕಾಶದ ಅಂಚಲ್ಲಿ* ನಡೀತಾನೆ,

ಆತನಿಗೆ ಮೋಡ ಪರದೆ ತರ ಅಡ್ಡ ಇದೆ, ನಮ್ಮನ್ನ ಹೇಗೆ ನೋಡೋಕೆ ಆಗುತ್ತೆ’ ಅಂದ್ಯಲ್ಲಾ.

15 ಹಳೇ ಕಾಲದಿಂದ ಕೆಟ್ಟವರು ನಡೀತಾ ಇರೋ ದಾರಿಯಲ್ಲೇ ನೀನು ನಡಿತೀಯಾ?

16 ಆ ಜನ್ರು ಅರ್ಧ ಆಯಸ್ಸಲ್ಲೇ ಸತ್ತು ಹೋಗಿದ್ದಾರೆ,

ಕಟ್ಟಡದ ಅಡಿಪಾಯ ಪ್ರವಾಹಕ್ಕೆ* ಕೊಚ್ಚಿ ಹೋಗೋ ಹಾಗೆ ನಾಶ ಆಗಿದ್ದಾರೆ.+

17 ಅವರು ಸತ್ಯ ದೇವ್ರಿಗೆ ‘ನಮ್ಮನ್ನ ಬಿಟ್ಟುಬಿಡು!’ ಅಂತ ಹೇಳ್ತಿದ್ರು,

‘ಸರ್ವಶಕ್ತ ನಮಗೇನೂ ಮಾಡೋಕ್ಕಾಗಲ್ಲ’ ಅಂತ ಹೇಳ್ತಿದ್ರು.

18 ಆದ್ರೆ ಅವ್ರ ಮನೆಗಳಲ್ಲಿ ಒಳ್ಳೊಳ್ಳೇ ವಸ್ತುಗಳನ್ನ ತುಂಬಿಸಿದವನು ದೇವ್ರೇ.

(ಆ ಕೆಟ್ಟವ್ರ ತರ ನಾನು ಯೋಚಿಸಲ್ಲ.)

19 ಕೆಟ್ಟವರು ನಾಶ ಆಗೋದನ್ನ ನೋಡಿ ನೀತಿವಂತರು ಖುಷಿಪಡ್ತಾರೆ,

ತಪ್ಪು ಮಾಡದವರು ಕೆಟ್ಟವ್ರನ್ನ ಅಣಕಿಸ್ತಾ:

20 ‘ನಮ್ಮ ವಿರೋಧಿಗಳೆಲ್ಲ ನಾಶ ಆದ್ರು,

ಉಳಿದಿರೋ ಅವ್ರ ವಸ್ತುಗಳನ್ನೆಲ್ಲ ಬೆಂಕಿ ಸುಟ್ಟುಹಾಕುತ್ತೆ’ ಅಂತಾರೆ.

21 ನೀನು ದೇವ್ರನ್ನ ಚೆನ್ನಾಗಿ ತಿಳ್ಕೊ,

ಆಗ ಆತನ ಜೊತೆ ಸಂಬಂಧ ಚೆನ್ನಾಗಿ ಇರುತ್ತೆ,

ನಿನ್ನ ಬಾಳಲ್ಲಿ ಎಲ್ಲ ಒಳ್ಳೇದಾಗುತ್ತೆ.

22 ಆತನು ಕೊಡೋ ನಿಯಮಗಳನ್ನ ಪಾಲಿಸು,

ಆತನ ಮಾತುಗಳನ್ನೆಲ್ಲ ನಿನ್ನ ಹೃದಯದಲ್ಲಿ ಇಟ್ಕೊ.+

23 ನೀನು ಸರ್ವಶಕ್ತನ ಹತ್ರ ವಾಪಸ್‌ ಬಂದ್ರೆ,

ಮತ್ತೆ ಮುಂಚಿನ ತರ ಆಗ್ತೀಯ.+

ನಿನ್ನ ಡೇರೆಯಿಂದ ಕೆಟ್ಟದನ್ನ ತೆಗೆದುಹಾಕಿದ್ರೆ,

24 ನಿನ್ನ ಚಿನ್ನವನ್ನ* ಮಣ್ಣಿಗೆ ಬಿಸಾಡಿದ್ರೆ,

ಓಫೀರಿನ+ ಚಿನ್ನವನ್ನ ಬಂಡೆಗಳ ಕಣಿವೆಗೆ ಎಸೆದ್ರೆ,

25 ಆಗ ಸರ್ವಶಕ್ತನೇ ನಿನಗೆ ಚಿನ್ನವಾಗ್ತಾನೆ,*

ಆತನು ನಿನಗೆ ಅಪ್ಪಟ ಬೆಳ್ಳಿ ಆಗ್ತಾನೆ.

26 ಆಗ ಸರ್ವಶಕ್ತನಿಂದಾಗಿ ನೀನು ಸಂತೋಷವಾಗಿ ಇರ್ತಿಯ,

ತಲೆಯೆತ್ತಿ ದೇವರ ಕಡೆ ನೋಡು.

27 ಪ್ರಾರ್ಥನೆ ಮಾಡು, ಆತನು ಕೇಳ್ತಾನೆ,

ನಿನ್ನ ಹರಕೆಗಳನ್ನ ತೀರಿಸು.

28 ನೀನು ಮಾಡಬೇಕಂತ ಯೋಚ್ನೆ ಮಾಡಿದೆಲ್ಲ ನಡಿಯುತ್ತೆ,

ನಿನ್ನ ದಾರೀಲಿ ಬೆಳಕಿರುತ್ತೆ.

29 ನೀನು ಸೊಕ್ಕಿಂದ ಮಾತಾಡಿದ್ರೆ ನಿನ್ನ ಸೊಕ್ಕು ಮುರಿತಾನೆ,

ಆತನು ದೀನರನ್ನ ಮಾತ್ರ ಕಾಪಾಡ್ತಾನೆ.

30 ತಪ್ಪು ಮಾಡದವ್ರನ್ನ ಕಾಪಾಡ್ತಾನೆ,

ಹಾಗಾಗಿ ನಿನ್ನ ಕೈಗಳಲ್ಲಿ ಪಾಪದ ಕೊಳೆ ಇಲ್ಲಾಂದ್ರೆ

ನಿನ್ನನ್ನ ಖಂಡಿತ ರಕ್ಷಿಸ್ತಾನೆ.”

23 ಆಗ ಯೋಬ ಹೀಗೆ ಉತ್ತರ ಕೊಟ್ಟ:

 2 “ನೀವೇನೇ ಹೇಳಿದ್ರೂ ನಾನು ಸುಮ್ಮನಿರಲ್ಲ,

ನನ್ನ ವಾದವನ್ನ ಮಂಡಿಸ್ತೀನಿ,+

ದುಃಖದ ನಿಟ್ಟುಸಿರು ಬಿಟ್ಟು ಬಿಟ್ಟು ಸಾಕಾಗಿ ಹೋಗಿದೆ.

 3 ದೇವರು ಎಲ್ಲಿ ಸಿಗ್ತಾನೆ ಅಂತ ಗೊತ್ತಾದ್ರೆ ಚೆನ್ನಾಗಿತ್ತು!+

ಆತನು ಇರೋ ಕಡೆ ನಾನೇ ಹೋಗ್ತಿದ್ದೆ.+

 4 ನನ್ನ ಮೊಕದ್ದಮೆಯನ್ನ ಆತನ ಮುಂದೆ ಇಡ್ತಿದ್ದೆ,

ನನ್ನ ವಾದ ಮಾಡ್ತಿದ್ದೆ.

 5 ಆತನು ಕೊಡೋ ಉತ್ತರನ ಚೆನ್ನಾಗಿ ಕೇಳಿಸ್ಕೊಳ್ತಿದ್ದೆ,

ಆತನು ನನ್ನ ಜೊತೆ ಮಾತಾಡುವಾಗ ಗಮನಕೊಟ್ಟು ಕೇಳ್ತಿದ್ದೆ.

 6 ದೇವರು ತನ್ನ ಮಹಾ ಶಕ್ತಿಯಿಂದ ನನ್ನ ಜೊತೆ ಹೋರಾಡ್ತಾನಾ?

ಇಲ್ಲ, ನಾನು ಮಾತಾಡುವಾಗ ಖಂಡಿತ ಕೇಳ್ತಾನೆ.+

 7 ಆತನ ಮುಂದೆ ನೀತಿವಂತ ತನ್ನ ಸಮಸ್ಯೆಯನ್ನ ಇತ್ಯರ್ಥ ಮಾಡ್ಕೊಳ್ಳೋಕೆ ಆಗುತ್ತೆ.

ಆಗ ನ್ಯಾಯಾಧೀಶ ಕೊನೇ ತೀರ್ಪು ಕೊಟ್ಟು ನನ್ನನ್ನ ನಿರಪರಾಧಿ ಅಂತಾನೆ.

 8 ಆದ್ರೆ ನಾನು ಆತನನ್ನ ಹುಡ್ಕೊಂಡು ಪೂರ್ವಕ್ಕೆ ಹೋದ್ರೆ ಆತನು ಅಲ್ಲಿಲ್ಲ,

ಪಶ್ಚಿಮಕ್ಕೆ ಹೋದ್ರೆ ಅಲ್ಲಿನೂ ಇಲ್ಲ.

 9 ಆತನು ಉತ್ತರ ದಿಕ್ಕಲ್ಲಿ ಕೆಲಸ ಮಾಡುವಾಗ ನಂಗೆ ಆತನನ್ನ ನೋಡೋಕೆ ಆಗಲ್ಲ,

ದಕ್ಷಿಣಕ್ಕೆ ಹೋದ್ರೂ ಕಾಣಿಸಲ್ಲ.

10 ಆದ್ರೂ ನಾನು ಯಾವ ದಾರೀಲಿ ನಡಿತೀನಿ ಅಂತ ಆತನಿಗೆ ಚೆನ್ನಾಗಿ ಗೊತ್ತು,+

ನನ್ನನ್ನ ಪರೀಕ್ಷಿಸಿದ ಮೇಲೆ ನಾನು ಅಪ್ಪಟ ಚಿನ್ನದ ತರ ಆಗ್ತೀನಿ.+

11 ನಾನು ಆತನ ಹೆಜ್ಜೆ ಮೇಲೆ ಹೆಜ್ಜೆ ಇಡ್ತೀನಿ,

ಆತನು ಹೇಳಿದ ದಾರಿಯಲ್ಲೇ ಹೋಗ್ತೀನಿ, ಬೇರೆ ಕಡೆ ತಿರುಗಲ್ಲ.+

12 ಆತನ ಎಲ್ಲಾ ಆಜ್ಞೆ ಪಾಲಿಸಿದ್ದೀನಿ.

ಆತನು ನನ್ನಿಂದ ಕೇಳಿದಕ್ಕಿಂತ ಜಾಸ್ತಿನೇ ಪಾಲಿಸಿದ್ದೀನಿ.+

13 ಏನನ್ನಾದ್ರೂ ಮಾಡಬೇಕು ಅಂತ ಆತನು ತೀರ್ಮಾನಿಸಿದ ಮೇಲೆ ಯಾರಿಂದ ತಡೆಯೋಕೆ ಆಗುತ್ತೆ?+

ಆತನು ಏನಾದ್ರೂ ಮಾಡಬೇಕು ಅಂತ ಅಂದ್ಕೊಂಡ್ರೆ ಅದನ್ನ ಮಾಡೇ ಮಾಡ್ತಾನೆ.+

14 ನನ್ನ ವಿಷ್ಯದಲ್ಲಿ ಆತನು ಏನ್‌ ಮಾಡಬೇಕು ಅಂತ ಅಂದ್ಕೊಂಡಿದ್ದಾನೋ ಅದನ್ನ ಪೂರ್ತಿಯಾಗಿ ಮಾಡ್ತಾನೆ,

ಈ ರೀತಿ ತುಂಬ ವಿಷ್ಯಗಳನ್ನ ಯೋಚಿಸಿಟ್ಟಿದ್ದಾನೆ.

15 ಹಾಗಾಗಿ ನನಗೆ ತುಂಬ ಚಿಂತೆ ಆಗ್ತಿದೆ,

ಆತನ ಬಗ್ಗೆ ಯೋಚ್ನೆ ಮಾಡಿದ್ರೆ ಸಾಕು, ಭಯಭಕ್ತಿ ಇನ್ನೂ ಜಾಸ್ತಿ ಆಗುತ್ತೆ.

16 ದೇವ್ರಿಂದಾಗಿ ನಾನು ಪುಕ್ಕಲ ಆಗಿದ್ದೀನಿ,

ಸರ್ವಶಕ್ತ ನನ್ನನ್ನ ಹೆದರಿಸಿಬಿಟ್ಟಿದ್ದಾನೆ.

17 ನನ್ನ ಸುತ್ತ ಬರೀ ಕತ್ತಲೆ ಇದ್ರೂ

ಏನೂ ಕಾಣದಿದ್ರೂ

ನಾನು ಮಾತಾಡದೆ ಸುಮ್ಮನಿರಲ್ಲ.

24 ಕೆಟ್ಟವ್ರಿಗೆ ಶಿಕ್ಷೆ ಕೊಡೋಕೆ ಸರ್ವಶಕ್ತ ಯಾಕೆ ಒಂದು ಸಮಯ ಇಟ್ಟಿಲ್ಲ?+

ಆತನನ್ನ ತಿಳಿದವ್ರಿಗೆ ಆ ದಿನವನ್ನ ನೋಡೋಕೆ ಯಾಕೆ ಆಗ್ತಿಲ್ಲ?

 2 ಕೆಟ್ಟವರು ಗಡಿ ಸರಿಸಿ ಬೇರೆಯವ್ರ ಜಮೀನನ್ನ ಒಳಗೆ ಹಾಕೊಳ್ತಾರೆ,+

ಬೇರೆಯವ್ರ ಆಡು-ಕುರಿಗಳನ್ನ ಕದಿತಾರೆ.

 3 ಅನಾಥ ಮಕ್ಕಳ ಕತ್ತೆಯನ್ನ ಹೊಡ್ಕೊಂಡು ಹೋಗ್ತಾರೆ,

ವಿಧವೆಗೆ ಸಾಲ ಕೊಡುವಾಗ ಅವಳ ಹೋರಿಯನ್ನ ಅಡ ಇಟ್ಕೊಳ್ತಾರೆ.+

 4 ಬಡವ್ರಿಗೆ ರಸ್ತೆಯಲ್ಲಿ ನಡಿಯೋಕೆ ಬಿಡಲ್ಲ,

ಪಾಪದವರು ಕೆಟ್ಟವ್ರಿಗೆ ಹೆದರಿ ಕಣ್ಣಿಗೆ ಬೀಳದ ಹಾಗೆ ಓಡಾಡ್ತಾರೆ.+

 5 ಕಾಡುಕತ್ತೆಗಳು+ ಮೇವಿಗಾಗಿ ಕಾಡಲ್ಲಿ ಅಲೆಯೋ ತರ ಬಡವರು ಊಟಕ್ಕಾಗಿ ಪರದಾಡ್ತಾರೆ,

ತಮ್ಮ ಮಕ್ಕಳಿಗಾಗಿ ಊಟವನ್ನ ಹುಡುಕ್ತಾ ಮರಳುಗಾಡಲ್ಲಿ ತಿರುಗಾಡ್ತಾರೆ.

 6 ಬಡವರು ಬೇರೆಯವ್ರ ಹೊಲದಲ್ಲಿ ಕೊಯ್ಲು ಕೆಲಸ ಮಾಡಬೇಕಾಗಿದೆ,*

ಕೆಟ್ಟವ್ರ ದ್ರಾಕ್ಷಿತೋಟದಲ್ಲಿ ಕೊಯ್ಯದೆ ಬಿಟ್ಟಿರೋ ಹಣ್ಣುಗಳನ್ನ ಕೂಡಿಸಬೇಕಾಗಿದೆ.

 7 ಅವರು ಬಟ್ಟೆ ಇಲ್ಲದೆ ಬೆತ್ತಲೆಯಾಗಿ ರಾತ್ರಿ ಕಳಿತಾರೆ,+

ಚಳಿಯಲ್ಲೂ ಅವ್ರಿಗೆ ಹೊದ್ಕೊಳ್ಳೋಕೆ ಬಟ್ಟೆ ಇಲ್ಲ.

 8 ಬೆಟ್ಟದ ಮೇಲೆ ಸುರಿಯೋ ಮಳೆಯಿಂದಾಗಿ ನೆನೆದುಹೋಗ್ತಾರೆ,

ಅವ್ರಿಗೆ ಆಸರೆ ಇಲ್ಲದ್ರಿಂದ ಬಂಡೆಗಳಿಗೆ ಅಂಟ್ಕೊಂಡು ನಿಲ್ತಾರೆ.

 9 ಅನಾಥರನ್ನ ತಾಯಿಯ ಎದೆಯಿಂದ ಕಿತ್ಕೊಳ್ತಾರೆ,+

ಬಡವ್ರಿಗೆ ಸಾಲ ಕೊಡುವಾಗ ಅವರು ಹಾಕಿರೋ ಬಟ್ಟೆಗಳನ್ನ ಅಡ ಇಟ್ಕೊಳ್ತಾರೆ,+

10 ಹೀಗೆ ಮೈಮೇಲೆ ಬಟ್ಟೆ ಇಲ್ಲದ ಹಾಗೆ ಮಾಡ್ತಾರೆ,

ಹಸಿವೆಯಲ್ಲೇ ತೆನೆಯ ಕಟ್ಟುಗಳನ್ನ ಹೊರೋ ತರ ಮಾಡ್ತಾರೆ.

11 ಮೆಟ್ಟಿಲುಪಾತಿಯ* ಕಲ್ಲಿನ ಗೋಡೆಗಳ ಮಧ್ಯ ಉರಿಬಿಸಿಲಲ್ಲಿ ಬಡವರು ದುಡಿತಾರೆ,*

ದ್ರಾಕ್ಷಿತೊಟ್ಟಿಗಳಲ್ಲಿ ದ್ರಾಕ್ಷಿ ತುಳಿತಾ ಇದ್ರೂ ದಾಹದಿಂದ ಅವ್ರ ಬಾಯಿ ಒಣಗಿಹೋಗಿದೆ.+

12 ಸಾಯ್ತಾ ಇರುವವರ ನರಳಾಟ ಇಡೀ ಪಟ್ಟಣದಲ್ಲಿ ಕೇಳ್ತಿದೆ,

ತೀವ್ರವಾಗಿ ಗಾಯಗೊಂಡವರು ಸಹಾಯಕ್ಕಾಗಿ ಕೂಗ್ತಿದ್ದಾರೆ,+

ಆದ್ರೆ ಅದ್ರ ಬಗ್ಗೆ ದೇವ್ರಿಗೆ ಸ್ವಲ್ಪನೂ ಚಿಂತೆ ಇಲ್ಲ.*

13 ಬೆಳಕನ್ನ ಇಷ್ಟಪಡದ ಜನ್ರಿದ್ದಾರೆ,+

ಬೆಳಕಿರೋ ದಾರಿಯನ್ನ ಬೇಡ ಅಂತಾರೆ,

ಬೆಳಕಲ್ಲಿ ನಡಿಯೋಕೆ ಕೇಳಲ್ಲ.

14 ಕೊಲೆಗಾರ ಮುಂಜಾನೆ ಎದ್ದು

ಅಮಾಯಕರನ್ನ, ಬಡವ್ರನ್ನ ಕೊಲ್ತಾನೆ,+

ರಾತ್ರಿಯಲ್ಲಿ ಕಳ್ಳತನ ಮಾಡ್ತಾನೆ.

15 ವ್ಯಭಿಚಾರಿ ಸಂಜೆ ಆಗೋದನ್ನೇ ಕಾಯ್ತಾ ಇರ್ತಾನೆ,+

‘ಯಾರೂ ನನ್ನನ್ನ ನೋಡಲ್ಲ’+ ಅಂತ ನೆನಸಿ ಮುಖ ಮುಚ್ಕೊಂಡು ಹೋಗ್ತಾನೆ.

16 ಕಳ್ಳರು ಕತ್ತಲಲ್ಲಿ ಬೇರೆಯವ್ರ ಮನೆಗೆ ಕನ್ನಾ ಹಾಕ್ತಾರೆ,

ಬೆಳಗಾಗುವಾಗ ಬಚ್ಚಿಟ್ಕೊಳ್ತಾರೆ.

ಹಗಲಲ್ಲಿ ಅವರು ಹೊರಗೆ ಕಾಣಿಸಲ್ಲ.+

17 ಜನ್ರು ಕತ್ತಲೆಗೆ ಭಯಪಡೋ ಹಾಗೆ ಕಳ್ಳರು ಹಗಲಿಗೆ ಭಯಪಡ್ತಾರೆ,

ಕತ್ತಲೆಯ ಭಯಕ್ಕೆ ಅವರು ಒಗ್ಗಿ ಹೋಗಿದ್ದಾರೆ.

18 ಆದ್ರೆ ಅವರು ರಭಸವಾಗಿ ಹರಿಯೋ ನೀರಿಗೆ ಕೊಚ್ಕೊಂಡು ಹೋಗ್ತಾರೆ,

ಅವ್ರ ಜಮೀನಿಗೆ ಶಾಪ ಬರುತ್ತೆ,+

ಅವರು ತಮ್ಮ ದ್ರಾಕ್ಷಿತೋಟಗಳಿಗೆ ಮತ್ತೆ ಹೋಗಕ್ಕಾಗಲ್ಲ.

19 ಬರಗಾಲ, ಬಿಸಿಲ ಬೇಗೆ ಹಿಮವನ್ನ ಕರಗಿಸಿ ಬತ್ತಿಸಿಬಿಡುತ್ತೆ

ಸಮಾಧಿ* ಪಾಪ ಮಾಡಿದವನನ್ನ ನುಂಗಿಬಿಡುತ್ತೆ.+

20 ಹೆತ್ತ ತಾಯಿ ಅವನನ್ನ ಮರೆತುಬಿಡ್ತಾಳೆ,

ಅವನು ಹುಳಗಳಿಗೆ ಮೃಷ್ಟಾನ್ನ ಭೋಜನ ಆಗ್ತಾನೆ,

ಮುಂದೆ ಯಾವತ್ತೂ ಯಾರೂ ಅವನನ್ನ ನೆನಪು ಮಾಡ್ಕೊಳ್ಳಲ್ಲ,+

ಅನೀತಿವಂತ ಮರದ ಹಾಗೆ ಮುರಿದು ಹೋಗ್ತಾನೆ.

21 ಕೆಟ್ಟವನು ಮಕ್ಕಳಿಲ್ಲದ ಬಂಜೆಗೆ ತುಂಬ ಕಷ್ಟಕೊಡ್ತಾನೆ,

ವಿಧವೆಗೆ ಕಿರುಕುಳ ಕೊಡ್ತಾನೆ.

22 ಬಲಶಾಲಿಗಳನ್ನ ದೇವರು ತನ್ನ ಬಲದಿಂದ ನಾಶ ಮಾಡ್ತಾನೆ,

ಅವರು ಎಷ್ಟೇ ಎತ್ರಕ್ಕೆ ಬೆಳೆದ್ರೂ ಬದುಕಿ ಉಳಿತೀವಿ ಅನ್ನೋ ನಂಬಿಕೆ ಇರಲ್ಲ.

23 ಕೆಟ್ಟವರು ಸುರಕ್ಷಿತವಾಗಿ ಭಯ ಇಲ್ಲದೆ ಜೀವಿಸೋಕೆ ದೇವರು ಬಿಡ್ತಾನೆ,+

ಆದ್ರೆ ಅವರು ಮಾಡೋ ಎಲ್ಲ ಕೆಲಸದ ಮೇಲೆ ಕಣ್ಣಿಟ್ಟಿರ್ತಾನೆ.+

24 ಸ್ವಲ್ಪ ಸಮಯ ಅವರು ಚೆನ್ನಾಗಿ ಇರ್ತಾರೆ, ಆಮೇಲೆ ಇಲ್ಲದೆ ಹೋಗ್ತಾರೆ.+

ಬೇರೆಯವ್ರ ತರ ಅವ್ರ ಕಥೆನೂ ಮುಗಿಯುತ್ತೆ,+

ತೆನೆಗಳನ್ನ ಕೊಯ್ದು ಕೂಡಿಸೋ ತರ ಅವ್ರನ್ನ ಕೂಡಿಸ್ತಾರೆ.

25 ಈಗ, ನನ್ನ ಮಾತು ಸುಳ್ಳು ಅಂತ ಯಾರಾದ್ರೂ ಹೇಳಿ ನೋಡೋಣ,

ನಾನು ಹೇಳಿದ್ದು ತಪ್ಪು ಅಂತ ಸಾಬೀತು ಮಾಡಿ ನೋಡೋಣ.”

25 ಅದಕ್ಕೆ ಶೂಹ್ಯನಾದ ಬಿಲ್ದದ,+

 2 “ಆಳ್ವಿಕೆ ಮಾಡೋ ಹಕ್ಕು ದೇವರಿಗಿದೆ,

ಭಯ ಆಶ್ಚರ್ಯ ಹುಟ್ಟಿಸೋಷ್ಟು ಶಕ್ತಿ ಆತನಿಗಿದೆ,

ಸ್ವರ್ಗದಲ್ಲಿ ಶಾಂತಿ ಇರೋ ಹಾಗೆ ಮಾಡ್ತಾನೆ.

 3 ಆತನ ಸೈನ್ಯಗಳನ್ನ ಲೆಕ್ಕಿಸೋಕೆ ಸಾಧ್ಯನಾ?

ಆತನ ಬೆಳಕು ಯಾರ ಮೇಲಾದ್ರೂ ಬೀಳದಿರೋ ಹಾಗೆ ಮಾಡಕ್ಕಾಗುತ್ತಾ?

 4 ಹೀಗಿರುವಾಗ ಇವತ್ತು ಇದ್ದು ನಾಳೆ ಸಾಯೋ ಮನುಷ್ಯ

ದೇವರ ಮುಂದೆ ನೀತಿವಂತ ಆಗಿರೋಕೆ ಹೇಗೆ ಸಾಧ್ಯ?+

ಸ್ತ್ರೀಗೆ ಹುಟ್ಟಿದ ಮನುಷ್ಯ ನಿರಪರಾಧಿ ಆಗಿರೋಕೆ ಹೇಗೆ ಸಾಧ್ಯ?+

 5 ಚಂದ್ರ ಎಷ್ಟು ಹೊಳಿತಿದ್ರೂ ದೇವ್ರಿಗೆ ತೃಪ್ತಿಯಿಲ್ಲ,

ನಕ್ಷತ್ರಗಳಲ್ಲೂ ತಪ್ಪು ಕಂಡುಹಿಡಿತಾನೆ.

 6 ಅಂದ್ಮೇಲೆ ಹುಳ ತರ ಇವತ್ತಿಲ್ಲ ನಾಳೆ ಸಾಯೋ ಮನುಷ್ಯನನ್ನ,

ಕ್ರಿಮಿ ತರ ಇರೋ ಮನುಷ್ಯನನ್ನ ದೇವರು ಶುದ್ಧ ಅಂತಾನಾ!” ಅಂದ.

26 ಆಗ ಯೋಬ ಏನ್‌ ಉತ್ತರ ಕೊಟ್ಟ ಅಂದ್ರೆ,

 2 “ಬಳಲಿ ಬೆಂಡಾದವನಿಗೆ ನೀನು ದೊಡ್ಡ ಸಹಾಯ ಮಾಡಿಬಿಟ್ಟೆ ನೋಡು!

ಬಲ ಇಲ್ಲದವನಿಗೆ ನೀನು ಊರುಗೋಲಾಗಿ ನಿಂತಿದ್ದೀಯ ನೋಡು!+

 3 ನಿನ್ನಂಥ ಬುದ್ಧಿವಂತ ಯಾರೂ ಇಲ್ಲ!

ಬುದ್ಧಿ ಇಲ್ಲದವನಿಗೆ ಎಷ್ಟು ಒಳ್ಳೇ ಬುದ್ಧಿ ಹೇಳ್ದೆ!+

ನಿನ್ನ ತಲೆಯಲ್ಲಿರೋ ಬುದ್ಧಿಯನ್ನ* ನದಿ ತರ ಹರಿಸಿಬಿಟ್ಟೆ!

 4 ನೀನು ಯಾರಿಗೆ ಬುದ್ಧಿ ಹೇಳ್ತಾ ಇದ್ದೀಯ?

ಈ ರೀತಿ ಮಾತಾಡೋಕೆ ನಿನಗ್ಯಾರು ಹೇಳ್ಕೊಟ್ರು?

 5 ಸತ್ತವರು ಸಮುದ್ರಕ್ಕಿಂತ, ಸಮುದ್ರ ಜೀವಿಗಳಿಗಿಂತ ಅಡಿಯಲ್ಲಿದ್ದಾರೆ,

ಅವರು ಗಡಗಡ ನಡುಗ್ತಾರೆ.

 6 ಯಾಕಂದ್ರೆ ಸಮಾಧಿಯಲ್ಲಿ* ಯಾವುದೂ ದೇವರ ಕಣ್ಣಿಗೆ ಮರೆಯಾಗಿಲ್ಲ,+

ನಾಶನದ ಜಾಗದಲ್ಲಿ* ಇರೋದನ್ನೆಲ್ಲ ಆತನು ನೋಡ್ತಾನೆ.

 7 ಆತನು ಆಕಾಶವನ್ನ ಖಾಲಿ ಜಾಗದ* ಮೇಲೆ ಹರಡಿದ್ದಾನೆ,+

ಭೂಮಿಯನ್ನ ಯಾವ ಆಧಾರನೂ ಇಲ್ಲದೆ ತೂಗು ಹಾಕಿದ್ದಾನೆ.

 8 ಆತನು ನೀರನ್ನ ಮೋಡಗಳಲ್ಲಿ ತುಂಬಿ ಕಟ್ಟಿಟ್ಟಿದ್ದಾನೆ,+

ನೀರಿನ ಭಾರಕ್ಕೆ ಒಡೆದುಹೋಗದ ಹಾಗೆ ಅವುಗಳನ್ನ ಕಟ್ಟಿಟ್ಟಿದ್ದಾನೆ,

 9 ತನ್ನ ಸಿಂಹಾಸನ ಕಾಣದ ಹಾಗೆ

ತನ್ನ ಮೋಡಗಳನ್ನ ಹರಡಿದ್ದಾನೆ.+

10 ಆಕಾಶ ಮತ್ತು ಸಮುದ್ರ ಮಧ್ಯ ಗಡಿರೇಖೆ* ಎಳೆದಿದ್ದಾನೆ,+

ಬೆಳಕು ಮತ್ತು ಕತ್ತಲೆಯ ಮಧ್ಯ ಗೆರೆ ಹಾಕಿದ್ದಾನೆ.

11 ಆತನ ಗದರಿಕೆಗೆ ಆಕಾಶದ ಆಧಾರ ಕಂಬಗಳು ಅಲುಗಾಡುತ್ತೆ,

ಅವು ಹೆದರಿ ಕಂಪಿಸುತ್ತೆ.

12 ಆತನು ತನ್ನ ಶಕ್ತಿಯಿಂದ ಸಮುದ್ರವನ್ನ ಕೋಲಾಹಲ ಮಾಡ್ತಾನೆ,+

ತನ್ನ ತಿಳುವಳಿಕೆಯಿಂದ ಸಮುದ್ರದಲ್ಲಿರೋ ದೈತ್ಯಾಕಾರದ ಜೀವಿಯನ್ನ* ತುಂಡು ತುಂಡು ಮಾಡ್ತಾನೆ.+

13 ತನ್ನ ಉಸಿರಿಂದ* ಆಕಾಶವನ್ನ ಶುಚಿ ಮಾಡ್ತಾನೆ,

ವೇಗವಾಗಿ ಓಡೋ ಹಾವನ್ನ ಕೈಯಿಂದ ಇರಿತಾನೆ.

14 ನೋಡು! ಇವೆಲ್ಲ ದೇವರು ಮಾಡಿದ ಕೆಲಸಗಳಲ್ಲಿ ಬರೀ ಕೆಲವಷ್ಟೇ,+

ಆತನ ಬಗ್ಗೆ ನಮ್ಮ ಕಿವಿಗೆ ಬಿದ್ದಿರೋದು ಪಿಸು ಮಾತಷ್ಟೇ!

ಹೀಗಿರುವಾಗ ಆತನ ಜೋರಾದ ಗರ್ಜನೆಯನ್ನ ಯಾರು ಅರ್ಥ ಮಾಡ್ಕೊಳ್ಳೋಕೆ ಸಾಧ್ಯ?”+

27 ಯೋಬ ತನ್ನ ಮಾತು ಮುಂದುವರಿಸಿ ಹೀಗೆ ಹೇಳಿದ,

 2 “ನನಗೆ ಅನ್ಯಾಯ ಮಾಡಿದ ದೇವರ+ ಜೀವದಾಣೆ,

ನನ್ನ ಬಾಳನ್ನ ಕಹಿಯಾಗಿ ಮಾಡಿದ ಸರ್ವಶಕ್ತನ+ ಜೀವದಾಣೆ,

 3 ನನ್ನ ಉಸಿರು ಇರೋ ತನಕ,

ದೇವರು ನನ್ನ ಮೂಗಲ್ಲಿ ಊದಿದ ಜೀವಶ್ವಾಸ*+ ಇರೋ ತನಕ

 4 ನಾನು ತಪ್ಪಾಗಿ ಮಾತಾಡೋದೆ ಇಲ್ಲ,

ಮೋಸದ ಮಾತುಗಳು ನನ್ನ ಬಾಯಲ್ಲಿ ಬರೋದೇ ಇಲ್ಲ!

 5 ನೀವು ನೀತಿವಂತರು ಅಂತ ನಾನು ಊಹಿಸೋಕೂ ಆಗಲ್ಲ,

ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ!+

 6 ನಿನಗೆ ಇಷ್ಟ ಆಗೋದನ್ನೇ ಯಾವಾಗ್ಲೂ ಮಾಡ್ತೀನಿ, ಅದನ್ನ ಯಾವತ್ತೂ ಬಿಟ್ಟುಬಿಡಲ್ಲ,+

ಆಗ ಬದುಕಿರೋ ತನಕ ನನ್ನ ಮನಸ್ಸು ಚುಚ್ಚಲ್ಲ.

 7 ಕೆಟ್ಟವ್ರಿಗೆ ಬರೋ ಗತಿನೇ ನನ್ನ ಶತ್ರುಗಳಿಗೆ ಬರಲಿ,

ಅವ್ರಿಗೆ ಬರೋ ಗತಿನೇ ನನ್ನ ಮೇಲೆ ದಾಳಿ ಮಾಡುವವರಿಗೆ ಬರಲಿ.

 8 ದೇವ್ರನ್ನ ಬಿಟ್ಟುಬಿಟ್ಟವನು* ನಾಶ ಆದ್ಮೇಲೆ,+

ದೇವರು ಅವನ ಪ್ರಾಣವನ್ನ ತೆಗೆದ ಮೇಲೆ

ಅವನಿಗೇನಾದ್ರೂ ನಿರೀಕ್ಷೆ ಇದ್ಯಾ?

 9 ಕಷ್ಟ ಬಂದಾಗ

ಅವನ ಕೂಗನ್ನ ದೇವರು ಕೇಳ್ತಾನಾ?+

10 ಸರ್ವಶಕ್ತನಿಂದಾಗಿ ಅವನು ಸಂತೋಷವಾಗಿ ಇರ್ತಾನಾ?

ಎಲ್ಲ ಸಮಯದಲ್ಲಿ ದೇವ್ರಿಗೆ ಅವನು ಪ್ರಾರ್ಥನೆ ಮಾಡ್ತಾನಾ?

11 ನಿಮಗೆ ದೇವರ ಶಕ್ತಿ ಬಗ್ಗೆ* ಕಲಿಸ್ತೀನಿ,

ಸರ್ವಶಕ್ತನ ಬಗ್ಗೆ ಏನೂ ಮುಚ್ಚಿಡಲ್ಲ.

12 ನೀವೆಲ್ಲ ದರ್ಶನ ನೋಡಿದ್ದೀರ ಅಂತ ಹೇಳ್ತಾ ಇದ್ದೀರಲ್ಲಾ,

ಅಂದ್ಮೇಲೆ ಸ್ವಲ್ಪನೂ ಅರ್ಥ ಇಲ್ಲದ ಮಾತುಗಳನ್ನ ಯಾಕೆ ಆಡ್ತೀರ?

13 ಕೆಟ್ಟವನಿಗೆ ದೇವ್ರಿಂದ ಸಿಗೋ ಪಾಲು,+

ಕ್ರೂರಿಗೆ ಸರ್ವಶಕ್ತನಿಂದ ಸಿಗೋ ಆಸ್ತಿ ಏನು ಗೊತ್ತಾ?

14 ಅವನಿಗೆ ತುಂಬ ಗಂಡು ಮಕ್ಕಳು ಹುಟ್ಟಿದ್ರೂ ಅವರು ಕತ್ತಿಯಿಂದ ಸಾಯ್ತಾರೆ,+

ಅವನ ವಂಶದವ್ರಿಗೆ ಹೊಟ್ಟೆ ತುಂಬಾ ಊಟ ಇರಲ್ಲ.

15 ಅವನ ವಂಶದಲ್ಲಿ ಉಳಿದವರು ಕಾಯಿಲೆ ಬಂದು ಮಣ್ಣಿಗೆ ಸೇರ್ತಾರೆ,

ಅವರ ಹೆಂಡತಿಯರು ಅವ್ರಿಗಾಗಿ ಕಣ್ಣೀರಿಡಲ್ಲ.

16 ಅವನು ಬೆಳ್ಳಿಯನ್ನ ರಾಶಿ ರಾಶಿ ಧೂಳಿನಷ್ಟು ಕೂಡಿಸಿಟ್ರೂ

ಒಳ್ಳೊಳ್ಳೆ ಬಟ್ಟೆಗಳನ್ನ ಮಣ್ಣಿನ ಗುಡ್ಡೆಗಳಷ್ಟು ಸೇರಿಸಿಟ್ರೂ

17 ಅವನು ಕೂಡಿಸಿಟ್ಟ ಬಟ್ಟೆಗಳನ್ನೆಲ್ಲ ನೀತಿವಂತರು ಹಾಕೊಳ್ತಾರೆ,+

ಅವನ ಬೆಳ್ಳಿಯನ್ನೆಲ್ಲ ನಿರಪರಾಧಿಗಳು ಹಂಚ್ಕೊಳ್ತಾರೆ.

18 ಅವನು ಕಟ್ಟಿದ ಮನೆಗೆ ಚಿಟ್ಟೆಯ ಗೂಡಿನ* ಹಾಗೆ

ಕಾವಲುಗಾರನ ಚಪ್ಪರದ+ ಹಾಗೆ ಬಲ ಇರಲ್ಲ.

19 ಅವನು ಮಲಗುವಾಗ ತುಂಬ ಶ್ರೀಮಂತ ಆಗಿದ್ರೂ

ಅವನ ಹತ್ರ ಏನೂ ಉಳಿಯಲ್ಲ,

ಅವನು ನಿದ್ದೆಯಿಂದ ಎದ್ದಾಗ ಬಡವನಾಗಿ ಬಿಡ್ತಾನೆ.

20 ಪ್ರವಾಹದ ತರ ಭಯ ಅವನನ್ನ ಕೊಚ್ಕೊಂಡು ಹೋಗುತ್ತೆ,

ರಾತ್ರಿಯಲ್ಲಿ ಬಿರುಗಾಳಿ ಅವನನ್ನ ಹೊಡ್ಕೊಂಡು ಹೋಗುತ್ತೆ.+

21 ಪೂರ್ವದ ಗಾಳಿ ಅವನನ್ನ ಹೊತ್ಕೊಂಡು ಹೋಗುತ್ತೆ,

ಆಗ ಅವನು ಇಲ್ಲದೇ ಹೋಗ್ತಾನೆ,

ಅವನ ಜಾಗದಿಂದ ಅದು ಎತ್ತಿ ಬಿಸಾಡುತ್ತೆ.+

22 ಅದ್ರಿಂದ ತಪ್ಪಿಸ್ಕೊಂಡು ಓಡುವಾಗ+

ಅದು ಸ್ವಲ್ವನೂ ದಯೆ ತೋರಿಸದೆ ಅವನ ಮೇಲೆ ಜೋರಾಗಿ ಬೀಸುತ್ತೆ.+

23 ಅದು* ಅವನ ಪರದಾಟ ನೋಡಿ ಚಪ್ಪಾಳೆ ಹೊಡೆಯುತ್ತೆ,

ತನ್ನ ಜಾಗದಲ್ಲೇ ನಿಂತು ಅವನನ್ನ ಅಣಕಿಸಿ ಸೀಟಿ+ ಹಾಕುತ್ತೆ.

28 ಗಣಿ ತೋಡಿ ಬೆಳ್ಳಿಯನ್ನ ತೆಗಿತಾರೆ,

ಅದೇ ತರ ಚಿನ್ನ ತೆಗಿತಾರೆ, ಆಮೇಲೆ ಶುದ್ಧೀಕರಿಸ್ತಾರೆ.+

 2 ನೆಲ ಅಗೆದು ಕಬ್ಬಿಣ ತೆಗಿತಾರೆ,

ಬಂಡೆ ಕರಗಿಸಿ ತಾಮ್ರ ತೆಗಿತಾರೆ.+

 3 ಮನುಷ್ಯ ಅಮೂಲ್ಯ ಲೋಹಗಳ ಅದಿರುಗಳನ್ನ ಹುಡುಕಿ ತೆಗಿಯೋಕೆ

ಕತ್ತಲೆಯನ್ನ ಸೀಳ್ಕೊಂಡು ಹೋಗ್ತಾನೆ,

ಗಾಢ ಅಂಧಕಾರದಲ್ಲಿ ಹುಡುಕ್ತಾ ಹೋಗ್ತಾನೆ.

 4 ಮನೆಗಳಿರೋ ಜಾಗದಿಂದ ತುಂಬ ದೂರದಲ್ಲಿ,

ಜನ ನಡೆದಾಡದ ಜಾಗದಲ್ಲಿ ಸುರಂಗ ತೋಡಿ,

ಹಗ್ಗದಲ್ಲಿ ನೇತಾಡ್ಕೊಂಡು ಕೆಲಸ ಮಾಡ್ತಾನೆ.

 5 ಭೂಮಿ ಮೇಲೆ ಬೆಳೆ ಬೆಳೆಯುತ್ತೆ ನಿಜ,

ಆದ್ರೆ ಒಳಗೆ ಬೆಂಕಿ ಬಿದ್ದ ಹಾಗೆ ಛಿದ್ರಛಿದ್ರ ಆಗಿರುತ್ತೆ.*

 6 ಅಲ್ಲಿರೋ ಕಲ್ಲುಗಳಲ್ಲಿ ನೀಲಮಣಿ ಸಿಗುತ್ತೆ,

ಮಣ್ಣಲ್ಲಿ ಚಿನ್ನ ಕೂಡ ಇರುತ್ತೆ.

 7 ಬೇಟೆ ಆಡೋ ಯಾವ ಪಕ್ಷಿಗೂ ಅಲ್ಲಿಗೆ ಹೋಗೋ ದಾರಿ ಗೊತ್ತಿಲ್ಲ,

ಆ ಜಾಗ ಕಪ್ಪು ಗಿಡುಗದ ಕಣ್ಣಿಗೂ ಬಿದ್ದಿಲ್ಲ.

 8 ಕ್ರೂರ ಪ್ರಾಣಿ ಅಲ್ಲಿ ಸಿಗಲ್ಲ,

ಎಳೇ ಸಿಂಹ ಅಲ್ಲಿ ತಿರುಗಾಡಲ್ಲ.

 9 ಮನುಷ್ಯ ಗಟ್ಟಿ ಬಂಡೆ ಒಡಿತಾನೆ,

ಬೆಟ್ಟದ ಬುಡ ಅಗೆದು ನೆಲಸಮ ಮಾಡ್ತಾನೆ.

10 ಬಂಡೆಗಳನ್ನ ಕಡಿದು ನೀರಿನ ಕಾಲುವೆಗಳನ್ನ+ ಮಾಡ್ತಾನೆ,

ಎಲ್ಲ ಬೆಲೆಬಾಳುವ ವಸ್ತುಗಳನ್ನ ಹುಡುಕಿ ತೆಗಿತಾನೆ.

11 ನೆಲದಡಿ ಹರಿಯೋ ನೀರಿಗೆ ಕಟ್ಟೆ ಕಟ್ತಾನೆ,

ಕಣ್ಣಿಗೆ ಮರೆಯಾಗಿ ಇರೋದನ್ನ ಬೆಳಕಿಗೆ ತರ್ತಾನೆ.

12 ಆದ್ರೆ ಇಷ್ಟೊಂದು ವಿವೇಕ ಅವನಿಗೆ ಎಲ್ಲಿ ಸಿಗುತ್ತೆ?+

ತಿಳುವಳಿಕೆ ಯಾರಿಂದ ಬರುತ್ತೆ?+

13 ಯಾವ ಮನುಷ್ಯನಿಗೂ ಅದ್ರ ಬೆಲೆ ಗೊತ್ತಿಲ್ಲ,+

ಭೂಮಿ ಮೇಲೆ ಎಲ್ಲೂ ಅದು ಸಿಗಲ್ಲ.

14 ಆಳವಾದ ಸಾಗರ ‘ಅದು ನನ್ನಲ್ಲಿಲ್ಲ’ ಅಂತ ಹೇಳುತ್ತೆ,

ಸಮುದ್ರ ‘ನನ್ನ ಹತ್ರನೂ ಇಲ್ಲ’ ಅನ್ನುತ್ತೆ.+

15 ಅಪ್ಪಟ ಚಿನ್ನ ಕೊಟ್ಟು ಅದನ್ನ ಖರೀದಿಸೋಕೆ ಆಗಲ್ಲ,

ಎಷ್ಟೇ ಬೆಳ್ಳಿ ಕೊಟ್ರೂ ಸಿಗಲ್ಲ.+

16 ಓಫೀರಿನ ಚಿನ್ನ+ ಕೊಟ್ಟು ಅದನ್ನ ತಗೊಳ್ಳೋಕೆ ಆಗಲ್ಲ,

ಅಮೂಲ್ಯವಾದ ಗೋಮೇದಕ ರತ್ನ, ನೀಲಮಣಿ ಕೊಟ್ರೂ ಸಿಗಲ್ಲ.

17 ಚಿನ್ನ, ಗಾಜನ್ನ ಅದಕ್ಕೆ ಹೋಲಿಸಕ್ಕಾಗಲ್ಲ,

ಶುದ್ಧ ಚಿನ್ನದ ಪಾತ್ರೆ ಕೊಟ್ರೂ ಅದನ್ನ ಪಡಿಯಕ್ಕಾಗಲ್ಲ.+

18 ಹವಳವಾಗಲಿ ಸ್ಫಟಿಕವಾಗಲಿ ಅದ್ರ ಮುಂದೆ ಏನೇನೂ ಅಲ್ಲ,+

ಚೀಲ ತುಂಬ ಇರೋ ಮುತ್ತುಗಳಿಗಿಂತಲೂ ವಿವೇಕಕ್ಕೆ ಬೆಲೆ ಜಾಸ್ತಿ.

19 ಕೂಷಿನ ಪುಷ್ಯರಾಗ+ ಅದಕ್ಕೆ ಸರಿಸಾಟಿಯಲ್ಲ,

ಶುದ್ಧ ಚಿನ್ನ ಕೊಟ್ರೂ ಅದು ಸಿಗಲ್ಲ.

20 ಹಾಗಾದ್ರೆ ವಿವೇಕ ಎಲ್ಲಿ ಸಿಗುತ್ತೆ?

ತಿಳುವಳಿಕೆ ಯಾರಿಂದ ಬರುತ್ತೆ?+

21 ಅದನ್ನ ಎಲ್ಲ ಜೀವಿಗಳ ಕಣ್ಣಿಗೆ ಕಾಣದ ಹಾಗೆ ಇಟ್ಟಿದ್ದಾರೆ,+

ಪಕ್ಷಿಗಳಿಗೆ ಕಾಣದ ಹಾಗೆ ಬಚ್ಚಿಟ್ಟಿದ್ದಾರೆ.

22 ನಾಶನ, ಮರಣ,

‘ನಾವು ಅದ್ರ ಬಗ್ಗೆ ಕೇಳಿಸ್ಕೊಂಡಿದ್ದೀವಿ ಅಷ್ಟೇ’ ಅಂತ ಹೇಳುತ್ತೆ.

23 ಆದ್ರೆ ಅದನ್ನ ಹೇಗೆ ಪಡಿಯೋದು ಅಂತ ದೇವ್ರಿಗೆ ಗೊತ್ತು,

ಅದು ಎಲ್ಲಿದೆ ಅಂತ ಆತನಿಗೆ ಮಾತ್ರ ಗೊತ್ತು,+

24 ಯಾಕಂದ್ರೆ ದೇವರು ಭೂಮಿಯ ಮೂಲೆ ಮೂಲೆನೂ ನೋಡ್ತಾನೆ,

ಆಕಾಶದ ಕೆಳಗಿರೋ ಎಲ್ಲವನ್ನ ನೋಡ್ತಾನೆ.+

25 ಜೋರಾಗಿ ಬೀಸೋಕೆ ದೇವರು ಗಾಳಿಗೆ ಶಕ್ತಿ ಕೊಟ್ಟನು,+

ನೀರನ್ನ ಅಳೆದು ತುಂಬಿಸಿದನು,+

26 ಮಳೆಗೆ ನಿಯಮ ಕೊಟ್ಟನು,+

ಕಾರ್ಮೋಡಗಳಿಂದ, ಸಿಡಿಲಿಂದ ಕೂಡಿದ ದೊಡ್ಡ ಮಳೆಗೆ ದಾರಿ ಮಾಡಿದನು,+

27 ಆತನು ತನ್ನ ಆ ಕೆಲಸಗಳಲ್ಲಿ ವಿವೇಕ ನೋಡಿ ಅದನ್ನ ವಿವರಿಸಿದನು,

ಅದನ್ನ ನೆಲೆಗೊಳಿಸಿ, ಅದ್ರ ಮೌಲ್ಯ ಪರೀಕ್ಷಿಸಿದನು.

28 ಆತನು ಮನುಷ್ಯನಿಗೆ ಹೀಗಂದನು:

‘ನೋಡು! ಯೆಹೋವನಿಗೆ ಭಯಪಡೋದೇ ವಿವೇಕ,+

ಕೆಟ್ಟದನ್ನ ಬಿಟ್ಟುಬಿಡೋದೇ ತಿಳುವಳಿಕೆ.’”+

29 ಯೋಬ ಮತ್ತೆ ಹೀಗಂದ,

 2 “ನನ್ನ ಜೀವನ ಮೊದಲಿದ್ದ ಹಾಗೆ ಇರ್ತಿದ್ರೆ ಎಷ್ಟೋ ಚೆನ್ನಾಗಿತ್ತು,

ದೇವರು ನನ್ನನ್ನ ಕಾದು ಕಾಪಾಡ್ತಿದ್ದ ಆ ಸಮಯ ಮತ್ತೆ ಬಂದ್ರೆ ಒಳ್ಳೇದಿತ್ತು.

 3 ಆ ಸಮಯದಲ್ಲಿ ಆತನ ದೀಪದ ಬೆಳಕು ನನ್ನ ತಲೆ ಮೇಲೆ ಬೀಳ್ತಿತ್ತು,

ಆತನ ಬೆಳಕು ಇದ್ದದ್ರಿಂದ ಕತ್ತಲೆಯಲ್ಲೂ ನಡಿಯೋಕೆ ಆಗ್ತಿತ್ತು,+

 4 ಯೌವನದ ದಿನಗಳು ಹೇಗಿತ್ತು ಗೊತ್ತಾ!

ದೇವರ ಜೊತೆ ನನಗಿದ್ದ ಸ್ನೇಹದಿಂದ ನನ್ನ ಮನೇಲಿ ಶಾಂತಿ, ಸಂತೋಷ ಇತ್ತು.+

 5 ಆಗ ಸರ್ವಶಕ್ತ ನನ್ನ ಜೊತೆ ಇದ್ದನು,

ನನ್ನ ಮಕ್ಕಳು* ನನ್ನ ಸುತ್ತಮುತ್ತ ಇದ್ರು.

 6 ನಾನು ಬೆಣ್ಣೆ ಮೇಲೆನೇ ಹೆಜ್ಜೆ ಇಡ್ತಿದ್ದೆ,

ನನಗಾಗಿ ಬಂಡೆಗಳು ಎಣ್ಣೆಯ ನದಿಯನ್ನೇ ಹರಿಸ್ತಿತ್ತು.+

 7 ನಾನು ಪಟ್ಟಣದ ಬಾಗಿಲ+ ಹತ್ರ ಹೋಗಿ

ಮುಖ್ಯಸ್ಥಳದಲ್ಲಿ*+ ಕೂತ್ಕೊಳ್ತಿದ್ದೆ.

 8 ನನ್ನನ್ನ ನೋಡಿದ ತಕ್ಷಣ ಯುವಕರು ಪಕ್ಕಕ್ಕೆ ಸರಿತಿದ್ರು,

ವಯಸ್ಸಾದವರು ಕೂಡ ಎದ್ದು ನಿಲ್ತಿದ್ರು.+

 9 ನನ್ನ ಮುಂದೆ ಅಧಿಕಾರಿಗಳು ಮಾತಾಡ್ತಿರಲಿಲ್ಲ,

ಅವರು ತಮ್ಮ ಬಾಯಿ ಮೇಲೆ ಕೈ ಇಟ್ಕೊಳ್ತಿದ್ರು.

10 ಗಣ್ಯ ವ್ಯಕ್ತಿಗಳು ಬಾಯಿ ಮುಚ್ಚುತ್ತಿದ್ರು,

ಅವ್ರ ಬಾಯಿಂದ ಒಂದು ಶಬ್ದ ಕೂಡ ಬರ್ತಾ ಇರ್ಲಿಲ್ಲ.

11 ನನ್ನ ಮಾತುಗಳನ್ನ ಕೇಳಿಸ್ಕೊಂಡು ಜನ ನನ್ನನ್ನ ಹೊಗಳ್ತಿದ್ರು,

ನೋಡಿದವರು ನನ್ನ ಬಗ್ಗೆ ಮೆಚ್ಚಿ ಮಾತಾಡ್ತಿದ್ರು.

12 ಯಾಕಂದ್ರೆ ಸಹಾಯ ಕೇಳಿದ ಬಡವ್ರನ್ನ ನಾನು ಕಾಪಾಡ್ತಿದ್ದೆ,+

ಅನಾಥ ಮಕ್ಕಳಿಗೆ, ಅಮಾಯಕರಿಗೆ ಆಸರೆಯಾಗಿ ನಿಲ್ತಿದ್ದೆ.+

13 ಬದುಕೋ ದಾರಿ ತೋರಿಸಿದ್ದಕ್ಕೆ ಅವರು ನನ್ನನ್ನ ಆಶೀರ್ವದಿಸ್ತಾ ಇದ್ರು,+

ವಿಧವೆಯರು ನಾನು ಕೊಡೋ ಸಹಾಯದಿಂದ ಸಂತೋಷವಾಗಿ ಇದ್ರು.+

14 ನೀತಿಯನ್ನ ನಾನು ಬಟ್ಟೆ ತರ ಹಾಕೊಳ್ತಿದ್ದೆ,

ನ್ಯಾಯವನ್ನ ಉದ್ದ ಅಂಗಿ ತರ, ಪೇಟ ತರ ಹಾಕೊಳ್ತಿದ್ದೆ.

15 ಕುರುಡನಿಗೆ ಕಣ್ಣಾಗಿದ್ದೆ,

ಕುಂಟನಿಗೆ ಕಾಲಾಗಿದ್ದೆ.

16 ಬಡವ್ರಿಗೆ ತಂದೆ ತರ ಇದ್ದೆ,+

ಅಪರಿಚಿತರ ಮೊಕದ್ದಮೆಯನ್ನ ವಿಚಾರಿಸಿ ನ್ಯಾಯ ಕೊಡಿಸ್ತಿದ್ದೆ.+

17 ಕ್ರೂರ ಪ್ರಾಣಿ ತರ ಇದ್ದ ಕೆಟ್ಟವ್ರ ಅಟ್ಟಹಾಸ ನಿಲ್ಲಿಸಿ,+

ಬಲಿಪಶು ಆದವ್ರನ್ನ ಕಾಪಾಡ್ತಿದ್ದೆ.*

18 ‘ಮರಳಿನ ಕಣಗಳಷ್ಟು ದಿನ ನಾನು ಬದುಕ್ತೀನಿ,

ನನ್ನ ಮನೆಯಲ್ಲೇ ಜೀವಬಿಡ್ತೀನಿ’+ ಅಂದ್ಕೊಂಡಿದ್ದೆ.

19 ‘ನೀರಿರೋ ಜಾಗದ ತನಕ ಬೇರು ಬಿಟ್ಟಿರೋ,

ರಾತ್ರಿಯೆಲ್ಲಾ ರೆಂಬೆಕೊಂಬೆಗಳ ಮೇಲೆ ಇಬ್ಬನಿ ಬಿದ್ದಿರೋ

ಮರದ ಹಾಗೆ ನಾನು ಇರ್ತಿನಿ.

20 ನನ್ನ ಗೌರವ ಯಾವತ್ತೂ ಕಮ್ಮಿ ಆಗಲ್ಲ,

ಬಿಲ್ಲಿಂದ ಒಂದಾದ್ಮೇಲೆ ಒಂದು ಬಾಣ ಬಿಡ್ತಾ ಇರೋಕೆ ಕೈಯಲ್ಲಿ ಬಲ ಇರುತ್ತೆ’ ಅಂದ್ಕೊಂಡಿದ್ದೆ.

21 ನನ್ನ ಮಾತುಗಳನ್ನ ಕೇಳೋಕೆ ಜನ ಕಾಯ್ತಾ ಇದ್ರು,

ನನ್ನ ಸಲಹೆಗಾಗಿ ಕಾದು ನಿಲ್ತಿದ್ರು.+

22 ನಾನು ಸಲಹೆ ಕೊಟ್ಟ ಮೇಲೆ ಯಾರೂ ತುಟಿಕ್‌ಪಿಟಿಕ್‌ ಅನ್ನುತ್ತಿರಲಿಲ್ಲ.

ನನ್ನ ಒಂದೊಂದು ಮಾತನ್ನೂ ಖುಷಿಯಿಂದ ಕೇಳ್ತಿದ್ರು.

23 ಮಳೆಗೆ ಕಾಯೋ ತರ ನನಗಾಗಿ ಕಾಯ್ತಿದ್ರು,

ವಸಂತಕಾಲದ ಮಳೆ ನೀರನ್ನ ಕುಡಿಯೋ ತರ ನನ್ನ ಮಾತನ್ನ ಬಾಯಿ ತೆರೆದು ಕುಡಿತಿದ್ರು.+

24 ಅವ್ರನ್ನ ನೋಡಿ ನಾನು ಮುಗುಳ್ನಗೆ ಬೀರಿದ್ರೆ ಕಣ್ಣುಬಾಯಿ ಬಿಟ್ಟು ನೋಡ್ತಿದ್ರು,

ನನ್ನ ನಗುಮುಖ ನೋಡಿದಾಗ ಅವ್ರಲ್ಲಿ ಭರವಸೆ ಮೂಡ್ತಿತ್ತು.*

25 ನಾನು ಅವ್ರಿಗೆ ನಾಯಕನಾಗಿ ದಾರಿ ತೋರಿಸ್ತಿದ್ದೆ,

ಸೈನ್ಯಗಳ ಮಧ್ಯ ಇರೋ ರಾಜನ ತರ ಅವ್ರ ಮಧ್ಯ ಜೀವಿಸಿದೆ,+

ನೊಂದ ಜನ್ರನ್ನ ಸಮಾಧಾನ ಮಾಡ್ತಿದ್ದೆ.+

30 ಆದ್ರೆ ಈಗ ನನಗಿಂತ ವಯಸ್ಸಲ್ಲಿ ಚಿಕ್ಕವರು ಕೂಡ ನನ್ನನ್ನ ನೋಡಿ ನಗ್ತಾರೆ,+

ಅವ್ರ ಅಪ್ಪಂದಿರು ನನ್ನ ಕುರಿ ಕಾಯೋ

ನಾಯಿಗಳ ಜೊತೆ ಇರಕ್ಕೂ ಲಾಯಕ್ಕಿಲ್ಲ,

ಅಂಥವ್ರ ಮಕ್ಕಳು ನನ್ನನ್ನ ಗೇಲಿ ಮಾಡ್ತಾರೆ.

 2 ಅವ್ರ ಕೈಯಲ್ಲಿರೋ ಶಕ್ತಿಯಿಂದ ನನಗೇನು ಪ್ರಯೋಜನ ಆಯ್ತು?

ಅವ್ರ ಶಕ್ತಿಯೆಲ್ಲ ಬತ್ತಿಹೋಗಿದೆ.

 3 ಊಟ ಇಲ್ಲದೆ ಸೊರಗಿ ಹೋಗಿದ್ದಾರೆ,

ಪಾಳುಬಿದ್ದಿರೋ ಒಣನೆಲದಲ್ಲಿ ಅಲೆದಾಡಿ ಸಿಕ್ಕಿದ್ದನ್ನ ತಿಂತಾರೆ.

 4 ಪೊದೆಗಳಿಂದ ಉಪ್ಪು ಗಿಡಗಳ ಎಲೆ ಕೂಡಿಸ್ತಾರೆ,

ಕುರುಚಲು ಪೊದೆಗಳ ಬೇರು ತಿಂತಾರೆ.

 5 ಜನ್ರು ಕಳ್ಳನನ್ನ ನೋಡಿ ಹೇಗೆ ಕೂಗ್ತಾರೋ

ಹಾಗೆ ಅವ್ರನ್ನ ನೋಡಿ ಕೂಗಿ ಓಡಿಸಿಬಿಡ್ತಾರೆ.+

 6 ಕಣಿವೆಗಳ ಇಳಿಜಾರಲ್ಲಿ ವಾಸ ಮಾಡ್ತಾರೆ

ನೆಲದಲ್ಲಿ, ಬಂಡೆಯಲ್ಲಿ ಗುಂಡಿ ತೋಡಿ ಅಲ್ಲಿ ಇರ್ತಾರೆ.

 7 ಪೊದೆಗಳ ಒಳಗಿಂದ ಕೂಗ್ತಾರೆ,

ಮುಳ್ಳುಗಿಡಗಳ* ಮಧ್ಯ ಮುದುರಿಕೊಂಡು ಒಟ್ಟಿಗೆ ಕೂತಿರ್ತಾರೆ.

 8 ಅವರು ಮೂರ್ಖರ ಮಕ್ಕಳು, ನೀಚರಿಗೆ ಹುಟ್ಟಿದವರು,

ಜನರು ಅವ್ರನ್ನ ದೇಶದಿಂದ ಓಡಿಸಿಬಿಟ್ಟಿದ್ದಾರೆ.

 9 ಆದ್ರೆ ಈಗ ಅಂಥವ್ರೇ ತಮ್ಮ ಹಾಡುಗಳಲ್ಲೂ ನನ್ನನ್ನ ಗೇಲಿ ಮಾಡ್ತಾರೆ,+

ನನ್ನನ್ನ ನೋಡಿ ಮುಸಿ ಮುಸಿ ನಗ್ತಾರೆ.*+

10 ನನ್ನನ್ನ ನೋಡಿ ಅಸಹ್ಯಪಟ್ಟು ದೂರ ನಿಲ್ತಾರೆ,+

ನನ್ನ ಮುಖದ ಮೇಲೆ ಉಗುಳೋಕ್ಕೂ ಹಿಂದೆಮುಂದೆ ನೋಡಲ್ಲ.+

11 ದೇವರು ನನ್ನ ಬಿಲ್ಲಿನ ದಾರವನ್ನ ಸಡಿಲಿಸಿ ನಾನು ಸೋಲೋ ತರ ಮಾಡಿದ್ದಾನೆ,

ಹಾಗಾಗಿ ಅವರು ನನ್ನ ಕಣ್ಮುಂದೆನೇ ಲಂಗುಲಗಾಮಿಲ್ಲದೆ ನಡ್ಕೊಳ್ತಾರೆ.

12 ಅವರು ನನ್ನ ಬಲಗಡೆಯಲ್ಲಿ ನನ್ನ ವಿರುದ್ಧ ದೊಂಬಿ ಏಳ್ತಾರೆ,

ನನ್ನನ್ನ ಅಲ್ಲಿಂದ ಓಡಿಹೋಗೋ ಹಾಗೆ ಮಾಡ್ತಾರೆ,

ಆದ್ರೆ ನನ್ನನ್ನ ದಾರೀಲಿ ಮುಗಿಸೋಕೆ ಸಂಚು ಮಾಡ್ತಾರೆ.

13 ತಪ್ಪಿಸ್ಕೊಳ್ಳೋ ದಾರಿನ್ನೆಲ್ಲ ಮುಚ್ಚಿಬಿಡ್ತಾರೆ,

ನನ್ನ ಕಷ್ಟನಾ ಇನ್ನೂ ಜಾಸ್ತಿ ಮಾಡ್ತಾರೆ,+

ಅವ್ರನ್ನ ತಡೆಯುವವರು* ಯಾರೂ ಇಲ್ಲ.

14 ಗೋಡೆಯಲ್ಲಿ ದೊಡ್ಡ ಬಿರುಕಿಂದ ನುಸುಳ್ಕೊಂಡು ಬರ್ತಾರೆ,

ನನಗೆ ಅಷ್ಟೊಂದು ಕಷ್ಟ ಇರುವಾಗ್ಲೇ ನನ್ನ ಮೇಲೆ ಬೀಳ್ತಾರೆ.

15 ಭಯ ನನ್ನನ್ನ ಸುತ್ಕೊಂಡಿದೆ,

ನನ್ನ ಗೌರವವನ್ನ ಗಾಳಿ ತಗೊಂಡು ಹೋಗಿದೆ,

ಬದುಕಿ ಉಳಿತೀನಿ ಅನ್ನೋ ಭರವಸೆ ಮೋಡದ ಹಾಗೆ ಕಣ್ಮರೆ ಆಗಿದೆ.

16 ನನ್ನ ಆಯಸ್ಸು ಮುಗೀತಾ ಬಂದಿದೆ,+

ಪ್ರತಿದಿನ ಕಷ್ಟದಲ್ಲೇ ಕೈತೊಳೀತಾ ಇದ್ದೀನಿ.+

17 ಯಾರೋ ನನ್ನ ಮೂಳೆಗಳನ್ನ ಜಜ್ಜಿದ ಹಾಗೆ+

ರಾತ್ರಿಯೆಲ್ಲ ಮೂಳೆಗಳು ತುಂಬ ನೋವಾಗುತ್ತೆ, ಕಡಿಮೆನೇ ಆಗಲ್ಲ.+

18 ನನ್ನ ಬಟ್ಟೆಯನ್ನ* ಹಿಡಿದು ಜೋರಾಗಿ ಎಳೆದ ಹಾಗಾಗುತ್ತೆ,*

ಕೊರಳಪಟ್ಟಿ ಎಷ್ಟು ಬಿಗಿಯಾಗುತ್ತೆ ಅಂದ್ರೆ ಉಸಿರುಗಟ್ಟುತ್ತೆ.

19 ದೇವರು ನನ್ನನ್ನ ಕೆಸರಲ್ಲಿ ಬಿಸಾಕಿದ್ದಾನೆ,

ನಾನು ಧೂಳು ತರ, ಬೂದಿ ತರ ಆಗಿದ್ದೀನಿ.

20 ದೇವ್ರೇ, ನಾನು ಸಹಾಯ ಕೇಳಿದ್ರೂ ನೀನ್ಯಾಕೆ ಉತ್ತರ ಕೊಡ್ತಿಲ್ಲ,+

ಎದ್ದು ನಿಂತ್ರೂ ಯಾಕೆ ಸುಮ್ಮನೆ ನೋಡ್ತಾ ಇದ್ದೀಯ.

21 ನನ್ನ ವಿರುದ್ಧ ನಿಂತು ಕ್ರೂರವಾಗಿ ನಡ್ಕೊಳ್ತಾ ಇದ್ದೀಯ,+

ನಿನ್ನ ಶಕ್ತಿನ್ನೆಲ್ಲ ಬಳಸಿ ನನ್ನನ್ನ ಹೊಡಿತಾ ಇದ್ದೀಯ.

22 ನಾನು ಗಾಳಿಯಲ್ಲಿ ಹಾರಿ ಹೋಗೋ ಹಾಗೆ ಮಾಡ್ತೀಯ,

ಆಮೇಲೆ ಬಿರುಗಾಳಿಗೆ ಕೊಟ್ಟುಬಿಡ್ತೀಯ.*

23 ನಂಗೊತ್ತು, ನನ್ನನ್ನ ಸಾಯಿಸಬೇಕಂತ ಇದ್ದೀಯ,

ಕೊನೆಗೆ ಎಲ್ರೂ ಹೋಗೋ ಜಾಗಕ್ಕೆ ನನ್ನನ್ನ ಸೇರಿಸಬೇಕಂತ ಇದ್ದೀಯ.

24 ಆದ್ರೆ ಈಗಾಗ್ಲೇ ಕಷ್ಟದಲ್ಲಿ ಬಿದ್ದಿರೋ ಮನುಷ್ಯ

ಸಹಾಯ ಮಾಡಿ ಅಂತ ಬೇಡ್ಕೊಳ್ಳುವಾಗ ಅವನನ್ನ ಯಾರಾದ್ರೂ ಹೊಡೀತಾರಾ?+

25 ಕಷ್ಟದಲ್ಲಿ ಇದ್ದವ್ರನ್ನ ನೋಡಿ ನಾನು ಅತ್ತಿಲ್ವಾ?

ಬಡವರ ಪಾಡು ನೋಡಿ ನಂಗೂ ಬೇಜಾರು ಆಗಿಲ್ವಾ?+

26 ಒಳ್ಳೆದಾಗುತ್ತೆ ಅಂತ ನೆನಸಿದ್ರೆ ನನಗೆ ಕೆಟ್ಟದಾಗಿದೆ,

ನನ್ನ ಬಾಳಲ್ಲಿ ಬೆಳಕು ಇರುತ್ತೆ ಅಂದ್ಕೊಂಡ್ರೆ ಕತ್ತಲೆ ತುಂಬಿದೆ.

27 ಮನಸ್ಸು ಚಿಂತೆಯಿಂದ ಚಡಪಡಿಸ್ತಾನೇ ಇದೆ,

ದಿನೇ ದಿನೇ ಕಷ್ಟ ಬರ್ತಾನೇ ಇದೆ.

28 ನಾನು ದುಃಖದಲ್ಲಿ ನಡೀತಾ ಇದ್ದೀನಿ,+

ನನ್ನ ಬದುಕಲ್ಲಿ ಸೂರ್ಯನ ಬೆಳಕೇ ಇಲ್ಲ,

ಜನ್ರ ಮಧ್ಯ ಎದ್ದುನಿಂತು ಸಹಾಯಕ್ಕಾಗಿ ಕೂಗ್ತಾ ಇದ್ದೀನಿ.

29 ನನ್ನ ಸ್ಥಿತಿ ಹೇಗಿದೆ ಅಂದ್ರೆ,

ನಾನು ಗುಳ್ಳೆನರಿಗಳಿಗೆ ಸಹೋದರ ಆಗಿದ್ದೀನಿ,

ಉಷ್ಟ್ರಪಕ್ಷಿಗಳಿಗೆ ಸ್ನೇಹಿತ ಆಗಿದ್ದೀನಿ.+

30 ನನ್ನ ಚರ್ಮ ಕಪ್ಪಾಗಿ ಉದುರಿಹೋಗಿದೆ,+

ನನ್ನ ಮೂಳೆಗಳೆಲ್ಲ ಬಿಸಿ ಜಾಸ್ತಿಯಾಗಿ ಸುಡ್ತಿದೆ.*

31 ನನ್ನ ತಂತಿವಾದ್ಯದಲ್ಲಿ ಬರೀ ಶೋಕಗೀತೆ ಬರ್ತಿದೆ,

ನನ್ನ ಕೊಳಲಲ್ಲಿ ಅಳೋ ಸ್ವರ ಮಾತ್ರ ಬರ್ತಿದೆ.

31 ನಾನು ಯಾವ ಹೆಣ್ಣನ್ನೂ ಕೆಟ್ಟ ದೃಷ್ಟಿಯಿಂದ ನೋಡಲ್ಲ ಅಂತ ದೃಢನಿರ್ಧಾರ ಮಾಡಿದ್ದೀನಿ,*+

ಹಾಗಾಗಿ ಯುವತಿಯನ್ನ ತಪ್ಪಾದ ದೃಷ್ಟಿಯಿಂದ ಹೇಗೆ ನೋಡ್ಲಿ?+

 2 ಹಾಗೆ ನೋಡಿದ್ರೆ ಸ್ವರ್ಗದಲ್ಲಿರೋ ದೇವ್ರಿಂದ ನನಗೇನು ಸಿಗುತ್ತೆ?

ಮೇಲಿರೋ ಸರ್ವಶಕ್ತನಿಂದ ನನಗೇನು ಪಾಲು ಸಿಗುತ್ತೆ?

 3 ತಪ್ಪು ಮಾಡಿದವನಿಗೆ ದುರಂತ ಆಗೇ ಆಗುತ್ತಲ್ವಾ?

ಕೆಟ್ಟದು ಮಾಡಿದವನಿಗೆ ಕಷ್ಟ ಬಂದೇ ಬರುತ್ತಲ್ವಾ?+

 4 ದೇವರು ನನ್ನ ನಡತೆ ನೋಡ್ತಾ ಇದ್ದಾನಲ್ವಾ?+

ನಾನಿಡೋ ಒಂದೊಂದು ಹೆಜ್ಜೆಯನ್ನೂ ಗಮನಿಸ್ತಾ ಇದ್ದಾನಲ್ವಾ?

 5 ನಾನು ಯಾವತ್ತಾದ್ರೂ ಸುಳ್ಳು ಹೇಳಿದ್ದೀನಾ?*

ಯಾರಿಗಾದ್ರೂ ಮೋಸ ಮಾಡಿದ್ದೀನಾ?*+

 6 ದೇವರು ನನ್ನನ್ನ ಸರಿಯಾದ ತಕ್ಕಡಿಯಲ್ಲಿಟ್ಟು ತೂಕ ಮಾಡ್ಲಿ,+

ಆಗ ಆತನಿಗೆ ನನ್ನಲ್ಲಿ ಒಂಚೂರೂ ತಪ್ಪಿಲ್ಲ ಅಂತ ಗೊತ್ತಾಗುತ್ತೆ.+

 7 ನಾನು ಸರಿ ದಾರಿ ಬಿಟ್ಟು ಆಚೆ ಹೆಜ್ಜೆ ಇಟ್ಟಿದ್ರೆ,+

ನನ್ನ ಹೃದಯ ಕಣ್ಣು ನೋಡಿದ್ದರ ಹಿಂದೆ ಹೋಗಿದ್ರೆ,+

ನನ್ನ ಕೈಗಳು ಪಾಪ ಮಾಡಿ ಅಶುದ್ಧ ಆಗಿದ್ರೆ

 8 ನಾನು ಬೆಳೆಸಿದ್ದನ್ನ ಬೇರೆಯವರು ತಿನ್ನಲಿ,+

ನಾನು ನೆಟ್ಟದ್ದನ್ನ ಬೇರೆಯವರು ಕಿತ್ತು ಬಿಸಾಡ್ಲಿ.*

 9 ಒಬ್ಬ ಸ್ತ್ರೀಯನ್ನ ನೋಡಿ ಮನಸ್ಸು ಸೋತು+

ಅವಳಿಗಾಗಿ ನೆರೆಯವನ ಬಾಗಿಲ ಹತ್ರ ನಾನು ಹೊಂಚುಹಾಕಿದ್ರೆ+

10 ನನ್ನ ಹೆಂಡತಿ ಬೇರೆಯವನ ಮನೇಲಿ ಧಾನ್ಯ ಬೀಸ್ಲಿ,

ಬೇರೆ ಗಂಡಸ್ರು ಅವಳ ಜೊತೆ ಮಲಗ್ಲಿ.+

11 ನಾನು ತಪ್ಪು ಮಾಡಿದ್ರೆ ಅದು ನಾಚಿಕೆಗೆಟ್ಟ ಕೆಲಸ,

ಆ ಪಾಪಕ್ಕೆ ನ್ಯಾಯಾಧೀಶರು ನನಗೆ ಶಿಕ್ಷೆ ಕೊಡ್ಲೇ ಬೇಕು.+

12 ಎಲ್ಲವನ್ನೂ ಸುಟ್ಟು ಬೂದಿಮಾಡೋ ಬೆಂಕಿ ತರ

ಆ ವ್ಯಭಿಚಾರ ನನ್ನದೆಲ್ಲವನ್ನೂ ಸುಟ್ಟು ಸರ್ವನಾಶ ಮಾಡ್ಲಿ.+

13 ಒಂದುವೇಳೆ ನನ್ನ ಸೇವಕ ಸೇವಕಿಯರಿಗೆ ನನ್ನ ಮೇಲೆ ದೂರು* ಇದ್ದಾಗ

ನಾನು ಅದಕ್ಕೆ ಗಮನ ಕೊಡದಿದ್ರೆ ನ್ಯಾಯ ಕೊಡದೇ ಇದ್ದಿದ್ರೆ

14 ದೇವರು ಅದರ ಬಗ್ಗೆ ಕೇಳಿದಾಗ ನಾನೇನು ಹೇಳಲಿ?

ಲೆಕ್ಕ ಕೇಳಿದಾಗ ನಾನೇನು ಉತ್ತರ ಕೊಡಲಿ?+

15 ನನ್ನ ತಾಯಿ ಹೊಟ್ಟೆಯಲ್ಲಿ ನನ್ನನ್ನ ಸೃಷ್ಟಿ ಮಾಡಿದವನೇ ಅವ್ರನ್ನೂ ಸೃಷ್ಟಿ ಮಾಡಿದ್ದಾನಲ್ವಾ?+

ಹುಟ್ಟೋ ಮುಂಚೆನೇ ನಮ್ಮನ್ನೆಲ್ಲ ರೂಪಿಸಿದವನು ಆತನೇ ಅಲ್ವಾ?+

16 ಬಡವರು ನನ್ನ ಹತ್ರ ಏನಾದ್ರೂ ಕೇಳಿದಾಗ ನಾನು ಕೊಡಲಿಲ್ವಾ?+

ವಿಧವೆಯರಿಗೆ ಸಹಾಯ ಮಾಡದೆ ಅವ್ರ ಮುಖ ಬಾಡಿ ಹೋಗೋ ಹಾಗೆ ಮಾಡಿದ್ದೀನಾ?+

17 ನನ್ನ ಪಾಲಿನ ಊಟನಾ ನಾನೊಬ್ಬನೇ ತಿಂದಿದ್ದೀನಾ?

ಅನಾಥರಿಗೂ ಕೊಟ್ಟಿಲ್ವಾ?+

18 (ಚಿಕ್ಕ ವಯಸ್ಸಿಂದಾನೇ ನಾನು ಆ ಅನಾಥರಿಗೆ ತಂದೆ ತರ ಇದ್ದೆ,

ಬಾಲ್ಯದಿಂದಾನೇ* ವಿಧವೆಯರಿಗೆ ಸಹಾಯ ಮಾಡ್ತಾ ಬಂದಿದ್ದೀನಿ.)

19 ಬಟ್ಟೆಯಿಲ್ಲದೆ ಕೊರೆಯೋ ಚಳಿಯಲ್ಲಿ ಇದ್ದವ್ರನ್ನ ಸಾಯಲಿ ಅಂತ ಬಿಟ್ಟಿದ್ದೀನಾ?

ಬಡವನಿಗೆ ಹೊದ್ದುಕೊಳ್ಳೋಕೆ ಏನೂ ಇಲ್ಲದೇ ಇದ್ದಾಗ ನೋಡಿನೂ ನೋಡದ ಹಾಗೆ ಇದ್ದಿದ್ದೀನಾ?+

20 ನನ್ನ ಕುರಿಗಳ ಉಣ್ಣೆಬಟ್ಟೆಯಿಂದ ಅವ್ರನ್ನ ಬೆಚ್ಚಗೆ ಇಟ್ಟಿಲ್ವಾ?

ಆ ಸಹಾಯಕ್ಕಾಗಿ ಅವರು ನನಗೆ ಆಶೀರ್ವಾದ ಮಾಡಿಲ್ವಾ?+

21 ಪಟ್ಟಣದ ಬಾಗಿಲ+ ಹತ್ರ ಅನಾಥರು ನನ್ನ ಸಹಾಯ ಬೇಡಿದಾಗ*+

ನಾನು ಕೈ ಎತ್ತಿ ಬೆದರಿಸಿದ್ದೀನಾ?

22 ಹಾಗೆ ಮಾಡಿದ್ರೆ ನನ್ನ ಹೆಗಲಿಂದ ಕೈ ಬಿದ್ದು ಹೋಗ್ಲಿ,

ನನ್ನ ಮೊಣಕೈ ಮುರಿದು ಹೋಗ್ಲಿ.

23 ಆದ್ರೆ ನಾನು ಹಾಗೇನೂ ಮಾಡಿಲ್ಲ,

ಯಾಕಂದ್ರೆ ದೇವ್ರಿಂದ ಶಿಕ್ಷೆ ಸಿಗುತ್ತೆ ಅನ್ನೋ ಭಯ ನನಗಿದೆ,

ಆತನಿಗಿರೋ ಗೌರವದ ಮುಂದೆ ನಿಲ್ಲಕ್ಕಾಗಲ್ಲ ಅಂತ ನಂಗೊತ್ತು.

24 ನಾನು ಬಂಗಾರದಲ್ಲಿ ಭರವಸೆ ಇಟ್ನಾ?

‘ನಿನ್ನಿಂದಾನೇ ನಾನು ಬದುಕಿರೋದು!’ ಅಂತ ಅಪ್ಪಟ ಚಿನ್ನಕ್ಕೆ ಹೇಳಿದ್ದೀನಾ?+

25 ನನಗೆ ಬೇಕಾದಷ್ಟು ಆಸ್ತಿಪಾಸ್ತಿ ಇದ್ದಾಗ+

ನಾನು ಸಂತೋಷವಾಗಿ ಇರೋಕೆ ಸಿರಿ-ಸಂಪತ್ತೇ ಕಾರಣ ಅಂತ ಹೇಳಿದ್ದೀನಾ?+

26 ಹೊಳೆಯೋ ಸೂರ್ಯನನ್ನ ನೋಡಿ,

ಚಂದ್ರನ ಅಂದಚಂದ ನೋಡಿ+

27 ನನ್ನ ಮನಸ್ಸು ಮರುಳಾಗಿ

ಅವುಗಳನ್ನ ಆರಾಧಿಸೋಕೆ ನನ್ನ ಕೈಗೆ ಮುತ್ತು ಕೊಟ್ಟಿದ್ದೀನಾ?+

28 ನಾನು ಹಾಗೆ ಮಾಡಿದ್ರೆ ಸ್ವರ್ಗದಲ್ಲಿರೋ ಸತ್ಯ ದೇವರನ್ನ ಬೇಡ ಅಂತ ಹೇಳಿದ ಹಾಗಾಗ್ತಿತ್ತು.

ಹಾಗೆ ಮಾಡಿದ್ರೆ ಆ ಪಾಪಕ್ಕೆ ನ್ಯಾಯಾಧೀಶರು ಶಿಕ್ಷೆ ಕೊಡಬೇಕಾಗಿತ್ತು.

29 ನಾನು ಯಾವತ್ತಾದ್ರೂ ನನ್ನ ಶತ್ರು ನಾಶ ಆದಾಗ ಖುಷಿ ಪಟ್ಟಿದ್ದೀನಾ?+

ಅವನಿಗೆ ಕೆಟ್ಟದು ಆದಾಗ ಹಬ್ಬ ಮಾಡಿದ್ದೀನಾ?

30 ಇಲ್ಲ, ‘ಅವನು ಹಾಳಾಗಿ ಹೋಗ್ಲಿ’ ಅಂತ ಶಾಪ ಹಾಕಿಲ್ಲ,

ನನ್ನ ಬಾಯಿಂದ ಅಂಥ ಪಾಪವನ್ನ ಯಾವತ್ತೂ ಮಾಡಿಲ್ಲ.+

31 ನನ್ನ ಮನೆಗೆ ಬಂದು ಹೊಟ್ಟೆ ತುಂಬ ಊಟ ಮಾಡದಿರೋ* ವ್ಯಕ್ತಿ ಊರಲ್ಲಿ ಒಬ್ರೂ ಇಲ್ಲ,+

ನನ್ನ ಮನೆಯಲ್ಲಿ ಇರೋರೇ ಅದಕ್ಕೆ ಸಾಕ್ಷಿ.

32 ಪ್ರಯಾಣಿಕರಿಗಾಗಿ ನನ್ನ ಮನೆ ಬಾಗಿಲು ಯಾವಾಗ್ಲೂ ತೆರೆದೇ ಇರ್ತಿತ್ತು,

ಒಬ್ಬ ಅಪರಿಚಿತ* ಕೂಡ ಬೀದಿಯಲ್ಲಿ ರಾತ್ರಿ ಮಲಗಿಲ್ಲ.+

33 ಬೇರೆಯವ್ರ ಹಾಗೆ ಯಾವತ್ತಾದ್ರೂ

ನನ್ನ ತಪ್ಪನ್ನ ಮುಚ್ಚಿಡೋಕೆ ನೋಡಿದ್ದೀನಾ?+

ನನ್ನ ಜೇಬಲ್ಲಿ ನನ್ನ ಪಾಪವನ್ನ ಬಚ್ಚಿಟ್ಟಿದ್ದೀನಾ?

34 ಅದು ಬೇರೆಯವ್ರಿಗೆ ಗೊತ್ತಾದ್ರೆ ಏನು ಹೇಳಬಹುದು ಅಂತ ಭಯಪಟ್ಟಿದ್ದೀನಾ?

ಬಂಧುಬಳಗಕ್ಕೆ ಗೊತ್ತಾದ್ರೆ ಎಲ್ಲಿ ನನ್ನ ಮರ್ಯಾದೆ ಹೋಗುತ್ತೋ ಅಂತ ಹೆದರಿದ್ದೀನಾ?

ಬಾಯಿಬಿಡದೆ ಸುಮ್ಮನಿದ್ದು, ಮನೆಯಿಂದ ಹೊರಗೆ ಕಾಲಿಡದೆ ಒಳಗೇ ಕೂತಿದ್ದೀನಾ?

35 ಯಾರಾದ್ರೂ ನಾನು ಹೇಳೋದನ್ನ ಸ್ವಲ್ಪ ಕೇಳಿಸ್ಕೊಳ್ಳಿ.+

ನಾನು ಹೇಳಿದ ಒಂದೊಂದು ಮಾತೂ ಸತ್ಯ, ಬೇಕಾದ್ರೆ ಆಣೆ* ಮಾಡ್ತೀನಿ.

ಸರ್ವಶಕ್ತ ನನಗೆ ಉತ್ತರ ಕೊಡ್ಲಿ!+

ನನ್ನ ಮೇಲೆ ಆರೋಪ ಹಾಕಿದವನು ನನ್ನ ತಪ್ಪುಗಳನ್ನ ಬರೆದು ಕೊಟ್ರೆ ಚೆನ್ನಾಗಿತ್ತು!

36 ನಾನದನ್ನ ನನ್ನ ಹೆಗಲ ಮೇಲೆ ಹೊತ್ತುಕೊಳ್ತೀನಿ,

ನನ್ನ ತಲೆ ಮೇಲೆ ಕಿರೀಟದ ತರ ಇಟ್ಕೊಳ್ತೀನಿ.

37 ನಾನಿಟ್ಟ ಪ್ರತಿಯೊಂದು ಹೆಜ್ಜೆ ಬಗ್ಗೆ ಆತನಿಗೆ ಲೆಕ್ಕ ಕೊಡ್ತೀನಿ,

ಪ್ರಭು ತರ ಧೈರ್ಯವಾಗಿ ಆತನ ಹತ್ರ ಹೋಗ್ತೀನಿ.

38 ನನ್ನ ಜಮೀನು ನನ್ನ ಮೇಲೆ ದೂರು ಹೇಳ್ತಾ?

ನೇಗಿಲ ಸಾಲುಗಳು ಒಟ್ಟೊಟ್ಟಿಗೆ ಕಣ್ಣೀರಿಡ್ತಾ?

39 ಹೊಲದ ಮಾಲೀಕನಿಗೆ ಹಣಕೊಡದೆ ಅವನ ಬೆಳೆಯನ್ನ ತಿಂದ್ನಾ?+

ಅಥವಾ ಬೇರೆಯವ್ರಿಂದ ಹೊಲ ಕಿತ್ಕೊಂಡ್ನಾ?+

40 ಒಂದುವೇಳೆ ನಾನು ಹಾಗೆ ಮಾಡಿದ್ರೆ

ನನ್ನ ಹೊಲದಲ್ಲಿ ಗೋದಿಗೆ ಬದಲಾಗಿ ಮುಳ್ಳುಗಿಡ ಬೆಳೀಲಿ,

ಬಾರ್ಲಿ* ಬದ್ಲು ಕೆಟ್ಟ ವಾಸನೆ ಇರೋ ಕಳೆಗಳು ಬೆಳೀಲಿ.”

ಇಲ್ಲಿಗೆ ಯೋಬನ ಮಾತು ಮುಗಿತು.

32 ಯೋಬ ತಾನು ನೀತಿವಂತ ಅಂತ ದೃಢವಾಗಿ ನಂಬಿರೋದನ್ನ*+ ಆ ಮೂರು ಗಂಡಸರು ನೋಡಿ ಮುಂದಕ್ಕೆ ಏನೂ ಮಾತಾಡಲಿಲ್ಲ. 2 ಆದ್ರೆ ಬರಕೇಲನ ಮಗ ಎಲೀಹುಗೆ ಯೋಬನ ಮೇಲೆ ತುಂಬ ಕೋಪ ಬಂತು. ಎಲೀಹು ಬೂಜ್‌+ ಕುಲದ ರಾಮ್‌ ಮನೆತನಕ್ಕೆ ಸೇರಿದವನು. ದೇವರು ಮಾಡೋದೆಲ್ಲ ಸರಿ ಅಂತ ಸಾಬೀತು ಮಾಡೋ ಬದ್ಲು ಯೋಬ ತಾನೇ ಸರಿ ಅಂತ ಸಮರ್ಥಿಸ್ತಾ ಇದ್ದದನ್ನ ನೋಡಿ ಎಲೀಹುಗೆ ಕೋಪ ಬಂತು.+ 3 ಯೋಬನ ಮೂವರು ಸ್ನೇಹಿತರ ಮೇಲೆ ಕೂಡ ಅವನಿಗೆ ತುಂಬ ಕೋಪ ಬಂತು. ಯಾಕಂದ್ರೆ ಅವರು ಯೋಬನಿಗೆ ಸರಿಯಾದ ಉತ್ತರ ಕೊಡೋದನ್ನ ಬಿಟ್ಟು ದೇವರು ಕೆಟ್ಟವನು ಅಂತ ಹೇಳ್ತಾ ಇದ್ರು.+ 4 ಅವ್ರೆಲ್ಲ ಮಾತಾಡಿ ಮುಗಿಸೋ ತನಕ ಎಲೀಹು ಕಾಯ್ತಾ ಇದ್ದ. ಮಧ್ಯ ಬಾಯಿ ಹಾಕಿ ಯೋಬನ ಹತ್ರ ಮಾತಾಡಲಿಲ್ಲ, ಯಾಕಂದ್ರೆ ಅವ್ರೆಲ್ಲ ಅವನಿಗಿಂತ ವಯಸ್ಸಲ್ಲಿ ದೊಡ್ಡವರು.+ 5 ಯೋಬನಿಗೆ ಇನ್ನೂ ಏನು ಉತ್ತರ ಕೊಡಬೇಕಂತ ಆ ಮೂವರಿಗೆ ತಲೆ ಓಡದ ಕಾರಣ ಎಲೀಹುವಿನ ಕೋಪ ನೆತ್ತಿಗೇರಿತು. 6 ಹಾಗಾಗಿ ಬೂಜ್‌ ಕುಲದ ಬರಕೇಲನ ಮಗ ಎಲೀಹು ಮಾತಾಡೋಕೆ ಶುರುಮಾಡಿದ. ಅವನು ಹೀಗಂದ:

“ನೀವೆಲ್ಲ ವಯಸ್ಸಲ್ಲಿ ನನಗಿಂತ ದೊಡ್ಡವರು,+

ನಾನು ಚಿಕ್ಕವನು.

ನಿಮ್ಮ ಮೇಲಿನ ಗೌರವದಿಂದ ನಾನು ಮಧ್ಯ ಬಾಯಿ ಹಾಕಲಿಲ್ಲ,+

ನನಗೆ ಗೊತ್ತಿರೋದನ್ನ ಹೇಳ್ದೆ ಸುಮ್ಮನಿದ್ದೆ.

 7 ‘ದೊಡ್ಡವರು ಮಾತಾಡ್ಲಿ,

ವಯಸ್ಸಾದವ್ರಿಗೆ ಬುದ್ಧಿ ಇರುತ್ತೆ, ಅವರು ಹೇಳಲಿ’ ಅಂತ ನೆನಸಿದೆ.

 8 ಆದ್ರೆ ದೇವರ ಪವಿತ್ರಶಕ್ತಿನೇ, ಸರ್ವಶಕ್ತನ ಉಸಿರೇ

ಜನ್ರಿಗೆ ತಿಳುವಳಿಕೆ ಕೊಡೋದು.+

 9 ದೊಡ್ಡವ್ರಿಗೆ ಎಲ್ಲ ಗೊತ್ತಿರಬೇಕು ಅಂತಿಲ್ಲ,

ಸರಿ ಯಾವುದು ಅಂತ ಅರ್ಥ ಮಾಡ್ಕೊಳ್ಳೋರು ವಯಸ್ಸಾದವರು ಮಾತ್ರ ಅಲ್ಲ.+

10 ಹಾಗಾಗಿ ನಾನು ಹೇಳೋದನ್ನ ಕೇಳಿಸ್ಕೊ,

ನನಗೆ ಗೊತ್ತಿರೋದನ್ನ ನಾನೂ ಹೇಳ್ತೀನಿ.

11 ನಿಮ್ಮ ಮಾತುಗಳನ್ನ ಕೇಳಿಸ್ಕೊಳ್ಳೋಕೆ ಕಾಯ್ತಾ ಇದ್ದೆ,

ನಿಮ್ಮ ವಾದಗಳನ್ನೂ ಕೇಳಿಸ್ಕೊಂಡೆ,+

ಮುಂದೇನು ಹೇಳಬೇಕಂತ ನೀವು ಯೋಚ್ನೆ ಮಾಡ್ತಾ ಇದ್ದಾಗ್ಲೂ+ ಕಾಯ್ತಾ ಇದ್ದೆ.

12 ನೀವು ಹೇಳಿದ ಮಾತನ್ನೆಲ್ಲ ಗಮನಕೊಟ್ಟು ಕೇಳ್ತಿದ್ದೆ,

ಆದ್ರೆ ನಿಮಗೆ ಯಾರಿಗೂ ಯೋಬನನ್ನ ತಪ್ಪು ಅಂತ ಸಾಬೀತು ಮಾಡಕ್ಕಾಗಲಿಲ್ಲ,

ಅವನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಕ್ಕಾಗಲಿಲ್ಲ.

13 ಹಾಗಾಗಿ ನೀವೇ ತುಂಬ ಜಾಣರು ಅಂತ ನೆನಸಬೇಡಿ,

‘ಮನುಷ್ಯನಲ್ಲ ದೇವರೇ ಅವನನ್ನ ಬೈತಿದ್ದಾನೆ,’ ಅಂತ ಹೇಳಬೇಡಿ.

14 ಯೋಬ ನನ್ನ ವಿರುದ್ಧ ಏನೂ ಹೇಳಲಿಲ್ಲ,

ಹಾಗಾಗಿ ನೀವು ವಾದ ಮಾಡಿದ ತರ ನಾನು ಮಾಡಲ್ಲ.

15 ಅವರು ಗಲಿಬಿಲಿ ಆಗಿಬಿಟ್ಟಿದ್ದಾರೆ, ಏನು ಉತ್ತರ ಕೊಡಬೇಕಂತಾನೇ ಗೊತ್ತಾಗ್ತಿಲ್ಲ,

ಹೇಳೋಕೆ ಅವ್ರ ಹತ್ರ ಏನೂ ಉಳಿದಿಲ್ಲ.

16 ನಾನು ಕಾಯ್ತಾ ಇದ್ದೆ, ಆದ್ರೆ ಅವರು ಏನೂ ಹೇಳೋ ಹಾಗೆ ಕಾಣಿಸ್ತಿಲ್ಲ,

ಸುಮ್ಮನೆ ನಿಂತ್ಕೊಂಡಿದ್ದಾರೆ, ತುಟಿಕ್‌-ಪಿಟಿಕ್‌ ಅಂತಿಲ್ಲ.

17 ಹಾಗಾಗಿ ಈಗ ನಾನು ಮಾತಾಡ್ತೀನಿ,

ಗೊತ್ತಿರೋದನ್ನ ನಾನೂ ಹೇಳ್ತೀನಿ,

18 ಎಷ್ಟೋ ವಿಷ್ಯಗಳನ್ನ ಹೇಳೋಕೆ ನನ್ನ ಮನಸ್ಸು ತುಡಿತಿದೆ,

ಮಾತಾಡೋಕೆ ಪವಿತ್ರಶಕ್ತಿ ನನಗೆ ಒತ್ತಾಯ ಮಾಡ್ತಿದೆ.

19 ದ್ರಾಕ್ಷಾಮದ್ಯ ತುಂಬಿ ಇನ್ನೇನು ಒಡೆದು ಹೋಗೋ

ಚರ್ಮದ ಹೊಸ ಬುದ್ದಲಿ+ ತರ ನಾನಿದ್ದೀನಿ,

ನನ್ನ ಮನಸ್ಸಲ್ಲಿ ಇರೋದನ್ನ ಹೇಳದೇ ಇರೋಕೆ ಆಗ್ತಿಲ್ಲ.

20 ಈಗ ಮಾತಾಡಿದ್ರೆ ಮಾತ್ರ ನನಗೆ ನೆಮ್ಮದಿ!

ಮನಸ್ಸಲ್ಲಿ ಇರೋದನ್ನೆಲ್ಲ* ಹೇಳಿಬಿಡ್ತೀನಿ.

21 ನಾನು ಯಾರ ಪಕ್ಷಾನೂ ವಹಿಸಲ್ಲ,+

ನಾನು ಯಾರನ್ನೂ ಸುಮ್‌ಸುಮ್ನೆ ಹೊಗಳಲ್ಲ,*

22 ಯಾಕಂದ್ರೆ ಆ ರೀತಿ ಮಾಡೋಕೆ ನನಗೆ ಗೊತ್ತೇ ಇಲ್ಲ,

ಹಾಗೆ ಮಾಡಿದ್ರೆ ನನ್ನನ್ನ ಸೃಷ್ಟಿ ಮಾಡಿದವನು ನನ್ನನ್ನ ಒಂದೇ ಏಟಿಗೆ ನಾಶಮಾಡಲ್ವಾ?

33 ಯೋಬ, ಈಗ ನಾನು ಹೇಳೋದನ್ನ ದಯವಿಟ್ಟು ಕೇಳು,

ನನ್ನ ಒಂದೊಂದು ಮಾತನ್ನೂ ಕೇಳಿಸ್ಕೊ.

 2 ನಾನು ಹೇಳಬೇಕಂತ ಇರೋ ವಿಷ್ಯ ನಾಲಿಗೆ ತುದಿ ತನಕ ಬಂದಿದೆ,

ನಾನೀಗ ಮಾತಾಡ್ಲೇಬೇಕು, ದಯವಿಟ್ಟು ಕೇಳು.

 3 ಮನಸ್ಸಲ್ಲಿ ಕೆಟ್ಟ ಉದ್ದೇಶ ಇಟ್ಕೊಂಡು ಮಾತಾಡಲ್ಲ,+

ಗೊತ್ತಿರೋದನ್ನ ಮುಚ್ಚುಮರೆ ಇಲ್ಲದೆ ಹೇಳ್ತೀನಿ.

 4 ದೇವರು ತನ್ನ ಪವಿತ್ರಶಕ್ತಿಯಿಂದ ನನ್ನನ್ನ ಸೃಷ್ಟಿ ಮಾಡಿದನು,+

ಸರ್ವಶಕ್ತ ತನ್ನ ಉಸಿರಿಂದ ನನಗೆ ಜೀವಕೊಟ್ಟನು.+

 5 ನಿನ್ನಿಂದಾದ್ರೆ ಉತ್ತರ ಕೊಡು,

ನಿನ್ನ ವಾದಗಳನ್ನ ನನ್ನ ಮುಂದೆ ಮಂಡಿಸೋಕೆ ಸಿದ್ಧನಾಗು.

 6 ನೋಡು, ಸತ್ಯ ದೇವರ ಮುಂದೆ ನೀನು ಹೇಗೋ ನಾನೂ ಹಾಗೆ,

ನನ್ನನ್ನ ಕೂಡ ಮಣ್ಣಿಂದಾನೇ ಮಾಡಿದ್ದಾನೆ.+

 7 ಹಾಗಾಗಿ ನನಗೆ ಹೆದರಬೇಡ,

ನಾನು ನನ್ನ ಮಾತಿಂದ ನಿನ್ನನ್ನ ತುಳಿಯಲ್ಲ.

 8 ನೀನು ಹೇಳಿದ್ದನ್ನೆಲ್ಲ ನಾನು ಕೇಳಿಸ್ಕೊಂಡೆ,

ನೀನು ಮತ್ತೆ ಮತ್ತೆ,

 9 ‘ನಾನೇನೂ ಅಪರಾಧ ಮಾಡಲಿಲ್ಲ, ಏನೂ ತಪ್ಪು ಮಾಡಲಿಲ್ಲ,+

ಯಾವ ಪಾಪವನ್ನೂ ಮಾಡಲಿಲ್ಲ, ನನ್ನಲ್ಲಿ ಒಂಚೂರೂ ತಪ್ಪಿಲ್ಲ.+

10 ಆದ್ರೂ ದೇವರು ನನ್ನ ವಿರುದ್ಧ ನಿಂತಿದ್ದಾನೆ,

ಆತನು ನನ್ನನ್ನ ಶತ್ರು ತರ ನೋಡ್ತಾನೆ.+

11 ಆತನು ನನ್ನ ಕಾಲಿಗೆ ಕೋಳ* ಹಾಕಿದ್ದಾನೆ,

ನನ್ನ ಒಂದೊಂದು ಕೆಲಸವನ್ನೂ ಸೂಕ್ಷ್ಮವಾಗಿ ನೋಡ್ತಾ ಇದ್ದಾನೆ’ ಅಂತ ಹೇಳಿದೆ.+

12 ನೀನು ಹಾಗೆ ಹೇಳಿದ್ದು ಸರಿಯಲ್ಲ, ನಿಜ ಏನಂತ ನಾನು ಹೇಳ್ತೀನಿ:

ಇವತ್ತಿದ್ದು ನಾಳೆ ಸತ್ತು ಹೋಗೋ ಮನುಷ್ಯನಿಗಿಂತ ದೇವರು ಎಷ್ಟೋ ದೊಡ್ಡವನು.+

13 ಅಂಥ ದೇವ್ರನ್ನ ನೀನ್ಯಾಕೆ ದೂರುತ್ತಾ ಇದ್ದೀಯ?+

ನೀನು ಹೇಳಿದ್ದಕ್ಕೆಲ್ಲ ದೇವರು ಉತ್ತರ ಕೊಟ್ಟಿಲ್ಲ ಅಂತಾನಾ?+

14 ನಿಜ ಏನಂದ್ರೆ ದೇವರು ಪದೇ ಪದೇ* ಹೇಳ್ತಾನೆ,

ಆದ್ರೆ ಅದನ್ನ ಯಾರೂ ಕಿವಿಗೆ ಹಾಕೊಳ್ಳಲ್ಲ,

15 ಜನ್ರು ಹಾಸಿಗೆಯಲ್ಲಿ ಮಲಗಿರುವಾಗ, ಗಾಢ ನಿದ್ದೆಯಲ್ಲಿರುವಾಗ

ಕನಸಿನ ಮೂಲಕ, ರಾತ್ರಿ ದರ್ಶನದ+ ಮೂಲಕ ಮಾತಾಡ್ತಾನೆ.

16 ಅವ್ರ ಕಿವಿಗಳನ್ನ ತೆರಿತಾನೆ,+

ಅವ್ರ ಮನಸ್ಸಲ್ಲಿ ಅಚ್ಚೊತ್ತೋ ಹಾಗೆ ಕಲಿಸ್ತಾನೆ.

17 ದೇವರು ಹೀಗೆ ಮಾಡೋದು ಮನುಷ್ಯ ಕೆಟ್ಟದ್ದನ್ನ ಬಿಡಬೇಕಂತಾನೇ,+

ಅಹಂಕಾರ ಬಿಡಬೇಕಂತಾನೇ.+

18 ಹೀಗೆ ಆತನು ಮನುಷ್ಯನ ಜೀವ* ಸಮಾಧಿ ಸೇರದ ಹಾಗೇ ಕಾಪಾಡ್ತಾನೆ,+

ಕತ್ತಿಯಿಂದ ಸಾಯದ ಹಾಗೆ ಕಾಪಾಡ್ತಾನೆ.

19 ಒಬ್ಬ ವ್ಯಕ್ತಿಗೆ ಕಷ್ಟಗಳು ಬರುವಾಗ,

ಹಾಸಿಗೆ ಹಿಡಿದು ಮೂಳೆ ನೋವಿಂದ ನರಳುವಾಗ ಸಹ ತಪ್ಪಿನ ಅರಿವಾಗುತ್ತೆ.

20 ಊಟ ನೋಡಿದ ಕೂಡ್ಲೇ ವಾಕರಿಕೆ ಬರುತ್ತೆ,

ಮೃಷ್ಟಾನ್ನ ಇದ್ರೂ ಊಟ ಸೇರಲ್ಲ.+

21 ಅವನು ಪೂರ್ತಿ ಸೊರಗಿಹೋಗಿ,

ಒಳಗಿರೋ ಮೂಳೆಗಳೆಲ್ಲ ಕಾಣುತ್ತೆ.

22 ಅವನು ಇವತ್ತೋ ನಾಳೆನೋ ಸಾಯೋ ಹಾಗೆ ಆಗಿರ್ತಾನೆ,

ಅವನ ಪ್ರಾಣ ತೆಗಿಯೋಕೆ ಕಾಯ್ತಿರೋ ಜನ್ರ ಕೈಯಲ್ಲೇ ಸಿಕ್ಕಿಹಾಕೊಳ್ತಾನೆ.

23 ಅವನಿಗೋಸ್ಕರ ಒಬ್ಬ ದೂತ ಇದ್ರೆ,

ಸಾವಿರ ದೇವದೂತರಲ್ಲಿ ಒಬ್ಬ ಅವನ ಬೆಂಬಲಕ್ಕೆ ಬಂದು

ಸರಿಯಾದ ದಾರಿ ಯಾವುದು ಅಂತ ಅವನಿಗೆ ಹೇಳಿದ್ರೆ,

24 ಆಗ ದೇವರು ಅವನಿಗೆ ದಯೆ ತೋರಿಸಿ ಹೀಗೆ ಹೇಳ್ತಾನೆ,

‘ಸಮಾಧಿ ಸೇರದ ಹಾಗೆ ಅವನನ್ನ ಕಾಪಾಡು,+

ಯಾಕಂದ್ರೆ ನನಗೆ ಅವನ ಬಿಡುಗಡೆ ಬೆಲೆ ಸಿಕ್ಕಿದೆ!+

25 ಅವನ ದೇಹ ಯೌವನದಲ್ಲಿ ಇದ್ದದ್ದಕ್ಕಿಂತ ಹೆಚ್ಚು ಮೃದು ಆಗ್ಲಿ,*+

ಯೌವನದಲ್ಲಿ ಅವನಿಗಿದ್ದ ಬಲ, ಚೈತನ್ಯ ಮತ್ತೆ ಸಿಗ್ಲಿ’+ ಅಂತಾನೆ.

26 ಆಗ ಅವನು ದೇವರ ಹತ್ರ ಬೇಡ್ಕೊಳ್ತಾನೆ,+ ದೇವರು ಅವನನ್ನ ಮೆಚ್ಚುತ್ತಾನೆ,

ಅವನು ಖುಷಿಯಿಂದ ದೇವ್ರ ಮುಖ ನೋಡ್ತಾನೆ,

ಸಾಯೋ ಆ ಮನುಷ್ಯನನ್ನ ದೇವರು ಮತ್ತೆ ಸರಿ ದಾರಿಗೆ ಕರ್ಕೊಂಡು ಬರ್ತಾನೆ.

27 ಆ ವ್ಯಕ್ತಿ ಬೇರೆಯವ್ರಿಗೆ ‘ನಾನು ಪಾಪ ಮಾಡಿದೆ,+

ನಾನು ಸರಿಯಾದದ್ದನ್ನ ಮಾಡಿಲ್ಲ,

ಆದ್ರೂ ನನಗೆ ಸಿಗಬೇಕಾದ ಶಿಕ್ಷೆ ಸಿಗಲಿಲ್ಲ.*

28 ನನ್ನ ಜೀವ* ಸಮಾಧಿ ಸೇರದ ಹಾಗೆ ಕಾಪಾಡಿದನು,+

ಇನ್ನು ಮುಂದೆ ನನ್ನ ಬಾಳಲ್ಲಿ ಬೆಳಕಿರುತ್ತೆ’ ಅಂತ ಹೇಳ್ತಾನೆ.

29 ನೋಡು, ದೇವರು ಇದನ್ನೆಲ್ಲ

ಮನುಷ್ಯನಿಗಾಗಿ ಪದೇ ಪದೇ* ಮಾಡ್ತಾನೆ,

30 ಯಾಕಂದ್ರೆ ಅವನನ್ನ ಸಮಾಧಿಯಿಂದ ಬಿಡಿಸಿ,

ಅವನ ಮೇಲೆ ಜೀವದ ಬೆಳಕು ಬೀಳೋ ತರ ಮಾಡೋದೇ ದೇವ್ರ ಇಷ್ಟ.+

31 ಯೋಬ, ಗಮನಕೊಡು, ನಾನು ಹೇಳೋದು ಕೇಳು,

ನನಗೆ ಮಾತಾಡೋಕೆ ಇನ್ನೂ ಇದೆ, ಕೇಳು.

32 ನಿನಗೇನಾದ್ರೂ ಹೇಳೋಕೆ ಇದ್ರೆ,

ಮುಜುಗರಪಡಬೇಡ, ಮಾತಾಡು,

ನೀನು ಸರಿ ಅಂತ ಸಾಬೀತು ಮಾಡೋದೇ ನನ್ನಾಸೆ.

33 ನಿನಗೆ ಹೇಳೋಕೆ ಏನೂ ಇಲ್ಲದಿದ್ರೆ,

ಮೌನವಾಗಿ ನಾನು ಹೇಳೋದನ್ನ ಕೇಳು.

ಬುದ್ಧಿವಂತರು ಹೇಗೆ ನಡ್ಕೊಳ್ತಾರೆ ಅಂತ ಹೇಳ್ಕೊಡ್ತೀನಿ.”

34 ಎಲೀಹು ಮತ್ತೆ ಹಿಗಂದ:

 2 “ವಿವೇಕಿಗಳೇ, ನನ್ನ ಮಾತು ಕೇಳಿ,

ಜ್ಞಾನಿಗಳೇ, ಗಮನಕೊಡಿ.

 3 ನಾಲಿಗೆ ಊಟದ ರುಚಿ ನೋಡೋ ತರ

ಕಿವಿನೂ ಮಾತುಗಳನ್ನ ಕೇಳಿಸ್ಕೊಂಡಾಗ ಯಾವುದು ಸರಿ ಯಾವುದು ತಪ್ಪು ಅಂತ ಪರೀಕ್ಷಿಸುತ್ತೆ.

 4 ಹಾಗಾಗಿ ಬನ್ನಿ, ಯಾವುದು ಸರಿ ಅಂತ ನಾವು ತೀರ್ಮಾನ ಮಾಡೋಣ,

ಯಾವುದು ಒಳ್ಳೇದು ಅಂತ ನಾವೆಲ್ಲ ಸೇರಿ ನಿರ್ಧಾರ ಮಾಡೋಣ.

 5 ಯಾಕಂದ್ರೆ ಯೋಬ ತನ್ನ ಬಗ್ಗೆ ‘ನಾನು ತಪ್ಪು ಮಾಡಿಲ್ಲ,+

ಆದ್ರೂ ದೇವರು ನನಗೆ ಅನ್ಯಾಯ ಮಾಡಿದ್ದಾನೆ.+

 6 ನ್ಯಾಯವಾದ ತೀರ್ಪು ಸಿಗಬೇಕು ಅಂತ ನಾನು ಸುಳ್ಳು ಹೇಳ್ತಿಲ್ಲ,

ನಾನು ಯಾವ ಅಪರಾಧವನ್ನೂ ಮಾಡಿಲ್ಲ,

ಆದ್ರೂ ನನ್ನ ಗಾಯ ವಾಸಿ ಆಗ್ತಿಲ್ಲ’ ಅಂತ ಹೇಳಿದ್ದಾನೆ.+

 7 ಯೋಬನ ತರ ಯಾರಿದ್ದಾರೆ?

ಅವನು ಅವಮಾನದ ಮಾತುಗಳನ್ನ ನೀರಿನ ಹಾಗೆ ಕುಡಿತಾನೆ.

 8 ಅವನು ತಪ್ಪು ಮಾಡೋರ ಜೊತೆ ಇದ್ದಾನೆ,

ಕೆಟ್ಟವ್ರ ಸಹವಾಸ ಮಾಡ್ತಾನೆ.+

 9 ಹಾಗಾಗಿ ಅವನು ‘ದೇವ್ರನ್ನ ಮೆಚ್ಚಿಸೋಕೆ ಮನುಷ್ಯ ಎಷ್ಟೇ ಪ್ರಯತ್ನ ಮಾಡಿದ್ರೂ

ಏನೂ ಪ್ರಯೋಜನ ಇಲ್ಲ’ ಅಂದಿದ್ದಾನೆ.+

10 ತಿಳುವಳಿಕೆ ಇರುವವರೇ ಕೇಳಿಸ್ಕೊಳ್ಳಿ,

ಸತ್ಯ ದೇವರು ಕೆಟ್ಟದ್ದನ್ನ ಮಾಡೋದೇ ಇಲ್ಲ,+

ಸರ್ವಶಕ್ತ ದೇವರು ತಪ್ಪನ್ನ ಮಾಡೋಕೆ ಸಾಧ್ಯಾನೇ ಇಲ್ಲ.+

11 ಮನುಷ್ಯ ತಾನೇನು ಮಾಡ್ತಾನೋ ಅದ್ರ ಪರಿಣಾಮ ಅನುಭವಿಸೋ ತರ ದೇವರು ಮಾಡ್ತಾನೆ,+

ಅವನ ನಡತೆಯ ಪರಿಣಾಮವನ್ನ ಅನುಭವಿಸ್ಲಿ ಅಂತ ಬಿಡ್ತಾನೆ.

12 ದೇವರು ಕೆಟ್ಟದ್ದನ್ನ ಮಾಡೋದೇ ಇಲ್ಲ ಅನ್ನೋದು ಸತ್ಯ!+

ಸರ್ವಶಕ್ತ ಅನ್ಯಾಯ ಮಾಡಲ್ಲ ಅನ್ನೋದು ನೂರಕ್ಕೆ ನೂರು ಸತ್ಯ!+

13 ಭೂಮಿಯನ್ನ ನೋಡ್ಕೊಳ್ಳೋ ಜವಾಬ್ದಾರಿ ಆತನಿಗೆ ಯಾರು ಕೊಟ್ರು?

ಆತನಿಗೆ ಇಡೀ ಲೋಕದ ಮೇಲೆ ಯಾರು ಅಧಿಕಾರ ಕೊಟ್ರು?

14 ದೇವರು ಮನುಷ್ಯರ ಮೇಲೆ ದ್ವೇಷ ಕಟ್ಕೊಂಡು

ಅವ್ರಿಂದ ಜೀವ,* ಉಸಿರನ್ನ ವಾಪಸ್‌ ತಗೊಂಡ್ರೆ+

15 ಎಲ್ಲ ಮನುಷ್ಯರು ಒಟ್ಟಿಗೆ ನಾಶ ಆಗ್ತಾರೆ,

ಮತ್ತೆ ಮಣ್ಣಲ್ಲಿ ಮಣ್ಣಾಗಿ ಹೋಗ್ತಾರೆ.+

16 ನಿನಗೆ ತಿಳುವಳಿಕೆ ಇದ್ರೆ ನನ್ನ ಮಾತಿಗೆ ಗಮನಕೊಡು,

ನಾನು ಹೇಳೋದನ್ನ ಚೆನ್ನಾಗಿ ಕೇಳು.

17 ನ್ಯಾಯವನ್ನ ದ್ವೇಷಿಸುವವನಿಗೆ ಆಳ್ವಿಕೆ ನಡೆಸೋ ಹಕ್ಕಿದ್ಯಾ?

ನೀತಿವಂತನಾಗಿರೋ ಒಬ್ಬ ದೊಡ್ಡ ಅಧಿಕಾರಿ ಮೇಲೆ ತಪ್ಪು ಹೊರಿಸ್ತೀಯಾ?

18 ರಾಜನಿಗೆ ‘ನೀನು ಕೆಲಸಕ್ಕೆ ಬಾರದವನು’ ಅಂತ ಹೇಳ್ತೀಯಾ?

ಗಣ್ಯ ವ್ಯಕ್ತಿಗಳ ಹತ್ರ ಹೋಗಿ ‘ನೀವು ಕೆಟ್ಟವರು’ ಅಂತೀಯಾ?+

19 ಇಲ್ಲ ಅಂದ್ಮೇಲೆ ದೇವ್ರ ಮೇಲೆ ಹೇಗೆ ಆರೋಪ ಹಾಕ್ತೀಯ?

ಆತನು ಬಡವರು ಶ್ರೀಮಂತರು ಅಂತ ಭೇದಭಾವ ಮಾಡಲ್ಲ,

ಒಬ್ಬ ವ್ಯಕ್ತಿ ದೊಡ್ಡ ಸ್ಥಾನದಲ್ಲಿ ಇದ್ದಾನೆ ಅಂತ ಅವನ ಪಕ್ಷ ಹಿಡಿಯಲ್ಲ.+

ಯಾಕಂದ್ರೆ ಅವ್ರನ್ನೆಲ್ಲ ಸೃಷ್ಟಿ ಮಾಡಿದ್ದು ಆತನೇ ತಾನೇ?+

20 ಜನ್ರು ಮಧ್ಯರಾತ್ರಿಯಲ್ಲಿ+ ಇದ್ದಕ್ಕಿದ್ದ ಹಾಗೇ ಸತ್ತು ಹೋಗ್ತಾರೆ,+

ಗಡಗಡ ನಡುಗಿ ಪ್ರಾಣ ಬಿಡ್ತಾರೆ,

ದೊಡ್ಡ ದೊಡ್ಡ ಸ್ಥಾನದಲ್ಲಿ ಇರೋರು ಕೂಡ ಸಮಾಧಿ ಸೇರ್ತಾರೆ,

ಆದ್ರೆ ಮನುಷ್ಯರ ಕೈಯಿಂದಲ್ಲ.+

21 ಯಾಕಂದ್ರೆ ದೇವ್ರ ಕಣ್ಣುಗಳು ಮನುಷ್ಯರ ನಡತೆಯನ್ನ ನೋಡ್ತಾ ಇರುತ್ತೆ,+

ಮನುಷ್ಯರು ಮಾಡೋದನ್ನೆಲ್ಲ ಆತನು ನೋಡ್ತಾನೆ.

22 ತಪ್ಪು ಮಾಡಿದವರು ಎಲ್ಲಿನೂ ಬಚ್ಚಿಟ್ಟುಕೊಳ್ಳೋಕೆ ಆಗಲ್ಲ.

ಎಷ್ಟೇ ಕತ್ತಲೆ ಇದ್ರೂ, ಕಾರ್ಗತ್ತಲೆ ಇದ್ರೂ ಅವ್ರಿಗೆ ಅಡಗಿಕೊಳ್ಳೋಕೆ ಆಗಲ್ಲ.+

23 ದೇವರು ಯಾವ ಮನುಷ್ಯನಿಗೂ

ಈ ದಿನಾನೇ ತೀರ್ಪು ಕೊಡ್ತೀನಿ ಅಂತ ಹೇಳೋ ಅಗತ್ಯ ಇಲ್ಲ.

24 ಅಧಿಕಾರ ಇರುವವರನ್ನ ನಾಶಮಾಡೋಕೆ ವಿಚಾರಣೆ ಮಾಡೋ ಅಗತ್ಯ ಆತನಿಗಿಲ್ಲ,

ಆತನು ಅವ್ರನ್ನ ತೆಗೆದು ಆ ಜಾಗದಲ್ಲಿ ಬೇರೆಯವ್ರನ್ನ ಕೂರಿಸ್ತಾನೆ.+

25 ಯಾಕಂದ್ರೆ ಅವರು ಏನು ಮಾಡ್ತಿದ್ದಾರೆ ಅಂತ ಆತನಿಗೆ ಗೊತ್ತು,+

ಅವ್ರನ್ನ ರಾತ್ರೋರಾತ್ರಿನೇ ಅಧಿಕಾರದಿಂದ ಬೀಳಿಸ್ತಾನೆ, ಅವರು ನಾಶ ಆಗ್ತಾರೆ.+

26 ಎಲ್ಲರ ಮುಂದೆನೇ

ಅವರು ಮಾಡಿದ ಕೆಟ್ಟದ್ದಕ್ಕೆ ಸರಿಯಾದ ಶಿಕ್ಷೆ ಕೊಡ್ತಾನೆ.+

27 ಯಾಕಂದ್ರೆ ಅವರು ದೇವರು ಹೇಳಿದ ಹಾಗೆ ಕೇಳಲಿಲ್ಲ,+

ಆತನು ತೋರಿಸಿದ ದಾರಿಯಲ್ಲಿ ನಡಿಯದೆ ಸ್ವಲ್ಪನೂ ಗೌರವ ಕೊಟ್ಟಿಲ್ಲ,+

ಅದಕ್ಕೇ ಅವ್ರಿಗೆ ಅಂಥ ಗತಿ ಬರುತ್ತೆ.

28 ಬಡವ್ರಿಗೆ ಎಷ್ಟು ಕಷ್ಟ ಕೊಡ್ತಾರೆ ಅಂದ್ರೆ ಅವರು ದೇವರ ಹತ್ರ ಹೇಳ್ಕೊಂಡು ಅಳ್ತಾರೆ,

ಆ ಪಾಪದ ಜನ್ರ ಕೂಗನ್ನ ದೇವರು ಕೇಳ್ತಾನೆ.+

29 ದೇವರು ಸುಮ್ಮನಿದ್ರೆ ಅದು ತಪ್ಪು ಅಂತ ಯಾರಿಂದಾದ್ರೂ ಹೇಳಕ್ಕಾಗುತ್ತಾ?

ಆತನು ತನ್ನ ಮುಖ ಮುಚ್ಕೊಂಡ್ರೆ ಯಾರಿಂದಾದ್ರೂ ನೋಡಕ್ಕಾಗುತ್ತಾ?

ಆತನು ಒಂದು ದೇಶಕ್ಕಾದ್ರೂ, ಒಬ್ಬ ಮನುಷ್ಯನಿಗಾದ್ರೂ ಹೀಗೇ ಮಾಡ್ತಾನೆ,

30 ದೇವ್ರನ್ನ ಬಿಟ್ಟುಬಿಟ್ಟವನು* ಆಳಬಾರದು,+

ಅವನು ಜನ್ರಿಗೆ ಉರ್ಲು ಇಡಬಾರದು ಅಂತ ದೇವರು ಹಾಗೆ ಮಾಡ್ತಾನೆ.

31 ಯಾರಾದ್ರೂ ದೇವ್ರಿಗೆ

‘ನಾನು ತಪ್ಪನ್ನೇ ಮಾಡಲಿಲ್ಲ, ಆದ್ರೂ ಶಿಕ್ಷೆ ಸಿಕ್ಕಿದೆ.+

32 ನನಗೆ ಗೊತ್ತಿಲ್ಲದೇ ಇರೋದನ್ನ ಹೇಳು,

ನಾನೇನಾದ್ರೂ ತಪ್ಪು ಮಾಡಿದ್ರೆ ಹೇಳು, ತಿದ್ಕೊಳ್ತೀನಿ’ ಅಂತ ಹೇಳಕ್ಕಾಗುತ್ತಾ?

33 ಆತನು ತೀರ್ಪು ಮಾಡೋ ವಿಧ ನಿನಗಿಷ್ಟ ಆಗಿಲ್ಲಾಂತ

ಆತನು ನಿನ್ನಿಷ್ಟದ ಪ್ರಕಾರ ನಿನಗೆ ಆಗಿರೋ ನಷ್ಟ ತುಂಬಬೇಕಾ?

ದೇವರ ತೀರ್ಪನ್ನ ಸ್ವೀಕರಿಸ್ತೀಯಾ ಬಿಡ್ತೀಯಾ ಅಂತ ನೀನೇ ನಿರ್ಧಾರ ಮಾಡಬೇಕು, ನಾನಲ್ಲ.

ನಿನಗೇ ಎಲ್ಲ ಗೊತ್ತಿದೆ ಅಂದ್ಮೇಲೆ ನೀನೇ ಹೇಳು.

34 ತಿಳುವಳಿಕೆ ಇರೋರು,

ನನ್ನ ಮಾತು ಕೇಳಿಸ್ಕೊಳ್ಳೋ ಬುದ್ಧಿವಂತರು ನನಗೆ,

35 ‘ಯೋಬ ಬುದ್ಧಿಯಿಲ್ಲದೆ ಮಾತಾಡ್ತಾ ಇದ್ದಾನೆ,+

ತಲೆ ಬುಡ ಇಲ್ಲದೆ* ಏನೇನೋ ಮಾತಾಡ್ತಾ ಇದ್ದಾನೆ’ ಅಂತಾರೆ.

36 ಹಾಗಾಗಿ ಯೋಬನನ್ನ ಪೂರ್ತಿಯಾಗಿ ಪರೀಕ್ಷೆ ಮಾಡ್ಲಿ,*

ಯಾಕಂದ್ರೆ ಕೆಟ್ಟವರು ಮಾತಾಡೋ ಹಾಗೆ ಮಾತಾಡ್ತಾನೆ.

37 ಅವನು ಪಾಪ ಮಾಡಿದ್ದು ಮಾತ್ರ ಅಲ್ಲ ದಂಗೆನೂ ಎದ್ದಿದ್ದಾನೆ,+

ನಮ್ಮ ಮುಂದೆ ಚಪ್ಪಾಳೆ ಹೊಡಿತಾ ಗೇಲಿ ಮಾಡ್ತಾ ಇದ್ದಾನೆ,

ಸತ್ಯ ದೇವರ ವಿರುದ್ಧ ಅವನು ತುಂಬ ಮಾತಾಡ್ತಿದ್ದಾನೆ!”+

35 ಎಲೀಹು ಮತ್ತೆ ಹೀಗಂದ:

 2 “ದೇವ್ರಿಗಿಂತ ನೀನೇ ನೀತಿವಂತ ಅಂತ ಹೇಳ್ತಿಯಲ್ಲಾ,

ನೀನೇ ಸರಿ ಅಂತ ನಿನಗೆ ಅಷ್ಟೊಂದು ನಂಬಿಕೆನಾ?+

 3 ‘ನಾನು ನೀತಿವಂತನಾಗಿ ಇರೋದ್ರಿಂದ ನಿನಗೇನು* ಪ್ರಯೋಜನ?

ನಾನು ಪಾಪ ಮಾಡದೆ ಇದ್ದದ್ರಿಂದ ಏನಾದ್ರೂ ಲಾಭ ಆಗಿದ್ಯಾ?’+

ಅಂತ ನೀನು ಕೇಳ್ತಿಯಲ್ಲಾ.

 4 ಇದಕ್ಕೆ ನಾನು ನಿನಗೆ ಉತ್ತರ ಕೊಡ್ತೀನಿ,

ನಿನ್ನ ಸ್ನೇಹಿತರಿಗೂ+ ಉತ್ತರ ಕೊಡ್ತೀನಿ.

 5 ನೀನು ಸ್ವಲ್ಪ ತಲೆಯೆತ್ತಿ ಆಕಾಶ ನೋಡು,

ಎತ್ತರದಲ್ಲಿ ಇರೋ ಮೋಡಗಳನ್ನ ನೋಡು.+

 6 ನೀನು ಪಾಪ ಮಾಡಿದ್ರೆ ದೇವ್ರಿಗೆ ಏನಾದ್ರೂ ನಷ್ಟ ಆಗುತ್ತಾ?+

ನಿನ್ನ ಅಪರಾಧಗಳು ಹೆಚ್ಚಾದ್ರೆ ದೇವ್ರಿಗೆ ಏನಾದ್ರೂ ಕಡಿಮೆ ಆಗುತ್ತಾ?+

 7 ನೀನು ನೀತಿವಂತನಾಗಿದ್ರೆ ಆತನಿಗೆ ನೀನೇನು ಕೊಟ್ಟ ಹಾಗಾಗುತ್ತೆ?

ನೀನು ಒಳ್ಳೆಯವನಾಗಿದ್ರೆ ಆತನಿಗೆ ನಿನ್ನಿಂದ ಏನು ಲಾಭ ಆಗುತ್ತೆ?+

 8 ನೀನು ಕೆಟ್ಟವನಾಗಿದ್ರೆ ಅದ್ರಿಂದ ಕೆಟ್ಟದಾಗೋದು ನಿನ್ನಂಥ ಮನುಷ್ಯರಿಗೆ ಮಾತ್ರ,

ನೀನು ನೀತಿವಂತನಾಗಿದ್ರೆ ಅದ್ರಿಂದ ಒಳ್ಳೇದಾಗೋದು ಮನುಷ್ಯರಿಗೆ ಮಾತ್ರ.

 9 ಜನ್ರು ಕ್ರೂರ ದಬ್ಬಾಳಿಕೆ ಸಹಿಸ್ಕೊಳ್ಳೋಕೆ ಆಗದೆ ದೂರು ಹೇಳ್ತಾರೆ,

ಶಕ್ತಿಶಾಲಿಗಳ ಕ್ರೂರ ಆಡಳಿತದಿಂದ ಮುಕ್ತಿ ಕೊಡಿ ಅಂತ ಬೇಡ್ಕೊಳ್ತಾರೆ.+

10 ಆದ್ರೆ ಒಬ್ರು ಕೂಡ ‘ನನ್ನನ್ನ ಸೃಷ್ಟಿ ಮಾಡಿದ ಮಹಾನ್‌ ದೇವರು ಎಲ್ಲಿ?+

ರಾತ್ರಿ ಗೀತೆಗಳನ್ನ ಹಾಡೋಕೆ ಪ್ರೇರಿಸುವವನು ಎಲ್ಲಿ?’ ಅಂತ ಕೇಳಲ್ಲ.+

11 ಆತನು ಪ್ರಾಣಿಗಳಿಗಿಂತ+ ನಮಗೆ ಹೆಚ್ಚು ವಿಷ್ಯ ಕಲಿಸ್ತಾನೆ,+

ಪಕ್ಷಿಗಳಿಗಿಂತ ನಮ್ಮನ್ನ ಹೆಚ್ಚು ಬುದ್ಧಿವಂತರಾಗಿ ಮಾಡ್ತಾನೆ.

12 ಜನ್ರು ಕೂಗಿಕೊಳ್ತಾರೆ, ಆದ್ರೆ ಆತನು ಉತ್ತರ ಕೊಡಲ್ಲ,+

ಯಾಕಂದ್ರೆ ಅವರು ಅಹಂಕಾರಿಗಳು, ಕೆಟ್ಟವರು.+

13 ಅವರು ಸುಮ್ನೆ ಕೂಗಿದ್ರೆ* ದೇವರು ಕೇಳಿಸ್ಕೊಳ್ಳಲ್ಲ,+

ಸರ್ವಶಕ್ತ ಅದಕ್ಕೆ ಕಿವಿ ಕೊಡೋದೇ ಇಲ್ಲ.

14 ಹೀಗಿದ್ದ ಮೇಲೆ ‘ದೇವರೇನೂ ಮಾಡ್ತಿಲ್ಲ’ ಅಂತ ನೀನು ದೂರಿದ್ರೆ ಉತ್ತರ ಕೊಡ್ತಾನಾ?+

ನಿನ್ನ ದೂರು* ಆತನ ಮುಂದೆನೇ ಇದೆ, ಆತನ ತೀರ್ಪು ಸಿಗೋ ತನಕ ನೀನು ಕಾಯಬೇಕು.+

15 ಯಾಕಂದ್ರೆ ಆತನು ನಿನ್ನ ಮೇಲೆ ಕೋಪ ಮಾಡ್ಕೊಂಡು ಶಿಕ್ಷೆ ಕೊಡಲಿಲ್ಲ,

ನೀನು ಹಿಂದೆಮುಂದೆ ಯೋಚಿಸದೆ ಏನೇನೋ ಮಾತಾಡಿದ್ರೂ ಲೆಕ್ಕಕ್ಕೆ ತಗೊಳ್ಳಲಿಲ್ಲ.+

16 ಯೋಬ, ನೀನು ಸುಮ್ನೆ ಬಾಯಿಗೆ ಬಂದ ಹಾಗೆ ಮಾತಾಡಿದೆ,

ಬುದ್ಧಿಯಿಲ್ಲದೆ ಅತಿಯಾಗಿ ಮಾತಾಡಿದೆ.”+

36 ಎಲೀಹು ಮತ್ತೆ ಹೀಗಂದ:

 2 “ನನಗಿನ್ನೂ ಮಾತಾಡೋಕೆ ಇದೆ, ದಯವಿಟ್ಟು ತಾಳ್ಮೆಯಿಂದ ಕೇಳು,

ದೇವರ ಪರವಾಗಿ ಇನ್ನೂ ಕೆಲವು ವಿಷ್ಯಗಳನ್ನ ಹೇಳಬೇಕು.

 3 ನನಗೆ ಗೊತ್ತಿರೋದನ್ನ ವಿವರಿಸ್ತೀನಿ,

ನನ್ನನ್ನ ಸೃಷ್ಟಿ ಮಾಡಿದವನು ಎಷ್ಟು ನೀತಿವಂತ ಅಂತ ಹೇಳ್ತೀನಿ.+

 4 ನನ್ನ ಮಾತು ನಂಬು, ನಾನು ಸುಳ್ಳು ಹೇಳ್ತಿಲ್ಲ,

ಪರಿಪೂರ್ಣ ಜ್ಞಾನ ಇರೋ ದೇವ್ರಿಂದ+ ನಾನು ಕಲಿತ ವಿಷ್ಯಗಳನ್ನ ಹೇಳ್ತೀನಿ.

 5 ದೇವರು ಬಲಶಾಲಿ,+ ಆತನು ಯಾರನ್ನೂ ಕೈಬಿಡಲ್ಲ,

ಆತನ ತಿಳುವಳಿಕೆ ಅಪಾರ.

 6 ಆತನು ಕೆಟ್ಟವರ ಪ್ರಾಣ ಕಾಪಾಡಲ್ಲ,+

ಆದ್ರೆ ಕಷ್ಟದಲ್ಲಿ ಇರುವವರಿಗೆ ನ್ಯಾಯ ಕೊಡ್ತಾನೆ.+

 7 ಆತನು ನೀತಿವಂತರನ್ನ ಯಾವಾಗ್ಲೂ ನೋಡ್ತಾನೆ,+

ಅವ್ರನ್ನ ರಾಜರ ಜೊತೆ* ಸಿಂಹಾಸನದಲ್ಲಿ ಕೂರಿಸ್ತಾನೆ,+

ಸದಾ ದೊಡ್ಡ ಸ್ಥಾನದಲ್ಲಿ ಇಡ್ತಾನೆ.

 8 ಆದ್ರೆ ಅವ್ರಿಗೆ ಕೋಳ ಹಾಕಿದ್ರೆ,

ಕಷ್ಟಗಳೆಂಬ ಹಗ್ಗಗಳಿಂದ ಕಟ್ಟಿದ್ರೆ

 9 ದೇವರು ಅವರು ಮಾಡಿದ ತಪ್ಪನ್ನ ಅವ್ರಿಗೆ ತಿಳಿಸ್ತಾನೆ,

ಅವರ ಪಾಪಕ್ಕೆ ಅವರ ಅಹಂಕಾರನೇ ಕಾರಣ ಅಂತ ಹೇಳ್ತಾನೆ.

10 ಅವ್ರಿಗೆ ಬುದ್ಧಿ ಹೇಳಿ ತಿದ್ತಾನೆ,

ತಪ್ಪು ಮಾಡೋದನ್ನ ಬಿಟ್ಟುಬಿಡಿ ಅಂತ ಎಚ್ಚರಿಸ್ತಾನೆ.+

11 ದೇವರ ಮಾತು ಕೇಳಿ ಆತನ ಸೇವೆ ಮಾಡಿದ್ರೆ

ಅವರು ಸುಖಸಮೃದ್ಧಿಯಿಂದ ಬಾಳ್ತಾರೆ,

ಅವರು ಜೀವನಪೂರ್ತಿ ಸಂತೋಷ ನೆಮ್ಮದಿಯಿಂದ ಇರ್ತಾರೆ.+

12 ಅವರು ಮಾತು ಕೇಳದಿದ್ರೆ ಕತ್ತಿಯಿಂದ ಸಾಯ್ತಾರೆ,+

ಜ್ಞಾನ ಪಡ್ಕೊಳ್ಳದೆನೇ ಸತ್ತು ಹೋಗ್ತಾರೆ.

13 ಮನಸ್ಸಲ್ಲಿ ದೇವ್ರನ್ನ ಬಿಟ್ಟುಬಿಟ್ಟವರು* ಒಳಗೊಳಗೆ ಕೋಪ ಇಟ್ಕೊಳ್ತಾರೆ.

ಆತನು ಅವ್ರಿಗೆ ಶಿಕ್ಷೆ ಕೊಟ್ಟಾಗ್ಲೂ ಸಹಾಯಕ್ಕಾಗಿ ಬೇಡ್ಕೊಳ್ಳಲಿಲ್ಲ.

14 ಅವರು ನೀಚ ಗಂಡಸರ+ ಜೊತೆ* ಜೀವನ ಕಳೀತಾ*

ಯೌವನದಲ್ಲೇ ಸಾಯ್ತಾರೆ.+

15 ಆದ್ರೆ ಕಷ್ಟದಲ್ಲಿ ಇರೋರನ್ನ ದೇವರು ಕಾಪಾಡ್ತಾನೆ,

ಬೇರೆಯವ್ರಿಂದ ಕಿರುಕುಳ ಅನುಭವಿಸುವವರ ಕಿವಿಯಲ್ಲಿ ದೇವರು ಮಾತಾಡ್ತಾನೆ.

16 ಆತನು ನಿನ್ನನ್ನ ಕಷ್ಟದ ಬಿಗಿಮುಷ್ಟಿಯಿಂದ ಬಿಡಿಸಿ+

ವಿಶಾಲವಾದ ಸ್ಥಳಕ್ಕೆ ಕರ್ಕೊಂಡು ಹೋಗ್ತಾನೆ, ಯಾರೂ ನಿನ್ನನ್ನ ತಡೆಯಲ್ಲ+

ನಿನ್ನ ಮೇಜಿನ ಮೇಲೆ ಭರ್ಜರಿ ಊಟ ಸಿದ್ಧಮಾಡಿ ಸಮಾಧಾನ ಮಾಡ್ತಾನೆ.+

17 ದೇವರು ಕೆಟ್ಟವ್ರಿಗೆ ಶಿಕ್ಷೆ ಕೊಡ್ತೀನಿ ಅನ್ನೋ ತೀರ್ಪು ಕೊಟ್ಟಾಗ,+

ನ್ಯಾಯ ಸಿಕ್ತು ಅಂತ ನಿನಗೆ ನೆಮ್ಮದಿ ಆಗುತ್ತೆ.

18 ಆದ್ರೆ ಹುಷಾರಾಗಿರು, ನಿನ್ನ ಕೋಪ ದ್ವೇಷಕ್ಕೆ ತಿರುಗಬಾರದು,*+

ದೊಡ್ಡ ಲಂಚ ನಿನ್ನನ್ನ ದಾರಿ ತಪ್ಪಿಸಬಾರದು.

19 ಹಾಗೇನಾದ್ರೂ ಆದ್ರೆ ನೀನೆಷ್ಟೇ ಸಹಾಯ ಕೇಳಿದ್ರೂ

ನೀನೆಷ್ಟೇ ಪ್ರಯತ್ನಪಟ್ರೂ ಕಷ್ಟದಿಂದ ಹೊರಗೆ ಬರೋಕೆ ನಿನಗೆ ಆಗಲ್ಲ.+

20 ಯಾವಾಗ ರಾತ್ರಿ ಆಗುತ್ತೋ ಅಂತ ಕಾಯಬೇಡ,

ಯಾಕಂದ್ರೆ ರಾತ್ರಿಯಲ್ಲೇ ಜನ್ರು ನಾಶ ಆಗ್ತಾರೆ.

21 ಎಚ್ಚರ! ಕೆಟ್ಟದು ಮಾಡೋಕೆ ಹೋಗಬೇಡ,

ಕಷ್ಟದಿಂದ ತಪ್ಪಿಸ್ಕೊಳ್ಳೋಕೆ ಕೆಟ್ಟದು ಮಾಡಬೇಡ.+

22 ನೋಡು! ದೇವರು ತುಂಬ ಶಕ್ತಿಶಾಲಿ,

ಆತನ ತರ ಕಲಿಸುವವರು ಬೇರೆ ಯಾರೂ ಇಲ್ಲ.

23 ಯಾವ ದಾರಿಯಲ್ಲಿ ಹೋಗಬೇಕಂತ* ದೇವ್ರಿಗೆ ಯಾರಾದ್ರೂ ಹೇಳಕ್ಕಾಗುತ್ತಾ?+

‘ನೀನು ಮಾಡಿದ್ದು ತಪ್ಪು’ ಅಂತ ಆತನಿಗೆ ಹೇಳೋಕೆ ಯಾರಿಗಾದ್ರೂ ಆಗುತ್ತಾ?+

24 ಆತನ ಕೆಲಸಗಳನ್ನ ಬೇರೆಯವ್ರ ಮುಂದೆ ಹೊಗಳೋಕೆ ಮರೀಬೇಡ,+

ಅವುಗಳನ್ನ ಜನ್ರು ಹಾಡಿ ಹೊಗಳಿದ್ದಾರೆ.+

25 ಮನುಷ್ಯರೆಲ್ಲ ಆತನ ಕೆಲಸಗಳನ್ನ ನೋಡಿದ್ದಾರೆ,

ಒಂದಲ್ಲ ಒಂದಿನ ಸಾಯೋ ಮನುಷ್ಯ ದೇವರ ಕೆಲಸಗಳನ್ನ ದೂರದಿಂದ ನೋಡ್ತಾನಷ್ಟೇ.

26 ದೇವರು ಎಷ್ಟು ದೊಡ್ಡವನು ಅಂತ ನಮಗೆ ಊಹೆ ಮಾಡಕ್ಕಾಗಲ್ಲ,+

ಆತನ ವಯಸ್ಸೆಷ್ಟು ಅಂತ ಕಂಡುಹಿಡಿಯೋಕೆ ನಮ್ಮಿಂದ ಆಗಲ್ಲ.+

27 ಆತನು ನೀರಿನ ಹನಿಗಳನ್ನ ಮೇಲಕ್ಕೆ ಎಳ್ಕೊಳ್ತಾನೆ,+

ಆಮೇಲೆ ಅದು ಮಳೆಯಾಗುತ್ತೆ, ಮಂಜು ಆಗುತ್ತೆ,

28 ಮೋಡಗಳಾಗಿ ಆಮೇಲೆ ಭೂಮಿಗೆ ನೀರು ಸುರಿಯುತ್ತೆ,+

ಎಲ್ಲ ಮನುಷ್ಯರ ಮೇಲೆ ಮಳೆ ನೀರು ಬೀಳುತ್ತೆ.

29 ಆಕಾಶದಲ್ಲಿ ಹರಡಿರೋ ಮೋಡಗಳ ಬಗ್ಗೆ ಯಾರಿಗಾದ್ರೂ ಅರ್ಥ ಮಾಡ್ಕೊಳ್ಳೋಕೆ ಆಗುತ್ತಾ?

ಆತನ ಡೇರೆ ಒಳಗಿಂದ ಬರೋ ಗುಡುಗಿನ ಬಗ್ಗೆ ಯಾರಿಗಾದ್ರೂ ತಿಳ್ಕೊಳ್ಳೋಕೆ ಆಗುತ್ತಾ?+

30 ಮೋಡಗಳ ಮೇಲೆ ಆತನು ಹೇಗೆ ಮಿಂಚು ಹೊಡಿಸ್ತಾನೆ,+

ಸಮುದ್ರದ ಆಳಗಳನ್ನ ಹೇಗೆ ಮುಚ್ಚುತ್ತಾನೆ ಅಂತ ಯೋಚ್ನೆ ಮಾಡು.

31 ಇದೆಲ್ಲದ್ರಿಂದ ಆತನು ಜನ್ರನ್ನ ಚೆನ್ನಾಗಿ ನೋಡ್ಕೊಳ್ತಾನೆ,*

ಅವ್ರಿಗೆ ಹೇರಳವಾಗಿ ಆಹಾರ ಕೊಡ್ತಾನೆ.+

32 ಆತನು ತನ್ನ ಕೈಗಳಿಂದ ಮಿಂಚನ್ನ ಹಿಡಿತಾನೆ,

ಆಮೇಲೆ ಅದನ್ನ ಗುರಿಯಿಟ್ಟು ಬಿಡ್ತಾನೆ.+

33 ಗುಡುಗಿನ ಆರ್ಭಟ ಆತನ ಬಗ್ಗೆ ಹೇಳುತ್ತೆ,

ಪ್ರಾಣಿಗಳಿಗೂ ಆತನು ಬರೋದು* ಗೊತ್ತಾಗುತ್ತೆ.

37 ಈಗ ನನ್ನ ಹೃದಯ ಜೋರಾಗಿ ಬಡ್ಕೊಳ್ತಾ ಇದೆ,

ಎದೆ ನಡುಗ್ತಿದೆ.

 2 ದೇವರ ಗುಡುಗೋ ಸದ್ದನ್ನ,

ಆತನ ಬಾಯಿಂದ ಹೊರಡೋ ಗುಡುಗಿನ ಅಬ್ಬರವನ್ನ ಕಿವಿಗೊಟ್ಟು ಕೇಳಿ.

 3 ಆ ಸದ್ದು ಇಡೀ ಭೂಮಿಗೆ ಕೇಳಿಬರುತ್ತೆ,

ಆತನು ಮಿಂಚನ್ನ+ ಭೂಮಿಯ ಮೂಲೆ ಮೂಲೆಗೂ ಕಳಿಸ್ತಾನೆ.

 4 ಆಮೇಲೆ ಗುಡುಗಿನ ಗರ್ಜನೆ ಕೇಳಿಸುತ್ತೆ,

ಆತನು ಘನಗಾಂಭೀರ್ಯದ ಧ್ವನಿಯಿಂದ ಗುಡುಗ್ತಾನೆ,+

ಆತನು ಮಾತಾಡುವಾಗ ಮಿಂಚು ಪಳಪಳಿಸ್ತಾ ಇರುತ್ತೆ.

 5 ಗುಡುಗಿನ ಧ್ವನಿಗೆ+ ಜನ್ರನ್ನ ದೇವರು ಬೆಚ್ಚಿಬೆರಗಾಗೋ ತರ ಮಾಡ್ತಾನೆ,

ಆತನು ಮಾಡೋ ಅದ್ಭುತಗಳನ್ನ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದಾಗಲ್ಲ.+

 6 ಆತನು ಹಿಮಕ್ಕೆ ‘ಭೂಮಿ ಮೇಲೆ ಬೀಳು’ ಅಂತ ಅಪ್ಪಣೆ ಕೊಡ್ತಾನೆ+

ಮಳೆಗೆ ‘ಧಾರಾಕಾರವಾಗಿ ಸುರಿ’ ಅಂತ ಆಜ್ಞೆ ಕೊಡ್ತಾನೆ.+

 7 ಹೀಗೆ ಎಲ್ಲ ಮನುಷ್ಯರ ಕೆಲಸಗಳನ್ನ ದೇವರು ನಿಲ್ಲಿಸಿಬಿಡ್ತಾನೆ,

ಇವತ್ತೊ ನಾಳೆನೊ ಸಾಯೋ ಮನುಷ್ಯ ತನ್ನ ಕೆಲಸಗಳನ್ನ ಅರ್ಥ ಮಾಡ್ಕೊಳ್ಳೋ ಹಾಗೆ ಮಾಡ್ತಾನೆ.

 8 ಕಾಡು ಪ್ರಾಣಿಗಳು ಓಡೋಗಿ ಗುಹೆ ಸೇರ್ಕೊಳ್ಳುತ್ತೆ,

ಅಲ್ಲಿಂದ ಹೊರಗೆ ಬರೋದೇ ಇಲ್ಲ.

 9 ಬಿರುಗಾಳಿ ಹೊರಟು ಜೋರಾಗಿ ಬೀಸುತ್ತೆ,+

ಉತ್ತರದ ಗಾಳಿ ಚಳಿ ಹೊತ್ತು ತರುತ್ತೆ.+

10 ದೇವರ ಉಸಿರಿಂದ ನೀರು ಮಂಜುಗಡ್ಡೆ ಆಗುತ್ತೆ,+

ದೂರ ದೂರದ ವರೆಗೆ ಹರಡಿರೋ ನೀರು ಹಿಮಗಡ್ಡೆ ಆಗುತ್ತೆ.+

11 ಮೋಡಗಳನ್ನ ನೀರಿನ ಹನಿಗಳಿಂದ ತುಂಬಿಸ್ತಾನೆ,

ಮಿಂಚನ್ನ+ ಮೋಡಗಳಲ್ಲಿ ಚದರಿಸ್ತಾನೆ,

12 ಆತನು ಹೇಳಿದ ಕಡೆಗೆ ಮೋಡಗಳು ಹೋಗುತ್ತೆ,

ಭೂಮಿ ಮೇಲೆ ಅದರ ಕೆಲಸವನ್ನ ಪೂರೈಸುತ್ತೆ.+

13 ಶಿಕ್ಷೆ ಕೊಡೋಕೆ,+ ಭೂಮಿಗೆ ನೀರು ಹಾಯಿಸೋಕೆ,

ಶಾಶ್ವತ ಪ್ರೀತಿ ತೋರಿಸೋಕೆ, ಆತನು ಮೋಡಗಳನ್ನ ಬಳಸ್ತಾನೆ.+

14 ಯೋಬ ಕೇಳು!

ಮನಸ್ಸು ಕೊಟ್ಟು ದೇವರ ಅದ್ಭುತಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡು.+

15 ದೇವರು ಮೋಡಗಳನ್ನ ಹೇಗೆ ನಿಯಂತ್ರಿಸ್ತಾನೆ* ಅಂತ ನಿನಗೆ ಗೊತ್ತಾ?

ಆತನು ಹೇಗೆ ಮೋಡಗಳ ಒಳಗಿಂದ ಮಿಂಚು ಹೊಳೆಯೋ ತರ ಮಾಡ್ತಾನೆ ಅಂತ ನಿನಗೆ ಗೊತ್ತಾ?

16 ಮೋಡಗಳು ಹೇಗೆ ತೇಲಿಕೊಂಡು ಹೋಗುತ್ತೆ ಅಂತ ಗೊತ್ತಾ?+

ಇವೆಲ್ಲ ಪರಿಪೂರ್ಣ ಜ್ಞಾನ ಇರೋ ದೇವರು ಮಾಡಿರೋ ಅದ್ಭುತ.+

17 ದಕ್ಷಿಣದ ಗಾಳಿಯಿಂದಾಗಿ ಭೂಮಿಯಲ್ಲಿ ಮೌನ ಆವರಿಸಿದಾಗ

ನಿನ್ನ ಬಟ್ಟೆ ಬಿಸಿಯಾಗೋಕೆ ಕಾರಣ ಏನಂತ ನಿನಗೆ ಗೊತ್ತಾ?+

18 ದೇವರ ತರ ಆಕಾಶವನ್ನ ಹರಡೋಕೆ+ ನಿನ್ನಿಂದ ಸಾಧ್ಯನಾ?

ಅದನ್ನ ಲೋಹದ ಕನ್ನಡಿಯಷ್ಟು ಗಟ್ಟಿಯಾಗಿ ಮಾಡೋಕೆ ನಿನ್ನಿಂದ ಆಗುತ್ತಾ?

19 ನಾವು ಆತನಿಗೆ ಏನು ಹೇಳಬೇಕಂತ ನೀನೇ ಹೇಳು,

ನಮಗೆ ಉತ್ತರ ಗೊತ್ತಿಲ್ಲ, ಯಾಕಂದ್ರೆ ನಾವು ಕತ್ತಲೆಯಲ್ಲಿ ಇದ್ದೀವಿ.

20 ನಾನು ದೇವ್ರಿಗೆ ‘ನಿನಗೆ ಏನೋ ಹೇಳಬೇಕಂತ ಇದ್ದೀನಿ’ ಅಂತ ಹೇಳಕ್ಕಾಗುತ್ತಾ?

ದೇವರಿಗೆ ಹೇಳೋಕೆ ಯಾರ ಹತ್ರಾದ್ರೂ ಒಂದೇ ಒಂದು ಗುಟ್ಟಿನ ವಿಷ್ಯ ಇದ್ಯಾ?+

21 ಗಾಳಿ ಬೀಸಿ ದೇವರು ಆಕಾಶದ ಮೋಡಗಳನ್ನ ಸರಿಸದೇ ಇದ್ರೆ

ಸೂರ್ಯ ಎಷ್ಟೇ ಪ್ರಕಾಶಮಾನವಾಗಿದ್ರೂ

ಅದ್ರ ಬೆಳಕನ್ನ ಕೂಡ ಮನುಷ್ಯನಿಂದ ನೋಡಕ್ಕಾಗಲ್ಲ.

22 ಉತ್ತರ ದಿಕ್ಕಿಂದ ಹೊಂಬೆಳಕು ಆಕಾಶ ತೂರಿಕೊಂಡು ಬರುತ್ತೆ,

ದೇವರ ವೈಭವ+ ನೋಡಿ ಎಲ್ರಿಗೂ ಭಯವಿಸ್ಮಯ ಆಗುತ್ತೆ.

23 ಸರ್ವಶಕ್ತನನ್ನ ಅರ್ಥ ಮಾಡ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷ್ಯ,+

ಆತನಿಗೆ ತುಂಬಾ ಶಕ್ತಿ ಇದೆ,+ ಆತನು ಯಾವತ್ತೂ ಅನ್ಯಾಯ ಮಾಡಲ್ಲ,+

ತನ್ನ ನೀತಿ-ನಿಯಮವನ್ನ ಯಾವತ್ತೂ ಮೀರಲ್ಲ.+

24 ಹಾಗಾಗಿ ಜನ ಆತನಿಗೆ ಭಯಪಡಬೇಕು.+

ತಾವೇ ತುಂಬ ಬುದ್ಧಿವಂತರು ಅಂತ ಅಂದ್ಕೊಳ್ಳೋ ಜನ್ರನ್ನ ಆತನು ಮೆಚ್ಚಲ್ಲ.”+

38 ಆಮೇಲೆ ಯೆಹೋವ ಬಿರುಗಾಳಿ ಒಳಗಿಂದ ಯೋಬನಿಗೆ ಹೀಗೆ ಉತ್ತರ ಕೊಟ್ಟನು:+

 2 “ಇವನು ಬುದ್ಧಿ ಇಲ್ಲದೆ ಮಾತಾಡ್ತಾ ಇದ್ದಾನೆ,

ನನ್ನ ರೀತಿನೀತಿನ ಪ್ರಶ್ನಿಸೋಕೆ ಇವನ್ಯಾರು?+

 3 ನಿನಗೆ ಪ್ರಶ್ನೆ ಕೇಳ್ತೀನಿ,

ಧೈರ್ಯವಾಗಿ ಉತ್ತರ ಕೊಡೋಕೆ ತಯಾರಾಗು!

 4 ನಾನು ಭೂಮಿಗೆ ಅಡಿಪಾಯ ಹಾಕಿದಾಗ ನೀನು ಎಲ್ಲಿದ್ದೆ?+

ಗೊತ್ತಿದ್ರೆ ಹೇಳು.

 5 ಭೂಮಿಯ ಉದ್ದ ಅಗಲ ಎಷ್ಟಿರಬೇಕು ಅಂತ ನಿರ್ಧಾರ ಮಾಡಿದವರು ಯಾರು?

ದಾರ ಹಿಡಿದು ಅದನ್ನ ಅಳತೆ ಮಾಡಿದವರು ಯಾರು?

 6 ಭೂಮಿಯ ಆಧಾರ ಕಂಬಗಳು ಯಾವುದ್ರ ಮೇಲಿದೆ?

ಅದ್ರ ಮೂಲೆಗಲ್ಲನ್ನ ಇಟ್ಟವರು ಯಾರು?+

 7 ಮುಂಜಾನೆಯ ನಕ್ಷತ್ರಗಳೆಲ್ಲ+ ಸೇರಿ ಖುಷಿಯಿಂದ ಕುಣಿದಾಗ,

ದೇವದೂತರೆಲ್ಲ*+ ಜೈಕಾರ ಹಾಕಿದಾಗ ನೀನೆಲ್ಲಿದ್ದೆ?

 8 ಸಾಗರಗರ್ಭದಿಂದ ನೀರು ಸಿಡಿದು ಬಂದಾಗ

ಅದನ್ನ ಅಡ್ಡಗಟ್ಟೋಕೆ ಬಾಗಿಲು ಹಾಕಿದವರು ಯಾರು?+

 9 ನಾನು ಮೋಡಗಳನ್ನ ಸಾಗರಕ್ಕೆ ಬಟ್ಟೆ ತರ ಉಡಿಸಿದಾಗ,

ಗಾಢ ಕತ್ತಲೆಯನ್ನ ಅದಕ್ಕೆ ಸುತ್ತಿದಾಗ,

10 ಸಮುದ್ರಕ್ಕೆ ಗಡಿರೇಖೆ ಎಳೆದು

ಅದರ ಬಾಗಿಲಿಗೆ ಚಿಲಕಾ ಹಾಕಿ,+

11 ‘ನೀನು ಇಲ್ಲಿ ತನಕ ಬರಬಹುದು, ಇದನ್ನ ದಾಟಿ ಬರಬಾರದು,

ನಿನ್ನ ದೊಡ್ಡ ದೊಡ್ಡ ಅಲೆಗಳು ಇಲ್ಲೇ ನಿಲ್ಲಬೇಕು’+ ಅಂತ ಹೇಳಿದಾಗ ನೀನೆಲ್ಲಿದ್ದೆ?

12 ನೀನು ಮುಂಜಾನೆಗೆ ‘ಬೆಳಗಾಗು’ ಅಂತ ಯಾವತ್ತಾದ್ರೂ ಹೇಳಿದ್ದೀಯಾ?

ಎಲ್ಲಿ ಹುಟ್ಟಬೇಕು ಅಂತ ಸೂರ್ಯನಿಗೆ ನೀನು ಹೇಳಿದ್ದೀಯಾ?+

13 ಭೂಮಿಯ ಮೂಲೆಮೂಲೆಗೂ ಹೋಗಿ

ಕೆಟ್ಟವ್ರನ್ನ ಓಡಿಸಿಬಿಡು ಅಂತ ಬೆಳಕಿಗೆ ಹೇಳಿದ್ದೀಯಾ?+

14 ಮುದ್ರೆ ಒತ್ತಿದಾಗ ಮಣ್ಣು ರೂಪ ಪಡಿಯೋ ತರ

ಬೆಳಗಾದಾಗ ಭೂಮಿ ರೂಪ ಪಡಿಯುತ್ತೆ.

ಬಟ್ಟೆಯಿಂದ ಅಲಂಕಾರ ಮಾಡಿದ ಹಾಗೆ ಭೂಮಿ ಸುಂದರವಾಗಿ ಕಾಣುತ್ತೆ.

15 ಮುಂಜಾನೆ ಕೆಟ್ಟವ್ರ ಬೆಳಕನ್ನ ಕಿತ್ಕೊಳ್ಳುತ್ತೆ,

ಜನ್ರಿಗೆ ಹಾನಿಮಾಡೋಕೆ ಕೆಟ್ಟವರು ಎತ್ತಿರೋ ಕೈ ಮುರಿದು ಹೋಗುತ್ತೆ.

16 ನೀನು ಸಮುದ್ರ ತಳದ ತನಕ ಹೋಗಿ ಅದ್ರ ಬುಗ್ಗೆಗಳನ್ನ ನೋಡಿದ್ದೀಯಾ?

ಸಾಗರದ ಅಡಿಯಲ್ಲಿ ಏನೇನಿದೆ ಅಂತ ನೋಡಿ ಪರೀಕ್ಷೆ ಮಾಡಿದ್ದೀಯಾ?+

17 ಸಾವಿನ ಬಾಗಿಲು+ ಎಲ್ಲಿದೆ ಅಂತ ನಿನಗೆ ಗೊತ್ತಾಗಿದ್ಯಾ?

ಕಡುಗತ್ತಲೆಯ* ಬಾಗಿಲುಗಳನ್ನ ನೀನು ನೋಡಿದ್ದೀಯಾ?+

18 ಭೂಮಿ ಎಷ್ಟು ವಿಸ್ತಾರವಾಗಿದೆ ಅಂತ ನಿನಗೆ ಗೊತ್ತಾ?+

ಇದೆಲ್ಲ ನಿನಗೆ ಗೊತ್ತಿದ್ರೆ ಹೇಳು.

19 ಬೆಳಕು ವಾಸಮಾಡೋದು ಎಲ್ಲಿ?+

ಕತ್ತಲೆ ವಾಸ ಮಾಡೋ ಜಾಗ ಎಲ್ಲಿ?

20 ಅವು ಇರೋ ಜಾಗಕ್ಕೆ ಕರ್ಕೊಂಡು ಹೋಗೋಕೆ ನಿನಗೆ ಆಗುತ್ತಾ?

ಅವುಗಳ ಮನೆಗೆ ಹೋಗೋ ದಾರಿ ನಿನಗೆ ಗೊತ್ತಾ?

21 ನಾನು ಅದನ್ನೆಲ್ಲ ಸೃಷ್ಟಿಮಾಡೋ ಮುಂಚೆನೇ ನೀನು ಹುಟ್ಟಿದ್ಯಾ?

ನೀನು ಅದನ್ನೆಲ್ಲ ತಿಳ್ಕೊಳ್ಳೋಷ್ಟು ವರ್ಷಗಳಿಂದ ಜೀವಿಸ್ತಾ ಇದ್ದೀಯಾ?

22 ಹಿಮದ ಭಂಡಾರದ ಒಳಗೆ ಹೋಗಿದ್ದೀಯಾ?+

ಆಲಿಕಲ್ಲಿನ ಗೋಡೌನ್‌ ನೋಡಿದ್ದೀಯಾ?+

23 ಕಷ್ಟಕಾಲಕ್ಕಾಗಿ, ಯುದ್ಧಕದನಗಳ ದಿನಕ್ಕಾಗಿ

ನಾನು ಇಟ್ಟಿರೋ ಆ ಹಿಮ, ಆಲಿಕಲ್ಲುಗಳನ್ನ ನೋಡಿದ್ದೀಯಾ?+

24 ಬೆಳಕು* ಹೇಗೆ ಎಲ್ಲಾ ಕಡೆ ಚೆಲ್ಲುತ್ತೆ?

ಭೂಮಿ ಮೇಲೆ ಬೀಸೋ ಪೂರ್ವದ ಗಾಳಿ ಎಲ್ಲಿ ಹುಟ್ಟುತ್ತೆ?+

25 ಪ್ರವಾಹಕ್ಕೆ ಕಾಲುವೆ ತೋಡಿದವನು ಯಾರು?

ಕಾರ್ಮೋಡಗಳಿಂದ, ಸಿಡಿಲಿಂದ ಕೂಡಿದ ಬಿರುಮಳೆಗೆ ದಾರಿ ಮಾಡಿದವನು ಯಾರು?+

26 ಯಾರೂ ಇಲ್ಲದ ಪ್ರದೇಶದಲ್ಲಿ ಮಳೆ ಆಗೋ ತರ ಮಾಡಿದವನು ಯಾರು?

ಜನ್ರಿಲ್ಲದ ಕಾಡಲ್ಲಿ ಮಳೆ ಸುರಿಸಿದವನು ಯಾರು?+

27 ಬಂಜರುಭೂಮಿಯ ದಾಹ ತಣಿಸಿದವನು ಯಾರು?

ಅಲ್ಲಿ ಹುಲ್ಲು ಬೆಳೆಯೋ ತರ ಮಾಡಿದವನು ಯಾರು?+

28 ಮಳೆಗೆ ತಂದೆ ಇದ್ದಾನಾ?+

ಇಬ್ಬನಿಯ ತಂದೆ ಯಾರು?+

29 ಯಾರ ಹೊಟ್ಟೆಯಿಂದ ಮಂಜುಗಡ್ಡೆ ಹುಟ್ತು?

ಆಕಾಶದ ತಣ್ಣಗಿರೋ ಮಂಜನ್ನ ಹುಟ್ಟಿಸಿದ್ದು ಯಾರು?+

30 ನೀರನ್ನ ಕಲ್ಲಿಂದ ಮುಚ್ಚಿರೋ ತರ

ಆಳವಾದ ಸಾಗರದ ಮೇಲೆ ನೀರು ಗಟ್ಟಿಯಾಗೋ ತರ ಮಾಡಿದ್ದು ಯಾರು?+

31 ಕೈಮಾ ನಕ್ಷತ್ರಪುಂಜವನ್ನ* ಹಗ್ಗಗಳಿಂದ ಕಟ್ಟೋಕೆ ನಿಂಗಾಗುತ್ತಾ?

ಕೀಸಿಲ್‌ ನಕ್ಷತ್ರಪುಂಜಕ್ಕೆ* ಕಟ್ಟಿರೋ ಹಗ್ಗಗಳನ್ನ ಬಿಚ್ಚೋಕೆ ನಿಂಗಾಗುತ್ತಾ?+

32 ಒಂದು ನಕ್ಷತ್ರಪುಂಜವನ್ನ* ಅದ್ರ ಕಾಲಕ್ಕೆ ಸರಿಯಾಗಿ ನಡಿಸೋಕೆ ನಿಂಗಾಗುತ್ತಾ?

ಆ್ಯಷ್‌ ನಕ್ಷತ್ರಪುಂಜಕ್ಕೆ,* ಅದ್ರ ಮಕ್ಕಳಿಗೆ ದಾರಿ ತೋರಿಸೋಕೆ ನಿನಗೆ ಸಾಧ್ಯನಾ?

33 ಆಕಾಶಕಾಯಗಳನ್ನ ನಿಯಂತ್ರಣದಲ್ಲಿ ಇಡೋ ನಿಯಮಗಳು ನಿಂಗೊತ್ತಾ?+

ಅವುಗಳ* ನಿಯಮಗಳನ್ನ ಭೂಮಿಯಲ್ಲಿ ಜಾರಿಗೆ ತರೋಕೆ ನಿಂಗಾಗುತ್ತಾ?

34 ‘ನನ್ನ ಮೇಲೆ ಜೋರಾಗಿ ಮಳೆ ಸುರಿ’ ಅಂತ

ಮೋಡಗಳಿಗೆ ಕೂಗಿ ಹೇಳೋಕೆ ನಿನ್ನಿಂದ ಆಗುತ್ತಾ?+

35 ‘ಹೋಗಿ ನಿನ್ನ ಕೆಲಸ ಮಾಡು’ ಅಂತ ಸಿಡಿಲಿಗೆ ನೀನು ಆಜ್ಞೆ ಕೊಡಕ್ಕಾಗುತ್ತಾ?

ಅದು ವಾಪಸ್‌ ಬಂದು ‘ನಾನು ಬಂದಿದ್ದೀನಿ’ ಅಂತ ನಿನಗೆ ಹೇಳುತ್ತಾ?

36 ಮೋಡಗಳಿಗೆ* ವಿವೇಕ ಕೊಟ್ಟಿದ್ದು ಯಾರು?+

ಆಕಾಶದಲ್ಲಿ ನಡಿಯೋ ಆಶ್ಚರ್ಯ ಘಟನೆಗಳಿಗೆ* ತಿಳುವಳಿಕೆ ಕೊಟ್ಟವರು ಯಾರು?+

37 ಮೋಡಗಳನ್ನ ಲೆಕ್ಕ ಮಾಡೋಷ್ಟು ಜಾಣತನ ಯಾರಿಗಿದೆ?

ಆಕಾಶದ ಜಾಡಿಗಳನ್ನ ಬಗ್ಗಿಸಿ ನೀರು ಹೊಯ್ಯೋಕೆ ಯಾರಿಂದ ಆಗುತ್ತೆ?+

38 ಧೂಳೆಲ್ಲ ಸೇರಿ ಕೆಸರು ಆಗೋ ತರ ಮಾಡುವವನು ಯಾರು?

ಮಣ್ಣಿನ ಉಂಡೆಗಳು ಅಂಟ್ಕೊಳ್ಳೋ ತರ ಮಾಡುವವನು ಯಾರು?

39 ಸಿಂಹಕ್ಕೆ ಬೇಟೆಯಾಡಿ ಆಹಾರ ಕೊಡೋಕೆ ನಿನ್ನಿಂದ ಆಗುತ್ತಾ?

ಎಳೇ ಸಿಂಹಗಳ ಹಸಿವು ತಣಿಸೋಕೆ ನಿನ್ನಿಂದ ಆಗುತ್ತಾ?+

40 ಅವು ಬೇಟೆಯನ್ನ ಹಿಡಿಯೋಕೆ ಗುಹೆ ಸೇರ್ಕೊಂಡು,

ಹೊಂಚುಹಾಕಿ ಕಾಯ್ತಾ ಇರುವಾಗ ಅದಕ್ಕೆ ಆಹಾರ ಕೊಡೋಕೆ ನಿನ್ನಿಂದ ಆಗುತ್ತಾ?

41 ಕಾಗೆ ಮರಿಗಳು ಹೊಟ್ಟೆಗಿಲ್ಲದೆ ಆಹಾರ ಹುಡುಕ್ತಾ

ಸಹಾಯಕ್ಕಾಗಿ ದೇವ್ರನ್ನ ಕೂಗಿಕೊಳ್ಳುವಾಗ

ಯಾರು ಊಟ ಕೊಡ್ತಾರೆ?+

39 ಬೆಟ್ಟದ ಮೇಕೆಗಳು ಮರಿಹಾಕೋ ಸಮಯ ನಿಂಗೊತ್ತಾ?+

ಜಿಂಕೆ ಮರಿಹಾಕೋದನ್ನ ನೋಡಿದ್ದೀಯಾ?+

 2 ಅವು ಎಷ್ಟು ತಿಂಗಳು ಮರಿಯನ್ನ ಹೊಟ್ಟೆಯಲ್ಲಿ ಹೊತ್ತಿರಬೇಕಂತ ನಿಂಗೊತ್ತಾ?

ಅವು ಹೆರೋ ಸಮಯ ಯಾವುದಂತ ನಿಂಗೊತ್ತಾ?

 3 ಅವು ಬಗ್ಗಿಕೊಂಡು ಮರಿಹಾಕುತ್ತೆ,

ಅಲ್ಲಿಗೆ ಅವುಗಳ ಹೆರಿಗೆ ನೋವು ಕೊನೆ ಆಗುತ್ತೆ.

 4 ಅವುಗಳ ಮರಿಗಳು ಬಯಲಲ್ಲಿ ಬೆಳೆದು ಬಲಶಾಲಿ ಆಗುತ್ತೆ,

ಆಮೇಲೆ ತಾಯಿಯನ್ನ ಬಿಟ್ಟು ಹೋಗುತ್ತೆ, ಮತ್ತೆ ವಾಪಸ್‌ ಬರೋದೇ ಇಲ್ಲ.

 5 ಕಾಡುಕತ್ತೆಯನ್ನ* ಸ್ವತಂತ್ರವಾಗಿ ಇರೋಕೆ ಬಿಟ್ಟಿದ್ದು ಯಾರು?+

ಕಾಡುಕತ್ತೆಯ ಹಗ್ಗಗಳನ್ನ ಬಿಚ್ಚಿದ್ದು ಯಾರು?

 6 ನಾನು ಬಯಲು ಪ್ರದೇಶವನ್ನ ಅದ್ರ ಮನೆಯಾಗಿ ಮಾಡಿದ್ದೀನಿ,

ಉಪ್ಪಿನ ಪ್ರದೇಶವನ್ನ ಅದಕ್ಕೆ ವಾಸಿಸೋಕೆ ಕೊಟ್ಟಿದ್ದೀನಿ.

 7 ಅದು ಪಟ್ಟಣದಲ್ಲಿ ಎಷ್ಟೇ ಗಲಾಟೆ ಇದ್ರೂ ತಲೆ ಕೆಡಿಸ್ಕೊಳ್ಳಲ್ಲ,

ಪ್ರಾಣಿಗಳಿಂದ ಕೆಲಸ ಮಾಡಿಸುವವರ ಕೂಗಾಟವನ್ನ ಕೇಳಿಸ್ಕೊಳ್ಳಲ್ಲ.

 8 ಅದು ಮೇವು ಹುಡುಕ್ತಾ ಬೆಟ್ಟಗಳಲ್ಲಿ ಅಡ್ಡಾಡುತ್ತೆ,

ಯಾವುದಾದ್ರೂ ಹಸಿರು ಗಿಡ ಸಿಗುತ್ತಾ ಅಂತ ಹುಡುಕಾಡುತ್ತೆ.

 9 ಕಾಡುಕೋಣ ನಿನ್ನ ಕೆಲಸಗಳನ್ನ ಮಾಡುತ್ತಾ?+

ಅದು ನಿನ್ನ ಕೊಟ್ಟಿಗೆಯಲ್ಲಿ ರಾತ್ರಿ ಮಲಗುತ್ತಾ?

10 ನೀನು ಅದಕ್ಕೆ ಹಗ್ಗ ಕಟ್ಟಿ ಹೊಲ ಊಳ್ತಿಯಾ?

ಕಣಿವೆಯನ್ನ ಊಳೋಕೆ ಅದು ನಿನ್ನ ಹಿಂದೆನೇ ಬರುತ್ತಾ?

11 ಅದಕ್ಕೆ ತುಂಬಾ ಶಕ್ತಿ ಇದೆ ಅಂತ ಅದ್ರಿಂದ

ದೊಡ್ಡ ದೊಡ್ಡ ಕೆಲಸಗಳನ್ನ ಮಾಡಿಸ್ತೀಯಾ?

12 ನೀನು ಕೊಯ್ಲು ಮಾಡಿದ ಬೆಳೆಯನ್ನ ಅದು ಹೊತ್ಕೊಂಡು ಬರುತ್ತಾ?

ಅದು ಆ ಬೆಳೆಯನ್ನ ಕಣಕ್ಕೆ ತಂದು ಹಾಕುತ್ತಾ?

13 ಉಷ್ಟ್ರಪಕ್ಷಿ ಉಲ್ಲಾಸದಿಂದ ತನ್ನ ರೆಕ್ಕೆಗಳನ್ನ ಬಡಿಯುತ್ತೆ,

ಆದ್ರೆ ಅದ್ರ ಗರಿಪುಕ್ಕ ಕೊಕ್ಕರೆಯ ಗರಿಪುಕ್ಕಕ್ಕೆ ಸರಿಸಾಟಿನಾ?+

14 ಉಷ್ಟ್ರಪಕ್ಷಿ ಮೊಟ್ಟೆಗಳನ್ನ ನೆಲದ ಮೇಲೆ ಇಡುತ್ತೆ,

ಕಾವು ಸಿಗೋಕೆ ಅವುಗಳನ್ನ ಮಣ್ಣಲ್ಲಿ ಬಿಟ್ಟುಬಿಡುತ್ತೆ.

15 ಯಾರಾದ್ರೂ ತುಳಿದ್ರೆ ಮೊಟ್ಟೆ ಒಡೆದು ಹೋಗುತ್ತೆ ಅನ್ನೋ ಬುದ್ಧಿ ಇಲ್ಲ,

ಕಾಡುಪ್ರಾಣಿ ಅವುಗಳನ್ನ ತುಳಿದುಹಾಕುತ್ತೆ ಅನ್ನೋ ಯೋಚ್ನೆನೇ ಅದಕ್ಕಿಲ್ಲ.

16 ಆ ಮರಿಗಳು ತನ್ನದಲ್ಲ ಅನ್ನೋ ತರ ಸ್ವಲ್ವನೂ ದಯೆ ಇಲ್ಲದೆ ನಡ್ಕೊಳ್ಳುತ್ತೆ,+

ಅವುಗಳನ್ನ ಸಾಕೋಕೆ ಪಟ್ಟ ಪ್ರಯತ್ನವೆಲ್ಲ ನೀರು ಪಾಲಾಗುತ್ತೆ ಅನ್ನೋದೂ ಅದಕ್ಕೆ ಗೊತ್ತಿಲ್ಲ.

17 ಯಾಕಂದ್ರೆ ದೇವರು ಅದಕ್ಕೆ ವಿವೇಕ ಕೊಡಲಿಲ್ಲ,

ತಿಳುವಳಿಕೆನೂ ಕೊಟ್ಟಿಲ್ಲ.

18 ಆದ್ರೆ ಅದು ಎದ್ದು ನಿಂತು ರೆಕ್ಕೆ ಬಡಿದು

ಕುದುರೆಯನ್ನ, ಅದ್ರ ಸವಾರನನ್ನ ನೋಡಿ ನಗುತ್ತೆ.

19 ಕುದುರೆಗೆ ಬಲ ಕೊಟ್ಟಿದ್ದು ನೀನಾ?+

ಅದ್ರ ಕತ್ತಿಗೆ ಹೊಯ್ದಾಡೋ ಕೂದಲನ್ನ ಕೊಟ್ಟಿದ್ದು ನೀನಾ?

20 ಅದಕ್ಕೆ ಮಿಡತೆ ತರ ಜಿಗಿಯೋಕೆ ಕಲಿಸಿದ್ದು ನೀನಾ?

ಅದು ಜೋರಾಗಿ ನಿಟ್ಟುಸಿರು ಬಿಟ್ಟಾಗ ಭಯ ಹುಟ್ಟಿಸುತ್ತೆ.+

21 ಅದು ಕಣಿವೆಯಲ್ಲಿ ನೆಲವನ್ನ ಗೊರಸಿಂದ ಒಂದೇ ಸಮನೆ ಕೆರಿಯುತ್ತೆ,

ಅದಕ್ಕಿರೋ ಶಕ್ತಿಯಿಂದ ಜಿಗೀತಾ+ ರಣರಂಗಕ್ಕೆ ದೌಡಾಯಿಸುತ್ತೆ.+

22 ಅದು ಭಯವನ್ನ ನೋಡಿ ಕೇಕೆ ಹಾಕಿ ನಗುತ್ತೆ,

ಯಾವುದಕ್ಕೂ ಹೆದರಲ್ಲ.+

ಕತ್ತಿ ನೋಡಿದ ಕೂಡಲೇ ಹೆದರಿ ಓಡಲ್ಲ.

23 ಬತ್ತಳಿಕೆ ಅದಕ್ಕೆ ತಾಗಿ ಲಟಲಟ ಶಬ್ದ ಮಾಡುತ್ತೆ,

ಈಟಿಭರ್ಜಿಗಳು ಥಳಥಳಿಸುತ್ತೆ.

24 ಕೊಂಬೂದೋ ಶಬ್ದ ಕೇಳಿದಾಗ ಕುದುರೆ

ನಿಂತಲ್ಲೇ ನಿಲ್ಲಕ್ಕಾಗದೆ* ಉತ್ಸಾಹದಿಂದ ಮುನ್ನುಗ್ಗುತ್ತೆ.

25 ಕೊಂಬೂದಿದಾಗ ಅದು ‘ಆಹಾ!’ ಅನ್ನುತ್ತೆ,

ದೂರದಿಂದಾನೇ ಯುದ್ಧದ ವಾಸನೆ ಕಂಡುಹಿಡಿಯುತ್ತೆ,

ಸೇನಾಪತಿಗಳ ಅರಚಾಟವನ್ನ, ಕದನದ ಕೂಗನ್ನ ಕೇಳಿಸ್ಕೊಳ್ಳುತ್ತೆ.+

26 ಆಕಾಶದೆತ್ತರಕ್ಕೆ ಹಾರೋಕೆ ಗಿಡುಗಕ್ಕೆ ಹೇಳ್ಕೊಟ್ಟಿದ್ದು ನೀನಾ?

ರೆಕ್ಕೆಗಳನ್ನ ಹರಡಿ ದಕ್ಷಿಣ ದಿಕ್ಕಿಗೆ ಹಾರೋಕೆ ಕಲಿಸಿದ್ದು ನೀನಾ?

27 ಮೇಲೆ ಹಾರೋಕೆ ಹದ್ದಿಗೆ ಅಪ್ಪಣೆ ಕೊಟ್ಟಿದ್ದು ನೀನಾ?+

ಎತ್ತರದಲ್ಲಿ ಗೂಡು ಕಟ್ಟೋಕೆ ನೀನು ಹೇಳ್ಕೊಟ್ಯಾ?+

28 ಕಡಿದಾದ ಬಂಡೆ ಮೇಲೆ ರಾತ್ರಿ ಇರು,

ಒರಟು ಬಂಡೆ ಮೇಲಿರೋ ಕೋಟೆಯಲ್ಲಿ ವಾಸಿಸು ಅಂತ ಅಪ್ಪಣೆ ಕೊಟ್ಟಿದ್ದು ನೀನಾ?

29 ಅಲ್ಲಿಂದಾನೇ ಅದು ಆಹಾರಕ್ಕಾಗಿ ಹುಡುಕುತ್ತೆ,+

ತುಂಬ ದೂರ ತನಕ ದೃಷ್ಟಿ ಹಾಯಿಸುತ್ತೆ.

30 ಅದ್ರ ಮರಿಗಳು ರಕ್ತ ಹೀರುತ್ತೆ.

ಹೆಣ ಇದ್ದಲ್ಲಿ ಹದ್ದು ಇರುತ್ತೆ.”+

40 ಯೆಹೋವ ಯೋಬನಿಗೆ ಹೀಗಂದನು:

 2 “ಸರ್ವಶಕ್ತನಲ್ಲೇ ತಪ್ಪು ಕಂಡುಹಿಡಿದು ಆತನ ಜೊತೆ ವಾದಿಸೋಕೆ ಯಾರಿಂದಾದ್ರೂ ಆಗುತ್ತಾ?+

ದೇವರು ತಪ್ಪು ಅಂತ ಆರೋಪ ಹಾಕೋನು ಯಾರಾದ್ರೂ ಇದ್ರೆ ಉತ್ತರ ಕೊಡ್ಲಿ” ಅಂದನು.+

 3 ಅದಕ್ಕೆ ಯೋಬ ಯೆಹೋವನಿಗೆ,

 4 “ನನಗೆ ಮಾತಾಡೋಕೆ ಯೋಗ್ಯತೆ ಇಲ್ಲ,+

ಅಂದ್ಮೇಲೆ ಏನಂತ ಉತ್ತರ ಕೊಡ್ಲಿ?

ನನ್ನ ಬಾಯಿ ಮೇಲೆ ಕೈ ಇಟ್ಕೊಳ್ತೀನಿ.+

 5 ನಾನು ತುಂಬ* ಮಾತಾಡಿಬಿಟ್ಟಿದ್ದೀನಿ,

ಆದ್ರೆ ಇನ್ನು ಮಾತಾಡಲ್ಲ, ಬಾಯಿ ಮುಚ್ಕೊಂಡು ಇರ್ತಿನಿ” ಅಂದ.

6 ಆಮೇಲೆ ಯೆಹೋವ ಬಿರುಗಾಳಿ ಒಳಗಿಂದ ಯೋಬನಿಗೆ ಹೀಗೆ ಹೇಳಿದನು:+

 7 “ನಾನು ನಿನಗೆ ಪ್ರಶ್ನೆ ಕೇಳ್ತೀನಿ,

ಧೈರ್ಯವಾಗಿ ಉತ್ತರ ಕೊಡೋಕೆ ತಯಾರಾಗಿರು.+

 8 ನನ್ನ ನ್ಯಾಯವನ್ನೇ ನೀನು ಪ್ರಶ್ನಿಸ್ತೀಯಾ?

ನೀನೇ ಸರಿ ಅಂತ ತೋರಿಸೋಕೆ ನನ್ನನ್ನೇ ತಪ್ಪು ಅಂತೀಯಾ?+

 9 ಸತ್ಯ ದೇವರ ಕೈಗಿರೋಷ್ಟು ಶಕ್ತಿ ನಿನ್ನ ಕೈಗೆ ಇದ್ಯಾ?+

ನಿನ್ನ ಧ್ವನಿ ಆತನ ಧ್ವನಿ ತರ ಗಟ್ಟಿಯಾಗಿ ಗುಡುಗುತ್ತಾ?+

10 ದಯವಿಟ್ಟು, ನಿನ್ನನ್ನ ಮಹಿಮೆ, ಘನತೆಗಳಿಂದ ಅಲಂಕರಿಸ್ಕೊ,

ನೀನು ಗೌರವ, ವೈಭವಗಳನ್ನ ತೊಟ್ಕೊ.

11 ನಿನ್ನ ಕೋಪನಾ ತೋರಿಸು,

ಹೆಮ್ಮೆಯಿಂದ ಉಬ್ಬಿಕೊಂಡಿರೋ ಪ್ರತಿಯೊಬ್ಬನ ಮೇಲೆ ಕಣ್ಣಿಟ್ಟು ಸೊಕ್ಕಡಗಿಸು.

12 ಹೆಮ್ಮೆಯಿಂದ ಉಬ್ಬಿಕೊಂಡಿರೋ ಜನ್ರ ಮೇಲೆ ಕಣ್ಣಿಟ್ಟು ಅವ್ರಿಗೆ ದೀನತೆ ಕಲಿಸು,

ಕೆಟ್ಟವ್ರನ್ನ ಅವರು ನಿಂತಿರೋ ಜಾಗದಲ್ಲೇ ತುಳಿದುಬಿಡು.

13 ಅವ್ರನ್ನೆಲ್ಲ ಮಣ್ಣಲ್ಲಿ ಹೂತುಹಾಕು,

ಕಾಣದಿರೋ ಜಾಗದಲ್ಲಿ ಅವ್ರನ್ನ ಬಂಧಿಸಿಡು.

14 ಇದನ್ನೆಲ್ಲ ನಿನ್ನಿಂದ ಮಾಡಕ್ಕಾದ್ರೆ

ನಿನ್ನನ್ನ ಕಾಪಾಡ್ಕೊಳ್ಳೋ ಶಕ್ತಿ* ನಿನಗಿದೆ ಅಂತ ನಾನೇ ಒಪ್ಕೊಳ್ತೀನಿ.*

15 ಬೆಹೇಮೋತನ್ನ* ಸ್ವಲ್ಪ ನೋಡು,

ನಿನ್ನನ್ನ ಸೃಷ್ಟಿ ಮಾಡಿರೋ ನಾನೇ ಅದನ್ನೂ ಮಾಡಿದೆ,

ಅದು ಹೋರಿ ತರ ಹುಲ್ಲು ತಿನ್ನುತ್ತೆ.

16 ಅದ್ರ ಸೊಂಟಕ್ಕೆಷ್ಟು ಬಲ ಇದೆ ಅಂತ ನೋಡು!

ಹೊಟ್ಟೆಯ ಸ್ನಾಯುಗಳಲ್ಲಿ ಎಷ್ಟು ಶಕ್ತಿ ಇದೆ ಅಂತ ನೋಡು!

17 ಅದು ತನ್ನ ಬಾಲವನ್ನ ದೇವದಾರು ಮರ ತರ ಬಿಗಿಯಾಗಿಸುತ್ತೆ,

ಅದ್ರ ತೊಡೆಗಳ ಸ್ನಾಯುಗಳು ಒಂದ್ರ ಜೊತೆಗೊಂದು ಹೆಣೆದಿರುತ್ತೆ.

18 ಅದ್ರ ಮೂಳೆಗಳು ತಾಮ್ರದ ಕೊಳವೆ ತರ ಇರುತ್ತೆ,

ಅದ್ರ ಕಾಲುಗಳು ಕಬ್ಬಿಣದ ಕಂಬಿ ತರ ಇರುತ್ತೆ.

19 ದೊಡ್ಡ ದೊಡ್ಡ ಪ್ರಾಣಿಗಳಲ್ಲಿ ಮೊದ್ಲು ದೇವರು ಈ ಪ್ರಾಣಿಯನ್ನ ಸೃಷ್ಟಿ ಮಾಡಿದನು,

ಇದಕ್ಕೆ ಸರಿಸಾಟಿ ಯಾವುದೂ ಇಲ್ಲ,

ಅದನ್ನ ಸೃಷ್ಟಿ ಮಾಡಿದ ದೇವ್ರಿಗೆ ಮಾತ್ರ ಅದನ್ನ ಕತ್ತಿಯಿಂದ ಕೊಲ್ಲೋಕೆ ಆಗುತ್ತೆ.

20 ಬೆಟ್ಟಗಳು ಅದಕ್ಕೆ ಆಹಾರ ಕೊಡುತ್ತೆ,

ಅಲ್ಲಿ ಕಾಡುಪ್ರಾಣಿಗಳೆಲ್ಲ ಆಟ ಆಡುತ್ತೆ.

21 ಅದು ಮುಳ್ಳು ಪೊದೆಗಳ ಕೆಳಗೆ,

ಜವುಗುನೆಲದ ಆಪುಹುಲ್ಲಿನ ಆಸರೆಯಲ್ಲಿ ಮಲಗುತ್ತೆ.

22 ಮುಳ್ಳು ಪೊದೆಗಳು ಅದಕ್ಕೆ ನೆರಳು ಕೊಡುತ್ತೆ,

ಕಣಿವೆಯಲ್ಲಿನ ನೀರವಂಜಿ* ಮರಗಳು ಅದ್ರ ಸುತ್ತ ಇರುತ್ತೆ.

23 ನದಿ ಉಕ್ಕಿ ಹರಿದ್ರೂ ಅದಕ್ಕೆ ಗಾಬರಿ ಆಗಲ್ಲ,

ಯೋರ್ದನಲ್ಲಿ+ ಪ್ರವಾಹ ಬಂದು ಅದ್ರ ಬಾಯೊಳಗೆ ನುಗ್ಗಿದ್ರೂ ಧೈರ್ಯವಾಗಿ ಇರುತ್ತೆ.

24 ಅದ್ರ ಕಣ್ಮುಂದೆನೇ ಹೋಗಿ ಅದನ್ನ ಹಿಡಿಯೋಕೆ ಯಾರಿಂದಾದ್ರೂ ಆಗುತ್ತಾ?

ಅದ್ರ ಮೂಗಿಗೆ ಕೊಕ್ಕೆ ಚುಚ್ಚುವಷ್ಟು ಧೈರ್ಯ ಯಾರಿಗಿದೆ?

41 ಲಿವ್ಯಾತಾನನ್ನ*+ ಗಾಳ ಹಾಕಿ ಹಿಡಿಯೋಕೆ ನಿನ್ನಿಂದ ಸಾಧ್ಯನಾ?

ಅದ್ರ ನಾಲಿಗೆಯನ್ನ ಹಗ್ಗದಿಂದ ಬಿಗಿಯಾಗಿ ಕಟ್ಟೋಕೆ ನಿನ್ನಿಂದಾಗುತ್ತಾ?

 2 ಅದಕ್ಕೆ ಮೂಗುದಾರ* ಹಾಕೋಕೆ ನಿನ್ನಿಂದ ಆಗುತ್ತಾ?

ಅದ್ರ ದವಡೆಗಳನ್ನ ಕೊಕ್ಕೆಯಿಂದ ಚುಚ್ಚೋಕೆ ಆಗುತ್ತಾ?

 3 ‘ದಯೆ ತೋರಿಸು’ ಅಂತ ಅದು ನಿನ್ನನ್ನ ಬೇಡುತ್ತಾ?

ನಿನ್ನ ಜೊತೆ ನಯವಿನಯದಿಂದ ಮಾತಾಡುತ್ತಾ?

 4 ಅದು ನಿನ್ನ ಜೊತೆ ಒಪ್ಪಂದ ಮಾಡ್ಕೊಂಡು

ಜೀವನಪೂರ್ತಿ ನಿನ್ನ ಆಳಾಗಿ ಇರುತ್ತಾ?

 5 ಹಕ್ಕಿ ಜೊತೆ ಆಟ ಆಡೋ ತರ ನೀನು ಅದ್ರ ಜೊತೆ ಆಡ್ತೀಯಾ?

ನಿನ್ನ ಮುದ್ದಿನ ಹೆಣ್ಣು ಮಕ್ಕಳನ್ನ ನಗಿಸೋಕೆ ಅದನ್ನ ಕಟ್ಟಿಹಾಕ್ತೀಯಾ?

 6 ಮೀನುಗಾರರು ಅದಕ್ಕೆ ಬೆಲೆ ಕಟ್ಟಕ್ಕಾಗುತ್ತಾ?

ಅವರು ಅದನ್ನ ತುಂಡುತುಂಡು ಮಾಡಿ ವ್ಯಾಪಾರಿಗಳಿಗೆ ಹಂಚೋಕೆ ಆಗುತ್ತಾ?

 7 ನೀನು ಅದ್ರ ಚರ್ಮದ ಮೇಲೆಲ್ಲ ಈಟಿಗಾಳಗಳನ್ನ ಚುಚ್ಚುತ್ತೀಯಾ?+

ಮೀನು ಭರ್ಜಿಗಳಿಂದ ಅದ್ರ ತಲೆಗೆ ಚುಚ್ಚುತ್ತೀಯಾ?

 8 ಒಂದು ಸಲ ಅದನ್ನ ಮುಟ್ಟಿ ನೋಡು!

ಮತ್ತೆ ನೀನು ಯಾವತ್ತೂ ಅದ್ರ ಕಡೆ ತಲೆ ಹಾಕಲ್ಲ,

ನೀನು ಮಾಡಿದ ಹೋರಾಟವನ್ನ ಸಾಯೋ ತನಕ ಮರಿಯಲ್ಲ!

 9 ಅದನ್ನ ಹಿಡಿತೀನಿ ಅಂತ ನೆನಸೋದು ಒಂದು ಕನಸು.

ಅದನ್ನ ನೋಡಿದ ತಕ್ಷಣ ನೀನೇ ಹೆದರಿ ಎದ್ದುಬಿದ್ದು ಓಡ್ತೀಯ.

10 ಅದನ್ನ ಕೆಣಕೋ ಧೈರ್ಯ ಯಾರಿಗೂ ಇಲ್ಲ.

ಹೀಗಿರುವಾಗ ನನ್ನನ್ನ ವಿರೋಧಿಸಿ ನಿಲ್ಲೋಕೆ ಯಾರಿಂದ ಆಗುತ್ತೆ?+

11 ನಾನು ವಾಪಸ್‌ ಕೋಡೋಕೆ ನನಗೆ ಯಾರಾದ್ರೂ ಏನಾದ್ರೂ ಮೊದ್ಲು ಕೊಟ್ಟಿದ್ದಾರಾ?+

ಆಕಾಶದ ಕೆಳಗೆ ಇರೋದೆಲ್ಲ ನಂದೇ.+

12 ಅದ್ರ ಕಾಲುಗಳ ಬಗ್ಗೆ, ಅದಕ್ಕಿರೋ ಶಕ್ತಿ ಬಗ್ಗೆ

ಚೆನ್ನಾಗಿ ಮಾಡಿರೋ ಅದ್ರ ದೇಹದ ಬಗ್ಗೆ ನಾನು ವಿವರಿಸ್ಲೇಬೇಕು.

13 ಅದ್ರ ದಪ್ಪ ಚರ್ಮವನ್ನ ಯಾರಾದ್ರೂ ಸುಲಿದಿದ್ದಾರಾ?

ಅದ್ರ ಬಾಯಿ ಒಳಗೆ ಹೋಗೋಕೆ ಯಾರಿಗಾದ್ರೂ ಆಗುತ್ತಾ?

14 ಅದ್ರ ಬಾಯಿಯನ್ನ ತೆರಿಯೋಷ್ಟು ಗುಂಡಿಗೆ ಯಾರಿಗಿದೆ?

ಅದ್ರ ಹಲ್ಲುಗಳನ್ನ ನೋಡಿ ಹೆದರಿ ನಡುಗದವರು ಯಾರಿದ್ದಾರೆ?

15 ಅದ್ರ ಬೆನ್ನ ಮೇಲಿನ ಚರ್ಮ ಚಿಪ್ಪುಗಳನ್ನ ಸಾಲಾಗಿ ಒಂದ್ರ ಮೇಲೊಂದು ಜೋಡಿಸಿಟ್ಟ ಹಾಗಿದೆ,*

ಅವು ಒತ್ತೊತ್ತಾಗಿ ಇದ್ದು, ಬಿಗಿಯಾಗಿ ಅಂಟ್ಕೊಂಡಿವೆ.

16 ಸ್ವಲ್ಪ ಗಾಳಿನೂ ಹೋಗದ ಹಾಗೆ

ಒಂದಕ್ಕೊಂದು ಹೆಣೆದ್ಕೊಂಡಿವೆ.

17 ಅವು ಒಂದು ಇನ್ನೊಂದಕ್ಕೆ ಅಂಟ್ಕೊಂಡಿವೆ,

ಬಿಡಿಸೋಕೆ ಆಗಲ್ಲ.

18 ಅದು ನಿಟ್ಟುಸಿರು ಬಿಡುವಾಗ ಚಿಮ್ಮುವ ತುಂತುರುಗಳು ಬೆಳಕಿಗೆ ಪಳಪಳ ಅನ್ನುತ್ತೆ,

ಅದ್ರ ಕಣ್ಣುಗಳು ಸೂರ್ಯೋದಯದ ಕಿರಣಗಳ ಹಾಗೆ ಮಿರಿಮಿರಿ ಮಿಂಚುತ್ತೆ.

19 ಅದ್ರ ಬಾಯೊಳಗಿಂದ ಮಿಂಚು ಬರುತ್ತೆ,

ಬೆಂಕಿ ಕಿಡಿಗಳು ಹಾರುತ್ತೆ.

20 ಹುಲ್ಲು ಹಾಕಿ ಉರಿಸಿದ ಒಲೆಯಲ್ಲಿ ಹೊಗೆ ಬರೋ ಹಾಗೆ

ಅದು ಮೂಗಿಂದ ಹೊಗೆ ಬಿಡುತ್ತೆ.

21 ಅದ್ರ ಉಸಿರಿಂದ ಕೆಂಡಗಳು ಜಗಜಗಿಸುತ್ತೆ,

ಅದ್ರ ಬಾಯಿಂದ ಜ್ವಾಲೆ ಚಿಮ್ಮುತ್ತೆ.

22 ಅದ್ರ ಕತ್ತಲ್ಲಿ ತುಂಬ ಬಲ ಇದೆ,

ಭಯ ಅದ್ರ ಮುಂದೆ ನಿಲ್ಲದೆ ಓಡಿಹೋಗುತ್ತೆ.

23 ಅದ್ರ ಚರ್ಮದ ಪದರಗಳು ಒಟ್ಟಿಗೆ ಬಿಗಿಯಾಗಿ ಅಂಟ್ಕೊಂಡಿವೆ,

ಅಚ್ಚಲ್ಲಿ ಹೊಯ್ದ ಲೋಹದ ಹಾಗೆ ಗಟ್ಟಿಯಾಗಿವೆ, ಸ್ವಲ್ಪನೂ ಕದಲಲ್ಲ.

24 ಅದ್ರ ಹೃದಯ ಕಲ್ಲಿನಷ್ಟು ಗಟ್ಟಿ,

ಬೀಸೋ ಕಲ್ಲಿನ ಕೆಳಕಲ್ಲಿನ ತರ ಗಟ್ಟಿ.

25 ಅದು ಎದ್ರೆ ಬಲಶಾಲಿಗಳು ಸಹ ಭಯದಿಂದ ಗಡಗಡ ನಡುಗ್ತಾರೆ,

ಅದು ತನ್ನ ಬಾಲವನ್ನ ಜೋರಾಗಿ ಬಡಿದಾಗ ತಬ್ಬಿಬ್ಬು ಆಗ್ತಾರೆ.

26 ಕತ್ತಿಗೆ ಅದು ಜಗ್ಗಲ್ಲ,

ಈಟಿ, ಭರ್ಜಿ, ಬಾಣದ ಚೂಪಿಗೆ ಸಹ ಬಗ್ಗಲ್ಲ.+

27 ಕಬ್ಬಿಣ ಅದಕ್ಕೆ ಒಣಹುಲ್ಲು ತರ,

ತಾಮ್ರ ಟೊಳ್ಳು ಮರದ ಹಾಗೆ.

28 ಬಾಣ ನೋಡಿ ಅದು ಓಡಲ್ಲ,

ಕವಣೆ ಕಲ್ಲಿಂದ ಹೊಡೆದ್ರೆ ಅದಕ್ಕೆ ಮೈಮೇಲೆ ಹೊಟ್ಟು ಬಿದ್ದ ಹಾಗಿರುತ್ತೆ.

29 ಅದಕ್ಕೆ ದೊಣ್ಣೆ ಹುಲ್ಲು ಕಡ್ಡಿ ತರ,

ಬಿರ್ರನೆ ಬರೋ ಭರ್ಜಿಯನ್ನ ನೋಡಿ ನಗುತ್ತೆ.

30 ಅದ್ರ ಕೆಳಭಾಗ ಮಡಿಕೆಯ ಚೂಪಾದ ಚೂರುಗಳ ಹಾಗಿದೆ,

ಕಣ ಒಕ್ಕುವ ಹಲಗೆ ತರ ಅದು ಕೆಸರಲ್ಲಿ ಬಿದ್ಕೊಂಡಿರುತ್ತೆ.+

31 ಹಂಡೆಯಲ್ಲಿರೋ ನೀರು ತರ ಅದು ಆಳವಾದ ಸಮುದ್ರ ನೀರನ್ನ ಕುದಿಸುತ್ತೆ,

ಹಂಡೆಯಲ್ಲಿ ಎಣ್ಣೆ ಕಾಯಿಸಿದ ಹಾಗೆ ಸಮುದ್ರದಲ್ಲಿ ನೊರೆ ಎಬ್ಬಿಸುತ್ತೆ.

32 ಅದು ನೀರಲ್ಲಿ ಹೋಗುವಾಗ ಹೋದ ದಾರಿ ಮಿನಮಿನ ಮಿನುಗುತ್ತೆ,

ಆಗ ಸಾಗರಕ್ಕೆ ಬಿಳಿ ಕೂದಲು ಬಂದ ತರ ಕಾಣುತ್ತೆ.

33 ಭೂಮಿ ಮೇಲೆ ಅದ್ರ ಹಾಗೆ ಬೇರೆ ಜೀವಿ ಇಲ್ಲ,

ಭಯಕ್ಕೆ ತಲೆಬಾಗದೆ ಬದುಕಬೇಕಂತಾನೇ ಸೃಷ್ಟಿ ಆಗಿರೋ ಜೀವಿ ಅದು.

34 ಜಂಬದ ಪ್ರಾಣಿಗಳನ್ನೆಲ್ಲ ಅದು ಗುರಾಯಿಸಿ ನೋಡುತ್ತೆ,

ಎಲ್ಲ ಶಕ್ತಿಶಾಲಿ ಕಾಡು ಪ್ರಾಣಿಗಳಿಗೆ ಇದೇ ರಾಜ!”

42 ಆಗ ಯೋಬ ಯೆಹೋವನಿಗೆ ಹೀಗಂದ:

 2 “ನಿನ್ನಿಂದ ಮಾಡಕ್ಕಾಗದೇ ಇರೋದು ಯಾವುದೂ ಇಲ್ಲ,

ನೀನು ಅಂದ್ಕೊಂಡಿದ್ದನ್ನ ಮಾಡ್ತೀಯ ಅಂತ ನನಗೀಗ ಗೊತ್ತಾಯ್ತು.+

 3 ‘ಇವನು ಬುದ್ಧಿಯಿಲ್ಲದೆ ಮಾತಾಡ್ತಾ ಇದ್ದಾನಲ್ಲಾ. ನನ್ನ ರೀತಿನೀತಿಯನ್ನ ಪ್ರಶ್ನೆ ಮಾಡೋಕೆ ಇವನ್ಯಾರು?’ ಅಂತ ನೀನು ಕೇಳಿದೆ.+

ಹೌದು, ನಾನು ಯೋಚ್ನೆ ಮಾಡದೆ ಮಾತಾಡಿಬಿಟ್ಟೆ,

ನನಗೆ ಗೊತ್ತಿಲ್ಲದ ಎಷ್ಟೋ ವಿಷ್ಯಗಳನ್ನ ಹೇಳ್ಕೊಟ್ಟೆ, ಅದ್ರ ಬಗ್ಗೆ ನನಗೆ ಗೊತ್ತಿರಲಿಲ್ಲ.+

 4 ನೀನು ನನಗೆ ‘ನಾನು ಮಾತಾಡ್ತೀನಿ, ಚೆನ್ನಾಗಿ ಕೇಳು,

ಪ್ರಶ್ನೆ ಕೇಳ್ತೀನಿ, ಉತ್ತರ ಕೊಡು’ ಅಂತ ಹೇಳ್ದೆ.+

 5 ನಾನು ನಿನ್ನ ಬಗ್ಗೆ ಕಿವಿಯಾರೆ ಕೇಳಿಸ್ಕೊಂಡಿದ್ದೆ,

ಆದ್ರೆ ಈಗ ಕಣ್ಣಾರೆ ನೋಡಿದ್ದೀನಿ.

 6 ನಾ ಹೇಳಿದ ಮಾತನ್ನ ವಾಪಸ್‌ ತಗೋತೀನಿ,+

ಮಣ್ಣಲ್ಲೂ ಬೂದಿಯಲ್ಲೂ ಕೂತು ಪಶ್ಚಾತ್ತಾಪಪಡ್ತೀನಿ.”+

7 ಯೋಬನ ಜೊತೆ ಯೆಹೋವ ಮಾತಾಡಿದ ಮೇಲೆ ತೇಮಾನ್ಯನಾದ ಎಲೀಫಜನಿಗೆ ಯೆಹೋವ ಹೀಗಂದನು:

“ನಿನ್ನ ಮೇಲೂ ನಿನ್ನ ಇಬ್ರು ಸ್ನೇಹಿತರ ಮೇಲೂ+ ನನಗೆ ತುಂಬ ಕೋಪ ಬಂದಿದೆ. ನನ್ನ ಸೇವಕ ಯೋಬ ನನ್ನ ಬಗ್ಗೆ ಮಾತಾಡಿದ ಹಾಗೆ ನೀವು ನನ್ನ ಬಗ್ಗೆ ಸತ್ಯ ಹೇಳಲಿಲ್ಲ.+ 8 ನೀವೀಗ ಏಳು ಹೋರಿ, ಏಳು ಟಗರು ತಗೊಂಡು ನನ್ನ ಸೇವಕ ಯೋಬನ ಹತ್ರ ಹೋಗಿ. ನೀವು ಮಾಡಿದ ಪಾಪಕ್ಕಾಗಿ ಸರ್ವಾಂಗಹೋಮ ಬಲಿ ಅರ್ಪಿಸಿ. ನನ್ನ ಸೇವಕ ಯೋಬ ನಿಮಗೋಸ್ಕರ ಪ್ರಾರ್ಥನೆ ಮಾಡ್ತಾನೆ.+ ಯಾಕಂದ್ರೆ ನನ್ನ ಸೇವಕ ಯೋಬ ನನ್ನ ಬಗ್ಗೆ ಸತ್ಯವನ್ನ ಮಾತಾಡಿದ ಹಾಗೆ ನೀವು ಮಾತಾಡಲಿಲ್ಲ. ನಿಮ್ಮ ಮೂರ್ಖತನಕ್ಕೆ ಶಿಕ್ಷೆ ಸಿಗಬಾರದು ಅಂತ ಅವನು ವಿನಂತಿ ಮಾಡಿದ್ರೆ ನಾನು ಶಿಕ್ಷೆ ಕೊಡಲ್ಲ.”

9 ಹಾಗಾಗಿ ತೇಮಾನ್ಯನಾದ ಎಲೀಫಜ, ಶೂಹ್ಯನಾದ ಬಿಲ್ದದ, ನಾಮಾಥ್ಯನಾದ ಚೋಫರ ಹೋಗಿ ಯೆಹೋವ ಹೇಳಿದ ಹಾಗೇ ಮಾಡಿದ್ರು. ಯೆಹೋವ ಯೋಬನ ಪ್ರಾರ್ಥನೆ ಕೇಳಿದನು.

10 ಯೋಬ ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ+ ಮೇಲೆ ಯೆಹೋವ ಅವನ ಕಷ್ಟವನ್ನೆಲ್ಲ ತೆಗೆದುಹಾಕಿ+ ಅವನಿಗೆ ಮತ್ತೆ ಸುಖಸಮೃದ್ಧಿ ಕೊಟ್ಟನು. ಯೆಹೋವ ಅವನಿಗೆ ಮುಂಚೆಗಿಂತ ಎರಡುಪಟ್ಟು ಆಸ್ತಿ ಕೊಟ್ಟನು.+ 11 ಅವನ ಎಲ್ಲ ಸಹೋದರ ಸಹೋದರಿಯರು, ಅವನ ಎಲ್ಲ ಹಳೇ ಸ್ನೇಹಿತರು+ ಅವನ ಮನೆಗೆ ಬಂದು ಅವನ ಜೊತೆ ಊಟ ಮಾಡಿದ್ರು. ಯೋಬನಿಗೆ ಏನೆಲ್ಲ ಕಷ್ಟ ಬರೋಕೆ ಯೆಹೋವ ಬಿಟ್ನೋ ಅದನ್ನೆಲ್ಲ ನೆನಸ್ಕೊಂಡು ಅವರು ದುಃಖಪಟ್ರು, ಯೋಬನನ್ನ ಸಮಾಧಾನ ಮಾಡಿದ್ರು. ಪ್ರತಿಯೊಬ್ರು ಅವನಿಗೆ ಒಂದೊಂದು ಬೆಳ್ಳಿ ತುಂಡು, ಒಂದೊಂದು ಚಿನ್ನದ ಉಂಗುರ ಕೊಟ್ರು.

12 ಯೆಹೋವ ಯೋಬನ ಬದುಕನ್ನ ಮುಂಚೆಗಿಂತ ಜಾಸ್ತಿ ಆಶೀರ್ವಾದ ಮಾಡಿದನು.+ ಅವನಿಗೆ 14,000 ಕುರಿ, 6,000 ಒಂಟೆ, 1,000 ಜೋಡಿ ದನ, 1,000 ಹೆಣ್ಣು ಕತ್ತೆ ಕೊಟ್ಟನು.+ 13 ಅವನಿಗೆ ಇನ್ನೂ ಏಳು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಹುಟ್ಟಿದ್ರು.+ 14 ಯೋಬ ಮೊದಲ್ನೇ ಮಗಳಿಗೆ ಯೆಮೀಮ, ಎರಡನೆಯವಳಿಗೆ ಕೆಚೀಯ, ಮೂರನೆಯವಳಿಗೆ ಕೆರೆನ್‌-ಹಪ್ಪೂಕ್‌ ಅಂತ ಹೆಸ್ರಿಟ್ಟ. 15 ಇಡೀ ದೇಶದಲ್ಲಿ ಯೋಬನ ಹೆಣ್ಣು ಮಕ್ಕಳಷ್ಟು ಸುಂದರಿಯರು ಯಾರೂ ಇರಲಿಲ್ಲ. ಯೋಬ ತನ್ನ ಗಂಡು ಮಕ್ಕಳಿಗೆ ಆಸ್ತಿಯನ್ನ ಕೊಟ್ಟ ಹಾಗೆ ತನ್ನ ಹೆಣ್ಣು ಮಕ್ಕಳಿಗೂ ಕೊಟ್ಟ.

16 ಯೋಬ ಇನ್ನೂ 140 ವರ್ಷ ಬದುಕಿದ. ಅವನು ತನ್ನ ಮಕ್ಕಳು, ಮೊಮ್ಮಕ್ಕಳು, ಹೀಗೆ ನಾಲ್ಕು ತಲೆಮಾರುಗಳನ್ನ ನೋಡಿದ. 17 ಯೋಬ ತುಂಬ ವರ್ಷ ಸಂತೋಷ ತೃಪ್ತಿಯಿಂದ ಬದುಕಿ ತೀರಿಹೋದ.

ಬಹುಶಃ ಇದರರ್ಥ “ದ್ವೇಷಕ್ಕೆ ಗುರಿಯಾದವನು.”

ಅಥವಾ “ನಿರ್ದೋಷಿ ಆಗಿದ್ದ, ಅವನಲ್ಲಿ ಯಾವುದೇ ತಪ್ಪಿರಲಿಲ್ಲ”

ಅಕ್ಷ. “500 ಜೋಡಿ ದನಗಳು.”

ಅಕ್ಷ. “ಹೆಣ್ಣು ಕತ್ತೆಗಳು.”

ಅಥವಾ “‘ಅಕ್ಕಂದಿರನ್ನ.’ ಇದ್ರ ಹೀಬ್ರು ಪದ ಅಕ್ಕಂದಿರನ್ನ ತಂಗಿಯರನ್ನ ಇಬ್ರನ್ನೂ ಸೂಚಿಸೋ ಪದ.”

ಅಕ್ಷ. “ದೇವರ ಮಕ್ಕಳು.”

ಅಥವಾ “ನಿರ್ದೋಷಿ.”

ಬಹುಶಃ, “ಸಿಡಿಲು.”

ಪದವಿವರಣೆ ನೋಡಿ.

ಅಕ್ಷ. “ದೇವರ ಮಕ್ಕಳು.”

ಅಥವಾ “ನಿರ್ದೋಷಿ.”

ಅಕ್ಷ. “ಚರ್ಮಕ್ಕೆ ಚರ್ಮ.” ಅರ್ಥ, ಒಬ್ಬ ಮನುಷ್ಯನಿಗೆ ಬೇರೆಯವ್ರ ಜೀವಕ್ಕಿಂತ ತನ್ನ ಜೀವಾನೇ ತುಂಬ ಮುಖ್ಯ.

ಅಕ್ಷ. “ಮೂಳೆ, ಮಾಂಸಕ್ಕೆ.”

ಅಥವಾ “ಪರಿಚಯಸ್ಥರು.”

ಅಥವಾ “ಕತ್ತಲೆ ಮತ್ತು ಸಾವಿನ ನೆರಳು.”

ಇದು ಮೊಸಳೆಯನ್ನ ಅಥವಾ ತುಂಬ ದೊಡ್ಡದಾದ, ಬಲಿಷ್ಠವಾದ ನೀರಲ್ಲಿರೋ ಬೇರೆ ಯಾವುದೋ ಪ್ರಾಣಿಯನ್ನ ಸೂಚಿಸುತ್ತೆ ಅಂತಾರೆ ಸ್ವಲ್ಪ ಜನ.

ಬಹುಶಃ, “ಹಾಳುಬಿದ್ದ ಸ್ಥಳಗಳನ್ನ ತಮಗಾಗಿ ಕಟ್ಟಿಸಿಕೊಂಡಿರೋ.”

ಅಥವಾ “ಆಸ್ಥಾನದ ಉನ್ನತ ಅಧಿಕಾರಿಗಳ.”

ಅಕ್ಷ. “ಬಲ ಇಲ್ಲದ ಕೈಗಳನ್ನ.”

ಅಥವಾ “ಹಾನಿಮಾಡೋಕೆ ಸಂಚು ಮಾಡುವವರು.”

ಪದವಿವರಣೆ ನೋಡಿ.

ಅಥವಾ “ಒಬ್ಬ ಕೆಟ್ಟ ದೇವದೂತ.”

ಅಥವಾ “ತನ್ನ ದೂತರಲ್ಲೂ.”

ಅಥವಾ “ಹೊಲದ ಕಲ್ಲುಗಳು ನಿನ್ನ ಜೊತೆ ಒಪ್ಪಂದ ಮಾಡ್ಕೊಂಡಿರುತ್ತೆ.”

ಅಥವಾ “ದುಡುಕಿ.”

ಅಕ್ಷ. “ವ್ಯರ್ಥವಾದ ತಿಂಗಳುಗಳು ನನಗೆ ನೇಮಕವಾಗಿವೆ.”

ಅಕ್ಷ. “ದುರವಸ್ಥೆಯ ರಾತ್ರಿಗಳನ್ನ ನನಗೆ ಲೆಕ್ಕಮಾಡಿ ಕೊಡಲಾಗಿದೆ.”

ಯೋಬ ಬಹುಶಃ ದೇವ್ರ ಹತ್ರ ಹೇಳ್ತಿದ್ದಾನೆ.

ಪದವಿವರಣೆ ನೋಡಿ.

ಅಕ್ಷ. “ಗಮನ ಕೊಡ್ತಾನೆ.”

ಅಥವಾ “ಧರ್ಮಭ್ರಷ್ಟ.”

ಅಥವಾ “ಸಹಾಯ ಮಾಡಲ್ಲ.”

ಅಥವಾ “ಆತನನ್ನ ನ್ಯಾಯಾಲಯಕ್ಕೆ ಕರ್ಕೊಂಡು ಹೋಗೋಕೆ.”

ಬಹುಶಃ ಮಹಾಭಲ್ಲೂಕ ನಕ್ಷತ್ರಪುಂಜ (ಸಪ್ತರ್ಷಿ ಮಂಡಲ)

ಬಹುಶಃ ಮೃಗಶಿರ ನಕ್ಷತ್ರಪುಂಜ.

ಬಹುಶಃ ವೃಷಭ ನಕ್ಷತ್ರಪುಂಜದ ಕೃತ್ತಿಕಾ ನಕ್ಷತ್ರಗಳು.

ಬಹುಶಃ ಒಂದು ದೊಡ್ಡ ಸಮುದ್ರ ಜೀವಿ.

ಬಹುಶಃ, “ನನ್ನ ಪ್ರತಿವಾದಿ.”

ಅಕ್ಷ. “ನ್ಯಾಯಾಲಯಕ್ಕೆ ಹಾಜರಾಗಿ ಅಂತ ಆದೇಶಿಸೋಕೆ.”

ಅಥವಾ “ನಾನು ನಿರಪರಾಧಿ ಆಗಿದ್ರೂ.”

ಅಥವಾ “ನಾನು ನಿರಪರಾಧಿನಾ.”

ಅಥವಾ “ನಿರ್ದೋಷಿಗಳನ್ನೂ.”

ಅಥವಾ “‘ಪೊಟ್ಯಾಷ್‌,’ ಬೂದಿಯಿಂದ ಮಾಡೋ ಸೋಪಿಂದ.”

ಅಥವಾ “ಮಧ್ಯಸ್ಥನಾಗಿ.”

ಅಕ್ಷ. “ನನ್ನನ್ನ ಹಾಲಿನ ತರ ಹೊಯ್ದು ಮೊಸರಿನ ಹಾಗೆ ಹೆಪ್ಪುಗಟ್ಟಿಸಿದೆ.”

ಅಥವಾ “ಉಸಿರು.”

ಅಥವಾ “ಕತ್ತಲೆಯ ಮತ್ತು ಸಾವಿನ ನೆರಳಿರೋ.”

ಅಥವಾ “ಕೊಚ್ಕೊಂಡ್ರೆ.”

ಪದವಿವರಣೆ ನೋಡಿ.

ಅಥವಾ “ಕಾಡುಕತ್ತೆ ಮನುಷ್ಯನಾಗಿ ಹುಟ್ಟಲ್ಲ.”

ಅಥವಾ “ಸಿದ್ಧ ಮಾಡ್ಕೊಂಡ್ರೆ.”

ಅಥವಾ “ಜಾರಿ ಬೀಳುವವರಿಗೆ.”

ಬಹುಶಃ, “ಭೂಮಿ ಜೊತೆ ಮಾತಾಡಿ.”

ಅಥವಾ “ಪ್ರಾಣ.”

ಅಥವಾ “ಪ್ರಯೋಜನ ತರೋ ವಿವೇಕ.”

ಅಕ್ಷ. “ಬರಿಗಾಲಲ್ಲಿ ಹೋಗೋ ತರ ಮಾಡ್ತಾನೆ.”

ಅಕ್ಷ. “ರಾಜರು ಹಾಕಿದ ಬೇಡಿಗಳನ್ನ ಆತನು ಬಿಚ್ಚುತ್ತಾನೆ.”

ಅಥವಾ “ಹಿರಿಯರ.”

ಅಥವಾ “ಸರ್ವಶಕ್ತನ.”

ಅಥವಾ “ನಶ್ವರ ಮನುಷ್ಯನಿಗೆ.”

ಅಥವಾ “ನಾಣ್ಣುಡಿಗಳೆಲ್ಲ.”

ಅಕ್ಷ. “ಗುರಾಣಿಗಳು.”

ಅಥವಾ “ನನ್ನ ನಡತೆ ಸರಿ ಅಂತ ಸಮರ್ಥಿಸ್ತೀನಿ.”

ಅಥವಾ “ಧರ್ಮಭ್ರಷ್ಟರನ್ನ.”

ಬಹುಶಃ, “ಯಾರಾದ್ರೂ ಇದ್ರೆ ಸುಮ್ಮನಿದ್ದು ಪ್ರಾಣಬಿಡ್ತೀನಿ.”

ಪದವಿವರಣೆ ನೋಡಿ.

ಅಥವಾ “ಮನುಷ್ಯ.”

ಅಥವಾ “ಕಳವಳದಿಂದ ತುಂಬಿದೆ.”

ಬಹುಶಃ, “ಅವನನ್ನ ಕಿತ್ತು ಬಿಸಾಡ್ತಾರೆ.”

ಅಕ್ಷ. “ನನಗೆ.”

ಅಥವಾ “ನಿನ್ನ ಪ್ರತಿವಾದಿಯಾಗಿ ನ್ಯಾಯಾಲಯದಲ್ಲಿ ನಿಲ್ಲಿಸ್ತೀಯ.”

ಪದವಿವರಣೆ ನೋಡಿ.

ಅಕ್ಷ. “ಕಡ್ಡಾಯ ದುಡಿಮೆಯ.” ಅಥವಾ “ನೇಮಿತವಾದ.”

ಅಥವಾ “ತುಂಬ ಆಸೆಪಡ್ತೀಯ.”

ಅಕ್ಷ. “ಪೂರ್ವದ ಗಾಳಿಯನ್ನ ಹೊಟ್ಟೆಯಲ್ಲಿ ತುಂಬಿಸ್ಕೊಳ್ತಾನಾ?”

ಅಥವಾ “ಪವಿತ್ರರಲ್ಲಿ.”

ಅಥವಾ “ಸೋಲಿಸೋಕೆ.”

ಇಲ್ಲಿ ಕೊಬ್ಬು ಅನ್ನೋದು ಏಳಿಗೆ, ಜಾಸ್ತಿ ಮಜಾ ಮಾಡೋದು, ದುರಹಂಕಾರವನ್ನ ಸೂಚಿಸುತ್ತೆ.

ಅಂದ್ರೆ, ಮುಂಚಿನ ತರ ಜೀವನ ಮಾಡ್ತೀನಿ ಅನ್ನೋ ನಂಬಿಕೆ ಸ್ವಲ್ಪನೂ ಇರಲ್ಲ.

ಅಥವಾ “ಧರ್ಮಭ್ರಷ್ಟರ.”

ಅಥವಾ “ಬಿರುನುಡಿಗಳನ್ನ.”

ಅಥವಾ “ಬಲವನ್ನೆಲ್ಲ.” ಅಕ್ಷ. “ಕೊಂಬು.”

ಅಥವಾ “ಸಾವಿನ ನೆರಳು ಕವಿದಿದೆ.”

ಬಹುಶಃ, “ನಿದ್ದೆ ಮಾಡದೆ ದೇವ್ರನ್ನೇ ನೋಡ್ತಿದ್ರೆ.”

ಅಕ್ಷ. “ಗಾದೆಮಾತಾಗಿ; ಉದಾಹರಣೆಯಾಗಿ ಬಳಸೋ ಹಾಗೇ.”

ಅಥವಾ “ಧರ್ಮಭ್ರಷ್ಟನನ್ನ.”

ಅಥವಾ “ನಿರ್ದೋಷಿಗಳಿಗೆ.”

ಪದವಿವರಣೆ ನೋಡಿ.

ಅಥವಾ “ಕುಂಟುತ್ತಾ.”

ಅಥವಾ “ಭಯಾನಕ ಸಾವಿನ.”

ಪದವಿವರಣೆ ನೋಡಿ.

ಅಕ್ಷ. “ಹತ್ತು ಸಾರಿ.”

ಅಥವಾ “ಅವಮಾನ ಮಾಡ್ತೀರಾ.”

ಅಥವಾ “ನನ್ನ ಸಂಬಂಧಿಕರು.”

ಪದವಿವರಣೆ ನೋಡಿ.

ಅಥವಾ “ನನ್ನನ್ನ ಬಿಡಿಸೋ ಹಕ್ಕಿರುವವನು.”

ಅಥವಾ “ಮಾನವಕುಲ, ಆದಾಮ.”

ಅಥವಾ “ಧರ್ಮಭ್ರಷ್ಟನ.”

ಅಕ್ಷ. “ಅವನ ಮೂಳೆಗಳಲ್ಲಿ.”

ಅಥವಾ “ಹೋರಿಗಳು ಹಸುಗಳನ್ನ ಸಂಗಮಿಸುತ್ತೆ.”

ಅಥವಾ “ಸಂಚು; ಸಲಹೆ ಕೊಡಲ್ಲ.”

ಅಥವಾ “ಜ್ಞಾನವನ್ನ.”

ಅಕ್ಷ. “ಅಸ್ಥಿಮಜ್ಜೆ ತೇವವಾಗಿರೋ.”

ಬಹುಶಃ, “ನನ್ನನ್ನ ಹಿಂಸಿಸೋಕೆ.”

ಅಕ್ಷ. “ಒಳನೋಟ.”

ಅಥವಾ “ಸಮಗ್ರತೆಯಿಂದ.”

ಅಕ್ಷ. “ಬೆತ್ತಲೆಯಾಗಿರೋ ಜನ್ರಿಂದ.”

ಅಥವಾ “ತಂದೆಯಿಲ್ಲದ ಮಕ್ಕಳಿಗೆ.”

ಅಥವಾ “ವೃತ್ತ, ಗುಮ್ಮಟದಲ್ಲಿ.”

ಅಕ್ಷ. “ನದಿ.”

ಅಥವಾ “ಚಿನ್ನದ ಗಟ್ಟಿಗಳನ್ನ.”

ಅಥವಾ “ಚಿನ್ನದ ಗಟ್ಟಿಯಾಗ್ತಾನೆ.”

ಬಹುಶಃ, “ಪ್ರಾಣಿಗಳಿಗಾಗಿ ಮೇವು ಕೊಯ್ಯಬೇಕಾಗಿದೆ.”

ಅಂದ್ರೆ, ಇಳಿಜಾರು ನೆಲದ ಮೇಲೆ ಮೆಟ್ಟಿಲು ಮೆಟ್ಟಿಲಾಗಿ ಮಾಡೋ ಕೃಷಿಭೂಮಿ.

ಬಹುಶಃ, “ಎಣ್ಣೆ ತೆಗಿತಾರೆ.”

ಬಹುಶಃ, “ದೇವರು ಯಾರನ್ನೂ ಅಪರಾಧಿ ಅಂತ ಹೇಳಲ್ಲ.”

ಪದವಿವರಣೆ ನೋಡಿ.

ಅಥವಾ “ನಮಗೆ ಪ್ರಯೋಜನ ತರೋ ವಿವೇಕ; ಸಾಮಾನ್ಯ ಜ್ಞಾನವನ್ನ.”

ಪದವಿವರಣೆ ನೋಡಿ.

ಅಥವಾ “ಅಬದ್ದೋನ್‌.” ಪದವಿವರಣೆ ನೋಡಿ.

ಅಥವಾ “ಶೂನ್ಯದ.”

ಇದು, ದಿಗಂತ. ಸಮುದ್ರ ಮತ್ತು ಆಕಾಶ ಸಂಧಿಸೋ ಹಾಗೆ ಕಾಣೋ ಗೆರೆ.

ಅಕ್ಷ. “ರಾಹಾಬ್‌.”

ಅಥವಾ “ಗಾಳಿಯಿಂದ.”

ಪದವಿವರಣೆಯಲ್ಲಿ “ಪ್ರಾಣ” ನೋಡಿ.

ಅಥವಾ “ಧರ್ಮಭ್ರಷ್ಟ.”

ಬಹುಶಃ, “ದೇವರ ಸಹಾಯದಿಂದ.”

ಅಥವಾ “ಪತಂಗದ ಪ್ಯೂಪದ.”

ಬಹುಶಃ, “ಜನ್ರು.”

ಇದು ಗಣಿಗಾರಿಕೆಗೆ ಸೂಚಿಸಬಹುದು.

ಅಥವಾ “ಸೇವಕರು.”

ಪದವಿವರಣೆ ನೋಡಿ.

ಅಕ್ಷ. “ದುಷ್ಟನ ದವಡೆ ಮುರಿದು ಅವನ ಹಲ್ಲುಗಳಿಂದ ಬೇಟೆಯನ್ನ ಕಿತ್ತು ತರ್ತಿದ್ದೆ.”

ಬಹುಶಃ, “ಅವರು ನನ್ನ ಮುಖವನ್ನ ಬಾಡಿಸ್ತಾ ಇರಲಿಲ್ಲ.”

ಅಥವಾ “ಚುರುಚುರಿಕೆ ಗಿಡಗಳ.”

ಅಕ್ಷ. “ಗಾದೆಮಾತಾಗಿದ್ದೀನಿ; ಉದಾಹರಣೆಯಾಗಿ ಬಳಸ್ತಾರೆ.”

ಬಹುಶಃ, “ಸಹಾಯ ಮಾಡುವವರು.”

ಬಹುಶಃ ಇದು ಅವನ ಚರ್ಮವನ್ನ ಸೂಚಿಸುತ್ತೆ.

ಬಹುಶಃ, “ನನ್ನ ದೊಡ್ಡ ಕಾಯಿಲೆ ನನ್ನ ರೂಪ ವಿಕಾರ ಮಾಡಿದೆ.”

ಬಹುಶಃ, “ನೆಲಕ್ಕೆ ಅಪ್ಪಳಿಸಿ ಜಜ್ಜಿಬಿಡ್ತೀಯ.”

ಬಹುಶಃ, “ಜ್ವರದಿಂದ ಸುಡ್ತಿದೆ.”

ಅಕ್ಷ. “ನನ್ನ ಕಣ್ಣುಗಳ ಜೊತೆ ಒಪ್ಪಂದ ಮಾಡ್ಕೊಂಡಿದ್ದೀನಿ.”

ಬಹುಶಃ, “ಸುಳ್ಳು ಹೇಳುವವರ ಜೊತೆ ಸೇರ್ಕೊಂಡಿದ್ದೀನಾ?”

ಅಕ್ಷ. “ಮೋಸ ಮಾಡೋಕೆ ಆತುರದಿಂದ ಓಡಿದ್ದೀನಾ?”

ಅಥವಾ “ನನ್ನ ವಂಶದವರು ಸರ್ವನಾಶ ಆಗ್ಲಿ.”

ಅಥವಾ “ಮೊಕದ್ದಮೆ.”

ಅಕ್ಷ. “ತಾಯಿ ಗರ್ಭದಲ್ಲಿ ಇದ್ದಾಗಿಂದಲೂ.”

ಬಹುಶಃ, “ಪಟ್ಟಣದ ಬಾಗಿಲ ಹತ್ರ ನನಗೆ ಬೆಂಬಲ ಇದ್ದಾಗ.”

ಅಕ್ಷ. “ಮಾಂಸ ತಿನ್ನದಿರೋ.”

ಅಥವಾ “ವಿದೇಶಿ.”

ಅಥವಾ “ಸಹಿ.”

ಅಥವಾ “ಜವೆಗೋದಿ.”

ಅಥವಾ “ತನ್ನ ದೃಷ್ಟಿಯಲ್ಲಿ ತಾನು ನೀತಿವಂತ ಆಗಿರೋದನ್ನ.”

ಅಕ್ಷ. “ಬಾಯಿ ತೆರೆದು.”

ಅಥವಾ “ಯಾರಿಗೂ ಗೌರವಸೂಚಕ ಬಿರುದು ಕೊಡಲ್ಲ.”

ಪದವಿವರಣೆ ನೋಡಿ.

ಅಕ್ಷ. “ಒಂದು ಸಲ ಮತ್ತು ಎರಡನೇ ಸಲ.”

ಪದವಿವರಣೆಯಲ್ಲಿ “ಪ್ರಾಣ” ನೋಡಿ.

ಅಥವಾ “ಆರೋಗ್ಯಕರವಾಗಲಿ.”

ಬಹುಶಃ, “ಆದ್ರೆ ಅದ್ರಿಂದ ನನಗೇನೂ ಪ್ರಯೋಜನ ಆಗಲಿಲ್ಲ.”

ಪದವಿವರಣೆಯಲ್ಲಿ “ಪ್ರಾಣ” ನೋಡಿ.

ಅಕ್ಷ. “ಎರಡು, ಮೂರು ಸಲ.”

ಪದವಿವರಣೆಯಲ್ಲಿ “ಪ್ರಾಣ” ನೋಡಿ.

ಅಥವಾ “ಧರ್ಮಭ್ರಷ್ಟ.”

ಅಥವಾ “ಅರ್ಥ ಇಲ್ಲದೆ.”

ಬಹುಶಃ, “ನನ್ನ ತಂದೆಯೇ, ಯೋಬನಿಗೆ ಪೂರ್ತಿಯಾಗಿ ಪರೀಕ್ಷೆ ಆಗ್ಲಿ.”

ದೇವ್ರಿಗೆ ಸೂಚಿಸುತ್ತಿರಬಹುದು.

ಅಥವಾ “ಅವ್ರ ಸುಳ್ಳನ್ನ.”

ಅಥವಾ “ಮೊಕದ್ದಮೆ.”

ಬಹುಶಃ, “ಆತನು ರಾಜರನ್ನ.”

ಅಥವಾ “ಧರ್ಮಭ್ರಷ್ಟರು.”

ಅಕ್ಷ. “ದೇವಸ್ಥಾನದಲ್ಲಿ ಬೇರೆ ಗಂಡಸ್ರ ಜೊತೆ ಅನೈತಿಕತೆ ಮಾಡ್ತಿದ್ದ ಗಂಡಸ್ರು.”

ಬಹುಶಃ, “ಜೀವ ಕಳ್ಕೊಳ್ತಾರೆ.”

ಅಥವಾ “ತಿರಸ್ಕಾರದಿಂದ ಚಪ್ಪಾಳೆ ತಟ್ಟಬಾರದು.”

ಬಹುಶಃ, “ಆತನ ದಾರಿ ತಪ್ಪು ಅಂತ ಹೇಳೋಕೆ; ಕಾರಣ ಕೇಳೋಕೆ.”

ಬಹುಶಃ, “ಜನ್ರ ಪರ ವಾದಿಸ್ತಾನೆ.”

ಬಹುಶಃ, “ಏನು ಬರ್ತಿದೆ ಅಂತ.”

ಅಥವಾ “ಅಪ್ಪಣೆ ಕೊಡ್ತಾನೆ.”

ಅಕ್ಷ “ದೇವರ ಮಕ್ಕಳು.”

ಅಥವಾ “ಸಾವಿನ ನೆರಳಿನ.”

ಬಹುಶಃ, “ಮಿಂಚು.”

ಬಹುಶಃ ವೃಷಭ ನಕ್ಷತ್ರಪುಂಜದ ಕೃತ್ತಿಕಾ ನಕ್ಷತ್ರಗಳು.

ಬಹುಶಃ ಮೃಗಶಿರ ನಕ್ಷತ್ರಪುಂಜ.

ಅಕ್ಷ. “ಮಜ್ಜರೋತ್‌.” 2ಅರ 23:5ರಲ್ಲಿ ಇದಕ್ಕೆ ಸಂಬಂಧಪಟ್ಟ ಪದ ಬಹುವಚನದಲ್ಲಿದೆ. ಅದು ರಾಶಿಚಕ್ರದ ನಕ್ಷತ್ರಪುಂಜಗಳನ್ನ ಸೂಚಿಸುತ್ತೆ.

ಬಹುಶಃ ಮಹಾಭಲ್ಲೂಕ ನಕ್ಷತ್ರಪುಂಜ (ಸಪ್ತರ್ಷಿ ಮಂಡಲ)

ಬಹುಶಃ, “ಆತನ.”

ಬಹುಶಃ, “ಮನುಷ್ಯ.”

ಬಹುಶಃ, “ಮನಸ್ಸಿಗೆ.”

ಅಥವಾ “ಆನಗರ್‌.”

ಬಹುಶಃ, “ನಂಬದೆ.”

ಅಕ್ಷ. “ಒಂದು ಸಲ, ಎರಡು ಸಲ,” ಅಥವಾ “ಮತ್ತೆ ಮತ್ತೆ ಮಾತಾಡಿದ್ದೀನಿ.”

ಅಕ್ಷ. “ಬಲಗೈ.”

ಅಥವಾ “ನಿನ್ನನ್ನ ಹೊಗಳ್ತೀನಿ.”

ಬಹುಶಃ ಇದು ನೀರಾನೆ.

ಅಥವಾ “ಪಾಪ್ಲರ್‌.”

ಬಹುಶಃ ಮೊಸಳೆ.

ಅಥವಾ “ಆಪುಹುಲ್ಲಿನ ಹಗ್ಗ.”

ಬಹುಶಃ, “ತನಗಿರೋ ಚಿಪ್ಪುಗಳ ಸಾಲುಗಳ ಬಗ್ಗೆ ಅದು ಹೆಮ್ಮೆಪಡುತ್ತೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ